ವಿಜಯಸಾಕ್ಷಿ ಸುದ್ದಿ,ನರೇಗಲ್ಲ : ಪ್ರಧಾನಿ ಮೋದಿ ಭ್ರಷ್ಟಾಚಾರಿಗಳಿಗೆ, ಭಯೋತ್ಪಾದಕರಿಗೆ ನಿಜಕ್ಕೂ ಶನಿಯಾಗಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ 11ನೇ ಸ್ಥಾನದಲ್ಲಿದ್ದ ದೇಶದ ಆರ್ಥಿಕತೆಯನ್ನು 5ನೇ ಸ್ಥಾನಕ್ಕೆ ತಂದು ನಿಲ್ಲಿಸಿದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ. ದೇಶವನ್ನು ಮುನ್ನಡೆಸಲು ಸಮರ್ಥ ನಾಯಕರೊಬ್ಬರು ಬೇಕು. ಕಳೆದ ಹತ್ತು ವರ್ಷಗಳಲ್ಲಿ ಇಡೀ ಜಗತ್ತೇ ಭಾರತೆದೆಡೆಗೆ ತಿರುಗಿ ನೋಡುವಂತೆ ಮಾಡಿರುವ ಮೋದಿ ಅಂತಹ ಸಮರ್ಥ ನಾಯಕರಾಗಿದ್ದಾರೆ. ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಿ ದೇಶದ ಸುರಕ್ಷತೆಗೆ ತಾವೆಲ್ಲರೂ ಬದ್ಧರಾಗಲು ಬಿಜೆಪಿಯನ್ನು ಬೆಂಬಲಿಸಬೇಕೆಂದು ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ಪಟ್ಟಣದ ಕೊಂತಿ ಮಲ್ಲಪ್ಪನ ಎದುರಿಗಿನ ಮಾಜಿ ಗೌಡರ ಬಯಲಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಜನಾಂಗಗಳ ನಡುವೆ ಬೆಂಕಿ ಹಚ್ಚಿ ತಮ್ಮ ರೊಟ್ಟಿ ಸುಟ್ಟುಕೊಳ್ಳುವ ಕಾಂಗ್ರೆಸ್ಸಿಗರ ಆಟ ಈ ಚುನಾವಣೆಯಲ್ಲಿ ಏನೂ ನಡೆಯದು. ಕ್ಷೇತ್ರದಲ್ಲಿ ಎಲ್ಲ ಕಡೆಗಳಲ್ಲಿಯೂ ಬಿಜೆಪಿಗೆ ಸ್ಪಷ್ಟ ಬಹುಮತ ಎದ್ದು ಕಾಣುತ್ತಿದೆ. ಅಲ್ಲದೆ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿಯೂ ಎನ್ಡಿಎ ಗೆಲುವು ಸಾಧಿಸಲಿದೆ ಎಂದು ಬೊಮ್ಮಾಯಿ ಭವಿಷ್ಯ ನುಡಿದರು.
ವೇದಿಕೆಯ ಮೇಲೆ ಮಾಜಿ ಸಚಿವ ಕೆ.ಜಿ. ಬಂಡಿ, ಕುಷ್ಟಗಿಯ ಶಾಸಕ ದೊಡ್ಡನಗೌಡ ಪಾಟೀಲ, ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪೂರ, ನ್ಯಾಯವಾದಿ ಎಂ.ಬಿ. ಸಜ್ಜನರ, ಜಿ.ಬಿ. ಪಾಟೀಲ, ಅಶೋಕ ನವಲಗುಂದ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಎಫ್. ಮುಧೋಳ, ರೋಣ ಮಂಡಳ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಕಡಗದ, ರುದ್ರಣ್ಣ ಗುಳಗುಳಿ, ಸ್ಥಳೀಯ ಮುಖಂಡರಾದ ಉಮೇಶ ಸಂಗನಾಳಮಠ, ಶಶಿಧರ ಸಂಕನಗೌಡ್ರ, ಬಸವರಾಜ ಕೊಟಗಿ, ಆರ್.ಜಿ. ಪಾಟೀಲ, ಬಸನಗೌಡ ಪೊಲೀಸ್ಪಾಟೀಲ, ಪ್ರಕಾಶ ಹಕ್ಕಿ, ಮಹೇಶ ಶಿವಶಿಂಪ್ರ, ರಾಜಶೇಖರಗೌಡ ಪಾಟೀಲ ಮುಂತಾದವರಿದ್ದರು.