ವಿಜಯಸಾಕ್ಷಿ ಸುದ್ದಿ, ಗದಗ : ವಿದ್ಯಾರ್ಥಿಗಳ ಕಲಿಕೆಯ ವಿಷಯಗಳನ್ನು ಆಧರಿಸಿ ಕೈಗೊಳ್ಳುವ ಚಟುವಟಿಕೆಗಳು ಅಥವಾ ಸ್ಪರ್ಧೆಗಳು ಮಕ್ಕಳ ಕಲಿಕೆಯನ್ನು ಗಟ್ಟಿಗೊಳಿಸುವುದರ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ಪೂರಕವಾಗುತ್ತವೆ ಎಂದು ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಅಭಿಪ್ರಾಯಪಟ್ಟರು.
ಅವರು ಕೋಟುಮಚಗಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ನಡೆದ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನ (ಎಫ್ಎಲ್ಎನ್) ಕಲಿಕಾಧಾರಿತ ಸ್ಪರ್ಧೆಗಳ `ಕಲಿಕಾ ಸಂಭ್ರಮ 2023-24′ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಮಕ್ಕಳ ಶೈಕ್ಷಣಿಕ ಪ್ರಗತಿಯ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳಲ್ಲಿ ಆಯಾ ತರಗತಿಯ ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ನಿಗದಿಪಡಿಸಿದ ಕಲಿಕಾಂಶಗಳ ಅಥವಾ ಕಲಿಕಾ ಫಲಗಳನ್ನು ಆಧರಿಸಿ ಹಮ್ಮಿಕೊಂಡಿರುವ ಈ ಕಲಿಕಾಧಾರಿತ ಚಟುವಟಿಕೆಗಳ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿದೆ. ಕ್ಲಸ್ಟರ್ನ ಎಲ್ಲ ಶಿಕ್ಷಕರ, ಎಸ್ಡಿಎಂಸಿ ಹಾಗೂ ಗ್ರಾಮ ಪಂಚಾಯಿತಿಯವರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ಸು ಕಂಡಿದ್ದು ಮುಂಬರುವ ದಿನಗಳಲ್ಲಿ ಎಲ್ಲ ಕ್ಲಸ್ಟರ್ಗಳಿಗೆ ಹಾಗೂ ತಾಲೂಕ ಹಂತದಲ್ಲಿ ಈ ಕಾರ್ಯಕ್ರಮ ವಿಸ್ತರಣೆ ಹೊಂದಬೇಕೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷ ಶೇಖಪ್ಪ ಬಂಡಿ ಮಾತನಾಡಿ, ಇಂತಹ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ ಹಾಗೂ ಸಹಕಾರ ನೀಡಿದ ಸರ್ವರೂ ಅಭಿನಂದನಾರ್ಹರು ಎಂದರು.
ಎಸ್ಡಿಎಂಸಿ ಸದಸ್ಯ ಜಗದೀಶ್ ಮಲ್ಲಣ್ಣನವರ, ಗ್ರಾ.ಪಂ ಸದಸ್ಯ ರಮೇಶ್ ಅಕ್ಕಿ, ಶಿಕ್ಷಣ ಪ್ರೇಮಿ ಮಲ್ಲಣ್ಣ ಅಣ್ಣಿಗೇರಿ, ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಅಡವಿ ಸೋಮಾಪೂರ ಶಿಕ್ಷಕರ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪಿ. ಕೊಪ್ಪದ, ಪ್ರತಿಭಾನ್ವಿತ ವಿದ್ಯಾರ್ಥಿನಿ ಅಪೂರ್ವ ಹೂಗಾರ ಮಾತನಾಡಿದರು.
ಕೋಟುಮಚಗಿಯ ಸಮೂಹ ಸಂಪನ್ಮೂಲ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿ ಡಿ.ಎಸ್. ಕಳಕಣ್ಣವರ ನೇತೃತ್ವದಲ್ಲಿ ಕ್ಲಸ್ಟರ್ನ ಎಲ್ಲಾ ಶಾಲೆಗಳ ಪ್ರಧಾನ ಗುರುಗಳು, ಶಿಕ್ಷಕರು ಎಸ್ಡಿಎಂಸಿ ಹಾಗೂ ಗ್ರಾಮ ಪಂಚಾಯಿತಿಯ ಸಹಕಾರದಲ್ಲಿ ಸುಮಾರು ೪೫ ಸ್ಪರ್ಧೆಗಳನ್ನು ನಡೆಸಲಾಯಿತು.
ಕ್ಲಸ್ಟರ್ ಸಿಆರ್ಪಿ ಡಿ.ಎಸ್. ಕಳಕಣ್ಣವರ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಗುರುಮಾತೆ ಎಸ್.ಜೆ. ಸಗರ ಸ್ವಾಗತಿಸಿದರು. ಬಿ.ಡಿ. ಬಡೇಖಾನವರ ಕಾರ್ಯಕ್ರಮ ನಿರೂಪಿಸಿದರು. ವಾಯ್.ಎಚ್. ನಿಡಗುಂದಿ ವಂದಿಸಿದರು.
ಗದಗ ಡಯಟ್ ಹಿರಿಯ ಉಪನ್ಯಾಸಕ ಶಂಕರ್ ಹಡಗಲಿ ಮಾತನಾಡಿ, ಮಗು ಕಲಿತ ಕಲಿಕಾಂಶಗಳನ್ನು ಸಮುದಾಯದ ಮುಂದೆ ಹಾಗೂ ಪಾಲಕರ ಮಧ್ಯೆ ಅನಾವರಣಗೊಳಿಸುವುದರ ಜೊತೆಗೆ ಆ ಮಕ್ಕಳನ್ನು ಕಲಿಕೆಯ ಕಡೆಗೆ ಇನ್ನಷ್ಟು ಪ್ರೇರೇಪಿಸಿ ಸಮುದಾಯಕ್ಕೆ ಶಾಲೆಗಳು ಹತ್ತಿರವಾಗುವಂತೆ ಮಾಡುವ ಇಂತಹ ಚಟುವಟಿಕೆಗಳು ಪ್ರಶಂಸನೀಯ ಎಂದರು.