ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಕುಡಿಯುವ ನೀರಿಗಾಗಿ ಹಗಲೂ-ರಾತ್ರಿ ಪರಾಡುತ್ತಿದ್ದ ಲಕ್ಮೇಶ್ವರ ತಾಲೂಕಿನ ಜನತೆಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರಿನ ಯೋಜನೆ ಸಾಕಾರಗೊಳಿಸಿದ ಭಗೀರಥ ಸಿಎಂ ಎಸ್.ಎಂ ಕೃಷ್ಣ ಅವರಾಗಿದ್ದು, ಅವರು ಈ ನೆಲದ ಸರ್ವತೋಮುಖ ಅಭಿವೃದ್ಧಿಗಾಗಿ ಮಾಡಿದ ಸೇವೆ ಸದಾ ಸ್ಮರಣೀಯ ಎಂದು ಲಕ್ಮೇಶ್ವರದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಸ್ಮರಿಸಿದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಧನದ ಬಗ್ಗೆ ತೀವೃ ಸಂತಾಪ ವ್ಯಕ್ತಪಡಿಸಿ, ಅವರ ವ್ಯಕ್ತಿತ್ವ ಮತ್ತು ತಮ್ಮೊಂದಿಗಿದ್ದ ಆತ್ಮೀಯತೆಯ ಬಗ್ಗೆ ಹೆಮ್ಮೆಯ ನುಡಿಗಳನ್ನಾಡಿದ ಜಿ.ಎಸ್. ಗಡ್ಡದೇವರಮಠ, ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ಸ್ವಕ್ಷೇತ್ರ ಮದ್ದೂರು ಮತ್ತು ಲಕ್ಮೇಶ್ವರ ತಾಲೂಕಿನ ಕುಡಿಯುವ ನೀರಿನ ಯೋಜನೆ ಹಾಗೂ ಸವಣೂರ ಮೋತಿ ತಲಾಬ್ ಕೆರೆ ತುಂಬಿಸುವ ಯೋಜನೆ ಮಂಜೂರು ಮಾಡಲು ಸಂಪುಟ ಸಭೆ ಅನುಮೋದನೆ ನೀಡಿತ್ತು.
ಸಭೆಯ ಬಳಿಕ ಅವರನ್ನು ಕಂಡು ಲಕ್ಮೇಶ್ವರಕ್ಕೆ ತುಂಗಭದ್ರ ಯೋಜನೆ ಮೊದಲು ಮಂಜೂರ ಮಾಡಲೇಬೇಕು ಎಂದು ಪಟ್ಟು ಹಿಡಿದ ವೇಳೆಯಲ್ಲಿ `ಓಯ್ ಯಜ್ಜಾ ನನ್ನ ಮದ್ದೂರು ಕ್ಷೇತ್ರದ ಕುಡಿಯುವ ನೀರಿನ ಯೋಜನೆ ತಡವಾದರೂ ಚಿಂತೆ ಇಲ್ಲ ಮೊದಲು ನಿಮ್ಮ ಲಕ್ಷೆö್ಮÃಶ್ವರದ ತುಂಗಭದ್ರಾ ಯೋಜನೆ ಮಂಜೂರು ಮಾಡುತ್ತೇನೆ’ ಎಂದು ಹೇಳಿ ಅದನ್ನು ಕಾರ್ಯಗತಗೊಳಿಸಿದ ಕೀರ್ತಿ ಎಸ್.ಎಂ. ಕೃಷ್ಣ ಅವರಿಗೆ ಸಲ್ಲುತ್ತದೆ. ಈ ವೇಳೆ ಎಸ್.ಎಂ. ಕೃಷ್ಣ ಅವರ ಪಕ್ಕದಲ್ಲಿದ್ದ ಅವರ ಧರ್ಮಪತ್ನಿ ಪ್ರೇಮಾ ಕೃಷ್ಣ ಅವರು ಸಹ ಲಕ್ಮೇಶ್ವರದ ಯೋಜನೆ ಮಂಜೂರು ಮಾಡುವಂತೆ ಹೇಳಿದ್ದರು. ತಮ್ಮ ಸ್ವಕ್ಷೇತ್ರದ ಯೋಜನೆಯ ಮಂಜೂರಿಯನ್ನು ವಿಳಂಭ ಮಾಡಿ ನಮ್ಮ ಯೋಜನೆಗೆ ಮಂಜೂರಿ ಕೊಟ್ಟಿರುವದನ್ನು ಈ ಕ್ಷೇತ್ರದ ಜನತೆ ಎಂದಿಗೂ ಮರೆಯುವದಿಲ್ಲ ಎಂದು ಹೇಳಿದರು.
ಓರ್ವ ಮುತ್ಸದ್ದಿ, ರಾಜ್ಯದ ಬೆಳವಣಿಗೆಯಲ್ಲಿ ವಿಶೇಷ ಪಾತ್ರ ವಹಿಸಿದ್ದ ಅಜಾತಶತ್ರು ಎಸ್.ಎಂ. ಕೃಷ್ಣ ಅವರ ನಿಧನದಿಂದ ಓರ್ವ ಹಿತೈಷಿ ಮಾರ್ಗದರ್ಶಕರನ್ನು ಕಳೆದುಕೊಂಡAತಾಗಿದೆ ಎಂದು ಭಾವುಕರಾಗಿ ಗಡ್ಡದೇವರಮಠ ಹೇಳಿದರು. ಈ ಆತ್ಮೀಯತೆಯಿಂದಲೇ ಮಂಗಳವಾರ ಬೆಂಗಳೂರಿನ ಸದಾಶಿವ ನಗರದಲ್ಲಿನ ಎಸ್ಎಂಕೆ ಅವರ ನಿವಾಸದಲ್ಲಿ ಪ್ರಾರ್ಥಿವ ಶರೀರಕ್ಕೆ ಹೂಮಾಲೆ ಅರ್ಪಿಸಿ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ಅವರ ಪತ್ನಿ ಪ್ರೇಮಾ ಕೃಷ್ಣ ಅವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಗಿರೀಶ ಕಲ್ಮಠ, ಸೋಮನಗೌಡ್ರ ಶಂಕರಗೌಡ್ರ ಇದ್ದರು.
ವಿಶೇಷವಾಗಿ ನನ್ನೊಂದಿಗೆ ಆತ್ಮೀಯತೆಯಿಂದ ಮಾತನಾಡುತ್ತಿದ್ದ ಅವರು, ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಿಂಗಪೂರ ಪ್ರವಾಸದಿಂದ ಬರುವಾಗ ನನಗೆ ಕಪ್ಲಂಗಿ (ಶರ್ಟನ್ ತುಂಬು ತೋಳಿನ ಮುಂದೆ ಹಾಕಿಕೊಳ್ಳುವ ಸುಂದರವಾದ ಬಟನ್ಗಳು)ಗಳನ್ನು ತಂದುಕೊಟ್ಟ ವೇಳೆ ಗಡ್ಡದೇವರಮಠ ಅಜ್ಜಾರೆ… ವಿಧಾನಸಭೆಯಲ್ಲಿ ಕಪ್ಲಂಗಿ ಶರ್ಟ ಹಾಕಿಕೊಳ್ಳುವವರು ನೀವೊಬ್ಬರೇ ಎಂದು ಸಿಂಗಪೂರದಲ್ಲಿ ನೆನಪಿಸಿಕೊಂಡು ಇವುಗಳನ್ನು ತಂದಿದ್ದೇನೆ ಎಂದು ಹೇಳಿದ್ದನ್ನು ಗಡ್ಡದೇವರಮಠ ನೆನಪಿಸಿಕೊಂಡರು.



