Home Blog Page 207

ಬೆಳಗಾವಿ ಬಾಯ್ಲರ್ ಸ್ಫೋಟ: ಚಿಕಿತ್ಸೆ ಫಲಿಸದೆ ನಾಲ್ವರು ಕಾರ್ಮಿಕರು ಸಾವು – ಮೃತರ ಸಂಖ್ಯೆ 7ಕ್ಕೆ ಏರಿಕೆ

0

ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಬಳಿಯ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಬಾಯ್ಲರ್ ಸ್ಫೋಟ ಪ್ರಕರಣದಲ್ಲಿ ಚಿಕಿತ್ಸೆ ಫಲಿಸದೆ ಇಂದು ಒಂದೇ ದಿನ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೆ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ದುರ್ಘಟನೆಯಲ್ಲಿ ಮೃತಪಟ್ಟವರನ್ನು ಅಕ್ಷಯ ತೋಪಡೆ, ದೀಪಕ್ ಮುನವಳ್ಳಿ, ಸುದರ್ಶನ ಬನೋಶಿ, ಬೈಲಹೊಂಗಲ ತಾಲೂಕಿನ ಅರವಳ್ಳಿ ನಿವಾಸಿ ಮಂಜುನಾಥ ಮಡಿವಾಳಪ್ಪ ಕಾಜಗಾರ್, ಗೋಕಾಕ್ ತಾಲೂಕಿನ ಗೊಡಚಿನಮಲ್ಕಿ ಗ್ರಾಮದ ನಿವಾಸಿ ಭರತೇಶ ಸಾರವಾಡಿ, ತೇರದಾಳ ಅಥಣಿ ಪಟ್ಟಣದ ನಿವಾಸಿ ಮಂಜುನಾಥ್ ತೇರದಾಳ ಹಾಗೂ ಬಾಗಲಕೋಟ ಜಿಲ್ಲೆಯ ಮರೆಗುದ್ದಿ ಗ್ರಾಮದ ಗುರುಪಾದಪ್ಪ ತಮ್ಮನ್ನವರ್ ಎಂದು ಗುರುತಿಸಲಾಗಿದೆ.

ಬುಧವಾರ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಸ್ಥಳದಲ್ಲೇ ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು. ಕಾರ್ಖಾನೆಯು ವಿಕ್ರಮ ಇನಾಮದಾರ್ ಅವರಿಗೆ ಸೇರಿದೆ ಎಂದು ತಿಳಿದುಬಂದಿದೆ.

ನಿನ್ನೆ ಕಾರ್ಖಾನೆಯ ವಾಲ್ ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಸ್ಫೋಟ ಸಂಭವಿಸಿದ್ದು, ಕುದಿಯುವ ಕಬ್ಬಿನ ಹಾಲು ಕಾರ್ಮಿಕರ ಮೇಲೆ ಬಿದ್ದಿತ್ತು. ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆ ಕುರಿತು ಮುರಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಾಯ್ಲರ್ ಸ್ಫೋಟಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಉತ್ತರ ಕರ್ನಾಟಕದ ಹೆಮ್ಮೆ ಖಡಕ್ ರೊಟ್ಟಿ ಜಾತ್ರೆ: ಶಿರೋಳ ತೋಂಟದಾರ್ಯ ಮಠದಲ್ಲಿ ಸಂಭ್ರಮ

0

ಗದಗ: ಉತ್ತರ ಕರ್ನಾಟಕದ ಜನಜೀವನದ ಭಾಗವೇ ಆಗಿರುವ ಖಡಕ್ ರೊಟ್ಟಿ ಜಾತ್ರೆ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಶಿರೋಳ ಗ್ರಾಮದಲ್ಲಿರುವ ತೋಂಟದಾರ್ಯ ಮಠದಲ್ಲಿ ಇಂದಿನಿಂದ ಆರಂಭಗೊಂಡಿದೆ. ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರು ಹರಿದುಬರುತ್ತಿದ್ದು, ಗ್ರಾಮ ಸಕಲ ಸಿದ್ಧತೆಯೊಂದಿಗೆ ಜಾತ್ರೆಗೆ ಸಜ್ಜಾಗಿದೆ.

ಜಾತ್ರೆಯ ವಿಶೇಷತೆಯಾದ ಖಡಕ್ ಜೋಳದ ರೊಟ್ಟಿ ತಯಾರಿಕೆ ಕಾರ್ಯ ಭಕ್ತರಿಂದ ಭರದಿಂದ ನಡೆಯುತ್ತಿದೆ. ಲಕ್ಷಕ್ಕೂ ಹೆಚ್ಚು ರೊಟ್ಟಿಗಳನ್ನು ತಯಾರಿಸಿ ಮಠಕ್ಕೆ ಅರ್ಪಿಸುವ ಮೂಲಕ ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿ ಪ್ರದರ್ಶಿಸುತ್ತಿದ್ದಾರೆ.

ಇಂದು ಸಂಜೆ ಅದ್ಧೂರಿಯಾಗಿ ಮಹಾರಥೋತ್ಸವ ನಡೆಯಲಿದ್ದು, ನಾಳೆ ಆರೋಗ್ಯ ಶಿಬಿರ ಹಾಗೂ ಬಹು ನಿರೀಕ್ಷಿತ ಖಡಕ್ ರೊಟ್ಟಿ ಊಟದ ಜಾತ್ರೆ ನಡೆಯಲಿದೆ. ಖಡಕ್ ರೊಟ್ಟಿಯ ಜೊತೆಗೆ ಬಾನ, ಪಲ್ಯ, ಕರಿಹಿಂಡಿ, ಬಿಸಿಬರ್ತ ಅನ್ನ ಮತ್ತು ಸಾಂಬರ್ ರುಚಿ ಸವಿಯಲು ಭಕ್ತರು ದೂರ ದೂರದ ಜಿಲ್ಲೆಗಳಿಂದ ಆಗಮಿಸುತ್ತಿದ್ದಾರೆ.
ಇಂದು ಮಹಾರಥೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳು ನಾಳೆ ನಡೆಯುವ ರೊಟ್ಟಿ ಜಾತ್ರೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸುವುದು ಜಾತ್ರೆಯ ಪ್ರಮುಖ ಸಂಪ್ರದಾಯವಾಗಿದೆ. ಗದಗ ಜಿಲ್ಲೆಯೊಂದಿಗೆ ಬೆಳಗಾವಿ, ಬಾಗಲಕೋಟೆ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು ಆಗಮಿಸಿ ಜಾತ್ರೆಯ ಸಂಭ್ರಮವನ್ನು ಹೆಚ್ಚಿಸಿದ್ದಾರೆ.

ಧಾರ್ಮಿಕ ಆಚರಣೆ, ಸಂಸ್ಕೃತಿ ಮತ್ತು ಆಹಾರ ಪರಂಪರೆಯ ಸಂಗಮವಾದ ಶಿರೋಳ ತೋಂಟದಾರ್ಯ ಮಠದ ಖಡಕ್ ರೊಟ್ಟಿ ಜಾತ್ರೆ ಉತ್ತರ ಕರ್ನಾಟಕದ ಹೆಮ್ಮೆಯ ಉತ್ಸವವಾಗಿ ಮತ್ತೊಮ್ಮೆ ಮೆರೆದಿದೆ.

ಮುಂದೆ ಬಿಜೆಪಿ, ಜೆಡಿಎಸ್ ವಿಲೀನ ಸಾಧ್ಯತೆ: ಡಿಸಿಎಂ ಡಿ.ಕೆ. ಶಿವಕುಮಾರ್

0

ಬೆಂಗಳೂರು:“ಕುಮಾರಸ್ವಾಮಿ ಅವರ ಧೋರಣೆ ನೋಡುತ್ತಿದ್ದರೆ, ಸದ್ಯದಲ್ಲೇ ಜೆಡಿಎಸ್ ಪಕ್ಷ ಬಿಜೆಪಿ ಜತೆ ವಿಲೀನವಾಗುವ ಸಾಧ್ಯತೆ ಇದೆ. ವಿಲೀನವಾದರೆ ನಮಗೂ ಒಳ್ಳೆಯದೇ. ನಾವೂ ನೇರವಾಗಿ ಬಿಜೆಪಿ ಜೊತೆ ಹೋರಾಟ ಮಾಡಬಹುದು. ಆಗ ‘ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ ಎರಡು ಪಕ್ಷ’ ಎಂಬ ಗೊಂದಲ ಇರುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಗೋವಿಂದರಾಜ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಶಿವಕುಮಾರ್ ಅವರು ಗುರುವಾರ ಮಾತನಾಡಿದರು.

“ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಕಾರ್ಪೊರೇಟರ್ ಗೋವಿಂದರಾಜ್ ಹಾಗೂ ಅವರ ಧರ್ಮಪತ್ನಿ ಗೌರಮ್ಮ, ಚಂದ್ರಶೇಖರ್, ಜೆಡಿಎಸ್ ಅಧ್ಯಕ್ಷರಾಗಿದ್ದ ಡೇವಿಡ್ ಸೇರಿದಂತೆ ನೂರಾರು ಮುಖಂಡರನ್ನು ಸ್ವಾಗತಿಸುತ್ತೇನೆ.

ಗೋವಿಂದರಾಜು ಅವರು ಕುಟುಂಬ ಸ್ನೇಹಿತರು, ನನಗೆ ಮೊದಲಿನಿಂದಲೂ ಪರಿಚಯಸ್ಥರು. ಅವರು ಜೆಡಿಎಸ್ ಪಕ್ಷ ಸಂಘಟಿಸಿ ಅಭ್ಯರ್ಥಿಯೂ ಆಗಿದ್ದರು. ಆದರೆ ಈಗ ಬಿಜೆಪಿ ಹಾಗೂ ಜೆಡಿಎಸ್ ಮಾಡಿಕೊಂಡಿರುವ ಹೊಂದಾಣಿಕೆ ಒಪ್ಪಿಕೊಳ್ಳಲು ಸಾಧ್ಯವಾಗದೇ ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ” ಎಂದರು.

“ನಮ್ಮದು ಜಾತ್ಯಾತೀತ ಸಿದ್ಧಾಂತ. ಹೀಗಾಗಿ ಜಮೀರ್ ಅಹ್ಮದ್ ಖಾನ್ ಅವರ ಮುಖಂಡತ್ವದಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಳ್ಳಲು ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ. ಬಿಜೆಪಿ, ಜೆಡಿಎಸ್ ಬೇಗ ವಿಲೀನವಾದಷ್ಟೂ ನಮಗೇ ಒಳ್ಳೆಯದು. ಅವರು ಬೇಗ ತೀರ್ಮಾನ ಮಾಡಿದರೆ ನಾವು ನಮ್ಮ ತೀರ್ಮಾನ ಮಾಡಿಕೊಳ್ಳಬಹುದು. ಈಗ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಆಡುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರೇ ಹೇಳುತ್ತಿದ್ದಾರೆ” ಎಂದರು.

“ಅನೇಕ ಕ್ಷೇತ್ರಗಳಲ್ಲಿ ಬಹಳ ಗೊಂದಲಗಳಿವೆ. ನಮ್ಮ ಭವಿಷ್ಯ ಏನು ಎಂಬ ಪ್ರಶ್ನೆಯಲ್ಲಿದ್ದಾರೆ. ಬೆಂಗಳೂರು ನಗರದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅನೇಕರು ಉತ್ಸುಕರಾಗಿದ್ದಾರೆ. ಬೆಂಗಳೂರು ಪಶ್ಚಿಮ ಪಾಲಿಕೆಯಲ್ಲಿ 247, ಬೆಂಗಳೂರು ಉತ್ತರದಲ್ಲಿ 199, ಬೆಂಗಳೂರು ದಕ್ಷಿಣದಲ್ಲಿ 129, ಬೆಂಗಳೂರು ಕೇಂದ್ರದಲ್ಲಿ 106, ಬೆಂಗಳೂರು ಪೂರ್ವದಲ್ಲಿ 78 ಅರ್ಜಿಗಳನ್ನು ತೆಗೆದುಕೊಳ್ಳಲಾಗಿದೆ.

ಒಟ್ಟು 779 ಟಿಕೆಟ್ ಆಕಾಂಕ್ಷಿಗಳು ನಮ್ಮ ಅರ್ಜಿ ಸ್ವೀಕರಿಸಿದ್ದಾರೆ. ಅರ್ಜಿ ತೆಗೆದುಕೊಂಡವರು ಕೊನೆ ದಿನದವರೆಗೂ ಕಾಯಬೇಡಿ. ಎರಡು ಮೂರು ದಿನಗಳಲ್ಲೇ ಸಲ್ಲಿಕೆ ಮಾಡಿ. ನಾವು ಕೂಡ ಪಕ್ಷದ ಅಭ್ಯರ್ಥಿ ಆಯ್ಕೆಗೆ ವಿಮರ್ಷೆ ಮಾಡಬೇಕಿದೆ. ಕೊನೆ ಘಳಿಗೆಯಲ್ಲಿ ಸಲ್ಲಿಕೆಯಾದರೆ ವಿಮರ್ಷೆ ಮಾಡುವುದು ಕಷ್ಟವಾಗುತ್ತದೆ. ಜ.10ರ ಒಳಗಾಗಿ ಅರ್ಜಿ ಕೊಟ್ಟರೆ ನಾವು ನಮ್ಮ ತಂಡವನ್ನು ಕಳುಹಿಸಿ ವರದಿ ಪಡೆಯಬಹುದು. ಯಾರು ವಾರ್ಡ್ ಗಳಲ್ಲಿ ಕೆಲಸ ಮಾಡಿದ್ದಾರೆ, ಯಾರು ಮಾಡಿಲ್ಲ, ಯಾರು ಪಕ್ಷಕ್ಕೆ ನಿಷ್ಠರಾಗಿದ್ದಾರೆ ಎಂದು ಪರಿಶೀಲನೆ ಮಾಡಬಹುದು” ಎಂದು ತಿಳಿಸಿದರು.

ಸೊಸೆ ಕಾಟಕ್ಕೆ ಅತ್ತೆ ಆತ್ಮಹತ್ಯೆ ಮಾಡಿಕೊಂಡ್ರಾ..? ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

0

ತುಮಕೂರು: ಅತ್ತೆ ಕಾಟಕ್ಕೆ ಸೊಸೆ ಮನೆಬಿಟ್ಟು ಹೋಗುವ ಘಟನೆಗಳು ಸಾಮಾನ್ಯವಾಗಿರುವ ನಡುವೆ, ತುಮಕೂರು ಜಿಲ್ಲೆಯಲ್ಲಿ ಇದಕ್ಕೆ ವಿರುದ್ಧವಾದ ಪ್ರಕರಣ ಬೆಳಕಿಗೆ ಬಂದಿದೆ. ಸೊಸೆ ಕಾಟಕ್ಕೆ ಬೇಸೆತ್ತು ಅತ್ತೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಗುಬ್ಬಿ ತಾಲೂಕಿನ ಕಾರೇಕುರ್ಚಿ ಗ್ರಾಮದಲ್ಲಿ ಘಟನೆ ನಡೆದಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಭ್ರಮರಾಂಬಿಕೆ (60)  ಶವ ಪತ್ತೆಯಾಗಿದೆ. ಶವ ಫಾರ್ಮ್‌ಹೌಸ್‌ನಿಂದ ಸುಮಾರು 200 ಮೀಟರ್ ದೂರದಲ್ಲಿರುವ ಪಂಪ್‌ಹೌಸ್‌ನಲ್ಲಿ ಪತ್ತೆಯಾಗಿದೆ. ಮೃತ ಮಹಿಳೆಯ ಸೊಸೆ ಕಾವ್ಯಶ್ರೀ ಪ್ರತ್ಯೇಕವಾಗಿ ಉಳಿಯಲು ಬಯಸುತ್ತಿದ್ದಳು ಎನ್ನಲಾಗಿದೆ.

ಇದೇ ಕಾರಣಕ್ಕೆ ಅಡುಗೆ ಸೇರಿದಂತೆ ಎಲ್ಲವನ್ನೂ ಪ್ರತ್ಯೇಕವಾಗಿ ಮಾಡಿಕೊಳ್ಳುತ್ತಿದ್ದಳು. ಅಲ್ಲದೆ ಗಂಡನನ್ನು ಬೆಂಗಳೂರಿಗೆ ಕರೆದೊಯ್ಯುವ ವಿಚಾರವನ್ನೂ ಚರ್ಚಿಸುತ್ತಿದ್ದಳು ಎಂದು ಆರೋಪಿಸಲಾಗಿದೆ. ಮಗನನ್ನು ಸೊಸೆ ತನ್ನಿಂದ ದೂರ ಮಾಡಬಹುದು ಎಂಬ ಭಯದಿಂದ ಅತ್ತೆ ಭ್ರಮರಾಂಬಿಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನಿನ್ನೆ ಬೆಳಗ್ಗೆ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಆರಂಭದಲ್ಲಿ ಕೊಲೆ ಶಂಕೆ ವ್ಯಕ್ತಪಡಿಸಿದ್ದರು. ಮೃತ ಮಹಿಳೆಯ ಒಂದು ಕಣ್ಣಿನ ಗುಡ್ಡೆ ನಾಪತ್ತೆಯಾಗಿದ್ದ ಕಾರಣ ಅನುಮಾನ ಹೆಚ್ಚಾಗಿತ್ತು.

ಪೊಲೀಸರ ಪರಿಶೀಲನೆಯ ಬಳಿಕ ಮಧ್ಯರಾತ್ರಿ 1.45ರ ಸುಮಾರಿಗೆ ಭ್ರಮರಾಂಬಿಕೆ ತಾವೇ ನಡೆದುಕೊಂಡು ಪಂಪ್‌ಹೌಸ್‌ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ. ಶವವನ್ನು ಕೆಳಗಿಳಿಸುವ ವೇಳೆ ಕಣ್ಣಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಡಿ ಸೊಸೆ ಕಾವ್ಯಶ್ರೀ ವಿರುದ್ಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಸಿಬ್ಬಂದಿಯಿಂದ ಕಿರುಕುಳ ಆರೋಪ: ಸಂಚಾರ ಪೊಲೀಸ್ ಠಾಣೆಯಲ್ಲೇ ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆ!

0

ಶಿವಮೊಗ್ಗ: ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲೇ ಹೆಡ್ ಕಾನ್ಸ್‌ಟೇಬಲೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವವರನ್ನು ಮಹಮ್ಮದ್ ಜಕ್ರೀಯಾ (55) ಎಂದು ಗುರುತಿಸಲಾಗಿದೆ. ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಒಂದು ತಿಂಗಳ ರಜೆಯಲ್ಲಿದ್ದ ಜಕ್ರೀಯಾ, ಎರಡು ದಿನಗಳ ಹಿಂದಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಸಹ ಸಿಬ್ಬಂದಿ ನಾಸೀರ್ ಅಹಮ್ಮದ್ ನಿರಂತರವಾಗಿ ಕಿಂಡಲ್ ಮಾಡುತ್ತಿದ್ದಾನೆ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಘಟನೆ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪಶ್ಚಿಮ ಸಂಚಾರ ಪೊಲೀಸ್ ಠಾಣೆಗೆ ಎಸ್ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

ಚಿಕ್ಕಮಗಳೂರು: ಮುತ್ತಿಗೆಪುರ ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನಯಾನ ಭಾಗ್ಯ!

0

ಚಿಕ್ಕಮಗಳೂರು: ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯೋ ಪೋಷಕರೇ ಹೆಚ್ಚು. ಇಂಗ್ಲಿಷ್ ಕಲಿಯಲ್ಲ, ಡಿಸೆನ್ಸಿ ಇರಲ್ಲ, ನೀಟ್ ಇಲ್ಲ ಎನ್ನುವ ಆರೋಪಗಳ ನಡುವೆ ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಗಳನ್ನೇ ಮೀರಿಸುವ ಸಾಧನೆ ಮಾಡಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಕುಗ್ರಾಮದ ಸರ್ಕಾರಿ ಶಾಲೆ, 32 ಮಕ್ಕಳನ್ನು ಫ್ಲೈಟ್‌ನಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ದು ಎಲ್ಲರ ಗಮನ ಸೆಳೆದಿದೆ. ಇದುವರೆಗೆ ಯಾವ ಖಾಸಗಿ ಶಾಲೆಯೂ ಮಾಡದ ಈ ಸಾಧನೆ, ಸರ್ಕಾರಿ ಶಾಲೆಗಳ ಮೇಲಿನ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ.

ಕೈಯಲ್ಲಿ ಫ್ಲೈಟ್ ಟಿಕೆಟ್ ಹಿಡಿದು ಕುಳಿತ ಮಕ್ಕಳ ಮುಖದಲ್ಲಿನ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮುತ್ತಿಗೆಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಒಟ್ಟು 420 ವಿದ್ಯಾರ್ಥಿಗಳಿದ್ದು, 5, 6 ಮತ್ತು 7ನೇ ತರಗತಿಯ ಮಕ್ಕಳನ್ನು ವಾರ್ಷಿಕ ಶೈಕ್ಷಣಿಕ ಪ್ರವಾಸದ ಭಾಗವಾಗಿ ಫ್ಲೈಟ್‌ನಲ್ಲಿ ಕರೆದೊಯ್ಯಲಾಗಿದೆ.

ಕೆಲವು ಪೋಷಕರು ಮಕ್ಕಳನ್ನು ಕಳಿಸಲು ನಿರಾಕರಿಸಿದ್ದರೆ, ಇನ್ನೂ ಕೆಲವರು ಮಕ್ಕಳು ಸಣ್ಣವರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಪೋಷಕರ ಒಪ್ಪಿಗೆ ಪಡೆದು ಶಿಕ್ಷಕರು 32 ಮಕ್ಕಳನ್ನು ಫ್ಲೈಟ್ ಪ್ರವಾಸಕ್ಕೆ ಕರೆದೊಯ್ದು, ಸರ್ಕಾರಿ ಶಾಲೆಗಳು ಯಾರಿಗೂ ಯಾವುದಕ್ಕೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಈ ಫ್ಲೈಟ್ ಪ್ರವಾಸದಿಂದ ಮಕ್ಕಳು ಮಾತ್ರವಲ್ಲದೆ ಪೋಷಕರೂ ಸಹ ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ. ಮಕ್ಕಳು ಖುಷಿಯಿಂದ ತಮ್ಮ ಸ್ನೇಹಿತರನ್ನ ಫ್ಲೈಟ್‌ನಲ್ಲಿ ಪ್ರವಾಸಕ್ಕೆ ಕಳುಹಿಸಿದ್ದಕ್ಕೆ ಹೆಮ್ಮೆ ಪಟ್ಟಿದ್ದಾರೆ. ಸರ್ಕಾರಿ ಶಾಲೆಗಳ ಸಾಮರ್ಥ್ಯವನ್ನು ಪ್ರಶ್ನಿಸುವವರಿಗೆ ಮುತ್ತಿಗೆಪುರ ಸರ್ಕಾರಿ ಶಾಲೆಯ ಶಿಕ್ಷಕರು ಇದೊಂದು ಗಟ್ಟಿಯಾದ ಉತ್ತರ ನೀಡಿದ್ದಾರೆ.

ಟೊಮೇಟೊ ದರ ದಿಢೀರ್ ಕುಸಿತ! ರೈತರಿಗೆ ಸಂಕಷ್ಟ, ಗ್ರಾಹಕರಿಗೆ ನಿಟ್ಟುಸಿರು

0

ಚಿಕ್ಕಬಳ್ಳಾಪುರ: ಕೆಲವೇ ದಿನಗಳ ಹಿಂದೆ ಆಪಲ್ ಬೆಲೆಯನ್ನೂ ಮೀರಿಸಿದ್ದ ಟೊಮೇಟೊ ದರ ಮತ್ತೆ ಭಾರೀ ಕುಸಿತ ಕಂಡಿದ್ದು, ರೈತರಿಗೆ ಮತ್ತೊಮ್ಮೆ ಆರ್ಥಿಕ ಆಘಾತ ತಂದಿದೆ. ಚಿಕ್ಕಬಳ್ಳಾಪುರ–ಕೋಲಾರ ಅವಳಿ ಜಿಲ್ಲೆಗಳ ರೈತರು ಕೊರೆಯುವ ಚಳಿಯಲ್ಲೂ ಅಪಾರ ಪ್ರಮಾಣದಲ್ಲಿ ಟೊಮೇಟೊ ಬೆಳೆ ಬೆಳೆಸಿ ಉತ್ತಮ ಫಸಲು ಪಡೆದಿದ್ದರು. ಆದರೆ ಮಾರುಕಟ್ಟೆಯಲ್ಲಿ ಬೆಲೆ ಪಾತಾಳಕ್ಕಿಳಿದಿರುವುದು ರೈತರ ನಿರೀಕ್ಷೆಗಳನ್ನು ನುಚ್ಚು ನೂರಾಗಿಸಿದೆ.

ಚಿಕ್ಕಬಳ್ಳಾಪುರದ ಎಪಿಎಂಸಿ ಟೊಮೇಟೊ ಮಾರುಕಟ್ಟೆಯಲ್ಲಿ 15 ಕೆಜಿ ಕ್ರೇಟ್‌ ದರ ₹250 ರಿಂದ ಗರಿಷ್ಠ ₹600ಕ್ಕೆ ಮಾತ್ರ ವಹಿವಾಟಾಗಿದೆ. ಕಳೆದ ವಾರವಷ್ಟೇ ಇದೇ ಬಾಕ್ಸ್‌ಗೆ ₹600 ರಿಂದ ₹800 ದರವರೆಗೆ ಸಿಕ್ಕಿತ್ತು. ಆದರೆ ಈಗ ಕೆಲವು ಕಡೆ ₹150–₹250ಕ್ಕೆ ಮಾರಾಟವಾಗುತ್ತಿದೆ.

ಒಂದು ಎಕರೆ ಟೊಮೇಟೊ ಬೆಳೆ ಬೆಳೆಸಲು ₹50 ಸಾವಿರಕ್ಕೂ ಹೆಚ್ಚು ವೆಚ್ಚ ಬರುತ್ತದೆ. ನಾರು ಖರೀದಿ, ಗೊಬ್ಬರ, ಕೀಟನಾಶಕ, ಕೂಲಿ, ಸಾಗಣೆ, ಉಳುಮೆ—all ಇದಕ್ಕಾಗಿ ರೈತರು ಸಾಲ ಮಾಡಿ ತೋಟ ಮಾಡುತ್ತಾರೆ. ಆದರೆ ಈಗ ಸಿಗುತ್ತಿರುವ ಬೆಲೆ ವೆಚ್ಚವೂ ವಾಪಸ್ ಬರದಂತಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಟೊಮೇಟೊ ಬೆಳೆ ಆರಂಭವಾಗಿರುವುದು, ಜೊತೆಗೆ ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ದೊಡ್ಡ ಪ್ರಮಾಣದಲ್ಲಿ ಟೊಮೇಟೊ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವುದೇ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ರಾಜ್ಯದಾದ್ಯಂತ ಒಂದೇ ಸಮಯದಲ್ಲಿ ಫಸಲು ಬಂದಿರುವುದು ರೈತರಿಗೆ ಮಾರಕವಾಗಿದೆ.

ಆಭರಣ ಪ್ರಿಯರಿಗೆ ಸಿಹಿಸುದ್ದಿ: ಚಿನ್ನ, ಬೆಳ್ಳಿ ದರ ಇಳಿಕೆ; ಇಂದಿನ ಬೆಲೆ ಎಷ್ಟಿದೆ?

0

ಬೆಂಗಳೂರು: ಸತತ ಏರಿಕೆಯ ಬಳಿಕ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗುರುವಾರ ಇಳಿಕೆಯಾಗಿದೆ. ಚಿನ್ನದ ಬೆಲೆ 130 ರೂ ಕಡಿಮೆಯಾಗಿದ್ದು, ಬೆಳ್ಳಿ ಬೆಲೆ ಪ್ರತಿ ಗ್ರಾಮ್‌ಗೆ 9 ರೂ ತಗ್ಗಿದೆ. ಅಪರಂಜಿ (24 ಕ್ಯಾರಟ್) ಚಿನ್ನದ ಬೆಲೆ ಗ್ರಾಮ್‌ಗೆ 13,800 ರೂಗೆ ಇಳಿಕೆಯಾಗಿದೆ.

ವಿದೇಶಿ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಕುಸಿತ ಕಂಡಿದ್ದು, ಇದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಹೆಚ್ಚಿನ ಪ್ರಮಾಣದ ಇಳಿಕೆ ಕಂಡುಬಂದಿದ್ದು, ಪ್ರತಿ ಗ್ರಾಮ್‌ಗೆ 9 ರೂ ಕಡಿಮೆಯಾಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 1,26,500 ರೂ ಆಗಿದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,38,000 ರೂ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,200 ರೂ ಆಗಿದೆ.

ಬೆಂಗಳೂರಿನಲ್ಲಿ 10 ಗ್ರಾಮ್ ಚಿನ್ನದ ಬೆಲೆ 1,26,500 ರೂ ಇದ್ದು, 100 ಗ್ರಾಮ್ ಬೆಳ್ಳಿ ಬೆಲೆ 25,200 ರೂ ಆಗಿದೆ. ತಮಿಳುನಾಡು, ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಬೆಳ್ಳಿ ಬೆಲೆ 27,200 ರೂವರೆಗೆ ದಾಖಲಾಗಿದೆ.

ಭಾರತದಲ್ಲಿನ ಚಿನ್ನ–ಬೆಳ್ಳಿ ಬೆಲೆ (ಜನವರಿ 8)

  • 24 ಕ್ಯಾರಟ್ ಚಿನ್ನ (1 ಗ್ರಾಂ): ₹13,800

  • 22 ಕ್ಯಾರಟ್ ಚಿನ್ನ (1 ಗ್ರಾಂ): ₹12,650

  • 18 ಕ್ಯಾರಟ್ ಚಿನ್ನ (1 ಗ್ರಾಂ): ₹10,350

  • ಬೆಳ್ಳಿ (1 ಗ್ರಾಂ): ₹252

ಬೆಂಗಳೂರಿನ ಚಿನ್ನ–ಬೆಳ್ಳಿ ಬೆಲೆ

  • 24 ಕ್ಯಾರಟ್ ಚಿನ್ನ (1 ಗ್ರಾಂ): ₹13,800

  • 22 ಕ್ಯಾರಟ್ ಚಿನ್ನ (1 ಗ್ರಾಂ): ₹12,650

  • ಬೆಳ್ಳಿ (1 ಗ್ರಾಂ): ₹252

ವಿವಿಧ ನಗರಗಳಲ್ಲಿನ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)

  • ಬೆಂಗಳೂರು: ₹12,650

  • ಚೆನ್ನೈ: ₹12,750

  • ಮುಂಬೈ: ₹12,650

  • ದೆಹಲಿ: ₹12,665

  • ಕೋಲ್ಕತಾ: ₹12,650

  • ಕೇರಳ: ₹12,650

  • ಅಹ್ಮದಾಬಾದ್: ₹12,655

  • ಜೈಪುರ್: ₹12,665

  • ಲಕ್ನೋ: ₹12,665

  • ಭುವನೇಶ್ವರ್: ₹12,650

ಬಳ್ಳಾರಿ ಗಲಭೆ ಪ್ರಕರಣ: 30ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರಿಗೆ ನೋಟಿಸ್‌

0

ಬಳ್ಳಾರಿ: ಬಳ್ಳಾರಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರಿಗೆ ಪೊಲೀಸರು ನೋಟಿಸ್‌ ನೀಡಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಈ ಪ್ರಕರಣದಲ್ಲಿ ಒಟ್ಟು 107 ಜನರಿಗೆ ನೋಟಿಸ್‌ ನೀಡಲಾಗಿದ್ದು,

ಅವರಲ್ಲಿ 30ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಎಂಬುದು ತಿಳಿದುಬಂದಿದೆ. ಈ 107 ಮಂದಿಯಲ್ಲಿ ಬಹುತೇಕರು ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಗಲಭೆ ಸಂದರ್ಭದ ವಿಡಿಯೋ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.

ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿರುವ ಸಂದರ್ಭದಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತರಿಗೆ ನೋಟಿಸ್‌ ನೀಡಿರುವುದು ಗಮನ ಸೆಳೆದಿದೆ. ಈ ಹಿಂದೆ ಈ ಪ್ರಕರಣದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ ಇದೀಗ ಕಾಂಗ್ರೆಸ್ ಕಾರ್ಯಕರ್ತರಿಗೂ ನೋಟಿಸ್‌ ನೀಡಿರುವ ಮೂಲಕ ಪೊಲೀಸರು ಪಕ್ಷಾತೀತವಾಗಿ ಕ್ರಮ ಕೈಗೊಳ್ಳುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಇದರ ಜೊತೆಗೆ ಬಿಜೆಪಿ ಕಾರ್ಯಕರ್ತರಿಗೂ ನೋಟಿಸ್‌ ನೀಡಲಾಗಿದೆ. ಮತ್ತೆ ಬಿಜೆಪಿ ನಾಯಕರ ವಿರುದ್ಧವೂ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದು, ಶಾಸಕ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ರಾಮುಲು ಸೇರಿದಂತೆ ಒಟ್ಟು 33 ಬಿಜೆಪಿ ನಾಯಕರಿಗೆ ನೋಟಿಸ್‌ ಜಾರಿಯಾಗಿದೆ. ಈ ವಿಷಯವು ಮುಂದಿನ ಸಚಿವ ಸಂಪುಟ ಸಭೆಯಲ್ಲೂ ಚರ್ಚೆಗೆ ಬರಲಿದೆ ಎಂದು ಹೇಳಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಈಗಾಗಲೇ 26 ಮಂದಿಯನ್ನು ಬಂಧಿಸಿದ್ದಾರೆ. ಇದಲ್ಲದೆ, ರೆಡ್ಡಿ ಆಪ್ತರಾಗಿರುವ ಸುರೇಶ್ ಬಾಬು ಅವರನ್ನು ಕೂಡ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಬಳ್ಳಾರಿ ಗಲಭೆ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಕೀಯ ನಾಯಕರ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮದುವೆ ಮಾಡಲಿಲ್ಲ ಎಂಬ ಕಾರಣಕ್ಕೆ ತಂದೆಯನ್ನೇ ಕೊಂದ ಕಿರಾತಕ ಮಗ!

0

ಚಿತ್ರದುರ್ಗ: ಮದುವೆ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಮಗನೊಬ್ಬ ತನ್ನ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಅತ್ತಿಘಟ್ಟ ಗ್ರಾಮದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಅತ್ತಿಘಟ್ಟ ಗ್ರಾಮದ ಸಣ್ಣ ನಿಂಗಪ್ಪ ಎಂದು ಗುರುತಿಸಲಾಗಿದೆ. ಪುತ್ರ ಲಿಂಗರಾಜ್ ಆರೋಪಿಯಾಗಿದ್ದಾನೆ. ವಯಸ್ಸಾಗಿದ್ದು ಕೂಡ ಮದುವೆ ಮಾಡಿಕೊಡುತ್ತಿಲ್ಲ ಎಂದು ತಂದೆಯ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದನು ಎಂದು ತಿಳಿದು ಬಂದಿದೆ.

ಇದೇ ವೇಳೆ ತಂದೆ ಮನೆಯಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ವಿಚಾರಕ್ಕೂ ಲಿಂಗರಾಜ್ ಕೋಪಗೊಂಡಿದ್ದ. ಈ ಎರಡೂ ವಿಚಾರಗಳ ಕುರಿತು ತಂದೆ–ಮಗನ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಲಿಂಗರಾಜ್ ಕಬ್ಬಿಣದ ರಾಡಿನಿಂದ ತಂದೆಯ ತಲೆಗೆ ಹೊಡೆದು ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ.

ತೀವ್ರವಾಗಿ ಗಾಯಗೊಂಡ ಸಣ್ಣ ನಿಂಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತ ಲಿಂಗರಾಜ್‌ನನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

error: Content is protected !!