Home Blog Page 194

ಯಶವಂತಪುರ ಫ್ಲೈಓವರ್ ಬಳಿ ಡಿವೈಡರ್‌ಗೆ ಮಿನಿ ಟೆಂಪೋ ಡಿಕ್ಕಿ; ವಾಹನ ಜಖಂ

0

ಬೆಂಗಳೂರು:- ನಗರದ ಯಶವಂತಪುರ ಫ್ಲೈಓವರ್ ಬಳಿ, ಡಿವೈಡರ್‌ಗೆ ಮಿನಿ ಟೆಂಪೋ ಡಿಕ್ಕಿ ಹೊಡೆದ ಘಟನೆ ಜರುಗಿದೆ.

ತುಮಕೂರು ಹೈವೇಯಿಂದ ಯಶವಂತಪುರ ಫ್ಲೈಓವರ್ ಕಡೆ ಮಿನಿ ಟೆಂಪೋ ಬರುತ್ತಿತ್ತು. ಈ ವೇಳೆ ಮುಂಭಾಗ ಬರುತ್ತಿದ್ದ ಕಾರಿನ ಚಾಲಕ ಸಡನ್ ಆಗಿ ಬಲ ಭಾಗಕ್ಕೆ ಬಂದಿದ್ದಾನೆ. ಏಕಾಏಕಿ ಬಲಕ್ಕೆ ಬಂದ ಪರಿಣಾಮ ಹಿಂದೆ ಬರುತ್ತಿದ್ದ ಮಿನಿ ಟೆಂಪೋ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಗುದ್ದಿದೆ.

ಡಿವೈಡರ್‌ಗೆ ಗುದ್ದಿದ ಪರಿಣಾಮ ಮಿನಿ ಟೆಂಪೋ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಸದ್ಯ ಟೆಂಪೋ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಯಶವಂತಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್; ಹೊತ್ತಿ ಉರಿದ ಪ್ಲಾಸ್ಟಿಕ್ ಗೋದಾಮು!

0

ಮಂಡ್ಯ:- ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಪ್ಲಾಸ್ಟಿಕ್ ಗೋದಾಮು ಹೊತ್ತಿ ಉರಿದಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ಜರುಗಿದೆ.

ಮಹಮದ್ ಎಂಬುವರಿಗೆ ಸೇರಿದ ಪ್ಲಾಸ್ಟಿಕ್ ಚೀಲದ ಗೋದಾಮಿನಲ್ಲಿ ತಡರಾತ್ರಿ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಗೋದಾಮಿದಲ್ಲಿದ್ದ ಕಚ್ಚಾ ಪಾದಾರ್ಥಗಳು ಸೇರಿ ಹಲವು ವಸ್ತುಗಳು ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ಮಾಡಿದ್ದು, ಬೆಂಕಿ ಶಮನ ಮಾಡುವ ಕಾರ್ಯ ಮಾಡಿದ್ದಾರೆ.

ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಚಾಮರಾಜನಗರ: ಗ್ರಾಮಸ್ಥರ ನಿದ್ದೆಗೆಡಿಸಿದ್ದ ತಾಯಿ ಹುಲಿ ಸೆರೆ; ಪತ್ತೆಯಾಗದ 4 ಮರಿಹುಲಿಗಳು, ಅರಣ್ಯ ಇಲಾಖೆ ಶೋಧ

0

ಚಾಮರಾಜನಗರ: ಕಳೆದ ತಿಂಗಳು ತನ್ನ ನಾಲ್ಕು ಮರಿಗಳೊಂದಿಗೆ ಗ್ರಾಮಸ್ಥರಲ್ಲಿ ಭಾರೀ ಆತಂಕ ಸೃಷ್ಟಿಸಿದ್ದ ತಾಯಿ ಹುಲಿ ಕೊನೆಗೂ ಸೆರೆ ಹಿಡಿಯಲಾಗಿದೆ.

ಆದರೆ ಅದರ ನಾಲ್ಕು ಮರಿಹುಲಿಗಳು ಇನ್ನೂ ನಾಪತ್ತೆಯಾಗಿದ್ದು, ಅರಣ್ಯ ಇಲಾಖೆಗೆ ತಲೆನೋವಾಗಿದೆ. ರೈತರ ತೋಟದಲ್ಲಿ ತಾಯಿ ಹುಲಿ ಮತ್ತು ಮರಿಹುಲಿಗಳ ಸಂಚಾರದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ನೂರಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಐದು ಸಾಕಾನೆಗಳೊಂದಿಗೆ ಹತ್ತು ದಿನಗಳ ಕಾಲ ನಡೆಸಿದ ಸೆರೆ ಕಾರ್ಯಾಚರಣೆ ವೇಳೆ ಕೇವಲ ತಾಯಿ ಹುಲಿ ಸೆರೆ ಸಿಕ್ಕಿದ್ದು, ಮರಿ ಹುಲಿಗಳು ನಾಪತ್ತೆಯಾಗಿದೆ.

ಇತ್ತೀಚೆಗೆ, ಬುಲೆಟ್ ಮಾದಪ್ಪ ಎಂಬ ರೈತರಿಗೆ ಸೇರಿದ ಬಾಳೆ ತೋಟದಲ್ಲಿ ಅಳವಡಿಸಿದ ಬೃಹತ್ ಬೋನಿಗೆ ತಾಯಿ ಹುಲಿ ಬಿದ್ದಿದ್ದು, ಹಸುವನ್ನು ಕೊಂದುಹಾಕಿರುವುದು ಗಮನಕ್ಕೆ ಬಂದಿದೆ. ಇನ್ನೊಂದು ತೋಟದಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಬೆಳಗಿನ ಜಾವ ಒಂದು ಹುಲಿಯ ಸಂಚಾರ ದೃಶ್ಯ ಸಿಕ್ಕಿದ್ದು, ಬೋನಿಗೆ ಬಿದ್ದಿರುವ ಹುಲಿ ಅದೇನಾ ಎಂಬುದು ವೈಜ್ಞಾನಿಕ ಪರಿಶೀಲನೆಯಿಂದ ತಿಳಿಯಬೇಕಿದೆ. ತಾಯಿ ಹುಲಿ ಸೆರೆ ಹಿಡಿದರೂ ಮರಿ ಹುಲಿಗಳನ್ನು ಹಿಡಿಯುವ ಕೆಲಸ ಮುಂದುವರಿಯದೇ ಇದ್ದರೆ, ರೈತರು ನಿತ್ಯ ಆತಂಕದಲ್ಲಿ ಬದುಕಬೇಕಾಗುವ ಸಾಧ್ಯತೆ ಇದೆ.

ಗದಗ| ರೀಲ್ಸ್‌ಗೆ ಅಶ್ಲೀಲ ನಿಂದನೆ; ಪೊಲೀಸ್ ಠಾಣೆ ಮುಂದೆ ಮಹಿಳೆಯರಿಂದ ಪ್ರೊಟೆಸ್ಟ್!

0

ಗದಗ:– ಗದಗದಲ್ಲಿ ರೀಲ್ಸ್ ವಿಚಾರವಾಗಿ ಅಶ್ಲೀಲ ನಿಂದನೆ ಆರೋಪದ ಆಡಿಯೋ ವೈರಲ್ ಆಗಿದ್ದು, ಎಸ್.ಎಸ್.ಕೆ ಸಮಾಜದ ಮಹಿಳೆಯರು ಪೊಲೀಸ್ ಠಾಣೆ ಎದುರು ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು.

ಎಸ್, ಫ್ಯಾಷನ್ ಡ್ರೆಸ್ ಹಾಕಿ ರೀಲ್ಸ್ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗದಗದ ಬಾಲಾಜಿ ನಗರದ ಮಹಿಳೆಯೊಬ್ಬರು, ಬುದ್ಧಿ ಹೇಳುವ ಬದಲು ತಮ್ಮದೇ ಸಮಾಜದ ಹೆಣ್ಣು ಮಕ್ಕಳಿಗೆ ಅಶ್ಲೀಲ ಪದಗಳಿಂದ ನಿಂದನೆ ಮಾಡಿದ ಆರೋಪದ ಮೇಲೆ ಎಸ್.ಎಸ್.ಕೆ ಸಮಾಜದ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್.ಎಸ್.ಕೆ ಸಮಾಜದ ವಾಟ್ಸಪ್ ಗ್ರೂಪ್‌ಗಳಲ್ಲಿ ಅಶ್ಲೀಲ ಶಬ್ದಗಳ ನಿಂದನೆಯ ಆಡಿಯೋ ವೈರಲ್ ಆಗಿದ್ದು, ಗದಗ, ಹುಬ್ಬಳ್ಳಿ, ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳ ಯುವತಿಯರು ಮತ್ತು ಮಹಿಳೆಯರು ರೊಚ್ಚಿಗೆದ್ದಿದ್ದಾರೆ. ಇದರ ಬೆನ್ನಲ್ಲೇ ಎಸ್.ಎಸ್.ಕೆ ಸಮಾಜದ ಮಹಿಳೆಯರು ಗದಗ ನಗರ ಪೊಲೀಸ್ ಠಾಣೆ ಎದುರು ಜಮಾವಣೆ ನಡೆಸಿ ಪ್ರತಿಭಟನೆ ನಡೆಸಿದರು.

ರೀಲ್ಸ್ ಮಾಡಿದ ಯುವತಿಯರ ವಿಡಿಯೋ ಹಾಗೂ ಫೋಟೋಗಳಿಗೆ ಟ್ಯಾಗ್ ಮಾಡಿ ನಿಂದನೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಗದಗನ ಮಹಿಳೆ ಈ ಆಡಿಯೋಗಳನ್ನು ಹಲವು ಜಿಲ್ಲೆಗಳ ವಾಟ್ಸಪ್ ಗ್ರೂಪ್‌ಗಳಿಗೆ ಶೇರ್ ಮಾಡಿದ್ದಾರೆ ಎನ್ನಲಾಗಿದ್ದು, ಇದಕ್ಕೆ ವಿರೋಧವಾಗಿ ಮಹಿಳೆಯರು ಅವರ ಮನೆಗೆ ತೆರಳಿ ಪ್ರಶ್ನಿಸಿದ್ದಾರೆ.

ಈ ವೇಳೆ ಹುಬ್ಬಳ್ಳಿಯಿಂದ ಬಂದ ಮಹಿಳೆಯ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ. ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಮಹಿಳೆಯರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ.

ಮಾಜಿ ಸಚಿವ ನಾಗೇಂದ್ರಗೆ ಬಿಗ್ ಶಾಕ್: ವಾಲ್ಮೀಕಿ ಹಗರಣದಲ್ಲಿ ಸಿಬಿಐ ವಿಚಾರಣೆಗೆ ನೋಟಿಸ್; ಮತ್ತೆ ಜೈಲು ಭೀತಿ!

0

ಬೆಂಗಳೂರು: ಬಹುಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಪ್ರಕರಣದಲ್ಲಿ ಸಿಬಿಐ ಮಾಜಿ ಸಚಿವ ಬಿ. ನಾಗೇಂದ್ರಗೆ ನೋಟಿಸ್ ಜಾರಿ ಮಾಡಿದೆ.

ನೋಟಿಸ್ ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದ್ದು, ಈ ಮೂಲಕ ನಾಗೇಂದ್ರಗೆ ಮತ್ತೆ ಬಂಧನದ ಭೀತಿ ಉಂಟುಮಾಡಿದೆ. ವಾಲ್ಮೀಕಿ ಹಗರಣ ಹೊರಬಂದ ನಂತರ, ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಇಡಿಯಿಂದ ಬಂಧನಕ್ಕೊಳಗಾಗಿ ಜೈಲು ವಾಸ ಅನುಭವಿಸಿದ್ದರು.

ಇತ್ತೀಚೆಗೆ ಜಾಮೀನು ಪಡೆದು ಹೊರಬಂದ ನಾಗೇಂದ್ರ, ಸಂಪುಟ ಪುನಾರಚನೆ ವೇಳೆ ತನ್ನ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿ ಇದ್ದರು. ಇದೀಗ ಸಿಬಿಐ ನೋಟಿಸ್ ಜಾರಿ ಮಾಡಿದ್ದು, ನಾಗೇಂದ್ರ ಅವರು ಸಂಕಷ್ಟಕ್ಕೀಡಾಗಿದ್ದಾರೆ. ಈ ನಡುವೆ, ಅವರು ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಮಧ್ಯವರ್ತಿಗಳಿಗೆ ಹಣ ನೀಡದಿರಿ: ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನಲ್ಲಿ ಹೊಸ ಪಡಿತರ ಚೀಟಿ ಪಡೆಯಲು ಕಾಯುತ್ತಿರುವ ಅರ್ಜಿದಾರರಿಗೆ ಪಂಚನಾಮೆ ಪ್ರಕ್ರಿಯೆ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡಿ ಮೋಸ ಹೋಗಬಾರದು ಎಂದು ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 2017ರಿಂದ 2025ರ ಅವಧಿಯಲ್ಲಿ ಹೊಸ ಪಡಿತರ ಚೀಟಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಾಗರಿಕರ ಮನೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡುತ್ತಿದ್ದಾರೆ. ಅರ್ಜಿದಾರರ ವಾಸಸ್ಥಳದ ಪರಿಶೀಲನೆ, ವಿಚಾರಣೆ ಹಾಗೂ ಪಂಚನಾಮೆ ನಡೆಸಿ, ಫಲಾನುಭವಿಗಳ ಭಾವಚಿತ್ರ ಮತ್ತು ಅಗತ್ಯ ಮಾಹಿತಿಯನ್ನು ಸ್ಥಳದಲ್ಲೇ ಸಂಗ್ರಹಿಸಲಾಗುತ್ತಿದೆ. ಇದು ಸರಕಾರದ ಅಧಿಕೃತ ಪ್ರಕ್ರಿಯೆಯಾಗಿದೆ.

ಪಡಿತರ ಚೀಟಿ ಮಂಜೂರು ಮಾಡಿಸಿಕೊಡುವುದಾಗಿ ನಂಬಿಸಿ ತಾಲೂಕಿನ ಕೆಲವು ಮಧ್ಯವರ್ತಿಗಳು, ದಲ್ಲಾಳಿಗಳು ಹಾಗೂ ಆನ್‌ಲೈನ್ ಅಂಗಡಿಯವರು ಫಲಾನುಭವಿಗಳಿಂದ 5 ಸಾವಿರ ರೂ.ದಿಂದ 7,500 ರೂಪಾಯಿವರೆಗೆ ಹಣಕ್ಕೆ ಬೇಡಿಕೆ ಇಡುತ್ತಿರುವುದು ಕಂಡುಬಂದಿದೆ. ಪಡಿತರ ಚೀಟಿ ಪಡೆಯುವುದು ನಾಗರಿಕರ ಹಕ್ಕು. ಇದಕ್ಕಾಗಿ ಯಾರಿಗೂ ಹಣ ನೀಡುವ ಅಗತ್ಯವಿಲ್ಲ ಎಂದು ಅಶೋಕ ಮಂದಾಲಿ ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ಯಾರಾದರೂ ಹಣದ ಬೇಡಿಕೆ ಇಟ್ಟಲ್ಲಿ ಸಾರ್ವಜನಿಕರು ಭಯಪಡದೆ ದೂರು ನೀಡಬಹುದು. ಗದಗ ನಗರದ ಮುಳಗುಂದ ನಾಕಾ ಬಳಿಯ ಕೆ.ಎಸ್.ಆರ್.ಟಿ.ಸಿ ಡಿಪೊ ಎದುರಿಗೆ ಇರುವ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿರುವ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿಯನ್ನು ಇಲ್ಲವೇ ಮೊಬೈಲ್ ಸಂಖ್ಯೆ-9449446313 ಸಂಪರ್ಕಿಸಿ ದೂರು ಸಲ್ಲಿಸುವಂತೆ ಅಶೋಕ ಮಂದಾಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಗುಣಾತ್ಮಕ ಫಲಿತಾಂಶದೊಂದಿಗೆ ಯಶಸ್ಸು ಗಳಿಸಲಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎನ್. ಶ್ರೀಧರ್ ಅವರು ಶುಕ್ರವಾರ ಲಕ್ಕುಂಡಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಾಗೂ ಬಿ.ಎಚ್. ಪಾಟೀಲ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಪೂರ್ವಭಾವಿ-1 ವಿಜ್ಞಾನ ವಿಷಯದ ಪರೀಕ್ಷಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಈಗಾಗಲೇ ಶಾಲಾ ಶಿಕ್ಷಣ ಇಲಾಖೆ ನೀಡಿರುವ ಮಾರ್ಗದರ್ಶನದಂತೆ ತಾವೆಲ್ಲ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸಲು ವಿದ್ಯಾರ್ಥಿವಾರು ಟ್ರ‍್ಯಾಕಿಂಗ್ ವ್ಯವಸ್ಥೆ ಅಡಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ನಿಖರವಾಗಿ ಗುರುತಿಸಿ, ಪರೀಕ್ಷೆಗಳ ಆಧಾರದ ಮೇಲೆ ನಿರಂತರವಾಗಿ ಟ್ರ್ಯಾಕಿಂಗ್ ನಡೆಸಬೇಕು. ವಿದ್ಯಾರ್ಥಿಗಳನ್ನು ಸಾಮರ್ಥ್ಯಾನುಸಾರ ಗುಂಪು ಮಾಡಿ, ಅಗತ್ಯ ಕ್ರಮ ಕೈಗೊಂಡು ಮೌಲ್ಯಮಾಪನ ಮಾಡಿ ಪೋಷಕರ ಸಭೆಯಲ್ಲಿ ಮಕ್ಕಳಿಗೆ ಹಾಗೂ ಪೋಷಕರಿಗೆ ತಿಳಿಸಿ, ಗಮನಿಸಿದ ತಪ್ಪನ್ನು ಸರಿಪಡಿಸಿ. ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವಲ್ಲಿ ಸತತ ಪ್ರಯತ್ನ ನಿಮ್ಮದಾಗಿರಲಿ ಎಂದರು.

ಓದು–ಬರಹದಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರತಿದಿನ ನಿಗದಿತ ಸಮಯದಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ನಿಧಾನ ಕಲಿಕೆಯ ಹಾಗೂ ಓದು–ಬರಹದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ, ವಿಶೇಷ ಗಮನ ಹರಿಸಿ ಇಲಾಖೆ ನೀಡಿದ ತರಬೇತಿ ಹಾಗೂ ಮಾರ್ಗದರ್ಶನದಂತೆ ಕನಿಷ್ಠ 40+ ಅಂಕ ಗಳಿಸುವಂತೆ ವಿಶೇಷ ತರಗತಿಗಳು, ಪುನರಾವಲೋಕನ, ಗುಂಪು ಚಟುವಟಿಕೆ ಹಾಗೂ ಮೇಧಾವಿ ವಿದ್ಯಾರ್ಥಿಗಳಿಗೆ ಅಪ್ಲೈಡ್ ಪ್ರಶ್ನೆಗಳ ಅಭ್ಯಾಸಕ್ಕೆ ಒತ್ತು ನೀಡುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್.ಎಸ್. ಬುರಡಿ, ಎಪಿಸಿಓ ಎಸ್.ಎಸ್. ಕುರಿಯವರ, ತಾಂತ್ರಿಕ ಸಹಾಯಕ ಎಂ.ಎಚ್. ಸವದತ್ತಿ ಹಾಗೂ ಎರಡೂ ಶಾಲೆಯ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

ನಮ್ಮೆಲ್ಲರ ಪ್ರಯತ್ನ ಕೇವಲ ಮಕ್ಕಳ ಉತ್ತೀರ್ಣತೆಗಷ್ಟೇ ಸೀಮಿತವಾಗದೆ, ಎಲ್ಲ ವಿದ್ಯಾರ್ಥಿಗಳು ಗುಣಾತ್ಮಕ ಕಲಿಕೆಯನ್ನು ಹೊಂದುವಂತೆ ಪ್ರಯತ್ನಿಸೋಣ. ಸರ್ಕಾರದಿಂದ ನೀಡಿದ 29 ಅಂಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಜಿಲ್ಲೆಯ ಫಲಿತಾಂಶವನ್ನು ಶೇ. 100ಕ್ಕೆ ತಲುಪಿಸುವಂತೆ ಎಲ್ಲರೂ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ದಾನಶೂರ ಶಿರಸಂಗಿ ಲಿಂಗರಾಜರು

0

ಶಿಕ್ಷಣ ಸೇವೆಯೇ ದೇವರ ಸೇವೆ’ ಎಂಬ ಅಚಲವಾದ ನಂಬಿಕೆಯ ಇಂದ ಶಿಕ್ಷಣ ಸಂಸ್ಥೆ ಸ್ಥಾಪಿಸಲು ನಿಸ್ವಾರ್ಥ ಮನೋಭಾವನೆಯಿಂದ ಸಂಸ್ಥಾನದ ಇಡೀ ಆಸ್ತಿಯನ್ನೇ ಸಮರ್ಪಿಸಿದ ದಾನಶೂರ ಕರ್ಣ ಶಿರಸಂಗಿ ಲಿಂಗರಾಜ ದೇಸಾಯಿಯವರಾಗಿದ್ದಾರೆ.

ಲಕ್ಷ್ಮೇಶ್ವರ ಸಮೀಪದ ಶಿಗ್ಲಿಯಲ್ಲಿ ಸುಮಾರು 1861ರ ಜನವರಿ 10ರಂದು ಕೃಷಿ ಕುಟುಂಬದಲ್ಲಿ ಜನಿಸಿದರು. ತಂದೆ ಗೂಳಪ್ಪ ಮಡ್ಲಿ, ತಾಯಿ ಎಲ್ಲವ್ವ ದಂಪತಿಗಳ 6 ಜನ ಮಕ್ಕಳಲ್ಲಿ ರಾಮಪ್ಪ ಎಂಬ ಹೆಸರಿನ ಲಿಂಗರಾಜರು ನಾಲ್ಕನೆಯವರು. ಕೇವಲ 12 ವರ್ಷದವರಿದ್ದಾಗ 1872ರಲ್ಲಿ ನವಲಗುಂದ ಸಂಸ್ಥಾನಕ್ಕೆ ದತ್ತಕರಾದಾಗ ಸಂಸ್ಥಾನದ ಒಡತಿ ಗಂಗಾಬಾಯಿ ಇವರನ್ನು ದತ್ತಕ ಪಡೆದ ತಾಯಿಗಿಂತಲೂ ಅತ್ಯಂತ ಪ್ರೀತಿ-ವಾತ್ಸಲ್ಯದಿಂದ ಬೆಳೆಸಿದರು.

ಲಿಂಗರಾಜರು ಸಿರಸಂಗಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಕೊಲ್ಲಾಪುರದಲ್ಲಿ ಉನ್ನತ ವ್ಯಾಸಂಗ ಮಾಡುವ ಸಂದರ್ಭದಲ್ಲಿ ಇವರ ದತ್ತಕ ತಂದೆ ಜಾಯಪ್ಪ ಅವರಿಗೆ ಸಿರಸಂಗಿ ಸೇರಿದಂತೆ ಹತ್ತು ಗ್ರಾಮಗಳು ಉಂಬಳಿಯಾಗಿ ಸಿಕ್ಕಿದವು. ಲಿಂಗರಾಜರಿಗೆ ಕೃಷಿ ಕ್ಷೇತ್ರದ ಮೇಲಿದ್ದ ಪ್ರೀತಿಯಿಂದ ಕೆರೆ ಕಟ್ಟಿಸುವುದು, ಸುಧಾರಿತ ಬೀಜ, ಗೊಬ್ಬರ ಬಳಕೆ ಮೂಲಕ ವೈಜ್ಞಾನಿಕ ಕೃಷಿಗೆ ಒತ್ತು ನೀಡಿದರು. ಅನಾಥರ ರಕ್ಷಣೆಗಾಗಿ ಧರ್ಮ ಶಾಲೆಗಳ ಸ್ಥಾಪನೆ ಮಾಡಿದರು. ಧರ್ಮದ ಬಗ್ಗೆ ಅಪಾರ ಗೌರವ ಹೊಂದಿದ್ದ ಅವರು ಅಥಣಿ, ಅವರಾಧಿ, ಗದಗ, ಹಾನಗಲ್ ಶ್ರೀಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. 1903ರಲ್ಲಿ ಅಖಿಲ ಭಾರತ ವೀಶಶೈವ ಮಹಾಸಭಾ ಸ್ಥಾಪನೆಯ ಪ್ರಮುಖರಾಗಿದ್ದರು. ಧಾರವಾಡ ಮತ್ತು ಬೆಂಗಳೂರಿನಲ್ಲಿ ನಡೆದ ಮಹಾಸಭಾದ ಅಧ್ಯಕ್ಷತೆ ವಹಿಸಿದ್ದ ಅವರು, ಅಂದು ಸ್ತ್ರೀ ಶಿಕ್ಷಣ, ನೀತಿ ಶಿಕ್ಷಣ, ವ್ಯಾಪಾರ, ಕೃಷಿ, ಸಾಂಸ್ಕೃತಿ, ಧಾರ್ಮಿಕ ಬದುಕಿನ ಬಗ್ಗೆ ಮಂಡಿಸಿದ ವಿಚಾರಗಳು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿವೆ.

ಬದುಕಿನುದ್ದಕ್ಕೂ ಶಿಕ್ಷಣ ಮತ್ತು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ ಅವರು ತಮ್ಮ ಕೊನೆಯ ದಿನಗಳಲ್ಲಿ ಸಂಸ್ಥಾನದ ಆಸ್ತಿಯನ್ನು ಸಮಾಜಕ್ಕೆ ಸಮರ್ಪಿಸುವ ದೃಢ ನಿರ್ಧಾರದಿಂದ ಇಚ್ಛಾಪತ್ರ ಬರೆದು ಆಗಿನ ಕಲೆಕ್ಟರ್ ಮೇ|| ಜಾಕ್ಸನ್‌ರವರ ಕೈಗಿತ್ತು ತಮ್ಮ ಮರಣಾನಂತರ ವಿಷಯ ಬಹಿರಂಗಪಡಿಸಬೇಕೆಂದು ಮನವಿ ಮಾಡಿದ್ದರು. ಈಗಿನ ಪ್ರಸಿದ್ಧ ಕೆಎಲ್‌ಇ ಸಂಸ್ಥೆಗೆ ಸಂಸ್ಥಾನದ ಆಸ್ತಿಯನ್ನು ಭೂದಾನ ನೀಡಿದ ಯುಗಪುರುಷ ಶಿರಸಂಗಿ ಲಿಂಗರಾಜರು. ಅವರ ಶುದ್ಧ ಮನಸ್ಸಿನ ಸಮರ್ಪಣಾಭಾವದ ಕಾಮಧೇನು, ಶಿಕ್ಷಣ ಪ್ರೇಮಿ ಲಿಂಗರಾಜರು 23-8-1906ರಲ್ಲಿ ನವಲಗುಂದದಲ್ಲಿ ದೈವಾಧೀನರಾದರು.

ಆದರೆ ದುರ್ದೈವದ ಸಂಗತಿಯೆಂದರೆ, ಸಮಾಜಕ್ಕಾಗಿಯೇ ಸಮರ್ಪಿಸಿಕೊಂಡ ಮಹಾನ್ ಪುರುಷ ಲಿಂಗರಾಜರ ಹುಟ್ಟೂರಿನಲ್ಲಿ ಅವರ ಹೆಸರಿನ ವೃತ್ತವೊಂದನ್ನು ಬಿಟ್ಟರೆ ಮತ್ತೇನಿಲ್ಲ. ಮುಖ್ಯವಾಗಿ ಅವರು ಹುಟ್ಟಿ ಬೆಳೆದ ಮನೆ ಈಗಲೂ ಪಾಳುಬಿದ್ದಿರುವುದು ಖೇದಕರ ಸಂಗತಿ.

ಈ ಕುರಿತು ನಾಡಿನ ಹಿತಕ್ಕಾಗಿ ತಮ್ಮ ಬೆಲೆ ಕಟ್ಟಲಾಗದಷ್ಟು ಆಸ್ತಿಯನ್ನು ದಾನ ಮಾಡಿದ ಲಿಂಗರಾಜರ ಹೆಸರಿನಲ್ಲಿ ಅವರ ಹುಟ್ಟೂರಾದ ಶಿಗ್ಲಿಯಲ್ಲಿ ಅವರ ಸ್ಮಾರಕ ಮತ್ತು ಸಮಾಜಕ್ಕೆ ಉಪಯೋಗವಾಗುವ ಸೇವಾ ಸಂಸ್ಥೆ ಪ್ರಾರಂಭಿಸಬೇಕೆಂಬುದು ಗ್ರಾಮದ ಜನರ ಅಭಿಪ್ರಾಯವಾಗಿದೆ. ಈ ಬಗ್ಗೆ ಸರಕಾರಕ್ಕೆ ಗ್ರಾಮಸ್ಥರು ಮನವಿಯನ್ನು ಸಲ್ಲಿಸಿದ್ದಾರೆ. ಇದಕ್ಕಾಗಿ ಗ್ರಾ.ಪಂ ವತಿಯಿಂದ ಹೂವಿನ ಶಿಗ್ಲಿ ರಸ್ತೆಯಲ್ಲಿ ನೀಡಿದ 6 ಗುಂಟೆ ನಿವೇಶನದಲ್ಲಿ ಅವರ ಹೆಸರಿನ ಸಮುದಾಯ ಭವನ ನಿರ್ಮಾಣಕ್ಕಾಗಿ ಬುನಾದಿ ಹಾಕಿ ಕೈಬಿಡಲಾಗಿದೆ.

ಈ ನಡುವೆ ಪ್ರತಿ ವರ್ಷ ಜನವರಿ 10ರಂದು ಶಿಗ್ಲಿಯ ಲಿಂಗರಾಜರ ಜನ್ಮದಿನಾಚರಣೆಯ ದಿನ ಸಮಾಜ ಬಾಂಧವರು ಮತ್ತು ಗ್ರಾಮಸ್ಥರು ಸೇರಿ ವೃತ್ತದಲ್ಲಿನ ಮೂರ್ತಿಗೆ ಪೂಜೆ ಸಲ್ಲಿಸುವ ಕಾರ್ಯ ಮಾತ್ರ ನಡೆಯುತ್ತಿರುವುದು ಸಮಾಧಾನದ ಸಂಗತಿ.

  • ಮಲ್ಲು ಕಳಸಾಪುರ.

ಯೋಜನೆಗಳ ಅನುಷ್ಠಾನಕ್ಕಾಗಿ ಆಸಕ್ತಿಯಿಂದ ಕೆಲಸ ಮಾಡಿ: ಬಿ.ಬಿ. ಅಸೂಟಿ

0

ವಿಜಯಸಾಕ್ಷಿ ಸುದ್ದಿ, ಗದಗ: ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದೇ ಪಂಚ ಗ್ಯಾರಂಟಿ ಯೋಜನೆಗಳ ಉದ್ದೇಶವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ತಿಳಿಸಿದರು.

ಗದಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಂಚ ಗ್ಯಾರಂಟಿ ಯೋಜನೆಗಳು ಬಡಜನರ ಸೇವೆಗೆ ಒದಗಿಸಿದ ಬಹುದೊಡ್ಡ ಅವಕಾಶವಾಗಿದೆ. ಪಂಚ ಗ್ಯಾರಂಟಿ ಯೋಜನೆಯ ಮಹತ್ವವನ್ನು ಅರ್ಥೈಸಿಕೊಂಡು ಅವುಗಳ ಸಂಪೂರ್ಣ ಅನುಷ್ಠಾನಕ್ಕಾಗಿ ಸಂಬಂಧಿತ ಅಧಿಕಾರಿಗಳು ಆಸಕ್ತಿಯಿಂದ ಕೆಲಸ ನಿರ್ವಹಿಸಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ತಲುಪಿಸುವಲ್ಲಿ ವಿಳಂಬವಾಗಬಾರದು. ಸಾರ್ವಜನಿಕರ ಸುರಕ್ಷತೆಗಾಗಿ ಗದಗ ಹೊಸ ಬಸ್ ನಿಲ್ದಾಣದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದ್ದು, ಅವುಗಳು ವ್ಯವಸ್ಥಿತವಾಗಿರುವ ಕುರಿತು ತಪಾಸಣೆ ನಡೆಸಬೇಕು ಎಂದು ತಿಳಿಸಿದರು.

ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಅಶೋಕ ಮಂದಾಲಿ ಮಾತನಾಡಿ, ಬಡಜನರ ಹಸಿವು ನೀಗಿಸುವಲ್ಲಿ ಅನ್ನಭಾಗ್ಯ ಯೋಜನೆಯ ಪಾತ್ರ ಮಹತ್ವದ್ದಾಗಿದೆ. ಅನ್ನಭಾಗ್ಯ ಯೋಜನೆಯ ಅಕ್ಕಿಯು ಕಳ್ಳಸಂತೆಯಲ್ಲಿ ಮಾರಾಟವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಬಿ. ಅಳಗವಾಡಿ ಮಾತನಾಡಿ, ಪಡಿತರ ಅಂಗಡಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಸಮರ್ಪಕ ರೀತಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಣೆಯಾಗುತ್ತಿರುವ ಕುರಿತು ಸಂಬಂಧಿತ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸಬೇಕು ಎಂದರು.

ಪಂಚಗ್ಯಾರಂಟಿ ಯೋಜನೆಯ ಸಂಬಂಧಿತ ಅಧಿಕಾರಿಗಳು ಈ ಕೆಳಗಿನಂತೆ ಸಭೆಗೆ ಮಾಹಿತಿ ಒದಗಿಸಿದರು.

ಗೃಹಲಕ್ಷ್ಮಿ ಯೋಜನೆಯಡಿ ಡಿಸೆಂಬರ್ 2025ರವರೆಗೆ 249353 ನೋಂದಣಿಯಾದ ಅರ್ಜಿಗಳ ಪೈಕಿ 249353 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ವಾಕರಸಾ ಸಂಸ್ಥೆಯಿಂದ 11-6-2023ರಿಂದ 4-1-2026ರವರೆಗೆ 13.75 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಫೆಬ್ರುವರಿ 2025ರಿಂದ ಡಿಸೆಂಬರ್ 2025ರವರೆಗೆ ಹೆಚ್ಚುವರಿ 5 ಕೆಜಿ ಆಹಾರ ಧಾನ್ಯಗಳ ಹಂಚಿಕೆಯಡಿ ಜಿಲ್ಲೆಯಲ್ಲಿ 4,33,927 ಕ್ವಿಂಟಾಲ್ ಅಕ್ಕಿ ಹಂಚಿಕೆಯಾಗಿದೆ.

ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಜನವರಿ 2024ರಿಂದ ಸೆಪ್ಟೆಂಬರ್ 2025ರವರೆಗೆ 6356 ಅರ್ಜಿಗಳು ಸ್ವೀಕೃತವಾಗಿರುತ್ತವೆ. ಆ ಪೈಕಿ 4048 ಅರ್ಹ ಫಲಾನುಭವಿಗಳಿಗೆ ಡಿ.ಬಿ.ಟಿ ಮೂಲಕ ಹಣ ವರ್ಗಾವಣೆಯಾಗಿರುತ್ತದೆ. ಬಾಕಿ ಉಳಿದಿರುವ 2308 ಅಭ್ಯರ್ಥಿಗಳು ಯುವನಿಧಿ ಯೋಜನೆಯ ಷರತ್ತುಗಳಿಗೆ ಹಂತ ಹಂತವಾಗಿ ಅರ್ಹರಾಗುತ್ತಾರೆ. ಗೃಹ ಜ್ಯೋತಿ ಯೋಜನೆಯಡಿ ಒಟ್ಟು 278395 ಸ್ಥಾವರಗಳ ಪೈಕಿ 274242 ಸ್ಥಾವರಗಳು ನೋಂದಣಿಯಾಗಿವೆ.

ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಿ.ಪಂ ಯೋಜನಾ ನಿರ್ದೇಶಕ ಎಂ.ಎಸ್. ಚಳಗೇರಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಫಕ್ರುಸಾಬ ಚಿಕ್ಕಮಣ್ಣೂರ, ಸದಸ್ಯರಾದ ಶರಣಪ್ಪ ಬೆಟಗೇರಿ, ಶರೀಫ್ ಬಿಳಿಯಲಿ, ನಾಗರಾಜ ಶಿವಪ್ಪ ಮಡಿವಾಳರ, ವಿವೇಕ ಯಾವಗಲ್, ದೇವಪ್ಪ ಮೋರನಾಳ, ಪುಲಕೇಶಗೌಡ ಪಾಟೀಲ, ಈಶಣ್ಣ ಹುಣಸೀಕಟ್ಟಿ, ಗೀತಾ ಸುರೇಶ ಬೀರಣ್ಣವರ, ವೀರಯ್ಯ ಮಠಪತಿ, ಆರ್.ಆರ್. ಗಡ್ಡದ್ದೇವರಮಠ, ಗ್ಯಾರಂಟಿ ಯೋಜನೆಗೆ ಸಂಬಂಧಿತ ಇಲಾಖಾ ಅಧಿಕಾರಿಗಳು ಹಾಜರಿದ್ದರು.

ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ಮಹಿಳೆಯರಿಗೆ ಆಸನದ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಬಸ್ ನಿಲ್ದಾಣಗಳ ಸ್ವಚ್ಛತೆ ಮುಖ್ಯವಾಗಿದ್ದು, ಬಸ್ ನಿಲ್ದಾಣದ ಆವರಣ ಸ್ವಚ್ಛವಾಗಿರುವಂತೆ ಹಾಗೂ ಅಲ್ಲಿ ಮೂಲಭೂತ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು ಎಂದರು.

ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಪೂಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವಿವೇಕಾನಂದ ಬಡಾವಣೆ (ರಾಜೀವಗಾಂಧಿ ನಗರ), ಶ್ರೀ ಸಾಯಿಬಾಬಾ ಮಂದಿರದ ಎದುರಿಗೆ ಹಾತಲಗೇರಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಎ. ನಾಗರಾಜ ಗುರುಸ್ವಾಮಿಗಳ 45 ವರ್ಷಗಳ ಅವಿಸ್ಮರಣೀಯ ಸೇವೆ ಮತ್ತು 26 ವರ್ಷಗಳಿಂದ ನಿರಂತರ ಓಂ ಶ್ರೀ ಅಯ್ಯಪ್ಪಸ್ವಾಮಿಯ ನಿತ್ಯ ಪೂಜೆ ಗುರುಸ್ವಾಮಿಗಳು ಹಾಗೂ ಶಿಷ್ಯ ಬಳಗದಿಂದ ನಡೆಸಿಕೊಂಡು ಬಂದಿದೆ.

ಈ ವರ್ಷ ಜ. 7ರಂದು ಮಸಾರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಿಂದ ಎ. ನಾಗರಾಜ ಗುರುಸ್ವಾಮಿಗಳು ಹಾಗೂ ಶಿಷ್ಯ ಬಳಗದ ನೇತೃತ್ವದಲ್ಲಿ ಅಯ್ಯಪ್ಪಸ್ವಾಮಿ ಮೂರ್ತಿ ಮೆರವಣಿಗೆಯು ಜ್ಯೋತಿ ಹಾಗೂ ಪೂರ್ಣಕುಂಭದೊಂದಿಗೆ ಜರುಗಿತು. ಜ. 8ರಂದು ಮಧ್ಯಾಹ್ನ ಮಹಾಅನ್ನಸಂತರ್ಪಣೆ ಜರುಗಿತು. ಜ. 9ರಂದು ಬೆಳಿಗ್ಗೆ 9 ಗಂಟೆಗೆ ಇರುಮುಡಿ ಕಟ್ಟುವ ಕಾರ್ಯಕ್ರಮ ಜರುಗಿತು.

error: Content is protected !!