Home Blog Page 116

ಸುನೇತ್ರಾ ಪವಾರ್ ಬಾರಾಮತಿ ಉಪಚುನಾವಣೆಗೆ ಅಭ್ಯರ್ಥಿಯಾಗಿ ಆಯ್ಕೆ!

0

ಮುಂಬೈ: ಅಜಿತ್ ಪವಾರ್ ನಿಧನದಿಂದ ತೆರವಾಗಿರುವ ಬಾರಾಮತಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸುನೇತ್ರಾ ಪವಾರ್ ಅವರನ್ನು ಅಭ್ಯರ್ಥಿಯಾಗಿ ಅಂತಿಮಗೊಳಿಸಲಾಗಿದೆ. ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸುನೇತ್ರಾ ಪವಾರ್ ಅವರ ಹೆಸರನ್ನು ರಾಷ್ಟ್ರೀಯ ಅಧ್ಯಕ್ಷೆಯಾಗಿ ಅಧಿಕೃತವಾಗಿ ಅನುಮೋದಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾದ ನಂತರ ಪಕ್ಷದೊಳಗಿನ ಬೆಳವಣಿಗೆಗಳ ಹಿನ್ನೆಲೆ ಅವರನ್ನು ಮುಂದಿರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಪ್ರಸ್ತುತ ಸುನೇತ್ರಾ ಪವಾರ್ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಶಾಸಕಾಂಗ ಪಕ್ಷದ ನಾಯಕಿಯಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇದೇ ಸಭೆಯಲ್ಲಿ ರಾಜ್ಯಸಭೆಗೆ ಪಾರ್ಥ್ ಪವಾರ್ ಅವರ ನಾಮನಿರ್ದೇಶನವನ್ನು ಅಂತಿಮಗೊಳಿಸಲಾಗಿದೆ.

ಸುನೇತ್ರಾ ಪವಾರ್ ಅವರ ರಾಜೀನಾಮೆಯಿಂದ ತೆರವಾದ ರಾಜ್ಯಸಭಾ ಸ್ಥಾನ ಖಾಲಿಯಾಗಿತ್ತು. ಮಹಾರಾಷ್ಟ್ರದಲ್ಲಿ ಖಾಲಿ ಇರುವ ಏಳು ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 16ರಂದು ಚುನಾವಣೆ ನಡೆಯಲಿದೆ.

ಜನವರಿ 28ರಂದು ನಡೆದ ವಿಮಾನ ಅಪಘಾತದಲ್ಲಿ ಮಾಜಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನರಾದ ಬಳಿಕ ಬಾರಾಮತಿ ವಿಧಾನಸಭಾ ಸ್ಥಾನ ಖಾಲಿಯಾಯಿತು.

2024ರ ವಿಧಾನಸಭಾ ಚುನಾವಣೆಯಲ್ಲಿ ಅಜಿತ್ ಪವಾರ್ ಅವರು ತಮ್ಮ ಸೋದರಳಿಯ ಹಾಗೂ ಎನ್ಸಿಪಿ (ಎಸ್ಪಿ) ಅಭ್ಯರ್ಥಿ ಯುಗೇಂದ್ರ ಪವಾರ್ ಅವರನ್ನು 1,00,899 ಮತಗಳ ಅಂತರದಿಂದ ಸೋಲಿಸಿದ್ದರು. ಅಜಿತ್ ಪವಾರ್ 1,81,132 ಮತಗಳನ್ನು ಪಡೆದರೆ, ಯುಗೇಂದ್ರ ಪವಾರ್ 80,233 ಮತಗಳನ್ನು ಗಳಿಸಿದ್ದರು. ಉಪಚುನಾವಣೆಯ ವೇಳಾಪಟ್ಟಿ ಹಾಗೂ ಅಧಿಕೃತ ಅಧಿಸೂಚನೆ ಶೀಘ್ರದಲ್ಲೇ ಪ್ರಕಟವಾಗುವ ಸಾಧ್ಯತೆ ಇದೆ.

ಶಕ್ತಿಪೀಠ ಶಿರಸಿಯಲ್ಲಿ ಭಕ್ತಿ ಸಂಭ್ರಮ: ಮಾರಿಕಾಂಬಾ ದೇವಿಯ ರಥಾರೋಹಣಕ್ಕೆ ಸಾವಿರಾರು ಭಕ್ತರ ಸಾಕ್ಷಿ

0

ಶಿರಸಿ: ದಕ್ಷಿಣ ಭಾರತದ ಅತಿದೊಡ್ಡ ಹಾಗೂ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ ದೊರೆತಿದ್ದು, ಜಾತ್ರೆಯು ಮತ್ತೆ ಭಕ್ತಿ ಸಂಭ್ರಮದ ಕೇಂದ್ರಬಿಂದುವಾಗಿದೆ. ಉತ್ತರ ಕನ್ನಡದ ಜನರ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಈ ಉತ್ಸವದಲ್ಲಿ ಶ್ರೀ ಮಾರಿಕಾಂಬಾ ದೇವಾಲಯ ರಥೋತ್ಸವ ಪ್ರಮುಖ ಆಕರ್ಷಣೆಯಾಗಿದೆ.

ನಿನ್ನೆ ನಡೆದ ಕಲ್ಯಾಣೋತ್ಸವದ ಬಳಿಕ ಇಂದು ಮುಂಜಾನೆ ರಥಾರೋಹಣ ನೆರವೇರಿದ್ದು, ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಭಾವಪರವಶರಾದರು. ಜೈಕಾರದ ಘೋಷಣೆಗಳು ನಗರದ ತುಂಬೆಲ್ಲ ಮೊಳಗಿದವು.

ಜಾತ್ರೆಯು ಒಂಬತ್ತು ದಿನಗಳ ಕಾಲ ನಡೆಯಲಿದ್ದು, ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಭಕ್ತರ ಅನುಕೂಲಕ್ಕಾಗಿ ಸ್ಥಳೀಯ ಆಡಳಿತ ಹಾಗೂ ದೇವಸ್ಥಾನ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ಅಪರೂಪದ ಖಾಯಿಲೆಗಳಿಂದ ಬಳಲುವವರು ಆತ್ಮವಿಶ್ವಾಸ ಕಳೆದುಕೊಳ್ಳದಿರಿ, ಹಣದ ಚಿಂತೆ ಬಿಡಿ: ಡಿ.ಕೆ. ಶಿವಕುಮಾರ್

0

ಬೆಂಗಳೂರು: ಹಿಮೋಫಿಲಿಯಾ ಹಾಗೂ ಇತರೇ ಅಪರೂಪದ ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಜೊತೆ ಕಾಂಗ್ರೆಸ್ ಸರ್ಕಾರ ನಿಲ್ಲುತ್ತದೆ. ಹಣದ ಬಗ್ಗೆ ಚಿಂತೆ ಮಾಡಬೇಡಿ. ಆದರೆ ಯಾರೂ ಸಹ ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಧೈರ್ಯ ತುಂಬಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಕುಸುಮ ಸಂಜೀವಿನಿ’ ಹಿಮೋಫಿಲಿಯ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಹಾಗೂ 108 ಆಂಬುಲೆನ್ಸ್ ಸೇವೆಗಳನ್ನು ಡಿಸಿಎಂ ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.

“ಒಬ್ಬ ರೋಗಿಗೆ ಚುಚ್ಚುಮದ್ದು ನೀಡಲು ವರ್ಷಕ್ಕೆ ಐದು ಲಕ್ಷ ಖರ್ಚಾಗಲಿದೆ. ಹಿಮೋಫಿಲಿಯಾದಂತಹ ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಬದುಕಿನಲ್ಲಿ ಭರವಸೆ ಮೂಡಿಸಬೇಕು, ಅವರ ಬದುಕಿಗೆ ಶಕ್ತಿ ತುಂಬಬೇಕು ಎಂದು ನಮ್ಮ ಸರ್ಕಾರ ಹೊರಟಿದೆ. ಇಡೀ ದೇಶದಲ್ಲಿ ನಾವು ಮೊದಲ ಬಾರಿಗೆ ಸಹಾಯಹಸ್ತ ಚಾಚಿದೆ” ಎಂದರು.

“ಈ ರೋಗ ಬಂದ ತಕ್ಷಣ ಭವಿಷ್ಯವೇ ಇಲ್ಲ ಎಂದು ಭರವಸೆ ಕಳೆದುಕೊಳ್ಳಬಾರದು. ಮಕ್ಕಳು, ತಂದೆತಾಯಂದಿರ ಜೊತೆ ನಾವಿದ್ದೇವೆ. ಇಷ್ಟೊಂದು ಹಣ ಹೊಂದಿಸಲು ಎಲ್ಲರಿಗೂ ಸಾಧ್ಯವಿಲ್ಲ. ಆದ ಕಾರಣ ನಾವು ನಿಮ್ಮಜೊತೆಯಾಗಿದ್ದೇವೆ. ಯಾವುದೇ ರೋಗ ಆಗಿರಬಹುದು ಬಯಸಿ ಬರುವಂತಹದ್ದಲ್ಲ. ಮುಗ್ದ ಮಕ್ಕಳು ಇದರಿಂದ ಬಳಲುತ್ತಿದ್ದಾರೆ. ಪ್ರಕೃತಿ ನಿಯಮ ಎಂದೂ ಹೇಳಬಹುದು. ಇಲ್ಲಿ ತಂದೆ ತಾಯಿ, ಮಕ್ಕಳದ್ದು ಸೇರಿದಂತೆ ಯಾರದ್ದೂ ತಪ್ಪಿಲ್ಲ. ಇದನ್ನ ನಾವು ಸ್ವೀಕರಿಸಲೇ ಬೇಕು” ಎಂದರು.

“ನಮ್ಮ ಆರೋಗ್ಯ ಇಲಾಖೆ ಇಡೀ ದೇಶದಲ್ಲಿಯೇ ಕ್ರಾಂತಿ ಮಾಡುತ್ತಿದೆ. ದಿನೇಶ್‌ ಅವರು ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಜನರು ಎದ್ದುನಿಂತು ಚಪ್ಪಾಳೆ ಹೊಡೆಯಬೇಡಿ ಬದಲಾಗಿ. ಮತ್ತೆ ಇದೇ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಆಶೀರ್ವದಿಸಿ.

ಆಗ ಇನ್ನೂ ಹೆಚ್ಚಿನ ಸೇವೆ ಮಾಡುತ್ತೇವೆ. ಸರ್ಕಾರವೇ ರೋಗಿಗಳ ನೋವಿಗೆ ಜೊತೆಯಾಗಬೇಕು ಎಂದು ದಿನೇಶ್‌ ಗುಂಡುರಾವ್‌ ಅವರು ಸಂಪುಟದಲ್ಲಿ ಈ ವಿಚಾರ ಮಂಡಿಸಿ ಸಹಾಯಕ್ಕೆ ನಿಂತಿದ್ದಾರೆ. ಇದಕ್ಕೆ ಬೆನ್ನೆಲುಬಾಗಿ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ ಪ್ರಕಾಶ್‌ ಪಾಟೀಲ್‌ ಅವರು ಜೊತೆಯಾಗಿದ್ದಾರೆ” ಎಂದರು.

ಸ್ಕ್ರೀನ್ ಗಾರ್ಡ್ ವಿಚಾರಕ್ಕೆ ಮಾರಾಮಾರಿ! ಚಿತ್ರದುರ್ಗದಲ್ಲಿ ಮೊಬೈಲ್ ಅಂಗಡಿ ಮಾಲೀಕನಿಗೆ ಚಾಕು ಇರಿತ, ಜಿಲ್ಲಾಸ್ಪತ್ರೆ ಮುಂದೆ ಉಗ್ರ ಪ್ರತಿಭಟನೆ

0

ಚಿತ್ರದುರ್ಗ: ನಗರದ ಸಂತೆಮೈದಾನ ಬಳಿಯ ಮೊಬೈಲ್ ಅಂಗಡಿಯಲ್ಲಿ ನಡೆದ ತೀವ್ರ ವಾಗ್ವಾದ ಕೊನೆಗೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಿರುಗಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಅಂಗಡಿ ಮಾಲೀಕ ವಿಕ್ರಮ್ ಚೌದ್ರಿ ಅವರಿಗೆ ಚಾಕು ಇರಿತ ನಡೆಸಲಾಗಿದೆ.

ಮಾಹಿತಿಯ ಪ್ರಕಾರ, ಮೊಬೈಲ್ ಸ್ಕ್ರೀನ್ ಗಾರ್ಡ್ ಖರೀದಿಸಿದ್ದ ಯುವಕನು ಅದನ್ನು ಬದಲಾಯಿಸಲು ಅಂಗಡಿಗೆ ಬಂದಿದ್ದಾನೆ. ಬೇರೆ ಬ್ರ್ಯಾಂಡ್‌ನ ಸ್ಕ್ರೀನ್ ಗಾರ್ಡ್ ನೀಡಲು ಹೆಚ್ಚುವರಿ ₹100 ನೀಡುವಂತೆ ವಿಕ್ರಮ್ ಕೇಳಿದ್ದರೆಂದು ಹೇಳಲಾಗುತ್ತಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯುವಕನೊಂದಿಗೆ ಮಾತಿನ ಚಕಮಕಿ ಉಂಟಾಗಿ, ತೀವ್ರ ವಾಗ್ವಾದದ ನಡುವೆ ಚಾಕು ಇರಿತ ನಡೆದಿದೆ ಎಂದು ಆರೋಪಿಸಲಾಗಿದೆ.
ಗಂಭೀರವಾಗಿ ಗಾಯಗೊಂಡ ವಿಕ್ರಮ್ ಚೌದ್ರಿಯನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಸುದ್ದಿ ಹರಡುತ್ತಿದ್ದಂತೆ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಹಿಂದೂ ಕಾರ್ಯಕರ್ತರು ಹಾಗೂ ಶ್ರೀರಾಮ ಸೇನೆ ಕಾರ್ಯಕರ್ತರು ಸೇರಿ ಪ್ರತಿಭಟನೆ ನಡೆಸಿದರು. ಕೆಲವರು ರಸ್ತೆ ಬಂದ್ ಮಾಡಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ಆರೋಪಿಯನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ನಾಳೆ ಚಿತ್ರದುರ್ಗ ಬಂದ್‌ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಗಾಯಾಳುವಿನ ಆರೋಗ್ಯ ವಿಚಾರಿಸಿದ ಅವರು, ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಶಾಂತಿ ಕಾಪಾಡಲು ಮನವಿ ಮಾಡಿದರು.

ಜಿಲ್ಲಾಸ್ಪತ್ರೆ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮಿಲೆಟ್ ಲಡ್ಡು ಯೋಜನೆಯಲ್ಲಿ ದೊಡ್ಡ ದಂಧೆ? ಬೆಳಗಾವಿ ಅಂಗನವಾಡಿಗಳಲ್ಲಿ ಹುಳ ಬಿದ್ದ ಆಹಾರ ಪೂರೈಕೆ ಆರೋಪ

0

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಂಗನವಾಡಿ ಮಕ್ಕಳಿಗೆ ಎಕ್ಸ್‌ಪೈರ್ಡ್ ಸಿರಿಧಾನ್ಯ ಲಡ್ಡು ವಿತರಣೆ ಮಾಡಲಾಗಿದೆ ಎಂಬ ಆರೋಪ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮೂರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಕನ್ನಡ ಹೋರಾಟಗಾರ್ತಿ ಕಸ್ತೂರಿಭಾವಿ, ಆರು ತಿಂಗಳ ಹಿಂದೆಯೇ ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಿರುವುದನ್ನು ಪತ್ತೆಹಚ್ಚಿದರೆಂದು ತಿಳಿಸಿದ್ದಾರೆ. ಸಂಬಂಧಿಸಿದ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.

ವಿಡಿಯೋದಲ್ಲಿ ಹುಳ ಬಿದ್ದ ರವಾ, ಅವಧಿ ಮುಗಿದ ಸಜ್ಜೆ ಲಡ್ಡು, ಸಾಂಬಾರ್ ಪುಡಿ ಮತ್ತು 2025ರ ಅಕ್ಟೋಬರ್‌ನಲ್ಲಿ ಎಕ್ಸ್‌ಪೈರ್ಡ್ ಆಗಿರುವ ಮಿಲೆಟ್ ಲಡ್ಡು ವಿತರಣೆ ಮಾಡುತ್ತಿರುವುದು ಗೋಚರಿಸುತ್ತದೆ ಎಂದು ಆರೋಪಿಸಲಾಗಿದೆ.

ಅಂಗನವಾಡಿ ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟವಾಡಲಾಗಿದೆ ಎಂದು ಪೋಷಕರು ಕಿಡಿಕಾರಿದ್ದಾರೆ. ಅವಧಿ ಮುಗಿದ ಆಹಾರ ಸೇವನೆಯಿಂದ ಅಜೀರ್ಣ, ವಾಂತಿ-ಭೇದಿ, ಜ್ವರ ಉಂಟಾಗುವ ಸಾಧ್ಯತೆ ಇರುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

 

ಯಲಹಂಕದಲ್ಲಿ ಭೀಕರ ಅಪಘಾತ: ಹೆಲ್ಮೆಟ್ ಇಲ್ಲದೆ ತ್ರಿಬಲ್ ರೈಡ್– ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

0

ಬೆಂಗಳೂರು: ತ್ರಿಬಲ್ ರೈಡಿಂಗ್ ಮಾಡಿಕೊಂಡು ಹೋಗುತ್ತಿದ್ದ ಬುಲೆಟ್ ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿರುವ ದಾರುಣ ಘಟನೆ ಯಲಹಂಕ ನ್ಯೂ ಟೌನ್‌ನ ಉನ್ನಿಕೃಷ್ಣನ್ ಜಂಕ್ಷನ್ ಬಳಿ ನಡೆದಿದೆ.

ಮೃತರನ್ನು ಕಿರಣ್ (25) ಮತ್ತು ಯಶವಂತ್ (25) ಎಂದು ಗುರುತಿಸಲಾಗಿದೆ. ಬೈಕ್‌ನ ಹಿಂಬದಿ ಸವಾರ ಗೌತಮ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ (ಫೆ.24) ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಮೂವರು ಯುವಕರು ಹೆಲ್ಮೆಟ್ ಧರಿಸದೇ ಬುಲೆಟ್ ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್ ತೆರಳುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಬೈಕ್ ಚಾಲಕ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯಶವಂತ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮರಣ ಸಂಭವಿಸಿದೆ.

ಗಂಭೀರವಾಗಿ ಗಾಯಗೊಂಡ ಗೌತಮ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ನರ್ಸ್ ನಿರ್ಲಕ್ಷ್ಯಕ್ಕೆ ಕೈ ಬೆರಳನ್ನೇ ಕಳೆದುಕೊಂಡ 6 ತಿಂಗಳ ಮಗು: ಆಸ್ಪತ್ರೆ ವಿರುದ್ಧ ದೂರು ದಾಖಲು

0

ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 6 ತಿಂಗಳ ಗಂಡು ಮಗುವಿನ ಎಡಗೈ ಕಿರು ಬೆರಳಿನ ಭಾಗವನ್ನೇ ನರ್ಸ್ ಕತ್ತರಿಸಿದ ಆರೋಪ ಇಂದಿರಾನಗರದ ಚಿನ್ಮಯ ಮಿಷನ್ ಆಸ್ಪತ್ರೆಯಲ್ಲಿ ಕೇಳಿ ಬಂದಿದೆ.

ಜ್ವರ ಹಾಗೂ ಶೀತದಿಂದ ಬಳಲುತ್ತಿದ್ದ ಮಗುವನ್ನು ಫೆಬ್ರವರಿ 19ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೆಬ್ರವರಿ 24ರವರೆಗೆ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲು ನಿರ್ಧರಿಸಲಾಗಿತ್ತು. ಈ ವೇಳೆ ಡ್ರಿಪ್ಸ್‌ಗೆ ಹಾಕಿದ್ದ ಡ್ರೆಸ್ಸಿಂಗ್ ತೆಗೆದುಹಾಕುವ ಸಂದರ್ಭ ನರ್ಸ್ ನಿರ್ಲಕ್ಷ್ಯದಿಂದ ಮಗುವಿನ ಎಡಗೈ ಕಿರು ಬೆರಳಿನ ಅರ್ಧ ಭಾಗ ಕಟ್ ಆಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಗಂಭೀರ ಗಾಯದಿಂದ ಮಗು ನರಳಾಡುತ್ತಿದ್ದು, ಈ ಕುರಿತು ಪೊಲೀಸ್ ದೂರು ದಾಖಲಾಗಿದೆ.

ದೂರಿನಲ್ಲಿ ಏನಿದೆ?

ಮಗುವಿನ ತಂದೆ ವಿಜಯ್ ಕುಮಾರ್ ನೀಡಿದ ದೂರಿನಲ್ಲಿ, “ಬಿಲ್ಲಿಂಗ್ ಕೌಂಟರ್‌ಗೆ ಹಣ ಪಾವತಿಸಲು ಹೋಗಿದ್ದಾಗ ನರ್ಸ್ ಡ್ರೆಸ್ಸಿಂಗ್ ತೆಗೆಯುವ ವೇಳೆ ನಿರ್ಲಕ್ಷ್ಯ ತೋರಿದ್ದು, ಮಗುವಿನ ಬೆರಳು ಕತ್ತರಿಸಿದೆ. ವೈದ್ಯರು, ಸಿಬ್ಬಂದಿ ಹಾಗೂ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ಘಟನೆ ಬಳಿಕ ಮಗುವನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಕರೆದೊಯ್ದು ಗಾಯಕ್ಕೆ ಡ್ರೆಸ್ಸಿಂಗ್ ಮಾಡಲಾಗಿದೆ. “ಯಾವುದೇ ದೊಡ್ಡ ಗಾಯವಾಗಿಲ್ಲ, ಮಗು ಚಿಕ್ಕದಾಗಿರುವ ಕಾರಣ ಗಾಯ ಬೇಗ ಗುಣವಾಗುತ್ತದೆ” ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದರೆಂದು ಪೋಷಕರು ತಿಳಿಸಿದ್ದಾರೆ. ಆದರೆ ಮಗುವಿನ ಅರ್ಧ ಬೆರಳು ಕಟ್ ಆಗಿದೆ ಎಂದು ವಿಜಯ್ ಕುಮಾರ್ ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Gadag Breaking: ಡಾ. ಚಂದ್ರು ಲಮಾಣಿ ಬಂಧನ ಖಂಡಿಸಿ ಅಭಿಮಾನಿಗಳಿಂದ ಬೃಹತ್ ಪ್ರತಿಭಟನೆ!

0

ಗದಗ: ಲಂಚ ಪ್ರಕರಣದಲ್ಲಿ ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಬಂಧನವಾಗಿರುವ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ಅವರ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದರು.

ಶಾಸಕರ ಬಂಧನವನ್ನು ಖಂಡಿಸಿ ಅಭಿಮಾನಿಗಳು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಲಕ್ಷ್ಮೇಶ್ವರದ ಸೋಮೇಶ್ವರ ತೇರಿನಲ್ಲಿರುವ ಮನೆಯಿಂದ ಆರಂಭವಾದ ರ‍್ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ ವಿರುದ್ಧದ ಕ್ರಮವನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಅಲ್ಲದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಬೆಂಗಳೂರಿನಲ್ಲಿ GST ಅಧಿಕಾರಿಗಳ ಸೋಗಿನಲ್ಲಿ 5 ಲಕ್ಷ ಸುಲಿಗೆ: ಇಬ್ಬರು ಅರೆಸ್ಟ್

0

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಲಾಖೆಯ ಅಧಿಕಾರಿಗಳಂತೆ ನಟಿಸಿ ವ್ಯಾಪಾರಿಯನ್ನು ಬೆದರಿಸಿ 5 ಲಕ್ಷ ರೂಪಾಯಿ ಸುಲಿಗೆ ಮಾಡಿದ ಆರೋಪದಲ್ಲಿ ಇಬ್ಬರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನಾಗರಾಜ್ ಹಾಗೂ ದಾದಾಪೀರ್ ಎಂದು ಗುರುತಿಸಲಾಗಿದೆ. ಇವರು ಬನಶಂಕರಿಯಲ್ಲಿರುವ ಜಿಎಸ್‌ಟಿ ಇಲಾಖೆಯ ಪ್ರಧಾನ ಆಯುಕ್ತರ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಎಲ್‌ಟಿಎಸ್ ಹಾಗೂ ಇಂಟಲಿಜೆನ್ಸ್ ಅಧಿಕಾರಿಗಳಂತೆ ನಕಲಿ ಐಡಿ ಕಾರ್ಡ್‌ಗಳನ್ನು ತಯಾರಿಸಿಕೊಂಡಿದ್ದ ಆರೋಪಿಗಳು, ಜನವರಿ 10ರಂದು ಪೀಣ್ಯದಲ್ಲಿರುವ ಒಬ್ಬ ಗುಟ್ಕಾ ವ್ಯಾಪಾರಿಯನ್ನು ಬೆದರಿಸಿ 5 ಲಕ್ಷ ರೂಪಾಯಿ ವಸೂಲಿ ಮಾಡಿದ್ದರು ಎಂದು ತಿಳಿದುಬಂದಿದೆ.

ಆರೋಪಿಗಳ ಚಟುವಟಿಕೆ ಬಗ್ಗೆ ಅನುಮಾನಗೊಂಡ ಕಚೇರಿ ಅಧಿಕಾರಿಗಳು ಫೆಬ್ರವರಿ 17ರಂದು ಅವರು ವಾಸವಿದ್ದ ಕಚೇರಿಯ ಕೊಠಡಿಯಲ್ಲಿ ತಪಾಸಣೆ ನಡೆಸಿದರು. ಈ ವೇಳೆ ನಕಲಿ ಐಡಿ ಕಾರ್ಡ್‌ಗಳು ಹಾಗೂ ಸರ್ಚ್ ವಾರೆಂಟ್ ಪ್ರತಿಗಳು ಪತ್ತೆಯಾಗಿವೆ.

ತಕ್ಷಣ ಜಿಎಸ್‌ಟಿ ಅಧಿಕಾರಿಗಳು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆನೇಕಲ್ ನಲ್ಲಿ ಹೆಮ್ಮೆಯ ಕಥೆ: ಬಡತನವನ್ನು ಮೆಟ್ಟಿ ಜಡ್ಜ್ ಆದ ಆಟೋ ಚಾಲಕನ ಮಗಳು!

0

ಬೆಂಗಳೂರು: ಬಡತನದ ನಡುವೆಯೂ ಕನಸುಗಳನ್ನು ಕೈಬಿಡದೇ ಸಾಧನೆ ಮಾಡಿದ ಹೆಮ್ಮೆಯ ಕಥೆ ಇದು. ಬೆಂಗಳೂರು ಹೊರವಲಯದ ತಿರುಪಾಳ್ಯ ಗ್ರಾಮದ ನಾಗಿಣಿ ಎಲ್. ಅವರು ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗುವ ಮೂಲಕ ಸಾಧನೆಯ ಶಿಖರಕ್ಕೇರಿದ್ದಾರೆ.

ನಾಗಿಣಿಯ ತಂದೆ ಲಕ್ಷ್ಮಣ್ ದಿನವಿಡೀ ಆಟೋ ಚಾಲನೆ ಮಾಡಿ ಕುಟುಂಬವನ್ನು ಸಾಗಿಸುತ್ತಿದ್ದರು. ತಾಯಿ ಮಂಜುಳಾ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದರು. ಆರ್ಥಿಕ ಸಂಕಷ್ಟಗಳಿದ್ದರೂ ಮಗಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಲಿಲ್ಲ. ಮಗಳು ಓದಿ ದೊಡ್ಡವಳಾಗಬೇಕು ಎಂಬ ಕನಸಿಗಾಗಿ ಅವರು ನಿರಂತರ ಶ್ರಮಿಸಿದರು.

ನಾಗಿಣಿ ಬಾಲ್ಯದಿಂದಲೇ ಪರಿಶ್ರಮಿ. ಬೆಳಗ್ಗೆ ತಾಯಿಗೆ ಹೂ ಮಾರಾಟದಲ್ಲಿ ಸಹಾಯ ಮಾಡಿ ನಂತರ ಶಾಲೆಗೆ ತೆರಳುತ್ತಿದ್ದಳು. 1ರಿಂದ 10ನೇ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಿದರು. ಬಳಿಕ ಕಾನೂನು ಪದವಿ ಪಡೆದು ವಕೀಲೆಯಾಗಿ ಸೇವೆ ಸಲ್ಲಿಸಿದರು. ವೃತ್ತಿಯ ಜೊತೆಗೆ ನ್ಯಾಯಾಂಗ ಪರೀಕ್ಷೆಗೆ ತಯಾರಿ ನಡೆಸಿ ಹಗಲಿರುಳು ಅಧ್ಯಯನ ಮಾಡಿದ ನಾಗಿಣಿ, ಇದೀಗ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ.

ಮಗಳ ಸಾಧನೆ ಕುರಿತು ತಾಯಿ ಮಂಜುಳಾ ಸಂತಸ ವ್ಯಕ್ತಪಡಿಸಿ, ನಮ್ಮ ಕಷ್ಟ ವ್ಯರ್ಥವಾಗಲಿಲ್ಲ. ಮಗಳು ಶ್ರಮಪಟ್ಟು ಓದಿದ್ದಕ್ಕೆ ಇಂದು ಈ ಗೌರವ ಸಿಕ್ಕಿದೆ ಎಂದರು. ತಂದೆ ಲಕ್ಷ್ಮಣ್ ಕೂಡ, “ಬಡತನ ಇದ್ದರೂ ಮಕ್ಕಳಿಗೆ ಶಿಕ್ಷಣ ನೀಡಬೇಕು. ಮಗಳು ನಮ್ಮ ಕನಸು ನನಸು ಮಾಡಿದ್ದಾಳೆ.

ನ್ಯಾಯಾಧೀಶೆಯಾಗಿ ನೊಂದವರಿಗೆ ನ್ಯಾಯ ನೀಡಲಿ ಎಂದು ಆಶಿಸಿದರು. ನಾಗಿಣಿಯ ಸಾಧನೆ ಇಂದಿನ ಯುವ ಸಮುದಾಯಕ್ಕೆ ಪ್ರೇರಣೆಯಾಗಿದೆ. ಸಂಕಲ್ಪ ಮತ್ತು ಪರಿಶ್ರಮ ಇದ್ದರೆ ಬಡತನ ಸಾಧನೆಗೆ ಅಡ್ಡಿಯಲ್ಲ ಎಂಬುದಕ್ಕೆ ಅವರು ಜೀವಂತ ಸಾಕ್ಷಿಯಾಗಿದ್ದಾರೆ.

error: Content is protected !!