Home Blog Page 216

ಆದಿತ್ಯ ಧಾರ್‌ ಕೊಂಡಾಡಿದ ವಿವೇಕ್ ಅಗ್ನಿಹೋತ್ರಿ: ‘ದೇವರ ಮಗ’ ಎಂದ ನಿರ್ದೇಶಕ

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಸಿನಿಮಾ ಈಗ ಕೇವಲ ಬಾಕ್ಸ್ ಆಫೀಸ್ ಸಕ್ಸಸ್ ಮಾತ್ರವಲ್ಲ, ಚಿತ್ರರಂಗದ ದಿಗ್ಗಜರ ಮೆಚ್ಚುಗೆಗೂ ಪಾತ್ರವಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ‘ಧುರಂಧರ್’ ಸಿನಿಮಾವನ್ನು ವೀಕ್ಷಿಸಿ ಸಾಮಾಜಿಕ ಜಾಲತಾಣದಲ್ಲಿ ಭಾವುಕವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಎರಡು ತಿಂಗಳ ಬಳಿಕ ಭಾರತಕ್ಕೆ ವಾಪಸ್ ಬಂದೆ. ನಾನು ಮಾಡಿದ ಮೊದಲ ಕೆಲಸ ‘ಧುರಂಧರ್’ ಸಿನಿಮಾ ನೋಡುವುದು. ಅದ್ಭುತ, ಹೆಮ್ಮೆ – ಈ ಎರಡೇ ಭಾವನೆಗಳು ನನ್ನಲ್ಲಿ ಮೂಡಿವೆ. ಇಂತಹ ಸಿನಿಮಾ ತಾನೇ ತಾನಾಗಿ ಆಗುವುದಿಲ್ಲ” ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.

ಸಿನಿಮಾದ ಪ್ರೊಡಕ್ಷನ್ ಡಿಸೈನ್, ಸಂಗೀತ ಹಾಗೂ ತಂತ್ರಜ್ಞರ ಕೆಲಸವನ್ನು ಅವರು ಎತ್ತಿ ಹಿಡಿದಿದ್ದಾರೆ. ಛಾಯಾಗ್ರಾಹಕ ವೀಕಾಸ್ ನೌಲಂಕಾ ಅವರ ಕೆಲಸವನ್ನು ಹೊಸ ತಲೆಮಾರಿನ ಛಾಯಾಗ್ರಾಹಕರಿಗೆ ಮಾರ್ಗದರ್ಶಕ ಎಂದು ಬಣ್ಣಿಸಿದ್ದಾರೆ. ಪ್ರತಿಯೊಂದು ವಿಭಾಗವೂ ಪರಸ್ಪರ ಸಿಂಕ್ ಆಗಿರುವುದು ಈ ಸಿನಿಮಾದ ದೊಡ್ಡ ಶಕ್ತಿ ಎಂದಿದ್ದಾರೆ.

“ಇದು ಸಂಪೂರ್ಣವಾಗಿ ನಿರ್ದೇಶಕ ಮತ್ತು ಬರಹಗಾರರ ಸಿನಿಮಾ. ಆದಿತ್ಯ ಧಾರ್ ಅವರೇ, ನಿಮ್ಮ ಸಿನಿಮಾ ಮಾಡುವ ಸ್ಕೇಲ್ ಮತ್ತು ಡಿಸೈನ್ ಯಾವಾಗಲೂ ದೊಡ್ಡದು. ಇದು ಇನ್ನೊಂದು ಲೆವೆಲ್. ನಾನು ಹೆಮ್ಮೆಯಿಂದ ಈ ಸಿನಿಮಾ ನೋಡಿದ್ದೇನೆ” ಎಂದು ಹೇಳಿದ್ದಾರೆ.

ಇನ್ನೂ ಮುಂದೆ ಹೋಗಿ, “ನೀವು ನಿಜಕ್ಕೂ ಧನ್ಯ. ನೀವು ದೇವರ ಮಗ. ನಿಮಗೆ ಇನ್ನಷ್ಟು ಶಕ್ತಿ ಸಿಗಲಿ. ಹೀಗೆ ಮುಂದುವರಿಯಿರಿ. ಯುವ ಜನತೆ ಇಂಥ ಸಿನಿಮಾ ಮಾಡಿದಾಗಲೇ ಭಾರತೀಯ ಚಿತ್ರರಂಗ ಬೆಳೆಯುತ್ತದೆ” ಎಂದು ಆದಿತ್ಯ ಧಾರ್‌ಗೆ ಭಾವುಕ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನು ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್’ ಸಿನಿಮಾ ಈಗಾಗಲೇ 774 ಕೋಟಿ ರೂಪಾಯಿ ಮೀರಿದ ಕಲೆಕ್ಷನ್ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.

ಪೊಲೀಸರ ಕಾರ್ಯಾಚರಣೆ: ₹3.16 ಕೋಟಿ ಮೌಲ್ಯದ MDMA ಸೀಜ್, ಇಬ್ಬರು ಬಂಧನ

0

ಬೆಂಗಳೂರು: ಹೊಸ ವರ್ಷದ ದಿನ ಅಶೋಕ್ ನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ₹3.16 ಕೋಟಿ ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಸೈಯದ್ ತಾರಿಕ್ ಇಕ್ಬಾಲ್ ಹಾಗೂ ಶೇಖ್ ಮೊಹಮ್ಮದ್ ಅರ್ಬಾಸ್ ಎಂಬ ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತರಿಂದ 3 ಕೆಜಿ 169 ಗ್ರಾಂ MDMA ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಬೆಂಗಳೂರು ಮೂಲದವರಾಗಿದ್ದು, ಡ್ರಗ್ಸ್ ಅನ್ನು ನೈಜೀರಿಯಾ ಮೂಲದ ವ್ಯಕ್ತಿಯಿಂದ ತರಿಸಿಕೊಂಡಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಸದ್ಯ ನೈಜೀರಿಯಾ ಮೂಲದ ಪ್ರಮುಖ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.

ಗಾಯದಿಂದ ಚೇತರಿಸಿಕೊಂಡ ಶ್ರೇಯಸ್ ಅಯ್ಯರ್: ವಿಜಯ ಹಝಾರೆ ಟ್ರೋಫಿ ಗೆ ಕಂಬ್ಯಾಕ್

0

ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಟೀಮ್ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್ ಇದೀಗ ಮತ್ತೆ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ವಿಶೇಷವೆಂದರೆ, ಅವರು ವಿಜಯ ಹಝಾರೆ ಟ್ರೋಫಿ ಮೂಲಕ ಕ್ರಿಕೆಟ್‌ಗೆ ಮರಳುತ್ತಿದ್ದಾರೆ.

ಮುಂಬೈ ತಂಡದ ನಾಯಕ ಶಾರ್ದೂಲ್ ಠಾಕೂರ್ ಗಾಯಗೊಂಡಿರುವ ಕಾರಣ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಹೀಗಾಗಿ ಮುಂಬೈ ತಂಡದ ನಾಯಕತ್ವವನ್ನು ಶ್ರೇಯಸ್ ಅಯ್ಯರ್ ಅವರಿಗೆ ವಹಿಸಲಾಗಿದೆ. ಇಂದು (ಜನವರಿ 6) ನಡೆಯಲಿರುವ ಹಿಮಾಚಲ ಪ್ರದೇಶ್ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ.

ಅಲ್ಲದೆ, ಜನವರಿ 8ರಂದು ಪಂಜಾಬ್ ವಿರುದ್ಧ ನಡೆಯುವ ಪಂದ್ಯದಲ್ಲೂ ಅವರು ನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಈ ಎರಡು ಪಂದ್ಯಗಳ ಮೂಲಕ ಶ್ರೇಯಸ್ ಅಯ್ಯರ್ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಾಗಿದೆ. ಇದಾದ ಬಳಿಕವೇ ಅವರು ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಅಯ್ಯರ್ ಅವರನ್ನು ಆಯ್ಕೆ ಮಾಡಲಾಗಿದ್ದರೂ, ಗಾಯದ ಹಿನ್ನೆಲೆಯಲ್ಲಿ ದೇಶೀಯ ಪಂದ್ಯಗಳ ಮೂಲಕ ಫಿಟ್ನೆಸ್ ತೋರಿಸಲು ಸೂಚಿಸಲಾಗಿದೆ. ಜನವರಿ 8ರ ಬಳಿಕವೇ ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳುವ ಕುರಿತು ಅಂತಿಮ ತೀರ್ಮಾನವಾಗಲಿದೆ.

 

ಧಾರವಾಡ| ಭೀಕರ ಅಗ್ನಿ ದುರಂತ; ಮೂರು ಅಂಗಡಿಗಳು ಸುಟ್ಟು ಕರಕಲು!

0

ಧಾರವಾಡ:- ಧಾರವಾಡ ನಗರದ ಮಾಳಮಡ್ಡಿ ಬಡಾವಣೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.

ಶಾರ್ಟ್​​ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂರು ಅಂಗಡಿಗಳು ಸುಟ್ಟು ಕರಕಲಾಗಿದೆ‌. ಹಣ್ಣಿನ ಅಂಗಡಿ ಸೇರಿ ಎರಡು ಅಂಗಡಿಗಳು ನಿರ್ನಾಮವಾಗಿದ್ದು, ಬೆಂಕಿ ಕಂಡು ಸ್ಥಳೀಯರು ಅದನ್ನು ಆರಿಸುವ ಯತ್ನ ಮಾಡಿದ್ದಾರೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಿದ್ದು, ದೊಡ್ದ ಅನಾಹುತ ತಪ್ಪಿದೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯ್ ರಾಜಕೀಯ ಪ್ರವೇಶಕ್ಕೂ ಮುನ್ನ ‘ಜನ ನಾಯಗನ್’ಗೆ ಸೆನ್ಸಾರ್ ಶಾಕ್? ಕೋರ್ಟ್ ಮೆಟ್ಟಿಲೇರಲು ಚಿತ್ರತಂಡ ಚಿಂತನೆ

ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ವಿವಾದಕ್ಕೆ ಸಿಲುಕಿದೆ. ರಿಲೀಸ್‌ಗೆ ಕೇವಲ ಮೂರು ದಿನ ಮಾತ್ರ ಉಳಿದಿದ್ದರೂ, ಸೆನ್ಸಾರ್ ಮಂಡಳಿ ಇನ್ನೂ ಸಿನಿಮಾಕ್ಕೆ ಪ್ರಮಾಣಪತ್ರ ನೀಡದೆ ವಿಳಂಬ ಮಾಡುತ್ತಿರುವುದು ಚಿತ್ರರಂಗದ ವಲಯದಲ್ಲಿ ಸಂಚಲನ ಮೂಡಿಸಿದೆ.

ಜನವರಿ 9ರಂದು ಬಿಡುಗಡೆಗೆ ಸಿದ್ಧವಾಗಿರುವ ‘ಜನ ನಾಯಗನ್’ ಸಿನಿಮಾವನ್ನು ಡಿಸೆಂಬರ್ 19ರಂದೇ ಸೆನ್ಸಾರ್ ಮಂಡಳಿ ವೀಕ್ಷಣೆ ಮಾಡಿತ್ತು. ವೀಕ್ಷಣೆಯ ವೇಳೆ ಕೆಲವು ದೃಶ್ಯಗಳಿಗೆ ಕತ್ತರಿ ಹಾಗೂ ಕೆಲ ಸಂಭಾಷಣೆಗಳಿಗೆ ಮ್ಯೂಟ್ ಮಾಡುವಂತೆ ಸೂಚನೆ ನೀಡಲಾಗಿತ್ತು. ಈ ಎಲ್ಲ ಬದಲಾವಣೆಗಳನ್ನು ಪೂರ್ಣಗೊಳಿಸಿ ತಂಡ ಮತ್ತೆ ಸಿನಿಮಾವನ್ನು ಮಂಡಳಿಗೆ ಸಲ್ಲಿಸಿದೆ. ಆದರೂ ತಿಂಗಳು ಕಳೆದರೂ ಸೆನ್ಸಾರ್ ಪತ್ರ ಸಿಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪೂಜಾ ಹೆಗ್ಡೆ ಹಾಗೂ ಮಮಿತಾ ಬೈಜು ನಟಿಸಿರುವ ಈ ಚಿತ್ರವನ್ನು ಎಚ್. ವಿನೋದ್ ನಿರ್ದೇಶನ ಮಾಡಿದ್ದು, ತೆಲುಗಿನ ‘ಭಗವಂತ ಕೇಸರಿ’ ಚಿತ್ರದ ರಿಮೇಕ್ ಆಗಿದೆ. ಈ ಬಾರಿ ಕಥೆಯಲ್ಲಿ ರಾಜಕೀಯ ಅಂಶಗಳನ್ನು ಸೇರಿಸಲಾಗಿದೆ ಎನ್ನಲಾಗಿದ್ದು, ಇದೇ ವಿಷಯಕ್ಕೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯೊಬ್ಬರು, ಸೆನ್ಸಾರ್ ಮಂಡಳಿಯ ನಡೆ ಉದ್ದೇಶಪೂರ್ವಕ ಹಾಗೂ ರಾಜಕೀಯ ಪ್ರೇರಿತ ಎಂದು ಗಂಭೀರ ಆರೋಪ ಮಾಡಿದ್ದಾರೆ. ಜನವರಿ 6ರೊಳಗೆ ಪ್ರಮಾಣಪತ್ರ ಸಿಗದಿದ್ದರೆ ಕೋರ್ಟ್ ಮೆಟ್ಟಿಲೇರಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.

ವಿಜಯ್ ಈ ಸಿನಿಮಾದ ಬಳಿಕ ಸಂಪೂರ್ಣವಾಗಿ ರಾಜಕೀಯಕ್ಕೆ ತೊಡಗಿಕೊಳ್ಳಲಿದ್ದು, ಈ ವರ್ಷ ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರು ಸಕ್ರಿಯ ಪಾತ್ರವಹಿಸುವ ನಿರೀಕ್ಷೆಯಿದೆ. ಇಂತಹ ಸಮಯದಲ್ಲಿ ‘ಜನ ನಾಯಗನ್’ ಸಿನಿಮಾ ಎದುರಿಸುತ್ತಿರುವ ಸೆನ್ಸಾರ್ ಅಡೆತಡೆಗಳು ಇನ್ನಷ್ಟು ಚರ್ಚೆಗೆ ಗ್ರಾಸವಾಗಿವೆ.

ಇನ್ನು, ವಿಜಯ್ ಅವರ ಕೊನೆಯ ಸಿನಿಮಾ ರಿಮೇಕ್ ಆಗಿರುವುದರ ಬಗ್ಗೆ ಅಭಿಮಾನಿಗಳಲ್ಲೂ ಬೇಸರ ವ್ಯಕ್ತವಾಗಿದೆ. ರಿಲೀಸ್‌ಗೆ ಮುನ್ನವೇ ವಿವಾದಗಳಿಂದ ಸುತ್ತುವರಿದಿರುವ ‘ಜನ ನಾಯಗನ್’ ಈಗ ಕೋರ್ಟ್ ಮೆಟ್ಟಿಲೇರಬಹುದೇ ಎಂಬುದೇ ಮುಂದಿನ ಕುತೂಹಲ.

ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್; ಚಿನ್ನ, ಬೆಳ್ಳಿ ಮತ್ತೆ ಹೆಚ್ಚಳ! ಗ್ರಾಂ ಎಷ್ಟು?

0

ಗೋಲ್ಡ್ ಪ್ರಿಯರಿಗೆ ಮತ್ತೆ ಬಿಗ್ ಶಾಕ್ ಎದುರಾಗಿದ್ದು, ಚಿನ್ನ, ಬೆಳ್ಳಿ ಮತ್ತೆ ಹೆಚ್ಚಳವಾಗಿದೆ.

ನಿನ್ನೆ ಗ್ರಾಮ್​ಗೆ 145 ರೂ ಏರಿದ್ದ ಚಿನ್ನದ ಬೆಲೆ ಇವತ್ತು 130 ರೂ ಹೆಚ್ಚಿದೆ. ಎರಡು ದಿನದಲ್ಲಿ 275 ರೂ ಬೆಲೆ ಏರಿಕೆ ಆಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆ ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ ಕೂಡ ಭರ್ಜರಿ ಹೆಚ್ಚಳ ಕಂಡಿದೆ. ನಿನ್ನೆ ಆರು ರೂ ಹೆಚ್ಚಿದ್ದ ಅದರ ಬೆಲೆ ಇಂದೂ ಕೂಡ ಅಷ್ಟೇ ಪ್ರಮಾಣದಲ್ಲಿ ಏರಿಕೆ ಆಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,27,250 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,38,820 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,27,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,300 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,100 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 6ಕ್ಕೆ):-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,882 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,725 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,412 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 253 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,882 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,725 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 253 ರೂ.

ಚಿಕ್ಕಮಗಳೂರಿನಲ್ಲಿ ಕೆಎಫ್‌ಡಿ ಆತಂಕ: ಒಂದೇ ಗ್ರಾಮದಲ್ಲಿ ಇಬ್ಬರಿಗೆ ಸೋಂಕು!

0

ಚಿಕ್ಕಮಗಳೂರು: ಎನ್‌.ಆರ್‌.ಪುರ ತಾಲೂಕಿನ ಕಟ್ಟಿನಮನೆ ಗ್ರಾಮದಲ್ಲಿ ಮತ್ತೋರ್ವ ಯುವಕನಿಗೆ ಮಂಗನ ಕಾಯಿಲೆ ಸೋಂಕು ದೃಢಪಟ್ಟಿದೆ. ಈ ಮೂಲಕ ಗ್ರಾಮದ ಇಬ್ಬರಲ್ಲಿ ಸೋಂಕು ಪತ್ತೆಯಾದಂತಾಗಿದೆ.

ಗ್ರಾಮದ 30 ವರ್ಷದ ಯುವಕನಿಗೆ ಕೆಎಫ್‌ಡಿ ಸೋಂಕು ಪತ್ತೆಯಾಗಿದ್ದು, ಸೋಂಕಿತ ಯುವಕನನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಬ್ಬ ವ್ಯಕ್ತಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಟ್ಟಿನಮನೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ ಹಾಗೂ ಯಾರಿಗಾದರೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವಂತೆ ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಿಳ್ಕೋಡಿ ಗ್ರಾಮದಲ್ಲಿ ಆರು ಮಂದಿಗೆ ಮಂಗನ ಕಾಯಿಲೆ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿತ್ತು.

ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ: 25 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್‌ʼನಲ್ಲಿ ವಿಚಾರಣೆ

0

ಬೆಳಗಾವಿ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಮಾರು 25 ವರ್ಷಗಳ ಬಳಿಕ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಲಿದೆ. ಈ ಪ್ರಕರಣದ ವಿಚಾರಣೆ ಜನವರಿ 21ರಂದು ನಡೆಯಲಿದೆ.

ಮಹಾರಾಷ್ಟ್ರ ಸರ್ಕಾರವು ಬೆಳಗಾವಿ ಸೇರಿದಂತೆ ಕರ್ನಾಟಕದ 865 ನಗರ, ಪಟ್ಟಣ ಮತ್ತು ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಅರ್ಜಿ ಸಲ್ಲಿಸಿತ್ತು. ಇದೀಗ ಆ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ.

ಗಡಿ ವಿವಾದ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಅಲರ್ಟ್ ಆಗಿದ್ದು, ಗಡಿ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ.

ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಅಶೋಕ ಹಿಂಚಗೇರಿ, ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಪರ ವಾದ ಮಂಡಿಸುವ ವಕೀಲ ನಿಶಾಂತ ಪಾಟೀಲ್, ಗಡಿ ಮತ್ತು ನದಿ ಸಂರಕ್ಷಣಾ ಆಯೋಗದ ಸದಸ್ಯ ಆರ್.ಬಿ. ಧರ್ಮೆಗೌಡ, ಕಾನೂನು ಇಲಾಖೆ ಅಪರ ಕಾರ್ಯದರ್ಶಿ ಕೆ.ಎಲ್. ಅಶೋಕ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಗಡಿ ವಿವಾದ ಅರ್ಜಿಯನ್ನು ತಿರಸ್ಕರಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಬಲವಾದ ವಾದ ಮಂಡಿಸಲು ಕರ್ನಾಟಕ ಕಾನೂನು ತಂಡ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಭೀಕರ ರಸ್ತೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು!

0

ದಾವಣಗೆರೆ:- ದಾವಣಗೆರೆಯ ಶಿರಮಗೊಂಡನಹಳ್ಳಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ಜರುಗಿದೆ.

27 ವರ್ಷದ ಮಂಜುನಾಥ ಮೃತ ಬೈಕ್ ಸವಾರ. ಗದಗ ಜಿಲ್ಲೆಯ ಶಿಂಗ್ಲಿ ಗ್ರಾಮದ ಯುವಕ ಬೈಕಿನಲ್ಲಿ ಬೆಂಗಳೂರಿಗೆ ಬರುತ್ತಿದ್ದಾಗ ಹಿಂಬದಿಯಿಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ.

ಡಿಕ್ಕೆ ಹೊಡೆದ ರಭಸಕ್ಕೆ ಮಂಜುನಾಥ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸ್ಥಳಕ್ಕೆ ಸಂಚಾರಿ ಸಿಪಿಐ ಮಂಜುನಾಥ್ ಹಾಗೂ ದಕ್ಷಿಣ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಧರ್ಮೇಂದ್ರ ಆಸ್ಪತ್ರೆಯಲ್ಲಿದ್ದಾಗ ನಮಗೆ ಕಿರುಕುಳ ನೀಡಲಾಗಿದೆ: ಹೇಮಾ ಮಾಲಿನಿ ಬೇಸರ

ಬಾಲಿವುಡ್ ದಿಗ್ಗಜ ಧರ್ಮೇಂದ್ರ ನವೆಂಬರ್ 24ರಂದು ನಿಧನರಾಗುವ ಮುನ್ನ, ಅವರ ಕುಟುಂಬ ಭಾರೀ ಮಾನಸಿಕ ಒತ್ತಡ ಮತ್ತು ಮಾಧ್ಯಮ ಕಿರುಕುಳವನ್ನು ಎದುರಿಸಿತ್ತು ಎಂಬ ವಿಚಾರ ಈಗ ಹೊರಬಂದಿದೆ. ಧರ್ಮೇಂದ್ರ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದಾಗ, ಆಸ್ಪತ್ರೆ ಹೊರಗೆ ಪಾಪರಾಜಿಗಳು ನಿರಂತರವಾಗಿ ಜಮಾಯಿಸಿದ್ದರಿಂದ ಡಿಯೋಲ್ ಕುಟುಂಬ ಅಸಹಾಯ ಸ್ಥಿತಿಗೆ ತಲುಪಿತ್ತು.

ಆಸ್ಪತ್ರೆ ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆ, ಧರ್ಮೇಂದ್ರ ಅವರ ಚಿಕಿತ್ಸೆಯನ್ನು ಮನೆಯಲ್ಲಿಯೇ ಮುಂದುವರಿಸಲು ಕುಟುಂಬ ನಿರ್ಧರಿಸಿತು. ಆದರೆ ಅವರನ್ನು ಮನೆಗೆ ಕರೆತಂದ ಬಳಿಕವೂ ಪಾಪರಾಜಿಗಳು ಮನೆಯ ಹೊರಗೆ ನಿಂತು ಕುಟುಂಬದ ಚಲನವಲನಗಳನ್ನೆಲ್ಲ ಸೆರೆಹಿಡಿಯುತ್ತಿದ್ದರು ಎಂದು ಹೇಮಾ ಮಾಲಿನಿ ಆರೋಪಿಸಿದ್ದಾರೆ.

ಈ ನಿರಂತರ ಕಿರುಕುಳ ಸನ್ನಿ ಡಿಯೋಲ್‌ಗೆ ತೀವ್ರ ಆಕ್ರೋಶ ತರಿಸಿತ್ತು. ಭಾವನಾತ್ಮಕ ಒತ್ತಡದಲ್ಲಿದ್ದ ಸನ್ನಿ ಡಿಯೋಲ್, ಪಾಪರಾಜಿಗಳ ಮೇಲೆ ಕೋಪ ಹೊರಹಾಕಿದ್ದು ವೈರಲ್ ಆಗಿತ್ತು. ಈ ಬಗ್ಗೆ ಮಾತನಾಡಿದ ಹೇಮಾ ಮಾಲಿನಿ, “ಆ ಸಮಯದಲ್ಲಿ ನಾವು ಎಲ್ಲರೂ ತುಂಬಾ ನೋವಿನ ಹಂತದಲ್ಲಿದ್ದೆವು. ಆದರೂ ಮಾಧ್ಯಮಗಳು ನಮ್ಮನ್ನು ಹಾಗೂ ನಮ್ಮ ಕಾರುಗಳನ್ನು ಹಿಂಬಾಲಿಸುತ್ತಿದ್ದವು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಧರ್ಮೇಂದ್ರ ಅವರ ನಿಧನ ಎಲ್ಲರಿಗೂ ದೊಡ್ಡ ಆಘಾತ. ಕಳೆದ ಒಂದು ತಿಂಗಳಿನಿಂದ ನಾವು ನಿರಂತರವಾಗಿ ಆಸ್ಪತ್ರೆ ಮತ್ತು ಮನೆ ನಡುವೆ ಓಡಾಡುತ್ತಿದ್ದೆವು. ಅವರು ಈ ಹಿಂದೆಯೂ ಹಲವು ಬಾರಿ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದರು. ಈ ಬಾರಿಯೂ ಅವರು ಬದುಕುತ್ತಾರೆ ಎಂಬ ನಿರೀಕ್ಷೆಯಿತ್ತು” ಎಂದು ಹೇಮಾ ಮಾಲಿನಿ ಹೇಳಿದ್ದಾರೆ.

ಧರ್ಮೇಂದ್ರ ಅವರ ಅಂತಿಮ ದಿನಗಳಲ್ಲಿ ಕುಟುಂಬ ಎದುರಿಸಿದ ಈ ಅನುಭವ ಇದೀಗ ಬಾಲಿವುಡ್‌ನಲ್ಲಿ ಮಾಧ್ಯಮ ನೈತಿಕತೆ ಕುರಿತ ಚರ್ಚೆಗೆ ಕಾರಣವಾಗಿದೆ.

error: Content is protected !!