ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ ನಗರದಲ್ಲಿನ ಶ್ರೀ ಮರಿಯಮ್ಮದೇವಿ ಹಾಗೂ ಶ್ರೀ ಸ್ವಾರೆಮ್ಮದೇವಿಯ 70ನೇ ವರ್ಷದ ಅಗ್ನಿ ಮಹೋತ್ಸವವು ಗೌರಿ ಹುಣ್ಣಿಮೆಯ ದಿನವಾದ ನ.15ರಂದು ಸಡಗರ ಸಂಭ್ರಮದಿಂದ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಜರುಗಿತು.
ಅಗ್ನಿ ಮಹೋತ್ಸವದ ನಿಮಿತ್ತ ಬೆಳಿಗ್ಗೆ ಹೊರದುರಗಮ್ಮನ ದೇವಸ್ಥಾನದಿಂದ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತ ಪಲ್ಲಕ್ಕಿಯ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮಧ್ಯಾಹ್ನ 12 ಗಂಟೆ ಸುಮಾರಿಗೆ ದೇವಸ್ಥಾನ ಎದುರುಗಡೆ ನಿರ್ಮಿಸಿದ ಅಗ್ನಿಕುಂಡದಲ್ಲಿ ಭಕ್ತರು ಅಗ್ನಿ ಹಾಯುವುದರ ಮೂಲಕ ದೇವಿಯ ಕೃಪೆಗೆ ಪಾತ್ರರಾದರು.
ಪಲ್ಲಕ್ಕಿ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ದೇವಿಗೆ ಜಯಘೋಷವನ್ನು ಮಾಡಿ, ತಮ್ಮ ಮನೆಯ ಮುಂದೆ ನೀರು ಹಾಕಿ ದೇವಿಗೆ ತಮ್ಮ ಕಾಣಿಕೆಯನ್ನು ಸಮರ್ಪಿಸಿದರು. ಡೊಳ್ಳಿನ ಮಜಲು ಸೇರಿದಂತೆ ಸಕಲ ವಾದ್ಯಗೋಷ್ಠಿಗಳೊಂದಿಗೆ ಭವ್ಯ ಮೆರವಣಿಗೆಯು ನಡೆಯಿತು. ಕಾರ್ಯಕ್ರಮದ ನಂತರ ಅನ್ನದಾಸೋಹ ನೆರವೇರಿತು.