ಒಕ್ಕಲು ಮಾಡಿ ಒಣ ಹಾಕಿದ ಫಸಲಿಗೆ ಮಳೆರಾಯನ ಭೀತಿ: ಬೆಳೆ ಸಂರಕ್ಷಣೆಗೆ ಪರದಾಡುತ್ತಿರುವ ರೈತರು

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಳೆದ ೨ ದಿನಗಳಿಂದ ಮೋಡ ಕವಿದ ವಾತಾವರಣ, ಸಣ್ಣ ಪ್ರಮಾಣದ ಮಳೆಯಿಂದ ಬೆಳೆ ಸಂರಕ್ಷಣೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿ ರೈತ ಸಮುದಾಯ ಮತ್ತೆ ಆತಂಕಕ್ಕೀಡಾಗಿದೆ.

Advertisement

ಹಿಂಗಾರಿನ ಅತಿವೃಷ್ಟಿಯಿಂದ ಚೇತರಿಸಿಕೊಳ್ಳುತ್ತಾ ಕಳೆದ ಎರಡು ವಾರಗಳಿಂದ ಬಿತ್ತನೆ ಕಾರ್ಯ ಪೂರ್ಣಗೊಳಿಸಿ ಗೋವಿನ ಜೋಳ, ಶೇಂಗಾ ಒಕ್ಕಲಿ, ಹತ್ತಿ, ಮೆಣಸಿನಕಾಯಿ ಬಿಡಿಸುವುದು ಸೇರಿ ಕಾರ್ಯಗಳಿಗೆ ಮರಳಿದ್ದಾರೆ. ಆದರೆ ಅಕಾಲಿಕ ಮಳೆಯಿಂದ ಒಕ್ಕಲಿ ಕಾರ್ಯದಲ್ಲಿ ತಲ್ಲೀನರಾಗಿರುವ ರೈತರು ಬೆಳೆ ರಕ್ಷಣೆಗೆ ಪರದಾಡುವಂತಾಗಿದೆ.

ಮುಖ್ಯವಾಗಿ ಹಿಂಗಾರಿನಲ್ಲಿ ಅತಿಯಾದ ಮಳೆಯಿಂದ ಒಕ್ಕಲಿ ಕಾರ್ಯಕ್ಕೆ ತಡವಾಗಿದೆ ಮತ್ತು ಒಕ್ಕಲಿಗೆ ಯಂತ್ರೋಪಕರಣ ಬಳಕೆಗೆ ಅಡ್ಡಿಯಾಗಿದೆ. ಏಕಕಾಲಕ್ಕೆ ಒಕ್ಕಲಿ ಕಾರ್ಯ ಪ್ರಾರಂಭಗೊAಡು ಕೃಷಿ ಕೂಲಿ ಕಾರ್ಮಿಕರ ಕೊರತೆ ರೈತರನ್ನು ಕಾಡುತ್ತಿದೆ. ಈ ನಡುವೆ ಹರಸಾಹಸ ಪಟ್ಟು ಒಕ್ಕಲಿ ಮಾಡಿ ಒಣ ಹಾಕಿದ ಫಸಲಿಗೆ ಮಳೆರಾಯನ ಭೀತಿ ಕಾಡುತ್ತಿದೆ.

ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವ ಹತ್ತಿ, ಶೇಂಗಾ, ಮೆಣಸಿನಕಾಯಿ ಬೆಳೆಗಳು ಜತೆಗೆ  ಜಾನುವಾರುಗಳ ಪ್ರಮುಖ ಆಹಾರ ಶೇಂಗಾ ಹೊಟ್ಟು ಹಾಳಾಗುತ್ತಿರುವುದು ರೈತರಿಗೆ ಬರಸಿಡಿಲು ಬಡಿದಂತಾಗಿದೆ. ಈ ವರ್ಷ ತಾಲೂಕಿನಲ್ಲಿ ಬಹುತೇಕ ರೈತರು ಗೋವಿನ ಜೋಳ ಬೆಳೆದಿದ್ದು, ಹೆಚ್ಚಿನ ರೈತರು ಒಕ್ಕಲಿ ಮಾಡಿ ಒಣ ಹಾಕಿದ್ದಾರೆ. ಗೋವಿನ ಜೋಳದ ಖರೀದಿಗೆ ವ್ಯಾಪಾರಸ್ಥರು ಮುಂದೆ ಬಾರದ್ದರಿಂದ ರೈತರು ಹಲವು ದಿನಗಳಿಂದ ಫಸಲು ಕಾಯುವ, ರಕ್ಷಿಸುವ ಕಾರ್ಯದಿಂದ ತತ್ತರಿಸಿದ್ದಾರೆ. ಕೂಲಿ ಆಳುಗಳಿಗೆ ಭಾರೀ ಡಿಮ್ಯಾಂಡ್ ಬಂದಿದ್ದು, ಕೂಲಿಯೂ ದುಪ್ಪಟ್ಟಾಗಿದೆ.

ಹಿಂಗಾರಿನ ಬಿತ್ತನೆ ಈಗಾಗಲೇ ತಡವಾಗಿದ್ದು, ಈಗ 10-15 ದಿನದ ಅವಧಿಯ ಹವಾಮಾನ ಆಧಾರಿತ ಕಡಲೆ, ಜೋಳ, ಗೋದಿ, ಕುಸಬಿ ಬೆಳೆಗಳು ಅಕಾಲಿಕ ಮಳೆಯಿಂದ ರೋಗ ಬಾಧೆಗೆ ತುತ್ತಾಗಲಿವೆ ಎಂಬ ಆತಂಕ ಕಾಡುತ್ತಿದೆ.

ಮುಂಗಾರಿನಲ್ಲಿ ಅಸಮರ್ಪಕ ಮಳೆ, ಹಿಂಗಾರಿನಲ್ಲಿ ಅತಿಯಾದ ಮಳೆಯಿಂದ ಅಳಿದುಳಿದ ಹತ್ತಿ, ಗೋವಿನಜೋಳ, ಶೇಂಗಾ, ಮೆಣಸಿನಕಾಯಿ ಒಕ್ಕಲಿಯ ಸುಗ್ಗಿ ಕಾಲದಲ್ಲಿ ಅಕಾಲಿಕ ಮಳೆಯಿಂದ ಬೆಳೆ ಸಂರಕ್ಷಣೆ ಪರದಾಟದ ಜತೆಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹಿಂಗಾರಿನ ಬೆಳೆಗಳಿಗೂ ಹಿನ್ನಡೆಯಾಗಲಿದೆ. ಸ್ವಾತಿ ಮಳೆಯಾದ ಮೇಲೆ ಇನ್ಯಾತರ ಮಳೆ ಎಂಬ ಹಿರಿಯರ ಮಾತು ಸುಳ್ಳಾಗಿ ರೈತರು ಕೃಷಿಯಿಂದ ಖುಷಿ ಪಡದಂತಾಗಿದೆ. ಸರ್ಕಾರ ರೈತರ ಬೆಳೆಗಳಿಗೆ ಯೋಗ್ಯ ಬೆಲೆ, ಮಾರುಕಟ್ಟೆ ಕಲ್ಪಿಸಬೇಕು. ಬೆಳೆವಿಮೆ, ಬೆಳೆಹಾನಿ ಪರಿಹಾರ ಕಲ್ಪಿಸಬೇಕು ಎಂದು ರೈತ ಬಾಪೂಗೌಡ ಭರಮಗೌಡ್ರ ಆಗ್ರಹಿಸಿದರು.

ಅತಿಯಾದ ಮಳೆಯಿಂದ ರೈತರ ಬೆಳೆಗಳು ಹಾಳಾಗಿರುವುದು ಮತ್ತು ಇಳುವರಿ ಸಂಪೂರ್ಣ ಕುಂಠಿತವಾಗಿರುವ ಬಗ್ಗೆ ಜಂಟಿ ಸಮೀಕ್ಷೆ ಮಾಡಿ ವರದಿ ಸಲ್ಲಿಸಲಾಗುತ್ತಿದೆ. ಹಿಂಗಾರಿನ ಬೆಳೆವಿಮೆ ದೃಢೀಕರಣ ಮತ್ತು ಬೆಳೆವಿಮೆ ಪಾವತಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ರೈತರು ಬೆಳೆ ದೃಢೀಕರಣದೊಂದಿಗೆ ಬೆಳೆವಿಮೆ ಪಾವತಿಸಬೇಕು ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ ತಿಳಿಸಿದರು.


Spread the love

LEAVE A REPLY

Please enter your comment!
Please enter your name here