ಬೆಂಗಳೂರು: ಬೆಂಗಳೂರಿನ ಡೇರಿ ಸರ್ಕಲ್ ಬಳಿ ಬುಧವಾರ ಮಧ್ಯಾಹ್ನ ಹಾಡಹಗಲೇ 7.11 ಕೋಟಿ ರೂ. ದರೋಡೆ ಮಾಡಿರುವ ಘಟನೆ ನಡೆದಿದೆ. ಎಟಿಎಂಗಳಿಗೆ ಹಣ ಹಾಕಲು ಹೋಗುತ್ತಿದ್ದ ಸಿಎಂಎಸ್ ವಾಹನವನ್ನು ಹೈಜಾಕ್ ಮಾಡಿ ಬಳಿಕ ಡೇರಿ ಸರ್ಕಲ್ ಫ್ಲೈಓವರ್ ಮೇಲೆ ನಿಲ್ಲಿಸಿ ಬರೋಬ್ಬರಿ 7.11 ಕೋಟಿ ರೂ. ದೋಚಿಕೊಂಡು ಹೋಗಿದ್ದಾರೆ. ಇನ್ನು ಈ ಸಂಬಂಧ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪೊಲೀಸರು ಎಲ್ಲ ಮಾಹಿತಿ ಪಡೆದುಕೊಂಡಿದ್ದಾರೆ. ದರೋಡೆಕೋರರು ಕರ್ನಾಟಕದವರಾ? ಅವರು ಹೊರಗಿನವರಾ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಇನೋವಾ, ಸ್ವಿಫ್ಟ್ ಕಾರಿಗೆ ನಂಬರ್ ಪ್ಲೇಟ್ ಹಾಕ್ಕೊಂಡಿದ್ದರು. ಅವರು ಹೊರಗೆ ದಾಟಿದ್ದಾರಾ? ಯಾವ ವಾಹನದಲ್ಲಿ ಹಣ ಸಾಗಿಸಿದ್ದಾರೆ? ವಾಹನವು ರಾಜ್ಯದ ಹೊರಗೆ ಹೋಗಿದೆಯಾ? ಎಂದು ಹುಡುಕ್ತಿದ್ದೇವೆ.
ವಾಹನ ಬದಲಾಯಿಸಿದ್ದಾರೆ ಎಂಬುದು ಗೊತ್ತಾಗಿದೆ. ಖಂಡಿತಾ ದರೋಡೆಕೋರರನ್ನು ಹಿಡಿಯುತ್ತೇವೆ. ಘಟನೆ ವೇಳೆ ಯಾವೆಲ್ಲಾ ವಾಹನಗಳು ಓಡಾಡಿದ್ದವು? ರಾಜ್ಯದ ಹೊರಗೆ ಹೋಗಿರುವ ವಾಹನಗಳೆಷ್ಟು? ಎಲ್ಲದರ ಸಿಸಿಟಿವಿ ದೃಶ್ಯ ಪರಿಶೀಲಿಸುತ್ತಿದ್ದೇವೆ ಎಂದು ತಿಳಿಸಿದರು.

