ವಿಜಯಸಾಕ್ಷಿ ಸುದ್ದಿ, ನರೇಗಲ್ : ಪ್ರತಿಯೊಬ್ಬರೂ ತಂದೆ-ತಾಯಿಗಳ ಸೇವೆ ಮಾಡಿ, ಗುರು-ಹಿರಿಯರನ್ನು ಪೂಜ್ಯ ಭಾವನೆಯಿಂದ ಕಾಣಬೇಕು. ಮಾನವ ಕುಲ ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸಲು ಹಾಗೂ ಶ್ರೇಷ್ಠವಾದ ಬದುಕು ಸಾಗಿಸಲು ಧರ್ಮದ ಹಾದಿಯಲ್ಲಿ ನಡೆಯಿರಿ. ಗುರು-ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಜೀವನ ಸುಖಮಯವಾಗುತ್ತದೆ ಎಂದು ಕುಕನೂರ ತಾಲೂಕಿನ ಇಟಗಿ ಗ್ರಾಮದ ಮರಳುಸಿದ್ದೇಶ್ವರ ಪುಣ್ಯಾಶ್ರಮದ ಶಿವಶರಣ ಗದಿಗೆಪ್ಪಜ್ಜನವರು ಹೇಳಿದರು.
ಅವರು ಸಮೀಪದ ಜಕ್ಕಲಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ ನಗರದಲ್ಲಿ ಇತ್ತೀಚೆಗೆ ನಡೆದ ಕೆಂಚಮ್ಮ ಮತ್ತು ಮರಿಯಮ್ಮ ದೇವಿಯರ ನೂತನ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ, ಸನ್ಮಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ರೋಣ ಪುರಸಭಾ ಉಪಾಧ್ಯಕ್ಷ ಮಿಥುನ ಪಾಟೀಲ, ಯುವ ಪೀಳಿಗೆ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು. ತಂದೆ-ತಾಯಿಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಸಂಸ್ಕಾರವನ್ನು ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.
ಈ ಸಂದರ್ಭದಲ್ಲಿ ಅನೇಕ ದಾನಿಗಳನ್ನು, ಗಣ್ಯ ಮಾನ್ಯರನ್ನು ಸನ್ಮಾನಿಸಲಾಯಿತು. ಸವಡಿ ಗ್ರಾಮದ ಮರಳು ಸಿದ್ದೇಶ್ವರಮಠದ ಮರಳುಸಿದ್ದೇಶ್ವರ ಮಹಾಸ್ವಾಮಿಗಳು, ಅರ್ಚಕ ಮುತ್ತಪ್ಪ ಪೂಜಾರ ಸಾನಿಧ್ಯ ವಹಿಸಿದ್ದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಯಲ್ಲಪ್ಪ ಮಾದರ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷೆ ಗಂಗವ್ವ ಜಂಗಣ್ಣವರ, ಅಶೋಕಪ್ಪ ಕಡಗದ, ಶಿವನಾಗಪ್ಪ ದೊಡ್ಡಮೇಟಿ, ಶರಣಪ್ಪ ಬೂದಿಹಾಳ, ಅನಿಲಕುಮಾರ ಹೊಸಮನಿ, ಶೇಖಪ್ಪ ಮಾರನಬಸರಿ, ಬಸವರಾಜ ರಂಗಣ್ಣನವರ, ಗ್ರಾಪಂ ಉಪಾಧ್ಯಕ್ಷೆ ಯಲ್ಲವ್ವ ಮಾದರ, ಯಮನೂರಸಾಬ ನದಾಫ್, ಸಣ್ಣದ್ಯಾಮಣ್ಣ ಮಡಿವಾಳರ, ಚನ್ನಬಸಪ್ಪ ಸೂಡಿ ಭಾಗವಹಿದ್ದರು.
ಮಹಾರಾಷ್ಟçದ ಸುರೇಶ, ರಂಜಾನಸಾಬ ಕಳ್ಳಿಗುಡಿ, ಫಕೀರಪ್ಪ ಮಾದರ, ಅಂದಪ್ಪ ಮಾದರ, ಅಶೋಕ ಮಾದರ, ಯಲ್ಲಪ್ಪ ಮಾದರ, ಅಂದಪ್ಪ ಮಾದರ, ಹನುಮಂತ ಮಾದರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬಳಗಾನೂರಿನ ಆಕಾಶವಾಣಿ ಕಲಾವಿದ ಸೋಮಯ್ಯ ದೊಡ್ಡಮನಿ ಮಾತನಾಡಿ, ಪ್ರತಿಯೊಬ್ಬರ ಮನಸ್ಸು ಪರಿಶುದ್ಧವಾಗಿರಬೇಕು. ಸಮಾಜದಲ್ಲಿ ಒಳ್ಳೆಯ ಕಾರ್ಯಗಳಿಗೆ ಪ್ರತಿಯೊಬ್ಬರಿಗೂ ಪ್ರೋತ್ಸಾಹ ನೀಡಬೇಕು. ಎಲ್ಲಾ ಒಂದೇ ಎಂಬ ಭಾವನೆ ಬಂದಾಗ ಮಾತ್ರ ಸಮಾನತೆಯಿಂದ ಇರಲು ಸಾಧ್ಯ. ದಿನನಿತ್ಯ ತಂದೆ-ತಾಯಿಗಳನ್ನು ಸ್ಮರಿಸಬೇಕು ಎಂದರು.