Home Blog Page 110

ಮಹಾಕಾಳೇಶ್ವರ VIP ದರ್ಶನ ಅರ್ಜಿ ತಳ್ಳಿ ಹಾಕಿದ ಸುಪ್ರೀಂ ಕೋರ್ಟ್!

0

ನವದೆಹಲಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಪ್ರಸಿದ್ಧ ಶ್ರೀ ಮಹಾಕಾಳೇಶ್ವರ ದೇವಾಲಯದ ಗರ್ಭಗುಡಿಗೆ ವಿಐಪಿ ದರ್ಶನ ನೀಡುವ ವ್ಯವಸ್ಥೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಧಾರ್ಮಿಕ ವಿಚಾರಗಳನ್ನು ನಿಯಂತ್ರಿಸುವುದು ನ್ಯಾಯಾಲಯದ ವ್ಯಾಪ್ತಿಯಲ್ಲಿಲ್ಲ ಎಂದು ಹೇಳಿದ ನ್ಯಾಯಾಲಯ, ಈ ರೀತಿಯ ನಿರ್ಧಾರಗಳನ್ನು ದೇವಾಲಯದ ಆಡಳಿತ ಮಂಡಳಿಯೇ ತೆಗೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.

ಅರ್ಜಿಯ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಆರ್. ಮಹಾದೇವನ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ, ಅರ್ಜಿದಾರ ದರ್ಪಣ್ ಅವಸ್ಥಿ ಅವರಿಗೆ ಈ ವಿಚಾರದಲ್ಲಿ ದೇವಾಲಯ ಪ್ರಾಧಿಕಾರದ ಮುಂದೆ ತಮ್ಮ ಅಭಿಪ್ರಾಯಗಳನ್ನು ಮಂಡಿಸುವಂತೆ ಸೂಚಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ವಿಷ್ಣು ಶಂಕರ್ ಜೈನ್, ದೇವಾಲಯದ ಗರ್ಭಗುಡಿ ಪ್ರವೇಶದ ವಿಷಯದಲ್ಲಿ ಪ್ರತಿಯೊಬ್ಬ ನಾಗರಿಕನನ್ನೂ ಸಮಾನವಾಗಿ ಪರಿಗಣಿಸಬೇಕು ಎಂದು ವಾದಿಸಿದರು. ವಿಐಪಿ ಸ್ಥಾನಮಾನ ಆಧಾರದ ಮೇಲೆ ತಾರತಮ್ಯ ಮಾಡಲಾಗುವುದಿಲ್ಲ. ಎಲ್ಲರಿಗೂ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಅಥವಾ ಎಲ್ಲರಿಗೂ ಸಮಾನ ಪ್ರವೇಶ ನೀಡಬೇಕು ಎಂದು ಅವರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, ದೇವಾಲಯದ ಗರ್ಭಗುಡಿಯೊಳಗೆ ಸಂವಿಧಾನದ ಕಲಂ 14 (ಸಮಾನತೆಯ ಹಕ್ಕು) ಅನ್ವಯಿಸುತ್ತದೆ ಎಂದು ಒಪ್ಪಿಕೊಂಡರೆ, ಕಲಂ 19 (ವಾಕ್ಸ್ವಾತಂತ್ರ್ಯ) ಸೇರಿದಂತೆ ಇತರ ಮೂಲಭೂತ ಹಕ್ಕುಗಳನ್ನೂ ಅಲ್ಲಿ ಅನ್ವಯಿಸಬೇಕಾದ ಪರಿಸ್ಥಿತಿ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.

“ಮೊದಲು ಇತರರು ಪ್ರವೇಶಿಸುತ್ತಿರುವುದರಿಂದ ನನಗೂ ಪ್ರವೇಶಿಸುವ ಹಕ್ಕು ಇದೆ ಎಂದು ನೀವು ಹೇಳುತ್ತೀರಿ. ನಂತರ ಮಾತನಾಡುವ ಹಕ್ಕಿನ ಆಧಾರದ ಮೇಲೆ ಮಂತ್ರಗಳನ್ನು ಪಠಿಸುವ ಹಕ್ಕನ್ನೂ ಬೇಡಿಕೊಳ್ಳುತ್ತೀರಿ. ಹೀಗೆ ಎಲ್ಲಾ ಮೂಲಭೂತ ಹಕ್ಕುಗಳನ್ನು ಗರ್ಭಗುಡಿಯೊಳಗೆ ವಿಸ್ತರಿಸಬೇಕಾದ ಸ್ಥಿತಿ ಬರಬಹುದು” ಎಂದು ಪೀಠ ಸ್ಪಷ್ಟಪಡಿಸಿತು.

ಈ ಹಿಂದೆ ಹೈಕೋರ್ಟ್ ಕೂಡ, ‘ವಿಐಪಿ’ ಎಂಬ ಪದವನ್ನು ಯಾವುದೇ ಕಾಯ್ದೆ ಅಥವಾ ನಿಯಮದಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿಲ್ಲ. ಇದು ದೇವಾಲಯ ನಿರ್ವಹಣಾ ಸಮಿತಿ ಹಾಗೂ ಜಿಲ್ಲಾಧಿಕಾರಿಗಳ ಆಡಳಿತಾತ್ಮಕ ವಿವೇಚನೆಗೆ ಒಳಪಟ್ಟ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.

ಕಮಿಷನ್–ಭ್ರಷ್ಟಾಚಾರ ಸರ್ಕಾರ ರಾಜ್ಯವನ್ನಾಳುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

0

ಬೆಂಗಳೂರು: ಕಮಿಷನ್, ಭ್ರಷ್ಟಾಚಾರ, ಲೂಟಿ ಮತ್ತು ದುಂಡಾವರ್ತಿಯ ಸರಕಾರವೇ ಇವತ್ತು ರಾಜ್ಯವನ್ನಾಳುತ್ತಿದೆ ಎಂದು ವಿಧಾನಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಸರಕಾರದ ವಿರುದ್ಧ ತೀವ್ರ ಟೀಕೆ ನಡೆಸಿದರು.

ವಿಧಾನಸೌಧದ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಇಂದು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಈ ಆರೋಪಗಳನ್ನು ನಾವು ಮಾತ್ರ ಮಾಡುತ್ತಿಲ್ಲ, ರಾಜ್ಯದ ಜನರೇ ಈ ಸರಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದಲ್ಲಿಯೇ ನಮ್ಮ ಕೆಲವು ಸ್ನೇಹಿತರಿದ್ದಾರೆ. ಅವರಿಗೂ ಈ ಸರಕಾರದ ನಡೆ ಬೇಸರ ತಂದಿದೆ. ಫೋನ್ ಮಾಡಿದಾಗಲೂ ‘ಬಿಡಬೇಡ್ರಿ ಈ ಜನರನ್ನು’ ಎಂದು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.

ಸರಕಾರ ಮಾಡುತ್ತಿರುವ ತಪ್ಪುಗಳನ್ನು ಜನರ ಗಮನಕ್ಕೆ ತರಲೇಬೇಕು. ಅದಕ್ಕಾಗಿ ನಾವು ಇಂದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದರು. ಅಬಕಾರಿ ಇಲಾಖೆಯಲ್ಲಿ 4 ಸಾವಿರ ಕೋಟಿ ಲೂಟಿ ನಡೆದಿದೆ ಎಂದು ನಾವು ಆರೋಪಿಸಿದ್ದೆವು. ಆದರೆ ಅದು ತಪ್ಪು ಎಂದು ಈಗ ಗೊತ್ತಾಗಿದೆ. ಲೂಟಿ ಮೊತ್ತ 6 ಸಾವಿರ ಕೋಟಿ ಎಂದು ಅಬಕಾರಿ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ನೇರವಾಗಿ ಹೇಳಿದ್ದಾರೆ ಎಂದು ಗಮನ ಸೆಳೆದರು.

ಈ ವಿಚಾರವಾಗಿ ನಿನ್ನೆ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ಹಾಗಾದರೆ ಆ 6 ಸಾವಿರ ಕೋಟಿ ರೂಪಾಯಿಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಎಷ್ಟು ಪಾಲು ಬಂದಿದೆ ಎಂದು ಅವರು ಪ್ರಶ್ನಿಸಿದರು. ಜೊತೆಗೆ ಈ ಹಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪಾಲೆಷ್ಟು ಎಂಬುದನ್ನೂ ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

Kane Richardson: ದಿಢೀರ್ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾ ಆಟಗಾರ!

0

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗಿ ಕೇನ್ ರಿಚರ್ಡ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. 2023ರಲ್ಲಿ ಗಾಯದ ಕಾರಣ ಆಸ್ಟ್ರೇಲಿಯಾ ತಂಡದಿಂದ ಹೊರಬಿದ್ದಿದ್ದ ರಿಚರ್ಡ್ಸನ್, ಇತ್ತೀಚೆಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದರು. ಆದರೆ ಇದೀಗ 34ನೇ ವಯಸ್ಸಿನಲ್ಲಿ ನಿವೃತ್ತಿ ನಿರ್ಧಾರ ಕೈಗೊಂಡಿರುವುದು ಕ್ರಿಕೆಟ್ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಆಸ್ಟ್ರೇಲಿಯಾ ಪರ 25 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಕೇನ್ ರಿಚರ್ಡ್ಸನ್, ಒಟ್ಟು 1312 ಎಸೆತಗಳನ್ನು ಎಸೆದು 1240 ರನ್ ನೀಡಿದ್ದು, ಈ ಅವಧಿಯಲ್ಲಿ 39 ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ ಕಳೆದ ಐದು ವರ್ಷಗಳಿಂದ ಅವರು ಆಸ್ಟ್ರೇಲಿಯಾ ಪರ ಯಾವುದೇ ಏಕದಿನ ಪಂದ್ಯವನ್ನೂ ಆಡಿರಲಿಲ್ಲ ಎಂಬುದು ಗಮನಾರ್ಹ.

ಇನ್ನು ಟಿ20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಉತ್ತಮ ಪ್ರದರ್ಶನ ನೀಡಿದ್ದ ರಿಚರ್ಡ್ಸನ್, 36 ಪಂದ್ಯಗಳಲ್ಲಿ 756 ಎಸೆತಗಳನ್ನು ಎಸೆದು 1056 ರನ್ ನೀಡಿ 45 ವಿಕೆಟ್‌ಗಳನ್ನು ಪಡೆದುಕೊಂಡಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್ ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ಲ್ಲೂ ಕೇನ್ ರಿಚರ್ಡ್ಸನ್ ಕಣಕ್ಕಿಳಿದಿದ್ದರು. ಐಪಿಎಲ್‌ನಲ್ಲಿ ಒಟ್ಟು 15 ಪಂದ್ಯಗಳನ್ನು ಆಡಿರುವ ಅವರು, 335 ಎಸೆತಗಳಲ್ಲಿ 472 ರನ್ ನೀಡಿ 19 ವಿಕೆಟ್‌ಗಳನ್ನು ಕಬಳಿಸಿದ್ದರು. ಪುಣೆ ವಾರಿಯರ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಪರ ಅವರು ಆಡಿದ್ದರು.

ವಿಶೇಷವಾಗಿ 2021ರಲ್ಲಿ ಆರ್‌ಸಿಬಿ ಪರ ಕಣಕ್ಕಿಳಿದ ಬಳಿಕ ಅವರು ಐಪಿಎಲ್‌ನಿಂದಲೂ ದೂರವಾಗಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಸಮಾಜದಲ್ಲಿ ಅಸಮಾನತೆಯನ್ನು ಶಾಶ್ವತವಾಗಿಸುವುದೇ RSS ಹುನ್ನಾರ: ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದ್ದು, ವಿಬಿ ರಾಮ್ ಜಿ ರದ್ದುಪಡಿಸಿ ನರೇಗಾ ಪುನರ್ಸ್ಥಾಪನೆಯಾಗುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ‘ಮನರೇಗಾ ಬಚಾವ್ ಸಂಗ್ರಾಮ್” ಅಂಗವಾಗಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆ ಹಾಗೂ ರಾಜ್ ಭವನ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇತ್ತೀಚೆಗೆ ಬಿಜೆಪಿಯವರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆ (MGNREGA) ಕಾಯ್ದೆಯನ್ನು ರದ್ದು ಮಾಡಿ, ದುರುದ್ದೇಶದಿಂದ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಹೊಸ ಕಾಯ್ದೆಗೆ ವಿಕಸಿತ ಭಾರತ- ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕ ಮಿಶನ್ (ಗ್ರಾಮೀಣ) ಎಂಬ ಹೆಸರಿಟ್ಟಿದ್ದಾರೆ ಎಂದು ತಿಳಿಸಿದರು.

2005 ರಲ್ಲಿ ಮನಮೋಹನ್ ಸಿಂಗ್ ಪ್ರದಾನಿಯಾಗಿದ್ದ ಸಂದರ್ಭದಲ್ಲಿ ನರೇಗಾ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಅಂತೆಯೇ ಆಹಾರ ಹಕ್ಕು, ಕೆಲಸದ ಹಕ್ಕು, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು, ಅರಣ್ಯ ಕಾಯ್ದೆ ಗಳನ್ನು ಕಾಂಗ್ರೆಸ್ನ ಸರ್ಕಾರದ ಅವಧಿಯಲ್ಲಿಯೇ ಜಾರಿಗೆ ಬಂದ ಜನಪರ ಕಾಯ್ದೆಗಳಾಗಿದ್ದುವು. ಕಾಂಗ್ರೆಸ್ ಸರ್ಕಾರ ಎಂದಿಗೂ ಮಹಿಳೆಯರಿಗೆ, ದಲಿತರಿಗೆ ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಸಣ್ಣ ರೈತರು ಬಗ್ಗೆ ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ಚಿಂತನೆ ಮಾಡುತ್ತದೆ ಎಂದರು.

ಬಿಜೆಪಿಯವರು ಈ ಜನಪರ ಯೋಜನೆಗಳನ್ನು ನಾಶಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಉದ್ಯೋಗ ಸಿಗದಂತೆ ಮಾಡಲಾಗುತ್ತಿದೆ. ಸುಮಾರು ಶೇ. 53 ರಷ್ಟು ಮಹಿಳೆಯರು, ಶೇ. 28 ರಷ್ಟು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರು ಮತ್ತು ಸುಮಾರು 5 ಲಕ್ಷ ಅಂಗವಿಕಲರು ಕೂಲಿ ಕೆಲಸದಲ್ಲಿ ನಿರತರಾಗಿದ್ದು, ನರೇಗಾ ಯೋಜನೆಯಿಂದ ಎಲ್ಲರಿಗೂ ಉದ್ಯೋಗ ಸಿಗುವಂತಾಗಿತ್ತು. ಆದರೆ ಕೇಂದ್ರ ಸರ್ಕಾರ, ಆರ್ ಎಸ್ ಎಸ್ ಅವರ ಜೊತೆಗೂಡಿ ಬಡಜನರು ಸದಾ ಸೇವಕರಾಗಿಯೇ ಇರಬೇಕೆಂದು ಹುನ್ನಾರ ಮಾಡಿದ್ದಾರೆ ಎಂದರು.

ಬಿಜೆಪಿಯವರು ಕಾಂಗ್ರೆಸ್ ನ ಜನಪರ ಗ್ಯಾರಂಟಿ ಯೋಜನೆಗಳ ಬಗ್ಗೆ ‘ವೋಟ್ ಗಾಗಿ ಮಾಡಿದ ಯೋಜನೆಗಳು’ ಎಂದು ಟೀಕಿಸುತ್ತಿದ್ದರು. ಮಹಿಳೆಯರಿಗೆ, ದಲಿತರಿಗೆ ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಸಣ್ಣ ರೈತರು ನರೇಗಾ ಯಿಂದ ವರ್ಷದ ಯಾವುದೇ ದಿನಗಳಲ್ಲಿ ಕೆಲಸ ಮಾಡಬಹುದಿತ್ತು. ಗ್ರಾಮಸಭೆಗಳು ಹಾಗೂ ಗ್ರಾಮ ಪಂಚಾಯತಿಗಳು ಈ ಮೊದಲು ಕೆಲಸವನನ್ನು ನಿರ್ಧರಿಸಲಾಗುತ್ತಿತ್ತು. ಆದರೆ ಈಗ ಬಡವರ ಗ್ರಾಮೀಣ ಬಡಜನರ ಕೆಲಸವನ್ನು ಸ್ಥಳೀಯ ಗ್ರಾಮೀಣ ಆಡಳಿತ ಬಿಟ್ಟು , ದಿಲ್ಲಿಯಲ್ಲಿ ನಿರ್ಧರಿಸಲಾಗುತ್ತದೆ ಎಂದರು.

ಪ್ರತಿಭಟನೆ ವೇಳೆ ಡಿಕೆಶಿ ತಲೆಗೆ ಟವೆಲ್ ಪೇಟ ಸುತ್ತಿದ ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ಫ್ರೀಡಂ ಪಾರ್ಕ್‌ನಲ್ಲಿ ಜಿ ರಾಮ್ ಜಿ ಯೋಜನೆ ವಿರುದ್ಧ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಲೆಗೆ ಟವೆಲ್ ಪೇಟ ಸುತ್ತಿದ ಕ್ಷಣ ಗಮನ ಸೆಳೆಯಿತು.

ಪ್ರತಿಭಟನೆಯ ವೇಳೆ ಮೊದಲು ತಮ್ಮ ಹೆಗಲಿನ ಮೇಲೆ ಇದ್ದ ಟವೆಲ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ  ತಲೆಗೆ ಕಟ್ಟಿಕೊಂಡರು. ನಂತರ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ  ಕೂಡ ತಲೆಗೆ ಟವೆಲ್ ಸುತ್ತಿಕೊಂಡರು. ಬಳಿಕ ಭಾಷಣ ಮುಗಿಸಿ ಬಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ತಲೆಗೆ ಸುರ್ಜೇವಾಲ ಟವೆಲ್ ಸುತ್ತಿದರು.

ಆದರೆ ಅದು ಸರಿಯಾಗಿ ಕಟ್ಟದ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ನಗುನಗುತ್ತಲೇ ಡಿ.ಕೆ. ಶಿವಕುಮಾರ್  ತಲೆಗೆ ಸರಿಯಾಗಿ ಟವೆಲ್ ಪೇಟ ಸುತ್ತಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಮೂವರು ನಾಯಕರು ತಲೆಗೆ ಟವೆಲ್ ಕಟ್ಟಿಕೊಂಡು ಒಟ್ಟಾಗಿ ಪೋಸ್ ನೀಡಿದರು.

ಇನ್ನೂ ಪ್ರತಿಭಟನೆ ಮುಗಿದ ಬಳಿಕ ಕಾಂಗ್ರೆಸ್ ನಾಯಕರು ಲೋಕಭವನಕ್ಕೆ ಮುತ್ತಿಗೆ ಹಾಕಲು ಮುಂದಾದರು. ಈ ಹಿನ್ನೆಲೆಯಲ್ಲಿ ಲೋಕಭವನದ ಸುತ್ತಮುತ್ತ ಹಾಗೂ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೆ, 26 ಕಾಂಗ್ರೆಸ್ ನಾಯಕರಿಗೆ ರಾಜ್ಯಪಾಲರನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಗಿದೆ. ಫ್ರೀಡಂ ಪಾರ್ಕ್‌ನಿಂದ ಕಾಂಗ್ರೆಸ್ ನಾಯಕರನ್ನು ಕರೆದೊಯ್ಯಲು ಬಿಎಂಟಿಸಿ ಬಸ್‌ಗಳನ್ನು ಸಿದ್ಧಪಡಿಸಲಾಗಿದೆ.

ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ: ರೈತ ಸಂಘದ ಕೋಲಾರ ಜಿಲ್ಲಾ ಅಧ್ಯಕ್ಷ ರಾಮೇಗೌಡ ಪೊಲೀಸ್ ವಶಕ್ಕೆ

0

ಕೋಲಾರ: ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ಅಪ್ರಾಪ್ತ ಬಾಲಕಿಗೆ ಸಂಬಂಧಿಸಿದ ಗಂಭೀರ ಲೈಂಗಿಕ ದೌರ್ಜನ್ಯ ಪ್ರಕರಣ ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪ್ರಕರಣದಲ್ಲಿ ಕರ್ನಾಟಕ ರೈತ ಸಂಘದ ಕೋಲಾರ ಜಿಲ್ಲಾ ಅಧ್ಯಕ್ಷ ರಾಮೇಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯ ಮೇಲೆ 14 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿ ನಾಲ್ಕು ತಿಂಗಳ ಗರ್ಭಿಣಿಯಾಗಿರುವುದು ದೃಢಪಟ್ಟ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸ್ ಮಾಹಿತಿ ಪ್ರಕಾರ, ಆರೋಪಿ ಬಾಲಕಿಯ ಮನೆಯ ಸಮೀಪ ಅಥವಾ ಸಂಬಂಧಿತ ಸಂದರ್ಭಗಳಲ್ಲಿ ಕಿರುಕುಳ ನೀಡಿದ್ದಾನೆ ಎಂಬ ಆರೋಪಗಳಿವೆ. ಬಾಲಕಿಯ ಆರೋಗ್ಯ ಸ್ಥಿತಿ ಕುಗ್ಗಿದ ಹಿನ್ನೆಲೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗರ್ಭಧಾರಣೆ ವಿಚಾರ ಬಹಿರಂಗವಾಗಿದೆ.

ಸಮಾಜದಲ್ಲಿ ಪ್ರಮುಖ ಸ್ಥಾನ ಹೊಂದಿದ್ದ ವ್ಯಕ್ತಿಯೊಬ್ಬ ಈ ರೀತಿಯ ಆರೋಪ ಎದುರಿಸುತ್ತಿರುವುದು ಸಾರ್ವಜನಿಕರಲ್ಲಿ ಆಘಾತ ಮೂಡಿಸಿದೆ. ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಂಡಿದ್ದು, ತನಿಖೆ ಮುಂದುವರಿದಿದೆ.

ಲವರ್‌ ಜೊತೆ ಪರಾರಿಯಾದ ಪತ್ನಿ: ಡೆತ್‌ನೋಟ್‌ ಬರೆದಿಟ್ಟು ಪತಿ ಆತ್ಮಹತ್ಯೆ: ಸೋದರ ಮಾವನೂ ಸೂಸೈಡ್

0

ದಾವಣಗೆರೆ: ದಾವಣಗೆರೆ ತಾಲೂಕಿನ ಗುಮ್ಮನೂರಿನಲ್ಲಿ ಸಂಭವಿಸಿರುವ ಘಟನೆ ಇಡೀ ಜಿಲ್ಲೆಯನ್ನು ಶೋಕದಲ್ಲಿ ಮುಳುಗಿಸಿದೆ. ಮದುವೆಯಾಗಿ ಕೇವಲ 45 ದಿನಗಳಷ್ಟೇ ಆಗಿದ್ದ ಹರೀಶ್ (30) ಎಂಬ ಯುವಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹರೀಶ್ ಬರೆದಿರುವ ಎರಡು ಪುಟಗಳ ಡೆತ್ ನೋಟ್‌ನಲ್ಲಿ ಪತ್ನಿಯಿಂದ ಮಾನಸಿಕ ಕಿರುಕುಳ, ಅವಮಾನ ಹಾಗೂ ಜೀವ ಬೆದರಿಕೆ ಎದುರಿಸುತ್ತಿದ್ದೆ ಎಂದು ಉಲ್ಲೇಖಿಸಿದ್ದಾನೆ. ಪತ್ನಿ ಬೇರೆ ಯುವಕನೊಂದಿಗೆ ಓಡಿಹೋಗಿದ್ದು, ತಾನು ಹಿಂಸೆ ನೀಡುತ್ತಿದ್ದೆನೆಂಬ ಸುಳ್ಳು ಆರೋಪ ಹೊರಿಸಿದ್ದಾಳೆ ಎಂದು ದೂರಿದ್ದಾನೆ. ಈ ಎಲ್ಲ ಮಾನಸಿಕ ಒತ್ತಡವೇ ಆತ್ಮಹತ್ಯೆಗೆ ಕಾರಣ ಎಂದು ತಿಳಿಸಿದ್ದಾನೆ.

ಡೆತ್ ನೋಟ್‌ನಲ್ಲಿ ಪತ್ನಿ ಹಾಗೂ ಆಕೆಯ ತಂದೆ, ತಾಯಿ, ಚಿಕ್ಕಪ್ಪನಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಉಲ್ಲೇಖಿಸಿದ್ದಾನೆ. “ಮಾನವೇ ಜೀವನದ ಆಸ್ತಿ” ಎಂದು ಬರೆದಿರುವ ಹರೀಶ್, ತನ್ನ ನಿರ್ಧಾರಕ್ಕೆ ಕುಟುಂಬವನ್ನು ಕ್ಷಮಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾನೆ. ಪತ್ನಿಯ ಕಡೆಯವರ ವರ್ತನೆಯಿಂದ ತನ್ನ ತಂದೆ-ತಾಯಿ ಮನೆ ಬಿಡುವ ಯೋಚನೆಗೂ ಬಂದಿದ್ದರು ಎಂದು ಹೇಳಲಾಗಿದೆ.

ಘಟನಾ ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡೆತ್ ನೋಟ್ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

ಈ ನಡುವೆ, ಪ್ರಕರಣ ಮತ್ತೊಂದು ದಾರುಣ ತಿರುವು ಪಡೆದುಕೊಂಡಿದೆ. ಹರೀಶ್ ಮದುವೆಗೆ ಮುಂದಾಗಿ ನಿಂತಿದ್ದ ಯುವತಿಯ ಸೋದರ ಮಾವ ರುದ್ರೇಶ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಾವಣಗೆರೆ ಅನೆಕೊಂಡ ನಿವಾಸಿಯಾಗಿದ್ದ ರುದ್ರೇಶ್, ಯುವತಿ ನಾಲ್ಕು ದಿನಗಳ ಹಿಂದೆ ಕುಮಾರ್ ಎಂಬ ಯುವಕನೊಂದಿಗೆ ಓಡಿಹೋಗಿದ್ದ ಘಟನೆಯಿಂದ ತೀವ್ರವಾಗಿ ನೊಂದಿದ್ದರು ಎಂದು ತಿಳಿದುಬಂದಿದೆ.

ಒಟ್ಟಾರೆ, ಕುಟುಂಬದ ವಿವಾದ, ಮಾನಸಿಕ ಒತ್ತಡ ಮತ್ತು ಸಾಮಾಜಿಕ ಅವಮಾನ — ಈ ಎಲ್ಲಾ ಅಂಶಗಳು ಸೇರಿ ಎರಡು ಜೀವಗಳನ್ನು ಕಳೆದುಕೊಂಡ ದಾರುಣ ದುರಂತಕ್ಕೆ ಕಾರಣವಾಗಿದೆ ಎಂಬ ಅಭಿಪ್ರಾಯ ಸ್ಥಳೀಯರಲ್ಲಿ ವ್ಯಕ್ತವಾಗಿದೆ.

ಭಾರತ-ಯುರೋಪ್ ನಡುವೆ ಐತಿಹಾಸಿಕ FTA ಘೋಷಣೆ: ಪ್ರಧಾನಿ ಮೋದಿ ಹೇಳಿದ್ದೇನು.?

0

ನವದೆಹಲಿ: ನಾಲ್ಕನೇ ಆವೃತ್ತಿಯ ಭಾರತ ಇಂಧನ ಸಪ್ತಾಹ 2026 ಅನ್ನು ಇಂದು ವರ್ಚುವಲ್ ಮೂಲಕ ಉದ್ಘಾಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತ–ಯುರೋಪ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದ (FTA) ಅನ್ನು ಉಲ್ಲೇಖಿಸಿ, ಇದನ್ನು ಜಾಗತಿಕ ಉದ್ದೇಶದಲ್ಲಿ ಅತ್ಯಂತ ಪ್ರಮುಖ ಒಪ್ಪಂದ ಎಂದು ವಿವರಿಸಿದರು. ಮೋದಿ ಹೇಳಿಕೆಯಲ್ಲಿ, ಈ ಒಪ್ಪಂದ ಜಾಗತಿಕ ಜಿಡಿಪಿ ಶೇ. 25 ಹಾಗೂ ಜಾಗತಿಕ ವ್ಯಾಪಾರದ ಸುಮಾರು ಒಂದು ಮೂರನೇ ಭಾಗಕ್ಕೆ ಹಿಸುಮಾಡುವ ಸಾಮರ್ಥ್ಯ ಹೊಂದಿದೆ ಎಂದು ಶಕ್ತಿ ಸೂಚಿಸಿದರು.

, ಈ ಕಾರ್ಯಕ್ರಮ ಇಂಧನ ಕ್ಷೇತ್ರದಲ್ಲಿ ಸಂವಾದ ಮತ್ತು ಕ್ರಿಯೆಯ ಜಾಗತಿಕ ವೇದಿಕೆ ಆಗಿದ್ದು, ಭಾರತದ ಸಾಂದರ್ಭಿಕ ಆರ್ಥಿಕ ಸ್ಥಿತಿಯೊಂದಿಗೆ ಈ ಒಪ್ಪಂದ ಸಮನ್ವಯ ಸಾಧಿಸಲು ಸಹಾಯಕವಾಗಲಿದೆ ಎಂದು ಪ್ರಧಾನಮಂತ್ರಿ Modi ತಿಳಿಸಿದ್ದಾರೆ. ಇದೇ ರೀತಿ, ಜವಳಿ, ರತ್ನ, ಆಭರಣ, ಚರ್ಮ ಮತ್ತು ಪಾದರಕ್ಷೆ ಕೈಗಾರಿಕೆಗಳಿಗೆ ಸಂಬಂಧಿಸಿದ ಉದ್ಯಮಿಗಳು ಮತ್ತು ಯುವಕರಿಗೆ ಈ ಒಪ್ಪಂದ ವಿಶೇಷ ಪ್ರಯೋಜನಕಾರಿ ಆಗಲಿದೆ ಎಂದರು.

ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಶ್ವದ ಪ್ರಮುಖ ಆರ್ಥಿಕತೆಯಾಗಿ ಭಾರತ, ಇಂಧನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಅಪಾರ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಜಾಗತಿಕ ಇಂಧನ ಬೇಡಿಕೆಯನ್ನು ಪೂರೈಸಲು ಭಾರತ ಉತ್ತಮ ಸ್ಥಿತಿಯಲ್ಲಿದೆ ಎಂದು ಮೋದಿ ಹೇಳಿದರು.

ಭಾರತವು 2030ರೊಳಗೆ ತೈಲ ಮತ್ತು ಅನಿಲ ವಲಯದಲ್ಲಿ $100 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡುವ ಗುರಿಯನ್ನು ಹೊಂದಿದ್ದು, ತೈಲ ಸಂಸ್ಕರಣಾ ಸಾಮರ್ಥ್ಯವನ್ನು ವಾರ್ಷಿಕ 260 ಮಿಲಿಯನ್ ಟನ್‌ಗಳಿಂದ 300 ಎಂಟಿಪಿಎಗೆ ವಿಸ್ತರಿಸಲಾಗುವುದು. ಮೋದಿ ಅವರು ಈ ಒಪ್ಪಂದವು ಭಾರತ–ಯುಕೆ ವ್ಯಾಪಾರ ಒಪ್ಪಂದಕ್ಕೂ ಪೂರಕವಾಗಿದೆ ಎಂದು ತಿಳಿಸಿದರು, ಏಕೆಂದರೆ ಇದು ಉತ್ಪಾದನಾ ವಲಯ ಮತ್ತು ಬೆಂಬಲ ಸೇವೆಗಳಿಗೆ ಉತ್ತೇಜನ ನೀಡುತ್ತದೆ.

ಬಿಜೆಪಿ ನಾಯಕರು ಗಾಂಧಿ ಪ್ರತಿಮೆ ಮುಂದೆ ಕೂರುವ ಹಕ್ಕು ಕಳೆದುಕೊಂಡಿದ್ದಾರೆ: ಡಿ.ಕೆ. ಶಿವಕುಮಾರ್

0

ಬೆಂಗಳೂರು: ರಾಜ್ಯದಲ್ಲಿರುವ ಸುಮಾರು 6 ಸಾವಿರ ಪಂಚಾಯ್ತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಅವರ ಹೆಸರಿಡಲಾಗುವುದು. ಇದು ಕಾಂಗ್ರೆಸ್ ಪಕ್ಷದ ತೀರ್ಮಾನ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ನಡೆದ ರಾಜಭವನ ಚಲೋ ಮಹಾತ್ಮ ಗಾಂಧಿ ನರೇಗಾ ಬಚಾವ್ ಸಂಗ್ರಾಮ ಪ್ರತಿಭಟನೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು.

“ಕೆಪಿಸಿಸಿ ಉಪಾಧ್ಯಕ್ಷರಾದ ಉಗ್ರಪ್ಪ ಹಾಗೂ ಕೆಪಿಸಿಸಿ ಪದಾಧಿಕಾರಿಗಳು ಈ ವಿಚಾರವಾಗಿ ನಮಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ. ಆ ಮೂಲಕ ಮಹಾತ್ಮ ಗಾಂಧಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಕೆಲಸ ಮಾಡಲಾಗುವುದು. ಹಳ್ಳಿಗೊಂದು ಶಾಲೆ, ಸಹಕಾರ ಸಂಘ, ಪಂಚಾಯ್ತಿ ಇರಬೇಕು ಎಂಬುದು ಗಾಂಧೀಜಿ ಅವರ ಸಂಕಲ್ಪ” ಎಂದು ತಿಳಿಸಿದರು.

“ಬಡ ಜನರ ಉದ್ಯೋಗದ ಹಕ್ಕಿನ ಪರವಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಉದ್ಯೋಗ ಇಲ್ಲದವರಿಗೆ ಉದ್ಯೋಗ ನೀಡಿದ್ದು, ಸೋನಿಯಾ ಗಾಂಧಿ ಅವರ ನೇತೃತ್ವದ ಮನಮೋಹನ್ ಸಿಂಗ್ ಅವರ ಸರ್ಕಾರ. ನಮ್ಮ ಉದ್ಯೋಗ ಖಾತರಿ ಯೋಜನೆಯನ್ನು ವಿಶ್ವವೇ ಗಮನಿಸಿತ್ತು. ಈ ಯೋಜನೆ ಬಹಳ ಅತ್ಯುತ್ತಮ ಯೋಜನೆ ಎಂದು ವಿಶ್ವಬ್ಯಾಂಕ್ 2013ರಲ್ಲಿ ಶ್ಲಾಘಿಸಿತ್ತು. 5700 ಪಂಚಾಯ್ತಿಗಳಿದ್ದು, ಪ್ರತಿ ವರ್ಷ ನಮ್ಮ ರಾಜ್ಯದಲ್ಲಿ ಈ ಯೋಜನೆಯಿಂದ 6 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿತ್ತು” ಎಂದು ಹೇಳಿದರು.

“ಯಾವ ಕಾಮಗಾರಿ, ಅಭಿವೃದ್ಧಿ ಕೆಲಸ ಕೈಗೊಳ್ಳಬೇಕು ಎಂದು ಈ ಹಿಂದೆ ಪಂಚಾಯ್ತಿಗಳು ತೀರ್ಮಾನ ಮಾಡುತ್ತಿದ್ದವು. ಬೇರೆಯವರ ಜಮೀನಿನಲ್ಲಿ ಕೂಲಿಗೆ ಹೋಗಲು ಹಿಂಜರಿಯುವವರಿಗೆ ತಮ್ಮ ಜಮೀನಿನಲ್ಲೇ ಕೆಲಸ ಮಾಡಿ ಕೂಲಿ ಪಡೆಯುವ ಅವಕಾಶವನ್ನು ಸೋನಿಯಾ ಗಾಂಧಿ ಅವರ ನಿರ್ದೇಶನದಂತೆ ಕೇಂದ್ರ ಸಚಿವ ಸಿ.ಪಿ. ಜೋಷಿ ಅವರು ಈ ಯೋಜನೆ ರೂಪಿಸಿದ್ದರು. ಇಂತಹ ಐತಿಹಾಸಿಕ ತೀರ್ಮಾನವನ್ನು ಯುಪಿಎ ಸರ್ಕಾರ ತೆಗೆದುಕೊಂಡಿತ್ತು. ಆಶ್ರಯ ಮನೆ, ಇಂದಿರಾ ಆವಾಸ್ ಮನೆ ನಿರ್ಮಾಣ, ದನಗಳ ಕೊಟ್ಟಿಗೆ, ವ್ಯವಸಾಯ ಸಂಬಂಧಿ ಕೆಲಸ ಮಾಡಲು ಕೂಲಿ ನೀಡಲಾಗುತ್ತಿತ್ತು” ಎಂದು ವಿವರಿಸಿದರು.

“ಈ ಯೋಜನೆ ಆಂದೋಲನವಾಗಿ ನಡೆಯುತ್ತಿತ್ತು. ಈ ಯೋಜನೆಗೆ ಕೇಂದ್ರ ಸರ್ಕಾರ 90% ಅನುದಾನ ನೀಡುತ್ತಿತ್ತು. ಕಬ್ಬಿಣ, ಸಿಮೆಂಟ್ ನಂತಹ ಸಾಮಾಗ್ರಿಗಳ ಬಳಕೆಯ ಕಾಮಗಾರಿಗಳಿದ್ದರೆ, ಅವುಗಳಿಗೆ ರಾಜ್ಯ ಸರ್ಕಾರ 25% ಅನುದಾನ ನೀಡಬೇಕಾಗಿತ್ತು. 7 ಸಾವಿರ ಜನ ಇದರ ಉಸ್ತುವಾರಿ ಜವಾಬ್ದಾರಿಯ ಉದ್ಯೋಗ ಸೃಷ್ಟಿಯಾಗಿದ್ದವು.

ಮಹಾತ್ಮ ಗಾಂಧಿ ಅವರ ಹೆಸರನ್ನು ಬದಲಿಸಿ ಈ ಕಾಯ್ದೆಗೆ ಹೊಸ ರೂಪ ನೀಡಿದ್ದಾರೆ. ನೂತನ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ 60%, ರಾಜ್ಯ ಸರ್ಕಾರ 40% ಅನುದಾನ ಭರಿಸಬೇಕಾಗಿದೆ. ಈ ಬಗ್ಗೆ ಚರ್ಚೆ ಮಾಡಲು ವಿಶೇಷ ಅಧಿವೇಶನ ನಡೆಸುತ್ತಿದ್ದೇವೆ. 2 ದಿನಗಳ ಕಾಲ ಈ ವಿಚಾರವಾಗಿ ಚರ್ಚೆ ಮಾಡುತ್ತೇವೆ. ಬಿಜೆಪಿ ನಾಯಕರು ಏನು ಮಾತನಾಡುತ್ತಾರೆ ನೋಡೋಣ” ಎಂದರು.

ಗಾಂಧಿ ಪ್ರತಿಮೆ ಮುಂದೆ ಕೂರುವ ಹಕ್ಕು ಕಳೆದುಕೊಂಡಿದ್ದಾರೆ:

“ಬಿಜೆಪಿ ನಾಯಕರು ಗಾಂಧಿ ಪ್ರತಿಮೆ ಮುಂದೆ ಕೂತು ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂತು. ಬಿಜೆಪಿಯವರು ಗಾಂಧಿ ಪ್ರತಿಮೆ ಮುಂದೆ ಕೂರುವ ಹಕ್ಕನ್ನು ಕಳೆದುಕೊಂಡಿದ್ದೀರಿ. ಇನ್ನುಮುಂದೆ ನಿಮ್ಮ ಕಚೇರಿಯಲ್ಲಿ ಗಾಂಧಿ ಭಾವಚಿತ್ರ ಇಟ್ಟುಕೊಳ್ಳುವ ಯೋಗ್ಯತೆ ನಿಮಗಿಲ್ಲ. ಗಾಂಧಿ ಅವರನ್ನು ನಾಥುರಾಮ್ ಗೋಡ್ಸೆ ಹತ್ಯೆ ಮಾಡಿದ್ದಲ್ಲದೇ, ಬಿಜೆಪಿ ಹಾಗೂ ಎನ್ ಡಿಎ ಸರ್ಕಾರ ಈಗ ಮತ್ತೆ ಅವರನ್ನು ಹತ್ಯೆ ಮಾಡುತ್ತಿದ್ದೀರಿ. ಅವರ ಹೆಸರನ್ನು ಅಳಿಸಿಹಾಕಲು ಸಾಧ್ಯವಿಲ್ಲ” ಎಂದು ತಿಳಿಸಿದರು.

“ಹಳ್ಳಿಗಳ ಉದ್ದಾರಕ್ಕೆ ನೀಡಿದ ಯೋಜನೆ ನರೇಗಾ. ಬಿಜೆಪಿಯಿಂದ ದೇಶಕ್ಕೆ ಹರಡುತ್ತಿದೆ ನಿರುದ್ಯೋಗದ ರೋಗ. ಬಿಜೆಪಿ ಗಾಂಧಿ ದ್ವೇಷಕ್ಕೆ ಧಿಕ್ಕಾರ. ನರೇಗಾ ರದ್ದಾಗಲು ಎಂದಿಗೂ ಬಿಡುವುದಿಲ್ಲ. ಬೇಡ ನಮಗೆ ವಿಬಿ ಗ್ರಾಮ್ ಜೀ. ಬೇಕೆ ಬೇಕು ನಮಗೆ ಗಾಂಧಿ.

ಇವತ್ತು ಪೊಲೀಸರು ನಮ್ಮನ್ನು ಬಂಧಿಸಿದರೂ ನಾವು ಹಿಂಜರಿಯುವುದಿಲ್ಲ, ಸರ್ಕಾರ ಇದ್ದರೂ ನಾವು ಜೈಲಿಗೆ ಹೋದರೂ ಸರಿ, ನರೇಗಾ ಯೋಜನೆ ಮರುಜಾರಿಗೆ ಹೋರಾಟ ಮುಂದುವರಿಸುತ್ತೇವೆ. ಕೇಂದ್ರ ಸರ್ಕಾರ ಕೃಷಿ ಕರಾಳ ಕಾಯ್ದೆಯನ್ನು ಹಿಂಪಡೆದಂತೆ ಇದನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ನಡೆಯಲಿದೆ” ಎಂದು ಸಂದೇಶ ಸಾರಿದರು.

“ನನ್ನ ಕ್ಷೇತ್ರ ಕನಕಪುರದಲ್ಲಿ ವರ್ಷಕ್ಕೆ 200 ಕೋಟಿ ರೂ. ಅನುದಾನ ಬಳಸಿಕೊಂಡು ಅನೇಕ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಆಮೂಲಕ ಈ ಯೋಜನೆ ಪರಿಣಾಮಕಾರಿ ಜಾರಿಗೊಳಿಸಿದ ತಾಲ್ಲೂಕಿನಲ್ಲಿ ಅಗ್ರಸ್ಥಾನ ಪಡೆದಿದೆ. ಈ ಯೋಜನೆಯಲ್ಲಿ ಡಿ.ಕೆ. ಶಿವಕುಮಾರ್ ಹಣ ಹೊಡೆದಿದ್ದಾನೆ ಎಂಬ ಅನುಮಾನದ ಮೇಲೆ ಕೇಂದ್ರ ಸರ್ಕಾರ ತನಿಖೆ ಮಾಡಿಸಿತು. ನಂತರ ಅವರೇ ನಮ್ಮ ಕೆಲಸ ನೋಡಿ ಪ್ರಶಸ್ತಿ ನೀಡಿದರು” ಎಂದರು.

ಚೋರ್ಲಾ ಘಾಟ್ ದರೋಡೆ ಕೇಸ್‌ನಲ್ಲಿ ಬ್ರೇಕ್‌ಥ್ರೂ: 400 ಕೋಟಿ ಸಾಗಿಸಿದ ಚಾಲಕರ ಬಂಧನ

0

ಬೆಳಗಾವಿ: ರಾಜ್ಯವನ್ನೇ ಬೆಚ್ಚಿಬೀಳಿಸಿದ 400 ಕೋಟಿ ರೂ. ಕಂಟೇನರ್ ದರೋಡೆ ಪ್ರಕರಣದಲ್ಲಿ ಕೊನೆಗೂ ಮಹತ್ವದ ಬ್ರೇಕ್‌ಥ್ರೂ ಸಿಕ್ಕಿದೆ. ಹಣ ಸಾಗಿಸಿದ್ದ ಎರಡು ಕಂಟೇನರ್ ಚಾಲಕರು ಎಸ್ಐಟಿ ವಶಕ್ಕೆ ಬಿದ್ದಿದ್ದಾರೆ.

ಚೋರ್ಲಾ ಘಾಟ್ ಬಳಿ ನಾಪತ್ತೆಯಾಗಿದ್ದ ಕಂಟೇನರ್ ಪ್ರಕರಣ ಇದೀಗ ಸಂಪೂರ್ಣ ಹೊಸ ತಿರುವು ಪಡೆದಿದ್ದು, ಬಂಧಿತರಾದ ಚಾಲಕರ ವಿಚಾರಣೆಯಿಂದ ದರೋಡೆ ಹಿಂದೆ ಇರುವ ಅಂತರರಾಜ್ಯ ಜಾಲ ಬಯಲಾಗುವ ಸಾಧ್ಯತೆ ಗಟ್ಟಿಯಾಗಿದೆ.

ಈ ಹಿಂದೆ ಸಂದೀಪ್ ಪಾಟೀಲ್ ಎಂಬಾತ ನೀಡಿದ್ದ ಸ್ಫೋಟಕ ಹೇಳಿಕೆಯಲ್ಲಿ, ಹಣ ಉದ್ಯಮಿ ಕಿಶೋರ್ ಸೇಠ್ ಹಾಗೂ ವಿರಾಟ್ ಗಾಂಧಿ ಕೈವಾಡವಿದೆ ಎಂದು ಆರೋಪಿಸಿದ್ದ. ಜೊತೆಗೆ, ಹಣ ಗುಜರಾತ್‌ನ ರಾಜಕಾರಣಿಯೊಬ್ಬರಿಗೆ ಸೇರಿದೆ ಎಂಬ ಆಡಿಯೋ ಸಂಭಾಷಣೆ ವೈರಲ್ ಆಗಿದ್ದು, ಪ್ರಕರಣಕ್ಕೆ ರಾಜಕೀಯ ತಿರುವು ಕೂಡಾ ಸಿಕ್ಕಿತ್ತು.

ಈಗ ಚಾಲಕರ ಬಂಧನದೊಂದಿಗೆ, ಹಣದ ಮೂಲ ಯಾರದ್ದು? ನಿಜಕ್ಕೂ ದರೋಡೆ ನಡೆದಿತ್ತೇ ಅಥವಾ ಒಳಒಪ್ಪಂದವೇ? ಯಾರ್ಯಾರು ಇದರ ಹಿಂದೆ ಇದ್ದಾರೆ? ಎಂಬ ಅತಿ ಸಂವೇದನಾಶೀಲ ಪ್ರಶ್ನೆಗಳಿಗೆ ಉತ್ತರ ಸಿಗುವ ಸಾಧ್ಯತೆ ಇದೆ.

error: Content is protected !!