ಬಳ್ಳಾರಿ: ಕ್ಷುಲ್ಲಕ ಕಾರಣಕ್ಕೆ ಗುಂಪೊಂದು ಮನೆಗೆ ನುಗ್ಗಿ ಸಿನಿಮೀಯ ರೀತಿಯಲ್ಲಿ ಅಟ್ಯಾಕ್ ಮಾಡಿರುವ ಘಟನೆ ಬಳ್ಳಾರಿಯ ಬಾಪೂಜಿ ನಗರ 7ನೇ ವಾರ್ಡ್ ನಲ್ಲಿ ನಡೆದಿದೆ. ಈ ಘಟನೆ ಶನಿವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರಾಜ ಅಲಿಯಾಸ್ ಮಾರ್ಕೆಟ್ ರಾಜನ ಗ್ಯಾಂಗ್ ನಿಂದ ಜನವರಿ 31ರಂದು ಕ್ಷುಲ್ಲಕ ಕಾರಣಕ್ಕೆ ಶ್ರೀನಿವಾಸ್ ಕುಟುಂಬದ ಬಾಲಕನ ಮೇಲೆ ಹಲ್ಲೆ ಮಾಡಲಾಗಿದೆ.
ರಾಜ, ನಂದೀಶ್, ಮಹೇಶ್, ಸೂರಿ, ಹಳೆ ಕೋಟೆ ರಾಜ, ಚಿನ್ನಾ, ಪಾಂಡು, ಮಹೇಶ್ ಸೇರಿದಂತೆ ಹತ್ತಕ್ಕೂ ಹೆಚ್ಚು ಜನರಿಂದ ಹಲ್ಲೆ ಮಾಡಲಾಗಿದ್ದು, ಕೈಯ್ಯಲ್ಲಿ ರಾಡ್, ಕಲ್ಲು, ಸಿಮೆಂಟ್ ಇಟ್ಟಿಗೆಯಿಂದ ಶ್ರೀನಿವಾಸ್ ಮನೆ ಬಳಿ ತೆರಳಿ ಹಲ್ಲೆ ಮಾಡಲಾಗಿದೆ.
ಈ ಘಟನೆಯಲ್ಲಿ ಶ್ರೀನಿವಾಸ್ ತಾಯಿ ಗೌರಮ್ಮಗೆ ತೀವ್ರಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶ್ರೀನಿವಾಸ್ ಹಾಗೂ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಇದರಿಂದ ಭಯಗೊಂಡ ಶ್ರೀನಿವಾಸ್ ಕುಟುಂಬ ಪುಡಿ ರೌಡಿಗಳ ವಿರುದ್ದ ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಷ್ಟಕ್ಕೆ ಸುಮ್ಮನಾಗದೇ ನಮ್ಮ ಮೇಲೆ ದೂರು ನೀಡ್ತೀರಾ ಎಂದು ಸಿಟ್ಟಿನಿಂದ ಮತ್ತೆ ಮನೆ ಬಳಿ ಹೋಗಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.