ಇಂದೋರ್: ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಕಲುಷಿತ ಕುಡಿಯುವ ನೀರಿನಿಂದ ಉಂಟಾದ ಆರೋಗ್ಯ ದುರಂತ ಮತ್ತೊಮ್ಮೆ ಆತಂಕ ಮೂಡಿಸಿದೆ. ಭಾಗೀರಥಪುರ ಪ್ರದೇಶದಲ್ಲಿ ಚರಂಡಿ ನೀರು ಕುಡಿಯುವ ನೀರಿನೊಂದಿಗೆ ಮಿಶ್ರಣಗೊಂಡ ಪರಿಣಾಮ ಅತಿಸಾರ ಹರಡಿದ್ದು, 142 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ 11 ಮಂದಿಯ ಸ್ಥಿತಿ ಗಂಭೀರವಾಗಿದೆ.
ಈ ಘಟನೆ ಇಂದೋರ್ಗೆ ಹೊಸದಲ್ಲ. ಸುಮಾರು 30 ವರ್ಷಗಳ ಹಿಂದೆ ಸುಭಾಷ್ ಚೌಕ್ನ ನೀರಿನ ಟ್ಯಾಂಕ್ನಲ್ಲಿ ಕೊಳೆತ ಶವ ಪತ್ತೆಯಾಗಿದ್ದ ಘಟನೆ ಇಡೀ ನಗರವನ್ನೇ ಬೆಚ್ಚಿಬೀಳಿಸಿತ್ತು. ಆ ಟ್ಯಾಂಕ್ನಿಂದ ಪಶ್ಚಿಮ ಇಂದೋರ್ನ ಸಾವಿರಾರು ಮನೆಗಳಿಗೆ ನೀರು ಪೂರೈಕೆಯಾಗುತ್ತಿತ್ತು. ಜನರು ನಿರಂತರವಾಗಿ ಅಸ್ವಸ್ಥರಾಗುತ್ತಿದ್ದರೂ, ನೀರಿನ ಮೂಲವೇ ಸಮಸ್ಯೆಯೆಂಬುದು ತಡವಾಗಿ ಬೆಳಕಿಗೆ ಬಂದಿತ್ತು.
ಇಂದಿನ ಸ್ಥಿತಿಯೂ ಅದಕ್ಕಿಂತ ಕಡಿಮೆಯಿಲ್ಲ. ಭಾಗೀರಥಪುರದಲ್ಲಿ ಆರೋಗ್ಯ ಇಲಾಖೆ ನಡೆಸುತ್ತಿರುವ ಸಮೀಕ್ಷೆಯ ವೇಳೆ 2,354 ಮನೆಗಳ 9,416 ಜನರನ್ನು ತಪಾಸಣೆ ಮಾಡಲಾಗಿದೆ. ಇದರಲ್ಲಿ 20 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಂಕ್ರಾಮಿಕ ರೋಗ ಹರಡಿದ ನಂತರ ಇದುವರೆಗೆ 398 ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆದರೆ ಸೋಂಕಿನ ಮೂಲ ಇನ್ನೂ ಸ್ಪಷ್ಟವಾಗಿಲ್ಲ. ಪರಿಸ್ಥಿತಿಯನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆ ತುರ್ತು ಕ್ರಮ ಕೈಗೊಂಡಿವೆ.

