ಜಿಂಕೆ ಹಾವಳಿಗೆ ತತ್ತರಿಸಿದ ರೈತ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪೂರ್ವ ಮುಂಗಾರು ರೈತ ಸಮುದಾಯದ ನಿರೀಕ್ಷೆಗೆ ತಕ್ಕಂತೆ ಸುರಿದಿದ್ದು, ಹರ್ಷಗೊಂಡ ಕೃರ್ಷಿಕ ವರ್ಗ ಜಮೀನುಗಳನ್ನು ಹಸನಗೊಳಿಸಿ ಉತ್ಸಾಹದಿಂದ ಸಾವಿರಾರು ಹೆಕ್ಟೇರ್ ಭೂ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಿ ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿ ಕಾದುಕುಳಿತಿದ್ದರೆ, ಒಂದೆಡೆ ಮಳೆಯ ಚೆಲ್ಲಾಟ, ಇನ್ನೊಂದೆಡೆ ಜಿಂಕೆ ಹಾವಳಿಯಿಂದ ಸಂಪೂರ್ಣವಾಗಿ ತತ್ತರಿಸಿ ಹೋಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಳೆದ ಬೆಳೆಯನ್ನಾದರೂ ಉಳಿಸಿಕೊಳ್ಳಬೇಕೆಂದು ರೈತರು ಹಗಲು, ರಾತ್ರಿ ಬೆಳೆ ಕಾಯುತ್ತಿದ್ದಾರೆ.

Advertisement

ನರೇಗಲ್ಲ ಹೋಬಳಿ ವ್ಯಾಪ್ತಿಯ ಅಬ್ಬಿಗೇರಿ, ಯರೇಬೇಲೇರಿ, ಕುರಡಗಿ, ಗುಜಮಾಗಡಿ, ಡ.ಸ. ಹಡಗಲಿ, ನಾಗರಾಳ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪೂರ, ಹೊಸಳ್ಳಿ, ಜಕ್ಕಲಿ, ಬೂದಿಹಾಳ, ಮಾರನಬಸರಿ, ಹಾಲಕೆರೆ, ನರೇಗಲ್ಲ ಸೇರಿದಂತೆ ನಾನಾ ಗ್ರಾಮಗಳಲ್ಲಿ ಹೆಸರು, ಶೇಂಗಾ, ಈರುಳ್ಳಿ, ತೊಗರಿ, ಹತ್ತಿ, ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಈ ಜಮೀನುಗಳಿಗೆ ಜಿಂಕೆ ಹಿಂಡು ಲಗ್ಗೆ ಹಾಕಿ ಬೆಳೆ ನಾಶಪಡಿಸುತ್ತಿವೆ. ಮನುಷ್ಯನ ವಾಸನೆ ಬಂದೊಡನೆಯೇ ಅಲ್ಲಿಂದ ಜಾಗ ಖಾಲಿ ಮಾಡುತ್ತವೆ.

ಹೋಬಳಿ ವ್ಯಾಪ್ತಿಯಲ್ಲಿ ಜಿಂಕೆಗಳ ಹಾವಳಿ ಪ್ರತಿವರ್ಷ ರೈತರನ್ನು ಕಾಡುತ್ತಲೇ ಇದೆ. ಜಿಂಕೆಗಳ ಹಾವಳಿ ತಡೆಗಟ್ಟುವ ಶಾಶ್ವತ ಕ್ರಮ ಕೈಗೊಳ್ಳಬೇಕು ಮತ್ತು ದಾಳಿಯಿಂದಾದ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಪ್ರತಿ ವರ್ಷ ರೈತರು ಅರಣ್ಯ, ಕಂದಾಯ ಇಲಾಖೆಗಳ ಮೂಲಕ ತಹಸೀಲ್ದಾರ, ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಈವರೆಗೂ ಯಾವುದೇ ಪರಿಣಾಮ ಮಾತ್ರ ಕಂಡಿಲ್ಲ.

ಜಿಂಕೆಗಳ ಸಂರಕ್ಷಣೆ ಜವಾಬ್ದಾರಿ ಹೊರಬೇಕಿದ್ದ ಅರಣ್ಯ ಇಲಾಖೆಯ ಬೇಜವಾಬ್ದಾರಿಯಿಂದ ಜಿಂಕೆಗಳು ಕೃಷಿಕರ ಜಮೀನುಗಳಲ್ಲಿ ಬೆಳೆ ತಿನ್ನುತ್ತಿವೆ. ಮಳೆಯಾಶ್ರಿತ ಬೆಳೆಗಳಿಗೆ ಜಿಂಕೆಗಳ ಹಾವಳಿ ವ್ಯಾಪಕವಾಗಿದೆ. ಬೆಳೆ ರಕ್ಷಸಿಕೊಳ್ಳಲು ಬೆಳಗ್ಗೆಯಿಂದ ಸಂಜೆವರೆಗೂ ಹಾಗೂ ರಾತ್ರಿಯಿಂದ ಬೆಳಗಿನವರೆಗೂ ಸರದಿಯಲ್ಲಿ ಕಾಯಬೇಕಿದೆ. ಸ್ವಲ್ಪ ಯಾಮಾರಿದರೂ ಜಿಂಕೆಗಳು ಜಮೀನಿಗೆ ಬಂದು ಪೈರು ತಿಂದು ಹಾಕುತ್ತವೆ ಎನ್ನುತ್ತಾರೆ ರೈತರು.

ಈ ವರ್ಷ ಮುಂಗಾರು ಮಳೆ ರೈತ ಸಮುದಾಯವನ್ನು ಕೈಹಿಡಿಯುವ ಭರವಸೆ ನೀಡುತ್ತಿದೆ. ಆದರೆ, ಅಪಾರ ಪ್ರಮಾಣದ ಜಿಂಕೆ ತಂಡಗಳು ಬಿತ್ತನೆ ಮಾಡಿದ ಬೀಜಗಳನ್ನು ತಿಂದು ಹಾಕುತ್ತಿವೆ. ಸಂಬಂಧಪಟ್ಟ ಅರಣ್ಯ ಇಲಾಖೆ ಸಿಬ್ಬಂದಿ ರೈತರಿಗೆ ತೊಂದರೆ ಕೊಡುತ್ತಿರುವ ಜಿಂಕೆಗಳನ್ನು ಹಿಡಿದು ಸಮೀಪದ ಬಿಂಕದಕಟ್ಟಿ ಧಾಮಕ್ಕೆ ಸಾಗಿಸಿ ಬೆಳೆಯನ್ನು ರಕ್ಷಿಸಬೇಕು ಎಂದು ಗ್ರಾಮಗಳ ರೈತರು ಮನವಿ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here