ಬೆಳಗಾವಿ: ಸಾರ್ವಜನಿಕರಿಗೆ ಸಿಬಿಐ ಅಧಿಕಾರಿಯೆಂದು ಹಾಗೂ ಕೆಲಸ ಕೊಡಿಸುವುದಾಗಿ ನಂಬಿಸಿ ಅವರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಯಾನಂದ ರಾಮು ಜಿಂಡ್ರಾಳೆ(33) ಬಂಧಿತ ಆರೋಪಿಯಾಗಿದ್ದು, ನನ್ನ ಗೆಳೆಯನಿಗೆ ಅಪಘಾತವಾಗಿದೆ. ಚಿಕಿತ್ಸೆಗೆ ಹಣದ ಅಗತ್ಯವಿದೆ ಎಂದು ದಯಾನಂದ ನನ್ನಿಂದ 5 ಲಕ್ಷ ರೂ. ಪಡೆದಿದ್ದ.
ಅದನ್ನು ಮರಳಿಸದೇ ಬೇರೆ ಬೇರೆ ಸಹಿಯುಳ್ಳ 50 ಸಾವಿರ ರೂ. ಮತ್ತು 3 ಲಕ್ಷ ರೂ. ಎರಡು ಚೆಕ್ ಕೊಟ್ಟಿದ್ದ ಎಂದು ಆರೋಪಿಸಿ ಆಟೊ ನಗರದ ನಿವಾಸಿ ಅಫ್ಜಲ್ ಬೀಡಿ ಎಂಬುವವರು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆರೋಪಿ ದಯಾನಂದ ಸಿಬಿಐ, ಎಐಸಿ ಅಧಿಕಾರಿ ಎಂದು ಸುಳ್ಳು ಹೇಳಿ ನಿರುದ್ಯೋಗಿ ಯುವಕರಿಗೆ ಕೆಎಸ್ಆರ್ ಟಿಸಿ,ಅರಣ್ಯ ಇಲಾಖೆ, ಅಬಕಾರಿ ಇಲಾಖೆಗಳಲ್ಲಿ ನೌಕರಿ ಕೊಡಿಸುವುದಾಗಿ ಮೋಸ ಮಾಡಿದ್ದ. ನಿಪ್ಪಾಣಿ ರಾಯಬಾಗ, ಕಾಗವಾಡ, ಚಿಕ್ಕೋಡಿ, ಹಾರೂಗೇರಿ ಭಾಗದಲ್ಲಿ ಹಲವರಿಗೆ ಮೋಸ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.