ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಟಿವಿಎಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವೇಣು ಶ್ರೀನಿವಾಸನ್ ಅವರು ₹66.78 ಲಕ್ಷ ಮೌಲ್ಯದ ಚಿನ್ನದ ಅಷ್ಟಲಕ್ಷ್ಮಿ ಕಲಶವನ್ನು ಕೊಡುಗೆಯಾಗಿ ನೀಡಿದ್ದಾರೆ.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ ಅವರಿಗೆ ಚಿನ್ನದ ಕಲಶವನ್ನು ಹಸ್ತಾಂತರಿಸಲಾಯಿತು. ಕಲಶದ ಸುತ್ತಲೂ ಅಷ್ಟಲಕ್ಷ್ಮಿಯರ ಚಿತ್ರಗಳನ್ನು ಕೆತ್ತಲಾಗಿದ್ದು, 398.580 ಗ್ರಾಂ ಶುದ್ಧ ಬಂಗಾರದಿಂದ ಕಲಶವನ್ನು ನಿರ್ಮಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ವೇಣು ಶ್ರೀನಿವಾಸನ್, ಸುಮಾರು 27 ವರ್ಷಗಳ ಹಿಂದೆ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಬೇಕು ಎಂಬ ಆಸೆ ಮೂಡಿತ್ತು. ಆದರೆ ಅಂದು ಸಾಧ್ಯವಾಗಿರಲಿಲ್ಲ. ಇದೀಗ ಕನಸಿನಲ್ಲಿ ಶ್ರೀರಂಗನಾಥಸ್ವಾಮಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಆಗಮಿಸಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ ಎಂದು ಹೇಳಿದರು.
ಭಕ್ತಿಯ ಸಂಕೇತವಾಗಿ ದೇವಾಲಯಕ್ಕೆ ಚಿನ್ನದ ಅಷ್ಟಲಕ್ಷ್ಮಿ ಕಲಶವನ್ನು ಸಮರ್ಪಿಸಿರುವುದಾಗಿ ಅವರು ತಿಳಿಸಿದರು.
ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಚಿನ್ನದ ಕಲಶ ಕೊಡುಗೆಯಾಗಿ ನೀಡಿರುವುದು ಭಕ್ತರ ಗಮನ ಸೆಳೆದಿದೆ.



