ಗದಗ: ಸಾಮಾನ್ಯವಾಗಿ ಮನೆಯಲ್ಲಿ ಹುಟ್ಟಿದ ಮಕ್ಕಳಿಗೆ ತೊಟ್ಟಿಲು ಶಾಸ್ತ್ರ ಮಾಡುವುದನ್ನು ನಾವು ನೋಡುತ್ತೇವೆ. ಆದರೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿ ಗ್ರಾಮದಲ್ಲಿ ಅವಳಿ ಜವಳಿ ಆಕಳು ಕರುಗಳಿಗೆ ಕುಟುಂಬಸ್ಥರು ಅದ್ಧೂರಿಯಾಗಿ ತೊಟ್ಟಿಲು ಕಾರ್ಯ ನೆರವೇರಿಸಿ ಗಮನ ಸೆಳೆದಿದ್ದಾರೆ. ಈ ವಿಶಿಷ್ಟ ಸಂಭ್ರಮಕ್ಕೆ ನೂರಾರು ಗ್ರಾಮಸ್ಥರು ಸಾಕ್ಷಿಯಾದರು.
ಗ್ರಾಮದ ರೈತ ನಾಗರಾಜ್ ಮಡಿವಾಳರ ಮನೆಯಲ್ಲಿ ತೊಟ್ಟಿಲನ್ನು ತೆಂಗಿನ ಗರಿ, ತಳಿರು ತೋರಣ ಹಾಗೂ ಹೂವಿನಿಂದ ಅಲಂಕರಿಸಲಾಗಿತ್ತು. ಮನೆಮಠದಲ್ಲಿ ಹಬ್ಬದ ವಾತಾವರಣ ಮನೆಮಾಡಿದ್ದು, ಸಂಪ್ರದಾಯದಂತೆ ಮುದ್ದಾದ ಕರುಗಳನ್ನು ತೊಟ್ಟಿಲಿಗೆ ಹಾಕಿ ನೆರೆದವರು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಮಠಾಧೀಶರೂ ಆಗಮಿಸಿ ಸಾಕ್ಷಿಯಾದರು.
ಹೂವಿನಶಿಗ್ಲಿ ವಿರಕ್ತ ಮಠದ ಚನ್ನವೀರ ಮಹಾಸ್ವಾಮಿಗಳು ಹಾಗೂ ಗಂಜಿಗಟ್ಟಿ ಚರಮೂರ್ತೇಶ್ವರ ಮಠದ ಡಾ. ವೈಜನಾಥ ಶಿವಲಿಂಗ ಮಹಾಸ್ವಾಮೀಜಿ ಕರುಗಳ ಕಿವಿಯಲ್ಲಿ ಹೆಸರು ಹೇಳುವ ಮೂಲಕ ನಾಮಕರಣ ನೆರವೇರಿಸಿದರು. ಅವಳಿ ಕರುಗಳಿಗೆ ‘ಶಿವ’ ಮತ್ತು ‘ಬಸವ’ ಎಂದು ನಾಮಕರಣ ಮಾಡಲಾಯಿತು.
ಈ ಕರುಗಳಿಗೆ ಜನ್ಮ ನೀಡಿದ ಹಸುವಿಗೆ 15 ದಿನಗಳ ಹಿಂದೆಯೇ ಸೀಮಂತ ಕಾರ್ಯವನ್ನೂ ರೈತ ನಾಗರಾಜ್ ಮಡಿವಾಳ ನೆರವೇರಿಸಿದ್ದರು. ಇದೀಗ ಕರುಗಳಿಗೆ ತೊಟ್ಟಿಲು ಶಾಸ್ತ್ರವನ್ನು ಕೂಡ ಭರ್ಜರಿಯಾಗಿ ನಡೆಸಿ ಕುಟುಂಬಸ್ಥರು ಗ್ರಾಮಸ್ಥರ ಮೆಚ್ಚುಗೆ ಪಡೆದಿದ್ದಾರೆ. ನೂರಾರು ಜನರನ್ನು ಆಹ್ವಾನಿಸಿ ಸಂಭ್ರಮ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ನೆರೆದಿದ್ದ ಮಹಿಳೆಯರು ಕರುಗಳಿಗೆ ಆರತಿ ಎತ್ತಿ ಸಂಭ್ರಮಿಸಿದರು. ಮಕ್ಕಳಿಗೇ ತೊಟ್ಟಿಲು ಶಾಸ್ತ್ರವನ್ನು ಸರಿಯಾಗಿ ಮಾಡದ ಈ ಕಾಲದಲ್ಲಿ, ಮನೆಯ ಕೊಟ್ಟಿಗೆಯಲ್ಲಿ ಹುಟ್ಟಿದ ಕರುಗಳನ್ನು ಈ ರೀತಿಯಾಗಿ ಸಂಭ್ರಮಿಸುವುದು ನಿಜಕ್ಕೂ ಮಾದರಿ ಕಾರ್ಯ ಎಂದು ಗ್ರಾಮಸ್ಥರು ಶ್ಲಾಘಿಸಿದ್ದಾರೆ.

