ಮೃತಪಟ್ಟ ವ್ಯಕ್ತಿ ಮತ್ತೆ ಜೀವಂತ! ಗದಗ ಜಿಲ್ಲೆಯಲ್ಲೊಂದು ಅಚ್ಚರಿ ಘಟನೆ

0
Spread the love

ಗದಗ: ಗದಗ ಜಿಲ್ಲೆಯ ಬೆಟಗೇರಿಯಲ್ಲಿ ಅಚ್ಚರಿಯ ಘಟನೆ ನಡೆದಿದೆ. ಪಿತ್ತಕೋಶದ ಸಮಸ್ಯೆಯಿಂದ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಟಗೇರಿ ನಿವಾಸಿ ಶಸ್ತ್ರ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು. ಆದ್ರೆ ಮನೆಗೆ ತರುವ ವೇಳೆ ಮತ್ತೆ ಉಸಿರಾಡುವ ಮೂಲಕ ಎಲ್ಲರಿಗೂ ಅಚ್ಚರಿಗೊಳಿಸಿದ್ದಾರೆ.

Advertisement

ಹೌದು ಗದಗ ಬೆಟಗೇರಿ ನಿವಾಸಿ ನಾರಾಯಣ ವನ್ನಾಲ್ (38) ಅವರು ಪಿತ್ತಕೋಶದ ಸಮಸ್ಯೆಯಿಂದ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಸುಮಾರು ಆರು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯ ನಂತರ ವೈದ್ಯರು ನಾರಾಯಣ ವನ್ನಾಲ್  ಪ್ರಾಣ ಹೋಗಿದೆ ಎಂದು ಘೋಷಿಸಿದರು.

ಮೃತದೇಹವನ್ನು ಕುಟುಂಬಸ್ಥರು ಆ್ಯಂಬುಲೆನ್ಸ್‌ನಲ್ಲಿ ಗದಗದ ಬೆಟಗೇರಿಗೆ ಕರೆದುಕೊಂಡು ಬಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದರು. “ಮತ್ತೆ ಹುಟ್ಟಿ ಬಾ”, “ಆತ್ಮಕ್ಕೆ ಶಾಂತಿ ಸಿಗಲಿ”, “ಭಾವಪೂರ್ಣ ಶ್ರದ್ಧಾಂಜಲಿ” ಎಂಬ ಬ್ಯಾನರ್‌ಗಳು ಊರಿನಲ್ಲಿ ಹಾಕಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ನಾರಾಯಣ ಅವರ ನಿಧನ ಸುದ್ದಿ ವೈರಲ್ ಆಗಿತ್ತು.

ಆದರೆ ಮನೆಗೆ ತಲುಪುತ್ತಿದ್ದಂತೆಯೇ ನಾರಾಯಣ ಅಚ್ಚರಿಯಾಗಿ ಉಸಿರಾಟ ಆರಂಭಿಸಿದರು. ತಕ್ಷಣ ಕುಟುಂಬಸ್ಥರು  ಬೆಟಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಚ್ಚರಿಯ ಘಟನೆಯಿಂದ ಗದಗ-ಬೆಟಗೇರಿಯಲ್ಲಿ ಸಂಚಲನ ಮೂಡಿದೆ. “ಇದು ದೇವರ ಪವಾಡ” ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ. ಕುಟುಂಬ ಸದಸ್ಯರು ಕೂಡ “ನಾರಾಯಣ ಅವರು ಬೇಗ ಗುಣಮುಖರಾಗಲಿ” ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here