ಇನ್ನಷ್ಟು ಸಂಘಟಿತರಾಗಿ ಮುನ್ನಡೆಯಿರಿ : ಕೃಷ್ಣಗೌಡ ಎಚ್.ಪಾಟೀಲ

0
Distribution of order copy sanctioned by Labor Department
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕಾರ್ಮಿಕರ ಹಿತ ಕಾಪಾಡಲು ರಾಜ್ಯದ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಶ್ರಮಿಕರ ಸಹಕಾರದಿಂದಲೇ ಎಚ್.ಕೆ. ಪಾಟೀಲರು ಇಂದು ವಿಧಾನಸೌಧದಲ್ಲಿ ನಿಮ್ಮೆಲ್ಲರ ಧ್ವನಿಯಾಗಿದ್ದಾರೆ. ಗದಗ ಜಿಲ್ಲೆಯಲ್ಲಿ ಕಾರ್ಮಿಕರ ಕಲ್ಯಾಣ ಸಂಸ್ಥೆ ಸಂಘಟನೆ ಗಟ್ಟಿಯಾಗಿದ್ದು, ಇತರರಿಗೂ ಮಾದರಿಯಾಗಿದೆ. ಇನ್ನಷ್ಟು ಸಂಘಟಿತರಾಗಿ, ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಎಚ್.ಪಾಟೀಲ ಹೇಳಿದರು.

Advertisement

ಸ್ಥಳೀಯ ಕಾರ್ಮಿಕ ಕಲ್ಯಾಣ ಸಂಸ್ಥೆ, ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟ ಗದಗ, ಅಮರ ಶಿಲ್ಪಿ ಜಕಣಾಚಾರಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ, ಗದಗ-ಬೆಟಗೇರಿ ಸೆಂಟ್ರಿಂಗ್ ಮತ್ತು ಬಾರ್ ಬೆಂಡಿಂಗ್ ಮೇಸ್ತ್ರಿಗಳ ಸಂಘಗಳ ಸಹಯೋಗದಲ್ಲಿ ಕಾರ್ಮಿಕ ಕಲ್ಯಾಣ ಸಂಸ್ಥೆಯ ಕಚೇರಿಯಲ್ಲಿ ಕಾರ್ಮಿಕ ಇಲಾಖೆಯಿಂದ ಮಂಜೂರಾದ ಆದೇಶ ಪ್ರತಿ ವಿತರಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರಭು ಎಲ್ ಮಾತನಾಡಿ, ಕಾರ್ಮಿಕರ ಕಲ್ಯಾಣದೊಂದಿಗೆ ಅವರ ಮಕ್ಕಳಿಗೆ ಸಿಗುವ ಶೈಕ್ಷಣಿಕ ಸೌಲಭ್ಯಗಳನ್ನು ಬಳಸಿಕೊಂಡು ಕಾರ್ಮಿಕರ ಮಕ್ಕಳನ್ನೂ ವೈದ್ಯರು, ಇಂಜಿನಿಯರ್‌ಗಳನ್ನಾಗಿ ರೂಪಿಸಬೇಕು. ಕಾರ್ಮಿಕರ ಬಹುದಿನದ ಬೇಡಿಕೆಯಾಗಿರುವ ‘ಕಾರ್ಮಿಕರ ಕಟ್ಟಡ’ ಪೂರ್ಣಗೊಳ್ಳಲು ಅಗತ್ಯ ಅನುದಾನ ಮಂಜೂರು ಮಾಡಿಸಿ, ಮುಂದಿನ ಕಾರ್ಮಿಕ ದಿನಾಚರಣೆ ನೂತನ ಕಟ್ಟಡದಲ್ಲಿಯೇ ಆಗುವಂತೆ ಯುವ ಮುಖಂಡ ಕೃಷ್ಣಗೌಡ ಪಾಟೀಲ ಅವರ ಜತೆ ನಿಮ್ಮ ಸಂಘಟನೆಯ ನಿಯೋಗದೊಂದಿಗೆ ತೆರಳಿ, ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಅವರಿಗೆ ಮನವರಿಕೆ ಮಾಡೋಣ ಎಂದು ಹೇಳಿದರು.

ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಮಾತನಾಡಿ, ಕಾರ್ಮಿಕರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ನೀಡುತ್ತಿದೆ. ಕಾರ್ಮಿಕರ ಮಕ್ಕಳಿಗೆ ಶಿಕ್ಷಣ, ಅನಾರೋಗ್ಯ, ಅಪಘಾತ, ಸಾವು-ನೋವು, ಮದುವೆ ಹೀಗೆ ವಿವಿಧ ಕಾರ್ಯಕ್ಕೆ ಕಾರ್ಮಿಕ ಕಲ್ಯಾಣ ಮಂಡಳಿ ಮೂಲಕ ನೆರವು ಸಿಗಲಿದೆ. ಅವುಗಳನ್ನು ಬಳಸಿಕೊಳ್ಳಬೇಕು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾಧ್ಯಕ್ಷ ರಾಜು ಎಂ.ಹೆಬ್ಬಳ್ಳಿ ಮಾತನಾಡಿ, ಕಾರ್ಮಿಕರು ಬೆವರು ಸುರಿಸಿ ದುಡಿಯುತ್ತಾರೆ. ಆ ದುಡಿಮೆಗೆ ಬೆಲೆ ಸಿಗಬೇಕಾದರೆ ಮಕ್ಕಳನ್ನು ಉನ್ನತ ಹುದ್ದೆಗೆ ಸೇರಿಸುವಂತೆ ಓದಿಸಬೇಕು. ಇದಕ್ಕಾಗಿ ಇಲಾಖೆ ನೀಡುವ ನೆರವನ್ನು ಪಡೆಯಬೇಕು ಎಂದು ಹೇಳಿದರು.

ಕರ್ನಾಟಕ ಮುಸ್ಲಿಂ ಯೂನಿಟಿ ಗದಗ ಜಿಲ್ಲಾಧ್ಯಕ್ಷ ಸೈಯದಖಾಲಿದ್ ಕೊಪ್ಪಳ ಮಾತನಾಡಿ, ಕಾರ್ಮಿಕರು ಕೂಡ ಮನೆ ಕಟ್ಟಿಕೊಳ್ಳಲು ಸರ್ಕಾರ ಅಗತ್ಯ ಸಹಾಯ ಧನ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಕಲ್ಯಾಣ ಸಂಸ್ಥೆ ಅಧ್ಯಕ್ಷ ಮಹ್ಮದಇರ್ಫಾನ್ ಎ.ಡಂಬಳ ಮಾತನಾಡಿ, ಕಾರ್ಮಿಕರಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ರೀತಿಯ ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಕೆ.ಎಸ್.ಆರ್.ಟಿ.ಸಿ ವರ್ಕರ್ ಸ್ಟಾಫ್ ರಾಜ್ಯ ಉಪಾಧ್ಯಕ್ಷ ಶಾಂತಣ್ಣ ಅ.ಮುಳವಾಡ, ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾ ಸಂಘದ ಅಧ್ಯಕ್ಷ ಮೆಹಬೂಬಖಾನ ಪಠಾಣ ಮಾತನಾಡಿದರು. ಹೆಲ್ಪಿಂಗ್ ಹ್ಯಾಂಡ್ ಫೌಂಡೇಷನ್ ಅಧ್ಯಕ್ಷ, ಕಾರ್ಮಿಕ ಕಲ್ಯಾಣ ಸಂಸ್ಥೆಯ ನಿರ್ದೇಶಕ ಅಪ್ಪುರಾಜ ಭದ್ರಕಾಳಿಮಠ, ಅಹ್ಮದ ಖಾಜಿ ಮುಂತಾದವರು ವೇದಿಕೆಯಲ್ಲಿದ್ದರು.

ಝಡ್.ಡಿ. ಬೇಲೇರಿ ಸ್ವಾಗತಿಸಿದರು. ನಸೀರ ಚಿಕೇನಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ನಿಂಗಪ್ಪ ಕಟ್ಟಿಮನಿ ವಂದಿಸಿದರು. ಕಾರ್ಯಕ್ರಮದಲ್ಲಿ ಭೀಮಪ್ಪ ಪೂಜಾರ, ಕೆ.ಬಿ. ಕುಡಗುಂಟಿ, ಈಶಪ್ಪ ಬಳ್ಳಾರಿ, ಮಹ್ಮದ ಯೂಸುಫ್ ಬೇಪಾರಿ, ಮಲ್ಲಪ್ಪ ಜೀವಣ್ಣವರ, ಜಾನಿಸಾಬ ಹಣಗಿ, ಸುನೀಲ ಚಳಗೇರಿ, ಮಹ್ಮದ ಸಲೀಂ ಕಾತರಕಿ, ಬಸವರಾಜ ಜಿನಗಾ, ಝಡ್.ಡಿ. ಬೇಲೇರಿ, ಶಂಕರಗೌಡ ಭರಮಗೌಡ್ರ, ನಾಶೀರಸಾಬ ಎಮ್.ಚಿಕೇನಕೊಪ್ಪ, ಎಸ್.ಪಿ. ಕರಿಸೋಮಗೌಡರ, ಸರ್ಫರಾಜ ಬಬರ್ಚಿ, ನಜೀರ ಶಿರಹಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಅವರು ಕಾರ್ಮಿಕರ ಸಂಘದ ಕಟ್ಟಡಕ್ಕೆ ಘೋಷಿಸಿದ್ದ 25 ಲಕ್ಷ ರೂ. ಅನುದಾನದ ಪೈಕಿ 10 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಒಂದೆರಡು ದಿನದಲ್ಲಿ ಮೊತ್ತ ಜಮೆಯಾಗಲಿದೆ.
– ಮಹ್ಮದಇರ್ಫಾನ್ ಎ.ಡಂಬಳ.
ಕಾರ್ಮಿಕ ಕಲ್ಯಾಣ ಸಂಸ್ಥೆಯ ಅಧ್ಯಕ್ಷರು.

ವಿವಿಧ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಮದುವೆ, ಶಿಕ್ಷಣ, ವೈದ್ಯಕೀಯ ಸಹಾಯಧನ ಅಲ್ಲದೆ, ಅಪಘಾತ ಸೇರಿ ವಿವಿಧ ಕಾರಣದಿಂದ ಸಾವನ್ನಪ್ಪಿದ ಕಾರ್ಮಿಕರ ಕುಟುಂಬಕ್ಕೆ ನೆರವು ಹೀಗೆ ಒಟ್ಟು ಅಂದಾಜು 1.50 ಕೋಟಿ ರೂ. ಪರಿಹಾರ/ನೆರವು, ನೂರಕ್ಕೂ ಅಧಿಕ ಕಾರ್ಮಿಕರಿಗೆ ಮಂಜೂರಾಗಿದ್ದ ಆದೇಶ ಪ್ರತಿಗಳನ್ನು ಇದೇ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು.


Spread the love

LEAVE A REPLY

Please enter your comment!
Please enter your name here