ವಿಜಯಸಾಕ್ಷಿ ಸುದ್ದಿ, ರೋಣ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಜನರಿಗೆ ವರದಾನವಾಗಿದೆ. ಅವುಗಳಲ್ಲಿ ಮುಖ್ಯವಾಗಿ ವೈಯಕ್ತಿಕ ಕಾಮಗಾರಿಗಳು ನಿಮ್ಮ ಆರ್ಥಿಕ ಗುಣಮಟ್ಟವನ್ನು ಸುಧಾರಿಸಲು ನೆರವಾಗುತ್ತವೆ ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ಗ್ರಾ.ಊ) ಚಂದ್ರಶೇಖರ ಬಿ.ಕಂದಕೂರ ಹೇಳಿದರು.
ರೋಣ ತಾಲೂಕಿನ ಸವಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ವೈಯಕ್ತಿಕ ಕಾಮಗಾರಿ ಅಭಿಯಾನದಲ್ಲಿ ಮಾತನಾಡಿದ ಅವರು, ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ 100 ದಿನಗಳವರೆಗೆ ಪ್ರತಿ ಉದ್ಯೋಗ ಚೀಟಿಗೆ ಕೆಲಸ ನೀಡುತ್ತೇವೆ. ಗಂಡು-ಹೆಣ್ಣು ಸಮಾನವಾಗಿ 349 ದಿನವೊಂದಕ್ಕೆ ಯೋಜನೆಯಡಿ ಕೂಲಿ ಮೊತ್ತ ನೀಡಲಾಗುತ್ತದೆ. ಅಂದರೆ ಒಂದು ಕುಟುಂಬವು ವಾರ್ಷಿಕವಾಗಿ 34800 ರೂ ಪಡೆಯುತ್ತದೆ. ಈ ಹಿನ್ನೆಲೆ ಎಲ್ಲರೂ ಕೆಲಸವನ್ನು ಕೇಳಿ ಪಡೆಯಿರಿ ಎಂದರು.
ನಿಮಗೆ ಕೆಲಸ ಬೇಕಾದರೆ ನಮೂನೆ 6ರಲ್ಲಿ ನಿಮ್ಮ ಹೆಸರು ಹಾಗೂ ಉದ್ಯೋಗ ಚೀಟಿಯ ಸಂಖ್ಯೆಯನ್ನು ನಮೂದಿಸಿ ಗ್ರಾಮ ಪಂಚಾಯಿತಿಗೆ ಸಲ್ಲಿಸಿ. ಶೀಘ್ರವಾಗಿ ನಿಮಗೆ ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಲಭ್ಯವಾಗುತ್ತದೆ ಎಂದರು.
ಇನ್ನು ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಅಡಿಯಲ್ಲಿ ಹಲವಾರು ಕೆಲಸಗಳು ಸಿಗುತ್ತವೆ. ಅದರಲ್ಲಿ ಮುಖ್ಯವಾಗಿ ಬಚ್ಚಲು ಗುಂಡಿ, ದನದ ಕೊಟ್ಟಿಗೆ, ಕೋಳಿ ಶೆಡ್, ಕೃಷಿ ಹೊಂಡ ಕಾಮಗಾರಿ ಮಾಡಿಕೊಳ್ಳಬಹುದು.
ತೋಟಗಾರಿಕೆ ಬೆಳೆಗಳಾದ ತೆಂಗು, ಮಾವು, ದಾಳಿಂಬೆ, ಸೀಬೆ, ಗುಲಾಬಿ, ಮಲ್ಲಿಗೆ, ಬಾಳೆ ಮತ್ತು ಪಪ್ಪಾಯಿ ಸೇರಿದಂತೆ ವಿವಿಧ ಬೆಳೆಗಳಿಗೆ ಆರ್ಥಿಕ ನೆರವು ಪಡೆದು ಬೆಳೆದುಕೊಳ್ಳಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ ಸಿಬ್ಬಂದಿಗಳು, ಗ್ರಾ.ಪಂ ಸಿಬ್ಬಂದಿಗಳು ಸೇರಿದಂತೆ ಗ್ರಾಮಸ್ಥರು, ಕೂಲಿಕಾರರು ಹಾಜರಿದ್ದರು.