ವಿಜಯಸಾಕ್ಷಿ ಸುದ್ದಿ, ಹಾವೇರಿ: ಮುಸ್ಲಿಂ ಎಂಪ್ಲಾಯಿಜ್ ವೇಲ್ಪೇರ್ ಅಸೋಸಿಯೇಶನ್ (ಮೇವಾ) ರಾಜ್ಯ ಉಪಾಧ್ಯಕ್ಷರೂ, ಹಾವೇರಿ ಜಿಲ್ಲೆಯ ತಡಸದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಗದಗದ ನಿಯಾಜ್ಅಹ್ಮದ್ ಹಂಚಿನಮನಿ ಅವರ ಅತ್ಯುತ್ತಮ ಸೇವೆಯನ್ನು ಗುರುತಿಸಿ, ಹಾವೇರಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.
ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ ಅವರು ಪ್ರಶಸ್ತಿ ಪ್ರದಾನ ಮಾಡಿ ನಿಯಾಜ್ಅಹ್ಮದ್ ಹಂಚಿನಮನಿ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಡಿಡಿಪಿಐ (ಅಭಿವೃದ್ಧಿ) ಮೋಹನ್ ದಂಡಿನ, ಡಯಟ್ ಪ್ರಾಂಶುಪಾಲ ಝಡ್.ಎಂ. ಖಾಜಿ, ತಾಲೂಕು ಶಿಕ್ಷಣಾಧಿಕಾರಿ ಶ್ರೀನಿವಾಸ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರಾದ ನೂರಅಹ್ಮದ್ ಕರಜಗಿ ಉಪಸ್ಥಿತರಿದ್ದರು.
ಬೋಧನಾ ಕ್ಷೇತ್ರದಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆ, ಪರಿಶ್ರಮ, ಶ್ರದ್ಧೆ, ಕರ್ತವ್ಯನಿಷ್ಠೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ನೀಡಿದ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ನಿಯಾಜ್ಅಹ್ಮದ್ ಹಂಚಿನಮನಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಸರ್ಕಾರಿ ಉರ್ದು ಪ್ರೌಢಶಾಲೆ, ತಡಸದಲ್ಲಿ ಸಹಾಯಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಹಂಚಿನಮನಿ ಅವರ ಸಾಧನೆಗೆ ಮುಸ್ಲಿಂ ಎಂಪ್ಲಾಯಿಜ್ ವೇಲ್ಪೇರ್ ಅಸೋಸಿಯೇಶನ್ (ಮೇವಾ) ಗದಗ ಜಿಲ್ಲಾ ಅಧ್ಯಕ್ಷ ಡಾ. ಸಿ.ಎಂ. ರಫಿ ಹಾಗೂ ಕಾರ್ಯದರ್ಶಿ ರಸೀದ್ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.



