Home Blog Page 19

KLE ಚೇರ್ಮನ್ ಹುದ್ದೆಯಿಂದ ಪ್ರಭಾಕರ ಕೋರೆ ನಿರ್ಗಮನ: ಪ್ರೀತಿ ಕೋರೆ ನೂತನ ಕಾರ್ಯಾಧ್ಯಕ್ಷ

0

ಬೆಳಗಾವಿ: ಸುದೀರ್ಘ 40 ವರ್ಷಗಳ ಕಾಲ ಕರ್ನಾಟಕ ಲಿಂಗಾಯತ ಎಜುಕೇಶನ್ ಸಂಸ್ಥೆ (ಕೆಎಲ್ಇ)ಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಡಾ. ಪ್ರಭಾಕರ ಕೋರೆ ಇದೀಗ ಆ ಸ್ಥಾನದಿಂದ ಹಿಂದೆ ಸರಿದಿದ್ದಾರೆ. ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿಗೆ ಸಲ್ಲಿಸಿದ್ದ ತಮ್ಮ ನಾಮಪತ್ರವನ್ನು ಅಚ್ಚರಿಯಾಗಿ ವಾಪಸ್ ಪಡೆದಿದ್ದಾರೆ.

ಕೆಎಲ್ಇ ನಿರ್ದೇಶಕ ಹುದ್ದೆಗೆ ಡಾ. ಪ್ರಭಾಕರ ಕೋರೆ ಮೊದಲು ನಾಮಪತ್ರ ಸಲ್ಲಿಸಿದ್ದರು. ಆದರೆ, ನಂತರ ದಿಢೀರ್ ನಿರ್ಧಾರವಾಗಿ ನಾಮಪತ್ರ ಹಿಂಪಡೆಯುವ ಮೂಲಕ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದ್ದಾರೆ. 1984ರಲ್ಲಿ ಕೆಎಲ್ಇ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾದ ಅವರು, ಬಳಿಕ ದೀರ್ಘಕಾಲ ಕಾರ್ಯಾಧ್ಯಕ್ಷ ಹುದ್ದೆಯನ್ನು ನಿರ್ವಹಿಸಿದ್ದರು.

ಡಾ. ಪ್ರಭಾಕರ ಕೋರೆ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಕೆಎಲ್ಇ ಸಂಸ್ಥೆ ಕೇವಲ 40 ಅಂಗ ಸಂಸ್ಥೆಗಳನ್ನು ಹೊಂದಿತ್ತು. ಅವರ ನಾಯಕತ್ವದಲ್ಲಿ ಸಂಸ್ಥೆ ಗಣನೀಯವಾಗಿ ವಿಸ್ತರಿಸಿಕೊಂಡು, ಪ್ರಸ್ತುತ 240ಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು ಹೊಂದಿರುವ ಬೃಹತ್ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ.

ಕೆಎಲ್ಇ ನಿರ್ದೇಶಕ ಹುದ್ದೆಗೆ ಸ್ಪರ್ಧಿಸಿದ್ದ ಮಹಾಂತೇಶ ಕೌಜಲಗಿ, ಅಮಿತ್ ಕೋರೆ, ಡಾ. ವಿಶ್ವನಾಥ್ ಪಾಟೀಲ ಸೇರಿದಂತೆ ಒಟ್ಟು 14 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೇ ವೇಳೆ, ಡಾ. ಪ್ರಭಾಕರ ಕೋರೆ ಅವರ ಪುತ್ರಿ ಪ್ರೀತಿ ಕೋರೆ ಅವರು ಕೆಎಲ್ಇ ಸಂಸ್ಥೆಯ ನೂತನ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಪ್ರೀತಿ ಕೋರೆ ಅವರು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಸ್ಥಾನಕ್ಕೇರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶತಮಾನಕ್ಕೂ ಅಧಿಕ ಇತಿಹಾಸ ಹೊಂದಿರುವ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೆಎಲ್ಇ ಸಂಸ್ಥೆಯ ಮುಂದಿನ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲಿದ್ದಾರೆ.

ಗೋ ಬ್ಯಾಕ್ ಗವರ್ನರ್ ಅನ್ನೋದು ರಾಜಕೀಯ ನಾಟಕ: ಹೆಚ್.ಡಿ. ಕುಮಾರಸ್ವಾಮಿ ಕಿಡಿ

0

ಮಂಡ್ಯ: ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್ ಗೋ ಬ್ಯಾಕ್ ಎನ್ನುತ್ತಿರುವ ರಾಜ್ಯ ಕಾಂಗ್ರೆಸ್ ಏನು ಸಾಧಿಸುವುದಿಲ್ಲ. ಗೋ‌ ಬ್ಯಾಕ್ ಗವರ್ನರ್‌ ಅನ್ನೋದು ಕೇವಲ ರಾಜಕೀಯ ನಾಟಕ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಬದಲಿಗೆ ಕಳೆದ ಎರಡೂ ಮುಕ್ಕಾಲು ವರ್ಷಗಳಲ್ಲಿ ನಡೆಸಿರುವ ಅನ್ಯಾಯ, ಅಕ್ರಮಗಳನ್ನು ಮರೆಮಾಚಲು ವಿಬಿ ಜಿ ರಾಮ್ ಜಿ ಯೋಜನೆಯ ಬಗ್ಗೆ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುತ್ತಿದೆ ಎಂದು ಅವರು ದೂರಿದರು. ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಶಿವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ಮಾರಮ್ಮ ದೇವಿ ದೇವಾಲಯ ಉದ್ಘಾಟನೆ ನಂತರ ಕೇಂದ್ರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.

ಈ ಹಿಂದೆ ಕಾಂಗ್ರೆಸ್ ರಾಜ್ಯಪಾಲರುಗಳ ವಿಷಯದಲ್ಲಿ ಹೇಗೆ ನಡೆದುಕೊಂಡಿತ್ತು ಎಂಬುದರ ಬಗ್ಗೆ ಒಮ್ಮೆ ನೆನಪು ಮಾಡಿಕೊಂಡರೆ ಅವರ ಬಣ್ಣ ಏನೆಂದು ಗೊತ್ತಾಗುತ್ತದೆ. ವಿಶೇಷ ಅಧಿವೇಶನ ಕರೆದು ಅಲ್ಲಿ ಸಮಯ ಪೋಲು ಮಾಡುತ್ತಿದ್ದಾರೆ. ರಾಜ್ಯಪಾಲರು ಭಾಷಣ ಓದದಿರುವ ಅಥವಾ ಮೊಟಿಕುಗೊಳಿಸಿರುವ ಘಟನೆ ಇದೇ ಮೊದಲ ಬಾರಿ ನಡೆದಿದ್ದು ಅಲ್ಲ.

ಜೆ‌.ಹೆಚ್. ಪಟೇಲರು ಸಿಎಂ ಆಗಿದ್ದಾಗ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಅಂದಿನ ಸಂದರ್ಭವನ್ನು ನೆನಪು ಮಾಡಿಕೊಳ್ಳಬೇಕು. ಈಗ ನೋಡಿದರೆ ಅನಗತ್ಯವಾಗಿ ವಿಧಾನಸಭೆ ಕಲಾಪದಲ್ಲಿ ಸಂಘರ್ಷ ನಡೆಯುತ್ತಿದೆ. ಈ ಸಂಘರ್ಷಗಳಿಂದ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದಾ? ಗೋ‌ ಬ್ಯಾಕ್ ಗವರ್ನರ್‌ ಅನ್ನೋದು ಕೇವಲ ರಾಜಕೀಯ ನಾಟಕ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಮನರೇಗಾ ವಿಷಯ ಇಟ್ಟಿಕೊಂಡು ಕೇಂದ್ರ ಸರ್ಕಾರವನ್ನು ನಿಂದಿಸುವುದು ಈ ಸರ್ಕಾರದ ಉದ್ದೇಶ. ಅದಕ್ಕಾಗಿಯೇ ವಿಶೇಷ ಅಧಿವೇಶನ ಕರೆದಿದ್ದಾರೆ‌ ಎಂದ ಕೇಂದ್ರ ಸಚಿವರು; ಪದೇ ಪದೇ ದಲಿತರ ಹೆಸರು ಬಳಸಿ ತಮ್ಮ ಸ್ಥಾನಮಾನ ಗಟ್ಟಿಗೊಳಿಸುವ ಪ್ರಯತ್ನದಲ್ಲಿದ್ದಾರೆ‌. ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ, ವರ್ಗದ ಜನರಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೆ. ಇದು ದಲಿತರ ಉದ್ಧಾರವೇ? ಎಂದು ಕಿಡಿಕಾರಿದರು.

ಕಾಫಿನಾಡಲ್ಲೊಂದು ಸಾಗರ ದಾಟಿದ ಪ್ರೇಮ‌ ಕಥೆ: ಪ್ರೀತಿ ಮೂಲಕ ಒಂದಾದ ಭಾರತದ ರಾಮ, ಚೀನಾದ ಬುದ್ಧ!

0

ಚಿಕ್ಕಮಗಳೂರು: ಕಾಫಿನಾಡಲ್ಲಿ ಸಾಗರ ದಾಟಿ ಬಂದ ಅಪರೂಪದ ಪ್ರೇಮಕಥೆಯೊಂದು ಇದೀಗ ಮದುವೆಯಾಗಿ ಮುಕ್ತಾಯ ಕಂಡಿದೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಿವಾಸಿ ರೂಪಕ್ ಹಾಗೂ ಚೀನಾ ಮೂಲದ ಯುವತಿ ಜಡೆ ಪ್ರೀತಿಯ ಮೂಲಕ ಒಂದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿ, ಬಳಿಕ ಅದೇ ಪ್ರೀತಿ ಮದುವೆಯವರೆಗೆ ತಲುಪಿದೆ. ಕಾಫಿನಾಡ ಹುಡುಗ ಮತ್ತು ಚೀನಾ ಹುಡುಗಿ ಆಸ್ಟ್ರೇಲಿಯಾದಲ್ಲಿ ಪ್ರೀತಿಸಿ, ಭಾರತದಲ್ಲಿ ಮದುವೆಯಾಗಿ ಗಮನ ಸೆಳೆದಿದ್ದಾರೆ.

ಇವರ ಅದ್ಧೂರಿ ವಿವಾಹ ಸಮಾರಂಭವು ಚಿಕ್ಕಮಗಳೂರಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಚೀನಾ ಮೂಲದ ಯುವತಿ ಜಡೆ ಕೈಹಿಡಿದ ರೂಪಕ್‌ಗೆ, ವಧುವಿನ ತಂದೆ-ತಾಯಿ ಚೀನಾದಿಂದಲೇ ಆಗಮಿಸಿ ಧಾರೆ ಎರೆದಿದ್ದು ವಿಶೇಷವಾಗಿತ್ತು.

ಭಾರತ ಮತ್ತು ಚೀನಾದ ಸಂಪ್ರದಾಯಗಳಲ್ಲಿ ಹಲವು ಸಾಮ್ಯತೆಗಳಿವೆ ಎಂದು ಹೇಳಿದ ಜಡೆ, ಎರಡು ದೇಶಗಳ ಸಂಸ್ಕೃತಿಯ ಒಗ್ಗೂಡಿಕೆಗೆ ಸಂತಸ ವ್ಯಕ್ತಪಡಿಸಿದರು. ಜೊತೆಗೆ ಚಿಕ್ಕಮಗಳೂರಿನ ನೈಸರ್ಗಿಕ ಸೌಂದರ್ಯ ನೋಡಿ ಫಿದಾ ಆಗಿರುವುದಾಗಿ ಹೇಳಿದರು.

ಇಬ್ಬರ ಮದುವೆಗೆ ಕುಟುಂಬಸ್ಥರು ಸಂಪೂರ್ಣ ಒಪ್ಪಿಗೆ ನೀಡಿದ್ದು, ಸಂಬಂಧಿಕರೆಲ್ಲರನ್ನು ಕರೆದು ರೂಪಕ್ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ. ಪ್ರಸ್ತುತ ಯುವಕ-ಯುವತಿ ಇಬ್ಬರೂ ಆಸ್ಟ್ರೇಲಿಯಾದಲ್ಲೇ ನೆಲೆಸಿದ್ದಾರೆ. ಕಾಫಿನಾಡಲ್ಲಿ ನಡೆದ ಈ ಭಾರತ–ಚೀನಾ ಪ್ರೇಮವಿವಾಹವು ಎಲ್ಲರ ಗಮನ ಸೆಳೆದಿದೆ.

ಕನಿಷ್ಠ ವೇತನಕ್ಕೆ ಆಗ್ರಹಿಸಿ ಉತ್ಖನನ ಜಾಗದಲ್ಲೇ ಕಾರ್ಮಿಕರ ಪ್ರತಿಭಟನೆ: 3 ಮಂದಿ ವಶಕ್ಕೆ

0

ಗದಗ: ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದ ವೇಳೆ ಕಾರ್ಮಿಕರು ಕನಿಷ್ಠ ವೇತನ ಹಾಗೂ ಸುರಕ್ಷಾ ಕಿಟ್ ನೀಡುವಂತೆ ಆಗ್ರಹಿಸಿ ತೀವ್ರ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಇದು ಉತ್ಖನನ ಕಾರ್ಯದ 8ನೇ ದಿನದಂದು ನಡೆದಿದೆ.

ಉತ್ಖನನ ಕಾರ್ಯದಲ್ಲಿ ತೊಡಗಿದ್ದ ಕೂಲಿ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು, ಜೊತೆಗೆ ಸುರಕ್ಷತಾ ಕಿಟ್ ಒದಗಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಕಾರ್ಮಿಕರು ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಪ್ರತಿಭಟನೆಗೆ ಇಳಿದರು.

ಈ ಹೋರಾಟಕ್ಕೆ ನೆರವು ಕಟ್ಟಡ ಅಸಂಘಟಿತ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಅಶ್ವಥ್ ಮರೇಗೌಡ್ರು ನೇತೃತ್ವ ವಹಿಸಿದ್ದರು. ಕಾರ್ಮಿಕರ ಬೆಂಬಲದೊಂದಿಗೆ ಉತ್ಖನನ ಸ್ಥಳದಲ್ಲಿಯೇ ಧರಣಿ ನಡೆಸಲಾಯಿತು.
ಆದರೆ, ಈ ಪ್ರತಿಭಟನೆಗೆ ಸಂಬಂಧಿಸಿ ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನಾಕಾರರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಕೂಡ ನಡೆದಿದೆ.

ಉತ್ಖನನ ಕಾರ್ಯದಲ್ಲಿ ಸುಮಾರು 35ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಭಾಗಿಯಾಗಿದ್ದು, ಮುಂಜಾನೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಾರ್ಮಿಕರಿಗೆ ಕೈಗೆ ಹೆಡ್‌ಲೈಟ್, ಕಾಲಿಗೆ ಶೂ ಸೇರಿದಂತೆ ಅಗತ್ಯ ಸುರಕ್ಷತಾ ಕಿಟ್ ನೀಡಿಲ್ಲ ಎಂದು ತಿಳಿದುಬಂದಿದೆ.

ಈ ವಿಷಯ ತಿಳಿದ ನಂತರ ನೆರವು ಕಟ್ಟಡ ಅಸಂಘಟಿತ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಅಶ್ವಥ್ ಮರೇಗೌಡ್ರು ಬೆಂಗಳೂರಿನಿಂದ ಲಕ್ಕುಂಡಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. “ವರದಿ ನೋಡಿ ನಾನು ಇಲ್ಲಿ ಬಂದಿದ್ದೇನೆ. ಕಾರ್ಮಿಕರ ಜೀವದ ಜೊತೆ ಆಟ ಆಡಬಾರದು. ಕೂಡಲೇ ಸುರಕ್ಷತಾ ಕಿಟ್ ಹಾಗೂ ಅಗತ್ಯ ಸೌಲಭ್ಯ ನೀಡಬೇಕು” ಎಂದು ಅವರು ಆಗ್ರಹಿಸಿದರು.

ಸ್ಥಿತಿಗತಿ ಬಿಗಡಾಯಿಸುತ್ತಿದ್ದಂತೆ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಅಶ್ವಥ್ ಮರೇಗೌಡ್ರು ಸೇರಿದಂತೆ ಒಟ್ಟು ಮೂರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮಸ್ಥರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಮುಖ್ಯ ಶಿಕ್ಷಕ ಸೇರಿ 6 ಮಂದಿಯ ವಿರುದ್ಧ FIR !

0

ಯಾದಗಿರಿ: ಶಿಕ್ಷಕರು ಬೈದಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದ್ದು, ಶಾಲೆಯ ಮುಖ್ಯ ಶಿಕ್ಷಕ ಸೇರಿದಂತೆ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮೃತ ವಿದ್ಯಾರ್ಥಿಯನ್ನು ಪವನ್ (15) ಎಂದು ಗುರುತಿಸಲಾಗಿದ್ದು, ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಜ.21ರಂದು ಶಾಲಾ ಆವರಣದ ಹಿಂಭಾಗದಲ್ಲಿ ಪವನ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪ್ರಾಥಮಿಕವಾಗಿ ವರದಿಯಾಗಿತ್ತು.

ಈ ಘಟನೆ ಬಳಿಕ ಪವನ್ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ ಪೋಷಕರು, ವಡಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪವನ್ ತಂದೆ ಮಲ್ಲಪ್ಪ ನೀಡಿದ ದೂರಿನ ಆಧಾರದ ಮೇಲೆ, ಶಾಲೆಯ ಮುಖ್ಯ ಶಿಕ್ಷಕ ಅಯ್ಯಪ್ಪ ಸೇರಿದಂತೆ ಆರು ಮಂದಿ ಶಿಕ್ಷಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಈ ಪ್ರಕರಣದಲ್ಲಿ ನಿಜವಾಗಿಯೂ ಶಿಕ್ಷಕರ ವರ್ತನೆಯಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಅಥವಾ ಬೇರೆ ಯಾವುದೇ ಕಾರಣಗಳಿವೆಯೇ ಎಂಬುದನ್ನು ತನಿಖೆಯ ಮೂಲಕ ಪತ್ತೆಹಚ್ಚಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ʻಅಪ್ಪ ನನಗೆ ಜೀವನ ಸಾಕಾಗಿದೆ, ಹುಡುಕ್ಬೇಡಿʼ- ಝಾಕಿಯಾಳನ್ನು ಕೊಂದು ಅವಳದ್ದೇ ಮೊಬೈಲ್‌ನಿಂದ ಮೆಸೇಜ್‌ ಕಳ್ಸಿದ್ದ ಆರೋಪಿ

0

ಧಾರವಾಡ: ಧಾರವಾಡ ಹೊರವಲಯದಲ್ಲಿ ನಡೆದ ಯುವತಿ ಝಾಕಿಯಾ ಕೊಲೆ ಪ್ರಕರಣ ಇದೀಗ ರಾಜ್ಯವನ್ನೇ ಬೆಚ್ಚಿಬೀಳಿಸುವ ಹಂತ ತಲುಪಿದೆ. ಪ್ರಕರಣದ ತನಿಖೆಯಲ್ಲಿ ಒಂದಕ್ಕೊಂದು ಶಾಕಿಂಗ್ ವಿಚಾರಗಳು ಬೆಳಕಿಗೆ ಬರುತ್ತಿವೆ.

ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಝಾಕಿಯಾ ಹಾಗೂ ಸಾಬೀರ್ ಸಂಬಂಧಕ್ಕೆ ಎರಡೂ ಕುಟುಂಬಗಳೂ ಒಪ್ಪಿಗೆ ನೀಡಿದ್ದು, ಮದುವೆಗೂ ನಿಶ್ಚಯವಾಗಿತ್ತು. ಆದರೆ ಪ್ರೇಮ ಕಥೆಯೇ ಕೊನೆಯಲ್ಲಿ ಭೀಕರ ಅಂತ್ಯ ಕಂಡಿದೆ.

ಜನವರಿ 21ರಂದು ಸಾಬೀರ್ ಪರಿಚಯಸ್ಥರ ಕಾರಿನಲ್ಲಿ ಝಾಕಿಯಾಳನ್ನು ಕರೆದುಕೊಂಡು ಹೊರಗೆ ಹೋಗಿದ್ದ. ಬಳಿಕ ಇಬ್ಬರೂ ನಿರ್ಜನ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಕಾರಿನೊಳಗೆ ಜಗಳ ನಡೆದಿದೆ. ಮಾತಿನ ಜಗಳ ಕ್ರಮೇಣ ವಿಕೋಪಕ್ಕೆ ತಿರುಗಿ, ಆಕ್ರೋಶದ ಭರದಲ್ಲಿ ಸಾಬೀರ್ ಝಾಕಿಯಾಳ ವೇಲ್ ಬಳಸಿ ಆಕೆಯ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿದ್ದಾನೆ.

ಹತ್ಯೆ ಮಾಡಿದ ನಂತರ ಶವವನ್ನು ಅಲ್ಲಿಯೇ ಬಿಟ್ಟು, ಝಾಕಿಯಾಳ ಮೊಬೈಲ್‌ನಿಂದಲೇ ಆಕೆಯ ತಂದೆಗೆ ‘ನನಗೆ ಜೀವನ ಸಾಕಾಗಿದೆ, ಮನೆಗೆ ಬರೋದಿಲ್ಲ, ನನ್ನನ್ನು ಹುಡುಕಬೇಡಿ’ ಎಂಬ ಮೆಸೇಜ್ ಕಳುಹಿಸಿ, ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿ ಸ್ಥಳದಲ್ಲೇ ಬಿಟ್ಟು ಹೋಗಿದ್ದಾನೆ.

ಶವ ಪತ್ತೆಯಾದ ಮಾರನೇ ದಿನ, ಸಾಬೀರ್ ತನಗೆ ಏನೂ ಗೊತ್ತಿಲ್ಲ ಎಂಬಂತೆ ಘಟನಾ ಸ್ಥಳಕ್ಕೆ ಬಂದಿದ್ದಾನೆ. ಆದರೆ ಈ ನಡುವೆ ಆತ ತನ್ನ ಮೊಬೈಲ್‌ನಲ್ಲಿದ್ದ ಝಾಕಿಯಾಳ ಫೋಟೋಗಳು, ಕಾಲ್ ಹಿಸ್ಟರಿ ಹಾಗೂ ವಾಟ್ಸಪ್ ಚಾಟಿಂಗ್‌ಗಳನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿದ್ದ. ಈ ಅನುಮಾನಾಸ್ಪದ ನಡೆ ಪೊಲೀಸರ ಗಮನ ಸೆಳೆದು, ತನಿಖೆ ತೀವ್ರಗೊಂಡಿತು.

ಪೊಲೀಸರು ಸಾಬೀರ್‌ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ಮಾಡಿದ ಸಂಪೂರ್ಣ ಸತ್ಯ ಬಯಲಾಗಿದ್ದು, ಇದೀಗ ಹೆಚ್ಚಿನ ವಿಚಾರಣೆ ಮುಂದುವರೆದಿದೆ. ಧಾರವಾಡ ಪೊಲೀಸರು ಸ್ಥಳ ಮಹಜರು ಕೂಡ ಪೂರ್ಣಗೊಳಿಸಿದ್ದಾರೆ.

ಈ ಪ್ರೀತಿಯನ್ನು ನಾನು ಜೀವನಪೂರ್ತಿ ಮರೆಯಲ್ಲ: ಬಿಗ್‌ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ

ಬಿಗ್ ಬಾಸ್ ಕನ್ನಡ ಸೀಸನ್ 12 ಮುಗಿದ ಬಳಿಕವೂ ರಕ್ಷಿತಾ ಶೆಟ್ಟಿ ಹೆಸರು ಟ್ರೆಂಡ್ ಆಗುತ್ತಿದೆ. ರನ್ನರ್ ಅಪ್ ಆಗಿದ್ದರೂ ಅಭಿಮಾನಿಗಳ ಹೃದಯದಲ್ಲಿ ವಿನ್ನರ್ ಆಗಿರುವ ರಕ್ಷಿತಾ ಇದೀಗ ವಿಡಿಯೋ ಮೂಲಕ ಭಾವುಕ ಧನ್ಯವಾದ ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, “ನನ್ನನ್ನು ಮನೆಮಗಳಂತೆ ನೋಡಿದ್ದೀರಿ. ಇದಕ್ಕಿಂತ ದೊಡ್ಡ ಆಶೀರ್ವಾದ ಬೇರೆ ಏನು ಬೇಕಿಲ್ಲ” ಎಂದು ಹೇಳಿದ್ದಾರೆ. ಕರ್ನಾಟಕದ ಜನತೆ ನೀಡಿದ ಪ್ರೀತಿ ಹಾಗೂ ಬೆಂಬಲವೇ ನನ್ನ ಶಕ್ತಿಯಾಗಿದೆ ಎಂದು ಹೇಳಿದ್ದಾರೆ.

“ಬಿಗ್ ಬಾಸ್ ಮನೆಯೊಳಗೆ ಇರುವಾಗ ಜನರು ಇಷ್ಟು ಪ್ರೀತಿ ಕೊಡ್ತಿದ್ದಾರೆ ಅನ್ನೋದೇ ಗೊತ್ತಿರಲಿಲ್ಲ. ಹೊರಬಂದ ಮೇಲೆ ಕಾಮೆಂಟ್, ಮೆಸೇಜ್, ವೀಡಿಯೊ ನೋಡಿ ಅಚ್ಚರಿ ಆಯ್ತು. ಇದು ಕನಸಾ ಅಂತ ಅನಿಸ್ತು” ಎಂದು ಹೇಳಿದ್ದಾರೆ.

ತಮಗೆ ಬಂದ ವೋಟ್, ಸಮಯ, ಪ್ರೀತಿ ಎಲ್ಲಕ್ಕೂ ಧನ್ಯವಾದ ಹೇಳಿರುವ ರಕ್ಷಿತಾ, “ನನಗೋಸ್ಕರ ಇಷ್ಟು ಶ್ರಮಪಟ್ಟಿದ್ದೀರಾ, ನಿಮ್ಮ ಶ್ರಮವೂ ನನ್ನ ಶ್ರಮದಷ್ಟೇ ಇದೆ” ಎಂದು ಹೇಳಿದ್ದಾರೆ.

ಮುನ್ಸೂಚನೆಯಾಗಿ ನೆಗೆಟಿವ್ ಕಾಮೆಂಟ್, ಟ್ರೋಲ್ ಎದುರಿಸಿದ್ದ ರಕ್ಷಿತಾ, ಇದೀಗ “ಈಗ ಎಲ್ಲೆಡೆ ಪ್ರೀತಿ ಮಾತ್ರ ಕಾಣ್ತಿದೆ” ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಟ್ರೋಲ್ ಮೀಮ್ಸ್ ಮಾಡಿದವರು, ಯೂಟ್ಯೂಬರ್ಸ್, ಇನ್‌ಫ್ಲೂಯೆನ್ಸರ್ಸ್ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

“ನನ್ನ ಗೆಲುವಿಗೆ ಇಡೀ ಕರ್ನಾಟಕ ಕಾರಣ. ಈ ಪ್ರೀತಿಯನ್ನು ನಾನು ಜೀವನಪೂರ್ತಿ ಮರೆಯಲ್ಲ” ಎಂದು ಹೇಳುವ ಮೂಲಕ ಅಭಿಮಾನಿಗಳ ಮನವನ್ನು ಇನ್ನಷ್ಟು ಗೆದ್ದಿದ್ದಾರೆ.

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ₹1 ಕೋಟಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

0

ಬೀದರ್: ಜಿಲ್ಲೆಯ ದಕ್ಷಿಣ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೊಸ ಚೈತನ್ಯ ನೀಡುವ ಪ್ರಯತ್ನವಾಗಿ, ಗೋರನಳ್ಳಿ ಗ್ರಾಮದ ಶಿವಾಜಿನಗರ ಹಾಗೂ ತೋರಣ ಕಾಲೋನಿಯಲ್ಲಿ ₹1 ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಶಾಸಕತ್ವ ಅವಧಿಯಲ್ಲಿ ಅಭಿವೃದ್ಧಿಯೇ ಮೊದಲ ಆದ್ಯತೆ ಎಂದು ಪುನರುಚ್ಚರಿಸಿದರು. “ರಸ್ತೆ, ವಿದ್ಯುತ್, ನೀರು, ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರತಿಯೊಂದು ಗ್ರಾಮದಲ್ಲೂ ಜನರ ಜೀವನಮಟ್ಟ ಸುಧಾರಣೆ ಆಗಬೇಕು ಎಂಬುದು ನನ್ನ ಗುರಿ” ಎಂದು ಹೇಳಿದರು.

ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಕ್ಷೇತ್ರದ ಜನರ ಅಗತ್ಯಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಉತ್ತಮ ರಸ್ತೆ ವ್ಯವಸ್ಥೆ, ನಿರಂತರ ವಿದ್ಯುತ್ ಪೂರೈಕೆ, ಶುದ್ಧ ಕುಡಿಯುವ ನೀರು, ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಜನರಿಗೆ ಸಿಗಬೇಕು ಎಂದು ಒತ್ತಾಯಿಸಿದರು.

ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ಸರ್ಕಾರದಿಂದ ಹೆಚ್ಚಿನ ಅನುದಾನ ತರಲಾಗಿದ್ದು, ರಸ್ತೆ, ನೀರಾವರಿ ಯೋಜನೆ, ಶಾಲಾ ಕಟ್ಟಡ, ಸಮುದಾಯ ಭವನ, ಕಲ್ಯಾಣ ಮಂಟಪ ಹಾಗೂ ವಿದ್ಯುತ್ ಸೌಲಭ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

“ನನ್ನ ಸೇವೆ ಸಾರ್ವಜನಿಕರ ಕಲ್ಯಾಣಕ್ಕಾಗಿ. ಜನರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಬೇಕು, ಪರಿಹಾರ ನೀಡುವುದು ನನ್ನ ಹೊಣೆಗಾರಿಕೆ” ಎಂದು ಹೇಳಿದ ಶಾಸಕ, ಜನರ ಬೆಂಬಲ ಮತ್ತು ಸಹಕಾರದಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಚಿನ್ನ-ಬೆಳ್ಳಿ ಬೆಲೆ ಭಾರೀ ಏರಿಕೆ: 10 ಗ್ರಾಂ ಚಿನ್ನ 5,400 ರೂ., 1 ಕೆಜಿ ಬೆಳ್ಳಿ 15,000 ರೂ.!

0

ನವದೆಹಲಿ: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಶುಕ್ರವಾರ ಹೊಸ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ರಾಜಕೀಯ ಅನಿಶ್ಚಿತತೆ ಮತ್ತು ದುರ್ಬಲವಾಗುತ್ತಿರುವ ಡಾಲರ್‌ನ ಪರಿಣಾಮವಾಗಿ ಇತ್ತೀಚಿನ ದಿನಗಳಲ್ಲಿ ಈ ಲೋಹಗಳ ಬೆಲೆಗಳಲ್ಲಿ ಏರಿಳಿತ ನಡೆದಿದೆ.

ಮುಂಬೈದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹5,400 ಏರಿಕೆಯಾಗುತ್ತ, ₹1,59,710ಕ್ಕೆ ತಲುಪಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂಗೆ ₹1,46,400ಕ್ಕೆ ವ್ಯಾಪಿಸಿದೆ. ಬೆಳ್ಳಿ 1 ಕೆಜಿಗೆ ₹15,000 ಹೆಚ್ಚಳ ಹೊಂದಿ ₹3,40,000ಕ್ಕೆ ತಲುಪಿದ್ದು, ಇದು ಹೊಸ ದಾಖಲೆವಾಗಿದೆ.

ಮಲ್ಟಿ-ಕಮಾಡಿಟಿ ಎಕ್ಸ್ಚೇಂಜ್ (MCX)ನಲ್ಲಿ, ಫೆಬ್ರವರಿ ಅವಧಿ ಮುಗಿದ ಚಿನ್ನದ ಫ್ಯೂಚರ್‌ಗಳು 10 ಗ್ರಾಂಗೆ ಶೇ. 1.19 ಹೆಚ್ಚಾಗಿ ₹1,58,194ಕ್ಕೆ ತಲುಪಿವೆ. ಮಾರ್ಚ್ ಅವಧಿ ಮುಗಿದ ಬೆಳ್ಳಿ ಫ್ಯೂಚರ್‌ಗಳು ಪ್ರತಿ ಕೆಜಿಗೆ ಶೇ. 2.59 ಹೆಚ್ಚಾಗಿ ₹3,35,760ಕ್ಕೆ ಏರಿಕೆಯಾಗಿವೆ.

COMEX ನಲ್ಲಿ, ಚಿನ್ನದ ಫ್ಯೂಚರ್‌ಗಳು ಪ್ರತಿ ಔನ್ಸ್ಗೆ $5,000.00 ಡಾಲರ್‌ನಿಂದ ಕೆಲವೇ ಪಾಯಿಂಟ್ ಹೆಚ್ಚಳದೊಂದಿಗೆ ಶೇ. 1ರಷ್ಟು ಏರಿಕೆಯಾಗಿದ್ದು, ಬೆಳ್ಳಿ ಫ್ಯೂಚರ್‌ಗಳು ಶೇ. 2.45 ಹೆಚ್ಚಳದೊಂದಿಗೆ ಪ್ರತಿ ಔನ್ಸ್ಗೆ $98.73 ಡಾಲರ್‌ಗೆ ತಲುಪಿದವು. ಈ ಬೆಲೆ ಏರಿಕೆ ಹೂಡಿಕೆದಾರರನ್ನು ಸುರಕ್ಷಿತ ಸ್ವತ್ತುಗಳತ್ತ ಮುಂದುಡಿಸುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ರಥಸಪ್ತಮಿಯ ಬಳಿಕ ಕಾಡ್ಗಿಚ್ಚು ಅಪಾಯ: ಅರಣ್ಯಾಧಿಕಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಕಟ್ಟೆಚ್ಚರ ಸೂಚನೆ

0

ಬೆಂಗಳೂರು: ರಥಸಪ್ತಮಿಯ ನಂತರ ಬಿಸಿಲಿನ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಡ್ಗಿಚ್ಚಿನ ಅಪಾಯವೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವೀಡಿಯೋ ಕಾನ್ಫರೆನ್ಸ್ ಮೂಲಕ ಅರಣ್ಯ ಹಾಗೂ ವನ್ಯಜೀವಿ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಕಾಡಿನ ಬೆಂಕಿಯಿಂದ ಅರಣ್ಯ ಸಂಪತ್ತು ನಾಶವಾಗದಂತೆ ಕಟ್ಟೆಚ್ಚರ ವಹಿಸುವಂತೆ ತಿಳಿಸಿದರು. ಡ್ರೋನ್ ಸೌಲಭ್ಯ ಇರುವ ಪ್ರದೇಶಗಳಲ್ಲಿ ಕ್ಯಾಮೆರಾ ಮೂಲಕ ನಿಗಾ ಇಡಬೇಕು. ಗಸ್ತು ಹೆಚ್ಚಿಸಿ, ಸೂಕ್ಷ್ಮ ಪ್ರದೇಶಗಳಲ್ಲಿ ಸಿಬ್ಬಂದಿ ಸದಾ ಎಚ್ಚರದಿಂದ ಇರಬೇಕೆಂದು ನಿರ್ದೇಶಿಸಿದರು.

ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ ಅವರು, ಜಲಗುಂಡಿಗಳಿಗೆ ಸೌರ ಪಂಪ್‌ಗಳ ಮೂಲಕ ಕೊಳವೆ ಬಾವಿಯಿಂದ ನೀರು ಹರಿಸುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ವರ್ಷ ಶಿವರಾತ್ರಿ, ಯುಗಾದಿ ಹಾಗೂ ದೀಪಾವಳಿ ಸಂದರ್ಭಗಳಲ್ಲಿ ಮಾದಪ್ಪನ ಭಕ್ತರು ಅರಣ್ಯ ಮಾರ್ಗವಾಗಿ ಪಾದಯಾತ್ರೆ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವುದು ರೂಢಿಯಾಗಿರುವುದನ್ನು ಉಲ್ಲೇಖಿಸಿದ ಸಚಿವರು, ಕಾಲುದಾರಿ ಹಾಗೂ ಮೆಟ್ಟಿಲು ಮಾರ್ಗಗಳಲ್ಲಿ ಡ್ರೋನ್ ಕ್ಯಾಮೆರಾ ಅಳವಡಿಸಿ ಸತತ ನಿಗಾ ಇಡುವಂತೆ ಸೂಚಿಸಿದರು. ಅಲ್ಲದೆ, ಅರಣ್ಯ ಸಿಬ್ಬಂದಿ, ಹೋಂಗಾರ್ಡ್ಸ್ ಹಾಗೂ ಸ್ಥಳೀಯ ಸಿಬ್ಬಂದಿಯನ್ನೊಳಗೊಂಡ ತಂಡಗಳನ್ನು ರಚಿಸಿ ಭಕ್ತರಿಗೆ ನೆರವು ನೀಡುವಂತೆ ಹೇಳಿದರು.

ಈ ಕಾರ್ಯಕ್ಕೆ ತಗಲುವ ವೆಚ್ಚವನ್ನು ಭರಿಸಲು ಮಲೆ ಮಹದೇಶ್ವರಸ್ವಾಮಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತಕ್ಕೆ ಪತ್ರ ಬರೆಯುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು ಕಾವೇರಿ ನದಿ ದಾಟಿ ಹನೂರು ತಾಲೂಕಿನ ಬಸವನಕಣಕ್ಕೆ ಬಂದು, ಅಲ್ಲಿಂದ ಶಾಗ್ಯ, ಡಿ.ಎಂ. ಸಮುದ್ರ, ಎಲ್ಲೆಮಾಳ, ಮಲ್ಲಯ್ಯನಪುರ, ಕೌದಳ್ಳಿ, ವಡಕೆಹಳ್ಳ, ಕೋಣನಕೆರೆ ಹಾಗೂ ತಾಳುಬೆಟ್ಟ ಮಾರ್ಗವಾಗಿ ಪಾದಯಾತ್ರೆಯಲ್ಲಿ ಬೆಟ್ಟಕ್ಕೆ ತೆರಳುತ್ತಿರುವುದು ಅಪಾಯಕಾರಿಯಾಗಿದೆ ಎಂದು ಸಚಿವರು ಎಚ್ಚರಿಸಿದರು. ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಭಕ್ತರ ಭಾವನೆಗೆ ಧಕ್ಕೆಯಾಗದಂತೆ ಅವರನ್ನು ಮನವೊಲಿಸುವ ಅಗತ್ಯವಿದೆ ಎಂದು ತಿಳಿಸಿದರು.

ರಾತ್ರಿ ವೇಳೆ ಕಾಡಿನ ಅಂಚು ಹಾಗೂ ಕಾಡಿನೊಳಗಿನ ವಸತಿ ಪ್ರದೇಶಗಳಲ್ಲಿ ತಂಗುವುದು ಅಪಾಯಕಾರಿಯಾಗಿದೆ ಎಂದು ತಿಳಿಸಿದ ಸಚಿವರು, ಇತ್ತೀಚೆಗೆ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಪ್ರವೀಣ್ ಎಂಬ ಯುವಕ ಚಿರತೆ ದಾಳಿಯಿಂದ ಮೃತಪಟ್ಟಿರುವ ಘಟನೆ ಅತ್ಯಂತ ದುಃಖಕರವಾಗಿದೆ ಎಂದು ಹೇಳಿದರು.

ಹೀಗಾಗಿ ಭಕ್ತರು ಬಸ್ ಹಾಗೂ ಕಾರುಗಳಲ್ಲಿ ತೆರಳಿ ಮಾದಪ್ಪನ ದರ್ಶನ ಪಡೆಯುವಂತೆ ಮನವೊಲಿಸಲು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ಕಳುಹಿಸಿರುವುದಾಗಿ ಸಚಿವರು ಮಾಹಿತಿ ನೀಡಿದರು.

error: Content is protected !!