ಬೆಂಗಳೂರು: ಭೋವಿ ನಿಗಮ ಅವ್ಯವಹಾರದ ಆರೋಪಿ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎಸ್ಐಟಿ ರಚಿಸಿ ಹೈಕೋರ್ಟ್ ಆದೇಶ ನೀಡಿದೆ. ಜೊತೆಗೆ ಮೂರು ತಿಂಗಳಲ್ಲಿ ವಿಚಾರಣೆ ಮುಗಿಸಿ ವರದಿ ನೀಡುವಂತೆ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಸೂಚನೆ ನೀಡಿದೆ. ಒಟ್ಟಾರೆ ಮೂವರು ಐಪಿಎಸ್ ಅಧಿಕಾರಿಗಳನ್ನು (ಸಿಬಿಐ ಎಸ್ಪಿ ವಿನಾಯಕ್ ವರ್ಮ, ಐಪಿಎಸ್ ಅಕ್ಷಯ್ ಮಜ್ಲಿ, ಎಸ್ಪಿ ನಿಶಾ ಜೇಮ್ಸ್) ಎಸ್ಐಟಿ ಹೊಂದಿರಲಿದೆ. ಈ ಪೈಕಿ ಇಬ್ಬರು ಎಸ್ಪಿಗಳಿದ್ದಾರೆ.
ಇನ್ನೂ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ತಕ್ಷಣ ಎಸ್ಐಟಿ ಆರಂಭಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂಬಂಧಿತ ಅಧಿಕಾರಿಗಳು ಎಸ್ಐಟಿಗೆ ಒದಗಿಸಬೇಕು. ಅಗತ್ಯಬಿದ್ದರೆ ಇತರೆ ಪೊಲೀಸ್ ಅಧಿಕಾರಿಗಳನ್ನು ಎಸ್ಐಟಿಯು ನೆರವಿಗೆ ಪಡೆಯಬಹುದು.
ತನಿಖೆ ಆರಂಭವಾದಗಿನಿಂದ ಮೂರು ತಿಂಗಳಲ್ಲಿ ತನಿಖೆ ಮುಗಿಯಬೇಕು. ತನಿಖಾ ವರದಿಯನ್ನು ಮೂರು ತಿಂಗಳು ಅಥವಾ ಅದರ ಒಳಗೆ ಈ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಎಸ್ಐಟಿಗೆ ಅಗತ್ಯವಾದ ಕಚೇರಿ ಮತ್ತಿತರ ಸೌಲಭ್ಯವನ್ನು ರಾಜ್ಯ ಸರ್ಕಾರ ಒದಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಏನಿದು ಪ್ರಕರಣ?
ಭೋವಿ ನಿಗಮ ಅಕ್ರಮ ಸಂಬಂಧ ಜೀವಾರನ್ನು ಸಿಐಡಿ ವಿಚಾರಣೆಗೆ ಒಳಪಡಿಸಿತ್ತು. ಆದರೆ ಕಿರುಕುಳದ ಆರೋಪ ಮಾಡಿ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಭೋವಿ ನಿಗಮದಲ್ಲಿ ಒಟ್ಟು 34 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದೆ. ಇದರಲ್ಲಿ ಜೀವಾ ಮಾಲೀಕತ್ವದ ಸಂಸ್ಥೆ ಅನ್ನಿಕಾ ಎಂಟರ್ಪ್ರೆಸಸ್ಗೆ 7.16 ಕೋಟಿ ರೂ., ಅವರ ಸಹೋದರಿ ಹೆಸರಲ್ಲಿರುವ ಹರ್ನಿತಾ ಕ್ರಿಯೇಷನ್ಸ್ಗೆ 3.79 ಕೋಟಿ ರೂ. ವರ್ಗಾವಣೆ ಆಗಿತ್ತು. ಇನ್ನುಳಿದ ಹಣ ಮಾಜಿ ಎಂಡಿಗಳ ಆಪ್ತರ ಪಾಲುದಾರಿಕೆಯ ಸಂಸ್ಥೆಗಳಿಗೆ ವರ್ಗವಾಗಿತ್ತು. ಈ ಪ್ರಕರಣದ ಬಗ್ಗೆ ಆಂತರಿಕ ತನಿಖೆ ನಡೆಸಲು ಗೃಹ ಇಲಾಖೆ ಮುಂದಾಗಿತ್ತು.