ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವಾರ್ಡ್ ನಂ. 1ರ ಕುಷ್ಟಗಿಚಾಳದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮೂಲಸೌಕರ್ಯದ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಪುಟಾಣಿ ಮಕ್ಕಳು ಪರದಾಡುವಂತಾಗಿದೆ.
ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿ ನೀರಿನ ಪೈಪ್ ಒಡೆದು ನೀರು ಕೆರೆಯಂತೆ ನಿಂತಿದ್ದು, ಮಕ್ಕಳು ಹಾಗೂ ಪಾಲಕರು ಅದೇ ನೀರಿನ ಮಧ್ಯೆ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ. ನಗರಸಭೆಯ ನಿರ್ಲಕ್ಷ್ಯದಿಂದ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಅಂಗನವಾಡಿ ಕೇಂದ್ರದ ಪಕ್ಕದಲ್ಲೇ ಕಸದ ರಾಶಿ ಬಿದ್ದಿದ್ದು, ಅದರಲ್ಲಿ ನಾಯಿಗಳು ಹಾಗೂ ಹಂದಿಗಳು ಓಡಾಡುತ್ತಿರುವ ದೃಶ್ಯ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಕುಷ್ಟಗಿಚಾಳ, ಸ್ಲ್ಯಾಬ್ ಓಣಿ ಹಾಗೂ ಗಾಂಧಿನಗರ ಭಾಗದ ಸುಮಾರು 15 ರಿಂದ 20 ಮಕ್ಕಳು ಪ್ರತಿದಿನ ಈ ಅಂಗನವಾಡಿಗೆ ಬರುತ್ತಿದ್ದು, ಅಸ್ವಚ್ಛ ವಾತಾವರಣದಲ್ಲೇ ಕಲಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಥಳೀಯರು ಹಲವು ಬಾರಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಕಾಟಾಚಾರಕ್ಕೆ ಮಣ್ಣು ಹಾಕಿ ಕೈ ತೊಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದು, ತಕ್ಷಣ ನೀರು ತೆರವುಗೊಳಿಸಿ, ಕಸ ವಿಲೇವಾರಿ ಮಾಡಿ, ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.



