Home Blog Page 212

ಮಾನವ ಹಕ್ಕುಗಳ ಉಲ್ಲಂಘನೆಯಾಗಬಾರದು: ಟಿ. ಶಾಮ್ ಭಟ್

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶಾಮ್ ಭಟ್ ಅವರು ಮಂಗಳವಾರ ಇನಾಂವೀರಾಪುರ ಗ್ರಾಮಕ್ಕೆ ಭೇಟಿ ನೀಡಿ, ದಲಿತ ಕುಟುಂಬದ ಮೇಲೆ ಆಗಿರುವ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ವಾಸ್ತವಿಕ ಪರಿಸ್ಥಿತಿಯನ್ನು ಅವಲೋಕಿಸಿದರು.

ದಲಿತ ಕುಟುಂಬಗಳು ವಾಸಿಸುವ ಓಣಿ, ದೌರ್ಜನ್ಯಕ್ಕೆ ಒಳಗಾದ ವಿವೇಕಾನಂದ ಅವರ ಮನೆ, ಕೃತ್ಯ ನಡೆದ ಸ್ಥಳ ಪರಿಶೀಲಿಸಿ, ಸ್ಥಳೀಯ ನಿವಾಸಿಗಳಿಂದ, ಪೊಲೀಸ್ ಅಧಿಕಾರಿಗಳಿಂದ ಹಾಗೂ ಇತರರಿಂದ ವಿವರವಾದ ಮಾಹಿತಿಯನ್ನು ಅವರು ಪಡೆದುಕೊಂಡರು.

ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಯೋಗದಿಂದ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಮತ್ತು ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಟಿ. ಶಾಮ್ ಭಟ್ ಹೇಳಿದರು.

ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಅವಕಾಶವಿಲ್ಲ ಎಂಬುದನ್ನು ಎಲ್ಲರೂ ಮನಗಂಡು, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ದಲಿತ ಕುಟುಂಬಗಳಿಗೆ ಅಗತ್ಯ ಭದ್ರತೆ ಒದಗಿಸುವುದು, ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಸದುಪಯೋಗ ದೊರಕುವಂತೆ ನೋಡಿಕೊಳ್ಳುವುದು ಹಾಗೂ ಘಟನೆಗೆ ಸಂಬಂಧಿಸಿದಂತೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ. ವಂಟಿಗೊಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಡಿವೈಎಸ್‌ಪಿ ವಿನೋದ ಮುಕ್ತೆದಾರ, ತಹಸೀಲ್ದಾರ ಜಿ.ಆರ್. ಮಜ್ಜಗಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣನವರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ, ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ, ತಾಲೂಕಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅತೀಕಾ ಸಿದ್ದಿ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವೇಕಾನಂದ ದೊಡಮನಿ ಕುಟುಂಬದ ಸದಸ್ಯರು ಇದ್ದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಜಿಲ್ಲಾಡಳಿತದಿಂದ ಈಗಾಗಲೇ ಸರ್ಕಾರಕ್ಕೆ ಇನಾಂವೀರಾಪುರ ಗ್ರಾಮದ ಪ್ರಕರಣದ ಕುರಿತು ತನಿಖೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸಲು, ದೌರ್ಜನ್ಯಕ್ಕೆ ಒಳಗಾದ ಕುಟುಂಬದ ಪರವಾಗಿ ವಿಶೇಷ ಅಭಿಯೋಜಕರನ್ನು ನೇಮಿಸಲು ಮತ್ತು ಸದರಿ ಕುಟುಂಬಕ್ಕೆ ವಿಶೇಷ ಪರಿಹಾರ ನೀಡುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಪ್ರಸ್ತಾವನೆ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಎಂದು ಹೇಳಿದರು.

ರಕ್ತದಾನ ಎಲ್ಲ ದಾನಕ್ಕಿಂತಲೂ ಶ್ರೇಷ್ಠ: ಶ್ರೀ ಗಂಗಾಧರ ಮಹಾಸ್ವಾಮೀಜಿ 

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜೀವ ಉಳಿಸುವ ಮಹಾನ್ ಕಾರ್ಯವಾಗಿರುವ ರಕ್ತದಾನ ಎಲ್ಲ ದಾನಕ್ಕಿಂತಲೂ ಶ್ರೇಷ್ಠ ಎಂದು ಕೊತಬಾಳ ಶ್ರೀ ಗಂಗಾಧರ ಮಹಾಸ್ವಾಮೀಜಿ ಹೇಳಿದರು.

ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾರತೀಯ ರೆಡ್‌ಕ್ರಾಸ್ ಕೊಪ್ಪಳ ಶಾಖೆ, ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾತ್ರೆಗಳಲ್ಲಿ ಇಂಥಹ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಈ ಕಾರ್ಯ ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಪ್ರತಿ ವರ್ಷ ನೂರಾರು ಜನರು ರಕ್ತದಾನ ಮಾಡುತ್ತಾರೆ. ಅದು ಹಲವರ ಜೀವ ಉಳಿಸಲು ಕಾರಣವಾಗುತ್ತದೆ ಎಂದರು.

ಇಟಗಿಯ ಶ್ರೀ ಗುರುಶಾಂತವೀರ ಮಹಾಸ್ವಾಮೀಜಿ ಮಾತನಾಡಿ, ರಕ್ತದಾನ ಎಲ್ಲ ದಾನಕ್ಕಿಂತಲೂ ಶ್ರೇಷ್ಠ ಕಾರ್ಯವಾಗಿದೆ. ಅರ್ಹ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯದಲ್ಲಿ ತೊಡಗಬೇಕಾಗಿದೆ. ಇದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದರು.

ಅಭಿನವ ನಾಗಲಿಂಗ ಅವಧೂತರು, ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ, ಶ್ರೀ ಬಸವಭೂಷಣ ಸ್ವಾಮೀಜಿ, ಶ್ರೀ ಯಶವಂತದೇವರು ಸ್ವಾಮೀಜಿ, ಶ್ರೀ ಬ್ರಹ್ಮಾನಂದ ಸ್ವಾಮಿಜಿಗಳು ಸಾನ್ನಿಧ್ಯ ವಹಿಸಿದ್ದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಯ ಉಪಸಭಾಪತಿ ಡಾ. ಶ್ರೀನಿವಾಸ ಹ್ಯಾಟಿ, ಕೊಪ್ಪಳ ಶಾಖೆಯ ಸಭಾಪತಿ ಸೋಮರಡ್ಡಿ ಅಳವಂಡಿ, ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಮಹಾಂತೇಶ ಸಾಲಿಮಠ, ಉಪಸಭಾಪತಿಗಳಾದ ಡಾ. ಸಿ.ಎಸ್. ಕರಮುಡಿ, ಡಾ. ಮಂಜುನಾಥ, ನಿರ್ದೇಶಕರಾದ ಡಾ. ಶಿವನನಗೌಡ, ಡಾ. ಗವಿಸಿದ್ದನಗೌಡ, ರಾಜೇಶ ಯಾವಗಲ್, ಡಾ. ಸುರೇಶ ಹಕ್ಕಂಡಿ, ಡಾ. ಪರಮೇಶ್ವರ ಮೊದಲಾದವರು ಇದ್ದರು.

ಮನುಷ್ಯನಿಗೆ ಧರ್ಮ ಪರಿಪಾಲನೆ ಮುಖ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

0

ವಿಜಯಸಾಕ್ಷಿ ಸುದ್ದಿ, ಅಜ್ಜಂಪುರ: ಮಾನವ ಜನಾಂಗಕ್ಕೆ ದೇವರು ಕೊಟ್ಟ ಕೊಡುಗೆ ಅಪಾರ. ನಿಂತ ನೆಲ, ಹರಿಯುವ ನೀರು, ತಿನ್ನುವ ಅನ್ನ, ಉಸಿರಾಡುವ ಗಾಳಿ ಇವೆಲ್ಲಾ ದೇವರ ಕೊಡುಗೆ. ಅನ್ನ-ನೀರಿನಷ್ಟೇ ಮನುಷ್ಯನಿಗೆ ಧರ್ಮ ಪರಿಪಾಲನೆಯ ಅವಶ್ಯಕತೆ ಇದೆ. ಮನುಷ್ಯ ಹಲವಾರು ವ್ಯಸನಗಳಿಗೆ ಈಡಾಗಿ ಸಂಕಷ್ಟಕ್ಕೀಡಾಗುತ್ತಿದ್ದಾನೆ. ದುರ್ವ್ಯಸನಗಳಿಂದ ಹಲವಾರು ಕುಟುಂಬಗಳು ಬೀದಿಗೆ ಬರುತ್ತಿವೆ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನರಲ್ಲಿ ಜಾಗೃತಿ ಮತ್ತು ಧರ್ಮ ಪ್ರಜ್ಞೆ ಮೂಡಿಸುವ ಅಗತ್ಯವಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಮಂಗಳವಾರ ತಾಲೂಕಿನ ಬುಕ್ಕಾಂಬುಧಿ ಗ್ರಾಮದ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಬೆಟ್ಟದವರೆಗೆ ಪ್ರಾರಂಭಗೊಂಡ ಪರಮ ತಪಸ್ವಿ ಲಿಂ.ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಬೆಳ್ಳಿ ಪುತ್ಥಳಿ ಮೆರವಣಿಗೆ ಸಂದರ್ಭದಲ್ಲಿ ಶ್ರೀ ಉಜ್ಜಯಿನಿ, ಶ್ರೀ ಕಾಶೀ ಜಗದ್ಗುರುಗಳವರು ಪಾಲ್ಗೊಂಡು ಪುಷ್ಪಾರ್ಚನೆಗೈದು ಚಾಲನೆಯಿತ್ತು ಲಿಖಿತ ಆಶೀರ್ವಚನ ನೀಡಿದರು.

ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಎಲ್ಲರೂ ಸುಖ ಬಯಸುವರೇ ವಿನಃ ಕಷ್ಟ ಯಾರಿಗೂ ಬೇಕಾಗಿಲ್ಲ. ಹೊರಗೆ ಬಡತನವಿದ್ದು, ಒಳಗೆ ಸಿರಿತನ ಇದ್ದರೆ ಬದುಕು ಬಲು ಸುಂದರ. ಹೊರಗೆ ಸಿರಿತನವಿದ್ದು ಒಳಗೆ ಬಡತನ ಇದ್ದರೆ ಬದುಕಿನ ಬಂಡಿ ಸುಗಮವಾಗಿ ಸಾಗದು. ಹೃದಯ ಶ್ರೀಮಂತಿಕೆಯಿಲ್ಲದೇ ಬುದ್ಧಿ ಶ್ರೀಮಂತಿಕೆ ಎಷ್ಟಿದ್ದರೂ ಪ್ರಯೋಜನವಿಲ್ಲ. ನೀರು ಎರೆದವರಿಗೂ ಕಡಿಯ ಬಂದವರಿಗೂ ಭೇದ-ಭಾವ ಎಣಿಸದೇ ವೃಕ್ಷವು ನೆರಳು, ಹಣ್ಣು ಕೊಡುತ್ತದೆ. ಅದರಂತೆ ಮಹಾತ್ಮರು ಯಾರಿಗೂ ಕೆಡಕು ಬಯಸದೇ ಹಿತವನ್ನೇ ಬಯಸಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ ಶ್ರೀಮತ್ಕಾಶೀ ಡಾ.ಚಂದ್ರಶೇಖರ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ, ಒಳ್ಳೆಯದು ಉಳಿಯಬೇಕಾದರೆ ಕೆಟ್ಟದ್ದರ ಜೊತೆ ಹೋರಾಟ ಅನಿವಾರ್ಯ. ಸತ್ಯಕ್ಕಿಂತ ದೊಡ್ಡ ಧರ್ಮ ಇನ್ನೊಂದಿಲ್ಲ. ಸತ್ಯ ಧರ್ಮದ ರಕ್ಷಾ ಕವಚ. ಸುಳ್ಳಿಗೆ ಸುಣ್ಣ-ಬಣ್ಣ ಹಚ್ಚಬಹುದು. ನೈಜ ಸತ್ಯಕ್ಕೆ ಅದ್ಯಾವುದರ ಅವಶ್ಯಕತೆಯಿಲ್ಲ. ಬದುಕಿನ ಯಶಸ್ವಿಗಾಗಿ ಲೌಕಿಕ ಜ್ಞಾನ ಹೇಗೆ ಅಗತ್ಯವೋ ಹಾಗೆಯೇ ನೊಂದ ಮನಕ್ಕೆ ಆಧ್ಯಾತ್ಮಿಕ ಜ್ಞಾನ ಅವಶ್ಯಕವಾಗಿದೆ ಎಂದರು.

ನೇತೃತ್ವ ವಹಿಸಿದ ಎಡೆಯೂರು ಕ್ಷೇತ್ರ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸ್ನೇಹ, ಸಂತೃಪ್ತಿ ಮತ್ತು ಸಂತೋಷಗಳೇ ಜೀವನದ ನಿಜವಾದ ಐಶ್ವರ್ಯ. ದುರ್ಜನರ ಸಹವಾಸದಿಂದ ದೂರವಿದ್ದು ಸಜ್ಜನರ ಸಹವಾಸ ಮಾಡುವುದು ಶ್ರೇಯಸ್ಕರ ಎಂದರು.

ಇದೇ ಸಂದರ್ಭದಲ್ಲಿ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಕಾಶೀ ಜಗದ್ಗುರುಗಳವರು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನರಲ್ಲಿ ಜಾಗೃತಿ ಮತ್ತು ಧರ್ಮ ಪ್ರಜ್ಞೆ ಮೂಡಿಸಬೇಕೆಂಬ ಸಂಕಲ್ಪದೊಂದಿಗೆ ಪಾದಯಾತ್ರೆ ನಡೆಸಿದರು. ಅಖಿಲ ಭಾರತ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಸಿಂದಗಿ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಶಿವಾಚಾರ್ಯರು, ಹುಲಿಕೆರೆ ವಿರೂಪಾಕ್ಷಲಿಂಗ ಶಿವಾಚಾರ್ಯರು ಸೇರಿದಂತೆ ಸಿದ್ಧರಬೆಟ್ಟ, ಹುಣಸಘಟ್ಟ, ನಂದೀಪುರ, ಮಳಲಿ, ಹಣ್ಣೆ, ಕೆ.ಬಿದರೆ, ಅಂಬಲದೇವರಹಳ್ಳಿ, ಬೀರೂರು ಮೊದಲಾದ ಶ್ರೀಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಸಾನ್ನಿಧ್ಯ ವಹಿಸಿದ ಇಂದಿನ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ, ಸಂಪತ್ತಿನಿಂದ ಸಿಗುವ ಸುಖ ಸೌಕರ್ಯಗಳು ಬೇಕು. ಅವುಗಳನ್ನು ಪಡೆಯಲು ಶ್ರಮ ಮತ್ತು ಸಾಧನೆ ಬೇಡವಾಗಿದೆ. ಅಧರ್ಮ ದಾರಿಯಲ್ಲಿ ನೂರು ಹೆಜ್ಜೆ ಹಾಕುವುದಕ್ಕಿಂತ ನ್ಯಾಯ ನೀತಿ ಧರ್ಮ ಮಾರ್ಗದಲ್ಲಿ ನಡೆದು ತೋರಿದ ಮಹಾತ್ಮರ ದಾರಿಯಲ್ಲಿ ನಡೆದರೆ ಒಳ್ಳೆಯದು. ಲಿಂ.ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಶಿವಯೋಗ ಸಾಧನೆ ಮಾಡಿದ ತಪಸ್ಸು ಮತ್ತು ಬೋಧಿಸಿದ ಚಿಂತನಗಳು ಎಂದೆಂದಿಗೂ ನಮ್ಮೆಲ್ಲರಿಗೂ ದಾರಿದೀಪವೆಂದರು.

ಲವ್ ಮ್ಯಾರೇಜ್ ಗೆ ವಿರೋಧ; ನಡುರಸ್ತೆಯಲ್ಲೇ ನವ ಜೋಡಿ ಮೇಲೆ ಯುವತಿ ಕುಟುಂಬಸ್ಥರಿಂದ ಅಟ್ಯಾಕ್..!

0

ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ನಗರದ ಮಯೂರಾ ಸರ್ಕಲ್ ಬಳಿ ಪ್ರೀತಿಸಿ ಮದುವೆಯಾಗಿದ್ದ ನವದಂಪತಿಗಳ ಮೇಲೆ ಯುವತಿ ಕುಟುಂಬದವರು ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಬಳ್ಳಾಪುರ ಮೂಲದ ಎಸ್‌ಟಿ ಸಮುದಾಯದ ಸಂದೀಪ್ (24) ಮತ್ತು ಬಲಿಜಿಗ ಸಮುದಾಯದ ಕೀರ್ತನಾ (19) ಕಳೆದ ಒಂದು ವರ್ಷದಿಂದ ಪ್ರೀತಿಯಲ್ಲಿದ್ದರು. ಇವರು ಎರಡು ದಿನದ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಮನೆಯಲ್ಲಿ ಮಗಳು ಕಾಣದಿರುವ ಸಂಬಂಧ ಕೀರ್ತನ ಪೋಷಕರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.

ಅದರಂತೆ ರಕ್ಷಣೆ ಕೋರಿ ಇಂದು ಪೊಲೀಸ್ ಠಾಣೆಗೆ ನವದಂಪತಿ ಬರುತ್ತಿದ್ದ ವೇಳೆ ಕಾರಿನ ಮೇಲೆ ಯುವತಿ ಕುಟುಂಬಸ್ಥರು ಅಟ್ಯಾಕ್‌ ಮಾಡಿದ್ದಾರೆ. ಪರಿಣಾಮ ಕಾರಿನ‌ ಗಾಜು ಪುಡಿಪುಡಿಯಾಗಿದೆ. ಪೊಲೀಸರ ಮುಂದೆ ಮಗಳನ್ನ ವಾಪಸ್‌ ಕಳುಹಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಆದರೆ ಯುವತಿ ನಾನು ಯಾವುದೇ ಕಾರಣಕ್ಕೂ ತಂದೆ-ತಾಯಿ ಜೊತೆ ಹೋಗಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾಳೆ. ಇದೀಗ ಚಿಕ್ಕಬಳ್ಳಾಪುರದ ಮಹಿಳಾ ಠಾಣೆಯಲ್ಲಿ ಕೇಸ್‌ ದಾಖಲಾಗಿದ್ದು, ಎರಡು ಕುಟುಂಬಸ್ಥರು ತಮಗೆ ನ್ಯಾಯ ನೀಡುವಂತೆ ಆಗ್ರಹಿಸಿದ್ದಾರೆ.

ಮರಕ್ಕೆ ಬೊಲೆರೊ ವಾಹನ ಡಿಕ್ಕಿ; ನಾಲ್ವರು ಕಾರ್ಮಿಕರು ಸಾವು

0

ಚಿತ್ರದುರ್ಗ:- ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಂದನೂರು ಬಳಿ ಮರಕ್ಕೆ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವಂತಹ ಘಟನೆ ಜರುಗಿದೆ.

ಮೃತರನ್ನು ಕಿರಣ್(25), ಅರುಣ್(32), ಹನುಮಂತ(32) ಮತ್ತು ಗಿರಿರಾಜ್(46) ಎಂದು ಗುರುತಿಸಲಾಗಿದೆ. ಇನ್ನುಳಿದ ನಾಲ್ವರು ಕಾರ್ಮಿಕರಿಗೆ ಗಾಯಗಳಾಗಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ದಾವಣಗೆರೆ ತಾಲೂಕಿನ ಅಣಜಿ ಗ್ರಾಮದಲ್ಲಿ ಅಡಕೆ ಲೋಡ್​​ ಇಳಿಸಿ ಕಾರ್ಮಿಕರು ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ದುರಂತದಲ್ಲಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ದಾವಣಗೆರೆ ಆಸ್ಪತ್ರೆಯಲ್ಲಿ ಮತ್ತಿಬ್ಬರು ಕಾರ್ಮಿಕರು ಕೊನೆಯುಸಿರೆಳೆದಿದ್ದಾರೆ. ಮೃತ ಕಾರ್ಮಿಕರು ಕಲ್ಲವ್ವ ನಾಗತಿಹಳ್ಳಿ ಗ್ರಾಮದವರು ಎನ್ನಲಾಗಿದೆ.

ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕುಸ್ತಿಯಿಂದ ದೈಹಿಕ, ಮಾನಸಿಕ ಸಮತೋಲನ: ನಾಗವೇಣಿ 

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಜಾತ್ರೆ ಕೇವಲ ಧಾರ್ಮಿಕ ಜಾತ್ರೆಯಾಗಿರದೇ ಹಲವು ಸಾಂಸ್ಕೃತಿಕ, ಸಾಮಾಜಿಕ ಮತ್ತು ಕ್ರೀಡೆಗಳನ್ನು ಆಯೋಜನೆ ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ, ಕ್ರೀಡಾಸಕ್ತರಲ್ಲಿ, ಜಾತ್ರೆಗೆ ಬಂದ ಭಕ್ತಾಧಿಗಳಲ್ಲಿ ಮನರಂಜನೆ ಒದಗಿಸುವ ಸೇವಾ ಕಾರ್ಯವನ್ನು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಗವಿಮಠದ ಆವರಣದಲ್ಲಿ ಆಹ್ವಾನಿತ ಪುರುಷ ಹಾಗೂ ಮಹಿಳಾ ಕುಸ್ತಿ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿತ್ತು.

ಕುಸ್ತಿ ಪಂದ್ಯಾವಳಿಗಳನ್ನು ಉದ್ಘಾಟಿಸಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ನಾಗವೇಣಿ ಮಾತನಾಡಿ, ಕುಸ್ತಿ ಕ್ರೀಡೆಯು ಪುರಾತನ ಕ್ರೀಡೆಯಾಗಿದ್ದು, ಇದು ಒಂದು ದೇಹದಾರ್ಢ್ಯ ಚಟುವಟಿಕೆಯಾಗಿದೆ. ಈ ಕ್ರೀಡೆಯು ಪ್ರತಿಯೊಬ್ಬ ವ್ಯಕ್ತಿಯಲ್ಲಿ ದೈಹಿಕ ಹಾಗೂ ಮಾನಸಿಕ ಸಮತೋಲನ ಬೆಳವಣಿಗೆಗೆ ಸಹಕಾರಿಯಾಗುವುದರ ಮೂಲಕ ಸದೃಢ ವ್ಯಕ್ತಿಯನ್ನಾಗಿ ನಿರ್ಮಾಣ ಮಾಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದರು.

ಭಾಗವಹಿಸಿದ ಪುರುಷರ ವಿಭಾಗದಲ್ಲಿ ಆಹ್ವಾನಿತ 16 ತಂಡಗಳಲ್ಲಿ ಪ್ರಥಮ ಪಂದ್ಯದಲ್ಲಿ ಅಭಿ ಹನುಮನಹಳ್ಳಿ ಪ್ರಥಮ, ತಾಯಪ್ಪ ಹೊಸಪೇಟೆ ದ್ವಿತೀಯ, ದ್ವಿತೀಯ ಪಂದ್ಯದಲ್ಲಿ ಪ್ರಜ್ವಲ್ ಹಂಪಿಕಟ್ಟಿ ಪ್ರಥಮ, ಮೌಲಾ ಗಂಗಾವತಿ ದ್ವಿತೀಯ, ತೃತೀಯ ಪಂದ್ಯದಲ್ಲಿ ಪರಶುರಾಮ ಹೊಸಪೇಟೆ ಪ್ರಥಮ, ಮಹೇಂದ್ರ ಅಗ್ರಿಬೊಮ್ಮನಹಳ್ಳಿ ದ್ವಿತೀಯ, ಚತುರ್ಥ ಪಂದ್ಯದಲ್ಲಿ ಹರೀಶ್ ಹೊಸಪೇಟೆ ಪ್ರಥಮ, ಅಲ್ತಾಫ್ ಹಗರಿಬೊಮ್ಮನಹಳ್ಳಿ ದ್ವಿತೀಯ, ಐದನೇ ಪಂದ್ಯದಲ್ಲಿ ರಮೇಶ್ ಹೊಸಪೇಟೆ ಪ್ರಥಮ, ಎಚ್.ಬಿ. ಹಳ್ಳಿ ಇರ್ಫಾನ್ ದ್ವಿತೀಯ, ಆರನೇ ಪಂದ್ಯದಲ್ಲಿ ಇರ್ಫಾನ್ ಹೆಚ್.ಬಿ. ಹಳ್ಳಿ ಪ್ರಥಮ, ಕೀರ್ತಿ ಹೊಸಪೇಟೆ ದ್ವಿತೀಯ, ಏಳನೇ ಪಂದ್ಯದಲ್ಲಿ ಹುಲ್ಕಜ್ಜಿ ಎಚ್.ಬಿ. ಹಳ್ಳಿ ಪ್ರಥಮ, ಅಲ್ತಾಫ್ ಕೊಪ್ಪಳ ದ್ವಿತೀಯ, ಎಂಟನೇ ಪಂದ್ಯದಲ್ಲಿ ಗಂಗಾಧರ್ ಹೆಚ್.ಬಿ. ಹಳ್ಳಿ ಪ್ರಥಮ, ಸುರೇಶ್ ಬೆಳಗಾವಿ ದ್ವಿತೀಯ, ಒಂಬತ್ತನೇ ಪಂದ್ಯದಲ್ಲಿ ಸಚಿನ್ ಮೌಲಿ ಪ್ರಥಮ, ಮಹೇಶ್ ಶರಣಯ್ಯ ಗುಲ್ಬರ್ಗಾ ದ್ವಿತೀಯ, ಹತ್ತನೇ ಪಂದ್ಯದಲ್ಲಿ ಯೋಗೇಶ್ ಪೈ ಪ್ರಥಮ, ಶ್ರೀಕಾಂತ್ ದ್ವಿತೀಯ, ಹನ್ನೋಂದನೇ ಪಂದ್ಯದಲ್ಲಿ ಅಮರೇಶ್ ಗುಲ್ಬರ್ಗ ಪ್ರಥಮ, ಶ್ರೀ ಪವರ್ ದ್ವಿತೀಯ, ಹನ್ನರಡನೇ ಪಂದ್ಯದಲ್ಲಿ ಹನುಮಂತ್ ಅರಸಿಕೆರೆ ಪ್ರಥಮ, ಮಂಜುನಾಥ್ ಹೊಸಪೇಟೆ ದ್ವಿತೀಯ, ಹದಿಮೂರನೇ ಪಂದ್ಯದಲ್ಲಿ ಕೆಂಚಪ್ಪ ಹರಪನಹಳ್ಳಿ ಪ್ರಥಮ, ಬಾಬುರಾವ್ ಕೊಲ್ಲಾಪುರ ದ್ವಿತೀಯ, ಹದಿನಾಲ್ಕನೇ ಪಂದ್ಯದಲ್ಲಿ ಬಸವರಾಜ ಪಾಟೀಲ್ ಪ್ರಥಮ, ಪಪ್ಪು ಕೊಲ್ಲಾಪುರ ದ್ವಿತೀಯ, ಹದಿನೈದನೇ ಪಂದ್ಯದಲ್ಲಿ ಹನುಮಂತ ಮರಿಯಮ್ಮನಹಳ್ಳಿ ಪ್ರಥಮ, ಬಾಲಾಜಿ ಪಾಟೀಲ್ ದ್ವಿತೀಯ, ಹದಿನಾರನೇ ಪಂದ್ಯದಲ್ಲಿ ಕಾರ್ತಿಕ್ ಕಾಟಿ ರಾಣೆಬೆನ್ನೂರು ಪ್ರಥಮ, ಸತೀಶ್ ಮಹಾರಾಷ್ಟ್ರ ದ್ವಿತೀಯ ಸ್ಥಾನ ಪಡೆದರು.

ಪಂದ್ಯಾವಳಿಯಲ್ಲಿ ದೈಹಿಕ ನಿರ್ದೇಶಕರಾದ ಜಯರಾಮ ಮರಡಿತೋಟದ, ಮಂಜುನಾಥ ಆರೆಂಟನೂರ, ಈಶಪ್ಪ ದೊಡ್ಡಮನಿ, ವಿನೋದ ಮುದಿಬಸನಗೌಡ್ರ, ದೈಹಿಕ ಶಿಕ್ಷಕರಾದ ರಾಜು ಮಗಿಮಾವಿನಹಳ್ಳಿ ಹಾಗೂ ರಾಜು ಎಸ್ ಭಾಗವಹಿಸಿದ್ದರು. ಪಂದ್ಯಗಳ ರೆಫರಿಯಾಗಿ ಸಣ್ಣದುರುಗಪ್ಪ ಹಾಗೂ ಈರಣ್ಣ ಈಮ್ಮಡಿಯವರ ಕಾರ್ಯನಿರ್ವಹಿಸಿದರು.

ಮಹಿಳಾ ವಿಭಾಗದಲ್ಲಿ ಆಹ್ವಾನಿತ 8 ತಂಡಗಳಲ್ಲಿ ಪ್ರಥಮ ಪಂದ್ಯದಲ್ಲಿ ಗದಗನ ಐಶ್ವರ್ಯ ಪ್ರಥಮ, ದ್ವಿತೀಯ ಪಂದ್ಯದಲ್ಲಿ ಕುಕನೂರಿನ ಅರಿಫಾ ಪ್ರಥಮ, ತೃತೀಯ ಪಂದ್ಯದಲ್ಲಿ ಹೋಸಪೇಟೆಯ ಸಿಂಧೂ ಪ್ರಥಮ, ಚತುರ್ಥ ಪಂದ್ಯದಲ್ಲಿ ಹೊಸಪೇಟೆಯ ಕವಿತಾ ಪ್ರಥಮ, ಐದನೇ ಪಂದ್ಯದಲ್ಲಿ ಜಲಜಾಕ್ಷಿ ಪ್ರಥಮ, ಆರನೇ ಪಂದ್ಯದಲ್ಲಿ ಶಿವಮೊಗ್ಗದ ಸಾತಿಯಾ ಪ್ರಥಮ, ಏಳನೇ ಪಂದ್ಯದಲ್ಲಿ ಗದಗನ ವೈಷ್ಣವಿ ಪ್ರಥಮ, ಎಂಟನೇ ಪಂದ್ಯದಲ್ಲಿ ಕಂಪ್ಲಿಯ ಬಿಂದಿಯಾ ಪ್ರಥಮ ಪಡೆದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ: ಸೈಯದ್ ಅಜಂಪೀರ ಖಾದ್ರೀ

0

ವಿಜಯಸಾಕ್ಷಿ ಸುದ್ದಿ, ರೋಣ: ದೇಶದಲ್ಲಿ ಮುಸ್ಲಿಮರು ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಹಿಂದಿದ್ದಾರೆ. ಹೀಗಾಗಿ ಮುಸ್ಲಿಮರು ಹೊತ್ತಿನ ಊಟ ಬಿಟ್ಟರೂ ಚಿಂತೆಯಿಲ್ಲ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಹಿಂದೆ ಬೀಳಬಾರದು ಎಂದು ಮಾಜಿ ಶಾಸಕ ಹಾಗೂ ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮದ ಅಧ್ಯಕ್ಷ ಸೈಯದ್ ಅಜಂಪೀರ ಖಾದ್ರೀ ಹೇಳಿದರು.

ಅವರು ಮಂಗಳವಾರ ಪಟ್ಟಣದ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಪಬ್ಲಿಕ್ ಶಾಲೆಯ ವಾರ್ಷಿಕ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಮಕ್ಕಳು ಅಕ್ಷರ ಜ್ಞಾನದಿಂದ ವಂಚಿತರಾಗದಂತೆ ಸಮುದಾಯದ ಪಾಲಕರು ಎಚ್ಚರಿಕೆ ವಹಿಸಬೇಕು. ಮಕ್ಕಳ ಉನ್ನತಿ ಮತ್ತು ಸಮಾಜದ ಪ್ರಗತಿ ಶಿಕ್ಷಣದಿಂದ ಮಾತ್ರ ಎನ್ನುವುದನ್ನು ನಾವೆಲ್ಲರೂ ಅರಿಯಬೇಕಿದೆ. ಸಮಾಜದ ಬಂಧುಗಳು ಬಡತನದಿಂದ ಹೊರಬರಲು ಶಿಕ್ಷಣ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಸಮಾಜ ಯೋಚಿಸಬೇಕಿದೆ. ಇಂದಿನ ಮಕ್ಕಳು ನಾಳೆಯ ಉತ್ತಮ ಪ್ರಜೆಗಳಾಗಲಿದ್ದಾರೆ ಎಂದರು.

ಸಮಾಜದ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಶಿಕ್ಷಕರ ಹಾಗೂ ಪಾಲಕರ ಆದ್ಯ ಕರ್ತವ್ಯ. ಮಕ್ಕಳಿಗೆ ಒಳ್ಳೆಯ ಹಾಗೂ ಕೆಟ್ಟ ಸಂಗತಿಗಳ ಬಗ್ಗೆ ತಿಳಿಸುವುದು ಕೂಡ ಇಂದಿನ ದಿನಮಾನಕ್ಕೆ ಅಗತ್ಯವಾಗಿದೆ. ನಾವು ಬಡತನದಲ್ಲಿ ಹುಟ್ಟಿರಬಹುದು. ಆದರೆ ನಮ್ಮ ಮಕ್ಕಳು ನಮ್ಮಂತೆ ಬಡವರಾಗಿ ಉಳಿಯಬಾರದು ಎಂಬ ಚಿಂತನೆ ಪಾಲಕರಲ್ಲಿ ಬರಬೇಕು. ಮುಸ್ಲಿಮರಲ್ಲಿ ದಾನ ಮಾಡುವುದು ಕಡ್ಡಾಯ. ಹಾಗೆಯೇ, ಮಕ್ಕಳಿಗೆ ಅಕ್ಷರದ ದಾನ ಮಾಡುವುದು ಕೂಡ ಕಡ್ಡಾಯ. ಅಂದಾಗ ಮಾತ್ರ ಓರ್ವ ಮುಸ್ಲಿಮನಿಗೆ ಸ್ವರ್ಗ ಸಿಗಲು ಸಾಧ್ಯ ಎಂಬ ಸತ್ಯವನ್ನು ನಾವು ತಿಳಿದುಕೊಳ್ಳಬೇಕು. ಸಮಾಜ ಮತ್ತಷ್ಟು ಪ್ರಗತಿಯತ್ತ ಸಾಗಲು ಅಕ್ಷರ ಜ್ಞಾನ ಬೇಕು. ಅಂದಾಗ ಸಮಾಜದ ಮಕ್ಕಳು ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.

ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿ, ಸಾಚಾರ್ ವರದಿ ಪ್ರಕಾರ ಮುಸ್ಲಿಂ ಬಂಧುಗಳು ಶಿಕ್ಷಣದಿಂದ ತೀರಾ ಹಿಂದುಳಿದಿರುವುದು ಕಂಡು ಬರುತ್ತದೆ. ಹೀಗಾಗಿ ಸಮಾಜದ ಬಂಧುಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕಳೆದ ವರ್ಷ 52 ವಿದ್ಯಾರ್ಥಿಗಳಿಂದ ಆರಂಭಗೊಂಡ ಶಾಲೆ 2ನೇ ವರ್ಷಕ್ಕೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆಯೆಂದರೆ ಪಬ್ಲಿಕ್ ಶಾಲೆಯ ಗುಣಮಟ್ಟದ ಶಿಕ್ಷಣ ಕಾರಣ. ಮುಖ್ಯವಾಗಿ ಇಂದಿನ ವಿಜ್ಞಾನ ವಸ್ತುಪ್ರದರ್ಶನ ಬೆಳದು ನಿಂತ ಶಾಲೆಗಳಿಗೆ ಸವಾಲ್ ಹಾಕುವಂತಿತ್ತು. ಅಷ್ಟರ ಮಟ್ಟಿಗೆ ನಮಗೆ ಖುಷಿ ತಂದಿದೆ ಎಂದ ಅವರು, ಶಾಲೆಯ ಬೆಳವಣಿಗೆಯಲ್ಲಿ ನಮ್ಮ ಮನೆತನ ಸದಾ ಇರಲಿದೆ ಎಂದರು.

ಬಾವಾಸಾಬ ಬೆಟಗೇರಿ ಅಧ್ಯಕ್ಷತೆ ವಹಿಸಿದ್ದರು. ಯೂಸುಫ್ ಇಟಗಿ, ಖಲೀಲ ರಾಮದುರ್ಗ, ಪೈಜಹ್ಮದ ಕಲಾದಗಿ, ಅಬ್ದುಲ್‌ಲತೀಫ್ ಖತೀಬ, ದಸ್ತಗೀರ ಗಡವಾಲೆ, ಇಮಾಮಸಾಬ ದರಗಾದ, ಬಾಷಾಸಾಬ ಚಿನ್ನೂರ, ಮಲೀಕ ಯಲಿಗಾರ, ಅಸ್ಲಾಂ ಕೊಪ್ಪಳ, ರಿಯಾಜ ಮುಲ್ಲಾ ಸೇರಿದಂತೆ ಅಂಜುಮನ್ ಕಮಿಟಿ ಪದಾಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಶಾಸಕ ಜಿ.ಎಸ್. ಪಾಟೀಲ ರಾಜ್ಯ ಕಂಡ ಅಪ್ರತಿಮ ನಾಯಕ. ಅವರ ಸೇವೆ ಸ್ಮರಣೀಯ. ಪಟ್ಟಣ ಸೇರಿದಂತೆ ಮತಕ್ಷೇತ್ರದ ಮುಸ್ಲಿಂ ಮಕ್ಕಳು ಇಂದು ವಿದ್ಯಾವಂತರಾಗಲು ಅವರು ಕೊಟ್ಟ ಕೊಡುಗೆ ಕಾರಣ ಎಂದು ಸಮಾಜದ ಹಿರಿಯರು ನನಗೆ ತಿಳಿಸಿದ್ದು ನನಗೆ ಬಹಳ ಸಂತಸ ತಂದಿದೆ.

  • ಸೈಯದ್ ಅಜಂಪೀರ ಖಾದ್ರೀ.
    ಅಧ್ಯಕ್ಷರು, ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮ.

ಬ್ಯಾನರ್ ಗಲಾಟೆ ಕೇಸ್; ಮೃತನ ಕುಟುಂಬಕ್ಕೆ 25 ಲಕ್ಷ ಹಣ ಕೊಟ್ಟ ಸಚಿವ ಜಮೀರ್ ವಿರುದ್ಧ ದೂರು!

0

ಬಳ್ಳಾರಿ:- ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯಲ್ಲಿ ಮೃತ ಯುವಕನ ಕುಟುಂಬಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ 25 ಲಕ್ಷ ರೂ. ನಗದು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಗೆ ದೂರು ನೀಡಲಾಗಿದೆ.

ಹಿಂದುಪರ ಕಾರ್ಯಕರ್ತ ತೇಜಸ್ ಗೌಡ ಅವರು ದೂರಿನಲ್ಲಿ, ಸಚಿವರು ನಗದು ನೀಡುವಾಗ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮ ಉಲ್ಲಂಘನೆ ನಡೆದಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಈ ಹಣದ ಮೂಲ ಮತ್ತು ವಿತರಣೆಯನ್ನು ಪರಿಶೀಲಿಸಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

25 ಲಕ್ಷ ರೂ. ಆರ್ಥಿಕ ನೆರವು ವಿತರಣೆ ನೀಡಿದ್ದ ಜಮೀರ್:

ಬಳ್ಳಾರಿ ನಗರದಲ್ಲಿ ಇತ್ತೀಚೆಗೆ ನಡೆದ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಗಲಭೆಯಲ್ಲಿ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಅವರ ಕುಟುಂಬಕ್ಕೆ ಬಳ್ಳಾರಿ ಉಸ್ತುವಾರಿ ಸಚಿವರೂ ಆಗಿರುವ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು 25 ಲಕ್ಷ ರೂ. ಆರ್ಥಿಕ ನೆರವು ವಿತರಣೆ ಮಾಡಿದ್ದರು. ಜೊತೆಗೆ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಡುವುದಾಗಿಯೂ ಭರವಸೆ ನೀಡಿದ್ದರು.

ಘಟನೆ ನಡೆದು ಎರಡು ದಿನಗಳ ಬಳಿಕ ಬಳ್ಳಾರಿಗೆ ಆಗಮಿಸಿದ ಜಮೀರ್ ಅಹಮದ್ ಖಾನ್ ಅವರು ನೇರವಾಗಿ, ಗಲಭೆಯಲ್ಲಿ ಮೃತಪಟ್ಟ ರಾಜಶೇಖರ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಹುಸೇನ್ ನಗರದಲ್ಲಿರುವ ಮೃತರ ಮನೆಗೆ ತೆರಳಿದ ಸಚಿವರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಲ್ಲದೆ, ತಮ್ಮ ವೈಯಕ್ತಿಕ ಖಾತೆಯಿಂದ 25 ಲಕ್ಷ ರೂಪಾಯಿಗಳ ಆರ್ಥಿಕ ನೆರವು ಹಸ್ತಾಂತರಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಹೆಚ್ಚುತ್ತಿದೆ: ಡಾ. ಈರಣ್ಣ ಹಳೇಮನಿ

0

ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಪರಿಶ್ರಮಪಟ್ಟು ಅಭ್ಯಾಸ ಮಾಡಿದರೆ ಮಾತ್ರ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ ಎಂದು ಗದಗ ಜಿಮ್ಸ್ ಆಸ್ಪತ್ರೆಯ ಚಿಕ್ಕಮಕ್ಕಳ ತಜ್ಞ ಡಾ. ಈರಣ್ಣ ಹಳೇಮನಿ ಹೇಳಿದರು.

ಅವರು ಸೋಮವಾರ ಗದಗದ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ ಏರ್ಪಡಿಸಿದ್ದ 76ನೇ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಚಿಂತನ ಮಾಲಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಇಂದು ಸ್ಪರ್ಧಾತ್ಮಕತೆ ಹೆಚ್ಚುತ್ತಿದೆ. ಈ ಸ್ಪರ್ಧಾತ್ಮಕತೆಯಲ್ಲಿ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಆದರೆ ಶಿಕ್ಷಣದಲ್ಲಿ ವ್ಯವಹಾರಿಕತೆ ಹೆಚ್ಚುತ್ತಿರುವುದು ವಿಷಾದದ ಸಂಗತಿ. ನಾವೆಲ್ಲ ಯುವಕರಾಗಿದ್ದಾಗ ಬಿ.ಜಿ. ಅಣ್ಣಿಗೇರಿ ಗುರುಗಳ ಈ ಆಶ್ರಮದಲ್ಲಿ ಉಚಿತ ಪಾಠ ಹೇಳಿಸಿಕೊಂಡು ಪರಿಶ್ರಮದಿಂದ ಅಭ್ಯಾಸ ಮಾಡಿದ್ದರ ಪರಿಣಾಮವಾಗಿ ಸಾವಿರಾರು ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ ಎಂದರಲ್ಲದೆ, ಅಣ್ಣಿಗೇರಿ ಗುರುಗಳ ಪಾಠ ಬೋಧನೆಯ ವೈಖರಿಯನ್ನು ಬಣ್ಣಿಸಿ ಅಂತಹ ಗುರುಗಳು ನಮಗೆ ಲಭ್ಯವಾಗಿದ್ದು ನಮ್ಮೆಲ್ಲರ ಪುಣ್ಯ ಎಂದರು.

ಆಶ್ರಮವನ್ನು ಬಹಳಷ್ಟು ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಬಂದಿರುವ ಸಮಿತಿಯವರ ಹಾಗೂ ಪ್ರತಿಭಾ ಪ್ರತಿಷ್ಠಾನದ ಪದಾಧಿಕಾರಿಗಳ ಕಾರ್ಯ ಅಭಿನಂದನೀಯ. ಇಲ್ಲಿ ಇಂದಿಗೂ ಉಚಿತ ಪಾಠಗಳನ್ನು ಅನುಭವಿ ಶಿಕ್ಷಕ-ಶಿಕ್ಷಕಿಯರು ಮುನ್ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ, ಆಶ್ರಮ ಮತ್ತು ಪ್ರತಿಷ್ಠಾನದ ಕಾರ್ಯಚಟುವಟಿಕೆಗಳನ್ನು ವಿವರಿಸಿ ಸರ್ವರ ಸಹಕಾರದಿಂದ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದರು.

ಸುಭಾಷ್‌ಚಂದ್ರ ಬೆಟ್ಟದೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ದಂಡಿನ ಸಂದರ್ಭೋಚಿತವಾಗಿ ಮಾತನಾಡಿದರು. ಕೊನೆಗೆ ಮಂಜುಳಾ ತುಂಬುರಮಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷ ಡಾ.ಬಸಯ್ಯ ಬೆಳ್ಳೆರಿಮಠ, ಸಿದ್ದಣ್ಣ ಕವಲೂರ, ತೋಂಟೇಶ ವೀರಲಿಂಗಯ್ಯನಮಠ, ಬಸವರಾಜ ಬಿಂಗಿ, ರವಿ ದಂಡಿನ, ಶಿವಣ್ಣ ಕಟ್ಟಿ, ಗುರುರಾಜ ಅಣ್ಣಿಗೇರಿ, ಮಂಜುಳಾ ತುಂಬುರಮಟ್ಟಿ ಹಾಗೂ ಆಶ್ರಮದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಿದ್ದರಾಮಯ್ಯ ಮುಳುಗಿದರೆ ಕಾಂಗ್ರೆಸ್ ಮುಳುಗೋದು ಗ್ಯಾರಂಟಿ: ಹೆಚ್.ಸಿ.ಮಹದೇವಪ್ಪ

0

ಮೈಸೂರು:- ಸಿದ್ದರಾಮಯ್ಯ ಮುಳುಗಿದರೆ ಕಾಂಗ್ರೆಸ್ ಮುಳುಗೋದು ಗ್ಯಾರಂಟಿ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮುಳುಗಿದರೆ ಕಾಂಗ್ರೆಸ್ ಮತ್ತು ಅಹಿಂದ ವರ್ಗ ಮುಳುಗುತ್ತದೆ. ಸಿದ್ದರಾಮಯ್ಯ ಇಲ್ಲದೆ ಇರೋ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಎಷ್ಟು ಜನನಾ ಸಿಎಂ ಸಿಎಂ ಎಂದು ಸುಮ್ಮನೆ ಘೋಷಣೆ ಕೂಗ್ತಿರಾ? ನನ್ನನ್ನು ಸೇರಿದಂತೆ ಎಲ್ಲರನ್ನೂ ಸುಮ್ಮನೆ ಮುಂದಿನ ಸಿಎಂ ಸಿಎಂ ಘೋಷಣೆ ಕೂಗುತ್ತಾರೆ. ದಲಿತ ಸಂಘಟನೆಯ ಮುಖಂಡರು ಬುದ್ಧಿವಂತರು. ಸಿದ್ದರಾಮಯ್ಯರೇ ಸಿಎಂ ಆಗಿರಲಿ. ಅವರು ಬದಲಾಗುವುದಾದರೆ ದಲಿತರಿಗೆ ಅವಕಾಶ ಕೊಡಿ ಅಂತಾರೆ ಎಂದು ತಿಳಿಸಿದರು.

2028 ರವರೆಗೂ ಸಿದ್ದರಾಮಯ್ಯ ಗಟ್ಟಿಯಾಗಿರಬೇಕು. ಈ ಬಾರಿ ಸಿದ್ದರಾಮಯ್ಯ ತಮ್ಮ ಅವಧಿ ಪೂರೈಸಬೇಕು. ಮುಂದಿನ ಅವಧಿಗೂ ಸಿದ್ದರಾಮಯ್ಯ ಇರಬೇಕು ಎಂಬುದಕ್ಕೆ ನಮ್ಮ ತಕರಾರು ಇಲ್ಲ. ‘ಮತ್ತೆ ಮುಖ್ಯಮಂತ್ರಿ’ ಎಂಬ ನಾಟಕವನ್ನು ಸಿಎಂ ಸಿದ್ದರಾಮಯ್ಯರು ನೋಡಬೇಕು. ಮತ್ತೆ ಮುಖ್ಯಮಂತ್ರಿ ನಾಟಕದಲ್ಲಿ ಇಡೀ ರಾಜಕೀಯದ ಚಿತ್ರಣವೇ ಇದೆ. ಸಿದ್ದರಾಮಯ್ಯ ಯಾವತ್ತೂ ಹೊಗಳಿಕೆಗೆ ಬೆಲೆ ಕೊಟ್ಟವರಲ್ಲ. ಇದ್ದರೆ ಇರುತ್ತೆ, ಹೋದ್ರೆ ಹೋಗುತ್ತೆ ಬಿಡಿ ಎನ್ನುವ ಮನಸ್ಥಿತಿ ಸಿದ್ದರಾಮಯ್ಯರದ್ದು. ಹಾಗಂತ ನಾವು ಅವರನ್ನು ಬಿಡುವುದಕ್ಕೆ ಬಿಡಬಾರದು. ಸಿದ್ದರಾಮಯ್ಯ ಮುಳುಗಿದರೆ ಕಾಂಗ್ರೆಸ್ ಮುಳುಗುತ್ತದೆ. ಸಿದ್ದರಾಮಯ್ಯ ಮುಳುಗಿದರೆ ಅಹಿಂದ ವರ್ಗ ಮುಳುಗುತ್ತದೆ ಎಂದು ಎಚ್ಚರಿಸಿದರು.

error: Content is protected !!