Home Blog Page 202

ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರೈತ ಸಂಘದಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ

0

ವಿಜಯಸಾಕ್ಷಿ ಸುದ್ದಿ, ರೋಣ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕಾ ಘಟಕದ ವತಿಯಿಂದ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಿದರು.

ಪಟ್ಟಣದ ಎಪಿಎಂಸಿ ಆವರಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಟ್ಟಣದ ಜಕ್ಕಲಿ ರಸ್ತೆ, ಮುಲ್ಲಾನ ಭಾವಿ ವೃತ್ತ ಹಾಗೂ ಪೋತರಾಜನ ಕಟ್ಟೆಯ ಬಳಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿರುದ್ಧ ಧಿಕ್ಕಾರ ಕೂಗುತ್ತಾ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಸಂಗಪ್ಪ ಪವಾಡಶೆಟ್ಟರ ಮಾತನಾಡಿ, ಅತಿಯಾದ ಮಳೆಯಿಂದ ಮುಂಗಾರು ಬೆಳೆಗಳನ್ನು ಕಳೆದುಕೊಂಡಿರುವುದು ನಾಡಿಗೆ ತಿಳಿದಿರುವ ಸಂಗತಿ. ಮುಂಗಾರು ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಇದರಿಂದ ರೈತರ ಸಂಕಷ್ಟ ಹೆಚ್ಚಾಗಿದೆ. ಸರಕಾರ ಪರಿಹಾರ ವಿತರಣೆಯಲ್ಲಿಯೂ ಸಹ ಲೋಪದೋಷಗಳನ್ನು ಮಾಡಿದೆ. ಎಲ್ಲ ರೈತರಿಗೂ ಸಮರ್ಪಕವಾಗಿ ಪರಿಹಾರ ಸಿಕ್ಕಿಲ್ಲ. ಕೂಡಲೇ ಸರಕಾರ ಲೋಪವನ್ನು ಸರಿಪಡಿಸಿ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.

ಮೇಘರಾಜ ಭಾವಿ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಬೆಳೆದ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗದಿದ್ದರೆ ರೈತರು ಮಾಡಿದ ಸಾಲವನ್ನು ತೀರಿಸುವುದು ಕಷ್ಟವಾಗಲಿದೆ. ಇದನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಅರಿಯಬೇಕು. ಜೊತೆಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. ಅಂದಾಗ ಮಾತ್ರ ರೈತರು ಕೃಷಿ ಮಾಡಲು ಸಾಧ್ಯ ಎಂದರು.

ಪ್ರತಿಭಟನೆಯಲ್ಲಿ ಮುತ್ತಣ್ಣ ಚೌಡರೆಡ್ಡಿ, ಸಂಗಪ್ಪ ದಂಡಿನ, ಧರ್ಮಣ್ಣ ಭೂಸಗೌಡ್ರ, ಅಶೋಕ ಹಿರೇಮಠ, ರುದ್ರಯ್ಯ ಸಾಲಿಮಠ, ಗಂಗಣ್ಣ ಕೊಟಗಿ, ರಾಮಣ್ಣ ಸೂಡಿ, ಬೂದಪ್ಪ ಕಂಬಳಿ, ಹನಮಂತ ಅಬ್ಬಿಗೇರಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ಮಾಡಲಗೇರಿ ಗ್ರಾಮಸ್ಥರಿಂದ ಅಬಕಾರಿ ಕಚೇರಿಗೆ ಮುತ್ತಿಗೆ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮಹಿಳೆಯರು

0

ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ಎಗ್ಗಿಲ್ಲದೆ ಸಾಗಿದ್ದು, ಅಕ್ರಮ ಸಾರಾಯಿ ಸೇವನೆಯಿಂದ ಗ್ರಾಮದ 7ರಿಂದ 9 ವ್ಯಸನಿಗಳು ಸಾವನ್ನಪ್ಪಿದ್ದಾರೆ. ಈ ಕುರಿತು ಹಲವಾರು ಬಾರಿ ಇಲಾಖೆಗೆ ಮನವಿ ಸಲ್ಲಿಸಿದರೂ ಸಹ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಮಾಡಲಗೇರಿ ಗ್ರಾಮಸ್ಥರು ಗುರುವಾರ ಅಬಕಾರಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಸುಮಾರು 9 ಜನ ಅಕ್ರಮ ಸಾರಾಯಿ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ಗ್ರಾಮದ ಯುವಕರು ದುಡಿದು ಬಂದ ಹಣವನ್ನು ಸಾರಾಯಿ ಕುಡಿತಕ್ಕೆ ಸುರಿಯುತ್ತಿದ್ದಾರೆ. ಇದರಿಂದ ಅನೇಕ ಸಂಸಾರಗಳು ಬೀದಿಗೆ ಬಂದಿದ್ದು, ಗ್ರಾಮದಲ್ಲಿಯೇ ಸಿಗುತ್ತಿರುವ ಮದ್ಯವನ್ನು ಸೇವಿಸಿ ಇಲ್ಲಿಯವರೆಗೆ 7ರಿಂದ 9 ಜನರು ಮೃತಪಟ್ಟಿದ್ದಾರೆ. ಇದಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳೇ ಹೊಣೆ ಎಂದು ಆರೋಪಿಸಿದರು.

ಸಾರಾಯಿ ಸೇವನೆಯಿಂದ ಮಕ್ಕಳನ್ನು ಕಳೆದುಕೊಂಡಿರುವ ತಾಯಂದಿರು ಅಬಕಾರಿ ನಿರೀಕ್ಷಕರಾದ ಶ್ರೀದೇವಿ ಕೊಳ್ಳಿಯವರನ್ನು ತರಾಟೆಗೆ ತೆಗೆದುಕೊಂಡು ಕಣ್ಣೀರು ಹಾಕಿದರು. ಇಲಾಖೆಯ ಸಿಬ್ಬಂದಿಗಳೇ ಅಕ್ರಮ ಸಾರಾಯಿ ಮಾರಾಟದಲ್ಲಿ ನೇರವಾಗಿ ತೊಡಗಿಕೊಂಡಿದ್ದಾರೆ. ಅಲ್ಲದೆ ಮಾರಾಟಗಾರರಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಸಾರಾಯಿ ಮಾರಾಟ ಅಧಿಕವಾಗುತ್ತಿದ್ದು, ಇದಕ್ಕೆಲ್ಲ ನೀವೇ ಕಾರಣ ಎಂದು ಹರಿಹಾಯ್ದರು. ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ನಿಲ್ಲದಿದ್ದರೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಗ್ರಾಮಸ್ಥರ ಸಿಟ್ಟು ಅರಿತ ಪಿಎಸ್‌ಐ ಪ್ರಕಾಶ ಬಣಕಾರ ಮಧ್ಯ ಪ್ರವೇಶಿಸಿ, ಗ್ರಾಮದಲ್ಲಿ ಈ ರೀತಿ ನಡೆಯುತ್ತಿದೆ ಎಂದು ನಮ್ಮ ಗಮನಕ್ಕೆ ತಂದಿದೀರಿ, ಇನ್ನು ನಿಮಗೆ ಚಿಂತೆ ಬೇಡ. ಗ್ರಾಮದಲ್ಲಿ ನಡೆಯುವ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲಾಗುವುದು ಎನ್ನುತ್ತಿದ್ದಂತೆ ಪುನಃ ಆಕ್ರೋಶಗೊಂಡ ಮಹಿಳೆಯರು, ಈಗಾಗಲೇ ಹತ್ತಾರು ಬಾರಿ ಅಬಕಾರಿ ಇಲಾಖೆಯ ಗಮನಕ್ಕೆ ತರಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು. ಗ್ರಾಮಸ್ಥರನ್ನು ಕುರಿತು ಪಿಎಸ್‌ಐ ಪ್ರಕಾಶ ಬಣಕಾರ, ನಿಮ್ಮ ಆಕ್ರೋಶ ನಮಗೆ ಅರ್ಥವಾಗುತ್ತದೆ. ಅಕ್ರಮ ಸಾರಾಯಿ ಮಾರಾಟವಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಮಾಧಾನಪಡಿಸಿದಾಗ, ಇದಕ್ಕೆ ಒಪ್ಪಿದ ಗ್ರಾಮಸ್ಥರು ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆಯಲ್ಲಿ ರತ್ವವ್ವ ಮಂಡಸೊಪ್ಪಿ, ಯಲ್ಲಮ್ಮ ರಾಯನಗೌಡ್ರ, ಭೀಮವ್ವ ಭಾವಿ, ಶೇಖವ್ವ ಪಾಟೀಲ, ಶಿವಗಂಗವ್ವ ಭೀಮನಗೌಡ್ರ ಮುಂತಾದವರಿದ್ದರು.

“ಅಕ್ರಮ ಸಾರಾಯಿ ಮಾರಾಟದಿಂದ ಗ್ರಾಮದಲ್ಲಿ ನೆಮ್ಮದಿಯಿಲ್ಲ. ಸಂಜೆಯಾದರೆ ಮಹಿಳೆಯರು ಹೊರಗಡೆ ಬರುವಂತಿಲ್ಲ, ಮನೆಯ ಜವಾಬ್ದಾರಿಗಳನ್ನು ಹೊರಬೇಕಾದ ಮಕ್ಕಳು ಸಾರಾಯಿ ಚಟಕ್ಕೆ ಬಲಿಯಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಸ್ವತಃ ನಾನೇ ಮಗನನ್ನು ಕಳೆದುಕೊಂಡಿದ್ದೇನೆ. ಬೇರೆಯವರ ಮಕ್ಕಳೂ ಬಲಿಯಾಗಬಾರದೆಂದು ನನ್ನ ಹೋರಾಟ ಸಾಗಿದೆ. ಇನ್ನಾದರೂ ಅಧಿಕಾರಿಗಳು ಅಕ್ರಮ ಸಾರಾಯಿ ಮಾರಾಟವನ್ನು ನಿಲ್ಲಿಸಲಿ”

  • ಹನಮವ್ವ ಭೀಮನಗೌಡ್ರ.
    ಮಾಡಲಗೇರಿ.

“ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟದಿಂದ ಈಗಾಗಲೇ 7ರಿಂದ 9 ಜನ ಸಾವನ್ನಪ್ಪಿದ್ದಾರೆ. ಈ ಕುರಿತು ಹಲವಾರು ಬಾರಿ ಇಲಾಖೆಯವರಿಗೆ ತಿಳಿಸಿದರು ಸಹ ಪ್ರಯೋಜನವಾಗುತ್ತಿಲ್ಲ. ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ”

  • ಶಂಕರಗೌಡ ಭೀಮನಗೌಡ್ರ.
    ಮಾಡಲಗೇರಿ.

ಮಂಡ್ಯ| ಮೈ- ಬೆಂ ದಶಪಥ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು.!

0

ಮಂಡ್ಯ:- ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟ ಸಮೀಪದ ಮೈ–ಬೆಂ ದಶಪಥ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರು ಏಕಾಏಕಿ ಹೊತ್ತಿ ಉರಿದ ಘಟನೆ ನಡೆದಿದೆ.

ಬೆಂಗಳೂರಿಗೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಕಾರಿನಲ್ಲಿ ಹೊಗೆ ಕಾಣಿಸಿಕೊಂಡ ಕೂಡಲೇ ಕಾರಿನಲ್ಲಿದ್ದ ದಂಪತಿ ತಕ್ಷಣ ಇಳಿದು ಸುರಕ್ಷಿತವಾಗಿ ಪಾರಾಗಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಪಿ. ಹೊಸಹಳ್ಳಿ ಗ್ರಾಮದ ಕಿರಣ್ ಮತ್ತು ರಂಜಿತ ಎಂಬುವವರೇ ಅಪಾಯದಿಂದ ಪಾರಾದವರು.

ಮಾಹಿತಿ ಪಡೆದ ಮದ್ದೂರು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಟಿ.ಎಲ್. ರಾಜಕುಮಾರರಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: 2025-26ನೇ ಸಾಲಿನಲ್ಲಿ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗೃಹರಕ್ಷಕ ದಳ ಗದಗ ಜಿಲ್ಲಾ ಕಚೇರಿಯ ಸಿಬ್ಬಂದಿ ಟಿ.ಎಲ್. ರಾಜಕುಮಾರ ಅವರು ಶಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಪ್ರಥಮ ಸ್ಥಾನ (45 ವರ್ಷ ಮೇಲ್ಪಟ್ಟು ವಿಭಾಗದಲ್ಲಿ) ಹಾಗೂ ಶಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ದ್ವಿತೀಯ ಸ್ಥಾನ (45 ವರ್ಷ ಒಳಪಟ್ಟು ವಿಭಾಗದಲ್ಲಿ) ಪಡೆದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗದಗ ಜಿಲ್ಲೆಯ ಗೃಹರಕ್ಷಕ ದಳ ಇಲಾಖೆಯ ಜಿಲ್ಲಾ ಸಮಾದೇಶ್ಠ ಚನ್ನಾರಡ್ಡಿ ಬಸವರಾಜ ಗೊಳರಡ್ಡಿರವರು, ಅಡ್ಜುಟೆಂಟ್ ಕೆ.ಸಿ. ವಕ್ಕಳದ, ಜಿಲ್ಲಾ ಬೋಧಕ ಕಿರಣಕುಮಾರ ಕಟಗಿ, ಘಟಕಾಧಿಕಾರಿಗಳಾದ ಎಸ್.ಎಫ್. ದೊಡ್ಡಮನಿ, ಸಿ.ಜಿ. ಮುದಿಯಪ್ಪನವರ, ಆರ್.ಎಂ. ಹುಡೇದ, ಸಿಬ್ಬಂದಿಗಳಾದ ಬಿ.ಡಿ. ನಾಯಕ, ಬಿ.ಎಸ್. ಬಸವರಡ್ಡಿ ಮುಂತಾದವರಿದ್ದರು.

ಸಾಮೂಹಿಕ ಸತ್ಯನಾರಾಯಣ ಪೂಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗದಗ ತಾಲೂಕು, ಗದಗ ಸಿಟಿ ವಲಯದಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ಸಭಾ ಕಾರ್ಯಕ್ರಮವನ್ನು ನಗರದ ಸಂಸ್ಕೃತ ಪಾಠಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಓಂಕಾರೇಶ್ವರ ಹಿರೇಮಠದ ಪಟ್ಟಾಧ್ಯಕ್ಷರಾದ ಷ. ಬ್ರ. ಶ್ರೀ ಫಕೀರೇಶ್ವರ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಕೀರ್ತಿ ಜಕನೂರು ವಹಿಸಿದ್ದರು.

ಕ್ರಾಂತಿಸೇನಾ ಗದಗ ಜಿಲ್ಲಾಧ್ಯಕ್ಷ ಬಾಬು ಬಾಕಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರ್ಥಿಕವಾಗಿ ಮಹಿಳೆಯರು ಸಬಲರಾಗಲು ಧರ್ಮಸ್ಥಳ ಸಂಸ್ಥೆ ಸಹಾಯ ಮಾಡುತ್ತದೆ. ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಪಾಲ್ಗೊಂಡಿದ್ದರು. ಯೋಜನಾಧಿಕಾರಿ ಉಮಾ ಎನ್.ಜಿ ಸಂಸ್ಥೆಯ ಚಟುವಟಿಕೆಗಳನ್ನು ತಿಳಿಸಿದರು.

ಸುಧೀರ ಕಾಟಿಗಾರ, ಡಾ. ಗಣೇಶ ಸುಲ್ತಾನಪುರ ಮಾತನಾಡಿದರು. ಪದ್ಮಾವತಿ ಪರಶುರಾಮ ಕಟಿಗಿ, ನಾಗರೆಡ್ಡಿ ತಿಮ್ಮಣ್ಣ ನಿಡಗುಂದಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಿರಣ ಎಂ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಮಧ್ಯಾಹ್ನದ ಬಿಸಿಯೂಟದ ಜೊತೆ ಕೋಳಿಮೊಟ್ಟೆ ಯೋಜನೆ: ಶಾಲಾ ಮುಖ್ಯ ಶಿಕ್ಷಕರಿಗೆ ತಲೆನೋವು

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ತಾಲೂಕಿನ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಪೌಷ್ಟಿಕತೆ ಹೆಚ್ಚಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಮಧ್ಯಾಹ್ನದ ಬಿಸಿಯೂಟದ ಜೊತೆ ಕೋಳಿಮೊಟ್ಟೆ ಯೋಜನೆ ಇದೀಗ ಮುಖ್ಯ ಶಿಕ್ಷಕರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಮೊಟ್ಟೆಯ ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವ ಕಾರಣದಿಂದ ಸರಕಾರ ನೀಡುವ ಅನುದಾನ ಸಾಲದೆ, ಶಿಕ್ಷಕರು ತಮ್ಮ ಕೈಯಿಂದ ಹಣ ಹಾಕಿ ಮೊಟ್ಟೆ ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಅಪೌಷ್ಟಿಕತೆ ನಿವಾರಣೆ ಹಾಗೂ ಶಾಲಾ ಹಾಜರಾತಿ ಹೆಚ್ಚಿಸುವ ಉದ್ದೇಶದಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆ ಯಶಸ್ವಿಯಾಗಿ ಜಾರಿಯಲ್ಲಿದೆ. ಈ ಯೋಜನೆಯ ಮೂಲಕ ಸರಕಾರ ನೀಡುವ ಅನುದಾನದಡಿ ಈ ಹಿಂದೆ ವಾರಕ್ಕೆ ಎರಡು ದಿನಗಳ ಕಾಲ ಮೊಟ್ಟೆ ನೀಡಲಾಗುತ್ತಿತ್ತು. 2024ರ ಸೆಪ್ಟೆಂಬರ್ ತಿಂಗಳಿನಿಂದ ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಹೊಂದಬೇಕು ಎನ್ನುವ ದೃಷ್ಟಿಯಿಂದ ಅಜೀಂ ಪ್ರೇಮ್ ಫೌಂಡೇಷನ್ ಸಹಕಾರದೊಂದಿಗೆ ವಾರಕ್ಕೆ ಆರು ದಿನಗಳ ಕಾಲ ಮೊಟ್ಟೆ ವಿತರಣೆಗೆ ಸರಕಾರ ನಿರ್ಧಾರ ಕೈಗೊಂಡಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಸೇವಿಸುವ ಆಯ್ಕೆಯನ್ನೂ ನೀಡಲಾಗಿದೆ.

ಈ ಯೋಜನೆ ಬಹಳ ಪರಿಣಾಮಕಾರಿಯಾಗಿದ್ದು, ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಸರಕಾರದ ಉದ್ದೇಶ ಒಳ್ಳೆಯದೇ. ಆದರೆ ಅದನ್ನು ಜಾರಿ ಮಾಡಿರುವ ವಿಧಾನ ಶಿಕ್ಷಕರಲ್ಲಿ ಅಸಮಾಧಾನ ಉಂಟಾಗಲು ಕಾರಣವಾಗಿದೆ. ಸರಕಾರ ಬಾಳೆ ಹಣ್ಣು ಖರೀದಿಗೆ 6 ರೂ, ಮೊಟ್ಟೆಗೆ 6 ರೂನಂತೆ ನೀಡುತ್ತಿದ್ದು, ಅದರಲ್ಲಿ ಮೊಟ್ಟೆ ಖರೀದಿಯ ವೆಚ್ಚ 5 ರೂ, ಮೊಟ್ಟೆ ಬೇಯಿಸಲು ಗ್ಯಾಸ್ ವೆಚ್ಚ 50 ಪೈಸೆ, 20 ಪೈಸೆ ಅಂಗಡಿಯಿಂದ ಶಾಲೆಗೆ ಮೊಟ್ಟೆ ತರಲು ಸಾಗಾಣಿಕೆ ವೆಚ್ಚ ಹಾಗೂ ಮೊಟ್ಟೆ ಸುಲಿಯಲು 30 ಪೈಸೆ ಅಡಿಗೆಯವರಿಗೆ ನೀಡಲಾಗುತ್ತಿದೆ. ಒಟ್ಟು ಒಂದು ಮೊಟ್ಟೆಗೆ ಸರಕಾರ ನೀಡುವ ಮೊತ್ತ 6 ರೂ ಆಗಿದೆ.

ಆದರೆ, ಪ್ರಸ್ತುತ ಮೊಟ್ಟೆಯ ದರ ತೀವ್ರ ಏರಿಕೆಯಾಗಿದ್ದು, ಒಂದು ಮೊಟ್ಟೆಗೆ 8 ರೂ ಇದೆ. ಹೀಗಾಗಿ, ಸರಕಾರ ಕೊಡುವ ಅನುದಾನ ಸಾಕಾಗದೇ ಹೆಚ್ಚುವರಿಯಾಗಿ ಹಣವನ್ನು ಕೈಯಿಂದ ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಶಿಕ್ಷಕರು ಹೋಲ್‌ಸೇಲ್ ದರದಲ್ಲಿ ದೂರದ ಪಟ್ಟಣ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ತರುವಾಗ ಮಾರ್ಗ ಮಧ್ಯೆ ಒಡೆದು ಹೋದರೆ ಅದರ ವೆಚ್ಚವನ್ನು ಶಿಕ್ಷಕರೇ ಭರಿಸಬೇಕು.

ಮಕ್ಕಳಿಗೆ ಬೋಧನೆಯ ಜೊತೆಗೆ ಹೆಚ್ಚುವರಿಯಾಗಿ ಮೊಟ್ಟೆ ವಿತರಣೆಯ ಕಾಯಕವನ್ನೂ ಹೆಗಲ ಮೇಲೆ ಹಾಕಿಕೊಂಡಿರುವ ಶಿಕ್ಷಕರಿಗೆ ಬೆಲೆ ಏರಿಕೆಯಿಂದ ಶಾಲೆಗಳನ್ನು ನಿಭಾಯಿಸುವುದೇ ಸವಾಲಿನ ಕೆಲಸವಾಗಿದೆ. ಕೆಲವು ಶಿಕ್ಷಕರಂತೂ ಬಿಸಿಯೂಟದ ಜವಾಬ್ದಾರಿಯೇ ಬೇಡ ಎಂದು ಬೇರೆ ಶಿಕ್ಷಕರಿಗೆ ಹಸ್ತಾಂತರ ಮಾಡುತ್ತಿರುವ ಘಟನೆಗಳೂ ನಡೆಯುತ್ತಿವೆ. ಮೊಟ್ಟೆ ಬೆಲೆ ಏರಿಕೆ ಆಗಿರುವುದರಿಂದ ಕೆಲವು ಶಾಲೆಗಳಲ್ಲಿ ಮೊಟ್ಟೆ ಬದಲಿಗೆ ಬಾಳೆ ಹಣ್ಣು ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ಮುಂಡರಗಿ ತಾಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಸೇರಿ ಒಟ್ಟು 125 ಸರಕಾರಿ ಶಾಲೆಗಳಿದ್ದು, ಪ್ರತಿದಿನ ಸುಮಾರು 19178 ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಸಣ್ಣ-ಪುಟ ಶಾಲೆಗಳನ್ನು ನಿಭಾಯಿಸಬಹುದು. ಆದರೆ 100ರಿಂದ 150ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿರುವ ಶಾಲೆಗಳನ್ನು ನಿಭಾಯಿಸುವುದು ಸವಾಲಿನ ಕೆಲಸವಾಗಿದೆ. ಅಲ್ಲದೇ ಎಸ್‌ಡಿಎಮ್‌ಸಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಕಿರುಕುಳ ದಿನೆ ದಿನೇ ಹೆಚ್ಚಾಗುತ್ತಿದೆ. ಸರ್ಕಾರ ಇದರಲ್ಲಿ ಬದಲಾವಣೆ ಮಾಡಬೇಕು. ಮೊಟ್ಟೆಗಾಗಿಯೇ ನಿತ್ಯ 250 ರೂಗಿಂತ ಹೆಚ್ಚಿನ ಹಣವನ್ನು ಕೈಯಿಂದ ಭರಿಸಬೇಕಿದೆ. ಅಕಸ್ಮಾತ್ ಮೊಟ್ಟೆ ವಿತರಣೆಯಲ್ಲಿ ಲೋಪದೋಷ ಕಂಡುಬಂದರೆ ಮೇಲಧಿಕಾರಿಗಳಿಂದ ನೋಟಿಸ್ ಬರುತ್ತದೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರು.

ಮೊಟ್ಟೆಯ ಬೆಲೆ ದಿನೇ ದಿನೇ ಹೆಚ್ಚುತ್ತಿರುವುದರಿಂದ, ಪೂರಕ ಪೌಷ್ಟಿಕ ಮೊಟ್ಟೆಯ ಘಟಕದ ಬೆಲೆ ಹೆಚ್ಚಿಸಿ ಪರಿಷ್ಕರಿಸುವಂತೆ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸಂಘಟನೆಯ ಮೂಲಕವೂ ಮನವಿ ನೀಡಲಾಗಿದೆ. ಈ ಕುರಿತು ಜಿಲ್ಲಾ ಶಿಕ್ಷಣಾಧಿಕಾರಿಗಳು ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪ್ರಸ್ತಾವನೆ ಕಳುಹಿಸಿದ್ದಾರೆ. ಸರಕಾರ ಆದಷ್ಟು ಬೇಗ ಈ ಬಗ್ಗೆ ಕ್ರಮ ವಹಿಸುವ ಬಗ್ಗೆ ಆಶಾಭಾವನೆ ಇದೆ.

  • ಎಸ್.ವಾಯ್. ವಿಭೂತಿ.
    ಸಹಾಯಕ ನಿರ್ದೇಶಕರು,
    ಅಕ್ಷರ ದಾಸೋಹ-ಮುಂಡರಗಿ.

ದೀರ್ಘಾವಧಿ ಸಿಎಂ ಆಗಿ ಚರಿತ್ರೆ ಬರೆದ ಸಿದ್ದರಾಮಯ್ಯ

0

ವಿಜಯಸಾಕ್ಷಿ ಸುದ್ದಿ, ಗದಗ: ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ಸಮಾನವಾಗಿ ಸಿಎಂ ಅಧಿಕಾರಾವಧಿಯನ್ನು ಪೂರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀರ್ಘಾವಧಿಯ ಸಿಎಂ ಎನ್ನುವ ದಾಖಲೆ ಬರೆದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಇಲ್ಲಿನ ತಿಮ್ಮಾಪೂರ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮ ಆಚರಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಮಾತನಾಡಿ, ರಾಜ್ಯ ರಾಜಕಾರಣದ ಇತಿಹಾಸದ ಪುಟಗಳಲ್ಲಿ ಸುದೀರ್ಘ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ದಾಖಲೆ ಸಿದ್ದರಾಮಯ್ಯನವರದ್ದಾಗಿದೆ. ಮೈಸೂರಿನ ಸಿದ್ದರಾಮನಹುಂಡಿ ಗ್ರಾಮದ ಸಾಮಾನ್ಯ ರೈತ ಕುಟುಂಬದಿಂದ ಬಂದ ಸಿದ್ದರಾಮಯ್ಯ ವಿಧಾನಸೌಧದ ಶಕ್ತಿ ಪೀಠದಲ್ಲಿ ದೀರ್ಘಕಾಲ ಕುಳಿತು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ತಮ್ಮ ಅಧಿಕಾರಾವಧಿಯಲ್ಲಿ ಜನರಿಗೆ ನೀಡಿದ್ದ ಐದು ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಾಳಪ್ಪ ಗಂಗರಾತ್ರಿ, ರಾಮಪ್ಪ ಹಚ್ಚಪ್ಪನವರ, ಶರಣಪ್ಪ ಜೋಗಿನ, ಮಲ್ಲಪ್ಪ ಇದ್ಲಿ, ಸಂಗಪ್ಪ ಮಳ್ಳಿ, ಚಿನ್ನಪ್ಪ ಬಿಸನಳ್ಳಿ, ವಿರೂಪಾಕ್ಷಪ್ಪ ಸೋಮಾಪೂರ, ಹನುಮಪ್ಪ ಜೋಗಿನ, ಭೀಮಪ್ಪ ಆಲೂರು, ಕಪ್ಪತ್ತಪ್ಪ ಸೊಂಪೂರ, ರಾಮಣ್ಣ ಗಾಣದ, ಮಾರುತಿ ಬಾಬರಿ, ಮುದುವಪ್ಪ ದೇವರವರ, ಅರ್ಚಕರಾದ ವೆಂಕಟೇಶ ಪೂಜಾರ, ಶಂಕ್ರಪ್ಪ ಪೂಜಾರ ಸೇರಿದಂತೆ ಅಭಿಮಾನಿಗಳು ಪಾಲ್ಗೊಂಡಿದ್ದರು.

ಧೂಮಪಾನ ಅಡ್ಡೆಗಳ ಮೇಲೆ ಕೋಟ್ಪಾ ದಾಳಿ: ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರೀತ್ ಖೋನಾ ನೇತೃತ್ವದಲ್ಲಿ ತಾಲೂಕಾ ತನಿಖಾ ದಳ ಹಾಗೂ ಜಿಲ್ಲಾ ತಂಬಾಕು ಕೋಶ ಗದಗ ವತಿಯಿಂದ ನಗರದ ಮುಳಗುಂದ ರಸ್ತೆಯಲ್ಲಿ ಕೋಟ್ಪಾ ದಾಳಿ ಹಮ್ಮಿಕೊಂಡು ತಂಬಾಕು ನಿಯಂತ್ರಣ ಕೋಟ್ಪಾ ಕಾಯ್ದೆ-2003 ಉಲ್ಲಂಘನೆ ಕುರಿತು ಮಾರಾಟಗಾರರಿಗೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಪ್ರಕರಣ ದಾಖಲಿಸಿ, 4 ಸಾವಿರ ರೂ ದಂಡ ವಿಧಿಸಿ ಶಾಲೆಗಳ 100 ಅಡಿ ಒಳಗಡೆ ತಂಬಾಕು ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಿಸಿ ಕ್ರಮ ಕೈಗೊಳ್ಳಲಾಯಿತು.

ಕೋಟ್ಪಾ ಕಾಯ್ದೆ ಸೆಕ್ಷನ್ 6ಬಿ ಪ್ರಕಾರ ಶಾಲಾ ಕಾಲೇಜುಗಳ ಸುತ್ತ 100 ಗಜದವರೆಗೆ ತಂಬಾಕು ಉತ್ಪನ್ನಗಳನ್ನು ನಿಷೇಧಿಸಲಾಗಿದ್ದರೂ ಸಹ ಕೆಲವು ಸ್ಥಳಗಳಲ್ಲಿ ಮಾರಾಟ ಮಾಡುತ್ತಿರುವದು ಕಂಡುಬಂದಿದ್ದು, ಅಂತಹ ಅಂಗಡಿಗಳ ವಿರುದ್ಧ ದಂಡ ವಿಧಿಸಿ ಅಂಗಡಿಗಳನ್ನು ಮುಚ್ಚಿಸಿ ಕ್ರಮ ವಹಿಸಲಾಯಿತು. ಪಾನ್-ಬೀಡಾ ಅಂಗಡಿ, ಹೋಟೆಲ್‌ಗಳಲ್ಲಿ ಅನಧಿಕೃತ ಧೂಮಪಾನ ಅಡ್ಡೆಗಳನ್ನು ಮಾಡಿಕೊಂಡು ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದು, ಈ ರೀತಿಯ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವದರಿಂದ ಅವರು ಸೇವಿಸಿ ಬಿಟ್ಟ ಹೊಗೆಯಿಂದ ಅಮಾಯಕರು ಆ ಹೊಗೆ ಸೇವಿಸಿ ಪರೋಕ್ಷ ಧೂಮಪಾನಿಗಳಾಗಿ ತಂಬಾಕು ಸೇವನೆಯಿಂದಾಗುವ ಅಪಾಯಕಾರಿ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು ಇತ್ಯಾದಿ ಮಾರಣಾಂತಿಕ ಕಾಯಿಲೆಗಳಿಗೆ ಬಲಿಯಾಗುತ್ತಾರೆ.

ಕಾಯ್ದೆ ಉಲ್ಲಂಘನೆಯಾದಲ್ಲಿ ದಂಡದ ಮೊತ್ತ ರೂ. 1000 ಆಗಿದ್ದು ಧೂಮಪಾನದ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವದನ್ನು ನಿಷೇಧಿಸಲಾಗಿದೆ. ಸೆಕ್ಷನ್ 6ಎ ಪ್ರಕಾರ 21 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನ ನಿಷೇಧಿಸಲಾಗಿದ್ದು, ಈ ಸೆಕ್ಷನ್‌ನಲ್ಲಿ ರೂ. 1000ವರೆಗೆ ದಂಡ ಹೆಚ್ಚಿಸಲಾಗಿದೆ. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಅಧಿಕೃತ ಸೆಕ್ಷನ್ 4 ಹಾಗೂ ಸೆಕ್ಷನ್ 6ಎ ನಾಮಫಲಕವನ್ನು ಕಡ್ಡಾಯವಾಗಿ ಸ್ಥಳದ ಮಾಲಿಕರು ಬಿತ್ತರಿಸಬೇಕು. ಶಾಲಾ-ಕಾಲೇಜುಗಳ ಸುತ್ತಲಿನ ತಂಬಾಕು ಮಾರಾಟಗಾರರು ಮಾರಾಟ ನಿಲ್ಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಗೋಪಾಲ ಸುರಪುರ, ತಾಲುಕಾ ಆರೋಗ್ಯ ಶಿಕ್ಷಣಾಧಿಕಾರಿ ರಾಜೇಂದ್ರ ಗಡಾದ, ಪೊಲೀಸ್ ಇಲಾಖೆಯ ಪ್ರವೀಣ ವೈ, ಸಿ.ಆರ್. ಹಾದಿಮನಿ, ಎಸ್.ಎಂ. ಬೆಳ್ಳಮ್ಮನವರ, ಸಾಮಾಜಿಕ ಕಾರ್ಯಕರ್ತೆ ಬಸಮ್ಮ ಚಿತ್ತರಗಿ, ರಮೇಶ ಚಕ್ಕಡಿ ಹಾಗೂ ಫಕೀರೇಶ ಖಾನಾಪೂರ ಉಪಸ್ಥಿತರಿದ್ದರು.

ಉತ್ತರಾಯಣದ ಈ ಕಾಲ ಬದಲಾವಣೆಯ ಪರ್ವ: ವೀಣಾ ತಿರ್ಲಾಪುರ

0

ವಿಜಯಸಾಕ್ಷಿ ಸುದ್ದಿ, ಗದಗ: ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಪವಿತ್ರ ಹಬ್ಬ ಎಂದು ಪರಿಗಣಿಸಲಾಗುತ್ತದೆ. ಶಾಸ್ತ್ರದ ಪ್ರಕಾರ ಸೂರ್ಯದೇವನು ಮಕರ ಚಕ್ರವನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ. ಉತ್ತರಾಯಣದ ಈ ಪರ್ವ ಬದಲಾವಣೆಗೆ ನಾಂದಿಯಾಗುತ್ತದೆ. ಅಂತೆಯೇ ಮಾನವನಲ್ಲಿಯೂ ಸಹ ಬದಲಾವಣೆ ಸಹಜವಾಗಿರುತ್ತದೆ. ಈ ಕಾಲದಲ್ಲಿ ಚಳಿ ತೊರೆದು ಸೂರ್ಯನ ಕಿರಣ ವ್ಯಾಪ್ತಿ ಮತ್ತು ಅದರ ಶಾಖ ಭೂಮಿಯ ಮೇಲೆ ಹೆಚ್ಚಾಗುತ್ತಾ ಹೋದಂತೆ ಅನೇಕ ಬದಲಾವಣೆ ಪ್ರಕೃತಿಯಲ್ಲಿಯೂ ಸಹ ನಾವು ನೋಡುತ್ತೇವೆ. ಬದಲಾವಣೆಗೆ ತಕ್ಕಂತೆ ನಮ್ಮ ಆಚಾರ-ವಿಚಾರ, ನಡತೆಗಳನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ವೀಣಾ ತಿರ್ಲಾಪುರ ಅಭಿಪ್ರಾಯಪಟ್ಟರು.

ಅಖಿಲ ಕರ್ನಾಟಕ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ವಿವಿಧೋದ್ದೇಶ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರೇಮಾ ಮೇಟಿ ಮಾತನಾಡಿ, ಈ ಋತುಮಾನ ಮನುಷ್ಯನನ್ನು ದೈಹಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿಯೂ ಕೂಡ ಬದಲಾವಣೆ ಮಾಡುತ್ತದೆ. ಇದು ಸುಗ್ಗಿಯ ಕಾಲ ಮತ್ತು ಹರ್ಷದ ಪರ್ವಕಾಲ ಎಂದು ನುಡಿದರು.

ಇದೇ ಸಂದರ್ಭದಲ್ಲಿ ದಿ. ಚಂದ್ರಶೇಖರಪ್ಪ ಬಸವಂತಪ್ಪ ಭೂಮರೆಡ್ಡಿ, ದಿ. ಸಂಜಯ್ ರೆಡ್ಡಿ ವೀರಪ್ಪ ಮಾಸರೆಡ್ಡಿ ಮತ್ತು ದಿ. ಕಿರಣ ಹನುಮಪ್ಪ ಮಧುರೆಡ್ಡಿಯವರಿಗೆ ಮೌನಾಚರಣೆ ಸಲ್ಲಿಸಲಾಯಿತು.

ವೇದಿಕೆಯ ಮೇಲೆ ಉಪಾಧ್ಯಕ್ಷರಾದ ಕಸ್ತೂರಿ ಹಿರೇಗೌಡರ್, ಖಜಾಂಚಿ ಸರೋಜಾ ಪೈಲ್ ಉಪಸ್ಥಿತರಿದ್ದರು. ನೀಲ ಮುದರಡ್ಡಿ, ಸುಮಂಗಲ ಪಾಟೀಲ್, ಅಕ್ಕಮ್ಮ ರೆಡ್ಡಿ, ಶಾಂತ ದೊಡ್ಡಮನಿ ಮುಂತಾದವರು ಪಾಲ್ಗೊಂಡಿದ್ದರು. ಕವಿತಾ ಕೊಣ್ಣೂರ್ ಪ್ರಾರ್ಥಿಸಿದರು. ಮಧು ಪಾಟೀಲ್ ನಿರೂಪಿಸಿದರು. ಭಾಗ್ಯ ಶಿರೋಳ ವಂದಿಸಿದರು.

ಸ್ನೇಹಿತನ ಪತ್ನಿಯ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಆರೋಪಿ ಅರೆಸ್ಟ್

0

ಬೆಂಗಳೂರು: ಸ್ನೇಹಿತನ ಪತ್ನಿಯೊಂದಿಗೆ ನಡೆದ ವೈಮನಸ್ಸಿನ ಹಿನ್ನೆಲೆಯಲ್ಲಿ ಆಕೆಯ 6 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಲ್ಲೂರುಹಳ್ಳಿಯಲ್ಲಿ ನಡೆದಿದೆ.

ಹತ್ಯೆಯಾದ ಬಾಲಕಿಯನ್ನು ಶನಾದ್ (6) ಎಂದು ಗುರುತಿಸಲಾಗಿದ್ದು, ಆರೋಪಿ ಯೂಸಫ್ ನನ್ನುಪೊಲೀಸರು ಬಂಧಿಸಿದ್ದಾರೆ. ಯೂಸಫ್ ಹಾಗೂ ಬಾಲಕಿಯ ತಂದೆ ಇಜಾಮುಲ್ ಶೇಖ್ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಉದ್ಯೋಗ ನಿಮಿತ್ತ ನಲ್ಲೂರುಹಳ್ಳಿಯ ಸಮೀಪದ ಮನೆಗಳಲ್ಲಿ ವಾಸವಾಗಿದ್ದರು. ಆರೋಪಿ ಆಗಾಗ ಸ್ನೇಹಿತನ ಮನೆಗೆ ಭೇಟಿ ನೀಡುತ್ತಿದ್ದ ವೇಳೆ ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದಾನೆ. ಇದೇ ದ್ವೇಷದಿಂದ ಬಾಲಕಿಯನ್ನು ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ಚರಂಡಿಗೆ ಎಸೆದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಆರೋಪಿ ಬಾಲಕಿಯನ್ನು ಕರೆದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಮಗು ಕಾಣೆಯಾಗಿದ್ದ ಬಗ್ಗೆ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಹುಡುಕಾಟ ನಡೆಸಿ ಶವ ಪತ್ತೆ ಹಚ್ಚಿ, ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

error: Content is protected !!