Home Blog Page 196

ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಆತಂಕ: ಮರ ಕೆಡವಿ 2 ಕಿಮೀ ಟ್ರಾಫಿಕ್ ಜಾಮ್

0

ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯ 2 ಮತ್ತು 3ನೇ ತಿರುವಿನ ಬಳಿ ಒಂಟಿ ಸಲಗ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಶುಕ್ರವಾರ (ಜ.9) ರಾತ್ರಿ ಕಾಡಾನೆ ರಸ್ತೆ ಮೇಲೆ ಮರ ಕೆಡವಿ, ರಸ್ತೆಯಲ್ಲೇ ನಿಂತ ಪರಿಣಾಮ ಚಿಕ್ಕಮಗಳೂರು ಹಾಗೂ ಮಂಗಳೂರು ಕಡೆಗೆ ಸಾಗುವ ಮಾರ್ಗದಲ್ಲಿ ಸುಮಾರು 2 ಕಿಲೋ ಮೀಟರ್‌ ಟ್ರಾಫಿಕ್ ಜಾಮ್ ಉಂಟಾಗಿದೆ.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಮೊಬೈಲ್ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲು ಪ್ರವಾಸಿಗರು ಪರದಾಡಿದ ಘಟನೆ ನಡೆದಿದೆ. ಕೆಲವರು ಪರಿಸ್ಥಿತಿಯನ್ನು ಗಮನಿಸಿ ತಮ್ಮ ವಾಹನಗಳನ್ನು ವಾಪಸ್‌ ತಿರುಗಿಸಿಕೊಂಡು ತೆರಳಿದ್ದಾರೆ.

ಈ ಹಿಂದೆಯೂ ಈ ಪ್ರದೇಶದಲ್ಲಿ ಕಾಡಾನೆಗಳು ಕಾಣಿಸಿಕೊಂಡ ಘಟನೆಗಳು ವರದಿಯಾಗಿದ್ದು, ಇದೀಗ ಮತ್ತೆ ಆತಂಕ ಹೆಚ್ಚಿಸಿದೆ. ಕಾಡಾನೆ ಕಾಣಿಸಿಕೊಂಡ ಹಿನ್ನೆಲೆ, ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ನಾಡಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರಗೊಂಡ ಪ್ರಕರಣ: ಮೂವರು ಆರೋಪಿಗಳು ಅರೆಸ್ಟ್

0

ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಆಲನಾಥ ಗ್ರಾಮದಲ್ಲಿ ನಡೆದ ನಾಡಬಾಂಬ್ ಸ್ಫೋಟ ಪ್ರಕರಣ ಗ್ರಾಮಸ್ಥರ ಮನಸ್ಸನ್ನು ಕಲುಷಿತಗೊಳಿಸಿತ್ತು. ಕಾಡುಹಂದಿ ಬೇಟೆಗಾಗಿ ಇಟ್ಟಿದ್ದ ನಾಡಬಾಂಬ್‌ಗೆ ಬಲಿ ಆದ ಹಸುವಿನ ನೋವಿನ ಕಥೆಗೆ ಇದೀಗ ನ್ಯಾಯ ದೊರಕತೊಡಗಿದೆ.

ಜನವರಿ 3ರಂದು ರೈತ ಶಿವನೇಗೌಡ ತಮ್ಮ ಹಸುವನ್ನು ಮೇಯಲು ಬಿಟ್ಟಾಗ, ಹಸುವಿನ ಬಾಯಿಗೆ ನಾಡಬಾಂಬ್ ಸಿಲುಕಿ ಭೀಕರ ಸ್ಫೋಟ ಸಂಭವಿಸಿತ್ತು. ಬಾಯಿ ಛಿದ್ರಗೊಂಡ ಹಸು ತೀವ್ರ ನೋವಿನಲ್ಲಿ ನರಳಾಡುತ್ತಾ ಎರಡು ದಿನಗಳ ಬಳಿಕ ಸಾವನ್ನಪ್ಪಿತ್ತು. ಈ ಘಟನೆ ಗ್ರಾಮದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

ಘಟನೆಗೆ ಸಂಬಂಧಿಸಿ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ, ಕಾಡು ಪ್ರಾಣಿಗಳ ಬೇಟೆಗೆ ನಾಡಬಾಂಬ್ ಇಟ್ಟಿದ್ದ ಮೂವರು ಆರೋಪಿಗಳಾದ ಕೃಷ್ಣಮೂರ್ತಿ (45), ಶಿವಕುಮಾರ್ (23) ಮತ್ತು ಶಿವನಪ್ಪ (46) ಅವರನ್ನು ಬಂಧಿಸಿದ್ದಾರೆ. ಜೊತೆಗೆ, ಇನ್ನೆರಡು ಜೀವಂತ ನಾಡಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆ ಮೂಲಕ ಅಕ್ರಮ ಬೇಟೆ ಮತ್ತು ಸ್ಫೋಟಕ ಬಳಕೆಗೆ ಪೊಲೀಸರ ಕಠಿಣ ಸಂದೇಶ ನೀಡಿದಂತಾಗಿದೆ.

ಅಡುಗೆ ಅನಿಲ ಸೋರಿಕೆಯಿಂದ ಅಗ್ನಿ ಅವಘಡ: ಬಿಹಾರ ಮೂಲದ ಐವರಿಗೆ ಗಂಭೀರ ಗಾಯ

0

ಬೆಂಗಳೂರು: ಅಡುಗೆ ಅನಿಲ ಸೋರಿಕೆಯಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಚೊಕ್ಕಸಂದ್ರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಗಾಯಗೊಂಡವರನ್ನು ಬಿಹಾರ ಮೂಲದ ಅಂಶುರಾಜ್ ಕುಮಾರ್ (18), ಹುಸೇನ್ ಖಾನ್ (21), ರೋಹಿತ್ ಚೌದರಿ (20), ಆರಬೇಗ್ ಆಲಂ (26) ಹಾಗೂ ಮುಜಾಫರ್ ಹುಸೇನ್ (19) ಎಂದು ಗುರುತಿಸಲಾಗಿದೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಈ ಐವರೂ ಚೊಕ್ಕಸಂದ್ರದಲ್ಲಿರುವ ಒಂದೇ ಕೋಣೆಯಲ್ಲಿ ವಾಸವಾಗಿದ್ದರು. ಕೋಣೆಯಲ್ಲಿ ಇರಿಸಿದ್ದ ಅಡುಗೆ ಅನಿಲ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿರುವುದನ್ನು ಗಮನಿಸದೇ, ಶುಕ್ರವಾರ ಬೆಳಿಗ್ಗೆ ಟೀ ತಯಾರಿಸಲು ಲೈಟರ್ ಹಚ್ಚಿದ ವೇಳೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮವಾಗಿ ಐವರೂ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪತ್ನಿ ಕೊಂದು ಪತಿ ಆತ್ಮಹತ್ಯೆಗೆ ಶರಣು: ಗಂಡ ಹೆಂಡ್ತಿ ಜಗಳದಲ್ಲಿ ಮಕ್ಕಳು ಅನಾಥ!

0

ಬೆಳಗಾವಿ: ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದು, ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಲಹೊಂಗಲ ತಾಲೂಕಿನ ತುರಕರಶೀಗಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಯಲ್ಲವ್ವ ಕಂಬಳಿ (46) ಕೊಲೆಯಾದ ಪತ್ನಿಯಾಗಿದ್ದು, ಶಿವಪ್ಪ ಸಣ್ಣಬಸಪ್ಪ ಕಂಬಳಿ (50) ಆತ್ಮಹತ್ಯೆ ಮಾಡಿಕೊಂಡ ಪತಿಯಾಗಿದ್ದಾರೆ.

ಯಲ್ಲವ್ವ ತವರು ಮನೆಗೆ ಹೋಗುವ ವಿಚಾರಕ್ಕೆ ಸಂಬಂಧಿಸಿ ಪತಿ ಶಿವಪ್ಪರೊಂದಿಗೆ ಪದೇಪದೇ ಜಗಳವಾಗುತ್ತಿತ್ತು ಎನ್ನಲಾಗಿದೆ. ಕಳೆದ ವಾರ ಯಲ್ಲವ್ವ ತಾಯಿ ನಿಧನರಾಗಿದ್ದರಿಂದ, ತವರು ಊರಾದ ಮೇಕಲಮರಡಿ ಗ್ರಾಮಕ್ಕೆ ಹೋಗಿದ್ದರು. ಮಂಗಳವಾರ ಮಾತ್ರವೇ ಅವರು ಗಂಡನ ಮನೆಗೆ ಮರಳಿದ್ದರು.

ತಾಯಿಯ ಸಾವಿನ ನಂತರದ ವಿಧಿವಿಧಾನಗಳನ್ನು ನೆರವೇರಿಸಲು ಶುಕ್ರವಾರ ಬೆಳಿಗ್ಗೆ ಸಿಹಿ ಅಡುಗೆ ಮಾಡಿಕೊಂಡು ಮೇಕಲಮರಡಿಗೆ ತೆರಳಲು ಯಲ್ಲವ್ವ ಸಿದ್ಧತೆ ನಡೆಸುತ್ತಿದ್ದ ವೇಳೆ, ಪತಿ ಶಿವಪ್ಪ ಮತ್ತೆ ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದ ನಂತರ ಕೋಪೋದ್ರಿಕ್ತನಾದ ಶಿವಪ್ಪ ಕೊಡಲಿಯಿಂದ ಯಲ್ಲವ್ವ ಅವರ ಕುತ್ತಿಗೆಗೆ ಬಲವಾಗಿ ಹೊಡೆದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಯಲ್ಲವ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪತ್ನಿಯನ್ನು ಕೊಲೆಗೈದ ಬಳಿಕ ಶಿವಪ್ಪ ಕೂಡ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದು, ಒಬ್ಬ ಮಗ ನಿನ್ನೆ ಸಂಬಂಧಿಕರ ಊರಿಗೆ ತೆರಳಿದ್ದರೆ, ಮತ್ತೊಬ್ಬ ಮಗ ಬೆಳಿಗ್ಗೆ ಎಂದಿನಂತೆ ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ಕಂಪನಿಗೆ ಕೆಲಸಕ್ಕೆ ಹೋಗಿದ್ದ. ಬೆಳಿಗ್ಗೆ ಸುಮಾರು 8.45ರಿಂದ 9 ಗಂಟೆ ನಡುವೆ ಮನೆಗೆ ತಂದೆತಾಯಿ ಇಬ್ಬರೇ ಇದ್ದ ಸಮಯದಲ್ಲಿ ದುರ್ಘಟನೆ ನಡೆದಿದೆ.

ಅಪ್ಪಅಮ್ಮ ಇಬ್ಬರೂ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಮಕ್ಕಳ ಆಕ್ರಂದನ ಹೃದಯ ವಿದ್ರಾವಕವಾಗಿತ್ತು. ಘಟನಾ ಸ್ಥಳಕ್ಕೆ ಕಿತ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

ವಿಚ್ಛೇದಿತ ಮಹಿಳೆಗೆ ಮದುವೆ ಭರವಸೆ ನೀಡಿ 36 ಲಕ್ಷ ರೂ. ವಂಚನೆ! ಆರೋಪಿ ವಿರುದ್ಧ FIR

0

ಬೆಂಗಳೂರು: ವಿಚ್ಛೇದಿತ ಮಹಿಳೆಯನ್ನು ಬಣ್ಣದ ಮಾತುಗಳಿಂದ ನಂಬಿಸಿ ಬಾಳು ಕೊಡೋದಾಗಿ ಮದುವೆಯಾಗಿದ್ದ ಮೋಹನ್ ರಾಜ್ ಎಂಬಾತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಚಿನ್ನಾಭರಣ ಸೇರಿ ಒಟ್ಟು 36 ಲಕ್ಷ ರೂ. ವಂಚನೆ ಮಾಡಿರುವ ಆರೋಪದ ಮೇಲೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಂತ್ರಸ್ತೆಯ ದೂರಿನ ಪ್ರಕಾರ, ಮೋಹನ್ ರಾಜ್ ಮಹಿಳೆಗೆ ಮದುವೆ ಭರವಸೆ ನೀಡಿ ಸಂಸಾರ ನಡೆಸಿದ್ದ. ದಂಪತಿಗೆ ಒಂದು ಹೆಣ್ಣು ಮಗು ಕೂಡ ಜನಿಸಿತ್ತು. ಬಳಿಕ “ಹೊಸ ಮನೆ ಕಟ್ಟಿ ಹೊಸ ಜೀವನ ಶುರು ಮಾಡೋಣ” ಎಂದು ನಂಬಿಸಿ ಮಹಿಳೆಯಿಂದ ಹಣ ಪಡೆದು, ಚಿನ್ನಾಭರಣ ಸೇರಿ ಸುಮಾರು 36 ಲಕ್ಷ ರೂ. ವಂಚನೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇದೀಗ ನ್ಯಾಯಕ್ಕಾಗಿ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮೋಹನ್ ರಾಜ್ ಹಾಗೂ ಮಹಿಳೆ ಬನಶಂಕರಿಯ ಒಂದೇ ಪ್ರದೇಶದವರು. ಮಹಿಳೆಯ ವಿಚ್ಛೇದನ ವಿಚಾರ ಸಂಪೂರ್ಣವಾಗಿ ತಿಳಿದಿದ್ದರೂ, ಹಲವು ವರ್ಷಗಳ ಪರಿಚಯದ ಬಳಿಕ ಮದುವೆಯಾಗುವುದಾಗಿ ಭರವಸೆ ನೀಡಿ 2022ರಲ್ಲಿ ವಿವಾಹವಾಗಿದ್ದಾನೆ. ಆದರೆ ಬಳಿಕ ವರ್ತನೆ ಬದಲಿಸಿಕೊಂಡು ಮಹಿಳೆಯನ್ನು ಸಂಕಷ್ಟಕ್ಕೆ ದೂಡಿದ್ದಾನೆ ಎಂದು ಆರೋಪಿಸಲಾಗಿದೆ.

ಮೋಹನ್ ರಾಜ್ ಮತ್ತು ಮಹಿಳೆ ಕಳೆದ 10 ವರ್ಷಗಳಿಂದ ಪರಿಚಿತರಾಗಿದ್ದು, 2023ರಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು. 2025ರಲ್ಲಿ ಏಕಾಏಕಿ ಮನೆ ಬಿಟ್ಟು ಹೋದ ಮೋಹನ್ ರಾಜ್ ಬಳಿಕ ನಾಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಇದೀಗ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಹನ್ ರಾಜ್ ಬೇರೆ ಬೇರೆ ಯುವತಿಯರೊಂದಿಗೆ ಸಂಬಂಧ ಹೊಂದಿದ್ದ ಹಾಗೂ ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದಾನೆ ಎಂಬ ಆರೋಪವನ್ನೂ ಮಹಿಳೆ ಮಾಡಿದ್ದಾರೆ. ಈ ಕುರಿತು ನಾಲ್ಕು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ನ್ಯಾಯ ಸಿಕ್ಕಿಲ್ಲ. ದೂರು ನೀಡಲು ಒತ್ತಾಯಿಸಿದರೆ “ನಿನ್ನನ್ನೇ ಒಳಗೆ ಹಾಕ್ತೀವಿ” ಎಂದು ಪೊಲೀಸರು ಹೆದರಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 200 ರೂ. ಹಣದ ವಿಚಾರವಾಗಿ ಗಲಾಟೆ:  ಜೀವ ಕಳೆದುಕೊಂಡ ಇಬ್ಬರು ಮಕ್ಕಳ ತಾಯಿ

0

ನೆಲಮಂಗಲ: ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಮನಕಲಕುವ ಘಟನೆ ಸಂಭವಿಸಿದೆ. ಕೇವಲ 200 ರೂ. ವಿಚಾರಕ್ಕೆ ನಡೆದ ಗಂಡ-ಹೆಂಡತಿ ಗಲಾಟೆ ಕೊನೆಗೆ ಒಂದು ಕುಟುಂಬವನ್ನೇ ದುಃಖದೊಳಗೆ ತಳ್ಳಿದೆ.

ಎರಡು ಮಕ್ಕಳ ತಾಯಿ ಸುಮಾ (30) ಆತ್ಮಹತ್ಯೆಗೆ ಶರಣಾಗಿದ್ದಾರೆ. 8 ವರ್ಷಗಳ ಹಿಂದೆ ಚಂದ್ರಶೇಖರ್ ಜೊತೆ ಸುಮಾ ವಿವಾಹವಾಗಿದ್ದರು. ಕುಟುಂಬ ನಿರ್ವಹಣೆ ಮತ್ತು ಹೊಣೆಗಾರಿಕೆಯ ಭಾಗವಾಗಿ, ಧರ್ಮಸ್ಥಳ ಸ್ವಸಹಾಯ ಸಂಘದ ಕಂತು ಪಾವತಿಸಲು ಸುಮಾ ಮನೆಯಲ್ಲೇ 1,300 ರೂ. ಉಳಿಸಿಕೊಂಡಿದ್ದರು. ಆದರೆ ಗಂಡ ಚಂದ್ರಶೇಖರ್ ಆ ಹಣದಲ್ಲಿ 200 ರೂ. ಅನ್ನು ಸ್ವಂತ ಖರ್ಚಿಗೆ ಬಳಸಿದ್ದರಿಂದ ದಂಪತಿ ನಡುವೆ ವಾಗ್ವಾದ ನಡೆದಿದೆ.

ಶುಕ್ರವಾರ ಬೆಳಗ್ಗೆ ನಡೆದ ಗಲಾಟೆಯ ನಂತರ ಪತಿ ಮತ್ತು ಅತ್ತೆ ಕೆಲಸಕ್ಕೆ ಹೊರಟಿದ್ದರು. ಆ ವೇಳೆ ಮನೆಯಲ್ಲಿ ಒಂಟಿಯಾಗಿದ್ದ ಸುಮಾ ತೀವ್ರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಊಟಕ್ಕೆಂದು ಮನೆಗೆ ಬಂದಾಗ ಘಟನೆ ತಿಳಿದುಬಂದಿದೆ.

ಈ ಪ್ರಕರಣ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ದುರ್ಘಟನೆ ಮತ್ತೆ ಒಮ್ಮೆ ಕುಟುಂಬಗಳಲ್ಲಿ ಸಂವಾದ ಮತ್ತು ಮನೋಸಹಾಯದ ಅಗತ್ಯವನ್ನೇ ನೆನಪಿಸುತ್ತದೆ.

ದರ್ಶನ್‌ ಪತ್ನಿ ವಿಜಯಲಕ್ಷ್ಮೀಗೆ ಅಶ್ಲೀಲ ಕಾಮೆಂಟ್‌ ಪ್ರಕರಣ: 6 ಮಂದಿ ಅರೆಸ್ಟ್

ದರ್ಶನ್‌ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದವರ ವಿರುದ್ಧದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡಿದೆ. ಸೈಬರ್ ಕ್ರೈಂ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ತನಿಖೆ ಇದೀಗ ಅಂತಿಮ ಹಂತ ತಲುಪಿದೆ.

ವಿಜಯಲಕ್ಷ್ಮಿಗೆ ಕೆಟ್ಟ ಕಾಮೆಂಟ್ ಮಾಡಿ ಪರಾರಿಯಾಗಿದ್ದವರ ಪೈಕಿ 6 ಮಂದಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಬಂಧಿತರಲ್ಲಿ ನಟ ಸುದೀಪ್ ಅಭಿಮಾನಿಗಳು ಕೂಡ ಸೇರಿರುವುದು ಚರ್ಚೆಗೆ ಕಾರಣವಾಗಿದೆ. ಆಶ್ಚರ್ಯಕರ ಸಂಗತಿ ಎಂದರೆ, ಬಂಧಿತರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ಪೆಟ್ರೋಲ್ ಬಂಕ್ ಮ್ಯಾನೇಜರ್ ಕೂಡ ಸೇರಿದ್ದಾರೆ.

60 ದಿನಗಳ ಒಳಗೆ ಚಾರ್ಜ್‌ಶೀಟ್ ಸಲ್ಲಿಸಬೇಕಿರುವ ಕಾನೂನು ಬದ್ಧತೆಯ ಹಿನ್ನೆಲೆಯಲ್ಲಿ, ಪೊಲೀಸರು ಬಂಧಿತರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿರುವುದನ್ನೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣ ಇದೀಗ ಸೋಷಿಯಲ್ ಮೀಡಿಯಾದ ದುರುಪಯೋಗಕ್ಕೆ ಎಚ್ಚರಿಕೆಯ ಸಂದೇಶವಾಗುತ್ತಿದೆ.

ಸ್ಫೋಟದ ನೋವಲ್ಲಿ ಗ್ರಾಮಗಳು: ಅಕ್ರಮ ಗಣಿಗಾರಿಕೆಯಿಂದ ಗರ್ಭಿಣಿಯರಿಗೂ ಅಪಾಯ, ಜನರ ಕಣ್ಣೀರು

0

ಶಿವಮೊಗ್ಗ: ಜಿಲ್ಲೆಯ ಆನವಟ್ಟಿ ತಾಲೂಕಿನ ಎಣ್ಣೆಕೊಪ್ಪ, ಬೆಲವಂತನಕೊಪ್ಪ ಹಾಗೂ ತೆವರತೆಪ್ಪ ಗ್ರಾಮಗಳು ಇಂದು ಅಕ್ರಮ ಕಲ್ಲು ಗಣಿಗಾರಿಕೆಯ ಭಾರೀ ಸಂಕಷ್ಟವನ್ನು ಎದುರಿಸುತ್ತಿವೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸ್ಫೋಟಗಳ ತೀವ್ರತೆ ಗರ್ಭಿಣಿಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಕೆಲವರು ರಕ್ತಸ್ರಾವದಿಂದ ಬಳಲುತ್ತಿದ್ದಾರೆ ಎಂಬುದು ಗ್ರಾಮಸ್ಥರ ನೋವಿನ ಮಾತಾಗಿದೆ. ಗರ್ಭಪಾತವಾಗುವ ಭೀತಿ ಜನರ ಮನದಲ್ಲಿ ಆಳವಾಗಿ ಮೂಡಿದೆ.

ಈ ಗಂಭೀರ ಪರಿಸ್ಥಿತಿಯ ನಡುವೆಯೂ ಅಕ್ರಮ ಗಣಿಗಾರಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಸಚಿವ ಮಧು ಬಂಗಾರಪ್ಪ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗಲಿಲ್ಲ ಎಂಬುದು ಅವರ ಅಳಲು.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಿಠಲ ದೇವಾಲಯದಿಂದ ನಾಡ ಕಚೇರಿವರೆಗೆ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಧ್ವನಿ ಎತ್ತಿದರು. ಸ್ಫೋಟಗಳಿಂದ ಉಂಟಾಗುವ ಧೂಳು ಕುಡಿಯುವ ನೀರನ್ನು ಕಲುಷಿತಗೊಳಿಸುತ್ತಿದ್ದು, ಜನರಲ್ಲಿ ಅಲರ್ಜಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಸೊರಬ ತಹಶೀಲ್ದಾರ್ ಬಳಿ ದೂರು ಸಲ್ಲಿಸಿದ್ದಾರೆ.

ಗದಗ: ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ!

ಗದಗ: ಕಡಲೆ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ರೈತರು ರೆಡ್ ಹ್ಯಾಂಡ್ ಆಗಿ ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಗದಗನ ಹೊಂಬಳ ರಸ್ತೆಯ ಸರ್ವಜ್ಞ ಸರ್ಕಲ್ ಬಳಿ ನಡೆದಿದೆ.

ಬೆಳಗಿನ ಜಾವ ವಾಯು ವಿಹಾರಕ್ಕೆ ತೆರಳಿದ್ದ ನಾಗರಿಕರ ಕಣ್ಣಿಗೆ ಕಳ್ಳನ ಚಲನವಲನ ಬಿದ್ದಿದ್ದು, ತಕ್ಷಣವೇ ಈ ಬಗ್ಗೆ ರೈತರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ರೈತರು ಸ್ಥಳಕ್ಕೆ ಧಾವಿಸಿ, ಜಮೀನಿನಲ್ಲಿ ಕಡಲೆ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ.

ಕಳೆದ ಹಲವು ದಿನಗಳಿಂದ ರೈತರ ಜಮೀನುಗಳಲ್ಲಿ ಕಡಲೆ ಕಳ್ಳತನ ನಡೆಯುತ್ತಿದ್ದು, ಕಡಲೆ ಕಳ್ಳರ ಹಾವಳಿಯಿಂದ ರೈತರು ಕಂಗಾಲಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕಡಲೆ ಕಳ್ಳತನ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ರೈತರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಕಳ್ಳನನ್ನು ಕಂಬಕ್ಕೆ ಕಟ್ಟಿ, ತಲೆ ಹಾಗೂ ಕೊರಳಿಗೆ ಕಡಲೆ ಗಿಡಗಳ ಮಾಲೆ ಹಾಕಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಘಟನೆಯ ಮಾಹಿತಿ ಪಡೆದ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದರು. ಘಟನೆಯ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಾಜ್ಯದಲ್ಲಿ ಚಳಿ ಹೆಚ್ಚಳ: 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಹಲವೆಡೆ ಮಂಜು–ಒಣಹವೆ

0

ಬೆಂಗಳೂರು: ರಾಜ್ಯದಲ್ಲಿ ನಿನ್ನೆಯಿಂದ ಚಳಿಯ ಪ್ರಮಾಣ ಹೆಚ್ಚಾಗಿದ್ದು, ತಾಪಮಾನದಲ್ಲಿ ಯಾವುದೇ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಹಲವೆಡೆ ಮಂಜು ಮತ್ತು ಒಣ ಹವೆಯ ವಾತಾವರಣ ಮುಂದುವರಿದಿದೆ. ಈ ಹಿನ್ನೆಲೆ ಹವಾಮಾನ ಇಲಾಖೆ ರಾಜ್ಯದ ಬೀದರ್, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ–ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣ ಇರಲಿದೆ ಎಂದು ಇಲಾಖೆ ತಿಳಿಸಿದೆ.

ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಒಣ ಹವೆಯ ಸ್ಥಿತಿ ಮುಂದುವರಿಯಲಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದಲೂ ಒಣ ಹವೆಯ ವಾತಾವರಣ ಇದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜಧಾನಿ ಬೆಂಗಳೂರು ನಗರದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದೆ. ಇಂದು ನಗರದ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ತಿಳಿಸಲಾಗಿದೆ.

ಚಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಬೆಚ್ಚಗಿನ ಉಡುಪು ಧರಿಸುವುದು ಹಾಗೂ ಬಿಸಿ ಆಹಾರ ಸೇವಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

error: Content is protected !!