Home Blog Page 111

ಬಿಜೆಪಿ ನಾಯಕರು ಗಾಂಧಿ ಪ್ರತಿಮೆ ಮುಂದೆ ಕೂರುವ ಹಕ್ಕು ಕಳೆದುಕೊಂಡಿದ್ದಾರೆ: ಡಿ.ಕೆ. ಶಿವಕುಮಾರ್

0

ಬೆಂಗಳೂರು: ರಾಜ್ಯದಲ್ಲಿರುವ ಸುಮಾರು 6 ಸಾವಿರ ಪಂಚಾಯ್ತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಅವರ ಹೆಸರಿಡಲಾಗುವುದು. ಇದು ಕಾಂಗ್ರೆಸ್ ಪಕ್ಷದ ತೀರ್ಮಾನ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ನಡೆದ ರಾಜಭವನ ಚಲೋ ಮಹಾತ್ಮ ಗಾಂಧಿ ನರೇಗಾ ಬಚಾವ್ ಸಂಗ್ರಾಮ ಪ್ರತಿಭಟನೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು.

“ಕೆಪಿಸಿಸಿ ಉಪಾಧ್ಯಕ್ಷರಾದ ಉಗ್ರಪ್ಪ ಹಾಗೂ ಕೆಪಿಸಿಸಿ ಪದಾಧಿಕಾರಿಗಳು ಈ ವಿಚಾರವಾಗಿ ನಮಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ. ಆ ಮೂಲಕ ಮಹಾತ್ಮ ಗಾಂಧಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಕೆಲಸ ಮಾಡಲಾಗುವುದು. ಹಳ್ಳಿಗೊಂದು ಶಾಲೆ, ಸಹಕಾರ ಸಂಘ, ಪಂಚಾಯ್ತಿ ಇರಬೇಕು ಎಂಬುದು ಗಾಂಧೀಜಿ ಅವರ ಸಂಕಲ್ಪ” ಎಂದು ತಿಳಿಸಿದರು.

“ಬಡ ಜನರ ಉದ್ಯೋಗದ ಹಕ್ಕಿನ ಪರವಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಉದ್ಯೋಗ ಇಲ್ಲದವರಿಗೆ ಉದ್ಯೋಗ ನೀಡಿದ್ದು, ಸೋನಿಯಾ ಗಾಂಧಿ ಅವರ ನೇತೃತ್ವದ ಮನಮೋಹನ್ ಸಿಂಗ್ ಅವರ ಸರ್ಕಾರ. ನಮ್ಮ ಉದ್ಯೋಗ ಖಾತರಿ ಯೋಜನೆಯನ್ನು ವಿಶ್ವವೇ ಗಮನಿಸಿತ್ತು. ಈ ಯೋಜನೆ ಬಹಳ ಅತ್ಯುತ್ತಮ ಯೋಜನೆ ಎಂದು ವಿಶ್ವಬ್ಯಾಂಕ್ 2013ರಲ್ಲಿ ಶ್ಲಾಘಿಸಿತ್ತು. 5700 ಪಂಚಾಯ್ತಿಗಳಿದ್ದು, ಪ್ರತಿ ವರ್ಷ ನಮ್ಮ ರಾಜ್ಯದಲ್ಲಿ ಈ ಯೋಜನೆಯಿಂದ 6 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿತ್ತು” ಎಂದು ಹೇಳಿದರು.

“ಯಾವ ಕಾಮಗಾರಿ, ಅಭಿವೃದ್ಧಿ ಕೆಲಸ ಕೈಗೊಳ್ಳಬೇಕು ಎಂದು ಈ ಹಿಂದೆ ಪಂಚಾಯ್ತಿಗಳು ತೀರ್ಮಾನ ಮಾಡುತ್ತಿದ್ದವು. ಬೇರೆಯವರ ಜಮೀನಿನಲ್ಲಿ ಕೂಲಿಗೆ ಹೋಗಲು ಹಿಂಜರಿಯುವವರಿಗೆ ತಮ್ಮ ಜಮೀನಿನಲ್ಲೇ ಕೆಲಸ ಮಾಡಿ ಕೂಲಿ ಪಡೆಯುವ ಅವಕಾಶವನ್ನು ಸೋನಿಯಾ ಗಾಂಧಿ ಅವರ ನಿರ್ದೇಶನದಂತೆ ಕೇಂದ್ರ ಸಚಿವ ಸಿ.ಪಿ. ಜೋಷಿ ಅವರು ಈ ಯೋಜನೆ ರೂಪಿಸಿದ್ದರು. ಇಂತಹ ಐತಿಹಾಸಿಕ ತೀರ್ಮಾನವನ್ನು ಯುಪಿಎ ಸರ್ಕಾರ ತೆಗೆದುಕೊಂಡಿತ್ತು. ಆಶ್ರಯ ಮನೆ, ಇಂದಿರಾ ಆವಾಸ್ ಮನೆ ನಿರ್ಮಾಣ, ದನಗಳ ಕೊಟ್ಟಿಗೆ, ವ್ಯವಸಾಯ ಸಂಬಂಧಿ ಕೆಲಸ ಮಾಡಲು ಕೂಲಿ ನೀಡಲಾಗುತ್ತಿತ್ತು” ಎಂದು ವಿವರಿಸಿದರು.

“ಈ ಯೋಜನೆ ಆಂದೋಲನವಾಗಿ ನಡೆಯುತ್ತಿತ್ತು. ಈ ಯೋಜನೆಗೆ ಕೇಂದ್ರ ಸರ್ಕಾರ 90% ಅನುದಾನ ನೀಡುತ್ತಿತ್ತು. ಕಬ್ಬಿಣ, ಸಿಮೆಂಟ್ ನಂತಹ ಸಾಮಾಗ್ರಿಗಳ ಬಳಕೆಯ ಕಾಮಗಾರಿಗಳಿದ್ದರೆ, ಅವುಗಳಿಗೆ ರಾಜ್ಯ ಸರ್ಕಾರ 25% ಅನುದಾನ ನೀಡಬೇಕಾಗಿತ್ತು. 7 ಸಾವಿರ ಜನ ಇದರ ಉಸ್ತುವಾರಿ ಜವಾಬ್ದಾರಿಯ ಉದ್ಯೋಗ ಸೃಷ್ಟಿಯಾಗಿದ್ದವು.

ಮಹಾತ್ಮ ಗಾಂಧಿ ಅವರ ಹೆಸರನ್ನು ಬದಲಿಸಿ ಈ ಕಾಯ್ದೆಗೆ ಹೊಸ ರೂಪ ನೀಡಿದ್ದಾರೆ. ನೂತನ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ 60%, ರಾಜ್ಯ ಸರ್ಕಾರ 40% ಅನುದಾನ ಭರಿಸಬೇಕಾಗಿದೆ. ಈ ಬಗ್ಗೆ ಚರ್ಚೆ ಮಾಡಲು ವಿಶೇಷ ಅಧಿವೇಶನ ನಡೆಸುತ್ತಿದ್ದೇವೆ. 2 ದಿನಗಳ ಕಾಲ ಈ ವಿಚಾರವಾಗಿ ಚರ್ಚೆ ಮಾಡುತ್ತೇವೆ. ಬಿಜೆಪಿ ನಾಯಕರು ಏನು ಮಾತನಾಡುತ್ತಾರೆ ನೋಡೋಣ” ಎಂದರು.

ಗಾಂಧಿ ಪ್ರತಿಮೆ ಮುಂದೆ ಕೂರುವ ಹಕ್ಕು ಕಳೆದುಕೊಂಡಿದ್ದಾರೆ:

“ಬಿಜೆಪಿ ನಾಯಕರು ಗಾಂಧಿ ಪ್ರತಿಮೆ ಮುಂದೆ ಕೂತು ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂತು. ಬಿಜೆಪಿಯವರು ಗಾಂಧಿ ಪ್ರತಿಮೆ ಮುಂದೆ ಕೂರುವ ಹಕ್ಕನ್ನು ಕಳೆದುಕೊಂಡಿದ್ದೀರಿ. ಇನ್ನುಮುಂದೆ ನಿಮ್ಮ ಕಚೇರಿಯಲ್ಲಿ ಗಾಂಧಿ ಭಾವಚಿತ್ರ ಇಟ್ಟುಕೊಳ್ಳುವ ಯೋಗ್ಯತೆ ನಿಮಗಿಲ್ಲ. ಗಾಂಧಿ ಅವರನ್ನು ನಾಥುರಾಮ್ ಗೋಡ್ಸೆ ಹತ್ಯೆ ಮಾಡಿದ್ದಲ್ಲದೇ, ಬಿಜೆಪಿ ಹಾಗೂ ಎನ್ ಡಿಎ ಸರ್ಕಾರ ಈಗ ಮತ್ತೆ ಅವರನ್ನು ಹತ್ಯೆ ಮಾಡುತ್ತಿದ್ದೀರಿ. ಅವರ ಹೆಸರನ್ನು ಅಳಿಸಿಹಾಕಲು ಸಾಧ್ಯವಿಲ್ಲ” ಎಂದು ತಿಳಿಸಿದರು.

“ಹಳ್ಳಿಗಳ ಉದ್ದಾರಕ್ಕೆ ನೀಡಿದ ಯೋಜನೆ ನರೇಗಾ. ಬಿಜೆಪಿಯಿಂದ ದೇಶಕ್ಕೆ ಹರಡುತ್ತಿದೆ ನಿರುದ್ಯೋಗದ ರೋಗ. ಬಿಜೆಪಿ ಗಾಂಧಿ ದ್ವೇಷಕ್ಕೆ ಧಿಕ್ಕಾರ. ನರೇಗಾ ರದ್ದಾಗಲು ಎಂದಿಗೂ ಬಿಡುವುದಿಲ್ಲ. ಬೇಡ ನಮಗೆ ವಿಬಿ ಗ್ರಾಮ್ ಜೀ. ಬೇಕೆ ಬೇಕು ನಮಗೆ ಗಾಂಧಿ.

ಇವತ್ತು ಪೊಲೀಸರು ನಮ್ಮನ್ನು ಬಂಧಿಸಿದರೂ ನಾವು ಹಿಂಜರಿಯುವುದಿಲ್ಲ, ಸರ್ಕಾರ ಇದ್ದರೂ ನಾವು ಜೈಲಿಗೆ ಹೋದರೂ ಸರಿ, ನರೇಗಾ ಯೋಜನೆ ಮರುಜಾರಿಗೆ ಹೋರಾಟ ಮುಂದುವರಿಸುತ್ತೇವೆ. ಕೇಂದ್ರ ಸರ್ಕಾರ ಕೃಷಿ ಕರಾಳ ಕಾಯ್ದೆಯನ್ನು ಹಿಂಪಡೆದಂತೆ ಇದನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ನಡೆಯಲಿದೆ” ಎಂದು ಸಂದೇಶ ಸಾರಿದರು.

“ನನ್ನ ಕ್ಷೇತ್ರ ಕನಕಪುರದಲ್ಲಿ ವರ್ಷಕ್ಕೆ 200 ಕೋಟಿ ರೂ. ಅನುದಾನ ಬಳಸಿಕೊಂಡು ಅನೇಕ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಆಮೂಲಕ ಈ ಯೋಜನೆ ಪರಿಣಾಮಕಾರಿ ಜಾರಿಗೊಳಿಸಿದ ತಾಲ್ಲೂಕಿನಲ್ಲಿ ಅಗ್ರಸ್ಥಾನ ಪಡೆದಿದೆ. ಈ ಯೋಜನೆಯಲ್ಲಿ ಡಿ.ಕೆ. ಶಿವಕುಮಾರ್ ಹಣ ಹೊಡೆದಿದ್ದಾನೆ ಎಂಬ ಅನುಮಾನದ ಮೇಲೆ ಕೇಂದ್ರ ಸರ್ಕಾರ ತನಿಖೆ ಮಾಡಿಸಿತು. ನಂತರ ಅವರೇ ನಮ್ಮ ಕೆಲಸ ನೋಡಿ ಪ್ರಶಸ್ತಿ ನೀಡಿದರು” ಎಂದರು.

ಚೋರ್ಲಾ ಘಾಟ್ ದರೋಡೆ ಕೇಸ್‌ನಲ್ಲಿ ಬ್ರೇಕ್‌ಥ್ರೂ: 400 ಕೋಟಿ ಸಾಗಿಸಿದ ಚಾಲಕರ ಬಂಧನ

0

ಬೆಳಗಾವಿ: ರಾಜ್ಯವನ್ನೇ ಬೆಚ್ಚಿಬೀಳಿಸಿದ 400 ಕೋಟಿ ರೂ. ಕಂಟೇನರ್ ದರೋಡೆ ಪ್ರಕರಣದಲ್ಲಿ ಕೊನೆಗೂ ಮಹತ್ವದ ಬ್ರೇಕ್‌ಥ್ರೂ ಸಿಕ್ಕಿದೆ. ಹಣ ಸಾಗಿಸಿದ್ದ ಎರಡು ಕಂಟೇನರ್ ಚಾಲಕರು ಎಸ್ಐಟಿ ವಶಕ್ಕೆ ಬಿದ್ದಿದ್ದಾರೆ.

ಚೋರ್ಲಾ ಘಾಟ್ ಬಳಿ ನಾಪತ್ತೆಯಾಗಿದ್ದ ಕಂಟೇನರ್ ಪ್ರಕರಣ ಇದೀಗ ಸಂಪೂರ್ಣ ಹೊಸ ತಿರುವು ಪಡೆದಿದ್ದು, ಬಂಧಿತರಾದ ಚಾಲಕರ ವಿಚಾರಣೆಯಿಂದ ದರೋಡೆ ಹಿಂದೆ ಇರುವ ಅಂತರರಾಜ್ಯ ಜಾಲ ಬಯಲಾಗುವ ಸಾಧ್ಯತೆ ಗಟ್ಟಿಯಾಗಿದೆ.

ಈ ಹಿಂದೆ ಸಂದೀಪ್ ಪಾಟೀಲ್ ಎಂಬಾತ ನೀಡಿದ್ದ ಸ್ಫೋಟಕ ಹೇಳಿಕೆಯಲ್ಲಿ, ಹಣ ಉದ್ಯಮಿ ಕಿಶೋರ್ ಸೇಠ್ ಹಾಗೂ ವಿರಾಟ್ ಗಾಂಧಿ ಕೈವಾಡವಿದೆ ಎಂದು ಆರೋಪಿಸಿದ್ದ. ಜೊತೆಗೆ, ಹಣ ಗುಜರಾತ್‌ನ ರಾಜಕಾರಣಿಯೊಬ್ಬರಿಗೆ ಸೇರಿದೆ ಎಂಬ ಆಡಿಯೋ ಸಂಭಾಷಣೆ ವೈರಲ್ ಆಗಿದ್ದು, ಪ್ರಕರಣಕ್ಕೆ ರಾಜಕೀಯ ತಿರುವು ಕೂಡಾ ಸಿಕ್ಕಿತ್ತು.

ಈಗ ಚಾಲಕರ ಬಂಧನದೊಂದಿಗೆ, ಹಣದ ಮೂಲ ಯಾರದ್ದು? ನಿಜಕ್ಕೂ ದರೋಡೆ ನಡೆದಿತ್ತೇ ಅಥವಾ ಒಳಒಪ್ಪಂದವೇ? ಯಾರ್ಯಾರು ಇದರ ಹಿಂದೆ ಇದ್ದಾರೆ? ಎಂಬ ಅತಿ ಸಂವೇದನಾಶೀಲ ಪ್ರಶ್ನೆಗಳಿಗೆ ಉತ್ತರ ಸಿಗುವ ಸಾಧ್ಯತೆ ಇದೆ.

ಶಿಡ್ಲಘಟ್ಟ ಪೌರಾಯುಕ್ತೆಗೆ ಧಮ್ಕಿ ಪ್ರಕರಣ: ಕೇರಳ ಗಡಿಯಲ್ಲಿ ರಾಜೀವ್ ಗೌಡ ಅರೆಸ್ಟ್ – ಪೊಲೀಸರ ‘ಮಾಸ್ಟರ್ ಪ್ಲ್ಯಾನ್’ ಯಶಸ್ಸು!

0

ಮಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿದ ಪ್ರಕರಣದ ಪ್ರಮುಖ ಆರೋಪಿ ರಾಜೀವ್ ಗೌಡ ಕೊನೆಗೂ ಪೊಲೀಸ್ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಪ್ರಕರಣ ದಾಖಲಾಗುತ್ತಿದ್ದಂತೆ ಅಡಗಿಹೋಗಿದ್ದ ಆರೋಪಿಯನ್ನು ಕೇರಳ ಗಡಿಯಲ್ಲಿ ಖಾಕಿ ಪಡೆ ಖೆಡ್ಡಾಗೆ ಕೆಡವಿದೆ.

ಪೊಲೀಸರ ತನಿಖೆ ಅತ್ಯಂತ ಕುತೂಹಲಕರ ರೀತಿಯಲ್ಲಿ ಸಾಗಿದ್ದು, ರಾಜೀವ್ ಗೌಡ ತನ್ನ ಸಹೋದರಿಗೆ ಕರೆ ಮಾಡಿದ್ದ ಮಾಹಿತಿಯೇ ದೊಡ್ಡ ಬ್ರೇಕ್‌ಥ್ರೂ ಆಗಿದೆ. ಆ ಆಧಾರದ ಮೇಲೆ ಪೊಲೀಸರು ವಿಚಾರಣೆ ಮುಂದುವರಿಸಿದ್ದು, ಆರೋಪಿ ಮಂಗಳೂರಿನಲ್ಲಿ ಮರೆತು ಕುಳಿತಿದ್ದಾನೆ ಎಂಬ ಸುಳಿವು ಲಭ್ಯವಾಗಿದೆ.

ಇನ್ನೂ ಗಂಭೀರವಾಗಿ, ಮಂಗಳೂರಿನ ಉದ್ಯಮಿ ಮೈಕಲ್ ಜೋಸೆಫ್ ರೇಗೋ ರಾಜೀವ್ ಗೌಡಗೆ ಆಶ್ರಯ ನೀಡಿದ್ದಾನೆ ಎಂಬ ಮಾಹಿತಿ ದೃಢಪಟ್ಟಿದೆ. ಫೋನ್ ನಂಬರ್ ಸಿಗದ ಕಾರಣ, ಪೊಲೀಸರು ಮೈಕಲ್ ಹಿನ್ನೆಲೆಯನ್ನು ಆಧಾರವಾಗಿ ತೆಗೆದುಕೊಂಡು ಚಾಣಾಕ್ಷ ತಂತ್ರ ರೂಪಿಸಿದ್ದಾರೆ.

ಮೈಕಲ್ ಪುತ್ರನ ಹಳೆಯ ಪ್ರಕರಣವನ್ನು ನೆಪವಾಗಿ ಸಂಪರ್ಕ ಸಾಧಿಸಿ, ಅಂತಿಮವಾಗಿ ಫೋನ್ ಟ್ರೇಸ್ ಮಾಡುವ ಮೂಲಕ ಮೈಕಲ್ ಮತ್ತು ರಾಜೀವ್ ಇಬ್ಬರನ್ನೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಪ್ರಕರಣ ಇದೀಗ ರಾಜ್ಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಮುಂದಿನ ತನಿಖೆಯಿಂದ ಇನ್ನಷ್ಟು ವಿಚಾರಗಳು ಬಹಿರಂಗವಾಗುವ ಸಾಧ್ಯತೆ ಇದೆ.

ವೃದ್ಧರನ್ನು ಟಾರ್ಗೆಟ್ ಮಾಡಿ ಚೈನ್ ಸ್ನ್ಯಾಚಿಂಗ್: ಆರೋಪಿಗಳು ಅರೆಸ್ಟ್.!

0

ಬೆಂಗಳೂರು ಗ್ರಾಮಾಂತರ: ವೃದ್ಧರನ್ನೇ ಟಾರ್ಗೆಟ್ ಮಾಡಿ ಚೈನ್ ಸ್ನ್ಯಾಚಿಂಗ್ ಮಾಡುತ್ತಿದ್ದ ಆರೋಪಿಗಳನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಇನ್ಸಪೆಕ್ಟರ್ ಸಾಧಿಕ್ ಪಾಷಾ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಶ್ರೀನಿವಾಸಮೂರ್ತಿ (31) ಹಾಗೂ ವೆಂಕಟೇಶ (23) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳು ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪ್ರಕರಣಗಳಲ್ಲಿಯೂ ಬೇಕಾಗಿದ್ದವರು ಎನ್ನಲಾಗಿದೆ. ದೊಡ್ಡಬಳ್ಳಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ನಡೆಸುತ್ತಿದ್ದ ವೇಳೆ ಆರೋಪಿಗಳನ್ನು ಪೊಲೀಸರು ಲಾಕ್ ಮಾಡಿದ್ದಾರೆ. ಬಂಧನದ ವೇಳೆ ಆರೋಪಿಗಳಿಂದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 40 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರು ವಶಪಡಿಸಿಕೊಂಡ ಕಳವಾದ ಚಿನ್ನವನ್ನು ಮಾಲೀಕರಿಗೆ ವಾಪಸ್ ನೀಡಿದ್ದು, ಚಿನ್ನವನ್ನು ಮರಳಿ ಪಡೆದ ದೂರುದಾರರು ಸಂತಸ ವ್ಯಕ್ತಪಡಿಸಿದ್ದಾರೆ. ಚೈನ್ ಸ್ನ್ಯಾಚಿಂಗ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು, ಮುಂದಿನ ದಿನಗಳಲ್ಲಿ ಇಂತಹ ಅಪರಾಧಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ: ಹೈಕೋರ್ಟ್ ಸ್ಪಷ್ಟನೆ

0

ಬೆಂಗಳೂರು: ಸಾಯುವವರೆಗೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಾದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಮಾತ್ರ ಸೀಮಿತವಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಸೆಷನ್ಸ್ ಕೋರ್ಟ್‌ಗಳಿಗೆ ಅಂತಹ ಶಿಕ್ಷೆ ವಿಧಿಸುವ ಅಧಿಕಾರ ಇಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಮೂರೂವರೆ ವರ್ಷದ ಮಗುವಿನ ಕೊಲೆ ಪ್ರಕರಣದಲ್ಲಿ ಆರೋಪಿಗೆ ಸಾಯುವವರೆಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿದ್ದ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರುದ್ರೇಶ್ (28) ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ನೇತೃತ್ವದ ವಿಭಾಗೀಯ ಪೀಠ, ಸೆಷನ್ಸ್ ಕೋರ್ಟ್ ನೀಡಿದ್ದ ಶಿಕ್ಷೆಯ ಸ್ವರೂಪವನ್ನು ತಿದ್ದುಪಡಿ ಮಾಡಿದೆ.

ಯಾವುದೇ ವಿನಾಯಿತಿ ಇಲ್ಲದೆ ಮರಣದಂಡನೆಗೆ ಬದಲಾಗಿ ಸಾಯುವವರೆಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ ಸೇರಿದ್ದು, ಆ ಅಧಿಕಾರ ಸೆಷನ್ಸ್ ಕೋರ್ಟ್‌ಗೆ ಇಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಮಗುವಿನ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯ ದೋಷ ಸಾಬೀತಾಗಿರುವುದರಿಂದ, 2017ರ ನವೆಂಬರ್ 27ರಂದು ಸೆಷನ್ಸ್ ಕೋರ್ಟ್ ನೀಡಿದ್ದ ದೋಷನಿರ್ಣಯವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಸಾಯುವವರೆಗೆ ಜೈಲು ಶಿಕ್ಷೆ ವಿಧಿಸಿದ್ದ ಆದೇಶವನ್ನು ರದ್ದುಪಡಿಸಿ, ಅದರ ಬದಲಾಗಿ ಜೀವಾವಧಿ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್ ಆದೇಶಿಸಿದೆ.

 ಪ್ರಕರಣದ ಹಿನ್ನೆಲೆ

ಶಿವಮೊಗ್ಗ ಜಿಲ್ಲೆಯ ಹೊಸಮನೆ ಗ್ರಾಮದ ನಿವಾಸಿ ರುದ್ರೇಶ್, ಹೊಸನಗರದ ಮಠವೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೊಲೆಗೀಡಾದ ಮಗುವಿನ ತಾಯಿ ಪ್ರಕರಣದ ದೂರುದಾರೆಯಾಗಿದ್ದು, ಆ ಮಠದ ಭಕ್ತೆಯಾಗಿದ್ದರು. ಮಠದ ವ್ಯವಹಾರಗಳಲ್ಲಿ ದೂರುದಾರೆ ಮತ್ತು ಆಕೆಯ ತಾಯಿ ಸಲಹೆ ನೀಡುತ್ತಿದ್ದುದರಿಂದ, ರುದ್ರೇಶ್ ಅವರ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದನು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

2017ರ ಏಪ್ರಿಲ್ 10ರಂದು ಮಠದ ಕಾರ್ಯಕ್ರಮವೊಂದರಲ್ಲಿ ದೂರುದಾರೆ ತನ್ನ ಮೂರೂವರೆ ವರ್ಷದ ಗಂಡು ಮಗುವಿನೊಂದಿಗೆ ಕುಟುಂಬ ಸದಸ್ಯರ ಜತೆಗೆ ಭಾಗವಹಿಸಿದ್ದರು. ಆ ದಿನ ರಾತ್ರಿ ಮಠದಲ್ಲೇ ಊಟ ಮಾಡಿ ಮಲಗಿದ್ದ ವೇಳೆ, ಬೆಳಿಗ್ಗೆ 5.30ರ ಸುಮಾರಿಗೆ ಎಚ್ಚರಗೊಂಡಾಗ ಮಗು ಪಕ್ಕದಲ್ಲಿರಲಿಲ್ಲ. ನಂತರ ಮಗು ಶವವಾಗಿ ಪತ್ತೆಯಾಗಿತ್ತು.

ಈ ಸಂಬಂಧ ಹೊಸನಗರ ಠಾಣಾ ಪೊಲೀಸರು ತನಿಖೆ ನಡೆಸಿದಾಗ, ಆರೋಪಿಯಾದ ರುದ್ರೇಶ್ ಮಗುವನ್ನು ಅಪಹರಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ 2017ರ ನವೆಂಬರ್ 27ರಂದು ಸೆಷನ್ಸ್ ಕೋರ್ಟ್ ಆರೋಪಿಯನ್ನು ದೋಷಿಯಾಗಿ ತೀರ್ಮಾನಿಸಿ, ನವೆಂಬರ್ 30ರಂದು ಸಾಯುವವರೆಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಆರೋಪಿಯು ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದ.

ಬದರಿನಾಥ-ಕೇದಾರನಾಥ ದೇವಾಲಯಕ್ಕೆ ಹಿಂದೂಗಳಲ್ಲದವರಿಗೆ ಪ್ರವೇಶ ನಿಷೇಧ!?

0

ಉತ್ತರಕಾಶಿ: ಉತ್ತರಾಖಂಡದ ಹಿಮಾಲಯ ಪರ್ವತಶ್ರೇಣಿಯಲ್ಲಿ ನೆಲೆಗೊಂಡಿರುವ ಶತಮಾನಗಳಷ್ಟು ಹಳೆಯದಾದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಿಗೆ ಶೀಘ್ರದಲ್ಲೇ ಹಿಂದೂಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ. ಹಿಂದೂಗಳನ್ನು ಹೊರತುಪಡಿಸಿ ಇತರೆ ಧರ್ಮದವರಿಗೆ ದೇವಾಲಯ ಪ್ರವೇಶವನ್ನು ನಿಷೇಧಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಚಾರ್ ಧಾಮ್ ತೀರ್ಥಯಾತ್ರೆಯ ಪ್ರಮುಖ ಕೇಂದ್ರಗಳಾದ ಈ ಎರಡು ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಲಾಗುವುದು ಎಂದು ದೇವಾಲಯಗಳನ್ನು ನಿರ್ವಹಿಸುವ ಸಂಸ್ಥೆ ಪ್ರಕಟಿಸಿದೆ.

ಬದರಿನಾಥ–ಕೇದಾರನಾಥ ಧಾಮ ಸೇರಿದಂತೆ ಬದರಿನಾಥ–ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ನಿಯಂತ್ರಣದಲ್ಲಿರುವ ಎಲ್ಲಾ ದೇವಾಲಯಗಳಿಗೂ ಈ ನಿರ್ಬಂಧ ಅನ್ವಯವಾಗಲಿದೆ ಎಂದು ದೇವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧದ ಪ್ರಸ್ತಾವನೆಯನ್ನು ಮುಂಬರುವ ದೇವಾಲಯ ಸಮಿತಿ ಮಂಡಳಿ ಸಭೆಯಲ್ಲಿ ಅಂಗೀಕರಿಸುವ ನಿರೀಕ್ಷೆಯಿದೆ.

ಇದೇ ವೇಳೆ, ಈ ನಿರ್ಬಂಧವು ಗಂಗೋತ್ರಿ ಧಾಮಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಮಾ ಗಂಗೆಯ ಚಳಿಗಾಲದ ವಾಸಸ್ಥಾನವೆಂದು ಕರೆಯಲ್ಪಡುವ ಮುಖ್ಬಾ ಪ್ರದೇಶಕ್ಕೂ ಇದು ಅನ್ವಯವಾಗಲಿದೆ. ಶ್ರೀ ಗಂಗೋತ್ರಿ ದೇವಾಲಯ ಸಮಿತಿಯ ಅಧ್ಯಕ್ಷ ಸುರೇಶ್ ಸೆಮ್ವಾಲ್ ಅವರು, ಹಿಂದೂಯೇತರರು ಧಾಮ ಪ್ರವೇಶಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಸಮಿತಿ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ. ಚಳಿಗಾಲದ ತಿಂಗಳುಗಳಲ್ಲಿ ಮುಖ್ಬಾದಲ್ಲಿಯೂ ಇದೇ ನಿಯಮ ಜಾರಿಯಲ್ಲಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬ್ಯಾಂಕ್ ನೌಕರರ ಮುಷ್ಕರ: ಧಾರವಾಡದಲ್ಲಿ ಸಂಯುಕ್ತ ವೇದಿಕೆಯಿಂದ ಪ್ರತಿಭಟನೆ

0

ಧಾರವಾಡ: ಇಂದು ದೇಶಾದ್ಯಂತ ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆ, ಧಾರವಾಡ ಜಿಲ್ಲೆಯಲ್ಲಿ ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.

ಧಾರವಾಡ ನಗರದ ಜುಬಿಲಿ ವೃತ್ತದಲ್ಲಿ ವಿವಿಧ ಸರ್ಕಾರಿ ಬ್ಯಾಂಕ್ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಾರಕ್ಕೆ ಐದು ದಿನ ಮಾತ್ರ ಕೆಲಸದ ದಿನವಾಗಬೇಕು ಎಂಬುದು ಪ್ರಮುಖ ಆಗ್ರಹವಾಗಿದೆ.

ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಜನರಲ್ ಇನ್ಶುರೆನ್ಸ್ ಕಂಪನಿಗಳು ಈಗಾಗಲೇ ವಾರಕ್ಕೆ ಐದು ದಿನ ಕಾರ್ಯ ನಿರ್ವಹಿಸುತ್ತಿರುವುದನ್ನು ಉಲ್ಲೇಖಿಸಿದ ಪ್ರತಿಭಟನಾಕಾರರು, ಬ್ಯಾಂಕ್ ನೌಕರರಿಗೂ ಇದೇ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಮುಷ್ಕರದ ಪರಿಣಾಮವಾಗಿ ಬ್ಯಾಂಕ್ ಸೇವೆಗಳು ಭಾಗಶಃ ಸ್ಥಗಿತಗೊಂಡಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.

Gold Rate: ಚಿನ್ನದ ಬೆಲೆ ಓಟಕ್ಕೆ ಇಂದು ತಾತ್ಕಾಲಿಕ ಬ್ರೇಕ್: ಬೆಳ್ಳಿ ದರದಲ್ಲಿ ಭಾರಿ ಹೆಚ್ಚಳ!

0

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಗಗನಮುಖಿಯಾಗಿದ್ದ ಚಿನ್ನದ ಬೆಲೆಗೆ ಇಂದು ಬ್ರೇಕ್ ಬಿದ್ದಿದ್ದು, ಯಾವುದೇ ಏರಿಕೆ ಅಥವಾ ಇಳಿಕೆ ಕಾಣದೆ ತಟಸ್ಥವಾಗಿಯೇ ಉಳಿದಿದೆ. ಆದರೆ, ಬೆಳ್ಳಿ ಬೆಲೆ ಇಂದು ಭರ್ಜರಿ ಏರಿಕೆ ಕಂಡಿದ್ದು, ಕೆಜಿಗೆ 3 ಲಕ್ಷದ 70 ಸಾವಿರ ರೂಪಾಯಿಗೆ ತಲುಪಿದೆ.

ಜನವರಿ 27, 2026 (ಮಂಗಳವಾರ) ರಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹16,195ಕ್ಕೆ ಸ್ಥಿರವಾಗಿದ್ದು, 10 ಗ್ರಾಂ ಶುದ್ಧ ಚಿನ್ನದ ಬೆಲೆ ₹1,61,950 ಆಗಿದೆ. 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹14,845 ಇದ್ದು, 10 ಗ್ರಾಂಗೆ ₹1,48,450 ಇದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರವೂ ಇದೇ ಮಟ್ಟದಲ್ಲಿದ್ದು, ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ. ಹೀಗಾಗಿ ಆಭರಣ ಮಳಿಗೆಗಳಲ್ಲಿ ದರಗಳಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರಬಹುದು.

ಇನ್ನು ಬೆಳ್ಳಿ ಬೆಲೆ ಇಂದು ಪ್ರತಿ ಗ್ರಾಂಗೆ ₹10 ಏರಿಕೆಯಾಗಿದ್ದು, ಗ್ರಾಂ ದರ ₹370 ಆಗಿದೆ. ಇದರೊಂದಿಗೆ ಕೆಜಿ ಬೆಲೆಯಲ್ಲಿ ₹10,000 ಏರಿಕೆ ಕಂಡುಬಂದಿದ್ದು, ಪ್ರತಿ ಕೆಜಿಗೆ ₹3,70,000 ರೂಪಾಯಿ ದಾಖಲಾಗಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಬೆಳ್ಳಿ ಬೆಲೆ ಸುಮಾರು 200% ನಷ್ಟು ಏರಿಕೆ ಕಂಡಿದ್ದರೆ, ಚಿನ್ನದ ಬೆಲೆ ಸುಮಾರು 80% ವರೆಗೆ ಹೆಚ್ಚಳವಾಗಿದೆ. ಸೌರಶಕ್ತಿ, ಎಲೆಕ್ಟ್ರಿಕ್ ವಾಹನಗಳು (ಇವಿ), ಗ್ರಿಡ್ ಮೂಲಸೌಕರ್ಯ ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಬೆಳ್ಳಿಯ ಬಳಕೆ ಹೆಚ್ಚುತ್ತಿರುವುದರಿಂದ ಅದರ ಬೇಡಿಕೆ ಜಾಸ್ತಿಯಾಗಿದ್ದು,

ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ. ಅದೇ ರೀತಿ, ಚಿನ್ನವು ಸುರಕ್ಷಿತ ಹೂಡಿಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂಬ ನಿರೀಕ್ಷೆಯನ್ನೂ ತಜ್ಞರು ವ್ಯಕ್ತಪಡಿಸಿದ್ದಾರೆ.

ಖ್ಯಾತ ಸೀರಿಯಲ್‌ ನಟಿ ಹಾಗೂ ಪತಿ ಮೇಲೆ ಸಂಬಂಧಿಯಿಂದಲೇ ಭೀಕರ ಹಲ್ಲೆ: ಆಸ್ಪತ್ರೆಗೆ ದಾಖಲು!

ಬೆಂಗಳೂರು: ‘ಗಾಂಧಾರಿ’ ಮೂಲಕ ಮನೆಮಾತಾಗಿರುವ ನಟಿ ಕಾವ್ಯಾ ಗೌಡ ಮತ್ತು ಅವರ ಪತಿ ಸೋಮಶೇಖರ್ ಮೇಲೆ ಅವರದೇ ಸಂಬಂಧಿಕರಿಂದ ಭೀಕರ ದಾಳಿ ನಡೆದಿರುವ ಆರೋಪ ದಾಖಲಾಗಿದೆ.

ನಟಿಯ ಹೆಚ್ಚುತ್ತಿರುವ ಜನಪ್ರಿಯತೆ ಸಹಿಸದೆ ಈ ದಾಳಿ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಆರೋಪಿಗಳೆಂದರೆ ಸೋಮಶೇಖರ್ ಅವರ ಅತ್ತಿಗೆಯ ತಂದೆ ಸೇರಿ ಕುಟುಂಬದವರೇ ಎಂಬುದು ಪ್ರಕರಣಕ್ಕೆ ಇನ್ನಷ್ಟು ಗಂಭೀರತೆ ತಂದಿದೆ.

ಮನೆಗೆ ನುಗ್ಗಿ ದಂಪತಿಯನ್ನು ನಿಂದಿಸಿ ಹಲ್ಲೆ ನಡೆಸಲಾಗಿದೆ. ಸೋಮಶೇಖರ್ ಮೇಲೆ ಚಾಕು ಬಳಸಿ ದಾಳಿ ನಡೆದಿದ್ದು, ಗಾಯಗೊಂಡಿದ್ದಾರೆ. ಕಾವ್ಯಾ ಗೌಡ ಮೇಲೂ ದೈಹಿಕ ದಾಳಿ ನಡೆದಿದೆ. ಜೊತೆಗೆ ಗಂಭೀರ ಬೆದರಿಕೆಗಳನ್ನು ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ಘಟನೆಯ ನಂತರ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ನಟಿ ಕಾವ್ಯಾ ಗೌಡ ಅವರ ಅಕ್ಕ ಭವ್ಯ ಗೌಡ ಅವರು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರೇಮ, ನಂದಿಶ್, ಪ್ರಿಯಾ ಮತ್ತು ರವಿಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಘಟನೆಯಿಂದ ನಟಿ ಕಾವ್ಯಾ ಗೌಡ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದಾರೆ ಎನ್ನಲಾಗಿದೆ.

ನಾಪತ್ತೆಯಾಗಿದ್ದ ವೃದ್ಧ ಪತ್ತೆ: ಗದಗ ಪೊಲೀಸರ ಮಾನವೀಯತೆಗೆ ಮೆಚ್ಚುಗೆ

0

ಗದಗ: ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಅಡ್ನೂರ ಉರುಸ್‌ನಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಗದಗ ಗ್ರಾಮೀಣ ಪೊಲೀಸರು ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಒಪ್ಪಿಸಿ ಮಾನವೀಯತೆ ಮೆರೆದ ಘಟನೆ ಜರುಗಿದೆ.

ಗದಗ ಗ್ರಾಮೀಣ ಠಾಣೆಯ ಸಿಬ್ಬಂದಿಗಳಾದ ಮೆಹಬೂಬ್ ವಡ್ಡಟ್ಟಿ ಹಾಗೂ ಪ್ರಕಾಶ್ ಗಾಣಿಗೇರ ಎಂಬುವವರೇ ಮಾನವೀಯತೆ ಮೆರೆದ ಸಿಬ್ಬಂದಿಗಳು.

ಡಿಸೆಂಬರ್ 31ರಂದು ಅಡ್ನೂರ ಗ್ರಾಮದಿಂದ ಬೆಳಗಿನ ಜಾವ ಅಲ್ಲಾಸಾಬ ಹುಸೇನ್ ಸಾಬ ದೊಡ್ಡಮನಿ (60) ಎಂಬುವವರು ನಾಪತ್ತೆಯಾಗಿದ್ದರು. ಅಂದಿನಿಂದ ಕುಟುಂಬದ ಸದಸ್ಯರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾಗಿರಲಿಲ್ಲ.

ಸೋಮವಾರ ಗದಗ ತಾಲೂಕಿನ ಬಳಗಾನೂರ ಚಿಕೆನಕೊಪ್ಪದ ಶರಣರ ಜಾತ್ರೆಯ ಬಂದೋಬಸ್ತ್‌‌ಗೆ ಹೊರಟಿದ್ದ ಇಬ್ಬರು ಸಿಬ್ಬಂದಿ ದಾರಿಯ ಪಕ್ಕದಲ್ಲಿ ಮಲಗಿದ್ದ ವ್ಯಕ್ತಿಯನ್ನು ನೋಡಿ ಮಾತನಾಡಿಸಿದ್ದಾರೆ. ಆದರೆ ಆತ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನಿತ್ರಾಣಗೊಂಡಿದ್ದಾತನನ್ನು ಬಳಗಾನೂರಿಗೆ ಕರೆದುಕೊಂಡು ಹೋಗಿ ಜ್ಯೂಸ್ ಕುಡಿಸಿದ್ದಾರೆ. ಇದರಿಂದಾಗಿ ಚೇತರಿಸಿಕೊಂಡ ಆ ವ್ಯಕ್ತಿ ತೊದಲುತ್ತಾ, ಅಸ್ಪಷ್ಟವಾಗಿ ಸಣ್ಣ ಧ್ವನಿಯಲ್ಲಿ ಮಾತನಾಡಿದಾಗ ಆತ ಯಾರು, ಎಲ್ಲಿಯವನು ಎಂಬ ಮಾಹಿತಿ ತಿಳಿದಿಲ್ಲ. ನಂತರ ಬಿಳೆಹಾಳೆ ಹಾಗೂ ಪೆನ್ನು ಕೊಟ್ಟ ಪೊಲೀಸರು, ಆ ಹಾಳೆಯಲ್ಲಿ ಬರೆಯಲು ಹೇಳಿದಾಗ ಆತನ ಹೆಸರು, ತನ್ನ ಊರಿನ ಹೆಸರು ಬರೆದಿದ್ದಾನೆ. ಆಗ ಮಾಹಿತಿ ಕಲೆ ಹಾಕಿದ ಪೊಲೀಸರು, ಅಣ್ಣಿಗೇರಿ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾದ ಬಗ್ಗೆ ತಿಳಿದುಕೊಂಡು ಅವರ ಕುಟುಂಬದ ಸದಸ್ಯರನ್ನು ಕರೆಸಿ ಅವರಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.

ಮೆಹಬೂಬ್ ವಡ್ಡಟ್ಟಿ ಹಾಗೂ ಪ್ರಕಾಶ್ ಗಾಣಿಗೇರ ಅವರ ಈ ಕಾರ್ಯಕ್ಕೆ ವೃದ್ಧ ಅಲ್ಲಾಸಾಬನ ಕುಟುಂಬಸ್ಥರು ಹಾಗೂ ಪೊಲೀಸ್ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

error: Content is protected !!