Home Blog Page 10

ಅಡುಗೆ ಅನಿಲ ಕೊರತೆ; ಸಂಸದರು ಸಂಸತ್ತಿನಲ್ಲಿ ಮಾತನಾಡಿ ಜನರಿಗೆ ನ್ಯಾಯ ಒದಗಿಸಲಿ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಬೇರೆ ವಿಚಾರಗಳಲ್ಲಿ ಮಾತನಾಡುವ ಸಂಸದರು ಅಡುಗೆ ಅನಿಲ ಕೊರತೆ ವಿಚಾರವಾಗಿ ಸಂಸತ್ತಿನಲ್ಲಿ ಮಾತನಾಡಬೇಕು. ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

“ಅಡುಗೆ ಅನಿಲ್ ಸಿಲಿಂಡರ್ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಈ ವಿಚಾರವಾಗಿ ಬಿಜೆಪಿಯ ಯಾವುದೇ ಸಂಸದರು ಬಾಯಿ ಬಿಡುತ್ತಿಲ್ಲ. ಹಳ್ಳಿ ಜನರು, ರೈತರು ಹಾಗೂ ಹೊಟೇಲ್ ಗಳಿಗೆ ಸೌದೆ ಒಲೆ ಬಳಸಲು ಕಟ್ಟಿಗೆ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ” ಎಂದರು.

“ಈ ಇಂಧನ ಬೆಲೆ ಏರಿಕೆಯಿಂದ ಜನ ಪರದಾಡುತ್ತಿದ್ದಾರೆ. ಇದರಲ್ಲಿ ರಾಜ್ಯ ಸರ್ಕಾರ ಏನೂ ಮಾಡಲು ಆಗುವುದಿಲ್ಲ. ಕೇಂದ್ರ ಸರ್ಕಾರ ಇದಕ್ಕೆ ಹೊಣೆ. ಕೇಂದ್ರ ಸರ್ಕಾರ ವಿದೇಶಾಂಗ ನೀತಿ ಬಗ್ಗೆ ಸ್ಪಷ್ಟವಾಗಿ ಮಾತನಾಡುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಈ ವಿಚಾರದಲ್ಲಿ ಕೇಂದ್ರದ ಧೋರಣೆ ಖಂಡನೀಯ. ನಾಗರಕರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು. ಮುಂದೆ ಪರಿಸ್ಥಿತಿ ಹೇಗಿರುತ್ತದೆಯೋ ಹೇಗೋ ಈಗಾಗಲೇ ಗ್ಯಾಸ್ ಚಾಲಿತ ಆಟೋ ಬಂದ್ ಆಗಿದ್ದು, ಸಮಸ್ಯೆ ಹೆಚ್ಚುತ್ತಿದೆ” ಎಂದು ತಿಳಿಸಿದರು.

ಬ್ರೇಕ್ ಫಾಸ್ಟ್ ಬಿಲ್ʼನಲ್ಲಿ “ಗ್ಯಾಸ್ ಸಪ್ಲೈ ಚಾರ್ಜ್”: ಹೋಟೆಲ್ ವಿರುದ್ಧ ಗ್ರಾಹಕರ ಆಕ್ರೋಶ

ಬೆಂಗಳೂರು: ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ನಗರದಲ್ಲಿ ಅಡುಗೆ ಅನಿಲದ ಕೊರತೆ ಕಾಣಿಸಿಕೊಂಡಿದ್ದು, ಇದರ ಪರಿಣಾಮ ಗ್ರಾಹಕರಿಗೂ ತಟ್ಟುತ್ತಿದೆ. ನಗರದಲ್ಲಿನ ಒಂದು ಹೋಟೆಲ್‌ನಲ್ಲಿ ಬ್ರೇಕ್‌ಫಾಸ್ಟ್ ಮಾಡಿದ ಗ್ರಾಹಕರಿಗೆ ಬಿಲ್‌ನಲ್ಲಿ ‘ಗ್ಯಾಸ್ ಸಪ್ಲೈ ಚಾರ್ಜ್’ ಎಂಬ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಸೇರಿಸಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಪಿಜಿಯಲ್ಲಿ ತಿಂಡಿ ಸಿಗದ ಕಾರಣ ಗ್ರಾಹಕರೊಬ್ಬರು Mr. ಆಂಧ್ರ ಮೀಲ್ಸ್ ಹೋಟೆಲ್‌ಗೆ ತೆರಳಿ ಬ್ರೇಕ್‌ಫಾಸ್ಟ್ ಮಾಡಿದ್ದಾರೆ. ನಂತರ ನೀಡಿದ ಬಿಲ್‌ನಲ್ಲಿ ಗ್ಯಾಸ್ ಸಪ್ಲೈ ಚಾರ್ಜ್ ಎಂಬ ಹೆಸರಿನಲ್ಲಿ ಹೆಚ್ಚುವರಿ ಹಣ ಸೇರಿಸಿರುವುದನ್ನು ನೋಡಿ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಅವರು ಬಿಲ್‌ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬೆಂಗಳೂರು ಸಿಟಿ ಪೊಲೀಸ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಬಿಲ್‌ಗೆ ನೆಟ್ಟಿಗರು ತೀವ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದು ದೊಡ್ಡ ಮಟ್ಟದ ಸ್ಕ್ಯಾಮ್ ಆಗಿದ್ದು, ಸಾರ್ವಜನಿಕರನ್ನು ಲೂಟಿ ಮಾಡುವ ಪ್ರಯತ್ನವಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊಬೈಲ್ʼನಲ್ಲಿ ಮಕ್ಕಳ ಅಶ್ಲೀಲ ಚಿತ್ರ, ವಿಡಿಯೋ ಸಂಗ್ರಹವೂ ಅಪರಾಧ: ಹೈಕೋರ್ಟ್

ಬೆಂಗಳೂರು: ಮೊಬೈಲ್ ಫೋನ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳನ್ನು ಸಂಗ್ರಹಿಸಿಡುವುದೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೋ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ) ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಕೇರಳದ ತ್ರಿಶೂರು ಜಿಲ್ಲೆಯ ಚೊಟ್ಟೂರುಪುರ ಕಿಲ್ಲನೂರಿನ ಪಿ.ಜೆ. ಬಿನೋಜ್ (38) ಎಂಬಾತ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದೆ.

ಅರ್ಜಿದಾರರ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, ಮಕ್ಕಳ ಅಶ್ಲೀಲ ಚಿತ್ರ ಹಾಗೂ ವಿಡಿಯೋಗಳನ್ನು ಪ್ರಸಾರ ಮಾಡುವುದಷ್ಟೇ ಅಲ್ಲ, ಪ್ರಸಾರವಾಗುವ ಸಾಮರ್ಥ್ಯ ಹೊಂದಿರುವ ಇಂತಹ ಚಿತ್ರಗಳು ಮತ್ತು ವಿಡಿಯೋಗಳನ್ನು ಸಂಗ್ರಹಿಸಿಡುವುದೂ ಸಹ ಪೋಕ್ಸೋ ಕಾಯ್ದೆಯ ಸೆಕ್ಷನ್ 15 ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ತಿಳಿಸಿದೆ. ಈ ಕುರಿತು ಸುಪ್ರೀಂ ಕೋರ್ಟ್ ಕೂಡ ತೀರ್ಪು ನೀಡಿದೆ ಎಂದು ಪೀಠ ಹೇಳಿದೆ.

ಅರ್ಜಿದಾರರು ತಮ್ಮ ಫೋನ್‌ನಿಂದ ಮಕ್ಕಳ ಅಶ್ಲೀಲ ಚಿತ್ರ ಅಥವಾ ವಿಡಿಯೋಗಳನ್ನು ಯಾರಿಗೂ ಕಳುಹಿಸಿಲ್ಲ ಎಂಬ ಕಾರಣಕ್ಕೆ ಅವರು ಅಪರಾಧಕ್ಕೆ ಹೊಣೆಗಾರರಾಗುವುದಿಲ್ಲ ಎಂದು ಅರ್ಥೈಸಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಪ್ರಕರಣ ಈಗಾಗಲೇ ವಿಚಾರಣಾ ಹಂತದಲ್ಲಿದ್ದು, ಪೂರ್ಣ ಪ್ರಮಾಣದ ವಿಚಾರಣೆಯ ಬಳಿಕವೇ ಅರ್ಜಿದಾರ ದೋಷಮುಕ್ತರಾಗಬೇಕು ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ

ಅಪರಾಧ ಪ್ರಕರಣವೊಂದರ ತನಿಖೆ ವೇಳೆ ಪೊಲೀಸರು ಆರೋಪಿಯ ಮೊಬೈಲ್ ಫೋನ್ ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿದ್ದರು. ಪರಿಶೀಲನೆ ವೇಳೆ ಮೊಬೈಲ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿದ್ದವು.

ಈ ಹಿನ್ನೆಲೆಯಲ್ಲಿ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಆರೋಪಿಯ ವಿರುದ್ಧ ಐಟಿ ಕಾಯ್ದೆ ಸೆಕ್ಷನ್ 67(ಬಿ) ಹಾಗೂ ಪೋಕ್ಸೋ ಕಾಯ್ದೆ ಸೆಕ್ಷನ್ 15 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಬಳಿಕ ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿತ್ತು.

ನಗರದ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವುದರಿಂದ ತಮ್ಮ ವಿರುದ್ಧದ ಎಫ್‌ಐಆರ್ ಹಾಗೂ ವಿಚಾರಣೆ ರದ್ದುಪಡಿಸುವಂತೆ ಕೋರಿ ಅರ್ಜಿದಾರ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ವಿಚಾರಣೆ ಮುಂದುವರಿಸಲು ಅವಕಾಶ ನೀಡಿದೆ.

 

ಯುದ್ಧ ಅಂತ್ಯಕ್ಕೆ ಇರಾನ್ ಮೂರು ಷರತ್ತು: ಅಮೆರಿಕ–ಇಸ್ರೇಲ್ʼಗೆ ಪೆಜೆಶ್ಕಿಯಾನ್ ಸಂದೇಶ

0

ಟೆಹ್ರಾನ್: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಅಂತ್ಯ ಕಾಣುವ ಲಕ್ಷಣಗಳು ಕಾಣಿಸುತ್ತಿವೆ. ಯುದ್ಧ ಕೊನೆಗೊಳ್ಳಬೇಕಾದರೆ ಕೆಲವು ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಎಂದು ಇರಾನ್ ಸ್ಪಷ್ಟಪಡಿಸಿದೆ.

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಅಮೆರಿಕದ ನೆಲೆಗಳು ಮತ್ತು ಮಧ್ಯಪ್ರಾಚ್ಯದ ದೇಶಗಳ ಮೇಲೆ ನಡೆಯುತ್ತಿರುವ ದಾಳಿಗಳು ನಿಲ್ಲಬೇಕಾದರೆ ಮೂರು ಪ್ರಮುಖ ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಮೊದಲನೆಯದಾಗಿ ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸಬೇಕು. ಎರಡನೆಯದಾಗಿ ಸಂಘರ್ಷದ ವೇಳೆ ಉಂಟಾದ ಹಾನಿಗಳಿಗೆ ಪರಿಹಾರ ನೀಡಬೇಕು. ಮೂರನೆಯದಾಗಿ ಭವಿಷ್ಯದಲ್ಲಿ ಮತ್ತೆ ಆಕ್ರಮಣ ನಡೆಸುವುದಿಲ್ಲ ಎಂಬ ದೃಢವಾದ ಅಂತರರಾಷ್ಟ್ರೀಯ ಖಾತರಿಯನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ.

ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ನಡೆದ ಮಾತುಕತೆಯಲ್ಲಿಯೂ ಈ ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ. ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಇರಾನ್ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಯೋನಿಸ್ಟ್ ಆಡಳಿತ ಮತ್ತು ಅಮೆರಿಕ ಆರಂಭಿಸಿದ ಈ ಯುದ್ಧವನ್ನು ಕೊನೆಗೊಳಿಸಲು ಇದೇ ಏಕೈಕ ಮಾರ್ಗ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇದಕ್ಕೂ ಮೊದಲು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಬೇಷರತ್ತಾಗಿ ಶರಣಾಗಬೇಕು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪೆಜೆಶ್ಕಿಯಾನ್, ಅದು ಅಮೆರಿಕವನ್ನು ಸಮಾಧಿಗೆ ಕೊಂಡೊಯ್ಯುವ ಕನಸು ಮಾತ್ರ ಎಂದು ತಿರುಗೇಟು ನೀಡಿದ್ದರು.

 

ಕಾರ್ಯಕ್ರಮಗಳಲ್ಲಿ ದೀಪ ಬೆಳಗುವುದೇಕೆ? ಇದರ ಹಿಂದಿರುವ ಆಧ್ಯಾತ್ಮಿಕ ಮಹತ್ವ ತಿಳಿಯಿರಿ!

0

ಹೊಸ ಕಚೇರಿ ಅಥವಾ ಅಂಗಡಿ ಉದ್ಘಾಟನೆ ವೇಳೆ ಸಾಮಾನ್ಯವಾಗಿ ಟೇಪ್ ಕತ್ತರಿಸುವ ಪದ್ಧತಿ ಕಂಡುಬರುತ್ತದೆ.

ಆದರೆ ಭಾರತೀಯ ಸಂಪ್ರದಾಯದಲ್ಲಿ ದೀಪ ಬೆಳಗುವ ಆಚರಣೆಗೆ ವಿಶೇಷ ಮಹತ್ವ ನೀಡಲಾಗಿದೆ. ಯಾವುದೇ ಶುಭ ಕಾರ್ಯವನ್ನು ದೀಪ ಬೆಳಗುವುದರ ಮೂಲಕ ಆರಂಭಿಸುವುದು ನಮ್ಮ ಸಂಸ್ಕೃತಿಯ ಒಂದು ಪ್ರಮುಖ ಭಾಗವಾಗಿದೆ.

“ದೀಪಂ ಜ್ಯೋತಿ ಪರಬ್ರಹ್ಮ, ದೀಪಂ ಜ್ಯೋತಿ ಜನಾರ್ದನಃ:
ದೀಪೋ ಹರತು ಮೇ ಪಾಪಾನಿ, ಸಂಧ್ಯಾ ದೀಪ ನಮೋಸ್ತುತೇ” ಎಂಬ ಶ್ಲೋಕದ ಪ್ರಕಾರ, ದೀಪವು ಪರಬ್ರಹ್ಮನ ಸ್ವರೂಪವಾಗಿದ್ದು ಪಾಪಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗಿದೆ. ಭಗವಂತನಿಗೆ ನೈವೇದ್ಯ ಅರ್ಪಿಸುವುದೂ ಸಹ ಅಗ್ನಿಯ ಮುಖಾಂತರವೇ ನಡೆಯುತ್ತದೆ. ಅದಕ್ಕಾಗಿ ದೀಪವನ್ನು ದೇವರ ಪ್ರತೀಕವಾಗಿ ಪರಿಗಣಿಸಲಾಗುತ್ತದೆ.

ದೀಪದ ಜ್ವಾಲೆ ಯಾವಾಗಲೂ ಮೇಲ್ಮುಖವಾಗಿ ಉರಿಯುತ್ತದೆ. ಈ ಮೇಲ್ಮುಖ ಚಲನೆಯು ಅಭಿವೃದ್ಧಿ, ಪ್ರಗತಿ ಮತ್ತು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಅನಾದಿಕಾಲದಿಂದಲೂ ಯಾವುದೇ ಕಾರ್ಯಕ್ರಮವನ್ನು ದೀಪ ಬೆಳಗುವುದರಿಂದಲೇ ಆರಂಭಿಸುವ ಪದ್ಧತಿ ಇದೆ.

ಮನೆಗಳಲ್ಲಿ ಕೂಡ ಬೆಳಗಿನ ಪೂಜೆ ಮಾಡುವ ಮೊದಲು ದೀಪ ಹಚ್ಚುವುದು ರೂಢಿಯಾಗಿದೆ. ದೀಪಾವಳಿ ಹಬ್ಬದಲ್ಲಿ ಮನೆ ತುಂಬಾ ದೀಪಗಳನ್ನು ಬೆಳಗಿಸುವುದು ಶುಭದ ಸಂಕೇತವೆಂದು ನಂಬಲಾಗಿದೆ.

ದೀಪವು ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುತ್ತದೆ ಎಂದು ಹೇಳಲಾಗುತ್ತದೆ. ದೀಪದ ಬೆಳಕು ಅಜ್ಞಾನವನ್ನು ದೂರ ಮಾಡಿ ಜ್ಞಾನದ ಬೆಳಕನ್ನು ನೀಡುತ್ತದೆ ಎಂಬ ನಂಬಿಕೆಯೂ ಇದೆ.

ಸಭೆ-ಸಮಾರಂಭಗಳಲ್ಲಿ ದೀಪ ಬೆಳಗುವುದು ಅಗ್ನಿದೇವರಿಗೆ ಪ್ರಾರ್ಥನೆ ಸಲ್ಲಿಸುವ ಸಂಕೇತವಾಗಿದೆ. ಅಗ್ನಿ ಪಂಚಭೂತಗಳಲ್ಲಿ ಒಂದಾಗಿದ್ದು (ಆಕಾಶ, ಭೂಮಿ, ಅಗ್ನಿ, ನೀರು, ವಾಯು) ಪ್ರಕೃತಿಯ ಸಮತೋಲನವನ್ನು ಕಾಯುವ ಶಕ್ತಿಯಾಗಿದೆ.

ಸಣ್ಣ ಅಥವಾ ದೊಡ್ಡ ವ್ಯಾಪಾರ ಆರಂಭಿಸುವಾಗ ದೀಪ ಬೆಳಗಿದರೆ ಆ ಸ್ಥಳದಲ್ಲಿರುವ ಋಣಾತ್ಮಕ ಶಕ್ತಿಗಳು ದೂರವಾಗಿ ಧನಾತ್ಮಕ ಶಕ್ತಿಗಳು ಆಕರ್ಷಿತವಾಗುತ್ತವೆ ಎಂಬ ನಂಬಿಕೆಯೂ ಇದೆ. ರೈತರು ಕೂಡ ಬಿತ್ತನೆ ಮಾಡುವ ಮೊದಲು ಭೂಮಿಯಲ್ಲಿ ದೀಪ ಹಚ್ಚಿ ಪ್ರಾರ್ಥಿಸಿದರೆ ಉತ್ತಮ ಫಸಲು ದೊರೆಯುತ್ತದೆ ಎಂದು ಪರಂಪರೆಯಲ್ಲಿ ಹೇಳಲಾಗುತ್ತದೆ.

 

ವೈಯಕ್ತಿಕ ದಾಖಲೆಗಾಗಿ ಆಡುವುದನ್ನು ಮೊದಲು ನಿಲ್ಲಿಸಿ: ಕೋಚ್ ಗಂಭೀರ್ ಖಡಕ್ ಸೂಚನೆ ಕೊಟ್ಟಿದ್ಯಾರಿಗೆ?

0

ಟಿ20 ವಿಶ್ವಕಪ್ ಗೆಲುವಿನ ಉಲ್ಲಾಸದಲ್ಲಿ ತೇಲುತ್ತಿರುವ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೊಸ ಖಡಕ್ ಸೂಚನೆ ನೀಡಿದ್ದಾರೆ.

ಆಟಗಾರರು ಶತಕ ಅಥವಾ ಅರ್ಧಶತಕಕ್ಕಾಗಿ ವೈಯಕ್ತಿಕ ದಾಖಲೆ ಗಳಿಸಲು ಆಟವಾಡಬಾರದು, ಬದಲಾಗಿ ಟೀಮ್ ಮೊತ್ತ ಮತ್ತು ಟ್ರೋಫಿ ಗೆಲುವಿಗೆ ಆಡಬೇಕು ಎಂದು ಗಂಭೀರ್ ಒತ್ತಿ ಹೇಳಿದ್ದಾರೆ.

ಗಂಭೀರ್ ಉದಾಹರಣೆಗೆ ಸಂಜು ಸ್ಯಾಮ್ಸನ್ ಅವರ ಆಟವನ್ನು ಉಲ್ಲೇಖಿಸಿದ್ದಾರೆ. ಟೂರ್ನಿಯ ಕೊನೆಯ ಮೂರು ಪಂದ್ಯಗಳಲ್ಲಿ 97*, 89 ಮತ್ತು 89 ರನ್ ಗಳಿಸಿದ ಸಂಜು, ಶತಕ ಹೊಡೆಯಲು ನಿಧಾನವಾಗಿ ಆಡದೇ, ತಂಡದ ವೇಗ ಮತ್ತು ಮೊತ್ತಕ್ಕೆ ಆದ್ಯತೆ ನೀಡಿದ್ದರಿಂದ ಭಾರತ ಗೆಲುವು ಸಾಧಿಸಿದೆ ಎಂದು ತಿಳಿಸಿದ್ದಾರೆ.

ಗಂಭೀರ್ ಹೀಗೆ ಹೇಳಿರುವ ಉದ್ದೇಶ, ಸ್ವಾರ್ಥಕ್ಕಾಗಿ ಅಥವಾ ವೈಯಕ್ತಿಕ ದಾಖಲೆಗಾಗಿ ಆಡುವುದನ್ನು ನಿಲ್ಲಿಸಿ, ತಂಡದ ಗೆಲುವಿಗಾಗಿ ಶ್ರಮಿಸಬೇಕು. ಸೂಪರ್ ಸ್ಟಾರ್ ಹುಟ್ಟುಹಾಕುವುದಲ್ಲ, ಬಲಿಷ್ಠ ತಂಡ ರೂಪಿಸುವುದೇ ಉದ್ದೇಶ. 2027 ಏಕದಿನ ವಿಶ್ವಕಪ್ಗೂ ಮುನ್ನ, ಈ ಮನೋಭಾವ ತಂಡದಲ್ಲಿ ಮೂಡಿಸಬೇಕೆಂದು ಗಂಭೀರ್ ಸೂಚಿಸಿದ್ದಾರೆ.

ತೋಟದಲ್ಲಿ ನವವಿವಾಹಿತನ ಶವ ಸಿಕ್ಕ ಪ್ರಕರಣಕ್ಕೆ ಟ್ವಿಸ್ಟ್: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆಗೈದ ಹೆಂಡ್ತಿ!

0

ತುಮಕೂರು: ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದಲ್ಲಿ ನಡೆದ ಗುಜರಿ ವ್ಯಾಪಾರಿಯ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.

ಮದುವೆಯಾಗಿ ಕೇವಲ ಮೂರು ತಿಂಗಳಲ್ಲೇ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಗುಜರಿ ವ್ಯಾಪಾರಿ ಮನ್ಸೂರ್ ಪಾಷ ಹತ್ಯೆ ಪ್ರಕರಣದಲ್ಲಿ, ಫರ್ಜಾನ್ (31), ಧನರಾಜ್ (24), ವೆಂಕಟೇಶ್ (24) ಮತ್ತು ದರ್ಶನ್ (24) ಎಂಬ ನಾಲ್ಕು ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ. ಮನ್ಸೂರ್ ಕುಟುಂಬದ ನಿರ್ಧಾರದಂತೆ ಫರ್ಜಾನ್ ಎಂಬಾಕೆಯನ್ನು ಈ ವರ್ಷ ಜನವರಿಯಲ್ಲಿ ವಿವಾಹವಾಗಿದ್ದರು.

ಅದರಂತೆ ಮನ್ಸೂರ್ ಮಾರ್ಚ್ 4ರಂದು ಗುಜರಿ ವಸ್ತು ತರಲು ಹೋದಾಗ ನಾಪತ್ತೆ ಆಗಿದ್ದು, ತಪಾಸಣೆ ನಡೆಸಿದಾಗ ಅಡಕೆ ತೋಟದಲ್ಲಿ ಶವ ಪತ್ತೆಯಾಗಿತ್ತು.

ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಎಸ್, ಧನರಾಜ್ ಎಂಬಾತನ ಜೊತೆ ಮೃತ ಮನ್ಸೂರ್ ಪತ್ನಿ ಫರ್ಜಾನ ಸಂಬಂಧ ಹೊಂದಿದ್ದು, ಮನ್ಸೂರ್ ಕೊಲೆಗಾಗಿ ಹೆಂಡ್ತಿ ಹಾಗೂ ಪ್ರಿಯಕರ ಪ್ಲ್ಯಾನ್ ರೂಪಿಸಿದ್ದು ತಿಳಿದುಬಂದಿದೆ.

ಆರೋಪಿಗಳು ಮನ್ಸೂರ್ ನನ್ನು ಕರೆಸಿ ತರಾತುರಿಯಲ್ಲಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಪರಾರಿಯಾಗಿದ್ದರೂ, ದರ್ಶನ್ ನ ಕರೆ ಮೂಲಕ ಅವರ ಸಂಪರ್ಕ ಗೊತ್ತಾಗಿ, ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಐತಿಹಾಸಿಕ ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ರಿತ್ತಿ ಕುಟುಂಬದಿಂದ ಹೊಸ ಬೇಡಿಕೆ!

0

ಗದಗ: ಐತಿಹಾಸಿಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ.

ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಕುಟುಂಬವು ತಜ್ಞರು ಅಂದಾಜಿಸಿರುವ ಬೆಲೆಯ ಆಧಾರದ ಮೇಲೆ ತಮ್ಮ ಪಾಲು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದೆ.

ಸರ್ಕಾರ ನೇಮಿಸಿದ ತಜ್ಞರ ತಂಡವು ಇತ್ತೀಚೆಗೆ ಪರಿಶೀಲನೆ ನಡೆಸಿ ನಿಧಿಯ ಅಂದಾಜು ಮೌಲ್ಯವನ್ನು ಸುಮಾರು 8 ಕೋಟಿ ರೂಪಾಯಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೆ ಈ ಮೊತ್ತಕ್ಕೆ ಒಪ್ಪುವುದಿಲ್ಲ ಎಂದು ಹೇಳಿರುವ ಕುಟುಂಬದವರು, ಪ್ರಾಚೀನ ವಸ್ತುವಾಗಿರುವುದರಿಂದ ಇದರ ಆ್ಯಂಟಿಕ್ ಮೌಲ್ಯ ಈಗಿನ ಅಂದಾಜಿಗಿಂತ ಹತ್ತರಷ್ಟು ಹೆಚ್ಚಿರಬಹುದು ಎಂದು ಹೇಳಿದ್ದಾರೆ.

ಆದರೂ ಕಾನೂನಿನ ಪ್ರಕಾರ ತಜ್ಞರು ನಿಗದಿಪಡಿಸಿದ 8 ಕೋಟಿ ರೂ. ಮೌಲ್ಯಕ್ಕೆ ಐದರ ಒಂದು ಭಾಗ ಪಾಲು ನೀಡಬೇಕು ಎಂದು ಕುಟುಂಬದವರು ಆಗ್ರಹಿಸಿದ್ದಾರೆ.

ಪ್ರಜ್ವಲ್ ರಿತ್ತಿ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದಾನೆ. ಹೀಗಾಗಿ ಸರ್ಕಾರವೂ ಪ್ರಾಮಾಣಿಕವಾಗಿ ಪರಿಹಾರ ನೀಡಬೇಕು ಎಂದು ಕುಟುಂಬದವರು ತಿಳಿಸಿದ್ದಾರೆ.

ಈ ಕುರಿತು ಸಚಿವ ಎಚ್.ಕೆ. ಪಾಟೀಲ್ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ್ ಭರವಸೆ ನೀಡಿದ್ದು, ಅವರ ಮೇಲೆ ನಮಗೆ ನಂಬಿಕೆ ಇದೆ ಎಂದು ಕುಟುಂಬದವರು ಹೇಳಿದ್ದಾರೆ.

ಕುಟುಂಬದವರ ಪ್ರಕಾರ, ನಿಧಿಯ ನಿಜವಾದ ಆ್ಯಂಟಿಕ್ ಮೌಲ್ಯವನ್ನು ಪರಿಗಣಿಸಿ ನ್ಯಾಯಸಮ್ಮತ ಪರಿಹಾರ ನೀಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.

ರಸ್ತೆ ಅಪಘಾತಕ್ಕೆ ಪುನುಗು ಬೆಕ್ಕು ಬಲಿ!

0

ಗದಗ: ರಸ್ತೆ ದಾಟುವ ವೇಳೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಪುನುಗು ಬೆಕ್ಕೊಂದು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಅರಷಿನಗೋಡಿ ಗ್ರಾಮದ ಬಳಿ ನಡೆದಿದೆ.

ಕಾಡು ಪ್ರದೇಶದ ಸಮೀಪ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ವಾಹನ ಪುನುಗು ಬೆಕ್ಕಿಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಅದು ಸಾವನ್ನಪ್ಪಿದೆ. ವಾಹನ ಸವಾರರು ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿರುವುದು ತಿಳಿದುಬಂದಿದೆ.

ಈ ಭಾಗದಲ್ಲಿ ಕಾಡು ಪ್ರಾಣಿಗಳು ರಸ್ತೆ ದಾಟುವ ಸಂದರ್ಭಗಳು ಹೆಚ್ಚಾಗಿರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಕಾಡು ಪ್ರಾಣಿಗಳನ್ನು ರಕ್ಷಿಸಲು ಸಹಕರಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಬೈಕ್ ಗೆ ಟಿಪ್ಪರ್ ಡಿಕ್ಕಿ: ವೈದ್ಯ ವಿದ್ಯಾರ್ಥಿನಿ ಸಾವು, ಮತ್ತೋರ್ವ ಯುವತಿ ಗಂಭೀರ!

ಬೆಂಗಳೂರು: ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮುಂಭಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ವೈದ್ಯ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.

21 ವರ್ಷದ ಕೃತಿಕಾ ಮೃತ ವೈದ್ಯ ವಿದ್ಯಾರ್ಥಿನಿ. ನಿನ್ನೆ ಸಂಜೆ ಕಾಲೇಜು ಮುಗಿಸಿ ಸ್ನೇಹಿತೆ MBBS ವಿದ್ಯಾರ್ಥಿನಿ ಹಂಸ ಜೊತೆ ಆಕ್ಟಿವಾದಲ್ಲಿ ತೆರಳುತ್ತಿದ್ದರು. ಈ ಸಮಯದಲ್ಲಿ ಅತಿವೇಗದಲ್ಲಿ ಬಂದ ಟಿಪ್ಪರ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೊತೆಯಲ್ಲಿದ್ದ ಹಂಸ ಗಂಭೀರ ಗಾಯಗೊಂಡಿದ್ದು, ಅವರನ್ನು ಆರ್ ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಬೆನ್ನಲ್ಲೇ ಕೆಂಗೇರಿ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.

error: Content is protected !!