ಗದಗ: ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನೇ ಪತ್ನಿ ಕಬ್ಬಿಣದ ಹಾರೆಯಿಂದ ಹೊಡೆದು ಕೊಲೆಗೈದಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ ನಾಗನೂರ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ಜರುಗಿದೆ.
ಡಿಪ್ಲೊಮಾ ಪದವೀಧರನಾಗಿದ್ದ ವಿಶ್ವನಾಥ ಶ್ರೀಶೈಲಪ್ಪ ಹಾದಿಮನಿ (28) ಕೊಲೆಯಾದ ದುರ್ದೈವಿ. ಪತ್ನಿ ಕವಿತಾ ಅಲಿಯಾಸ್ ಶ್ವೇತಾ ಹಾದಿಮನಿ (26) ಗಂಡನನ್ನೇ ಕೊಲೆಗೈದ ಹೆಂಡ್ತಿ. ಸದ್ಯ ಆರೋಪಿತೆಯನ್ನು ನರಗುಂದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರೀತಿಯ ಮದುವೆ, ಕಲಹದ ಬದುಕು ಆರಂಭಿಸಿದ್ದ ದಂಪತಿ!
ಎಸ್, ಕೊಲೆಯಾದ ವಿಶ್ವನಾಥ್ ಮಾಜಿ ಸೈನಿಕರ ಪುತ್ರನಾಗಿದ್ದ. 2022ರ ಫೆಬ್ರವರಿಯಲ್ಲಿ ಬಾಗಲಕೋಟೆಯ ಶ್ರೀಕುಮಾರೇಶ್ವರ ನಗರ ನಿವಾಸಿಯಾದ ಕವಿತಾಳನ್ನು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆ ಆಗಿದ್ದ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಬಳಿಕ ದಾಂಪತ್ಯದಲ್ಲಿ ಬಿರುಕು ಮೂಡುತ್ತಾ ಹೋಯ್ತು. ಸಣ್ಣ ಪುಟ್ಟ ವಿಚಾರಕ್ಕೂ ಇಬ್ಬರು ಕಿತ್ತಾಡುತ್ತಿದ್ದರು. ಅಲ್ಲದೇ ಸಾಕಷ್ಟು ಬಾರಿ ಪತ್ನಿ ಕವಿತಾ ತವರು ಮನೆ ಸೇರುತ್ತಿದ್ದಳು ಎನ್ನಲಾಗಿದೆ. ಇತ್ತೀಚೆಗೆ ವಿಶ್ವನಾಥ್ ಸಹೋದರಿಯ ಮದುವೆ ಹಿನ್ನೆಲೆ ಗಂಡನ ಮನೆಗೆ ಕವಿತಾ ವಾಪಸ್ ಆಗಿದ್ದಳು.
ಅದರಂತೆ ಮಂಗಳವಾರ ರಾತ್ರಿ ಊಟದ ಬಳಿಕ ಶುರುವಾದ ಜಗಳ ವಿಕೋಪಕ್ಕೆ ತಿರುಗಿ ಬೆಡ್ರೂಮ್ನಲ್ಲಿ ಮಲಗಿದ್ದ ವಿಶ್ವನಾಥನ ತಲೆ ಮೇಲೆ ಪತ್ನಿ ಕವಿತಾ ಕಬ್ಬಿಣದ ಹಾರೆಯಿಂದ ಬಲವಾಗಿ ಹೊಡೆದಿದ್ದಾಳೆ. ಇದರಿಂದ ಗಂಭೀರವಾಗಿ ಗಾಯಗೊಂಡ ವಿಶ್ವನಾಥ್ ರಕ್ತದ ಮಡುವಿನಲ್ಲಿ ಪ್ರಾಣ ಬಿಟ್ಟಿದ್ದಾನೆ. ಬೆಳಗ್ಗೆ ಬಂದು ಮಗನ ಸ್ಥಿತಿ ಕಂಡ ತಂದೆ ಶ್ರೀಶೈಲಪ್ಪ ಹಾಗೂ ತಾಯಿ ಗೌರವ್ವ ಆತಂಕಗೊಂಡು ರಕ್ತದ ದೃಶ್ಯ ಕಂಡು ಕಣ್ಣೀರು ಹಾಕಿದ್ದಾರೆ.
ಘಟನೆ ಬಳಿಕ ಪತ್ನಿ ಕವಿತಾ ತಪ್ಪು ಒಪ್ಪಿಕೊಂಡು ಪೊಲೀಸರಿಗೆ ಸರೆಂಡರ್ ಆಗಿದ್ದಾರೆ ಎನ್ನಲಾಗಿದೆ.
ಈ ಭೀಕರ ಘಟನೆಯಿಂದಾಗಿ ತಂದೆ ತಾಯಿ ಆಶ್ರಯದಲ್ಲಿ ಬೆಳೆಯಬೇಕಿದ್ದ ಮೂರು ವರ್ಷದ ಕಂದಮ್ಮ ಅನಾಥವಾಗಿದ್ದು, ಎಂಥವರನ್ನೂ ಮರುಕ ಹುಟ್ಟಿಸುವಂತೆ ಮಾಡಿದೆ. ಘಟನೆ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸತ್ಯಪ್ಪ ಮಾಳಗೊಂಡ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.



