Home Blog Page 214

ಪೊಲೀಸರ ಕಿರುಕುಳಕ್ಕೆ ವ್ಯಕ್ತಿ ಬಲಿ? ತೋಟದಲ್ಲಿ ನೇಣು‌ ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ!

0

ದೇವನಹಳ್ಳಿ:- ಹೊಸಕೋಟೆ ತಾಲೂಕಿನ ಮೈಲಾಪುರ ಗ್ರಾಮದ ಹೊರವಲಯದಲ್ಲಿ ಪೊಲೀಸರ ಕಿರುಕುಳ ಹಿನ್ನೆಲೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಮೃತ ವ್ಯಕ್ತಿಯನ್ನು ಮೈಲಾಪುರ ಗ್ರಾಮದ ಮಂಜುನಾಥ್(44) ಎಂದು ಗುರುತಿಸಲಾಗಿದೆ. ತೋಟದ ಬಳಿ ನೇಣು‌ ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ತೋಟದ ಕೆಲಸಕ್ಕೆ ಬರುತ್ತಿದ್ದ ಅಶ್ವಿನಿ ಎಂಬಾಕೆ 8 ದಿನಗಳಿಂದ ನಾಪತ್ತೆಯಾಗಿದ್ದು, ಪ್ರಕರಣ ಸಂಬಂಧ ಮಂಜುನಾಥ್​ನನ್ನ ಪೊಲೀಸರು ವಿಚಾರಣೆಗೆ ಕರೆದಿದ್ದರು. ಮಹಿಳೆ ಜೊತೆ ಸಂಬಂಧ ಆರೋಪ ಹಿನ್ನೆಲೆ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ಮುಗಿಸಿ‌ ಮನೆಗೆ ಬಂದಿದ್ದ ಅವರು​​​ ಶವವಾಗಿ ಪತ್ತೆಯಾಗಿದ್ದು, ತಂದೆ ಸಾವಿಗೆ ಪೊಲೀಸರೇ ಕಾರಣ ಎಂದು ಮಕ್ಕಳು ಆರೋಪಿಸಿದ್ದಾರೆ.

ಕಾನ್ಸ್​​ಟೇಬಲ್​ ಅಂಬರೀಶ್ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದ್ದು, ಕೊಲೆ ಮಾಡಿರುವ ಶಂಕೆ ಇದೆ ಎಂದು ಸಂಬಂಧಿಕರು ಹೇಳಿದ್ದಾರೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.

ಸಾಕ್ಷಿ ನಾಶಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತದೇಹವನ್ನು ಬಲವಂತವಾಗಿ ದಹನ: ಶ್ರೀರಾಮುಲು ಗಂಭೀರ ಆರೋಪ

0

ಬಳ್ಳಾರಿ, ಜನವರಿ 6: ಬಳ್ಳಾರಿ ನಗರದಲ್ಲಿ ನಡೆದ ಗಲಭೆ ವೇಳೆ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅವರ ಮೃತದೇಹವನ್ನು ಕುಟುಂಬಸ್ಥರ ತೀವ್ರ ವಿರೋಧದ ನಡುವೆಯೇ ಯಾರದ್ದೋ ಒತ್ತಾಯಕ್ಕೆ ಮಣಿದು ದಹನ ಮಾಡಲಾಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಇದು ಸಾಕ್ಷಿ ನಾಶ ಮಾಡುವ ಉದ್ದೇಶದಿಂದಲೇ ನಡೆದ ಕ್ರಮ ಎಂದು ಅವರು ಆರೋಪಿಸಿದ್ದು, ಪ್ರಕರಣಕ್ಕೆ ರಾಜಕೀಯ ತಿರುವು ಪಡೆದಿದೆ.

ಗಲಭೆ ಪ್ರಕರಣ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಬಳ್ಳಾರಿಗೆ ಭೇಟಿ ನೀಡಿ ಸುದ್ದಿಗೋಷ್ಠಿ ನಡೆಸಿದ ತಕ್ಷಣವೇ, ಮಾಜಿ ಸಚಿವ ಶ್ರೀರಾಮುಲು ಹಾಗೂ ಶಾಸಕ ಜನಾರ್ದನ ರೆಡ್ಡಿ ಜಂಟಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಸರ್ಕಾರ ಮತ್ತು ಸ್ಥಳೀಯ ಆಡಳಿತದ ವಿರುದ್ಧ ತೀವ್ರ ಆರೋಪಗಳ ಸುರಿಮಳೆಗೈದರು.

ಶ್ರೀರಾಮುಲು ಮಾತನಾಡಿ, “ಬಳ್ಳಾರಿ ಘಟನೆ ಆಕಸ್ಮಿಕವಲ್ಲ, ಇದು ಪೂರ್ವನಿಯೋಜಿತ ಸಂಚು. ಫಿಲ್ಮ್ ಸ್ಟೈಲ್‌ನಲ್ಲಿ ಶಾಸಕ ಭರತ್ ರೆಡ್ಡಿ ಅವರ ಬೆಂಬಲಿಗರು ಎಂಟ್ರಿ ಕೊಟ್ಟು, ಬಾರ್‌ಗಳಿಂದ ಸೋಡಾ ಬಾಟಲಿಗಳಲ್ಲಿ ಪೆಟ್ರೋಲ್ ತುಂಬಿಕೊಂಡು ದಾಳಿ ನಡೆಸಿದ್ದಾರೆ” ಎಂದು ನೇರ ಆರೋಪ ಮಾಡಿದರು.

ಇನ್ನೂ ಗಂಭೀರ ಆರೋಪ ಮಾಡಿರುವ ಅವರು, ಮೃತ ರಾಜಶೇಖರ್ ಅವರ ಅಂತ್ಯಸಂಸ್ಕಾರ ಸಂಪ್ರದಾಯದಂತೆ ಮಣ್ಣು ಮಾಡುವ ಮೂಲಕ ನಡೆಯಬೇಕಿತ್ತು. ಆದರೆ, ಕುಟುಂಬಸ್ಥರ ವಿರೋಧದ ನಡುವೆಯೇ ದೇಹವನ್ನು ಸುಟ್ಟು ಹಾಕಲಾಗಿದೆ. ಇದು ವ್ಯವಸ್ಥಿತವಾಗಿ ಸಾಕ್ಷಿ ನಾಶ ಮಾಡುವ ಪ್ರಯತ್ನ ಎಂದರು.

“ಕುಟುಂಬದವರನ್ನು ಪೊಲೀಸರು ಹೆದರಿಸಿ, ಬೆದರಿಕೆ ಹಾಕಿ ಮಾನವ ಸರ್ಪಗಾವಲಿನಲ್ಲಿ ದಹನ ನಡೆಸಲಾಗಿದೆ. ಏಕೆ ಸುಟ್ಟು ಹಾಕಲಾಯಿತು ಎಂಬುದಕ್ಕೆ ಯಾರೂ ಉತ್ತರ ಕೊಟ್ಟಿಲ್ಲ. ಆದರೆ, ಇಂದಲ್ಲ ನಾಳೆ ಈ ಸತ್ಯ ಹೊರಬರುತ್ತದೆ” ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜಶೇಖರ್ ತಂದೆಯ ಸಮಾಧಿಯ ಪಕ್ಕದಲ್ಲಿ ನೆಲ ಅಗೆದಿರುವ ಫೋಟೋಗಳನ್ನು ಪ್ರದರ್ಶಿಸಿದ ಶ್ರೀರಾಮುಲು, ಅಂತ್ಯಸಂಸ್ಕಾರಕ್ಕೆ ಪೂರ್ವಸಿದ್ಧತೆ ನಡೆದಿದ್ದರೂ ಸಾಕ್ಷಿ ಸಿಗಬಾರದು ಎಂಬ ಉದ್ದೇಶದಿಂದಲೇ ದಹನ ಮಾಡಲಾಗಿದೆ ಎಂದು ಆರೋಪಿಸಿದರು. “ಕುಟುಂಬಸ್ಥರು ಪರಿಪರಿಯಾಗಿ ಬೇಡಿಕೊಂಡರೂ ಮೃತದೇಹವನ್ನು ಸುಟ್ಟಿದ್ದಾರೆ. ಇದು ಸಹಜವಲ್ಲ” ಎಂದರು.

ಪೊಲೀಸ್ ಅಧಿಕಾರಿಗಳ ಮೇಲೂ ಅವರು ಗಂಭೀರ ಆರೋಪ ಹೊರಿಸಿದರು. “ಎಎಸ್ಪಿ ರವಿಕುಮಾರ್ ಅವರು ಕುಟುಂಬದವರನ್ನು ಬೆದರಿಸಿ ದಹನ ನಡೆಸಿಸಿದ್ದಾರೆ. ಇದು ಬೇಕಂತಲೇ ಮಾಡಿದ ಮರ್ಡರ್. ಕೊಂದು ನಮ್ಮ ಮೇಲೆ ಹಾಕುವ ಪ್ರಯತ್ನ ನಡೆಯುತ್ತಿದೆ. ನಮ್ಮ ರಾಜಕೀಯ ಭವಿಷ್ಯ ನಾಶ ಮಾಡಲು ಶಾಸಕ ಭರತ್ ರೆಡ್ಡಿ ಸಂಚು ರೂಪಿಸಿದ್ದಾರೆ” ಎಂದು ಕಿಡಿಕಾರಿದರು.

ಡಿಎಸ್ಪಿ ನಂದಾರೆಡ್ಡಿ ಮತ್ತು ಎಎಸ್ಪಿ ರವಿಕುಮಾರ್ ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಒತ್ತಾಯಿಸಿದ ಅವರು, “ಜೀವ ತೆಗೆದುಕೊಳ್ಳುವ ಅಧಿಕಾರ ದೇವರಿಗೆ ಮಾತ್ರ ಇದೆ. ರಾಜಕೀಯ ಶಾಶ್ವತ ಅಲ್ಲ. ಇಂದು ನಾನು, ನಾಳೆ ನೀನು ಸೋಲ್ತೀವಿ. ಆದರೆ, ಮನುಷ್ಯನ ಜೀವದ ಜೊತೆ ಆಟ ಆಡೋದು ಅಪರಾಧ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರಿದು ಮಾತನಾಡಿದ ಶ್ರೀರಾಮುಲು, “ನೀವು ಎಸ್‌ಪಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡಿದ್ದೀರಿ. ಆದರೆ, ಅಸಲಿ ತಪ್ಪಿತಸ್ಥ ಎಎಸ್ಪಿ ರವಿಕುಮಾರ್. ಘಟನೆ ನಡೆಯುವಾಗ ಅವರು ಸ್ಥಳದಲ್ಲಿರಲಿಲ್ಲ. ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದರು. ಪರಿಸ್ಥಿತಿ ಕೈಮೀರುತ್ತಿದ್ದರೂ ಟಿಯರ್ ಗ್ಯಾಸ್ ಬಳಕೆಗೆ ಅನುಮತಿ ನೀಡಲಿಲ್ಲ” ಎಂದು ಆರೋಪಿಸಿದರು.

ಇಡೀ ಘಟನೆ ಪೂರ್ವನಿಯೋಜಿತ ಹಲ್ಲೆ ಎಂದು ಪುನರುಚ್ಚರಿಸಿದ ಅವರು, “ಯಾವ್ಯಾವ ಕೇಸ್ ಹಾಕಬೇಕು ಎಂದು ಐಜಿ ಜೊತೆ ಭರತ್ ರೆಡ್ಡಿ ಚರ್ಚೆ ಮಾಡ್ತಾರೆ. ಮಧ್ಯೆ ಮಧ್ಯೆ ಜನಾರ್ದನ ರೆಡ್ಡಿಯವರನ್ನೂ ಜೋಡಿಸುತ್ತಾರೆ. ನಮ್ಮ ತಪ್ಪಿದ್ರೆ ನಮ್ಮನ್ನು ಬಿಡ್ತಿದ್ರಾ? ಸಿಬಿಐ ತನಿಖೆಗೆ ಪ್ರಕರಣ ಹೋದಾಗ ಎಲ್ಲರೂ ಹೊರಗೆ ಬರುವುದೇ ಖಚಿತ” ಎಂದು ಎಚ್ಚರಿಕೆ ನೀಡಿದರು.

ಬಳ್ಳಾರಿ ಗಲಭೆ ಇದೀಗ ಕೇವಲ ಕಾನೂನು-ಸುವ್ಯವಸ್ಥೆಯ ವಿಷಯವಲ್ಲದೆ, ಸಾಕ್ಷಿ ನಾಶ, ಪೊಲೀಸ್ ಪಾತ್ರ ಮತ್ತು ರಾಜಕೀಯ ಸಂಚು ಆರೋಪಗಳೊಂದಿಗೆ ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ.

ಸಿದ್ದರಾಮಯ್ಯ ದಾಖಲೆ ಸಿಎಂ ಸಂಭ್ರಮ: ಗದಗ ಜಿಲ್ಲೆಯಲ್ಲಿ ನಾಟಿಕೋಳಿ ಸಾರು ಘಮಘಮ!

0

ಗದಗ: ಸಿದ್ದರಾಮಯ್ಯ ದೀರ್ಘಾವಧಿ ಮುಖ್ಯಮಂತ್ರಿ ಆಗಿ ದಾಖಲೆ ಬರೆಯುತ್ತಿರುವ ಹಿನ್ನಲೆಯಲ್ಲಿ, ಅವರ ಅಭಿಮಾನಿಗಳ ಸಂಭ್ರಮ ಹಳ್ಳಿ ಹಳ್ಳಿಗಳಿಗೂ ತಲುಪಿದೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಒದೇಗೋಳ ಗ್ರಾಮದಲ್ಲಿ ತಡರಾತ್ರಿ ಭರ್ಜರಿ ನಾಟಿಕೋಳಿ ಊಟದ ಔತಣಕೂಟ ಆಯೋಜಿಸಲಾಗಿತ್ತು.

ಸಿದ್ದರಾಮಯ್ಯ ಅಭಿಮಾನಿಗಳಿಂದ ಗ್ರಾಮಸ್ಥರಿಗೆ ವಿಶೇಷವಾಗಿ ನಾಟಿಕೋಳಿ ಸಾರು ಮತ್ತು ಜೋಳದ ರೊಟ್ಟಿ ವ್ಯವಸ್ಥೆ ಮಾಡಲಾಗಿತ್ತು. ಊಟದ ಸ್ಥಳದಲ್ಲಿ ನಾಟಿಕೋಳಿ ಸಾರಿನ ಘಮಘಮ ವಾಸನೆ ಹಬ್ಬಿ, ಗ್ರಾಮಸ್ಥರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

ಔತಣಕೂಟ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬ್ಯಾನರ್‌ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಬಳಿಕ ನೂರಾರು ಗ್ರಾಮಸ್ಥರು ಸಾಲುಗಟ್ಟಿ ನಿಂತು ನಾಟಿಕೋಳಿ ಸಾರು ಸವಿದು ಖುಷಿಪಟ್ಟರು.

ಕಾರ್ಯಕ್ರಮದಲ್ಲಿ ಗ್ರಾಮ ಮಹಿಳೆಯರು, ಮಕ್ಕಳು ಸಹ ಭಾಗವಹಿಸಿ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು. “ಸಿದ್ದರಾಮಯ್ಯ ಸಿಎಂ ಆಗಿರುವುದು ನಮ್ಮ ಹಳ್ಳಿಗೂ ಹಬ್ಬ” ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.

ಕೆಮ್ಮು-ಶೀತ ಇದ್ದಾಗ ಮೊಟ್ಟೆ ತಿನ್ನಬಹುದಾ? ನೀವು ತಿಳಿಯಲೇಬೇಕಾದ ಸತ್ಯ

0

ನಿಯಮಿತವಾಗಿ ಮೊಟ್ಟೆಗಳ (Eggs) ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯ ಲಾಭಗಳಿವೆ. ಅದಕ್ಕಾಗಿಯೇ ಮೊಟ್ಟೆಗಳನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ. ರುಚಿಯ ಜೊತೆಗೆ ದೇಹಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳನ್ನು ಮೊಟ್ಟೆ ಒದಗಿಸುತ್ತದೆ. ಮೊಟ್ಟೆಯ ಬಿಳಿ ಭಾಗವಾಗಲಿ ಅಥವಾ ಹಳದಿ ಭಾಗವಾಗಲಿ – ಇಡೀ ಮೊಟ್ಟೆಯೇ ಆರೋಗ್ಯಕ್ಕೆ ಉಪಯುಕ್ತ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಮೊಟ್ಟೆಯ ಬಿಳಿ ಭಾಗದಲ್ಲಿ ಪ್ರೋಟೀನ್ ಹಾಗೂ ನೀರಿನಾಂಶ ಹೆಚ್ಚು ಇದ್ದು, ಹಳದಿ ಭಾಗದಲ್ಲಿ ಪ್ರೋಟೀನ್, ಕೊಬ್ಬು, ವಿಟಮಿನ್‌ಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಆದರೆ ಕೆಮ್ಮು (Cough) ಮತ್ತು ಶೀತ ಬಂದಾಗ ಮೊಟ್ಟೆ ತಿನ್ನುವುದರಿಂದ ನಿಜವಾಗಿಯೂ ಪರಿಹಾರ ಸಿಗುತ್ತದೆಯೇ ಎಂಬ ಪ್ರಶ್ನೆ ಹಲವರಲ್ಲಿ ಇದೆ.

ಮೊಟ್ಟೆ ಕೆಮ್ಮು ಮತ್ತು ಶೀತವನ್ನು ನೇರವಾಗಿ ಗುಣಪಡಿಸುವುದಿಲ್ಲ. ಆದರೆ ಪರೋಕ್ಷವಾಗಿ ದೇಹಕ್ಕೆ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಮೊಟ್ಟೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ದೇಹವನ್ನು ಬಲಪಡಿಸುತ್ತವೆ. ಕೆಮ್ಮು ಮತ್ತು ಶೀತದ ವಿರುದ್ಧ ಹೋರಾಡಲು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತವೆ.

ಮೊಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇರುವುದರಿಂದ ದೇಹದ ಶಕ್ತಿ ಮಟ್ಟವನ್ನು ಹೆಚ್ಚಿಸುತ್ತವೆ. ಜೊತೆಗೆ ವಿಟಮಿನ್ ಡಿ, ವಿಟಮಿನ್ ಬಿ12 ಸೇರಿದಂತೆ ಅಗತ್ಯ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಇದರಿಂದ ದೇಹವು ನೈಸರ್ಗಿಕವಾಗಿ ಸೋಂಕುಗಳನ್ನು ಎದುರಿಸಲು ಸಹಾಯವಾಗುತ್ತದೆ. ಹೀಗಾಗಿ ಕೆಮ್ಮು ಅಥವಾ ಶೀತ ಇದ್ದಾಗ ಮಿತ ಪ್ರಮಾಣದಲ್ಲಿ ಮೊಟ್ಟೆ ಸೇವಿಸುವುದು ಸಾಮಾನ್ಯವಾಗಿ ಸುರಕ್ಷಿತವೆಂದು ಹೇಳಲಾಗುತ್ತದೆ.

ಮೊಟ್ಟೆಗಳನ್ನು ಸೇವಿಸುವ ವೇಳೆ ಗಂಟಲು ತೇವವಾಗಿರಲು ಸಾಕಷ್ಟು ನೀರು ಕುಡಿಯುವುದು ಮುಖ್ಯ. ಇದು ಕೆಮ್ಮಿನಿಂದ ಉಂಟಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ. ಹೆಚ್ಚುವರಿಯಾಗಿ, ಅರಿಶಿನ, ಜೇನುತುಪ್ಪ, ನಿಂಬೆ ಅಥವಾ ತುಳಸಿ–ಜೇನುತುಪ್ಪ ಮಿಶ್ರಣದೊಂದಿಗೆ ಬೆಚ್ಚಗಿನ ಹಾಲು ಕುಡಿಯುವುದರಿಂದ ಕೆಮ್ಮಿನಿಂದ ಇನ್ನಷ್ಟು ಪರಿಹಾರ ದೊರೆಯಬಹುದು. ಆದರೆ ಕೆಮ್ಮು ತೀವ್ರವಾಗಿದ್ದರೆ, ಜ್ವರ, ಉಸಿರಾಟದ ತೊಂದರೆ ಅಥವಾ ಇತರ ಗಂಭೀರ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯ.

ಜೈಲು ನಿಯಮಗಳ ಕಟ್ಟುನಿಟ್ಟು: ದರ್ಶನ್‌ಗೆ ಮನೆಯ ಬ್ಲಾಂಕೆಟ್ ಅನುಮಾನ, ಪವಿತ್ರ ಗೌಡಗೆ ಮನೆ ಊಟ ರದ್ದು?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ ಮನೆಯಿಂದ ತರಿಸಿಕೊಂಡ ಬ್ಲಾಂಕೆಟ್ ಸಿಗದಿರುವ ಸಾಧ್ಯತೆ ಹೆಚ್ಚಾಗಿದೆ. ಚಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮನೆಯಿಂದ ಬ್ಲಾಂಕೆಟ್ ಪಡೆಯಲು ಕೋರ್ಟ್ ಅನುಮತಿ ಪಡೆದಿದ್ದ ದರ್ಶನ್‌ಗೆ ಇದೀಗ ಜೈಲು ನಿಯಮಗಳೇ ಅಡ್ಡಿಯಾಗಿವೆ.

ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಅವರು, ಜೈಲಿನಲ್ಲಿರುವ ಎಲ್ಲ ಕೈದಿಗಳಿಗೆ ಸಮಾನವಾಗಿ ಒಂದೇ ರೀತಿಯ ಬ್ಲಾಂಕೆಟ್ ವಿತರಿಸುವಂತೆ ಆದೇಶ ಹೊರಡಿಸಲು ಮುಂದಾಗಿದ್ದಾರೆ. ಚಳಿಗಾಲ ಹಾಗೂ ಮಳೆಗಾಲ ಎರಡಕ್ಕೂ ಹೊಂದುವ ಬ್ಲಾಂಕೆಟ್‌ಗಳನ್ನು ಜೈಲು ವತಿಯಿಂದಲೇ ನೀಡುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಈ ಕ್ರಮ ಜಾರಿಯಾದರೆ ವೈಯಕ್ತಿಕವಾಗಿ ಮನೆಯಿಂದ ಬ್ಲಾಂಕೆಟ್ ಬಳಸುವ ಅವಕಾಶ ಕೈದಿಗಳಿಗೆ ಇರುವುದಿಲ್ಲ.

ಇನ್ನೊಂದೆಡೆ, ದರ್ಶನ್ ಪ್ರಕರಣದ ಮತ್ತೊಬ್ಬ ಆರೋಪಿ ಪವಿತ್ರ ಗೌಡ ಅವರಿಗೆ ನೀಡಲಾಗಿದ್ದ ಮನೆ ಊಟದ ಅನುಮತಿಯನ್ನು ಹಿಂಪಡೆಯಲು ಜೈಲಾಧಿಕಾರಿಗಳು ನಿರ್ಧರಿಸಿದ್ದಾರೆ. ಮನೆ ಊಟಕ್ಕೆ ಅವಕಾಶ ನೀಡಿದರೆ, ಪರಪ್ಪನ ಅಗ್ರಹಾರ ಜೈಲಿನ ಸಾವಿರಾರು ಆರೋಪಿಗಳು ಇದೇ ರೀತಿಯ ಬೇಡಿಕೆ ಇಡುವ ಸಾಧ್ಯತೆ ಇರುವುದೇ ಈ ನಿರ್ಧಾರಕ್ಕೆ ಕಾರಣವಾಗಿದೆ.

ಮನೆ ಊಟವನ್ನು ಜೈಲಿನೊಳಗೆ ನೀಡಲು ಪ್ರತ್ಯೇಕ ಪರಿಶೀಲನಾ ವ್ಯವಸ್ಥೆ ಹಾಗೂ ಸಿಬ್ಬಂದಿ ಅಗತ್ಯವಿದ್ದು, ಇದು ಆಡಳಿತಾತ್ಮಕ ತೊಂದರೆ ಉಂಟುಮಾಡಲಿದೆ. ಹೀಗಾಗಿ ಮನೆ ಊಟ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಕಾರಾಗೃಹ ಇಲಾಖೆ ತೀರ್ಮಾನಿಸಿದೆ.

ಪವಿತ್ರ ಗೌಡ ಅವರು ಜೈಲಿನ ಆಹಾರದಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ದೂರಿದ್ದರು. ಅವರೊಂದಿಗೆ ನಾಗರಾಜು ಮತ್ತು ಲಕ್ಷ್ಮಣ್ ಕೂಡ ಮನೆ ಊಟಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ದಿನಕ್ಕೆ ಒಂದು ಬಾರಿ ಮನೆ ಊಟ ನೀಡಲು ಅನುಮತಿ ನೀಡಿದ್ದರೂ, ಇದೀಗ ಜೈಲು ಇಲಾಖೆ ಈ ಆದೇಶವನ್ನು ಪ್ರಶ್ನಿಸಲು ಮುಂದಾಗಿದೆ.

ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಗಾಂಜಾ ಸಾಗಿಸಲು ಯತ್ನ: ಇಬ್ಬರು ಯುವಕರು ಅರೆಸ್ಟ್

0

ಶಿವಮೊಗ್ಗ:- ಕೈದಿ ಭೇಟಿಯಾಗಲು ಗಾಂಜಾ ತಂದಿದ್ದ ಇಬ್ಬರು ಜೈಲಿನಲ್ಲೇ ಲಾಕ್ ಆಗಿರುವ ಘಟನೆ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಜರುಗಿದೆ.

ಬಂಧಿತರನ್ನ ಮಹಮ್ಮದ್ ಅಕ್ಬರ್ ಅಲಿಯಾಸ್ ಕಣ್ಣಪ್ಪ (22), ಮದರಿ ಪಾಳ್ಯ ಅಲಿಯಾಸ್‌ ಅಜ್ಗರ್ ಅಲಿ ಅಲಿಯಾಸ್ ಅಜ್ಜು (21) ಎಂದು ಗುರುತಿಸಲಾಗಿದೆ.

ಜ.5ರ ಸಂಜೆ ಕೇಂದ್ರ ಕಾರಾಗೃಹದಲ್ಲಿ ಕೈದಿಯನ್ನು ಭೇಟಿಯಾಗಲು ಈ ಇಬ್ಬರು ಆಗಮಿಸಿದ್ದರು. ಈ ವೇಳೆ ಜೈಲು ಅಧಿಕಾರಿಗಳು ರೂಢಿಯಂತೆ ತಪಾಸಣೆ ನಡೆಸಿದಾಗ, ಅವರ ಪ್ಯಾಂಟ್ ಒಳಗಡೆ ಗಾಂಜಾ ಇಟ್ಟುಕೊಂಡಿರುವುದು ಪತ್ತೆಯಾಗಿದೆ. ಕೂಡಲೇ ಜೈಲು ಅಧಿಕಾರಿಗಳು ತುಂಗಾನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ ಪತ್ತೆಯಾದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದೆಲ್ಲೆಡೆ ಇಂದು ಒಣಹವೆ, ಮಂಜು ಕವಿದ ವಾತಾವರಣ; ಇಂದಿನ ಹವಾಮಾನ ವರದಿ ಹೀಗಿದೆ

0

ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಒಣಹವೆ ವಾತಾವರಣ ಇದ್ದು, ಇಂದೂ ಸಹ ಅದೇ ಹವಾಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಿನೇ ದಿನೇ ಚಳಿಗಾಲದ ಪ್ರಭಾವ ಹೆಚ್ಚಾಗುತ್ತಿದ್ದು, ಹಲವೆಡೆ ಬೆಳಗಿನ ಜಾವ ಮಂಜು ಹಾಗೂ ತಂಪು ಹವಾಮಾನ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಇನ್ನೆರಡು ದಿನಗಳ ಕಾಲ ಒಣಹವೆ ಮುಂದುವರಿಯಲಿದ್ದು, ನಂತರ ಕೆಲವು ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಣಹವೆ ಇರುವ ಜಿಲ್ಲೆಗಳು:-

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮಳೆಯ ಲಕ್ಷಣಗಳಿಲ್ಲ.

ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಒಣ ಹವಾಮಾನ ಮುಂದುವರಿಯಲಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿಯೂ ಇಂದು ಒಣಹವೆ ಮುಂದುವರಿಯಲಿದೆ.

ಬೆಂಗಳೂರು ಹವಾಮಾನ:-

ರಾಜಧಾನಿ ಬೆಂಗಳೂರಿನಲ್ಲಿ ಚಳಿ ಹೆಚ್ಚಾಗಿದ್ದು, ಬೆಳಗಿನ ಜಾವ ಮಂಜು ಕಂಡುಬರುತ್ತಿದೆ. ಇಂದು ನಗರದ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಇರಲಿದೆ. ಚಳಿಯಿಂದ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ, ಬೆಚ್ಚಗಿನ ಉಡುಪು ಧರಿಸುವುದು ಮತ್ತು ಬಿಸಿ ಆಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಗದಗ| ಬಸ್‌ನಿಂದ ಬಾಲಕಿ ಕೆಳಗಿಳಿಸಿದ್ದಕ್ಕೆ ಮಹಿಳಾ ಕಂಡಕ್ಟರ್‌ಗೆ ಕಪಾಳಮೋಕ್ಷ..! ವಿಡಿಯೋ ವೈರಲ್…

0

ಗದಗ: ಟೋಲ್ ನಾಕಾದ ಬಳಿ ಪ್ರಯಾಣಿಕರನ್ನು ಹತ್ತಿಸಲು ನಿಯಮಾತ್ಮಕ ನಿರ್ಬಂಧವಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಕೆಳಗಿಳಿಸಿದ್ದಕ್ಕೆ NWKRTC ಬಸ್ ಕಂಡಕ್ಟರ್ ಮೇಲೆ ಆಕೆಯ ತಂದೆ ಹಾಗೂ ಮತ್ತೊಬ್ಬ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಪಾಳ ಮೋಕ್ಷ ‌ಮಾಡಿದ ಗಂಭೀರ ಘಟನೆ ಗದಗನಲ್ಲಿ ನಡೆದಿದೆ.

NWKRTCಗೆ ಸೇರಿದ ಬಸ್ ಸಂಖ್ಯೆ KA-26/F-0852ರಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ನೇತ್ರಾವತಿ ಕೋಂ ಮಾಂತೇಶ ಪತ್ರಿಮಠ ಅವರು ಮಂಗಳವಾರ 06-01-2025ರಂದು ಬೆಳಿಗ್ಗೆ ಸುಮಾರು 9.30ಕ್ಕೆ ಶಿಂಗಟರಾಯನಕೇರಿ ತಾಂಡಾದಿಂದ ಕದಾಂಪೂರ ಮಾರ್ಗವಾಗಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಗದಗ ಕಡೆಗೆ ಬರುತ್ತಿದ್ದರು. ಈ ವೇಳೆ ಪಾಪನಾಶಿ ಟೋಲ್ ನಾಕಾದ ಬಳಿ ಬಸ್ ಓಪನ್ ಡೋರ್ ಇರುವುದನ್ನು ಬಳಸಿಕೊಂಡು ವಿದ್ಯಾರ್ಥಿನಿ ಬಸ್ ಹತ್ತಿದ್ದಾಳೆ. ಆದರೆ ಟೋಲ್ ನಾಕಾದಲ್ಲಿ ಪ್ರಯಾಣಿಕರನ್ನು ಹತ್ತಿಸುವುದಕ್ಕೆ ಅವಕಾಶವಿಲ್ಲ ಎಂಬ ನಿಯಮದಂತೆ ಮಹಿಳಾ ಕಂಡಕ್ಟರ್ ಬಸ್ ನಿಲ್ಲಿಸಿ ಬಾಲಕಿಯನ್ನು ಕೆಳಗಿಳಿಸಿದ್ದಾರೆ.

ಇದರಿಂದ ಸಿಟ್ಟಾದ ಕದಾಂಪೂರ ಗ್ರಾಮದ ವಿದ್ಯಾರ್ಥಿನಿಯ ತಂದೆ ಪ್ರಕಾಶ್ ತಂದೆ ಲಕ್ಷ್ಮಣ್ಣ ಸಂಕಣ್ಣವರ್ ಬಸ್ ಬೆನ್ನತ್ತಿ ಗದಗ–ಕೊಪ್ಪಳ ರಾಷ್ಟ್ರೀಯ ಹೆದ್ದಾರಿಯ ಚಿಕ್ಕಟ್ಟಿ ಸ್ಕೂಲ್ ಹತ್ತಿರ ಬೈಕ್ ಅಡ್ಡಗಟ್ಟಿ ಬಸ್ ನಿಲ್ಲಿಸಿ ಬಸ್ ಒಳಗೆ ನುಗ್ಗಿ ಕಂಡಕ್ಟರ್ ನೇತ್ರಾವತಿ ಪತ್ರಿಮಠ ಅವರ ಮೊಬೈಲ್ ಕಸಿದುಕೊಂಡು, ಅವಾಚ್ಯ ಶಬ್ದಗಳಿಂದ‌ ನಿಂದಿಸಿದಾಗ ನಮ್ಮ ಮನೆಯಲ್ಲೂ ಪೊಲೀಸರು ಇದ್ದಾರೆ ಎಂದಾಗ…ಆರೋಪಿ ಪ್ರಕಾಶ್ ಸಂಕಣ್ಣವರ್, ಯಾರಿಗೆ ಹೇಳ್ತೀ ಹೇಳ್ಕೋ….ಎಸ್ಪಿಗೆ‌ ಹೇಳ್ತಿಯೋ ಡಿಸಿಗೆ ಹೇಳ್ತೀಯೋ ಅಂತ ವಾದಿಸುತ್ತಿದ್ದಾಗ, ಆಗ ಮತ್ತೊಬ್ಬ ಆರೋಪಿ ಶಿಂಗಟಾರಾಯನಕೇರಿಯ ನೀಲಪ್ಪ ಅಲಿಯಾಸ್ ಮುತ್ತಣ್ಣ ತಂದೆ ಹುಚ್ಚಪ್ಪ ಜಂತ್ಲಿ, ಏಕಾಏಕಿ ‌ಬಸ್ ಹತ್ತಿದವನೇ ಕಂಡಕ್ಟರ್ ನೇತ್ರಾವತಿ ಅವರಿಗೆ ಕಪಾಳಕ್ಕೆ ಹೊಡೆದುಬಿಟ್ಟ. ಇದರಿಂದ ವಿಚಲಿತರಾದ ಕಂಡಕ್ಟರ್ ನೇತ್ರಾವತಿ ಚೀರಿ….ಕೆಳಗೆ ಕುಸಿದುಬಿದ್ದರು. ಆಗ ಇತರ ಪ್ರಯಾಣಿಕರು ಕುಸಿದು‌ಬಿದ್ದ ಕಂಡಕ್ಟರ್ ನೇತ್ರಾವತಿ ಅವರಿಗೆ ಸಮಾಧಾನ ಮಾಡಿದರು.

ಇಡೀ ಈ ಗಲಾಟೆಯ ದೃಶ್ಯ ಚಾಲಕನ ಮೊಬೈಲ್‌ನಲ್ಲಿ ಸೆರೆಯಾಗಿದ್ದ ಅದೀಗ ವೈರಲ್ ಆಗಿದೆ.

ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ಸಂಖ್ಯೆ 05/2026ರಡಿ IPC ಕಲಂಗಳು 115(2), 132, 76, 352, 6/2, 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು PSI ವಿ.ಜಿ. ಪವಾರ ಅವರು ಕೈಗೊಂಡಿದ್ದಾರೆ.

ಘಟನೆಯು ಸಾರ್ವಜನಿಕ ಸಾರಿಗೆ ಸಿಬ್ಬಂದಿಯ ಸುರಕ್ಷತೆ ಕುರಿತಾಗಿ ತೀವ್ರ ಚರ್ಚೆಗೆ ಕಾರಣವಾಗಿದ್ದು, NWKRTC ಸಿಬ್ಬಂದಿ ಸುರಕ್ಷಿತವಾಗಿ ಕರ್ತವ್ಯ ನಿರ್ವಹಿಸಲು ಕಠಿಣ ರಕ್ಷಣಾತ್ಮಕ ಕ್ರಮಗಳು ಅಗತ್ಯವೆಂಬ ಒತ್ತಾಯ ವಿವಿಧ ವಲಯಗಳಿಂದ ಕೇಳಿ ಬಂದಿದೆ.

ತುಮಕೂರು| ಮಕ್ಕಳ ಜೊತೆ ಸಂಪಿಗೆ ಬಿದ್ದು ತಾಯಿ ಸೂಸೈಡ್

0

ತುಮಕೂರು:- ತುಮಕೂರು ತಾಲ್ಲೂಕಿನ ಹಿರೇಹಳ್ಳಿಯ ಸಿಂಗನಹಳ್ಳಿ ಕಾಲೊನಿಯಲ್ಲಿ ಮಕ್ಕಳ ಜೊತೆ ಸಂಪಿಗೆ ಬಿದ್ದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

ವಿಜಯಲಕ್ಷ್ಮಿ ಎಂಬ ಮಹಿಳೆಯು, ತನ್ನ ಮಕ್ಕಳ ಜೊತೆ ಸಂಪಿಗೆ ಬಿದ್ದು ಆತ್ಮಹತ್ಯೆ ಶರಣಾರದವರು. ಶಿವಗಂಗೆ ಮೂಲದ ಸಂಪತ್ ಕುಮಾರ್‌ಗೆ ನೆಲಮಂಗಲ ಮೂಲದ ವಿಜಯಲಕ್ಷ್ಮಿ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆಯಾಗಿ ಕೇವಲ 6 ವರ್ಷ ಅಷ್ಟೇ ಆಗಿತ್ತು. ತುಮಕೂರಿನ ಹಿರೇಹಳ್ಳಿಯ ಸಿಂಗನಹಳ್ಳಿ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಇದ್ದರು. ಗಂಡ ಸಂಪತ್ ಕುಮಾರ್, ಇಬ್ಬರು ಮಕ್ಕಳು ಹಾಗೂ ಅತ್ತೆ ಮಾವರೊಂದಿಗೆ ಅನ್ಯೋನ್ಯವಾಗಿ ಸಂಸಾರ ಸಾಗಿತ್ತು.

ಆದರೆ ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಮುಂದೆ ಇದ್ದ ಸಂಪಿನಲ್ಲಿ ಇಬ್ಬರು ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಸಿಬ್ಬಂದಿ ಮೂವರ ಮೃತದೇಹ ಹೊರ ತೆಗೆದಿದ್ದಾರೆ. ಕ್ಯಾತಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಜಯಲಕ್ಷ್ಮಿ ಸಾವಿನ ಕಾರಣ ನಿಗೂಢವಾಗಿದೆ. ಪೋಲೀಸರ ತನಿಖೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.

ಮದುವೆಗೆ ಒಪ್ಪದ ಪ್ರಿಯತಮೆ; ಮನನೊಂದು ಯುವಕ ನೇಣಿಗೆ ಶರಣು

0

ಕಾರವಾರ:- ಪ್ರೀತಿಸಿದ ಯುವತಿ ವಿವಾಹಕ್ಕೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಕೋಲ ತಾಲೂಕಿನ ಅಸ್ಲಗದ್ದೆ ಗ್ರಾಮದಲ್ಲಿ ಜರುಗಿದೆ.

ಪವನ್ ಭಟ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಪವನ್ ಭಟ್ ವೃತ್ತಿಯಿಂದ ಪೌರೋಹಿತ್ಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಇದೇ ಊರಿನ ಯುವತಿಯೊಂದಿಗೆ ಪ್ರೀತಿಯ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಈ ಸಂಬಂಧವನ್ನ ವಿವಾಹವಾಗಿ ಮುಂದುವರಿಸಲು ಯುವಕ ಆಕೆಯ ಮೇಲೆ ಒತ್ತಡ ಹಾಕಿದ್ದಾನೆ. ಆದರೆ ಯುವತಿ ವಿವಾಹಕ್ಕೆ ನಿರಾಕರಿಸಿದ್ದಾಳೆ ಎಂದು ತಿಳಿದುಬಂದಿದೆ.

ಈ ನಿರಾಕರಣೆಯಿಂದ ಮನನೊಂದ ಪವನ್ ಭಟ್‌ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆ ಕುರಿತು ಮಾಹಿತಿ ಪಡೆದ ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!