ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗ್ರಾಮ ದೇವಿಯರ ಜಾತ್ರಾ ಮಹೋತ್ಸವವು ಅತ್ಯಂತ ಸಂಭ್ರಮದಿಂದ ನಡೆಯುತ್ತಿದ್ದು, ಇದರ ಯಶಸ್ಸಿಗಾಗಿ ಹಿರಿಯರು ಹಾಗೂ ಮಾರ್ಗದರ್ಶಕರು ಅಪಾರ ಶ್ರಮ ವಹಿಸುತ್ತಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ವಸಂತ ಪಡಗದ ಹೇಳಿದರು.
ನಗರದ ಒಕ್ಕಲಗೇರಿ ಓಣಿಯ ಶ್ರೀ ದ್ಯಾಮವ್ವ ಹಾಗೂ ದುರ್ಗಮ್ಮ ದೇವಿಯರ ಹರಿ ಜಾತ್ರೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಹಾಪ್ರಸಾದಕ್ಕೆ ಭಕ್ತಿಸೇವೆಯಾಗಿ ಅಕ್ಕಿ ಸಮರ್ಪಿಸಿದ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸುಮಾರು ೧೮ ವರ್ಷಗಳ ಸುದೀರ್ಘ ಅವಧಿಯ ಬಳಿಕ ನಡೆಯುತ್ತಿರುವ ಈ ಐತಿಹಾಸಿಕ ಜಾತ್ರೆಯ ಯಶಸ್ಸಿಗಾಗಿ ಗುರುಹಿರಿಯರು ತಮ್ಮ ವೈಯಕ್ತಿಕ ಕೆಲಸ-ಕಾರ್ಯಗಳನ್ನು ಬದಿಗೊತ್ತಿ ಹಗಲಿರುಳು ಶ್ರಮಿಸುತ್ತಿದ್ದಾರೆ. ವಿಶೇಷವಾಗಿ ಒಕ್ಕಲಗೇರಿ ಓಣಿಯ ಜಾತ್ರಾ ಮಹೋತ್ಸವವು ರಾಜ್ಯಾದ್ಯಂತ ಅಪಾರ ಪ್ರಸಿದ್ಧಿ ಪಡೆದಿದೆ ಎಂದರು.
ಇಂತಹ ಪವಿತ್ರ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಉಂಟಾಗುವ ಸಣ್ಣಪುಟ್ಟ ಮನಸ್ತಾಪಗಳು ಹಾಗೂ ವೈಯಕ್ತಿಕ ಭಿನ್ನಾಭಿಪ್ರಾಯಗಳು ಹಿರಿಯರ ನಿಸ್ವಾರ್ಥ ಶ್ರಮಕ್ಕೆ ಕೆಟ್ಟ ಹೆಸರು ತರುತ್ತವೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಜಾತ್ರೆಯ ಯಶಸ್ಸಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪ್ರಸ್ತುತ ನಡೆಯುತ್ತಿರುವ ೧೦ ದಿನಗಳ ಗ್ರಾಮ ದೇವಿಯರ ಜಾತ್ರಾ ಮಹೋತ್ಸವ ಜಿಲ್ಲೆಯಷ್ಟೇ ಅಲ್ಲದೆ ರಾಜ್ಯಾದ್ಯಂತ ಗಮನ ಸೆಳೆಯುತ್ತಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸಿ ಅನ್ನಪ್ರಸಾದ ಸ್ವೀಕರಿಸುತ್ತಿದ್ದು, ಮಹಾಪ್ರಸಾದ ಸೇವೆಯ ಅಚ್ಚುಕಟ್ಟುತನ ಹಾಗೂ ಸಂಘಟನೆಗೆ ಸಾರ್ವಜನಿಕರು ಮತ್ತು ವಿವಿಧೆಡೆಯಿಂದ ಆಗಮಿಸಿದ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದರು.
ಇಂತಹ ಅದ್ಭುತ ಧಾರ್ಮಿಕ ವಾತಾವರಣವನ್ನು ಮುಂದುವರಿಸಿಕೊಂಡು ಹೋಗುವುದು ಎಲ್ಲರ ಹೊಣೆ. ಜಾತ್ರೆಯ ಮೂಲಕ ಸೌಹಾರ್ದತೆ, ಭಕ್ತಿ ಹಾಗೂ ಒಗ್ಗಟ್ಟಿನ ಸಂದೇಶ ಮತ್ತಷ್ಟು ಬಲಗೊಳ್ಳಬೇಕು ಎಂದು ವಸಂತ ಪಡಗದ ಹೇಳಿದರು.
ನರೇಗಲ್ಲದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಓಂಕಾರೇಶ್ವರ ಮಠದ ಫಕೀರೇಶ್ವರ ಸ್ವಾಮೀಜಿ ಹಾಗೂ ನೀಲಮ್ಮತಾಯಿ ಅಸುಂಡಿ ಸಾನ್ನಿಧ್ಯ ವಹಿಸಿದ್ದರು. ಕೊಟ್ರಪ್ಪ ಕಮತರ ಅಧ್ಯಕ್ಷತೆ ವಹಿಸಿದ್ದರು.
ಫಕೀರಪ್ಪ ಹೆಬಸೂರ, ಶಂಕ್ರಪ್ಪ ಖನೋಜ, ಐ.ಎಸ್. ಪೂಜಾರ, ಸದಾಶಿವಯ್ಯ ಮದರಿಮಠ, ಪ್ರೀತಿ ಶಿವಪ್ಪಯ್ಯನಮಠ, ಕೃಷ್ಣಾ ಪರಾಪುರ, ಮಹಾಂತೇಶ ನೆಲವಡಿ, ವಿನೋದ ಮೊರಬದ, ಎಚ್.ಕೆ. ಮುಲ್ಲಾ, ಅಬ್ದುಲ್ ಮುನಾಫ್ ಮುಲ್ಲಾ, ಎಫ್.ಪಿ. ಮರಿಗೌಡರ, ರಾಮಣ್ಣ ಭರಮಣ್ಣವರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಾಣಿ ಅಸುಂಡಿ ಸ್ವಾಗತಿಸಿದರು. ಬಾಹುಬಲಿ ಜೈನರ್ ನಿರೂಪಿಸಿದರು.
೧೮ ವರ್ಷಗಳ ಬಳಿಕ ನಡೆಯುತ್ತಿರುವ ಈ ಐತಿಹಾಸಿಕ ಜಾತ್ರೆ ಹಿರಿಯರ ಪರಿಶ್ರಮ ಹಾಗೂ ಎಲ್ಲರ ಒಗ್ಗಟ್ಟಿನ ಫಲವಾಗಿದೆ. ಈ ಪವಿತ್ರ ವಾತಾವರಣಕ್ಕೆ ಯಾವುದೇ ರೀತಿಯ ಮನಸ್ತಾಪ ಅಥವಾ ಭಿನ್ನಾಭಿಪ್ರಾಯ ಧಕ್ಕೆ ತರದಂತೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
— ವಸಂತ ಪಡಗದ, ಬಿಜೆಪಿ ಯುವ ಮುಖಂಡ



