ವಿಜಯಸಾಕ್ಷಿ ಸುದ್ದಿ, ಗದಗ : ಸಂತ ಕವಿ ಸರ್ವಜ್ಞರು ತಮ್ಮ ವಚನಗಳ ಮೂಲಕ ಸಮಾಜದ ಓರೆ-ಕೋರೆಗಳನ್ನು ತಿದ್ದಿ ಸಮಾಜ ಸುಧಾರಣೆಗಾಗಿ ಶ್ರಮಿಸಿದ ಸಂತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಮಂಗಳವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜರುಗಿದ ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ, ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.
ಸಂತ ಕವಿ ಸರ್ವಜ್ಞರು ತ್ರಿಪದಿಗಳ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ತನ್ಮೂಲಕ ಅವರ ವಚನಗಳಲ್ಲಿನ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ವಚನಗಳಲ್ಲಿನ ಸಂದೇಶಗಳನ್ನು ಅರ್ಥೈಸಿಕೊಂಡಾಗ ಈ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಾನಂದ ಚಕ್ರಸಾಲಿ ಮಾತನಾಡಿ, ಸರ್ವಜ್ಞನು ಬಾಲಕನಿದ್ದಾಗಲೇ ವಿವಿಧೆಡೆ ಸಂಚರಿಸಿ ಸರ್ವರಿಂದ ಒಂದೊಂದು ನುಡಿಯನ್ನು ಕಲಿತು ವಿದ್ಯೆಯ ಪರ್ವತವಾಗಿ ಸರ್ವ ಕಾಲಕ್ಕೂ ಅನ್ವಯವಾಗುವಂತಹ ತ್ರಿಪದಿಗಳನ್ನು ರಚಿಸಿದರು. ಅವರು ಭಾವೈಕ್ಯತೆ, ಸಾಮರಸ್ಯದಿಂದ ಬಾಳಲು ಸೂಚಿಸಿದವರು ಎಂದು ಕವಿ ಸರ್ವಜ್ಞರ ಜೀವನ ಚರಿತ್ರೆ ಮತ್ತು ತ್ರಿಪದಿಗಳನ್ನು ಅರ್ಥಪೂರ್ಣವಾಗಿ ವಿವರಿಸಿದರಲ್ಲದೆ, ಸಮಾಜ ಬಾಂಧವರು ಜಾಗೃತರಾಗಿ, ಉತ್ಸುಕತೆಯಿಂದ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೀರಯ್ಯ ಸ್ವಾಮಿ ಬಿ ಸೇರಿದಂತೆ ಗಣ್ಯರು ಹಾಗೂ ಸಮಾಜ ಭಾಂದವರು ಹಾಜರಿದ್ದರು.
ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷರಾದ ವಿ.ಆರ್. ಕುಂಬಾರ ಮಾತನಾಡಿ, ಮನುಷ್ಯನಲ್ಲಿರುವ ಅಹಂ ಭಾವ, ಗರ್ವವನ್ನು ತೊರೆದು ಸರ್ವಜ್ಞನು ರಚಿಸಿದ, ತ್ರಿಪದಿಗಳು ಸಾರಿದ ಸತ್ಯಾಂಶವನ್ನು ನಮ್ಮ ದೈನಂದಿನ ಜೀವನದಲ್ಲಿ ಪಾಲಿಸಬೇಕು ಎಂದು ಹೇಳಿದರು. ಮುರಗಪ್ಪ ಕೇರಿ ಮಾತನಾಡಿ, ಸಮಾಜ ಬಾಂಧವರೆಲ್ಲ ಒಗ್ಗೂಡಿ ಸರ್ಕಾರದಿಂದ ಜಾರಿಯಾಗಿರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.