40 ಅಡಿ ಎತ್ತರದ ತೆಂಗಿನಮರ ಏರಿದ್ದ ಮಂಗ…..ಆಹಾರ, ನೀರಿಲ್ಲದೇ ನರಳಾಡುತ್ತಿದ್ದ ಮಂಗ…..ನಾಲ್ಕೈದು ದಿನಗಳ ಕಾಲ ಮರದಲ್ಲಿ ಕುಳಿತಿದ್ದ ಮಂಗ……

ವಿಜಯಸಾಕ್ಷಿ ಸುದ್ದಿ, ಗದಗ
ಕಳೆದ ಐದು ದಿನಗಳಿಂದ ಆಹಾರ, ನೀರು ಇಲ್ಲದೆ ತೆಂಗಿನಮರ ಏರಿ ಕುಳಿತಿದ್ದ ಮಂಗ ಭಾನುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಕೊನೆಗೂ ಸೆರೆ ಸಿಕ್ಕಿದೆ.
ಶನಿವಾರ ನಡೆಸಿದ ಮಂಕಿ ಆಪರೇಶನ್ ವಿಫಲವಾಗಿತ್ತು. ಹೀಗಾಗಿ ಇಂದು ಬೆಳ್ಳಂಬೆಳಿಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸಿದ ಕಾರ್ಯಚರಣೆ ಯಶಸ್ವಿಯಾಗಿದೆ.

ಇಲ್ಲಿನ ಮುಳಗುಂದನಾಕಾ ಬಳಿ ಇರುವ ತೆಂಗಿನಮರವನ್ನು ಕಳೆದ ಐದು ದಿನಗಳ ಹಿಂದೆ ಮಂಗವೊಂದು ಏರಿ ಕುಳಿತಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಮಂಗನನ್ನು ಕೆಳಗೆ ಇಳಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಆದರೆ ಅದು ಕೆಳಗೆ ಇಳಿದಿರಲಿಲ್ಲ.
ಮೊದಲೇ ಗಾಯಗೊಂಡಿದ್ದ ಮಂಗ, ಮರವೇರಿ ಕುಳಿತು ಆಹಾರ, ನೀರಿಲ್ಲದೇ ನರಳಾಟ ನಡೆಸಿತ್ತು. ಮಂಗನನ್ನು ಕೆಳಗೆ ಇಳಿಸುವ ಸಾರ್ವಜನಿಕರ ಪ್ರಯತ್ನ ಸಫಲವಾಗಿರಲಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ.

ಆದರೆ ಆಹಾರ, ನೀರಿಲ್ಲದೇ ಮಂಗ ನರಳಾಡುತ್ತಿರುವುದನ್ನು ಕಂಡ ಸಾರ್ವಜನಿಕರು ಮಮ್ಮಲ ಮರಗಿ ಮಾಧ್ಯಮಗಳ ಮೂಲಕ ಅರಣ್ಯ ಇಲಾಖೆಯ ಗಮನಕ್ಕೆ ತಂದರು.
ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಅನಿವಾರ್ಯವಾಗಿ ಶನಿವಾರ ಮಂಕಿ ಆಪರೇಶನ್ ನಡೆಸಿದರು. ಸುಮಾರು ಐದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು ಯಶಸ್ವಿಯಾಗಿರಲಿಲ್ಲ.
ಇಂದು ಮತ್ತೆ ಬೆಳ್ಳಂಬೆಳಿಗ್ಗೆ ತೆಂಗಿನಮರ ಏರುವ ಮಷಿನ್ (ಕೋಕೊನೆಟ್ ಟ್ರೀ ಕ್ಲೈಂಬರ್) ಸಹಾಯದಿಂದ ಪರಿಣತ ವ್ಯಕ್ತಿಯೊಬ್ಬನನ್ನು ಮಂಕಿ ಕಾರ್ಯಾಚರಣೆಗೆ ಇಳಿಸಿದರು. ಆತ ಗರಿ ಕಟ್ ಮಾಡುತ್ತಾ ಮರ ಏರುತ್ತಿದ್ದ.
ಆ ವ್ಯಕ್ತಿ ತೆಂಗಿನಮರದ ಗರಿ ಕಟ್ ಮಾಡುತ್ತಾ ಮರ ಏರುತ್ತಿದ್ದಂತೆಯೇ ಗಾಬರಿಗೆ ಬಿದ್ದ ಮಂಗ ಸರ್ರನೇ ಕೆಳಗೆ ಇಳಿಯಿತು. ಇಳಿದ ಮಂಗನನ್ನು ಹಿಡಿಯಲು ಮುಂದಾದ ಸಿಬ್ಬಂದಿ ಚಂದ್ರು ಹಾಗೂ ಆನಂದ ಕಲಬುರಗಿ ಎಂಬುವರ ಮೇಲೆ ಮಂಗ ಅಟ್ಯಾಕ್ ಮಾಡಿ ಗಾಯಗೊಳಿಸಿತು.

ಗಾಯಗೊಂಡವರು ಸದ್ಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಮಂಜುನಾಥ ಮೇಗಲಮನಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಗಾಯಗೊಂಡ ಮಂಗನಿಗೆ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.