ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಶಿರಹಟ್ಟಿ ತಾಲೂಕಿನ ರೈತರಲ್ಲಿ ಆತಂಕ ಮನೆ ಮಾಡಿದೆ. ಮುಂಗಾರು ಪೂರ್ವ ಸುರಿದ ಮಳೆಯನ್ನು ನಂಬಿ ರೈತರು ಹೈಬ್ರಿಡ್ ಜೋಳ, ಗೋವಿನ ಜೋಳ, ತೊಗರಿ, ಹೆಸರು, ಶೇಂಗಾ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಪೂರ್ಣಗೊಳಿಸಿದ್ದರು. ಆದರೆ ನಂತರ ಸಮರ್ಪಕ ಮಳೆಯಾಗದ ಕಾರಣ ಮೊಳಕೆಯೊಡೆದ ಬೆಳೆಗಳು ಒಣಗಲಾರಂಭಿಸಿದ್ದು, ರೈತರು ದಿನವೂ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ.
ಕೆಲವೆಡೆ ಅಲ್ಪ ಪ್ರಮಾಣದ ಮಳೆಯಾದರೂ ಕೃಷಿ ಭೂಮಿಗೆ ತೇವಾಂಶ ಒದಗಿಸುವಷ್ಟು ಸುರಿಯುತ್ತಿಲ್ಲ. ಇನ್ನೊಂದೆಡೆ ಬಿತ್ತನೆ ಮಾಡದ ರೈತರು ಮಳೆಯ ನಿರೀಕ್ಷೆಯಲ್ಲೇ ಕಾಯುತ್ತಿದ್ದು, ಬಿತ್ತನೆ ಅವಧಿ ಕೈತಪ್ಪುವ ಆತಂಕ ಎದುರಿಸುತ್ತಿದ್ದಾರೆ. ಕಳೆದ ವರ್ಷವೂ ಮಳೆ ವೈಪರೀತ್ಯದಿಂದ ನಷ್ಟ ಅನುಭವಿಸಿದ್ದ ರೈತರು, ಈ ವರ್ಷವೂ ಸಾಲ ಮಾಡಿ ಬೀಜ ಮತ್ತು ಗೊಬ್ಬರ ಖರೀದಿಸಿ ಬಿತ್ತನೆ ನಡೆಸಿದ್ದಾರೆ. ಇದೀಗ ಮಳೆ ವಿಳಂಬವಾಗಿರುವುದು ಅವರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
ಮಳೆಗಾಗಿ ಶಿರಹಟ್ಟಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗುರ್ಜಿ ಪೂಜೆ ಸೇರಿದಂತೆ ಸಾಂಪ್ರದಾಯಿಕ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಉತ್ತಮ ಮಳೆಯಾಗಿ ಬೆಳೆಗಳು ಉಳಿಯಲಿ ಎಂಬ ಆಶಯದಿಂದ ರೈತರು ವರುಣನ ಮೊರೆ ಹೋಗುತ್ತಿದ್ದಾರೆ. ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿರುವ ಕುಟುಂಬಗಳಲ್ಲಿ ಅನಿಶ್ಚಿತತೆಯ ವಾತಾವರಣ ನಿರ್ಮಾಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ, ಈಗಾಗಲೇ ಬಿತ್ತನೆ ಮಾಡಿದ ರೈತರು ಬೆಳೆ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹೊಸದಾಗಿ ಬಿತ್ತನೆ ಮಾಡುವವರು ಮಳೆಯಾದ ನಂತರವೇ ತೇವಾಂಶ ಪರಿಶೀಲಿಸಿ ಬಿತ್ತನೆ ಮಾಡುವುದು ಒಳಿತು ಎಂದು ಸಲಹೆ ನೀಡಿದರು.
“ಈಗಾಗಲೇ ಬಿತ್ತನೆ ಮಾಡಿದ ರೈತರು 19-19-19 ಹಾಗೂ ರಂಜಕ ಗೊಬ್ಬರ ಸಿಂಪಡಿಸಿ ಎಡೆ ಹೊಡೆಯಬೇಕು. ಹೊಸದಾಗಿ ಬಿತ್ತನೆ ಮಾಡುವವರು ಮಳೆಯಾದ ಬಳಿಕ ತೇವಾಂಶ ಪರಿಶೀಲಿಸಿ ಬಿತ್ತನೆ ಮಾಡಬೇಕು.”
– ಶಿವಕುಮಾರ ಕಾಶಪ್ಪನವರ, ಸಹಾಯಕ ಕೃಷಿ ನಿರ್ದೇಶಕರು



