ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹೂವಿನ ಶಿಗ್ಲಿ ಮಠದ ಜಾತ್ರಾ ಮಹೋತ್ಸವದ ನಿಮಿತ್ತ ವಟುಗಳಿಗೆ ಲಿಂಗದೀಕ್ಷೆ ಹಾಗೂ ಅಯ್ಯಾಚಾರ ಸಂಸ್ಕಾರ ಕಾರ್ಯಕ್ರಮವನ್ನು ಮಂಗಳವಾರ ಮೈಸೂರಿನ ಜಪದ ಕಟ್ಟಿ ಮಠ ಬನ್ನಿಕೊಪ್ಪದ ಪೂಜ್ಯರಾದ ಡಾ. ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು ನೆರವೇರಿಸಿದರು.
ಈ ವೇಳೆ ಆಶೀರ್ವಚನ ನೀಡಿದ ಬನ್ನಿಕೊಪ್ಪದ ಶ್ರೀಗಳು, ಲಿಂಗಧಾರಣೆ, ಶಿವಪೂಜೆಯಿಂದ ಆತ್ಮಬಲ ಹೆಚ್ಚಿ ಸಮಾಜದಲ್ಲಿನ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಪ್ರಾಪ್ತವಾಗುತ್ತದೆ. ವಿಭೂತಿ, ಲಿಂಗ, ಜೋಳಿಗೆ, ದಂಡ ಇವು ಸಂಸ್ಕಾರದ ಸಂಕೇತಗಳಾಗಿವೆ. ಲಿಂಗದೀಕ್ಷೆಯರಿಂದ ಆಧ್ಯಾತ್ಮಿಕ ಜ್ಞಾನ, ಬದುಕಿನ ಶಾಂತಿ, ನೆಮ್ಮದಿಗೆ ಪೂರಕವಾದ ಅಂತಃಶಕ್ತಿ ವೃದ್ಧಿಸುತ್ತದೆ. ನಿತ್ಯದ ಬದುಕಿನಲ್ಲಿ ಆಧ್ಯಾತ್ಮಿಕತೆ, ಧ್ಯಾನ, ಪ್ರಾರ್ಥನೆ ರೂಢಿಸಿಕೊಳ್ಳಬೇಕು. ಗುರು-ಹಿರಿಯರಿಗೆ ಗೌರವ ನೀಡುವುದು, ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಬೆಳೆಸುವ ಮೊದಲಾದ ಗುಣಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಕಾರ್ಯವಾಗಬೇಕು ಎಂದು ಹೇಳಿದರು.
ಮಂಗಳವಾರ ಶ್ರೀ ಮಠದಲ್ಲಿ 47ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಷಟ್ಸ್ಥಲ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಧ್ವಜಾರೋಹಣ ನೆರವೇರಿಸಿದ ಹತ್ತಿಮತ್ತೂರಿನ ಶ್ರೀ ನಿಜಗುಣ ಮಹಾಸ್ವಾಮಿಗಳು ಮಾತನಾಡಿ, ಧರ್ಮ ಧ್ವಜ ಕೇವಲ ಜಾತ್ರಾ ಆರಂಭಕ್ಕಲ್ಲ, ಎಲ್ಲರೂ ರಾಷ್ಟ್ರ ಧ್ವಜಕ್ಕೆ ಗೌರವ ನೀಡುವಂತೆ ಧರ್ಮ ಧ್ವಜವನ್ನೂ ಗೌರವಿಸಬೇಕು. ಹೂವಿನಶಿಗ್ಲಿ ಮಠವು ಗ್ರಾಮೀಣ ಭಾಗದ ಬಡವರು, ಅನಾಥ ಮಕ್ಕಳಿಗೆ ಹತ್ತಾರು ಸಂಕಷ್ಟಗಳ ನಡುವೆಯೂ ತ್ರಿವಿಧ ದಾಸೋಹ ಸೇವೆಯ ಜತೆಗೆ ಲಿಂ. ನಿರಂಜನ ಶ್ರೀಗಳು ಹಾಕಿಕೊಟ್ಟ ಮಠದ ಪರಂಪರೆ ಉಳಿಸುತ್ತ, ಧರ್ಮ, ಸಂಸ್ಕಾರಗಳನ್ನು ಬಿತ್ತುವ ಕೆಲಸ ಮಾಡುತ್ತಾ ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ನುಡಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀಮಠದ ಚನ್ನವೀರಮಹಾಸ್ವಾಮಿಗಳು ಮಾತನಾಡಿ, ಹೂವಿನಶಿಗ್ಲಿ ಸೇರಿ ನಾಡಿನಾದ್ಯಂತ ಇರುವ ಭಕ್ತರು ಮಾಡುತ್ತಿರುವ ಸೇವಾಕಾರ್ಯದಿಂದ ಮಠದಲ್ಲಿ ತ್ರಿವಿಧ ಸೇವೆ, ಜಾತ್ರೆ, ಮಹೋತ್ಸವ, ಪರಂಪರೆ ಉಳಿಸಿಕೊಂಡು ಬರಲು ಸಾಧ್ಯವಾಗುತ್ತಿದೆ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ ಮಠಾಧ್ಯಕ್ಷರಾದ ಚನ್ನವೀರ ಶ್ರೀಗಳು ಆಶೀರ್ವಚನ ನೀಡಿದರು. ಗುರುಕುಲ ಶಿಕ್ಷಕರು ಹಾಗೂ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು. ಕೆ.ಎಸ್. ಇಟಗಿಮಠ ನಿರೂಪಿಸಿದರು.

