ವಿಜಯಸಾಕ್ಷಿ ಸುದ್ದಿ, ಗದಗ : ಶಾಲಾ ದಿನಗಳು ಮಾನವನ ಸರ್ವಾಂಗೀಣ ವ್ಯಕ್ತಿತ್ವಕ್ಕೆ ಬುನಾದಿಯಾಗಿದ್ದು, ಮಾನವನ ಜೀವನದುದ್ದಕ್ಕೂ ಶಾಲಾ ದಿನಗಳ ನೆನಪು ಅಮರವಾಗಿರುತ್ತದೆ ಎಂದು ತೋಂಟದ ಸಿದ್ಧೇಶ್ವರ ಪ.ಪೂ ಕಾಲೇಜಿನ ಪ್ರಾಚಾರ್ಯ ವೈ.ಎಸ್. ಮತ್ತೂರ ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ನಗರದ ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಹೈಸ್ಕೂಲಿನ ಅಂತಿಮ ಘಟ್ಟವಾದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕಾಲೇಜು ಸೇರುವ ಖುಷಿ ಒಂದೆಡೆಯಾದರೆ, ಇನ್ನೊಂದೆಡೆ ಶಾಲಾ ದಿನಗಳು ಕಳೆದುಹೋದವೆಂಬ ದುಃಖ ಕಾಡುತ್ತದೆ. ತೋಂಟದಾರ್ಯ ಶಿಕ್ಷಣ ಸಂಸ್ಥೆಯು ನಾಲ್ಕು ದಶಕಗಳಿಂದ ಸಂಸ್ಕಾರಯುತ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಸಮಾಜಕ್ಕೆ ಸಾವಿರಾರು ಉತ್ತಮ ನಾಗರಿಕರನ್ನು ಕೊಡುಗೆಯನ್ನಾಗಿ ನೀಡಿದ ಕೀರ್ತಿ ಈ ಶಾಲೆಗಿದೆ.
ಎಸ್.ಎಸ್.ಎಲ್.ಸಿಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ತೋಂಟದಾರ್ಯ ವಿದ್ಯಾಪೀಠದ ತೋಂಟದ ಸಿದ್ಧೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಪ್ರವೇಶ ನೀಡುತ್ತಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದರು.
ಎಸ್.ಎಸ್.ಎಲ್.ಸಿಯಲ್ಲಿ ಉನ್ನತ ಶ್ರೇಣಿ ಪಡೆಯುವ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳ ಹೆಸರಿನಲ್ಲಿ 11,001 ರೂ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ವರ್ಷದುದ್ದಕ್ಕೂ ಶಾಲೆಯಲ್ಲಿ ಜರುಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭ ಜರುಗಿತು. ವೇದಿಕೆ ಮೇಲೆ ಅತಿಥಿಗಳಾಗಿ ಅಮರೇಶ ಅಂಗಡಿ, ವಿರೂಪಾಕ್ಷಪ್ಪ ಬಳ್ಳೊಳ್ಳಿ ಉಪಸ್ಥಿತರಿದ್ದರು.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಸಾದಿಯಾ ಸಂಗಡಿಗರು ಪ್ರಾರ್ಥಿಸಿದರು. ಕೆ.ಎಂ. ಗೌಡರ ನಿರೂಪಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ನಾಗರಾಜ ಗಾಳಿ, ಶಿಕ್ಷಕರಾದ ಸುರೇಖಾ ಕುಂಬಾರಗೇರಿಮಠ, ಮಧುಮತಿ ಬಂಡಿವಾಡ, ವಂದನಾ ಮಿಸಾಳ, ಪ್ರವೀಣ ಸಂಗಟಿ, ಸ್ವಪ್ನಾ ಯಾದವ, ಕವಿತಾ ನಾರಗುಣ್ಣವರ, ಮಂಜುಳಾ ಭೂಮಣ್ಣವರ, ಶಶಿಧರಗೌಡ ಪಾಟೀಲ ಇದ್ದರು.
ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ ಮಾತನಾಡಿ, ಮಾನವನಿಗೆ ಬಾಲ್ಯ ಜೀವನ ಅತ್ಯಂತ ಪ್ರಭಾವಶಾಲಿಯಾಗಿದ್ದು, ಬಾಲ್ಯವನ್ನು ವ್ಯಾಪಿಸಿರುವುದೇ ಶಾಲೆಯ ನೆನಪುಗಳಾಗಿವೆ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿತು ಬದುಕು ರೂಪಿಸಿಕೊಂಡ ಅನೇಕ ವಿದ್ಯಾರ್ಥಿಗಳು ಭೇಟಿಯಾದಾಗ ತಮ್ಮ ಶಾಲಾ ದಿನಗಳನ್ನು ನೆನೆದು ಭಾವುಕರಾಗುತ್ತಾರೆ. ಎಸ್.ಎಸ್.ಎಲ್.ಸಿ ಹಂತ ವಿದ್ಯಾರ್ಥಿ ಜೀವನದ ಪ್ರಮುಖ ಮೈಲಿಗಲ್ಲಾಗಿದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ನಿರಂತರ ಪರಿಶ್ರಮದಿಂದ ಅಧ್ಯಯನ ಮಾಡಿ ಆದರ್ಶ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ವೈ.ಎಸ್. ಮತ್ತೂರ ನುಡಿದರು.