Home Blog Page 181

ಲಿಂಗದೀಕ್ಷೆಯರಿಂದ ಆಧ್ಯಾತ್ಮಿಕ ಜ್ಞಾನ: ಡಾ. ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹೂವಿನ ಶಿಗ್ಲಿ ಮಠದ ಜಾತ್ರಾ ಮಹೋತ್ಸವದ ನಿಮಿತ್ತ ವಟುಗಳಿಗೆ ಲಿಂಗದೀಕ್ಷೆ ಹಾಗೂ ಅಯ್ಯಾಚಾರ ಸಂಸ್ಕಾರ ಕಾರ್ಯಕ್ರಮವನ್ನು ಮಂಗಳವಾರ ಮೈಸೂರಿನ ಜಪದ ಕಟ್ಟಿ ಮಠ ಬನ್ನಿಕೊಪ್ಪದ ಪೂಜ್ಯರಾದ ಡಾ. ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು ನೆರವೇರಿಸಿದರು.

ಈ ವೇಳೆ ಆಶೀರ್ವಚನ ನೀಡಿದ ಬನ್ನಿಕೊಪ್ಪದ ಶ್ರೀಗಳು, ಲಿಂಗಧಾರಣೆ, ಶಿವಪೂಜೆಯಿಂದ ಆತ್ಮಬಲ ಹೆಚ್ಚಿ ಸಮಾಜದಲ್ಲಿನ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಪ್ರಾಪ್ತವಾಗುತ್ತದೆ. ವಿಭೂತಿ, ಲಿಂಗ, ಜೋಳಿಗೆ, ದಂಡ ಇವು ಸಂಸ್ಕಾರದ ಸಂಕೇತಗಳಾಗಿವೆ. ಲಿಂಗದೀಕ್ಷೆಯರಿಂದ ಆಧ್ಯಾತ್ಮಿಕ ಜ್ಞಾನ, ಬದುಕಿನ ಶಾಂತಿ, ನೆಮ್ಮದಿಗೆ ಪೂರಕವಾದ ಅಂತಃಶಕ್ತಿ ವೃದ್ಧಿಸುತ್ತದೆ. ನಿತ್ಯದ ಬದುಕಿನಲ್ಲಿ ಆಧ್ಯಾತ್ಮಿಕತೆ, ಧ್ಯಾನ, ಪ್ರಾರ್ಥನೆ ರೂಢಿಸಿಕೊಳ್ಳಬೇಕು. ಗುರು-ಹಿರಿಯರಿಗೆ ಗೌರವ ನೀಡುವುದು, ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಬೆಳೆಸುವ ಮೊದಲಾದ ಗುಣಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಕಾರ್ಯವಾಗಬೇಕು ಎಂದು ಹೇಳಿದರು.

ಮಂಗಳವಾರ ಶ್ರೀ ಮಠದಲ್ಲಿ 47ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಷಟ್‌ಸ್ಥಲ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಧ್ವಜಾರೋಹಣ ನೆರವೇರಿಸಿದ ಹತ್ತಿಮತ್ತೂರಿನ ಶ್ರೀ ನಿಜಗುಣ ಮಹಾಸ್ವಾಮಿಗಳು ಮಾತನಾಡಿ, ಧರ್ಮ ಧ್ವಜ ಕೇವಲ ಜಾತ್ರಾ ಆರಂಭಕ್ಕಲ್ಲ, ಎಲ್ಲರೂ ರಾಷ್ಟ್ರ ಧ್ವಜಕ್ಕೆ ಗೌರವ ನೀಡುವಂತೆ ಧರ್ಮ ಧ್ವಜವನ್ನೂ ಗೌರವಿಸಬೇಕು. ಹೂವಿನಶಿಗ್ಲಿ ಮಠವು ಗ್ರಾಮೀಣ ಭಾಗದ ಬಡವರು, ಅನಾಥ ಮಕ್ಕಳಿಗೆ ಹತ್ತಾರು ಸಂಕಷ್ಟಗಳ ನಡುವೆಯೂ ತ್ರಿವಿಧ ದಾಸೋಹ ಸೇವೆಯ ಜತೆಗೆ ಲಿಂ. ನಿರಂಜನ ಶ್ರೀಗಳು ಹಾಕಿಕೊಟ್ಟ ಮಠದ ಪರಂಪರೆ ಉಳಿಸುತ್ತ, ಧರ್ಮ, ಸಂಸ್ಕಾರಗಳನ್ನು ಬಿತ್ತುವ ಕೆಲಸ ಮಾಡುತ್ತಾ ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ನುಡಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀಮಠದ ಚನ್ನವೀರಮಹಾಸ್ವಾಮಿಗಳು ಮಾತನಾಡಿ, ಹೂವಿನಶಿಗ್ಲಿ ಸೇರಿ ನಾಡಿನಾದ್ಯಂತ ಇರುವ ಭಕ್ತರು ಮಾಡುತ್ತಿರುವ ಸೇವಾಕಾರ್ಯದಿಂದ ಮಠದಲ್ಲಿ ತ್ರಿವಿಧ ಸೇವೆ, ಜಾತ್ರೆ, ಮಹೋತ್ಸವ, ಪರಂಪರೆ ಉಳಿಸಿಕೊಂಡು ಬರಲು ಸಾಧ್ಯವಾಗುತ್ತಿದೆ ಎಂದರು.

ಕಾರ್ಯಕ್ರಮದ ನೇತೃತ್ವ ವಹಿಸಿದ ಮಠಾಧ್ಯಕ್ಷರಾದ ಚನ್ನವೀರ ಶ್ರೀಗಳು ಆಶೀರ್ವಚನ ನೀಡಿದರು. ಗುರುಕುಲ ಶಿಕ್ಷಕರು ಹಾಗೂ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು. ಕೆ.ಎಸ್. ಇಟಗಿಮಠ ನಿರೂಪಿಸಿದರು.

ಸಾಹಿತ್ಯದಿಂದ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ: ವಿವೇಕಾನಂದಗೌಡ ಪಾಟೀಲ 

0

ವಿಜಯಸಾಕ್ಷಿ ಸುದ್ದಿ, ಗದಗ: ಸಾಹಿತ್ಯ, ಸಂಸ್ಕೃತಿಯ ವಾರಸುದಾರರಾಗಿರುವ ಯುವಜನಾಂಗ ವಿದ್ಯಾರ್ಥಿ ದೆಸೆಯಿಂದಲೇ ಅಭಿರುಚಿಯನ್ನು ಬೆಳೆಸಿಕೊಂಡು ಸಹೃದಯತೆ ಹೊಂದಬೇಕು. ಕಲೆ, ಸಾಹಿತ್ಯ, ಸಂಗೀತವಿಲ್ಲದ ಬದುಕು ಪಶು ಸಮಾನ ಎಂಬ ಹೇಳಿಕೆ ಇದೆ. ವಿವಿಧ ಕೃತಿಗಳನ್ನು ಓದುವ ಮೂಲಕ ವಿಶಾಲ ಜಗತ್ತಿಗೆ ತೆರೆದುಕೊಂಡಾಗ ಸಂಕುಚಿತತೆ ಕಡಿಮೆಯಾಗಿ ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸ್ವಾಮಿ ವಿವೇಕಾನಂದ ಜನ್ಮದಿನದ ನಿಮಿತ್ತ ಯುವ ದಿನಾಚರಣೆ ಅಂಗವಾಗಿ ಜರುಗಿದ ಸಾಹಿತ್ಯಾಭಿರುಚಿ ಸಂವಾದ ಹಾಗೂ ಯುವ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮೂಹ ಮಾಧ್ಯಮಗಳಲ್ಲಿ ಹೆಚ್ಚು ಸಮಯ ವ್ಯಯ, ಮೊಬೈಲ್ ಗೀಳು, ಪರೀಕ್ಷಾಮುಖಿ ವ್ಯವಸ್ಥೆ, ಓದಿನ ಪೂರಕವಾಗಿರದ ಕುಟುಂಬ ವ್ಯವಸ್ಥೆ, ಶಿಕ್ಷಣ ಮಾಧ್ಯಮದಲ್ಲಿ ಇಂಗ್ಲಿಷ್‌ನ ಪ್ರವೇಶ, ಪಾಲಕರ ಇಂಗ್ಲಿಷ್ ವ್ಯಾಮೋಹ, ಮಾರ್ಗದರ್ಶನದ ಕೊರತೆ ಮುಂತಾದ ಕಾರಣದಿಂದಾಗಿ ಇಂದಿನ ಯುವಕರು ಸಾಹಿತ್ಯದಿಂದ ವಿಮುಖರಾಗುತ್ತಿದ್ದಾರೆ. ಮತ್ತೊಂದೆಡೆ ಸಮೂಹ ಮಾಧ್ಯಮಗಳನ್ನೇ ಸಾಧನವಾಗಿಸಿಕೊಂಡು ಓದು ಮತ್ತು ಕ್ರಿಯಾಶೀಲತೆಯಲ್ಲೂ ತೊಡಗಿಕೊಂಡಿದ್ದಾರೆ. ಉತ್ತಮ ಕೃತಿಗಳನ್ನು ಅಂತರ್ಜಾಲದ ಮೂಲಕ ಪ್ರಚಾರ ಮಾಡಿ ಓದಿನ ಕಡೆಗೆ ಯುವಕರನ್ನು ಸೆಳೆಯುವ ಅಗತ್ಯವಿದೆ ಎಂಬ ಅಭಿಪ್ರಾಯಗಳನ್ನು ಎಂ.ಎಸ್. ಹುಲ್ಲೂರ, ವೀರೇಶ ಹರ್ಲಾಪೂರ, ರಾಜೇಶ್ವರಿ ಬಡ್ನಿ, ಅನುಪ್ರಿಯಾ ಬಾಪುರಿ, ಅನ್ನಪೂರ್ಣ ಕಾಡಣ್ಣವರ, ಮೇಘಾ ಹಾದಿಮನಿ ಸಂವಾದದಲ್ಲಿ ತಿಳಿಸಿದರು.

ನಂತರ ಜರುಗಿದ ಯುವ ಕವಿಗೋಷ್ಠಿಯಲ್ಲಿ ಗಣೇಶ ಪಾಟೀಲ, ಲಕ್ಷ್ಮಿ ಪಾಟೀಲ, ಸಂತೋಷ ಜಿಜ್ಜೇರಿ, ಸಂಗೀತಾ ಜೋಗಿನ, ಅನ್ನಪೂರ್ಣ ಕುರಿ, ಅನಿತಾ ಅರಳಿ ಕವನ ವಾಚಿಸಿದರು. ಅಮರೇಶ ರಾಂಪೂರ ಸ್ವಾಗತಿಸಿದರು. ರಕ್ಷಿತಾ ಗಿಡ್ನಂದಿ ನಿರೂಪಿಸಿದರು. ರಾಹುಲ ಗಿಡ್ನಂದಿ ವಂದಿಸಿದರು.

ಕಾರ್ಯಕ್ರಮದಲ್ಲಿ ಚಂದ್ರಶೇಖರ ವಸ್ತ್ರದ, ವಿದ್ಯಾಧರ ದೊಡ್ಡಮನಿ, ಅನ್ನದಾನಿ ಹಿರೇಮಠ, ಶಶಿಕಾಂತ ಕೊರ್ಲಹಳ್ಳಿ, ವಿ.ಎಸ್. ದಲಾಲಿ, ಕೆ.ಎಸ್. ದಂಡಗಿ, ಕಿಶೋರಬಾಬು ನಾಗರಕಟ್ಟಿ, ಶೈಲಶ್ರೀ ಕಪ್ಪರದ, ಡಿ.ಎಸ್. ಬಾಪುರಿ, ಕೆ.ಎಸ್. ಬಾಳಿಕಾಯಿ, ಎ.ಎಸ್. ಮಕಾನದಾರ, ಬಸವರಾಜ ಗಣಪ್ಪನವರ, ಸಿ.ಎಂ. ಮಾರನಬಸರಿ, ರತ್ನಾ ಪುರಂತರ, ಶೈಲಜಾ ಗಿಡ್ನಂದಿ, ರಾಜಶೇಖರ ಕರಡಿ, ಬಿ.ಬಿ. ಹೊಳಗುಂದಿ, ಶಿಲ್ಪಾ ಮ್ಯಾಗೇರಿ, ಐಶ್ವರ್ಯ ಧರಣೆಪ್ಪಗೌಡರ, ಪ್ರತಿಭಾ ಪಾಟೀಲ, ಪ್ರೇಮಾ ಕಾಡಣ್ಣವರ, ಎಂ.ಎ. ಮಕಾನದಾರ, ಎಸ್.ಪಿ. ಗೌಳಿ, ರವಿ ದೇವರಡ್ಡಿ, ಸಾಕ್ಷಿ ದೇವರಡ್ಡಿ, ವಿ.ಎಸ್. ದಿಂಡೂರ, ಅಂದಾನೆಪ್ಪ ವಿಭೂತಿ, ಸುಧೀರ ಘೋರ್ಪಡೆ, ರಾಮಚಂದ್ರ ಮೋನೆ, ಆನಂದ ಹಡಪದ, ಉಮಾ ಕಣವಿ ಮೊದಲಾದವರು ಉಪಸ್ಥಿತರಿದ್ದರು.

ಯುವ ಸಮೂಹ ಅಂತರ್ಜಾಲದಲ್ಲಿ ತಮ್ಮನ್ನು ತಾವು ಕಳೆದುಕೊಳ್ಳದೇ ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಬೇಕು. ಶ್ರೀಮಂತ ಸಂಸ್ಕೃತಿಯ ಅರಿವನ್ನು ಹೊಂದಬೇಕು. ಯುವಕರಲ್ಲಿರುವ ಅಗಾಧ ಶಕ್ತಿ, ಸಾಮರ್ಥ್ಯ ವ್ಯಕ್ತಿಯ ಉನ್ನತಿಯ ಜೊತೆಗೆ ದೇಶದ ಪ್ರಗತಿಗೆ ಪೂರಕವಾಗಬೇಕು. ಆಗ ಮಾತ್ರ ಸ್ವಾಮಿ ವಿವೇಕಾನಂದರ ಆದರ್ಶ ಪಾಲನೆಯಾಗುತ್ತದೆ ಎಂದು ವಿವೇಕಾನಂದಗೌಡ ಪಾಟೀಲ ತಿಳಿಸಿದರು.

ಇನ್ನರ್ ವ್ಹೀಲ್ ಸಂಸ್ಥಾಪನಾ ದಿನಾಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಸ್ನೇಹ ಮತ್ತು ಸೇವೆಯ ಉದ್ದೇಶದಿಂದ ಸ್ಥಾಪಿತಗೊಂಡ ಅಂತಾರಾಷ್ಟ್ರೀಯ ಇನ್ನರ್ ವ್ಹೀಲ್ ಸಂಸ್ಥೆಯ 102ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಪ್ರಕೃತಿಯ ಸೊಬಗಿನಲ್ಲಿ ಆಚರಿಸಿದರು.

ಕ್ಲಬ್ಬಿನ ಅಧ್ಯಕ್ಷರಾದ ಅಶ್ವಿನಿ ಜಗತಾಪ್ ಅವರು ಸೇವೆಯನ್ನು ಮೂಲ ಉದ್ದೇಶವಾಗಿರಿಸಿಕೊಂಡು ಸ್ಥಾಪಿಸಿದ ಇನ್ನರ್ ವ್ಹೀಲ್ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯನ್ನು ಪ್ರಕೃತಿಯ ಮಡಿಲಿನಲ್ಲಿರುವ ಯು.ಕೆ. ನೆಚರ್ಸ್ ಸ್ಟೇಯಲ್ಲಿ ಹಮ್ಮಿಕೊಂಡ ಕಾರಣ ಮತ್ತು ಕಾರ್ಯಗಳ ಬಗ್ಗೆ ಮಾತನಾಡಿದರು.

ಸಂಸ್ಥೆಯ ಹಿರಿಯರು ಮತ್ತು ಮಾಜಿ ಅಧ್ಯಕ್ಷರಾದ ಶ್ರೇಯಾ ಪವಾಡಶೆಟ್ಟರ್ ಮಾತನಾಡಿ, 1924ರ ಜನವರಿ 10ರಂದು ಮಾರ್ಗರೇಟ್ ಒಲಿವರ್ ಗೋಲ್ಡಿಂಗ್ ಅವರು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ಇನ್ನರ್ ವ್ಹೀಲ್ ಕ್ಲಬ್ ಸ್ಥಾಪಿಸಿದ ರೀತಿ, ಬೆಳೆದುಬಂದ ಹಾದಿಯನ್ನು ವಿವರಿಸಿದರು.

ಕಾರ್ಯಕ್ರಮವನ್ನು ಕಾರ್ಯದರ್ಶಿ ಶಿವಲೀಲಾ ಅಕ್ಕಿ ನಿರೂಪಿಸಿದರು. ಇನ್ನರ್ ವ್ಹೀಲ್ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಪ್ರವಾಸವು ಆಟ, ಸಂಗೀತ, ನೃತ್ಯದೊಂದಿಗೆ ಆರಂಭವಾಗಿ ಮುಸ್ಸಂಜೆಯ ತಂಪಿನಲ್ಲಿಯೂ ಬೆಚ್ಚನೆಯ ಅನುಭವವನ್ನು ನೀಡಿದರೆ, ನಸುಕಿನ ಪಕ್ಷಿಗಳ ಚಿಲಿಪಿಲಿ ಹಾಗೂ ನೀರಿನ ಕಲರವದ ನಡುವಿನ ಪಯಣ ಪ್ರವಾಸಕ್ಕೆ ಶೋಭೆಯನ್ನು ತಂದುಕೊಟ್ಟಿತು.

ಮಾಜಿ ಅಧ್ಯಕ್ಷರುಗಳಾದ ಆಶಾ ಹುಕ್ಕೇರಿ, ಆಶಾ ಪಟ್ಟಣಶೆಟ್ಟಿ, ಸುಲೋಚನಾ ಐಹೊಳ್ಳಿ, ಖಜಾಂಚಿ ಪುಷ್ಪಾ ಭಂಡಾರಿ, ಸಂಪಾದಕರಾದ ವೀಣಾ ಕಾವೇರಿ, ಸಿಪಿಸಿಸಿ ಮೀನಾಕ್ಷಿ ಕೊರವಣ್ಣನವರ್, ಕೋ-ಸಿಪಿಸಿಸಿ ಶಿಲ್ಪಾ ಅಕ್ಕಿ, ಸದಸ್ಯರುಗಳಾದ ಸುಶೀಲಾ ಕೋಟಿ, ಉಮಾ ಮುನವಳ್ಳಿ, ಉಮಾ ಕವಳಿಕಾಯಿ, ಸಂಧ್ಯಾ ಕೋಟಿ, ಸುನಂದಾ ಭೂಮರೆಡ್ಡಿ, ಸುವರ್ಣಾ ಮದರಿಮಠ, ಪ್ರತಿಭಾ ಭದ್ರಶೆಟ್ಟಿ, ಪವಿತ್ರಾ ಬಿರಾದರ್, ಗೀತಾ ನಾಲ್ವಾಡ, ದೀಪಾ ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಪ್ರಾಚೀನ ದೇವಸ್ಥಾನಗಳನ್ನು ರಕ್ಷಿಸಿ: ವಿ.ಬಿ. ಸೋಮನಕಟ್ಟಿಮಠ

0

ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಪಟ್ಟಣದಲ್ಲಿರುವ ಸೋಮನಾಥ ಲಿಂಗೇಶ್ವರ ದೇವಸ್ಥಾನವು ಅತ್ಯಂತ ಪ್ರಾಚೀನವಾಗಿದ್ದು, ಈ ದೇವಸ್ಥಾನವನ್ನು ದ್ರೋಣಾಚಾರ್ಯರು ನಿರ್ಮಿಸಿದ್ದಾರೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ವಿ.ಬಿ. ಸೋಮನಕಟ್ಟಿಮಠ ಹೇಳಿದರು.

ಅವರು ಮಂಗಳವಾರ ಸಂಗನಗೌಡ (ಮಿಥುನ್) ಪಾಟೀಲರ ಅಭಿಮಾನಿ ಬಳಗದವರು ಸೋಮನಾಥ ಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಅಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ರೋಣ ಪಟ್ಟಣಕ್ಕೆ ಪ್ರಾಚೀನ ಕಾಲದಲ್ಲಿ ದ್ರೋಣಾಪೂರ ಎಂಬ ಹೆಸರಿತ್ತು. ಅಲ್ಲದೆ ಇಲ್ಲಿ ದ್ರೋಣಾಚಾರ್ಯರು ನೆಲೆಸುವ ಮೂಲಕ ಪಟ್ಟಣದಲ್ಲಿ ಅನೇಕ ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ ಎಂಬ ಕುರುಹುಗಳು ಇಂದಿಗೂ ಸಿಗುತ್ತವೆ. ಮುಖ್ಯವಾಗಿ ಮಹಾಭಾರತದಲ್ಲಿ ಕೌರವವರು ಹಾಗೂ ಪಾಂಡವರಿಗೆ ಯುದ್ಧದ ನೈಪುಣ್ಯತೆಯನ್ನು ಹೇಳಿಕೊಟ್ಟ ನೆಲ ನಮ್ಮ ದ್ರೋಣಾಪೂರ ಎಂಬುದು ದೇವಸ್ಥಾನಗಳ ಕಲ್ಲಿನ ಬರೆಯಲಾಗಿರುವ ಬರಹಗಳಲ್ಲಿ ತಿಳಿದುಬರುತ್ತದೆ ಎಂದರು.

ನಮ್ಮ ನಾಡು ಹಾಗೂ ದೇಶದಲ್ಲಿ ಜಕಣಾಚಾರ್ಯರು ಕಟ್ಟಿದ ದೇವಸ್ಥಾನಗಳು ನಮಗೆ ಕಾಣಸಿಗುತ್ತವೆ. ವಿಪರ್ಯಾಸ ಅಂದರೆ ದ್ರೋಣಾಚಾರ್ಯರು ಕಟ್ಟಿರುವ ದೇವಸ್ಥಾನಗಳನ್ನು ರೋಣ ಪಟ್ಟಣದಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಪ್ರತಿಪಾದಿಸಿದ ಅವರು, ಪಟ್ಟಣದ ಜನತೆ ಇತಿಹಾಸವನ್ನು ತಿಳಿದುಕೊಳ್ಳುವ ಮೂಲಕ ಪ್ರಾಚೀನ ದೇವಸ್ಥಾನಗಳನ್ನು ರಕ್ಷಿಸುವ ಕೆಲಸದಲ್ಲಿ ತೊಡಗಬೇಕು. ಅಂದಾಗ ನಮ್ಮ ಊರಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಲು ಸಹಾಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಸಂಗನಗೌಡ ಪಾಟೀಲ ದಂಪತಿಗಳನ್ನು ಸತ್ಕರಿಸಲಾಯಿತು. ಅಸ್ಲಂ ಕೊಪ್ಪಳ, ಯಲ್ಲಪ್ಪ ಕಿರೇಸೂರ, ಬಸವರಾಜ ಹಲಗಿ, ಶಾಬಾಜ್ ಗದಗ, ಬಶೀರ ಕಟ್ಟಿಮನಿ, ತೌಹಿದ್ ಜಲವಾರ, ಸಮೀರ್ ದೊಡ್ಡಮನಿ, ಕೈಪ್ ಮಕಾಂದಾರ, ಮೋದಿನ ಹುಲ್ಯಾಳ, ಭರತ್ ಮಾನೆ, ಮಹದೇವಪ್ಪ ತೆಗ್ಗಿನಮನಿ, ಮಲ್ಲು ರಾಯನಗೌಡ್ರ, ಶಶಿಕುಮಾರ ಹಾದಿಮನಿ ಸೇರಿದಂತೆ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.

ಸಂಗನಗೌಡ ಪಾಟೀಲರ ಅಭಿಮಾನಿ ಬಳಗದವರು ಪ್ರಾಚೀನ ದೇವಸ್ಥಾನದ ಆವರಣದ ಸ್ವಚ್ಛತಾ ಕಾರ್ಯ ಸೇರಿದಂತೆ ದೇವಸ್ಥಾನವನ್ನು ಸಿಂಗರಿಸಿದ್ದಾರೆ. ಅಲ್ಲದೆ ಅನ್ನಸಂತರ್ಪಣೆಯಂತಹ ಮಹತ್ವದ ಕಾರ್ಯವನ್ನು ಮಾಡಿದ್ದು ಸ್ವಾಗತಾರ್ಹ. ಪಟ್ಟಣದಲ್ಲಿರುವ ಎಲ್ಲ ಪ್ರಾಚೀನ ದೇವಾಲಯಗಳ ಬಗ್ಗೆ ನಾವೆಲ್ಲ ತಿಳಿದುಕೊಳ್ಳುವ ಅವಶ್ಯಕೆಯಿದೆ. ಒಳ್ಳೆಯ ಕೆಲಸಗಳಿಗೆ ಶಾಸಕ ಜಿ.ಎಸ್. ಪಾಟೀಲ ಕುಟುಂಬ ಸದಾ ಇರಲಿದೆ ಎಂದು ವಿ.ಬಿ. ಸೋಮನಕಟ್ಟಿಮಠ ಹೇಳಿದರು.

ಚಿಕ್ಕಬಳ್ಳಾಪುರ| ಡ್ರಾಪ್ ನೆಪದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ; ಕಾಮುಕ ಅರೆಸ್ಟ್!

0

ಚಿಕ್ಕಬಳ್ಳಾಪುರ:- ಡ್ರಾಪ್ ನೆಪದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ಜರುಗಿದೆ.

ಗಣೇಶ್ ಬಂಧಿತ ಆರೋಪಿ. ಬಾಗೇಪಲ್ಲಿಯ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂತ್ರಸ್ತೆ, ಬಾಗೇಪಲ್ಲಿಯಿಂದ ವಾಪಸ್ಸು ಚಿಕ್ಕಬಳ್ಳಾಪುರ ತಾಲೂಕಿನ ಸ್ವಗ್ರಾಮಕ್ಕೆ ತೆರಳಲು ಪೆರೇಸಂದ್ರ ಕ್ರಾಸ್ ಬಳಿಯ ಬಸ್‍ನಿಲ್ದಾಣದಲ್ಲಿ ನಿಂತಿದ್ದಳು. ಆ ವೇಳೆ ಅಲ್ಲಿಗೆ ಬಂದ ಬೈಕ್ ಸವಾರ ಗಣೇಶ್​​ ಅಪ್ರಾಪ್ತ ವಿದ್ಯಾರ್ಥಿನಿಗೆ ಡ್ರಾಪ್ ಕೊಡುವ ನೆಪದಲ್ಲಿ ಆಕೆಯನ್ನು ಬೈಕ್ ಮೇಲೆ ಹತ್ತಿಸಿಕೊಂಡಿದ್ದಾನೆ. ನಂತರ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದು ಅತ್ಯಾಚಾರವೆಸಗಿದ್ದಾನಂತೆ. ನಂತರ ಭಯ ಭೀತನಾದ ಆರೋಪಿ ತನ್ನ ಸ್ನೇಹಿತನಿಗೆ ಕರೆ ಮಾಡಿ ಮಾಡಿದ ಪಾಪಕೃತ್ಯವನ್ನು ಹೇಳಿಕೊಂಡಿದ್ದಾನೆ. ಗಣೇಶ್​​ ಸ್ನೇಹಿತ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಆ ಬೆನ್ನಲ್ಲೇ ಪೊಲೀಸರು ನಿರ್ಜನ ಪ್ರದೇಶಕ್ಕೆ ಬಂದು ಹುಡುಕಾಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಆರೋಪಿಯ ಮೊಬೈಲ್​​ ಟ್ರೇಸ್​​ ಮಾಡಲಾಗಿದ್ದು, ನಿರ್ಜನ ಪ್ರದೇಶದಲ್ಲಿ ಕೂಂಬಿಂಗ್ ನಡೆಸಿ ಆರೋಪಿ ಹಾಗೂ ಸಂತ್ರಸ್ತೆಯನ್ನು ಪತ್ತೆಹಚ್ಚಲಾಗಿದೆ. ಬಳಿಕ ವಿದ್ಯಾರ್ಥಿನಿಯನ್ನು ಸ್ಥಳೀಯ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ರವಾನಿಸಿದ್ದು, ಆರೋಪಿ ಗಣೇಶ್​​ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಚಿಕ್ಕಮಗಳೂರು| ಕಾಫಿನಾಡಲ್ಲಿ ರಾತ್ರಿ ವೇಳೆ ಮಚ್ಚು–ರಾಡ್ ಹಿಡಿದು ಸಂಚರಿಸುತ್ತಿದೆ ರಾಬರಿ ಗ್ಯಾಂಗ್!

0

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ರಾತ್ರಿ ವೇಳೆ ಮಚ್ಚು, ರಾಡ್‌ಗಳೊಂದಿಗೆ ಸಂಚರಿಸಿ ದರೋಡೆ ನಡೆಸುವ ಕಳ್ಳರ ಗ್ಯಾಂಗ್ ಸಕ್ರಿಯವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಗುರುತು ಸಿಗದಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ಐವರ ಗ್ಯಾಂಗ್ ಆಯುಧ ಸಮೇತ ರಾತ್ರಿ ವೇಳೆ ಸಂಚರಿಸುತ್ತಿದ್ದು, ಶಬ್ದವಾಗದಂತೆ ಚಪ್ಪಲಿಯನ್ನೂ ಧರಿಸದೆ ಓಡಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ನಗರದ ಪವಿತ್ರವನ ಹಾಗೂ ಟೀಚರ್ಸ್ ಕಾಲೋನಿ ಪ್ರದೇಶದಲ್ಲಿ ಈ ಗ್ಯಾಂಗ್ ನಿರಂತರವಾಗಿ ಸಂಚರಿಸುತ್ತಿದ್ದು, ಈಗಾಗಲೇ ನಾಲ್ಕು ಮನೆಗಳಲ್ಲಿ ಕಳ್ಳತನ ನಡೆದಿರುವ ಮಾಹಿತಿ ಲಭ್ಯವಾಗಿದೆ.

ಕಳ್ಳರ ಗ್ಯಾಂಗ್ ಆಂಧ್ರ ಪ್ರದೇಶ ಮೂಲದವರಾಗಿರಬಹುದು ಎನ್ನಲಾಗಿದ್ದು, ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

ರಾಹುಲ್ ಗಾಂಧಿ ಜೊತೆ ಡಿಕೆಶಿ ಸೀಕ್ರೆಟ್ ಮಾತು; ‘ಕುರ್ಚಿ’ ಒಪ್ಪಂದ ನೆನಪು ಮಾಡಿದ್ರಾ ಡಿಸಿಎಂ! ಸಿದ್ದು ಜೊತೆಯಲ್ಲೂ ಪಿಸುನುಡಿ!

0

ಮೈಸೂರು: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಹೈಕಮಾಂಡ್ ಸೂಚನೆಯಂತೆ ತಣ್ಣಗಾಗಿದ್ದ ಪವರ್ ಶೇರಿಂಗ್ ಒಪ್ಪಂದದ ವಿಚಾರ ಇದೀಗ ಮತ್ತೆ ಮುನ್ನಲೆಗೆ ಬಂದಿದೆ.

ಇಂದು ತಮಿಳುನಾಡಿಗೆ ತೆರಳುವ ಮಾರ್ಗಮಧ್ಯೆ ಮೈಸೂರಿಗೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಕೆಲ ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಮೊದಲು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರತ್ಯೇಕವಾಗಿ ಚರ್ಚಿಸಿದ ರಾಹುಲ್ ಗಾಂಧಿ, ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸೈಡ್‌ಗೆ ಕರೆದುಕೊಂಡು ಹೋಗಿ ಗುಪ್ತವಾಗಿ ಮಾತುಕತೆ ನಡೆಸಿದ್ದಾರೆ.

ವಿಮಾನದಿಂದ ಹೆಲಿಕಾಪ್ಟರ್ ಹತ್ತುವ ಮುನ್ನ ನಡೆದ ಈ ರಹಸ್ಯ ಚರ್ಚೆ ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ. ಡಿಕೆ ಶಿವಕುಮಾರ್ ಅವರು ಪವರ್ ಶೇರಿಂಗ್ ಒಪ್ಪಂದವನ್ನು ರಾಹುಲ್ ಗಾಂಧಿಗೆ ನೆನಪು ಮಾಡಿದ್ರಾ? ಕೊಟ್ಟ ಮಾತು ಉಳಿಸಿಕೊಳ್ಳಲು ತಮ್ಮ ಡಿಮ್ಯಾಂಡ್‌ಗಳನ್ನು ಮುಂದಿಟ್ಟರಾ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿವೆ. ಡಿಕೆ ಶಿವಕುಮಾರ್ ಮತ್ತು ರಾಹುಲ್ ಗಾಂಧಿ ಮಾತನಾಡುತ್ತಿರುವ ಫೋಟೋಗಳು ಲಭ್ಯವಾಗಿದ್ದು, ಈ ಭೇಟಿ ರಾಜ್ಯ ಕಾಂಗ್ರೆಸ್ ಒಳರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ನರೇಗಾ ವಿಚಾರವಾಗಿ ವಿಶೇಷ ಅಧಿವೇಶನ ನಡೆಸಲಿ, ಚರ್ಚೆಗೆ ಸಿದ್ಧ; ಸರ್ಕಾರಕ್ಕೆ ಸಿ.ಟಿ. ರವಿ ಸವಾಲ್

0

ಬೆಂಗಳೂರು: ನರೇಗಾ ವಿಚಾರವಾಗಿ ಸರ್ಕಾರ ವಿಶೇಷ ಅಧಿವೇಶನ ನಡೆಸಿ ಚರ್ಚೆ ಮಾಡಲಿ, ನಾವು ಸಂಪೂರ್ಣವಾಗಿ ಸಿದ್ಧ ಎಂದು ಸರ್ಕಾರಕ್ಕೆ ಮಾಜಿ ಸಚಿವ ಸಿ.ಟಿ. ರವಿ ಸವಾಲ್ ಹಾಕಿದ್ದಾರೆ.

ನರೇಗಾ ವಿಷಯದ ಕುರಿತು ಸರ್ಕಾರ ಇಂದು ವಿಶೇಷ ಕ್ಯಾಬಿನೆಟ್ ಸಭೆ ನಡೆಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ವಿಶೇಷ ಕ್ಯಾಬಿನೆಟ್ ಅಲ್ಲ, ವಿಶೇಷ ಅಧಿವೇಶನವೇ ಕರೆಯಲಿ. ಈಗಾಗಲೇ ವಿಜಯೇಂದ್ರ, ಆರ್. ಅಶೋಕ್ ಹಾಗೂ ಕುಮಾರಸ್ವಾಮಿ ಅವರು ಈ ವಿಚಾರದಿಂದ ರಾಜ್ಯದ ಹಿತಾಸಕ್ತಿಗೆ ಏನು ಧಕ್ಕೆ ಆಗಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡಬೇಕು. ಬೇಕಾದರೆ ಸಾರ್ವಜನಿಕವಾಗಿ ಅಥವಾ ವಿಶೇಷ ಅಧಿವೇಶನದಲ್ಲೇ ಒಂದು ದಿನ ಪೂರ್ಣ ಚರ್ಚೆ ನಡೆಸೋಣ ಎಂದು ಸಿ.ಟಿ. ರವಿ ಹೇಳಿದ್ದಾರೆ.

ನರೇಗಾ ಯೋಜನೆಯಲ್ಲಿ ಎಷ್ಟು ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ? ಲಾಭ ಎಷ್ಟು, ನಷ್ಟ ಎಷ್ಟು? ಮನ್ರೇಗಾ ಮೂಲಕ ಜನರಿಗೆ ಎಷ್ಟು ಲಾಭವಾಗಿದೆ? ಗುತ್ತಿಗೆದಾರರಿಗೆ ಎಷ್ಟು ಲಾಭವಾಗಿದೆ? ಎಷ್ಟು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ? ಎಲ್ಲವನ್ನೂ ತೆರೆದ ಚರ್ಚೆಗೆ ತರುವುದಾಗಿ ಅವರು ಸವಾಲು ಹಾಕಿದರು.

ಇದೇ ವೇಳೆ ರಾಮನ ಹೆಸರಿನ ಬಗ್ಗೆ ಕಾಂಗ್ರೆಸ್‌ಗೆ ಯಾಕೆ ದ್ವೇಷ ಎಂಬ ಪ್ರಶ್ನೆ ಎತ್ತಿದ ಸಿ.ಟಿ. ರವಿ, ಗಾಂಧೀಜಿ ರಾಮನ ವ್ಯಕ್ತಿತ್ವದಿಂದ ಪ್ರೇರಣೆ ಪಡೆದು ರಾಮರಾಜ್ಯ ನಿರ್ಮಾಣದ ಬಗ್ಗೆ ಮಾತನಾಡಿದ್ದರು. ಮಧ್ಯರಾತ್ರಿಯಲ್ಲೂ ಮಹಿಳೆಯರು ನಿರ್ಭಯವಾಗಿ ಓಡಾಡುವ ಸಮಾಜವೇ ರಾಮರಾಜ್ಯ ಎಂಬುದು ಗಾಂಧೀಜಿಯ ಕನಸಾಗಿತ್ತು. ಆದರೆ ಮಹಿಳೆಯರು ಕುಡಿದು ತೂರಾಡಿ ಓಡಾಡಬೇಕು ಎಂದು ಅವರು ಹೇಳಿರಲಿಲ್ಲ. ಕುಡಿದವರಿಗೆ ಮನೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡ್ತೀವಿ ಎನ್ನುವುದು ಗಾಂಧೀಜಿಯ ರಾಮರಾಜ್ಯ ಅಲ್ಲ ಎಂದು ಕಿಡಿಕಾರಿದರು. ಜಿ ರಾಮ್ ಜಿ ಬಿಲ್‌ನಲ್ಲಿ ಗೋಡ್ಸೆ ರಾಮ ಇದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ. ರವಿ, ಸಿದ್ದರಾಮನಲ್ಲೂ ರಾಮ ಇದ್ದಾನೆ ಎಂದು ಪ್ರತಿಕ್ರಿಯಿಸಿದರು.

ರಾಮನನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಭಾವನೆ, ಭಕ್ತಿಯ ದೃಷ್ಟಿಯಿಂದ ಕಾಣುತ್ತಾರೆ. ಸಿದ್ದರಾಮಯ್ಯ ಅವರು ಯಾವ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಅವರು ಗೋಡ್ಸೆಯಲ್ಲೇ ರಾಮನನ್ನು ನೋಡ್ತಿರಬಹುದು. ಅವರವರಿಗೆ ಅವರವರ ತರನಾಗಿ ರಾಮ ಕಾಣುತ್ತಿರಬಹುದು ಎಂದು ವ್ಯಂಗ್ಯವಾಡಿದರು.

ಮನರೇಗಾ ಯೋಜನೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಕೊಂದಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ

0

ಬೆಂಗಳೂರು: “ಗ್ರಾಮೀಣ ಭಾಗದ ಅಭಿವೃದ್ಧಿಗೆ ನೆರವಾಗಿದ್ದ ಮನರೇಗಾ ಯೋಜನೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಕೊಂದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು. ಅರಮನೆ ಮೈದಾನದಲ್ಲಿ ಮಂಗಳವಾರ ನಡೆದ “ಮನರೇಗಾ ಬಚಾವ್ ಸಂಗ್ರಾಮ” ಹೋರಾಟದ ಪೂರ್ವಸಿದ್ಧತಾ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು.

“ಶ್ರೀಮತಿ ಸೋನಿಯಾ ಗಾಂಧಿ ಅವರು ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಸಂವಿಧಾನದ ಮೂಲಕ ಬಡವರಿಗೆ ಉದ್ಯೋಗ ಖಾತರಿ ಹಕ್ಕನ್ನು ನೀಡಿದ್ದರು. ಇದರಿಂದ ನಮ್ಮ ರಾಜ್ಯದ ಪಂಚಾಯಿತಿ ಹಾಗೂ ಗ್ರಾಮಗಳ ಮಟ್ಟದಲ್ಲಿ ಪ್ರತಿ ವರ್ಷ 6 ಸಾವಿರ ಕೋಟಿ ಮೊತ್ತದ ಕಾಮಗಾರಿಗಳು ನಡೆಯುತ್ತಿದ್ದವು. ಈ ಕೆಲಸಗಳನ್ನು ಸ್ಥಳೀಯ ಪಂಚಾಯಿತಿ ಸದಸ್ಯರು ತೀರ್ಮಾನ ಮಾಡುತ್ತಿದ್ದರು. ನರೇಗಾ ಉದ್ಯೋಗ ಕಾರ್ಡ್ ಹೊಂದಿರುವವರಿಗೆ ಉದ್ಯೋಗ ನೀಡಬೇಕಿತ್ತು, ಉದ್ಯೋಗ ಸಿಗದಿದ್ದರೆ ಕೂಲಿ ನೀಡಲಾಗುತ್ತಿತ್ತು. ಇದರಲ್ಲಿ ದುರ್ಬಳಕೆ ತಡೆಗಟ್ಟಲು ಹೆಬ್ಬೆರಳಚ್ಚು ಸಂಗ್ರಹ ವಿಧಾನ ಅಳವಡಿಸಿಕೊಳ್ಳಲಾಗಿತ್ತು” ಎಂದು ತಿಳಿಸಿದರು.

“ಈ ಯೋಜನೆಯಲ್ಲಿ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಯಾಗಿತ್ತು. ನಾವು ಬಳ್ಳಾರಿ ಪಾದಯಾತ್ರೆ ಮಾಡುವ ಸಂದರ್ಭದಲ್ಲಿ ಕೆಲವು ಮಹಿಳೆಯರನ್ನು ವಿಚಾರಿಸಿದೆವು. ಕೆಲವು ಮಹಿಳೆಯರು ಬೇರೆಯವರ ಜಮೀನಿನಲ್ಲಿ ಹೋಗಿ ಕೆಲಸ ಮಾಡಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದರು. ಆಗ ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿದ್ದ ನಾನು ದೆಹಲಿಗೆ ಹೋಗಿ,

ಈ ಪರಿಸ್ಥಿತಿಯನ್ನು ಸೋನಿಯಾ ಗಾಂಧಿ ಅವರಿಗೆ ತಿಳಿಸಿದೆ. ಅವರು ಸಿ.ಪಿ ಜೋಷಿ ಅವರನ್ನು ಕರೆಸಿ ಈ ವಿಚಾರದ ಬಗ್ಗೆ ಗಮನಹರಿಸಿ ಎಂದು ಸೂಚಿಸಿದರು. ನಂತರ ರೈತರು ತಮ್ಮ ಸ್ವಂತ ಜಮೀನುಗಳಲ್ಲಿ ತಾವೇ ಕೂಲಿ ಮಾಡಿದರೆ, ಜಮೀನು ಮಟ್ಟ, ದನ, ಕುರಿ ಕೊಟ್ಟಿಗೆ, ಇಂಗು ಗುಂಡಿ, ಕೃಷಿ ಹೊಂಡ ನಿರ್ಮಾಣಕ್ಕೆ ಕೂಲಿ ನೀಡುವ ವ್ಯವಸ್ಥೆ ತಂದರು. ಇನ್ನು ರೈತರು ತಮ್ಮ ಜಮೀನಿನಲ್ಲಿ ತೋಟಗಾರಿಕಾ ಬೆಳೆ ಬೆಳೆಯಲು ಅವಕಾಶ ಕಲ್ಪಿಸಿಕೊಟ್ಟರು” ಎಂದು ವಿವರಿಸಿದರು.

ಡೆಲಿವರಿ ರೇಸ್‌ಗೆ ಬ್ರೇಕ್: ಕೇಂದ್ರ ಸರ್ಕಾರದ ಒತ್ತಡಕ್ಕೆ ‘10 ನಿಮಿಷ ಗ್ಯಾರಂಟಿ’ ಕೈಬಿಟ್ಟ ಬ್ಲಿಂಕಿಟ್

0

ನವದೆಹಲಿ: ಡೆಲಿವರಿ ಪಾಲುದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಕಾರ್ಮಿಕ ಸಚಿವ ಮನ್ಸೂಖ್ ಮಾಂಡವಿಯಾ ಅವರ ಹಸ್ತಕ್ಷೇಪದ ನಂತರ, ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಬ್ಲಿಂಕಿಟ್ ತನ್ನ ಪ್ರಸಿದ್ಧ ‘10 ನಿಮಿಷ ಡೆಲಿವರಿ’ ಘೋಷಣೆಯನ್ನು ತನ್ನ ಎಲ್ಲಾ ಬ್ರ್ಯಾಂಡ್ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಿದೆ.

ಕಾರ್ಮಿಕ ಸಚಿವ ಮನ್ಸೂಖ್ ಮಾಂಡವಿಯಾ ಅವರು ಬ್ಲಿಂಕಿಟ್, ಝೆಪ್ಟೋ, ಸ್ವಿಗ್ಗಿ ಮತ್ತು ಜೊಮ್ಯಾಟೊ ಸೇರಿದಂತೆ ಪ್ರಮುಖ ಕಂಪನಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಡೆಲಿವರಿ ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ಕಟ್ಟುನಿಟ್ಟಾದ ಸಮಯ ಮಿತಿಗಳನ್ನು ತೆಗೆದುಹಾಕುವಂತೆ ಸಲಹೆ ನೀಡಿದ್ದರು.

ಅತಿ ಆಕ್ರಮಣಕಾರಿ ಸಮಯ ಮಿತಿಗಳು ಡೆಲಿವರಿ ಪಾಲುದಾರರ ಮೇಲೆ ಅನಗತ್ಯ ಒತ್ತಡ ಉಂಟುಮಾಡುತ್ತವೆ ಮತ್ತು ರಸ್ತೆ ಅಪಘಾತಗಳ ಅಪಾಯ ಹೆಚ್ಚಿಸುತ್ತವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಇದರ ಪರಿಣಾಮವಾಗಿ ಕಂಪನಿಗಳು ತಮ್ಮ ಬ್ರ್ಯಾಂಡ್ ಜಾಹೀರಾತುಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು ಹಾಗೂ ಇತರ ಪ್ರಚಾರಗಳಲ್ಲಿ ಡೆಲಿವರಿ ಸಮಯದ ಭರವಸೆಗಳನ್ನು ತೆಗೆದುಹಾಕಲು ಒಪ್ಪಿಗೆ ನೀಡಿವೆ ಎಂದು ಮೂಲಗಳು ತಿಳಿಸಿವೆ.

ತ್ವರಿತ-ವಾಣಿಜ್ಯ ಮಾದರಿಗಳ ಪರಿಣಾಮಗಳ ಕುರಿತು ಪರಿಶೀಲನೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಈ ನಿರ್ಧಾರ ಮಹತ್ವ ಪಡೆದುಕೊಂಡಿದ್ದು, ವೇಗದ ವಿತರಣೆಗಾಗಿ ಕಾರ್ಮಿಕರ ಸುರಕ್ಷತೆಯನ್ನು ರಾಜಿ ಮಾಡಿಕೊಳ್ಳಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟ ಸಂದೇಶ ನೀಡಿದೆ.

error: Content is protected !!