ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗದಗ–ಲಕ್ಷ್ಮೇಶ್ವರ ರಸ್ತೆ ಪಕ್ಕದ ಜಮೀನೊಂದರಲ್ಲಿ ತಾಲೂಕಿನ ಶಿಗ್ಲಿ ಗ್ರಾಮದ ನಿವಾಸಿ ಮಹಮ್ಮದ್ ಫಾರೂಕ್ ಹುಸೇನ್ಸಾಬ್ ಶೇಖ್ ಸನದಿ (29) ಎಂಬ ಯುವಕನನ್ನು ಫೆ. 28ರಂದು ಕೊಲೆ ಮಾಡಿ ಎಸೆದಿದ್ದರು.
ಘಟನೆ ನಡೆದ 24 ಗಂಟೆಗಳೊಳಗೆ ಕೊಲೆಗಾರರನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆಯಾದ ಮಹಮ್ಮದ್ ಫಾರೂಕ್ ಕಾಣೆಯಾದ ಬಗ್ಗೆ ಅವರ ಕುಟುಂಬಸ್ಥರು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಹುಡುಕಲು ಮುಂದಾದಾಗ, ಆತನನ್ನು ಕೊಲೆ ಮಾಡಿ ಹೊಲದಲ್ಲಿ ಎಸೆದಿರುವುದು ತಿಳಿದುಬಂದಿತು.
ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಹಾಗೂ ಡಿವೈಎಸ್ಪಿ ಮುರ್ತುಜಾ ಖಾದ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರ ಮಾರ್ಗದರ್ಶನದಲ್ಲಿ ಸಿಪಿಐ ಬಿ.ವಿ. ನ್ಯಾಮಗೌಡ್ರ ಅವರ ನೇತೃತ್ವದಲ್ಲಿ ಪಿಎಸ್ಐ ನಾಗರಾಜ ಗಡದ ಹಾಗೂ ಸಿಬ್ಬಂದಿಗಳ ತಂಡ ಆರೋಪಿತರ ಪತ್ತೆಗಾಗಿ ಬಲೆ ಬೀಸಿ 24 ಗಂಟೆಯಲ್ಲಿಯೇ ಆರೋಪಿಗಳನ್ನು ಬಂಧಿಸಿದೆ.
ಪೊಲೀಸರು ತೀವ್ರ ತನಿಖೆ ನಡೆಸಿ ಆರೋಪಿತರಾದ ದಾವಲಸಾಬ ಪಾಪಾಸಾಬ್ ಮಕಾನದಾರ (22), ಮುಕ್ತುಂಹುಸೇನ್ ಹುಸೇನಸಾಬ ತಹಸೀಲ್ದಾರ (23), ಅಜಯಕುಮಾರ ಮಂಜುನಾಥ ಬಿಳೆಬಾಳ (18) ಹಾಗೂ ಮಹಮ್ಮದ್ ಹುಸೇನ್ ದಸ್ತಗೀರಸಾಬ್ ಸಂಗಟಿ (16) ಎಂಬುವರನ್ನು ಬಂಧಿಸಿದ್ದಾರೆ. ಇವರೆಲ್ಲರೂ ಧಾರವಾಡ ಜಿಲ್ಲೆ ನವಲಗುಂದ ತಾಲೂಕು ಅಣ್ಣಿಗೇರಿ ಗ್ರಾಮದ ಯುವಕರಾಗಿದ್ದಾರೆ.
ಸದರಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಸಿಪಿಐ ಬಿ.ವಿ. ನ್ಯಾಮಗೌಡ್ರ, ಪಿಎಸ್ಐ ನಾಗರಾಜ ಗಡದ, ಕ್ರೈಂ ಪಿಎಸ್ಐ ಟಿ.ಕೆ. ರಾಥೋಡ್ ಹಾಗೂ ಸಿಬ್ಬಂದಿಗಳಾದ ಆರ್.ಎಸ್. ಯರಗಟ್ಟಿ, ಎಂ.ಎ. ಶೇಖ್, ಎ.ಆರ್. ಕಮ್ಮಾರ, ಎಂ.ಎಸ್. ಬಳ್ಳಾರಿ, ಡಿ.ಎಸ್. ನದಾಫ್, ಪಾಂಡುರಂಗರಾವ್, ಮಧುಚಂದ್ರ ಧಾರವಾಡ, ಎಂ.ವೈ. ಉಪ್ಪಾರ, ಬಸವರಾಜ ಮುಳಗುಂದ, ಸೋಮು ವಾಲ್ಮೀಕಿ, ಕೃಷ್ಣ ಹುಲಗೂರ, ಅಪ್ಪಣ್ಣ ರಾಥೋಡ್, ಗದಗ ಜಿಲ್ಲಾ ತಾಂತ್ರಿಕ ವಿಭಾಗದ ಗುರು ಬೂದಿನಾಳ, ಸಚಿನ್ ಕೊರಡೂರ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊಲೆಗಾರರ ಪೈಕಿ ಆರೋಪಿ ದಾವಲಸಾಬ ಮಕಾನದಾರನಿಗೆ ಕುಂದಗೋಳ ತಾಲೂಕು ತರ್ಲಘಟ್ಟ ಗ್ರಾಮದ ಯುವತಿಯ ಪರಿಚಯವಾಗಿದ್ದು, ಅವಳನ್ನು ಪ್ರೀತಿಸುತ್ತಿದ್ದ. ಅಲ್ಲದೆ ಅವಳನ್ನು ಮದುವೆಯಾಗಲು ನಿರ್ಧರಿಸಿದ್ದ. ಆದರೆ ಯುವತಿಯ ಮನೆಯವರು ಲಕ್ಷ್ಮೇಶ್ವರದ ಮಹಮ್ಮದ್ ಫಾರೂಕ್ ಶೇಖ್ ಸನದಿಯೊಂದಿಗೆ ಒಂದು ತಿಂಗಳ ಹಿಂದೆ ಮದುವೆ ನಿಶ್ಚಯ ಮಾಡಿದ್ದರು. ಈ ವಿಷಯ ತಿಳಿದ ದಾವಲಸಾಬ, ಉಳಿದ ಮೂವರು ಆರೋಪಿಗಳೊಂದಿಗೆ ಅಣ್ಣಿಗೇರಿಯಿಂದ ಕಾರಿನಲ್ಲಿ ಲಕ್ಷ್ಮೇಶ್ವರಕ್ಕೆ ಬಂದು ಯುವಕನನ್ನು ಊರ ಹೊರವಲಯಕ್ಕೆ ಕರೆದುಕೊಂಡು ಹೋಗಿ ಕೊಡಲಿ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಶವವನ್ನು ಬಿಸಾಕಿ ಪರಾರಿಯಾಗಿದ್ದರು.



