ಚೆನ್ನೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ತಮ್ಮ ಕ್ರಿಕೆಟ್ ಜೀವನದ ಕುರಿತು ನೀಡಿರುವ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ತಾವು ಕ್ರಿಕೆಟ್ ಆಡಿದ್ದು ದೇಶಕ್ಕಾಗಿ ಅಲ್ಲ, ಬದಲಾಗಿ ವೈಯಕ್ತಿಕ ಆಸಕ್ತಿ ಮತ್ತು ಸಂತೋಷಕ್ಕಾಗಿ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಚೆನ್ನೈನ ಮದ್ರಾಸ್ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕಪಿಲ್ ದೇವ್, ಫೆಡರಲ್ ಬ್ಯಾಂಕ್ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ಯಾಮ್ ಶ್ರೀನಿವಾಸನ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತಮ್ಮ ಜೀವನದ ಹಲವು ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡರು.
“ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಕ್ರಿಕೆಟ್ ಆಡಿದ್ದು ನನ್ನ ವೈಯಕ್ತಿಕ ಕಾರಣಕ್ಕಾಗಿ. ಕ್ರಿಕೆಟ್ ಆಡುವುದರಿಂದ ನನಗೆ ಸಂತೋಷ ಸಿಗುತ್ತಿತ್ತು. ಯಾರಾದರೂ ನಾನು ದೇಶಕ್ಕಾಗಿ ಕ್ರಿಕೆಟ್ ಆಡಿದೆ ಎಂದು ಹೇಳಿದರೆ ಅದು ಸತ್ಯವಲ್ಲ. ಪ್ರತಿಯೊಬ್ಬ ಕ್ರೀಡಾಪಟುವೂ ಮೊದಲು ತನ್ನ ಕನಸು, ತನ್ನ ಸಂತೋಷ ಮತ್ತು ತನ್ನ ಸಾಧನೆಗಾಗಿ ಆಡುತ್ತಾನೆ. ನಾವು ನಮಗಾಗಿ ಆಡುತ್ತೇವೆ, ಅದೇ ನಿಜ” ಎಂದು ಕಪಿಲ್ ದೇವ್ ಹೇಳಿದರು.
ಇದೇ ವೇಳೆ ತಮ್ಮ ಬಾಲ್ಯದ ದಿನಗಳನ್ನು ನೆನೆಸಿಕೊಂಡ ಅವರು, ಓದಿನಲ್ಲಿ ಹೆಚ್ಚು ಆಸಕ್ತಿ ಇರಲಿಲ್ಲ ಎಂದು ನಗುತ್ತಾ ಹೇಳಿದರು. “ನಾನು ಓದಿನಲ್ಲಿ ತುಂಬಾ ದುರ್ಬಲನಾಗಿದ್ದೆ. ಶಾಲೆಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಕ್ರೀಡೆಗಳು ನನಗೆ ಸಹಾಯ ಮಾಡುತ್ತಿದ್ದವು. ಆರಂಭದಲ್ಲಿ ಭಾರತ ತಂಡದ ಪರ ಆಡಬೇಕು ಎಂಬ ಕನಸೂ ಇರಲಿಲ್ಲ” ಎಂದು ಹೇಳಿದರು.
“ಆ ದಿನಗಳಲ್ಲಿ ಫುಟ್ಬಾಲ್ ಆಡಿದರೆ ಕೇವಲ ಒಂದು ಗಂಟೆ ಮಾತ್ರ ತರಗತಿಯಿಂದ ಹೊರಗಿರಬಹುದಿತ್ತು. ಆದರೆ ಕ್ರಿಕೆಟ್ ಆಡಿದರೆ ಹಲವು ದಿನಗಳ ಕಾಲ ಶಾಲಾ ತರಗತಿಗಳಿಂದ ದೂರ ಇರಬಹುದಿತ್ತು. ಅದಕ್ಕಾಗಿಯೇ ಮೊದಲಿಗೆ ಕ್ರಿಕೆಟ್ ಕಡೆಗೆ ಆಕರ್ಷಿತನಾದೆ. ನಂತರ ಅದೇ ನನ್ನ ಜೀವನದ ದಾರಿಯನ್ನು ಬದಲಿಸಿತು” ಎಂದು ಕಪಿಲ್ ದೇವ್ ಹಾಸ್ಯಮಿಶ್ರಿತವಾಗಿ ನೆನಪಿಸಿಕೊಂಡರು.



