Home Blog Page 175

ರೈತ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯೂ ಸೇರಿದಂತೆ ರಾಜ್ಯಾದ್ಯಂತ ಹಿಂಗಾರು ಹಂಗಾಮಿನಲ್ಲಿ ಕಡಲೆ ಬೆಳೆಯಲಾಗಿದ್ದು, ಈಗಾಗಲೇ ಕಡಲೆ ಕಟಾವು ಮಾಡಲಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಗದಗ ಜಿಲ್ಲಾದ್ಯಂತ ಕಡಲೆ ಖರೀದಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಹಾಗೂ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿ ಕ್ವಿಂಟಾಲ್ ಕಡಲೆಗೆ 10 ಸಾವಿರ ರೂ ಹೊಸ ಬೆಂಬಲ ಬೆಲೆ ನಿಗದಿ ಮಾಡಿ ರೈತರಿಂದ 50 ಕ್ವಿಂಟಾಲ್ ಕಡಲೆ ಕಾಳನ್ನು ಸರ್ಕಾರ ಖರೀದಿಸಬೇಕು. ಕಳೆದ ವರ್ಷ ಕೇಂದ್ರ ಸರ್ಕಾರ ಆದೇಶಿಸಿದ ಹಳೆ ಬೆಲೆಯನ್ನು ರದ್ದುಗೊಳಿಸಿ ಹೊಸ ಬೆಲೆಗೆ ಕಡಲೆ ಖರೀದಿಸಬೇಕು. ಕಡಲೆ ಖರೀದಿಸಿದ ಒಂದು ತಿಂಗಳೊಳಗೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾವಣೆ ಮಾಡಬೇಕು. ರೈತರು ಮಾರುಕಟ್ಟೆಗೆ ಧಾನ್ಯ ತಂದ ಮೇಲೆ ಖರೀದಿ ಕೇಂದ್ರ ತೆರೆಯುವುದರಲ್ಲಿ ಅರ್ಥವಿಲ್ಲ. ಸರ್ಕಾರ ಇನ್ನೊಂದು ವಾರದೊಳಗೆ ಖರೀದಿ ಪ್ರಕ್ರಿಯೆ ಆರಂಭಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ಬಸವರಾಜ ಹೂಗಾರ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಹೆಸರು ಬೆಳೆಗೆ ಬೆಂಬಲ ಪ್ರಯೋಜನವಾಗಲಿಲ್ಲ. ಈಗ ಮೆಕ್ಕೆಜೋಳದ ಬೆಂಬಲ ಬೆಲೆಯಲ್ಲಿಯೂ ಕೂಡ ದಿನಕ್ಕೊಂದು ಹೊಸ ಆದೇಶ ಹೊರಡಿಸಿ ಸರ್ಕಾರದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ ಎಂದರು.

ಸರ್ಕಾರದಿಂದ ಕಡಲೆ ಖರೀದಿ ಕೇಂದ್ರ ತೆರೆಯಲು ವಿಳಂಬವಾದರೆ ರೈತ ಸಂಘದಿಂದ ಉಗ್ರ ಹೋರಾಟ ಮಾಡುವುದಾಗಿ ರೈತ ಸಂಘದ ಹಾವೇರಿ ಅಧ್ಯಕ್ಷ ಯಲ್ಲಪ್ಪ ವಾಲ್ಮೀಕಿ ಎಚ್ಚರಿಸಿದ್ದಾರೆ.

ಅಧಿಕಾರಿಗಳು ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಿ: ಡಿಸಿ ಸಿ.ಎನ್. ಶ್ರೀಧರ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಸಪಾಯಿ ಕರ್ಮಚಾರಿಗಳು ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಿಯೋಜನೆ ನಿಷೇಧ ಮತ್ತು ಪುನರ್ವಸತಿ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ಜರುಗಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸಪಾಯಿ ಕರ್ಮಚಾರಿಗಳಿಗೆ ಸರ್ಕಾರದಿಂದ ಲಭ್ಯವಿರುವ ಎಲ್ಲ ಸೌಲಭ್ಯಗಳು ಯಾವುದೇ ವಿಳಂಬವಿಲ್ಲದೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಸಂಪೂರ್ಣ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಪಾಯಿ ಕರ್ಮಚಾರಿಗಳಿಗೆ ನಿಯಮಾನುಸಾರ ದೊರಕಬೇಕಾದ ಇಎಸ್‌ಐ, ಪಿಎಫ್ ಸೇರಿದಂತೆ ಎಲ್ಲಾ ಭತ್ಯೆಗಳನ್ನು ಸಕಾಲಕ್ಕೆ ಪಾವತಿಸಬೇಕು, ಅವರ ಆರೋಗ್ಯ ರಕ್ಷಣೆಗೆ ವಿಶೇಷ ಒತ್ತು ನೀಡಬೇಕು ಎಂದರು.

ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಿ, ಗುಣಮಟ್ಟದ ಸಂರಕ್ಷಣಾ ಸಾಧನಗಳನ್ನು ವಿತರಿಸಿ, ಆರೋಗ್ಯ ಹಾಗೂ ಸುರಕ್ಷತೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ಪ್ರತಿಯೊಂದು ತಾಲೂಕು ಮಟ್ಟದಲ್ಲಿ ಸಪಾಯಿ ಕರ್ಮಚಾರಿಗಳ ಸ್ಥಿತಿಗತಿ ಕುರಿತು ತಾಲೂಕುವಾರು ಪ್ರಗತಿ ಪರಿಶೀಲನೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್‌ಗೆ ಅವಕಾಶ ಕೊಡಬಾರದು ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಸಪಾಯಿ ಕರ್ಮಚಾರಿ ಸಮಿತಿಯ ಸದಸ್ಯರಾದ ರಮೇಶ್ ಕೊಳೂರ, ಯುವರಾಜ ಬಳ್ಳಾರಿ, ರಮೇಶ್ ಮ್ಯಾಗೇರಿ, ಹಿರಿಯಕ್ಕ ದೊಡ್ಡಮನಿ, ಲಕ್ಷ್ಮವ್ವ ಭಂಗಿ ಸೇರಿದಂತೆ ಇತರರು ಪಾಲ್ಗೊಂಡು, ಸಪಾಯಿ ಕರ್ಮಚಾರಿಗಳಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರಕುವಂತೆ ಮಾಡಬೇಕು ಹಾಗೂ ತಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಬೇಕೆಂದು ಸಭೆಯ ಗಮನ ಸೆಳೆದರು.

ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಿಲ್ಲಾ ಸಮಾಜ ಕಲ್ಯಾಣ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಸಪಾಯಿ ಕರ್ಮಚಾರಿಗಳಿಗೆ ನೀಡಿರುವ ಸೌಲಭ್ಯಗಳು ಹಾಗೂ ಮುಂದಿನ ದಿನಗಳಲ್ಲಿ ನೀಡಬೇಕಾದ ಸವಲತ್ತುಗಳ ಕುರಿತು ವಿವರವಾದ ಪ್ರಗತಿ ವರದಿಯನ್ನು ಸಭೆಯಲ್ಲಿ ಮಂಡಿಸಿದರು.

ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಪೂರ್ವಸಿದ್ಧತಾ ಸಭೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಜನವರಿ 21ರಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಕ್ರಮ ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕುರಿತು ಜರುಗಿದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲೂಕು ಮಟ್ಟದಲ್ಲಿಯೂ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ವ್ಯವಸ್ಥಿತವಾಗಿ ಆಚರಿಸಲು ಕ್ರಮ ವಹಿಸಬೇಕು. ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಕ್ರಮ ವಹಿಸಬೇಕು. ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷಗಳಾಗದಂತೆ ಅರ್ಥಪೂರ್ಣ ಆಚರಣೆಗೆ ಕ್ರಮ ಕೈಗೊಳ್ಳಬೇಕು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಮಾಜದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಸ್ವಾಗತಿಸಿದರು. ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರುಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಎಂ.ಎಂ ತುಂಬರಮಟ್ಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಸೇರಿದಂತೆ ಸಮಾಜದ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಮಂಗಳೂರಿಗೆ ಡ್ರಗ್ಸ್ ಪೂರೈಕೆ; ಉಗಾಂಡ ಮಹಿಳೆ ಬಂಧಿಸಿದ ಸಿಸಿಬಿ!

0

ಮಂಗಳೂರು:- ಮಂಗಳೂರು ಸಿಸಿಬಿ ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಆರು​ ಪೆಡ್ಲರ್​ಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಜಲಿಯಾ ಝಲ್ವಾಂಗೋ ಬಂಧಿತ ಮಹಿಳೆ. ಸಿಸಿಬಿ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಬಂಧಿತಳಿಂದ 4 ಕೋಟಿ ರೂ. ಮೌಲ್ಯದ MDMAಯನ್ನು ಪೋಲೀಸರು ಜಪ್ತಿ ಮಾಡಿದ್ದಾರೆ.

ಕುಂದಾಪುರದ ಮೊಹಮ್ಮದ್ ಶಿಯಾಬ್ ಅಲಿಯಾಸ್​​ ಶಿಯಾಬ್, ಉಳ್ಳಾಲ ಕಳ್ಳರ ಕೋಡಿ ನಿವಾಸಿ ಮೊಹಮ್ಮದ್ ನೌಷದ್ , ಬೆಂಗ್ರೆ ನಿವಾಸಿ ಇಮ್ರಾನ್ ಅಲಿಯಾಸ್​​ ಇಂಬ, ಬಂಟ್ವಾಳದ ನಿಸಾರ್ ಅಹಮ್ಮದ್, ಕಾಪು ನಿವಾಸಿ ಮೊಹಮ್ಮದ್ ಇಕ್ಬಾಲ್ ಮತ್ತು ಪಡುಬಿದ್ರೆ ನಿವಾಸಿ ಶೆಹರಾಜ್ ಶಾರೂಕ್ ಎಂಬ ಡ್ರಗ್ ಪೆಡ್ಲರ್​​ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರೋಪಿಗಳು ಜಲಿಯಾಳಿಂದ ಡ್ರಗ್ಸ್ ಪಡೆದು ಮಂಗಳೂರಲ್ಲಿ ಮಾರುತ್ತಿದ್ದ ವಿಚಾರ ತನಿಖೆ ವೇಳೆ ಗೊತ್ತಾಗಿತ್ತು. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಬೆಂಗಳೂರಲ್ಲಿ ಸಿಸಿಬಿ ರೇಡ್​ ನಡೆಸಿದೆ ಎನ್ನಲಾಗಿದೆ.

ಉಗಾಂಡದ ಜಲಿಯಾ ಯಾರಿಗೂ ಅನುಮಾನ ಬಾರದಂತೆ ಎಂಡಿಎಂ ಸಾಗಾಟಕ್ಕೆ ಮಾಸ್ಟರ್​​ ಪ್ಲ್ಯಾನ್​​ ಮಾಡಿದ್ದಳು. ಮಾಲ್‌ಗಳು ಅಥವಾ ಟೆಕ್ಸ್‌ ಟೈಲ್​​ಗಳಿಂದ ಪುರುಷರ ಹೊಸ ಶರ್ಟ್​ಗಳನ್ನು ಖರೀದಿಸಿ ಅದನ್ನು ಮೆಲ್ಲಗೆ ಬಿಡಿಸಿ ಅದರೊಳಗೆ ಅಂದಾಜು 300 ಗ್ರಾಂ ಎಂಡಿಎಂಎ ಪ್ಯಾಕ್ ಇಟ್ಟು ಸೂಟ್ ಕೇಸ್​​ನಲ್ಲಿ ತುಂಬುತ್ತಿದ್ದಳು. ಮೇಲ್ನೋಟಕ್ಕೆ ಇದು ಅಂದವಾಗಿ ಶರ್ಟ್ ಜೋಡಿಸಿಟ್ಟ ಸೂಟ್ ಕೇಸ್​​ನಂತೆ ಕಾಣುತ್ತಿತ್ತು. ಶರ್ಟ್ ಬಿಡಿಸಿ ನೋಡಿದರೆ ಆದರೊಳಗೆ ಎಂಡಿಎಂ ಪ್ಯಾಕೇಟ್​​ಗಳು ಇರುತ್ತಿದ್ದವು. ಇನ್ನು ಜಲಿಯಾ ಉಗಾಂಡದಿಂದ ಬಂದು ಭಾರತದಲ್ಲಿ ಅಕ್ರಮವಾಗಿ ವಾಸವಿದ್ದಳು ಎಂಬ ವಿಚಾರವೂ ಬಯಲಾಗಿದೆ. ಆ ಮೂಲಕ ಮಂಗಳೂರಿಗೆ ಸರಬರಾಜಾಗುತ್ತಿದ್ದ ಡ್ರಗ್ಸ್​​ ಜಾಲದ ಒಂದು ಪ್ರಮುಖ ಕೊಂಡಿ ಕಳಚಿದೆ.

ಚಿಕ್ಕಮಗಳೂರಿನಲ್ಲಿ ವರ್ಷಧಾರೆಗೆ ಜನತೆ ತತ್ತರ; ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ, ಬೆಳೆಗಾರರು ಆತಂಕ!

0

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈ ವರ್ಷದ ಮೊದಲ ಧಾರಾಕಾರ ಮಳೆ ಭಾರಿ ಅಬ್ಬರಿಸಿದ್ದು, ಜನತೆ ಕಂಗಾಲಾಗಿದ್ದಾರೆ.

ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಕಳಸ, ಶೃಂಗೇರಿ ಹಾಗೂ NR ಪುರ ಪ್ರದೇಶಗಳಲ್ಲಿ ತೀವ್ರ ಮಳೆ ಪರಿಣಾಮ ಜನತೆ ಸಂಕಷ್ಟಕ್ಕೊಳಗಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಕೊರೆಯುವ ಚಳಿ, ಶೀತ ಗಾಳಿ ಜನರನ್ನು ಕೋಪಗೊಳಿಸಿದ್ದರೆ, ಇಂದು ಧಾರಾಕಾರವಾಗಿ ಸುರಿದ ಮಳೆಯು ಹೆಚ್ಚುವರಿ ತೊಂದರೆ ಉಂಟುಮಾಡಿದೆ. ವಿಶೇಷವಾಗಿ, ಜಿಲ್ಲೆಯಾದ್ಯಂತ ನಡೆಯುತ್ತಿದ್ದ ಕಾಫಿ ಬೆಳೆ ಕೊಯ್ಲು ಹಠಾತ್ ಮಳೆಯಿಂದ ಹಾಳಾಗಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಕೆಲವೆಡೆ ಕಾಫಿ ಬೆಳೆ ಮಳೆ ನೀರಿನಲ್ಲಿ ಕೊಚ್ಚಿ ಹೋದ ದೃಶ್ಯವೂ ಕಂಡು ಬಂದಿದೆ.

ಪ್ರಜ್ವಲ್ ರಿತ್ತಿ ಕುಟುಂಬದ ಕಾರ್ಯ ಶ್ಲಾಘನೀಯ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಪ್ರಾಮಾಣಿಕತೆಯಿಂದ ನಿಧಿಯನ್ನು ಸರ್ಕಾರಕ್ಕೆ ಮರಳಿಸಿರುವ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ನಿಧಿಯ ಸಮಾನಾಂತರ ಸಹಾಯ ಧನ ನೀಡುವ ಕುರಿತಂತೆ ಗ್ರಾಮಸ್ಥರ ಒತ್ತಾಯವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಗಮನಕ್ಕೆ ತಂದು ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ ಹೇಳಿದರು.

ಗ್ರಾಮದ ಪ್ರಜ್ವಲ್ ರಿತ್ತಿ ಅವರ ಕುಟುಂಬವನ್ನು ಭೇಟಿ ಮಾಡಿ ಮಾತನಾಡಿದ ಅವರು ರಿತ್ತಿ ಕುಟುಂಬದವರು ಕಡು ಬಡವರಾಗಿದ್ದಾರೆ. ಸಾಕಷ್ಟು ಸಂಪತ್ತು ಸಿಕ್ಕಿದ್ದರೂ ಸಹಿತ ಯಾವುದೇ ಫಲಾಪೇಕ್ಷೆಯಿಲ್ಲದೆ ಸರ್ಕಾರಕ್ಕೆ ಮರಳಿ ನೀಡಿರುವ ಕಾರ್ಯ ಶ್ಲಾಘನೀಯ. ಪ್ರಜ್ವಲ್‌ಗೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ವಿವಿಧ ವಿಭಾಗಗಳ ಪ್ರಶಸ್ತಿಗೆ ಪರಿಗಣಿಸುವುದರ ಮೂಲಕ ನೆರವಿನ ಹಸ್ತವನ್ನು ನೀಡುವ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದರು.

ರಿತ್ತಿ ಕುಟುಂಬಕ್ಕೆ ಪರ್ಯಾಯ ವಸತಿ ಸೌಕರ್ಯ, ಶಿಕ್ಷಣ ಸೌಲಭ್ಯ, ಸೇರಿದಂತೆ ಅನೇಕ ಸಹಾಯಗಳು ದೊರಕುವಂತೆ ಮಾಡುವ ಕಾರ್ಯವನ್ನು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಹಾಗೂ ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗಳಿ, ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ, ನರಗುಂದ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿವೇಕ ಯಾವಗಲ್, ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಗ್ರಾ.ಪಂ ಸದಸ್ಯರಾದ ಪೀರಸಾಬ ನದಾಫ್, ಶ್ರೇಯಾ ಕಟಿಗ್ಗಾರ, ಚಂದ್ರವ್ವ ರಿತ್ತಿ, ಅನ್ನಪೂರ್ಣ ರಿತ್ತಿ, ಫಕ್ಕೀರಮ್ಮ ಬೇಲೇರಿ, ಶಾಂತವ್ವ ಮಣಕವಾಡ, ರಜೀಯಾ ಬೇಗಂ ತಹಸೀಲ್ದಾರ, ಮುಖಂಡರಾದ ವೀರಯ್ಯ ಗಂಧದ, ನಿಂಗಪ್ಪ ಗುಂಜಳ, ಅಂದಾನಪ್ಪ ಕಣವಿ, ಮಂಜುನಾಥ ಕಟಿಗ್ಗಾರ, ವಾಸಿಂ ಮಸೂತಿಮನಿ, ಮರದಾನಲಿ ದೊಡ್ಡಮನಿ, ರಸೂಲಸಾಬ ದೌಲತ್ತರ, ಸರ್ಫರಾಜ್, ರಾಘವೇದ್ರ ವಿಠೋಜಿ, ಫಾರೂಕ್ ಮುಲ್ಲಾ, ಮಲ್ಲಪ್ಪ ಸೊರಟೂರ ರಿಯಾಜ್ ಮಸೂತಿಮನಿ ಇದ್ದರು.

800 ಗ್ರಾಂ ಇದ್ದ ಚಿನ್ನ 466 ಗ್ರಾಂ ಹೇಗಾಯ್ತು?! ವ್ಹಿ.ಆರ್. ಗೋವಿಂದಗೌಡ್ರ

0

ವಿಜಯಸಾಕ್ಷಿ ಸುದ್ದಿ, ಗದಗ: ಲಕ್ಕುಂಡಿ ಗ್ರಾಮದಲ್ಲಿ 800 ಗ್ರಾಂ ಚಿನ್ನ ಪತ್ತೆಯಾಗಿದೆ ಎಂದು ಸಿದ್ದು ಪಾಟೀಲ ಎನ್ನುವ ವ್ಯಕ್ತಿ ದೂರವಾಣಿ ಮೂಲಕ ಸಿಎಂಗೆ ಮಾಹಿತಿ ನೀಡಿದ್ದಾರೆ. ಈಗ ಆ ಚಿನ್ನ 466 ಗ್ರಾಂ ಇದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಇನ್ನುಳಿದ ಚಿನ್ನ ಎಲ್ಲಿ ಹೋಯಿತು? ಮುಖ್ಯಮಂತ್ರಿಗೆ ಸುಳ್ಳು ಹೇಳಿದರಾ ಎಂದು ರಾಜ್ಯ ಜೆಡಿಎಸ್ ವಕ್ತಾರ ವ್ಹಿ.ಆರ್. ಗೋವಿಂದಗೌಡ್ರ ಪ್ರಶ್ನಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿನ್ನ ಪತ್ತೆಯಾದ ಬಗ್ಗೆ ಸಿಎಂ ಹಾಗೂ ಸಚಿವರಿಗೆ ತಿಳಿಸುವುದಕ್ಕೂ ಮೊದಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಿಳಿಸಬಹುದಿತ್ತು. ಅಧಿಕಾರಿಗಳು ಚಿನ್ನ ಪರಿಶೀಲನೆ ಮಾಡುವ ವೇಳೆ ಸಿದ್ದು ಪಾಟೀಲ ಯಾಕೆ ಹಾಜರಿದ್ದರು? ಪುರಾತತ್ವ ಇಲಾಖೆ ಅಧಿಕಾರಿ ರಮೇಶ್ ಮೂಲಿಮನಿ ಮೇಲೆ ಒತ್ತಡ ತಂದು ನಿಧಿ ಎಂದು ಹೇಳಿಸಿದ್ದಾರೆ. ನಿಧಿ ಎಂದು ಸಾಬೀತಾದರೆ ಬಯಲು ವಸ್ತು ಸಂಗ್ರಹಾಲಯಕ್ಕೆ ಸರ್ಕಾರದಿಂದ ಹಣ ಬರುತ್ತದೆ ಎನ್ನುವ ಕಾರಣಕ್ಕೆ ನಿಧಿ ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಚಿನ್ನ 100 ವರ್ಷಕ್ಕೂ ಹಳೆಯದ್ದು ಎಂದು ಹೇಳುತ್ತಾರೆ. ತನಿಖೆ ನಡೆಯದೇ 100 ವರ್ಷದ್ದು ಎಂದು ಯಾವ ಆಧಾರದ ಮೇಲೆ ಹೇಳುತ್ತಾರೆ? ಪಂಚನಾಮೆ ನಡೆಸಿ ಪಂಚರ ಸಹಿ ಮಾಡಲಾಗಿದೆ. ಆದರೆ, ಮನೆ ಮಾಲಕರ ಸಹಿ ಪಡೆದಿಲ್ಲ. ತರಾತುರಿಯಲ್ಲಿ ಒಬ್ಬೊಬ್ಬರು ಒಂದೊAದು ಹೇಳಿಕೆ ನೀಡುತ್ತಿದ್ದಾರೆ. ಬಯಲು ವಸ್ತು ಸಂಗ್ರಹಾಲಯಕ್ಕೆ ಹಣ ತರಿಸುವ ಉದ್ದೇಶದಿಂದ ಈ ರೀತಿ ಕುತಂತ್ರ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ಲಕ್ಕುಂಡಿ ಗ್ರಾಮದ ರೈತ ಶರಣಪ್ಪ ಕಮತರ ಎನ್ನುವರ ಜಮೀನನ್ನು ಉತ್ಖನನಕ್ಕಾಗಿ ಸ್ವಾಧೀನ ಮಾಡಿಕೊಂಡಿದ್ದಾರೆ. ಕಳೆದ 18 ವರ್ಷದಿಂದ ಆ ಜಮೀನು ಪಾಳು ಬಿದ್ದಿದೆ. ಮೊದಲ ಒಂದು ವರ್ಷ ಬೆಳೆ ಪರಿಹಾರ ನೀಡಿ ನಂತರ ಒಂದು ರೂಪಾಯಿ ಹಣ ನೀಡಿಲ್ಲ. ಇದೇ ಪರಿಸ್ಥಿತಿ ರಿತ್ತಿ ಕುಟುಂಬಕ್ಕೂ ಆಗುವ ಸಾಧ್ಯತೆ ಇದೆ ಎಂದರು.

ಈ ವೇಳೆ ಜಿ.ಕೆ. ಕೊಳ್ಳಿಮಠ, ಪ್ರಫುಲ್ ಪುಣೇಕರ, ಶೇಖರ್ ಗೌರಿಪುರ, ಬಸನಗೌಡ ನಾಡಗೌಡ್ರ ಉಪಸ್ಥಿತರಿದ್ದರು.

“ನಿಧಿ ಸಿಕ್ಕಾಗ ತನಿಖೆ ನಡೆಸಲು ಸಂಬಂಧಪಟ್ಟ ಇಲಾಖೆಗಳಿವೆ. ಆದರೆ, ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಕುರಿತು ಆಟವಾಡುವ ಹುಡುಗರ ರೀತಿ ವರ್ತಿಸಲಾಗುತ್ತಿದೆ. ಮನೆ ಮಾಲಕರನ್ನು ಹೆದರಿಸಿ ವ್ಯವಸ್ಥಿತ ಪಿತೂರಿ ನಡೆಸಲಾಗುತ್ತಿದೆ. ಘಟನೆಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ ಮಧ್ಯಸ್ಥಿಕೆಯ ಕುರಿತು ಸೂಕ್ತ ತನಿಖೆ ಆಗಬೇಕು”

  • ವೀರನಗೌಡ ನಾಡಗೌಡ್ರ.
    ಜಿ.ಪಂ ಮಾಜಿ ಅಧ್ಯಕ್ಷ

ಲಿಂಗದೀಕ್ಷೆಯರಿಂದ ಆಧ್ಯಾತ್ಮಿಕ ಜ್ಞಾನ: ಡಾ. ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹೂವಿನ ಶಿಗ್ಲಿ ಮಠದ ಜಾತ್ರಾ ಮಹೋತ್ಸವದ ನಿಮಿತ್ತ ವಟುಗಳಿಗೆ ಲಿಂಗದೀಕ್ಷೆ ಹಾಗೂ ಅಯ್ಯಾಚಾರ ಸಂಸ್ಕಾರ ಕಾರ್ಯಕ್ರಮವನ್ನು ಮಂಗಳವಾರ ಮೈಸೂರಿನ ಜಪದ ಕಟ್ಟಿ ಮಠ ಬನ್ನಿಕೊಪ್ಪದ ಪೂಜ್ಯರಾದ ಡಾ. ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು ನೆರವೇರಿಸಿದರು.

ಈ ವೇಳೆ ಆಶೀರ್ವಚನ ನೀಡಿದ ಬನ್ನಿಕೊಪ್ಪದ ಶ್ರೀಗಳು, ಲಿಂಗಧಾರಣೆ, ಶಿವಪೂಜೆಯಿಂದ ಆತ್ಮಬಲ ಹೆಚ್ಚಿ ಸಮಾಜದಲ್ಲಿನ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಪ್ರಾಪ್ತವಾಗುತ್ತದೆ. ವಿಭೂತಿ, ಲಿಂಗ, ಜೋಳಿಗೆ, ದಂಡ ಇವು ಸಂಸ್ಕಾರದ ಸಂಕೇತಗಳಾಗಿವೆ. ಲಿಂಗದೀಕ್ಷೆಯರಿಂದ ಆಧ್ಯಾತ್ಮಿಕ ಜ್ಞಾನ, ಬದುಕಿನ ಶಾಂತಿ, ನೆಮ್ಮದಿಗೆ ಪೂರಕವಾದ ಅಂತಃಶಕ್ತಿ ವೃದ್ಧಿಸುತ್ತದೆ. ನಿತ್ಯದ ಬದುಕಿನಲ್ಲಿ ಆಧ್ಯಾತ್ಮಿಕತೆ, ಧ್ಯಾನ, ಪ್ರಾರ್ಥನೆ ರೂಢಿಸಿಕೊಳ್ಳಬೇಕು. ಗುರು-ಹಿರಿಯರಿಗೆ ಗೌರವ ನೀಡುವುದು, ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಬೆಳೆಸುವ ಮೊದಲಾದ ಗುಣಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಕಾರ್ಯವಾಗಬೇಕು ಎಂದು ಹೇಳಿದರು.

ಮಂಗಳವಾರ ಶ್ರೀ ಮಠದಲ್ಲಿ 47ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಷಟ್‌ಸ್ಥಲ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಧ್ವಜಾರೋಹಣ ನೆರವೇರಿಸಿದ ಹತ್ತಿಮತ್ತೂರಿನ ಶ್ರೀ ನಿಜಗುಣ ಮಹಾಸ್ವಾಮಿಗಳು ಮಾತನಾಡಿ, ಧರ್ಮ ಧ್ವಜ ಕೇವಲ ಜಾತ್ರಾ ಆರಂಭಕ್ಕಲ್ಲ, ಎಲ್ಲರೂ ರಾಷ್ಟ್ರ ಧ್ವಜಕ್ಕೆ ಗೌರವ ನೀಡುವಂತೆ ಧರ್ಮ ಧ್ವಜವನ್ನೂ ಗೌರವಿಸಬೇಕು. ಹೂವಿನಶಿಗ್ಲಿ ಮಠವು ಗ್ರಾಮೀಣ ಭಾಗದ ಬಡವರು, ಅನಾಥ ಮಕ್ಕಳಿಗೆ ಹತ್ತಾರು ಸಂಕಷ್ಟಗಳ ನಡುವೆಯೂ ತ್ರಿವಿಧ ದಾಸೋಹ ಸೇವೆಯ ಜತೆಗೆ ಲಿಂ. ನಿರಂಜನ ಶ್ರೀಗಳು ಹಾಕಿಕೊಟ್ಟ ಮಠದ ಪರಂಪರೆ ಉಳಿಸುತ್ತ, ಧರ್ಮ, ಸಂಸ್ಕಾರಗಳನ್ನು ಬಿತ್ತುವ ಕೆಲಸ ಮಾಡುತ್ತಾ ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ನುಡಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀಮಠದ ಚನ್ನವೀರಮಹಾಸ್ವಾಮಿಗಳು ಮಾತನಾಡಿ, ಹೂವಿನಶಿಗ್ಲಿ ಸೇರಿ ನಾಡಿನಾದ್ಯಂತ ಇರುವ ಭಕ್ತರು ಮಾಡುತ್ತಿರುವ ಸೇವಾಕಾರ್ಯದಿಂದ ಮಠದಲ್ಲಿ ತ್ರಿವಿಧ ಸೇವೆ, ಜಾತ್ರೆ, ಮಹೋತ್ಸವ, ಪರಂಪರೆ ಉಳಿಸಿಕೊಂಡು ಬರಲು ಸಾಧ್ಯವಾಗುತ್ತಿದೆ ಎಂದರು.

ಕಾರ್ಯಕ್ರಮದ ನೇತೃತ್ವ ವಹಿಸಿದ ಮಠಾಧ್ಯಕ್ಷರಾದ ಚನ್ನವೀರ ಶ್ರೀಗಳು ಆಶೀರ್ವಚನ ನೀಡಿದರು. ಗುರುಕುಲ ಶಿಕ್ಷಕರು ಹಾಗೂ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು. ಕೆ.ಎಸ್. ಇಟಗಿಮಠ ನಿರೂಪಿಸಿದರು.

ಸಾಹಿತ್ಯದಿಂದ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ: ವಿವೇಕಾನಂದಗೌಡ ಪಾಟೀಲ 

0

ವಿಜಯಸಾಕ್ಷಿ ಸುದ್ದಿ, ಗದಗ: ಸಾಹಿತ್ಯ, ಸಂಸ್ಕೃತಿಯ ವಾರಸುದಾರರಾಗಿರುವ ಯುವಜನಾಂಗ ವಿದ್ಯಾರ್ಥಿ ದೆಸೆಯಿಂದಲೇ ಅಭಿರುಚಿಯನ್ನು ಬೆಳೆಸಿಕೊಂಡು ಸಹೃದಯತೆ ಹೊಂದಬೇಕು. ಕಲೆ, ಸಾಹಿತ್ಯ, ಸಂಗೀತವಿಲ್ಲದ ಬದುಕು ಪಶು ಸಮಾನ ಎಂಬ ಹೇಳಿಕೆ ಇದೆ. ವಿವಿಧ ಕೃತಿಗಳನ್ನು ಓದುವ ಮೂಲಕ ವಿಶಾಲ ಜಗತ್ತಿಗೆ ತೆರೆದುಕೊಂಡಾಗ ಸಂಕುಚಿತತೆ ಕಡಿಮೆಯಾಗಿ ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸ್ವಾಮಿ ವಿವೇಕಾನಂದ ಜನ್ಮದಿನದ ನಿಮಿತ್ತ ಯುವ ದಿನಾಚರಣೆ ಅಂಗವಾಗಿ ಜರುಗಿದ ಸಾಹಿತ್ಯಾಭಿರುಚಿ ಸಂವಾದ ಹಾಗೂ ಯುವ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮೂಹ ಮಾಧ್ಯಮಗಳಲ್ಲಿ ಹೆಚ್ಚು ಸಮಯ ವ್ಯಯ, ಮೊಬೈಲ್ ಗೀಳು, ಪರೀಕ್ಷಾಮುಖಿ ವ್ಯವಸ್ಥೆ, ಓದಿನ ಪೂರಕವಾಗಿರದ ಕುಟುಂಬ ವ್ಯವಸ್ಥೆ, ಶಿಕ್ಷಣ ಮಾಧ್ಯಮದಲ್ಲಿ ಇಂಗ್ಲಿಷ್‌ನ ಪ್ರವೇಶ, ಪಾಲಕರ ಇಂಗ್ಲಿಷ್ ವ್ಯಾಮೋಹ, ಮಾರ್ಗದರ್ಶನದ ಕೊರತೆ ಮುಂತಾದ ಕಾರಣದಿಂದಾಗಿ ಇಂದಿನ ಯುವಕರು ಸಾಹಿತ್ಯದಿಂದ ವಿಮುಖರಾಗುತ್ತಿದ್ದಾರೆ. ಮತ್ತೊಂದೆಡೆ ಸಮೂಹ ಮಾಧ್ಯಮಗಳನ್ನೇ ಸಾಧನವಾಗಿಸಿಕೊಂಡು ಓದು ಮತ್ತು ಕ್ರಿಯಾಶೀಲತೆಯಲ್ಲೂ ತೊಡಗಿಕೊಂಡಿದ್ದಾರೆ. ಉತ್ತಮ ಕೃತಿಗಳನ್ನು ಅಂತರ್ಜಾಲದ ಮೂಲಕ ಪ್ರಚಾರ ಮಾಡಿ ಓದಿನ ಕಡೆಗೆ ಯುವಕರನ್ನು ಸೆಳೆಯುವ ಅಗತ್ಯವಿದೆ ಎಂಬ ಅಭಿಪ್ರಾಯಗಳನ್ನು ಎಂ.ಎಸ್. ಹುಲ್ಲೂರ, ವೀರೇಶ ಹರ್ಲಾಪೂರ, ರಾಜೇಶ್ವರಿ ಬಡ್ನಿ, ಅನುಪ್ರಿಯಾ ಬಾಪುರಿ, ಅನ್ನಪೂರ್ಣ ಕಾಡಣ್ಣವರ, ಮೇಘಾ ಹಾದಿಮನಿ ಸಂವಾದದಲ್ಲಿ ತಿಳಿಸಿದರು.

ನಂತರ ಜರುಗಿದ ಯುವ ಕವಿಗೋಷ್ಠಿಯಲ್ಲಿ ಗಣೇಶ ಪಾಟೀಲ, ಲಕ್ಷ್ಮಿ ಪಾಟೀಲ, ಸಂತೋಷ ಜಿಜ್ಜೇರಿ, ಸಂಗೀತಾ ಜೋಗಿನ, ಅನ್ನಪೂರ್ಣ ಕುರಿ, ಅನಿತಾ ಅರಳಿ ಕವನ ವಾಚಿಸಿದರು. ಅಮರೇಶ ರಾಂಪೂರ ಸ್ವಾಗತಿಸಿದರು. ರಕ್ಷಿತಾ ಗಿಡ್ನಂದಿ ನಿರೂಪಿಸಿದರು. ರಾಹುಲ ಗಿಡ್ನಂದಿ ವಂದಿಸಿದರು.

ಕಾರ್ಯಕ್ರಮದಲ್ಲಿ ಚಂದ್ರಶೇಖರ ವಸ್ತ್ರದ, ವಿದ್ಯಾಧರ ದೊಡ್ಡಮನಿ, ಅನ್ನದಾನಿ ಹಿರೇಮಠ, ಶಶಿಕಾಂತ ಕೊರ್ಲಹಳ್ಳಿ, ವಿ.ಎಸ್. ದಲಾಲಿ, ಕೆ.ಎಸ್. ದಂಡಗಿ, ಕಿಶೋರಬಾಬು ನಾಗರಕಟ್ಟಿ, ಶೈಲಶ್ರೀ ಕಪ್ಪರದ, ಡಿ.ಎಸ್. ಬಾಪುರಿ, ಕೆ.ಎಸ್. ಬಾಳಿಕಾಯಿ, ಎ.ಎಸ್. ಮಕಾನದಾರ, ಬಸವರಾಜ ಗಣಪ್ಪನವರ, ಸಿ.ಎಂ. ಮಾರನಬಸರಿ, ರತ್ನಾ ಪುರಂತರ, ಶೈಲಜಾ ಗಿಡ್ನಂದಿ, ರಾಜಶೇಖರ ಕರಡಿ, ಬಿ.ಬಿ. ಹೊಳಗುಂದಿ, ಶಿಲ್ಪಾ ಮ್ಯಾಗೇರಿ, ಐಶ್ವರ್ಯ ಧರಣೆಪ್ಪಗೌಡರ, ಪ್ರತಿಭಾ ಪಾಟೀಲ, ಪ್ರೇಮಾ ಕಾಡಣ್ಣವರ, ಎಂ.ಎ. ಮಕಾನದಾರ, ಎಸ್.ಪಿ. ಗೌಳಿ, ರವಿ ದೇವರಡ್ಡಿ, ಸಾಕ್ಷಿ ದೇವರಡ್ಡಿ, ವಿ.ಎಸ್. ದಿಂಡೂರ, ಅಂದಾನೆಪ್ಪ ವಿಭೂತಿ, ಸುಧೀರ ಘೋರ್ಪಡೆ, ರಾಮಚಂದ್ರ ಮೋನೆ, ಆನಂದ ಹಡಪದ, ಉಮಾ ಕಣವಿ ಮೊದಲಾದವರು ಉಪಸ್ಥಿತರಿದ್ದರು.

ಯುವ ಸಮೂಹ ಅಂತರ್ಜಾಲದಲ್ಲಿ ತಮ್ಮನ್ನು ತಾವು ಕಳೆದುಕೊಳ್ಳದೇ ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಬೇಕು. ಶ್ರೀಮಂತ ಸಂಸ್ಕೃತಿಯ ಅರಿವನ್ನು ಹೊಂದಬೇಕು. ಯುವಕರಲ್ಲಿರುವ ಅಗಾಧ ಶಕ್ತಿ, ಸಾಮರ್ಥ್ಯ ವ್ಯಕ್ತಿಯ ಉನ್ನತಿಯ ಜೊತೆಗೆ ದೇಶದ ಪ್ರಗತಿಗೆ ಪೂರಕವಾಗಬೇಕು. ಆಗ ಮಾತ್ರ ಸ್ವಾಮಿ ವಿವೇಕಾನಂದರ ಆದರ್ಶ ಪಾಲನೆಯಾಗುತ್ತದೆ ಎಂದು ವಿವೇಕಾನಂದಗೌಡ ಪಾಟೀಲ ತಿಳಿಸಿದರು.

ಇನ್ನರ್ ವ್ಹೀಲ್ ಸಂಸ್ಥಾಪನಾ ದಿನಾಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಸ್ನೇಹ ಮತ್ತು ಸೇವೆಯ ಉದ್ದೇಶದಿಂದ ಸ್ಥಾಪಿತಗೊಂಡ ಅಂತಾರಾಷ್ಟ್ರೀಯ ಇನ್ನರ್ ವ್ಹೀಲ್ ಸಂಸ್ಥೆಯ 102ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಪ್ರಕೃತಿಯ ಸೊಬಗಿನಲ್ಲಿ ಆಚರಿಸಿದರು.

ಕ್ಲಬ್ಬಿನ ಅಧ್ಯಕ್ಷರಾದ ಅಶ್ವಿನಿ ಜಗತಾಪ್ ಅವರು ಸೇವೆಯನ್ನು ಮೂಲ ಉದ್ದೇಶವಾಗಿರಿಸಿಕೊಂಡು ಸ್ಥಾಪಿಸಿದ ಇನ್ನರ್ ವ್ಹೀಲ್ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯನ್ನು ಪ್ರಕೃತಿಯ ಮಡಿಲಿನಲ್ಲಿರುವ ಯು.ಕೆ. ನೆಚರ್ಸ್ ಸ್ಟೇಯಲ್ಲಿ ಹಮ್ಮಿಕೊಂಡ ಕಾರಣ ಮತ್ತು ಕಾರ್ಯಗಳ ಬಗ್ಗೆ ಮಾತನಾಡಿದರು.

ಸಂಸ್ಥೆಯ ಹಿರಿಯರು ಮತ್ತು ಮಾಜಿ ಅಧ್ಯಕ್ಷರಾದ ಶ್ರೇಯಾ ಪವಾಡಶೆಟ್ಟರ್ ಮಾತನಾಡಿ, 1924ರ ಜನವರಿ 10ರಂದು ಮಾರ್ಗರೇಟ್ ಒಲಿವರ್ ಗೋಲ್ಡಿಂಗ್ ಅವರು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ಇನ್ನರ್ ವ್ಹೀಲ್ ಕ್ಲಬ್ ಸ್ಥಾಪಿಸಿದ ರೀತಿ, ಬೆಳೆದುಬಂದ ಹಾದಿಯನ್ನು ವಿವರಿಸಿದರು.

ಕಾರ್ಯಕ್ರಮವನ್ನು ಕಾರ್ಯದರ್ಶಿ ಶಿವಲೀಲಾ ಅಕ್ಕಿ ನಿರೂಪಿಸಿದರು. ಇನ್ನರ್ ವ್ಹೀಲ್ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಪ್ರವಾಸವು ಆಟ, ಸಂಗೀತ, ನೃತ್ಯದೊಂದಿಗೆ ಆರಂಭವಾಗಿ ಮುಸ್ಸಂಜೆಯ ತಂಪಿನಲ್ಲಿಯೂ ಬೆಚ್ಚನೆಯ ಅನುಭವವನ್ನು ನೀಡಿದರೆ, ನಸುಕಿನ ಪಕ್ಷಿಗಳ ಚಿಲಿಪಿಲಿ ಹಾಗೂ ನೀರಿನ ಕಲರವದ ನಡುವಿನ ಪಯಣ ಪ್ರವಾಸಕ್ಕೆ ಶೋಭೆಯನ್ನು ತಂದುಕೊಟ್ಟಿತು.

ಮಾಜಿ ಅಧ್ಯಕ್ಷರುಗಳಾದ ಆಶಾ ಹುಕ್ಕೇರಿ, ಆಶಾ ಪಟ್ಟಣಶೆಟ್ಟಿ, ಸುಲೋಚನಾ ಐಹೊಳ್ಳಿ, ಖಜಾಂಚಿ ಪುಷ್ಪಾ ಭಂಡಾರಿ, ಸಂಪಾದಕರಾದ ವೀಣಾ ಕಾವೇರಿ, ಸಿಪಿಸಿಸಿ ಮೀನಾಕ್ಷಿ ಕೊರವಣ್ಣನವರ್, ಕೋ-ಸಿಪಿಸಿಸಿ ಶಿಲ್ಪಾ ಅಕ್ಕಿ, ಸದಸ್ಯರುಗಳಾದ ಸುಶೀಲಾ ಕೋಟಿ, ಉಮಾ ಮುನವಳ್ಳಿ, ಉಮಾ ಕವಳಿಕಾಯಿ, ಸಂಧ್ಯಾ ಕೋಟಿ, ಸುನಂದಾ ಭೂಮರೆಡ್ಡಿ, ಸುವರ್ಣಾ ಮದರಿಮಠ, ಪ್ರತಿಭಾ ಭದ್ರಶೆಟ್ಟಿ, ಪವಿತ್ರಾ ಬಿರಾದರ್, ಗೀತಾ ನಾಲ್ವಾಡ, ದೀಪಾ ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

error: Content is protected !!