ವಿಜಯಸಾಕ್ಷಿ ಸುದ್ದಿ, ಗದಗ : ಮನುಷ್ಯನ ದುಃಖಕ್ಕೆ ಮನಸ್ಸೇ ಕಾರಣ. ಎಲ್ಲಾ ಇಂದ್ರಿಯಗಳಿಗೂ ಚೇತನ ನೀಡುವುದರ ಮೂಲಕ ಮನಸ್ಸೇ ಇಂದ್ರಿಯಗಳಿಗೆ ಮೂಲವಾಗಿದೆ. ನಮ್ಮಲ್ಲಿರುವ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸಬೇಕು. ಭಗವಂತನ ಚಿಂತನೆಯನ್ನು ಮಾಡುತ್ತ, ಶರಣಾಗತಿ ಭಾವವನ್ನು ಹೊಂದಿದಾಗ ಮಾತ್ರ ಮೋಕ್ಷವನ್ನು ಸಂಪಾದಿಸಬಹುದು. ಅಕ್ಕನ ವಚನಗಳನ್ನು ಮತ್ತೆ ಮತ್ತೆ ಓದುವುದರ ಜೊತೆಯಲ್ಲಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಜೀವನ ಉನ್ನತಿ ಪಡೆಯಬಹುದೆಂದು ಶ್ರೀ ಮ.ನಿ.ಪ್ರ. ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.
ಅಕ್ಕನ ಬಳಗದಲ್ಲಿ ಅಕ್ಕನ ಜಯಂತಿ ಉತ್ಸವದ ನಿಮಿತ್ತ ನಡೆಯುತ್ತಿರುವ ಮೊದಲನೇ ದಿನದ ಕಾರ್ಯಕ್ರಮದಲ್ಲಿ ಷಟ್ಸ್ಥಲ್ ಧ್ವಜಾರೋಹಣ ನೆರವೇರಿಸಿ ಶ್ರೀಗಳು ಆಶೀರ್ವಚನದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಶೀವಲೀಲಾ ಹಿರೇಮಠ ಪ್ರಾರ್ಥಿಸಿದರು. ಅಕ್ಕನ ಬಳಗದ ಅಧ್ಯಕ್ಷೆ ಲಲಿತಾ ವಿ.ಬಾಳಿಹಳ್ಳಿಮಠ ಸ್ವಾಗತಸಿದರು.
ಕಾರ್ಯದರ್ಶಿ ರೇಣುಕಾ ಎಲ್.ಅಮಾತ್ಯ ವಂದಿಸಿದರು. ಜಯಲಕ್ಷ್ಮಿ ವಿ.ಬಳ್ಳಾರಿ ಕಾರ್ಯಕ್ರಮ ಸಂಯೋಜಿಸಿದರು. ಪ್ರೇಮಾ ಬಿ.ಮೇಟಿ ನಿರೂಪಿಸಿದರು. ಖ್ಯಾತ ಹಿಂದೂಸ್ತಾನಿ ಗಾಯಕಿ ಪಾರ್ವತಿ ವಿ.ಮಾಳೆಕೊಪ್ಪಮಠ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅನ್ನಪೂರ್ಣ ಮಾಳೆಕೊಪ್ಪಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪವಿತ್ರಾ ಬಿರಾದಾರ ಪ್ರಸಾದದ ಭಕ್ತಿ ಸೇವೆಯನ್ನು ವಹಿಸಿಕೊಂಡಿದ್ದರು.
ಶಿವಲೀಲಾ ಕುರುಡಗಿ, ಕಸ್ತೂರಿ ಹಿರೇಗೌಡರ, ಸುಜಾತಾ ಮಾನ್ವಿ, ಶಾರದಾ ಹಿರೇಮಠ, ರೇಖಾ ಶಿಗ್ಲಿಮಠ, ದೀಪಾ ಪಟ್ಟಣಶೆಟ್ಟಿ, ಶ್ರೇಯಾ ಪವಾಡಶೆಟ್ಟರ್, ಸರೋಜಕ್ಕ ಮಾನ್ವಿ, ಜಯಶ್ರೀ ಬಾಳಿಹಳ್ಳಿಮಠ, ವಿದ್ಯಾ ಧಡಿ, ಸುಜಾತಾ ಹಿರೇಮಠ, ಶಶಿಕಲಾ ಹಿರೇಮಠ, ಸುವರ್ಣ ಮದರಿಮಠ ಮುಂತಾದವರು ಪಾಲ್ಗೊಂಡಿದ್ದರು.
12ನೇ ಶತಮಾನದಲ್ಲಿ ದೊರೆತ ಸ್ವಾತಂತ್ರ್ಯವನ್ನು ಅನುಭವಿಸಿದ ಮಹಿಳಾ ಶ್ರೇಷ್ಠ ಶಿವಶರಣೆ ಅಕ್ಕಮಹಾದೇವಿ, ಮಹಿಳಾ ಸಾಧಕರಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆದ ಮಹಿಳೆ ತನ್ನ ಬದುಕನ್ನು ಮಾತ್ರ ಸಾರ್ಥಕಪಡಿಸಿಕೊಳ್ಳದೇ ಆತ್ಮಕಲ್ಯಾಣದ ಜೊತೆಗೆ ಸಮಾಜದ ಕಲ್ಯಾಣ ಸಾಧಿಸಿರುವ ಮಹಾಜ್ಞಾನಿ, ಚಿಕ್ಕವಯಸ್ಸಿನಲ್ಲಿಯೇ ಹೆಚ್ಚಿನ ಜ್ಞಾನವನ್ನು ಪಡೆದ ಮಹಿಳೆ, ಅದ್ಭುತವಾದ ಕವಿತಾ ಶಕ್ತಿ ಇರುವ, ಭಾರತ ಭೂಮಿಯ ಮೊಟ್ಟ ಮೊದಲ ಮಹಿಳಾ ಕವಿಯತ್ರಿಯೂ ಹೌದು. ಅಕ್ಕನ ವಚನಗಳಲ್ಲಿ ಮೌಲ್ಯ ತುಂಬಿರುತ್ತಿತ್ತು ಎಂದು ಶ್ರೀಗಳು ತಿಳಿಸಿದರು.