Home Blog Page 214

ಗುಂಡು ಹಾರಿಸಿದವನ ಬಂಧನದಿಂದ ಶಡ್ಯಂತ್ರ ಬಯಲು: ಪೊಲೀಸ್ ತನಿಖೆ ಮೇಲೆ ಬೊಮ್ಮಾಯಿ ಅನುಮಾನ

0

ಗದಗ: ಬಳ್ಳಾರಿಯಲ್ಲಿ ನಡೆದ ಗುಂಡಿನ ಪ್ರಕರಣವನ್ನು ಕ್ರಿಮಿನಲ್ ಚಟುವಟಿಕೆ ಎಂದು ಕರೆದಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ಕೆಲಸವೂ ಕಾನೂನಿನ ಚೌಕಟ್ಟಿನೊಳಗೆ ನಡೆಯಬೇಕು. ಆದರೆ ಬಳ್ಳಾರಿಯಲ್ಲಿ ನಡೆದ ಘಟನೆ ಇದಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು. ಈ ಗುಂಡು ಯಾರಿಂದ ಬಂದಿದೆ ಎಂಬುದು ಪೊಲೀಸರಿಗೆ ಗೊತ್ತಾಗಿದೆ ಎಂದು ಹೇಳಿದ ಅವರು, ಗುಂಡು ಹಾರಿಸಿದ ವ್ಯಕ್ತಿಯನ್ನು ಪ್ರೇರೇಪಿಸಿದವರನ್ನು ಕೂಡ ಬಂಧಿಸಬೇಕು ಎಂದು ಆಗ್ರಹಿಸಿದರು.

ಆ ವ್ಯಕ್ತಿಯನ್ನು ಬಂಧಿಸಿದರೆ ಈ ಪ್ರಕರಣದ ಹಿಂದಿರುವ ನಿಜವಾದ ಶಡ್ಯಂತ್ರ ಬಯಲಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು. ಒಬ್ಬರ ಮನೆ ಮುಂದೆ ಹೋಗಿ ಗುಂಡು ಹಾರಿಸುವಂತಹ ಘಟನೆಗಳು ನಡೆಯುತ್ತಿದ್ದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ಮಟ್ಟಕ್ಕೆ ಕುಸಿದಿದೆ ಎಂಬುದನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಪೊಲೀಸರ ಬಗ್ಗೆ ಅಪರಾಧಿಗಳಿಗೆ ಯಾವುದೇ ಭಯವಿಲ್ಲ. ಇದಕ್ಕೆ ಕಾರಣ ಕೆಲವರು ಪೊಲೀಸರೇ ಅಪರಾಧಗಳಲ್ಲಿ ತೊಡಗಿಕೊಂಡಿರುವುದು. ಇತ್ತೀಚೆಗೆ ಕೆಲವು ಪೊಲೀಸರು ಸಸ್ಪೆಂಡ್ ಆಗಿರುವುದು ಪೊಲೀಸ್ ಇಲಾಖೆಯ ನೈತಿಕ ಕುಸಿತಕ್ಕೆ ಸಾಕ್ಷಿಯಾಗಿದೆ ಎಂದು ಬೊಮ್ಮಾಯಿ ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಡಳಿತವನ್ನು ದಾಖಲೆ ಮಟ್ಟದ ಆಡಳಿತ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಈ ಆಡಳಿತದ ಹಿನ್ನಲೆಯಲ್ಲಿ ಹಲವು ಕಪ್ಪು ಚುಕ್ಕೆಗಳು ಸೇರುತ್ತಿವೆ. ಇದು ಮುಖ್ಯಮಂತ್ರಿ ಸ್ಥಾನಕ್ಕೆ ಶೋಭೆ ತರುವ ಸಂಗತಿ ಅಲ್ಲ ಎಂದು ಅವರು ಟಾಂಗ್ ನೀಡಿದರು.

ಪೊಲೀಸರು ನಡೆಸುತ್ತಿರುವ ತನಿಖೆಯನ್ನು ಗಮನಿಸಿದರೆ, ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿರುವ ಅನುಮಾನ ಉಂಟಾಗುತ್ತಿದೆ. ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಿರುವುದು ಈ ಪ್ರಕರಣದ ಮೇಲೆ ಮತ್ತಷ್ಟು ಸಂಶಯ ಮೂಡಿಸಿದೆ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯಲ್ಲಿ ರಾಜಕೀಯ ಸಂಚಲನ: ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನ ಮೇಲೆ ನಾಲ್ಕು ಕಡೆ ಚಾಕು ಇರಿತ

0

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರ ಕಾರು ಚಾಲಕನ ಮೇಲೆ ಬೆಳಗಾವಿ ನಗರದಲ್ಲಿ ಇಬ್ಬರು ದುಷ್ಕರ್ಮಿಗಳು ಚಾಕು ದಾಳಿ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ.

ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಬಸವಂತ ಕಡೋಲ್ಕರ್ (32) ನಗರದ ಕ್ಲಬ್ ರಸ್ತೆಯಲ್ಲಿ ಕಾರು ನಿಲ್ಲಿಸಿ ಹೊರಗೆ ನಿಂತಿದ್ದಾಗ ಈ ದಾಳಿ ನಡೆದಿದೆ. ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಏಕಾಏಕಿ ಚಾಕು ಹಿಡಿದು ದಾಳಿ ನಡೆಸಿದ್ದಾರೆ.

ಬಸವಂತ ಅವರ ಎದೆ, ಭುಜ ಮತ್ತು ತೊಡೆಯ ಭಾಗದಲ್ಲಿ ಸೇರಿ ನಾಲ್ಕು ಕಡೆ ಚಾಕು ಇರಿತವಾಗಿದೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಘಟನೆಗೆ ಸಂಬಂಧಿಸಿದಂತೆ ಡಿಸಿಪಿ, ಎಸಿಪಿ ಹಾಗೂ ಮೃಣಾಲ್ ಹೆಬ್ಬಾಳ್ಕರ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಈ ಘಟನೆ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಸವಂತ ಕಡೋಲ್ಕರ್ ಅವರು ಹಲವು ವರ್ಷಗಳಿಂದ ಮೃಣಾಲ್ ಹೆಬ್ಬಾಳ್ಕರ್ ಅವರ ಕಾರು ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ದಾಳಿಯ ಹಿಂದಿನ ಉದ್ದೇಶ ಏನು ಎಂಬುದರ ಬಗ್ಗೆ ತನಿಖೆ ಮುಂದುವರಿದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ: ಬಸವರಾಜ ರಾಯರೆಡ್ಡಿ ಸ್ಪಷ್ಟನೆ

0

ಬೆಂಗಳೂರು: ಸಿದ್ದರಾಮಯ್ಯ ಅವರು ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ ಎಂದು ಸಿಎಂ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಪಷ್ಟವಾಗಿ ಹೇಳಿದ್ದಾರೆ. 2.5 ವರ್ಷಕ್ಕೆ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಶಾಸಕರು ಆಯ್ಕೆ ಮಾಡಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಪರವಾಗಿ ಅವರು ಬ್ಯಾಟಿಂಗ್ ಮಾಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ರಾಯರೆಡ್ಡಿ, ಮುಖ್ಯಮಂತ್ರಿ ಬದಲಾವಣೆ ವಿಚಾರ ಸಂಪೂರ್ಣವಾಗಿ ಮಾಧ್ಯಮ ಸೃಷ್ಟಿ ಎಂದು ಹೇಳಿದರು. “ಯಾರಿಗೆ ಸಿಎಂ ಆಗಲು ಇಷ್ಟ ಇರುವುದಿಲ್ಲ? ನಾನು ಸಿಎಂ ಯಾಕೆ ಆಗಬಾರದು? ನಾನು ಸೀನಿಯರ್ ಇದ್ದೇನೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಸಿಎಂ ಬದಲಾವಣೆ ಆಗಬೇಕಾದರೆ ಶಾಸಕರ ಅಭಿಪ್ರಾಯ ಪಡೆಯಬೇಕು. ಇದೆಲ್ಲವೂ ಆಗದೇ ಹೇಗೆ ಬದಲಾವಣೆ ಸಾಧ್ಯ?” ಎಂದು ಪ್ರಶ್ನಿಸಿದರು.

ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇಕ್ಬಾಲ್ ಹುಸೇನ್ ಅವರು ಮನೋರಂಜನೆಗಾಗಿ ‘ಡಿಕೆಶಿ ಸಿಎಂ’ ಎಂದು ಹೇಳುತ್ತಾರೆ ಎಂದು ರಾಯರೆಡ್ಡಿ ಟೀಕಿಸಿದರು. ಡಿ.ಕೆ.ಶಿವಕುಮಾರ್ ಅವರಿಗೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗುವ ಅವಕಾಶ ಸಿಗಬಹುದು ಎಂದು ಹೇಳಿದ ಅವರು, ಡಿಕೆಶಿ ಆಕಾಂಕ್ಷಿ ಆಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು. ಆದರೆ ಸಮಯ ಮತ್ತು ಸಂದರ್ಭ ಮುಖ್ಯವಾಗುತ್ತದೆ. ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರುತ್ತಾರೆ ಎಂಬುದನ್ನು ಅವರು ಪುನರುಚ್ಚಾರ ಮಾಡಿದರು.

ಟಾಲಿವುಡ್ ಚಿತ್ರರಂಗಕ್ಕೆ ಪೈರಸಿ ಕಾಟ: ಸಾವಿರಾರು ಕೋಟಿ ನಷ್ಟಕ್ಕೆ ಬ್ರೇಕ್ ಹಾಕಲು ಪೊಲೀಸರ ಜೊತೆ ಚಿತ್ರರಂಗದ ಒಗ್ಗಟ್ಟು

ಭಾರತೀಯ ಚಿತ್ರರಂಗದ ಆರ್ಥಿಕ ನಕ್ಷೆಯನ್ನು ಸಂಪೂರ್ಣವಾಗಿ ಬದಲಾಯಿಸಿರುವುದು ತೆಲುಗು ಚಿತ್ರರಂಗ. ಬಾಲಿವುಡ್ ಮಾತ್ರವೇ ಭಾರತದ ಮುಖ ಎನ್ನುವ ಭ್ರಮೆಯನ್ನು ತೆಲುಗು ಸಿನಿಮಾಗಳು ಅಂತರರಾಷ್ಟ್ರೀಯ ಮಟ್ಟದಲ್ಲೇ ಧ್ವಂಸಗೊಳಿಸಿವೆ. ‘ಬಾಹುಬಲಿ’, ‘ಆರ್‌ಆರ್‌ಆರ್’ ತರಹದ ಚಿತ್ರಗಳು ಟಾಲಿವುಡ್‌ಗೆ ಜಾಗತಿಕ ಮೆಚ್ಚುಗೆ ತಂದಿವೆ.

ಯಶಸ್ಸಿನ ಸರಾಸರಿ ವಿಚಾರದಲ್ಲೂ ತೆಲುಗು ಚಿತ್ರರಂಗ ಇತರ ದೊಡ್ಡ ಇಂಡಸ್ಟ್ರಿಗಳನ್ನು ಹಿಂದಿಕ್ಕಿದೆ. ಆದರೆ ಈ ಸಾಧನೆಗೆ ದೊಡ್ಡ ಸವಾಲಾಗಿ ನಿಂತಿರುವುದು ಪೈರಸಿ ಸಮಸ್ಯೆ.

ಕೋವಿಡ್ ನಂತರ ಒಟಿಟಿ ಬಳಕೆ ಹೆಚ್ಚಿದಂತೆ ಪೈರಸಿಗೂ ರೆಕ್ಕೆ ಬಂದಿದೆ. ಈಗ ಸಿನಿಮಾಗಳು ಬಿಡುಗಡೆಯಾದ ತಕ್ಷಣವೇ ಪೈರಸಿ ರೂಪದಲ್ಲಿ ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಇದರಿಂದಾಗಿ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿಗಳಷ್ಟು ನಷ್ಟವಾಗುತ್ತಿದೆ. ಪೈರಸಿ ಹಾವಳಿ ಅತಿ ಹೆಚ್ಚು ಹೊಡೆತ ನೀಡುತ್ತಿರುವುದು ತೆಲುಗು ಚಿತ್ರರಂಗಕ್ಕೇ.

ಥಿಯೇಟರ್ ಮತ್ತು ಒಟಿಟಿ ಎರಡೂ ಕಡೆ ತೆಲುಗು ಸಿನಿಮಾಗಳಿಗೆ ಉತ್ತಮ ಮಾರುಕಟ್ಟೆ ಇರುವುದರಿಂದ ಪೈರಸಿಕೋರರು ಈ ಚಿತ್ರರಂಗವನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ.

ಈ ಗಂಭೀರ ಪರಿಸ್ಥಿತಿಗೆ ತೆಲುಗು ಚಿತ್ರರಂಗ ಮೌನ ವಹಿಸಿಲ್ಲ. ಮೆಗಾಸ್ಟಾರ್ ಚಿರಂಜೀವಿ ನೇತೃತ್ವದಲ್ಲಿ ಚಿತ್ರರಂಗದ ಗಣ್ಯರು ಸೈಬರ್ ಕ್ರೈಮ್ ಪೊಲೀಸರೊಂದಿಗೆ ನಿರಂತರ ಸಂವಾದ ನಡೆಸಿದ್ದಾರೆ. ಸರ್ಕಾರದ ಉನ್ನತ ಮಟ್ಟದ ಸಚಿವರಿಗೂ ಪೈರಸಿ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಲಾಗಿದೆ.

ಇದರ ಪರಿಣಾಮವಾಗಿ ಸೈಬರಾಬಾದ್ ಪೊಲೀಸರು ಐಬೊಮ್ಮ ರವಿ ಸೇರಿದಂತೆ ಹಲವು ಪ್ರಮುಖ ಪೈರಸಿ ಮಾಸ್ತರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹಲವು ಪೈರಸಿ ವೆಬ್‌ಸೈಟ್‌ಗಳು ಹಾಗೂ ಅಪ್ಲಿಕೇಶನ್‌ಗಳಿಗೆ ಲಾಕ್ ಹಾಕಲಾಗಿದೆ.

ಇತ್ತೀಚೆಗೆ ತೆಲುಗು ಫಿಲ್ಮ್ ಚೇಂಬರ್‌ನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ನಿರ್ಮಾಪಕ ದಗ್ಗುಬಾಟಿ ಸುರೇಶ್ ಬಾಬು, ಪೈರಸಿ ವಿರುದ್ಧ ಹೋರಾಟವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಪೊಲೀಸ್ ಇಲಾಖೆಯೊಂದಿಗೆ ಅಧಿಕೃತ MoU ಸಹಿ ಮಾಡಿದ್ದು, ಮುಂದಿನ ದಿನಗಳಲ್ಲಿ ಪೈರಸಿಗೆ ಸಂಪೂರ್ಣ ಕಡಿವಾಣ ಹಾಕುವ ಗುರಿ ಇಟ್ಟುಕೊಂಡಿದ್ದಾರೆ.

ಈಗಾಗಲೇ ಪೈರಸಿ ಸೈಟ್‌ಗಳನ್ನು ತೆಗೆದುಹಾಕುವ ಜೊತೆಗೆ, ಮುಂದಿನ ದಿನಗಳಲ್ಲಿ ಹೊಸ ಸಿನಿಮಾಗಳು ಪೈರಸಿಯಾಗದಂತೆ ತಡೆಯುವ ಸಂಯುಕ್ತ ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಟಾಲಿವುಡ್ ಮತ್ತು ಕಾನೂನು ವ್ಯವಸ್ಥೆ ಒಟ್ಟಾಗಿ ನಿಂತರೆ ಪೈರಸಿ ವಿರುದ್ಧ ಗೆಲುವು ಸಾಧ್ಯ ಎಂಬ ನಂಬಿಕೆ ಗಟ್ಟಿಯಾಗುತ್ತಿದೆ.

ಹೊಸ ವರ್ಷಕ್ಕೆ ಹೊರಗಿದ್ದವರ ಮನೆಗೆ ಕನ್ನ: ಕೆಲಸದಾಕೆ, ಆಕೆಯ ಪತಿ ಬಂಧನ, ₹1.37 ಕೋಟಿ ವಸ್ತು ವಶಕ್ಕೆ!

0

ಬೆಂಗಳೂರು: ಹೊಸ ವರ್ಷಾಚರಣೆಗೆ ಹೊರಗಿದ್ದ ಮನೆಮಾಲೀಕರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಹಾಗೂ ದುಬಾರಿ ವಾಚ್‌ಗಳನ್ನು ಕಳ್ಳತನ ಮಾಡಿದ್ದ ಮನೆಗೆಲಸದ ಮಹಿಳೆ ಮತ್ತು ಆಕೆಯ ಪತಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಹಾಜಿರಾ ಬೇಗಂ ಮತ್ತು ಆಕೆಯ ಪತಿ ಶಾಹಿರ್ ಬಂಧಿತ ಆರೋಪಿಗಳು. ಇವರಿಂದ 787 ಗ್ರಾಂ ಚಿನ್ನಾಭರಣ, 291 ಗ್ರಾಂ ಬೆಳ್ಳಿಯ ವಸ್ತುಗಳು, 7 ದುಬಾರಿ ವಾಚ್‌ಗಳು ಸೇರಿದಂತೆ ಒಟ್ಟು ₹1.37 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದಾಶಿವನಗರ ನಿವಾಸಿ ಅಭಿಷೇಕ್ ಅವರ ಮನೆಯಲ್ಲಿ ಹಾಜಿರಾ ಬೇಗಂ ಹಲವು ವರ್ಷಗಳಿಂದ ಮನೆಗೆಲಸ ಮಾಡುತ್ತಿದ್ದರು. ಮದುವೆಯ ಕಾರಣ ನೀಡಿ ಸುಮಾರು ಮೂರು ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದಳು. ಆದರೆ ಹೊಸ ವರ್ಷ ಸಮೀಪಿಸುತ್ತಿದ್ದ ವೇಳೆ ಮತ್ತೆ ಕೆಲಸಕ್ಕೆ ಸೇರಲು ಇಂಗಿತ ವ್ಯಕ್ತಪಡಿಸಿದ್ದಳು. ಹಳೆಯ ಪರಿಚಯದ ಹಿನ್ನೆಲೆಯಲ್ಲಿ ಮನೆಮಾಲೀಕರು ಆಕೆಯನ್ನು ನಂಬಿ ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದರು.

ಡಿಸೆಂಬರ್ 30ರಂದು ಅಭಿಷೇಕ್ ಅವರು ಕುಟುಂಬದೊಂದಿಗೆ ಹೊಸ ವರ್ಷದ ಸಂಭ್ರಮಾಚರಣೆಗೆ ತಮಿಳುನಾಡಿಗೆ ತೆರಳಿದ್ದರು. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಹಾಜಿರಾ, ತನ್ನ ಪತಿ ಶಾಹಿರ್‌ನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಮನೆಯ ಕೀಲಿಗಳನ್ನು ಬಳಸಿಕೊಂಡು ಇಬ್ಬರೂ ಸೇರಿ ₹1.37 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ಇತರೆ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.

ಡಿಸೆಂಬರ್ 31ರಂದು ಮನೆಗೆ ಮರಳಿದ ಅಭಿಷೇಕ್ ಅವರಿಗೆ ಕಳ್ಳತನ ನಡೆದಿರುವುದು ತಿಳಿದುಬಂದಿದ್ದು, ತಕ್ಷಣವೇ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಹಾಜಿರಾ ಬೇಗಂ ಹಾಗೂ ಆಕೆಯ ಪತಿ ಶಾಹಿರ್‌ರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸಂಪೂರ್ಣವಾಗಿ ಕಳ್ಳತನವಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಳ್ಳಾರಿ ಗಲಭೆ: ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ

0

ಬಳ್ಳಾರಿ: ನಗರದಲ್ಲಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಗಲಭೆಯಲ್ಲಿ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅವರ ಕುಟುಂಬವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಭೇಟಿ ಮಾಡಿ ಸಾಂತ್ವನ ಹೇಳಿದರು. ಬೆಳಿಗ್ಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನದ ವೇಳೆಗೆ ರಾಜಶೇಖರ್ ಅವರ ಮನೆಗೆ ಆಗಮಿಸಿದ ಡಿಸಿಎಂ, ಮೃತರ ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ಮೊನ್ನೆ ನಡೆದ ಗಲಭೆಯಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾರೆ. ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದೇನೆ. ಈ ಘಟನೆ ನಡೆಯಬಾರದಾಗಿತ್ತು. ಮೃತ ವ್ಯಕ್ತಿಯ ಕುಟುಂಬದ ದುಃಖದಲ್ಲಿ ನಾನು ಭಾಗಿಯಾಗುತ್ತೇನೆ. ಕುಟುಂಬದ ಜೊತೆಗೆ ಪಕ್ಷವೂ ಇದೆ ಎಂಬ ಸಂದೇಶ ನೀಡಲು ಬಂದಿದ್ದೇನೆ” ಎಂದು ಹೇಳಿದರು.

ಮೃತರ ಕುಟುಂಬ ಸರ್ಕಾರಿ ಉದ್ಯೋಗ ನೀಡುವಂತೆ ಮನವಿ ಮಾಡಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ವಿಚಾರ ಮಾಡಲಾಗುತ್ತದೆ. ಪ್ರಕ್ರಿಯೆಗಳನ್ನು ಪರಿಶೀಲಿಸಿ, ಕಾನೂನು ಚೌಕಟ್ಟಿನ ಅಡಿಯಲ್ಲಿ ಉದ್ಯೋಗ ಕಲ್ಪಿಸಲು ಪ್ರಯತ್ನ ಮಾಡಲಾಗುವುದು” ಎಂದು ಭರವಸೆ ನೀಡಿದರು. ಉಳಿದ ವಿಚಾರಗಳ ಕುರಿತು ಕಾರ್ಯಕರ್ತರೊಂದಿಗೆ ಚರ್ಚಿಸಿದ ಬಳಿಕ ಮಾಹಿತಿ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಕೂಡ ಉಪಸ್ಥಿತರಿದ್ದರು.

ಕರೂರು ಕಾಲ್ತುಳಿತ ಪ್ರಕರಣ: ನಟ–ರಾಜಕಾರಣಿ ವಿಜಯ್‌ಗೆ ಸಿಬಿಐ ನೋಟಿಸ್

0

ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ ನಡೆದ ರ್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ರಾಜಕಾರಣಿ ವಿಜಯ್ ಅವರಿಗೆ ಕೇಂದ್ರ ತನಿಖಾ ದಳ ನೋಟಿಸ್ ಜಾರಿ ಮಾಡಿದೆ.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದ ಈ ಕಾಲ್ತುಳಿತ ದುರಂತದಲ್ಲಿ 41 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಪ್ರಕರಣದ ತನಿಖೆಯ ಭಾಗವಾಗಿ ವಿಚಾರಣೆಗೆ ಹಾಜರಾಗುವಂತೆ ವಿಜಯ್ ಅವರಿಗೆ ಸಿಬಿಐ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

2024ರ ಸೆಪ್ಟೆಂಬರ್ 27ರಂದು ಕರೂರಿನ ವೇಲುಸಾಮಿಪುರಂನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ವಿಜಯ್ ಅವರನ್ನು ನೋಡಲು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅತಿಯಾದ ಜನಸಂದಣಿಯಿಂದ ಅವ್ಯವಸ್ಥೆ ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು.

ಈ ಘಟನೆ ತೀವ್ರ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಆರಂಭದಲ್ಲಿ ತಮಿಳುನಾಡು ಪೊಲೀಸರು ತನಿಖೆ ನಡೆಸುತ್ತಿದ್ದ ಪ್ರಕರಣವನ್ನು ನಂತರ ಸುಪ್ರೀಂ ಕೋರ್ಟ್ ಸಿಬಿಐಗೆ ಹಸ್ತಾಂತರಿಸಿತ್ತು.

ತನಿಖೆಯ ಭಾಗವಾಗಿ ಇತ್ತೀಚೆಗೆ ಸಿಬಿಐ ಅಧಿಕಾರಿಗಳು ಚೆನ್ನೈನಲ್ಲಿರುವ ಟಿವಿಕೆ (TVK) ಕೇಂದ್ರ ಕಚೇರಿಗೆ ಭೇಟಿ ನೀಡಿ, ಕೆಲವು ದಾಖಲೆಗಳು ಹಾಗೂ ರ್ಯಾಲಿ ದಿನ ಸಂಚರಿಸಿದ ಬಸ್‌ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದ್ದು, ವಿಜಯ್ ಅವರ ವಿಚಾರಣೆ ಮಹತ್ವ ಪಡೆದುಕೊಂಡಿದೆ.

ತೆರಿಗೆಯಲ್ಲೂ ಟಾಪರ್: ಕೊಡಗು ಜಿಲ್ಲೆಯಲ್ಲಿ ರಶ್ಮಿಕಾ ಮಂದಣ್ಣ ನಂಬರ್ ಒನ್

ಮಡಿಕೇರಿ: ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕೊಡಗು ಜಿಲ್ಲೆಯ ಹೆಮ್ಮೆಯ ನಟಿ ರಶ್ಮಿಕಾ ಮಂದಣ್ಣ ಇದೀಗ ಆದಾಯ ತೆರಿಗೆ ಪಾವತಿಯಲ್ಲಿ ದಾಖಲೆ ಬರೆದಿದ್ದಾರೆ. 2025–26ನೇ ಆರ್ಥಿಕ ವರ್ಷದಲ್ಲಿ ಕೊಡಗು ಜಿಲ್ಲೆಯಿಂದ ಅತಿ ಹೆಚ್ಚು Income Tax ಪಾವತಿಸಿದ ವ್ಯಕ್ತಿಯಾಗಿ ರಶ್ಮಿಕಾ ಮಂದಣ್ಣ ಮೊದಲ ಸ್ಥಾನದಲ್ಲಿದ್ದಾರೆ.

ಕನ್ನಡ ಸಿನಿಮಾರಂಗದಿಂದ ಚಿತ್ರಜಗತ್ತಿಗೆ ಪ್ರವೇಶಿಸಿ, ನಂತರ ತೆಲುಗು ಹಾಗೂ ಬಾಲಿವುಡ್‌ನಲ್ಲೂ ತಮ್ಮದೇ ಸ್ಥಾನ ನಿರ್ಮಿಸಿಕೊಂಡಿರುವ ರಶ್ಮಿಕಾ ಮಂದಣ್ಣ, ತಮ್ಮ ವೃತ್ತಿಪರ ವ್ಯವಹಾರಗಳನ್ನು ರಶ್ಮಿಕಾ ಮಂದಣ್ಣ ಪ್ರೊಡಕ್ಷನ್ಸ್ LLP ಮೂಲಕ ನಡೆಸುತ್ತಿದ್ದಾರೆ.

2022ರ ಆಗಸ್ಟ್‌ನಲ್ಲಿ ಆರಂಭಗೊಂಡ ಈ ಪ್ರೊಡಕ್ಷನ್ ಸಂಸ್ಥೆ ಇದೀಗ 2025–26ನೇ ಹಣಕಾಸು ವರ್ಷದಲ್ಲಿ ಕೊಡಗು ಜಿಲ್ಲೆಯಲ್ಲಿ ತೆರಿಗೆ ಪಾವತಿಯಲ್ಲಿ ಮುಂಚೂಣಿಯಲ್ಲಿದೆ. ಈ ಹಣಕಾಸು ವರ್ಷದ ಮೂರು ಹಂತಗಳ ತೆರಿಗೆ ಪಾವತಿ ಅವಧಿಯಲ್ಲೂ ರಶ್ಮಿಕಾ ಮಂದಣ್ಣ ನಿರಂತರವಾಗಿ ಮೊದಲ ಸ್ಥಾನದಲ್ಲಿರುವುದು ಗಮನಾರ್ಹವಾಗಿದೆ.

ಮಾರ್ಚ್‌ನಲ್ಲಿ ಹಣಕಾಸು ವರ್ಷ ಅಂತ್ಯವಾಗಲಿದ್ದು, ಅಲ್ಲಿಯವರೆಗೂ ಈ ಸ್ಥಾನವನ್ನು ರಶ್ಮಿಕಾ ಮುಂದುವರಿಸುವ ಸಾಧ್ಯತೆ ಹೆಚ್ಚಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಅಧಿಕೃತವಾಗಿ ರಶ್ಮಿಕಾ ಮಂದಣ್ಣ ಅವರ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ತೆರಿಗೆ ಶಿಸ್ತು ಮತ್ತು ರಾಷ್ಟ್ರದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯ ಹಿನ್ನೆಲೆಯಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ವಿಕಸಿತ ಭಾರತದ ಬ್ರ್ಯಾಂಡ್ ಅಬಾಸಿಡರ್ ಆಗಿಯೂ ಗುರುತಿಸಲಾಗಿದೆ.

ಸಿದ್ದರಾಮಯ್ಯ ಅವರಿಗೆ ಆಲ್ ದ ಬೆಸ್ಟ್, ಗುಡ್ ಲಕ್: ಡಿಸಿಎಂ ಡಿ.ಕೆ.ಶಿವಕುಮಾರ್

0

ಬೆಂಗಳೂರು:“ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ, ಐ ವಿಶ್ ಹಿಮ್ ಆಲ್ ದ ಬೆಸ್ಟ್. ಗುಡ್ ಲಕ್” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಸದಾಶಿವನಗರ ನಿವಾಸ ಹಾಗೂ ಬೆಂಗಳೂರು ವಿವಿಯ ಜ್ಞಾನಜ್ಯೋತಿ ಸಭಾಂಗಣದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ಪೂರ್ಣಾವಧಿಗೆ ನಾನೇ ಸಿಎಂ ಆಗಿ ಮುಂದುವರಿಯುವ ವಿಶ್ವಾಸವಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಈ ರೀತಿ ಪ್ರತಿಕ್ರಿಯೆ ನೀಡಿದರು.

ಈ ಹೇಳಿಕೆಯಿಂದ ಮತ್ತೆ ಗೊಂದಲವಾಗುವುದಿಲ್ಲವೇ ಎಂದು ಕೇಳಿದಾಗ, “ನೀವುಗಳು (ಮಾಧ್ಯಮಗಳು) ಗೊಂದಲ ಮಾಡಿಕೊಳ್ಳುತ್ತಿದ್ದೀರಿ. ನಮಲ್ಲಿ ಯಾರಿಗೂ ಗೊಂದಲವಿಲ್ಲ” ಎಂದು ತಿಳಿಸಿದರು. ಸಿಎಂ ಅವರು ದಾಖಲೆ ನಿರ್ಮಿಸುತ್ತಿರುವ ಬಗ್ಗೆ ಕೇಳಿದಾಗ, “ಅವರಿಗೆ ಯಶಸ್ಸಾಗಲಿ, ಒಳ್ಳೆಯದಾಗಲಿ. ಅವರಿಗೆ ಹೆಚ್ಚು ಆರೋಗ್ಯ ಸಿಗಲಿ, ಜನರ ಸೇವೆ ಮಾಡುವ ಅವಕಾಶವನ್ನು ಭಗವಂತ ಅವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದರು.

ಕುಮಾರಸ್ವಾಮಿ ಜೇಬಲ್ಲೇ ಐಟಿ ಇಲಾಖೆ ಇದೆಯಲ್ಲಾ?

ಮೃತ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ ನೀಡಿದ ಪರಿಹಾರ ಹಣ ಮೂಲ ಕಾಂಗ್ರೆಸ್ ಪಕ್ಷದ್ದೋ, ಸರ್ಕಾರದಿಂದಲೋ? ಐಟಿ ಇಲಾಖೆ ಏನು ಮಾಡುತ್ತಿದೆ ಎನ್ನುವ ಕುಮಾರಸ್ವಾಮಿ ಹಾಗೂ ಪ್ರತಿಪಕ್ಷಗಳ ಆರೋಪದ ಬಗ್ಗೆ ಕೇಳಿದಾಗ,

“ಐಟಿ ಸೇರಿದಂತೆ ಇತರೇ ಎಲ್ಲಾ ಇಲಾಖೆಗಳು ವಿರೋಧ ಪಕ್ಷಗಳ ಹತ್ತಿರವೇ ಇದೆಯಲ್ಲವೇ? ಕುಮಾರಸ್ವಾಮಿ ಜೇಬಲ್ಲೇ ಇದ್ದಾವಲ್ಲ? ಪರಿಹಾರ ಹಣದ ಬಗ್ಗೆ ಜಮೀರ್ ಅವರ ಬಳಿ ಮಾತನಾಡುತ್ತೇನೆ” ಎಂದು ಉತ್ತರಿಸಿದರು.

ಬಳ್ಳಾರಿ ಭೇಟಿಯ ಬಗ್ಗೆ ಕೇಳಿದಾಗ, “ನಮಗೆ ಈ ರಾಜ್ಯದಲ್ಲಿರುವ ಹಾಗೂ ಬಳ್ಳಾರಿಯಲ್ಲಿ ಶಾಂತಿಯುತ ವಾತಾವರಣ ಉಳಿಯಬೇಕು. ಬಿಜೆಪಿಯವರು ಹತಾಶರಾಗಿ ಎಲ್ಲಾ ಕಡೆ ಇಂತಹ ಪ್ರಯತ್ನ ನಡೆಸುತ್ತಿದ್ದಾರೆ. ಅಲ್ಲಿ ಹೋಗಿ ಪರಿಸ್ಥಿತಿ ಅವಲೋಕನ ಮಾಡುತ್ತೇನೆ” ಎಂದರು.

ಟಾಕ್ಸಿಕ್‌ನಲ್ಲಿ ರುಕ್ಮಿಣಿ ವಸಂತ್: ಗ್ಲ್ಯಾಮರ್‌ ಲುಕ್‌ನಲ್ಲಿ ಮಿಂಚಿಂಗ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಟಾಕ್ಸಿಕ್ ಮತ್ತೆ ಭರ್ಜರಿ ಸದ್ದು ಮಾಡುತ್ತಿದೆ. ಈ ಬಾರಿ ಚಿತ್ರದ ಐದನೇ ನಾಯಕಿಯ ಲುಕ್ ಬಿಡುಗಡೆ ಆಗಿದ್ದು, ನಟಿ ರುಕ್ಮಿಣಿ ವಸಂತ್ ಗ್ಲ್ಯಾಮರ್ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ.

ಚಿತ್ರದಲ್ಲಿ ರುಕ್ಮಿಣಿ ವಸಂತ್ ಅವರ ಪಾತ್ರದ ಹೆಸರು ಮೆಲ್ಲಿಸಾ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದ್ದು, ಬಿಡುಗಡೆ ಮಾಡಲಾದ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈಗಾಗಲೇ ಟಾಕ್ಸಿಕ್ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾನಿ, ನಯನತಾರಾ, ಹುಮಾ ಖುರೇಶಿ ಮತ್ತು ತಾರಾ ಸುತಾರಿಯಾ ಅವರ ಲುಕ್‌ಗಳನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ರುಕ್ಮಿಣಿ ವಸಂತ್ ಅವರ ಪರಿಚಯದೊಂದಿಗೆ ಚಿತ್ರದ ಐದು ಪ್ರಮುಖ ನಾಯಕಿಯರ ಅನಾವರಣ ಸಂಪೂರ್ಣಗೊಂಡಿದೆ.

ಕಳೆದ ಒಂದು ತಿಂಗಳಿನಿಂದ ಒಂದೊಂದೇ ಪಾತ್ರಗಳ ಇಂಟ್ರೊಡಕ್ಷನ್ ಮೂಲಕ ಕುತೂಹಲ ಹೆಚ್ಚಿಸಿದ್ದ ಯಶ್ ತಂಡ, ಇದೀಗ ಅಭಿಮಾನಿಗಳಿಗೆ ಫುಲ್ ಅಪ್‌ಡೇಟ್ ನೀಡಿದೆ.

ಜನವರಿ 8ರಂದು ಯಶ್ ಹುಟ್ಟುಹಬ್ಬ ಇರುವುದರಿಂದ ಟಾಕ್ಸಿಕ್ ಟೀಸರ್ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಟೀಸರ್‌ನಲ್ಲಿ ಐವರು ನಾಯಕಿಯರ ಲುಕ್ ಒಂದೇ ಸಲ ರಿವೀಲ್ ಆಗುವ ಸಾಧ್ಯತೆಯೂ ಇದೆ ಎಂದು ಸಿನಿ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

error: Content is protected !!