ಬೆಂಗಳೂರು: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ಆಧ್ಯಾತ್ಮಿಕ ಶರಣಾರ್ಥಿಯಾಗಿ ನಾಗರಭಾವಿಯಲ್ಲಿರುವ ಅಜ್ಜಯ್ಯನ ಶಾಖಾ ಮಠಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದರು.
ಸಿಎಂ ಡಿಕೆಶಿ ಅವರು ಅಜ್ಜಯ್ಯ ಅವರೊಂದಿಗೆ ಸುಮಾರು 2 ಗಂಟೆ 15 ನಿಮಿಷಗಳ ಕಾಲ ಮಹತ್ವದ ಮಾತುಕತೆ ನಡೆಸಿದ್ದು, ಈ ವೇಳೆ ಮುಂದಿನ ಆಡಳಿತ ಕ್ರಮಗಳು, ರಾಜ್ಯದ ರಾಜಕೀಯ ಬೆಳವಣಿಗೆಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿರುವುದು ತಿಳಿದುಬಂದಿದೆ. ನಂತರ ಅವರು ಅಜ್ಜಯ್ಯನ ಆಶೀರ್ವಾದ ಪಡೆದು ಮಠದಿಂದ ನಿರ್ಗಮಿಸಿದರು.
ಇದಕ್ಕೂ ಮುನ್ನವೇ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸಮಾರಂಭದ ವೇದಿಕೆಯಲ್ಲಿ ಭಾವನಾತ್ಮಕ ಕ್ಷಣವನ್ನು ಹಂಚಿಕೊಂಡಿದ್ದರು. ಅಧಿಕಾರ ಸ್ವೀಕರಿಸುವ ಮುನ್ನವೇ ನೆಲಕ್ಕೆ ಅಡ್ಡ ಬಿದ್ದು ನಮಸ್ಕರಿಸಿದ ಅವರು, ಬಳಿಕ ಅಜ್ಜಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ದರು.
ತಳಮಟ್ಟದ ಹೋರಾಟದಿಂದ ಪಕ್ಷವನ್ನು ಕಟ್ಟಿದ “ಕನಕಪುರ ಬಂಡೆ” ಎಂದೇ ಪರಿಚಿತರಾಗಿರುವ ಡಿಕೆ ಶಿವಕುಮಾರ್ ಅವರು ಇದೀಗ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದು, ಅವರ ಈ ಆಧ್ಯಾತ್ಮಿಕ ಭೇಟಿ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.



