ಬೆಳಗಾವಿ:- ಆದಾಯಕ್ಕಿಂತ ಅಕ್ರಮ ಆಸ್ತಿಗಳಿಸಿದ ಆರೋಪದಡಿ ಬೆಳಗಾವಿಯ ಖ್ಯಾತ ಉದ್ಯಮಿಗಳಾದ ವಿನೋದ್ ದೊಡ್ಡಣ್ಣವರ್, ಪುರುಷೋತ್ತಮ ದೊಡ್ಡಣ್ಣವರ್ ಒಡೆತನದ ಕಂಪನಿಗಳ ಮೇಲೆ IT ಅಧಿಕಾರಿಗಳು ದಾಳಿ ಮಾಡಿ ಪರಿಶೀಲಿಸಿದರು.
ದೊಡ್ಡಣ್ಣವರ್ ಬ್ರದರ್ಸ್ ಗಣಿ, ಸಕ್ಕರೆ ಕಾರ್ಖಾನೆ ಮಾಲೀಕರ ಕಚೇರಿ ಹಾಗೂ ಮನೆ ಮೇಲೆ ಈ ದಾಳಿ ನಡೆದಿದೆ. ಗೋವಾದಿಂದ ಆಗಮಿಸಿರುವ ಐಟಿ ಅಧಿಕಾರಿಗಳು ಒಟ್ಟು 5 ತಂಡಗಳಾಗಿ ಸೋಮವಾರ ಮಧ್ಯರಾತ್ರಿ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಈ ವೇಳೆ ಐಟಿ ಅಧಿಕಾರಿಗಳು ಹಲವು ಮಹತ್ತರ ದಾಖಲೆ ಪರಿಶೀಲನೆ ನಡೆಸಿದ್ದು, ಕಚೇರಿಗೆ ದೊಡ್ಡಣ್ಣವರ್ ಕುಟುಂಬಸ್ಥರನ್ನು ಕರೆಸಿಕೊಂಡು ವಿಚಾರಣೆ ಮಾಡಿದ್ದಾರೆ.
ಇನ್ನೂ ಸಕ್ಕರೆ ಕಾರ್ಖಾನೆ, ಐರಾನ್ ಹಾಗೂ ಗ್ರಾನೈಟ್ ಉದ್ಯಮಿ ಆಗಿರುವ ದೊಡ್ಡಣ್ಣವರ ಕುಟುಂಬ, ಬೆಳಗಾವಿಯ ಖ್ಯಾತ ಉದ್ಯಮಿ ಅನಿಸಿಕೊಂಡಿದೆ. ಈ ಉದ್ಯಮಿಗಳು ಐರಾನ್ ಹಾಗೂ ಗ್ರಾನೈಟ್ಗಳನ್ನು ದೇಶ- ವಿದೇಶಗಳಿಗೆ ರಫ್ತು ಮಾಡುತ್ತಿದ್ದರು. ಅಲ್ಲದೇ ಕಾಗವಾಡ ತಾಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆಗಳನ್ನು ಈ ಕುಟುಂಬ ಹೊಂದಿದೆ. ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಇಬ್ಬರು ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸಿರುವ IT ಅಧಿಕಾರಿಗಳು, ಮಹತ್ತರ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.