Home Blog Page 150

ಗದಗ| ಸಿಲಿಂಡರ್ ಅಭಾವ; ನರಗುಂದದ ಇಂಡಿಯನ್ ಏಜೆನ್ಸಿಯಲ್ಲೂ ನೋ ಸ್ಟಾಕ್, ಖಾಲಿ ಸಿಲಿಂಡರ್ ಜೊತೆ ಮರಳಿದ ಜನ!

0

ಗದಗ:– ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವಣ ಯುದ್ಧದ ಪರಿಣಾಮವಾಗಿ ದೇಶದೆಲ್ಲೆಡೆ ಎಲ್​ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿದ್ದು, ಜನತೆ ಸಂಕಷ್ಟಕ್ಕೀಡಾಗಿದ್ದಾರೆ.

ಅದರಂತೆ ಮಧ್ಯಪ್ರಾಚ್ಯದ ಯುದ್ಧದ ಎಫೆಕ್ಟ್ ಇದೀಗ ಗದಗ ಜಿಲ್ಲೆಗೂ ತಟ್ಟಿದೆ. ಗದಗ ಜಿಲ್ಲೆಯ ನರಗುಂದ ಪಟ್ಟಣದ ಇಂಡಿಯನ್ ಗ್ಯಾಸ್ ಏಜೆನ್ಸಿಯಲ್ಲಿ ಸಿಲಿಂಡರ್ ಸ್ಟಾಕ್ ಕೊನೆಗೊಂಡಿದೆ. ಕಮರ್ಷಿಯಲ್ ಮತ್ತು ಗೃಹ ಬಳಕೆಗೆ ಬೇಕಾದ ಗ್ಯಾಸ್ ಸಿಲಿಂಡರ್ ಲಭ್ಯವಾಗದೇ ಸಾರ್ವಜನಿಕರು ಪರದಾಟ ನಡೆಸಿದ್ದಾರೆ.

ಇನ್ನೂ ಗ್ರಾಮೀಣ ಪ್ರದೇಶದಿಂದ ಸಿಲಿಂಡರ್ ಪಡೆಯಲು ಬಂದವರು ಗ್ಯಾಸ್ ಸಿಗದೆ ಖಾಲಿ ಸಿಲಿಂಡರ್ ಹಿಡಿದು ತಮ್ಮ ತಮ್ಮ ಊರಿನತ್ತ ತೆರಳಿದ್ದಾರೆ. ಇದೇ ವೇಳೆ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ದೂರು ಕೊಡಲು ಬಂದ ಮಹಿಳೆ ಮೇಲೆ ಲೈಂಗಿಕ ಕಿರುಕುಳ ಆರೋಪ: ತಡರಾತ್ರಿ ಮನೆಯ ಕಾಂಪೌಂಡ್ ಹಾರಿದ್ದ ಪೊಲೀಸ್!

ಮಂಗಳೂರು: ದೂರು ನೀಡಲು ಬಂದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ಅನೇಕ ಆರೋಪಗಳು ಕೇಳಿಬರುತ್ತಿವೆ.

ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತನಿಖೆಗೆ ಆದೇಶಿಸಿದ್ದು, ಯಾವುದೇ ಸಂತ್ರಸ್ತೆಯರು ಧೈರ್ಯದಿಂದ ದೂರು ನೀಡುವಂತೆ ಮನವಿ ಮಾಡಿದ್ದಾರೆ. ಆರೋಪಿ ಸಂದೇಶ್ ಹಲವಾರು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎನ್ನಲಾಗಿದ್ದು, ತಡರಾತ್ರಿ ಮಹಿಳೆಯೊಬ್ಬರ ಮನೆ ಕಾಂಪೌಂಡ್ ಹಾರುತ್ತಿರುವ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ವಿಡಿಯೋ ವೈರಲ್ ಅದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಹೊಸಕೋಟೆ: ಅರಣ್ಯ ಪ್ರದೇಶದಲ್ಲಿ ಯುವಕನ ಮೃತದೇಹ ಪತ್ತೆ!

ಹೊಸಕೋಟೆ: ಯುವಕನೋರ್ವನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹೊಸಕೋಟೆ ತಾಲ್ಲೂಕಿನ ಅಲಸಹಳ್ಳಿ ಗೇಟ್ ಬಳಿಯ ಅರಣ್ಯ ಪ್ರದೇಶದಲ್ಲಿ ಜರುಗಿದೆ.

ಸೋಹೇಲ್ (24) ನೇಣಿಗೆ ಶರಣಾದ ಯುವಕ. ಮಗನ ದುರಂತವನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಯುವಕ ನಗರದ ಹಲಸೂರು ಸುತ್ತಮುತ್ತ ಟೈಲ್ಸ್ ಕೆಲಸ ಮಾಡುತ್ತಿದ್ದ, ಮತ್ತು ಮೂಲವಾಗಿ ಇವರ ಕುಟುಂಬ ರಾಜಸ್ಥಾನದಿಂದ ಬದುಕು ಕಟ್ಟಿಕೊಳ್ಳಲು ಬಂದಿದ್ದರು. ಇದೀಗ ಮಗನ ಸಾವಿನಿಂದ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ಸ್ಥಳಕ್ಕೆ ಹೊಸಕೋಟೆ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿನ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ತನಿಖೆಯಿಂದ ತಿಳಿದು ಬರಬೇಕಾಗಿದೆ.

ಎಲ್‌ಪಿಜಿ ಕೊರತೆ ಭೀತಿಗೆ ತಾತ್ಕಾಲಿಕ ರಿಲೀಫ್? ಮಂಗಳೂರಿನಲ್ಲಿ 26 ಸಾವಿರ ಮೆಟ್ರಿಕ್‌ ಟನ್ LPG ಅನ್‌ಲೋಡ್‌

ಮಂಗಳೂರು: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯ ನಡುವೆ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿದ್ದ ಹಡಗುಗಳ ಸಂಚಾರಕ್ಕೆ ಈಗ ತಾತ್ಕಾಲಿಕ ಪರಿಹಾರ ಕಂಡುಬಂದಿದೆ.

ಇರಾನ್‌ನಿಂದ ನಾಲ್ಕು ಹಡಗುಗಳಿಗೆ ಅನುಮತಿ ಸಿಕ್ಕಿದ್ದು, ಮೊದಲ ಹಡಗು ಮಾರ್ಚ್ 12 ರಂದು ಮುಂಬೈಗೆ ತಲುಪಿತ್ತು. ನಂತರ ‘ಶಿವಾಲಿಕ್’ ಹಡಗು 46,000 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಮುಂದ್ರಾ ಬಂದರಿನಲ್ಲಿ ಅನ್‌ಲೋಡ್ ಮಾಡಿದ್ದು, ಉಳಿದ 26 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಇಂದೇ ಮಂಗಳೂರು ಬಂದರಿಗೆ ತಂದು ಅನ್‌ಲೋಡ್ ಮಾಡುವ ಸಾಧ್ಯತೆ ಇದೆ. ಇದರಿಂದ ದೇಶದಲ್ಲಿ ಉಂಟಾಗಿದ್ದ ಎಲ್‌ಪಿಜಿ ಕೊರತೆ ಭೀತಿಗೆ ತಾತ್ಕಾಲಿಕ ರಿಲೀಫ್ ಸಿಗುವ ನಿರೀಕ್ಷೆಯಿದೆ. ಜೊತೆಗೆ ‘ನಂದಾದೇವಿ’ ಮತ್ತು ‘ಜಗ್ ಲಾಡ್ಕಿ’ ಹಡಗುಗಳು ಇಂದು ಭಾರತ ತಲುಪಬಹುದಾಗಿದೆ.

ಇವುಗಳಿಂದ ಒಟ್ಟಾರೆ ಸುಮಾರು 92,700 ಮೆಟ್ರಿಕ್ ಟನ್ ಎಲ್‌ಪಿಜಿ ಮತ್ತು ಕಚ್ಚಾ ತೈಲ ಲಭ್ಯವಾಗಲಿದೆ. ಇಂದಿನ ಘಟನೆಯಿಂದ ದೇಶದಲ್ಲಿ ಉಂಟಾದ ಎಲ್‌ಪಿಜಿ ಕೊರತೆ ತಾತ್ಕಾಲಿಕವಾಗಿ ಶಮನವಾಗಲಿದೆ. ಹಾರ್ಮುಜ್‌ನಲ್ಲಿ ಸಿಲುಕಿರುವ ಇತರ ಹಡಗುಗಳ ಬಿಡುಗಡೆಗಾಗಿ ಇರಾನ್‌ಗೆ ವೈದ್ಯಕೀಯ ನೆರವು ಒದಗಿಸುವ ವಿನಂತಿ ಬಂದಿದ್ದು, ಭಾರತ–ಇರಾನ್ ಸಹಕಾರದಿಂದ ಹಡಗುಗಳ ಸಾಗಣೆ ಕ್ರಮೇಣ ಪುನರಾರಂಭವಾಗುತ್ತಿದೆ.

ಮೇಲಾಧಿಕಾರಿಯ ಕಿರುಕುಳ ಆರೋಪ: ಡೆತ್ ನೋಟ್ ಬರೆದಿಟ್ಟು ಕೃಷಿ ಇಲಾಖೆ ಗುತ್ತಿಗೆ ನೌಕರ ಆತ್ಮಹತ್ಯೆ!

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ‌ ಗೌರಿಪುರದಲ್ಲಿ ಮೇಲಾಧಿಕಾರಿಯ ಮಾನಸಿಕ ಕಿರುಕುಳ ಹಿನ್ನೆಲೆ ಕೃಷಿ ಇಲಾಖೆಯ ಗುತ್ತಿಗೆ ನೌಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ರಾಜು ಆತ್ಮಹತ್ಯೆಗೆ ಶರಣಾಗಿರುವ ಗುತ್ತಿಗೆ ನೌಕರ. ಮೂರು ಪುಟಗಳ ಡೆತ್‌ನೋಟ್‌ನಲ್ಲಿ ಸಾವಿನ ಕಾರಣ ಬರೆದಿರುವ ಗುತ್ತಿಗೆ ನೌಕರ ರಾಜು ಅವರು ಕೃಷಿ ಇಲಾಖೆಯ ಅಧಿಕಾರಿ ರಾಘವೇಂದ್ರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಘಟನೆ ಬಗ್ಗೆ ಮೃತ ರಾಜು ಪತ್ನಿ ಪ್ರೇಮಾ ಮಾತನಾಡಿ, “ರಾಘವೇಂದ್ರ ಅವರು ನನ್ನ ಗಂಡನನ್ನು ಕೆಲಸಕ್ಕೆ ಸೇರಿಸಿಕೊಂಡಾಗಿನಿಂದ ಮಾನಸಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಕಳೆದ ನಾಲ್ಕು ತಿಂಗಳುಗಳಿಂದ ಸಂಬಳವೂ ನೀಡಿಲ್ಲ ಎಂದು ಆರೋಪಿಸಿದ್ದಾರೆ. ನನ್ನ ಗಂಡನ ಸಾವಿಗೆ ನ್ಯಾಯ ಒದಗಿಸಬೇಕೆಂದು ಕಣ್ಣೀರು ಹಾಕಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಹೆರಿಗೆಗೆ ಹೋಗುವ ಶಿಕ್ಷಕಿಯರಿಗೆ 15 ದಿನ ಮುಂಚಿತವಾಗಿಯೇ ರಜೆ: ಮಧು ಬಂಗಾರಪ್ಪ

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಹೆರಿಗೆಗೆ ಹೋಗುವ ಶಿಕ್ಷಕಿಯರಿಗೆ 15 ದಿನ ಮುಂಚಿತವಾಗಿ ಶಿಶುಪಾಲನಾ ರಜೆ ನೀಡಬೇಕೆಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ನಡೆದ ಪ್ರಶ್ನೋತ್ತರದಲ್ಲಿ, ಶಿಕ್ಷಕರಿಗೆ ಶಿಶುಪಾಲನಾ ರಜೆ ಸರಿಯಾಗಿ ನೀಡಲಾಗುತ್ತಿಲ್ಲ ಎಂಬ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. “ಎಲ್ಲಾ ಇಲಾಖೆಗಳಂತೆ ಶಿಕ್ಷಕಿಯರಿಗೆ ಶಿಶುಪಾಲನಾ ರಜೆ ನೀಡಲಾಗುತ್ತಿದೆ. ಹೌದು, ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ಈ ವರ್ಷ ಡೆಪ್ಯೂಟೇಷನ್ ಇಲ್ಲ. ಆದರೆ ಮಾನವೀಯತೆಯನ್ನು ಗಮನಿಸಿ, ರಜೆಯನ್ನು ಸರಿಯಾಗಿ ಅನುಷ್ಠಾನ ಮಾಡಲಾಗುತ್ತದೆ.”

ಮುಂದೆ ಹೆರಿಗೆಗೆ ಹೋಗುವ ಶಿಕ್ಷಕಿಯರಿಗೆ 15 ದಿನ ಮುಂಚೆ ರಜೆ ನೀಡುವ ನಿಯಮ ಜಾರಿ ಮಾಡಲಾಗುತ್ತದೆ. ಡೆಲಿವರಿ ಆದ ನಂತರ ರಜೆ ಮುಗಿಸಿಕೊಂಡ ಶಿಕ್ಷಕರನ್ನು 5 ವರ್ಷ ಕಾಲ ನಿಯಮದ ಅನ್ವಯ ವರ್ಗಾವಣೆ ಮಾಡಲಾಗುವುದು. ಹೆರಿಗೆಗೆ ಹೋಗುವ ಶಿಕ್ಷಕಿಯರ ಜಾಗಕ್ಕೆ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗುತ್ತದೆ. ಜೂನ್ ಒಳಗೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದೆಂದು ಸಚಿವರು ಭರವಸೆ ನೀಡಿದ್ದಾರೆ.

ಗಲ್ಫ್ ಪ್ರದೇಶದಿಂದ 2.20 ಲಕ್ಷ ಮಂದಿ ಭಾರತಕ್ಕೆ ರಿಟರ್ನ್‌: ಕೇಂದ್ರ ಸರ್ಕಾರ

0

ದೆಹಲಿ: ಕೊಲ್ಲಿ ಯುದ್ಧ ಫೆಬ್ರವರಿ 28 ರಂದು ಆರಂಭವಾದ ಬಳಿಕ, ಗಲ್ಫ್ ಪ್ರದೇಶದ ದೇಶಗಳಿಂದ 2,20,000ಕ್ಕೂ ಹೆಚ್ಚು ಭಾರತೀಯರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಯುಎಇ, ಸೌದಿ ಅರೇಬಿಯಾ, ಓಮನ್ ಮತ್ತು ಕತಾರ್ ಸೇರಿದಂತೆ ವಿವಿಧ ಗಲ್ಫ್ ರಾಷ್ಟ್ರಗಳಿಂದ ನಲವತ್ತೈದು ವಿಮಾನಗಳು ಸೋಮವಾರ ಭಾರತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಇಳಿಯುವ ನಿರೀಕ್ಷೆಯಿದೆ. ಕತಾರ್ ವಾಯುಪ್ರದೇಶ ಭಾಗಶಃ ತೆರೆಯಲಾಗಿರುವುದರಿಂದ ವಿಮಾನಗಳ ಹಾರಾಟ ಮತ್ತೆ ಆರಂಭವಾಗಿದೆ.

ಇದಕ್ಕೂ ಹೊರತು, 550 ಭಾರತೀಯರು ಭೂ ಗಡಿಯ ಮೂಲಕ ಅರ್ಮೇನಿಯಾಗೆ, 90 ಮಂದಿ ಅಜೆರ್ಬೈಜಾನ್‌ ಗಡಿಯ ಮೂಲಕ ಸುರಕ್ಷಿತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಕೆಲವು ಪ್ರದೇಶಗಳಲ್ಲಿ ವಿಮಾನ ನಿಲ್ದಾಣಗಳು ಮುಚ್ಚಿರುವ ಕಾರಣ, ಸೌದಿ ಅರೇಬಿಯಾ ಮೂಲಕ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಮಾರ್ಚ್ 13 ರಂದು ಒಮಾನ್‌ನ ಸೊಹಾರ್ ನಗರದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದು, ಮಸ್ಕತ್‌ನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿ ಅವರ ಕುಟುಂಬಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ರಾಯಭಾರ ಕಚೇರಿ ಟೆಹ್ರಾನ್‌ನಲ್ಲಿ ಎಲ್ಲಾ ಅಗತ್ಯ ಸಹಾಯ ನೀಡುತ್ತಿದ್ದು, ವಿದ್ಯಾರ್ಥಿಗಳನ್ನು ಸುರಕ್ಷಿತ ನಗರಗಳಿಗೆ ಸ್ಥಳಾಂತರಿಸಿರುವುದಾಗಿ ವಿದೇಶಾಂಗ ಇಲಾಖೆ ತಿಳಿಸಿದೆ.

ಕಾರವಾರ| ಬಾವಿಗೆ ಬಿದ್ದು ಪವಾಡ ಸದೃಶ್ಯವಾಗಿ ಬದುಕುಳಿದ ಎರಡು ವರ್ಷದ ಮಗು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಕಸ್ತೂರ ಬಾ ನಗರದಲ್ಲಿ ಬಾವಿಗೆ ಬಿದ್ದಿದ್ದ ಎರಡು ವರ್ಷದ ಬಾಲೆ ಭುವಿ ಪವಾಡ ಸದೃಶವಾಗಿ ಬದುಕುಳಿದ ಘಟನೆ ನಡೆದಿದೆ.

ಆಟವಾಡುತ್ತಿದ್ದ ವೇಳೆ ಏಕಾಏಕಿ ನಾಪತ್ತೆಯಾಗಿದ್ದ ಭುವಿಯನ್ನು ಮನೆಯವರು ಸುತ್ತಮುತ್ತ ಹುಡುಕಿದರೂ ಕಂಡುಹಿಡಿಯಲಾಗಲಿಲ್ಲ. ನಂತರ ಮನೆಯ ಮುಂದೆ ಇರುವ ಬಾವಿಯಲ್ಲಿ ಅಳುವ ಶಬ್ದವನ್ನು ಕೇಳಿದ ಕುಟುಂಬದವರು ತಕ್ಷಣ ಪರಿಶೀಲನೆ ನಡೆಸಿದಾಗ, ಮಗು ಬಾವಿಯ ಒಳಗಿನ ಪೈಪಿನಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ.

ತಕ್ಷಣವೇ ಪಯ್ಯ ಚವಟಿ ಎಂಬ ವ್ಯಕ್ತಿ ಬಾವಿಗೆ ಇಳಿದು ಮಗುವನ್ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಡೆಕಾಯಿ ಜೊತೆ ಈ ಪದಾರ್ಥಗಳು ಹಾನಿಕರ ಎನ್ನುವುದು ಎಷ್ಟು ನಿಜ?

0

ಬೆಂಡೆಕಾಯಿ ಆರೋಗ್ಯಕ್ಕೆ ತುಂಬಾ ಉಪಯುಕ್ತವಾದ ತರಕಾರಿ ಎಂಬುದು ಎಲ್ಲರಿಗೂ ತಿಳಿದ ವಿಚಾರ.

ಫೈಬರ್, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಉತ್ಕರ್ಷಣ ನಿರೋಧಕಾಂಶಗಳನ್ನು ಹೊಂದಿರುವ ಬೆಂಡೆಕಾಯಿ ಜೀರ್ಣಕ್ರಿಯೆ ಸುಧಾರಿಸುವುದಲ್ಲದೆ ದೇಹಕ್ಕೆ ಹಲವಾರು ರೀತಿಯಲ್ಲಿ ಲಾಭಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಇತ್ತೀಚೆಗೆ ಬೆಂಡೆಕಾಯಿಯನ್ನು ಆಲೂಗಡ್ಡೆ, ಬದನೆಕಾಯಿ, ಮೂಲಂಗಿ, ಹಾಗಲಕಾಯಿ, ಹಾಲು, ಮೊಸರು, ಚಹಾ ಹಾಗೂ ಕೆಂಪು ಮಾಂಸದ ಜೊತೆ ಸೇವಿಸಬಾರದು ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆದರೆ ಈ ಬಗ್ಗೆ ಲಭ್ಯವಿರುವ ವೈಜ್ಞಾನಿಕ ಮಾಹಿತಿಯನ್ನು ಗಮನಿಸಿದರೆ, ಬೆಂಡೆಕಾಯಿಯನ್ನು ಮೇಲ್ಕಂಡ ತರಕಾರಿಗಳು ಅಥವಾ ಆಹಾರಗಳ ಜೊತೆ ಸೇವಿಸಿದರೆ ಎಲ್ಲರಿಗೂ ಕಡ್ಡಾಯವಾಗಿ ಆರೋಗ್ಯ ಹಾನಿ ಉಂಟಾಗುತ್ತದೆ ಎಂಬುದಕ್ಕೆ ಸ್ಪಷ್ಟವಾದ ವೈದ್ಯಕೀಯ ಸಾಕ್ಷ್ಯ ದೊರಕಿರುವುದಿಲ್ಲ. ಕೆಲವು ಮಂದಿಗೆ ವೈಯಕ್ತಿಕವಾಗಿ ಅಜೀರ್ಣ, ಗ್ಯಾಸ್, ಅಲರ್ಜಿ ಅಥವಾ ಆಹಾರ ಅಸಹನೆ ಇದ್ದಲ್ಲಿ ಕೆಲವು ಆಹಾರ ಸಂಯೋಜನೆಗಳಿಂದ ತೊಂದರೆ ಕಾಣಿಸಿಕೊಳ್ಳಬಹುದು. ಆದರೆ ಅದನ್ನೇ ಎಲ್ಲರಿಗೂ ಅನ್ವಯಿಸುವ ನಿಯಮ ಎಂದು ಹೇಳುವುದು ಸರಿಯಲ್ಲ ಎಂದು ತಜ್ಞರು ಸೂಚಿಸುತ್ತಾರೆ.

ವಿಶೇಷವಾಗಿ ಆಲೂಗಡ್ಡೆ ಮತ್ತು ಬೆಂಡೆಕಾಯಿ ಸೇರಿ ತಿಂದರೆ ರಕ್ತದಲ್ಲಿನ ಸಕ್ಕರೆಯ ಅಸಮತೋಲನ ಅಥವಾ ಬೊಜ್ಜು ಬರುತ್ತದೆ ಎನ್ನುವುದು ನಿಖರವಾದ ಮಾಹಿತಿ ಅಲ್ಲ. ಒಟ್ಟಾರೆ ಊಟದ ಪ್ರಮಾಣ, ಎಣ್ಣೆಯ ಬಳಕೆ, ಅಡುಗೆ ವಿಧಾನ ಮತ್ತು ವ್ಯಕ್ತಿಯ ಆರೋಗ್ಯ ಸ್ಥಿತಿಯೇ ಇಲ್ಲಿ ಪ್ರಮುಖವಾಗುತ್ತದೆ. ಅದೇ ರೀತಿ ಬದನೆಕಾಯಿ, ಮೂಲಂಗಿ ಅಥವಾ ಹಾಗಲಕಾಯಿ ಜೊತೆ ಬೆಂಡೆಕಾಯಿ ತಿಂದರೆ ಚರ್ಮದ ಅಲರ್ಜಿ, ಆಮ್ಲೀಯತೆ ಅಥವಾ ಜೀರ್ಣ ಸಮಸ್ಯೆ ಉಂಟಾಗುತ್ತದೆ ಎಂಬ ಮಾತಿಗೂ ಸಮರ್ಪಕ ವೈದ್ಯಕೀಯ ದೃಢೀಕರಣ ಇಲ್ಲ.

ಆದ್ದರಿಂದ ಬೆಂಡೆಕಾಯಿ ಜೊತೆ ಯಾವ ಆಹಾರವನ್ನು ಸೇವಿಸಬಾರದು ಎಂಬುದಕ್ಕಿಂತ, ನಿಮ್ಮ ದೇಹದ ಸ್ವಭಾವಕ್ಕೆ ಯಾವುದು ಹೊಂದುವುದಿಲ್ಲ ಎಂಬುದನ್ನು ಗಮನಿಸುವುದು ಹೆಚ್ಚು ಮುಖ್ಯ. ಈಗಾಗಲೇ ಅಲರ್ಜಿ, ಅಜೀರ್ಣ ಅಥವಾ ಮಧುಮೇಹದಂತಹ ಸಮಸ್ಯೆ ಇರುವವರು ವೈದ್ಯರು ಅಥವಾ ಆಹಾರ ತಜ್ಞರ ಸಲಹೆ ಪಡೆದು ಆಹಾರ ಕ್ರಮ ಅನುಸರಿಸುವುದು ಉತ್ತಮ. ಒಟ್ಟಿನಲ್ಲಿ, ಬೆಂಡೆಕಾಯಿ ಜೊತೆ ಕೆಲವು ಆಹಾರಗಳನ್ನು ಸೇವಿಸಿದರೆ ಅಪಾಯ ಅನಿವಾರ್ಯ ಎಂಬ ಸುದ್ದಿ ಹೆಚ್ಚು ಅತಿರಂಜಿತವಾಗಿದ್ದು, ವೈಯಕ್ತಿಕ ಆರೋಗ್ಯ ಸ್ಥಿತಿಯೇ ಇಲ್ಲಿ ನಿರ್ಧಾರಕ ಅಂಶವಾಗಿರುತ್ತದೆ.

ಗ್ಯಾರಂಟಿಗಳಿಂದ ಮಹಿಳೆಯರ ಆರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಬಾಗಲಕೋಟೆ ಹಾಗೂ ದಾವಣಗೆರೆ ಉಪಚುನಾವಣೆಯ ಗೆಲುವಿನಲ್ಲಿ ಕಾಂಗ್ರೆಸ್ ಮಹಿಳಾ ಸದಸ್ಯರ ಪಾತ್ರ ಮಹತ್ವವಾದುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ತಿಳಿಸಿದರು. ಅವರು ಇಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕಾರಿ ಸಭೆ ಮತ್ತು ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

2013 ರಿಂದ 2018 ಮತ್ತು 2023ರಿಂದ ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ. ಪ್ರಮುಖ ಗ್ಯಾರಂಟಿಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆಯಿಂದ ಇದುವರೆಗೆ ಮಹಿಳೆಯರು 700 ಕೋಟಿ ಪ್ರಯಾಣಗಳನ್ನು ಕೈಗೊಂಡಿದ್ದಾರೆ. ಮಹಿಳಾ ಕೇಂದ್ರಿತ ಯೋಜನೆಗಳಿಂದ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲಾಗಿದೆ.

ಸರ್ಕಾರದ ಗ್ಯಾರಂಟಿಗಳಿಂದ ಮಹಿಳೆಯರ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 1.26 ಕೋಟಿ ಮಹಿಳೆಯರಿಗೆ ಮಾಸಿಕ 2000 ರೂಗಳನ್ನು ನೀಡಲಾಗುತ್ತಿದ್ದು, ಇದರಿಂದ ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿ ಸುಧಾರಿಸಿದೆ. ಆರ್ಥಿಕ ಸ್ವಾತಂತ್ರ್ಯದಿಂದ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಸಮಾಜದಲ್ಲಿ ಲಿಂಗತಾರತಮ್ಯ ಮತ್ತು ಅಸಮಾನತೆ ನಿವಾರಣೆಯಾಗದೇ ಸ್ವಾತಂತ್ರ್ಯ ಸಾರ್ಥಕತೆ ಹೊಂದುತ್ತದೆ ಎಂದರು.

ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿ

ಮಹಿಳೆಯರಲ್ಲಿ ನಾಯಕತ್ವದ ಗುಣ ಬಹಳ ಪ್ರಮುಖವಾಗಿದೆ. ಎಲ್ಲರಿಗೂ ಸಮಾನ ಅವಕಾಶ ದೊರೆತರೆ ಸಮಾನತೆಯನ್ನು ಸಾಧಿಸುವುದು ಸುಲಭವಾಗಿದೆ. ಕರ್ನಾಟಕ ಪ್ರದೇಸ ಮಹಿಳಾ ಕಾಂಗ್ರೆಸ್ ನಲ್ಲಿ 1 ಲಕ್ಷಕ್ಕೂ ಹೆಚ್ಚು ಮಹಿಳಾ ಸದಸ್ಯರು ಇದ್ದು, ಭವಿಷ್ಯದಲ್ಲಿ ಈ ಸಂಖ್ಯೆ 2 ಲಕ್ಷಗಳಿಗೆ ವೃದ್ಧಿಸಬೇಕು. ಉಪಚುನಾವಣೆ ಸಮೀಸುತ್ತಿರುವುದರಿಂದ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮಹಿಳಾ ಸದಸ್ಯರ ಪಾತ್ರ ಮಹತ್ವದ್ದಾಗಿದೆ.

ಬಾಗಲಕೋಟೆ ಹಾಗೂ ದಾವಣಗೆರೆ ಉಪಚುನಾವಣೆಯಲ್ಲಿ ಮಹಿಳಾ ಸದಸ್ಯರ ಎರಡು ತಂಡಗಳನ್ನು ರಚಿಸಿ , ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಸೂಚಿಸಿದರು. ಕಳೆದ ಬಾರಿ ಚೆನ್ನಪಟ್ಟಣ, ಶಿಗ್ಗಾಂವ , ಸಂಡೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿತ್ತು. ಈ ಬಾರಿಯೂ ಎರಡೂ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲೇಬೇಕಿದ್ದು , ಇದಕ್ಕಾಗಿ ಅಗತ್ಯ ಸಿದ್ದತೆಗಳನ್ನು ಕಾಂಗ್ರೆಸ್ ಪಕ್ಷ ಮಾಡಿಕೊಂಡಿದೆ ಎಂದರು.

error: Content is protected !!