ಬೆಂಗಳೂರು ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿದರ್ಭ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ.
ಗಮನಾರ್ಹ ಸಂಗತಿಯೆಂದರೆ, ಕಳೆದ ಆವೃತ್ತಿಯ ಫೈನಲ್ನಲ್ಲಿ ಕರ್ನಾಟಕ ಯಾವ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತೋ, ಅದೇ ವಿದರ್ಭ ತಂಡ ಈ ಬಾರಿ ಸೆಮಿಫೈನಲ್ನಲ್ಲಿ ಕರ್ನಾಟಕದ ಕನಸಿಗೆ ಬ್ರೇಕ್ ಹಾಕಿದೆ. ಇನ್ನೊಂದು ವಿಶೇಷ ಅಂಶವೆಂದರೆ, ಕರ್ನಾಟಕದ ಸೋಲಿಗೆ ಪ್ರಮುಖ ಕಾರಣನಾದವರು ಕರ್ನಾಟಕದವರೇ ಆಗಿರುವ ಆರ್. ಸಮರ್ಥ್. ಈ ಆವೃತ್ತಿಯಲ್ಲಿ ವಿದರ್ಭ ಪರ ಆಡುತ್ತಿರುವ ಸಮರ್ಥ್, ಅಜೇಯ ಅರ್ಧಶತಕ ಬಾರಿಸಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕಕ್ಕೆ ಆರಂಭದಲ್ಲೇ ಭಾರೀ ಹಿನ್ನಡೆ ಎದುರಾಯಿತು. ಟೂರ್ನಿ ಪೂರ್ತಿ ಉತ್ತಮ ಫಾರ್ಮ್ನಲ್ಲಿದ್ದ ನಾಯಕ ಮಯಾಂಕ್ ಅಗರ್ವಾಲ್ (9) ಹಾಗೂ ದೇವದತ್ ಪಡಿಕ್ಕಲ್ (4) ಸಂಪೂರ್ಣವಾಗಿ ವಿಫಲರಾದರು. ಪರಿಣಾಮ, ತಂಡ 20 ರನ್ಗಳಲ್ಲೇ ಎರಡು ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿತು.
ಇನ್ನಿಂಗ್ಸ್ ನಿಭಾಯಿಸಿದ ಕರುಣ್ ನಾಯರ್ 76 ರನ್ಗಳ ಭರ್ಜರಿ ಆಟ ಆಡಿದರೂ ಶತಕ ತಲುಪಲು ಸಾಧ್ಯವಾಗಲಿಲ್ಲ. ಧೃವ್ 28 ರನ್ಗಳಿಗೆ ಔಟಾದರು. ಶ್ರೀಜಿತ್ 54 ರನ್ಗಳೊಂದಿಗೆ ತಂಡದ ಎರಡನೇ ಗರಿಷ್ಠ ಸ್ಕೋರರ್ ಆಗಿದರು. ಶ್ರೇಯಸ್ ಗೋಪಾಲ್ 36 ಮತ್ತು ಮನೋಹರ್ 26 ರನ್ಗಳ ಕೊಡುಗೆ ನೀಡಿದರು. ಕೊನೆಯ ಓವರ್ನಲ್ಲಿ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡ ಕರ್ನಾಟಕ 50 ಓವರ್ಗಳಲ್ಲಿ 280 ರನ್ ಕಲೆಹಾಕಿತು.
281 ರನ್ಗಳ ಗುರಿ ಬೆನ್ನಟ್ಟಿದ ವಿದರ್ಭ ತಂಡಕ್ಕೂ ಆರಂಭದಲ್ಲಿ ಅಡೆತಡೆ ಎದುರಾಯಿತು. ಕೇವಲ 9 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡರೂ, ಬಳಿಕ ಅಮನ್ ಮತ್ತು ಧೃವ್ ಜೋಡಿ ತಂಡವನ್ನು ಶತಕದ ಗಡಿ ದಾಟಿಸಿತು. ಧೃವ್ 47 ರನ್ಗಳಿಗೆ ಔಟಾದರೆ, ಅಮನ್ 128 ರನ್ಗಳ ಅಸಾಧಾರಣ ಇನ್ನಿಂಗ್ಸ್ ಆಡಿ ಗೆಲುವು ಖಚಿತಪಡಿಸಿದರು. ಅವರ ಜೊತೆ ಆರ್. ಸಮರ್ಥ್ ಅಜೇಯ 76 ರನ್ಗಳ ಇನ್ನಿಂಗ್ಸ್ ಆಡುತ್ತಾ ವಿದರ್ಭವನ್ನು ಫೈನಲ್ಗೆ ಕರೆದೊಯ್ದರು.



