Home Blog Page 221

ಕುಡಿಯುವ ನೀರಿಗೆ ಚರಂಡಿ ನೀರಿನ ಮಿಶ್ರಣ: ಇಂದೋರ್‌ʼನಲ್ಲಿ ಆತಂಕ, 42 ಮಂದಿ ಆಸ್ಪತ್ರೆಗೆ ದಾಖಲು

0

ಇಂದೋರ್: ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಕಲುಷಿತ ಕುಡಿಯುವ ನೀರಿನಿಂದ ಉಂಟಾದ ಆರೋಗ್ಯ ದುರಂತ ಮತ್ತೊಮ್ಮೆ ಆತಂಕ ಮೂಡಿಸಿದೆ. ಭಾಗೀರಥಪುರ ಪ್ರದೇಶದಲ್ಲಿ ಚರಂಡಿ ನೀರು ಕುಡಿಯುವ ನೀರಿನೊಂದಿಗೆ ಮಿಶ್ರಣಗೊಂಡ ಪರಿಣಾಮ ಅತಿಸಾರ ಹರಡಿದ್ದು, 142 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ 11 ಮಂದಿಯ ಸ್ಥಿತಿ ಗಂಭೀರವಾಗಿದೆ.

ಈ ಘಟನೆ ಇಂದೋರ್‌ಗೆ ಹೊಸದಲ್ಲ. ಸುಮಾರು 30 ವರ್ಷಗಳ ಹಿಂದೆ ಸುಭಾಷ್ ಚೌಕ್‌ನ ನೀರಿನ ಟ್ಯಾಂಕ್‌ನಲ್ಲಿ ಕೊಳೆತ ಶವ ಪತ್ತೆಯಾಗಿದ್ದ ಘಟನೆ ಇಡೀ ನಗರವನ್ನೇ ಬೆಚ್ಚಿಬೀಳಿಸಿತ್ತು. ಆ ಟ್ಯಾಂಕ್‌ನಿಂದ ಪಶ್ಚಿಮ ಇಂದೋರ್‌ನ ಸಾವಿರಾರು ಮನೆಗಳಿಗೆ ನೀರು ಪೂರೈಕೆಯಾಗುತ್ತಿತ್ತು. ಜನರು ನಿರಂತರವಾಗಿ ಅಸ್ವಸ್ಥರಾಗುತ್ತಿದ್ದರೂ, ನೀರಿನ ಮೂಲವೇ ಸಮಸ್ಯೆಯೆಂಬುದು ತಡವಾಗಿ ಬೆಳಕಿಗೆ ಬಂದಿತ್ತು.

ಇಂದಿನ ಸ್ಥಿತಿಯೂ ಅದಕ್ಕಿಂತ ಕಡಿಮೆಯಿಲ್ಲ. ಭಾಗೀರಥಪುರದಲ್ಲಿ ಆರೋಗ್ಯ ಇಲಾಖೆ ನಡೆಸುತ್ತಿರುವ ಸಮೀಕ್ಷೆಯ ವೇಳೆ 2,354 ಮನೆಗಳ 9,416 ಜನರನ್ನು ತಪಾಸಣೆ ಮಾಡಲಾಗಿದೆ. ಇದರಲ್ಲಿ 20 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾಂಕ್ರಾಮಿಕ ರೋಗ ಹರಡಿದ ನಂತರ ಇದುವರೆಗೆ 398 ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆದರೆ ಸೋಂಕಿನ ಮೂಲ ಇನ್ನೂ ಸ್ಪಷ್ಟವಾಗಿಲ್ಲ. ಪರಿಸ್ಥಿತಿಯನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆ ತುರ್ತು ಕ್ರಮ ಕೈಗೊಂಡಿವೆ.

ವಾಸ್ತವ–ಕಲ್ಪನೆಗಳ ನಡುವೆ ಸಾಗುವ ಮನಸ್ಸಿನ ಥ್ರಿಲ್ಲರ್ ‘ವಿಕಲ್ಪ’ – ಸೆನ್ಸಾರ್ ಮೆಟ್ಟಿಲೇರಿದ ಸಿನಿಮಾ

ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ವಿಕಲ್ಪ’ ಸಿನಿಮಾ ಇದೀಗ ಬಿಡುಗಡೆ ಹಂತದತ್ತ ವೇಗವಾಗಿ ಸಾಗುತ್ತಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತ ತಲುಪಿದ್ದು, ಸೆನ್ಸಾರ್ ಮಂಡಳಿಗೆ ಸಲ್ಲಿಸಲಾಗಿದೆ. ಇದೇ ವೇಳೆ ಸಿನಿಮಾದ ಪ್ರಚಾರ ಚಟುವಟಿಕೆಗಳು ಆರಂಭವಾಗಿವೆ.

ಇತ್ತೀಚೆಗೆ ಬಿಡುಗಡೆಯಾದ ‘ವಿಕಲ್ಪ’ ಚಿತ್ರದ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ವರ್ಚ್ಯುವಲ್ ಮೂಲಕ ಟೀಸರ್ ಬಿಡುಗಡೆ ಮಾಡಿದರು. ಲೇಖಕ ಜೋಗಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಹೊಸ ಪ್ರಯತ್ನದ ಈ ಸಿನಿಮಾವನ್ನು ಶ್ಲಾಘಿಸಿದರು.

“ಕನ್ನಡದಲ್ಲಿ ಇಂಥ ಹೊಸ ಪ್ರಯೋಗಗಳು ಆಗಬೇಕು. ಕಥೆ ಮತ್ತು ನಿರೂಪಣೆ ಭರವಸೆ ಮೂಡಿಸುತ್ತಿವೆ. ತುಡಿತ ಇರುವ ತಂಡದ ಪ್ರಯತ್ನ ಇದು” ಎಂದು ಜೋಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಕಲ್ಪ ಎಂದರೆ ವಾಸ್ತವ ಮತ್ತು ಕಲ್ಪನೆಗಳ ನಡುವಿನ ಸ್ಥಿತಿ. ಮಾನವನ ಮನಸ್ಸಿನ ಅಂತರಾಳದಲ್ಲಿ ನಡೆಯುವ ಸಂಘರ್ಷ, ಮಾನಸಿಕ ಆರೋಗ್ಯ ಮತ್ತು ತಲ್ಲಣಗಳನ್ನು ಥ್ರಿಲ್ಲರ್ ರೂಪದಲ್ಲಿ ಹೇಳುವ ಪ್ರಯತ್ನ ಈ ಸಿನಿಮಾದ ವಿಶೇಷ. ಕಥೆಯೇ ಚಿತ್ರದ ಹೀರೋ ಎಂದು ನಿರ್ದೇಶಕ-ನಟ ಪೃಥ್ವಿರಾಜ್ ಪಾಟೀಲ್ ಹೇಳಿದ್ದಾರೆ.

ಹವ್ಯಾಸಿ ರಂಗಭೂಮಿಯಿಂದ ಬಂದಿರುವ ಪೃಥ್ವಿರಾಜ್ ಪಾಟೀಲ್ ಅವರ ಪರಿಕಲ್ಪನೆಯಲ್ಲಿ ಸಿನಿಮಾ ಮೂಡಿಬಂದಿದ್ದು, ಅವರು ನಾಯಕನಾಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಹರಿಣಿ ಶ್ರೀಕಾಂತ್ ಅವರು ಸೈಕಿಯಾಟ್ರಿಸ್ಟ್ ಪಾತ್ರದಲ್ಲಿ ನಟಿಸಿದ್ದು, ಮನೋವೈದ್ಯರ ಸಲಹೆಯ ಮೇರೆಗೆ ಹಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

ಬೆಂಗಳೂರು, ಸಾಗರ, ತೀರ್ಥಹಳ್ಳಿ, ಶಿರಸಿ, ಯಲ್ಲಾಪುರ, ಕುಂದಾಪುರ ಜೊತೆಗೆ ಸಿಂಗಾಪುರ ಮತ್ತು ನೆದರ್ಲ್ಯಾಂಡ್‌ನಲ್ಲೂ ಚಿತ್ರೀಕರಣ ನಡೆಸಲಾಗಿದೆ. ಅಭಿರಾಮ್ ಗೌಡ ಅವರ ಛಾಯಾಗ್ರಹಣ, ಸುರೇಶ್ ಆರುಮುಗಮ್ ಅವರ ಸಂಕಲನ ಹಾಗೂ ಸಂವತ್ಸರ ಅವರ ಸಂಗೀತ ಚಿತ್ರಕ್ಕಿದೆ.

ದಾಖಲೆಗಳು ಮುರಿಯಲೆಂದೇ ನಿರ್ಮಾಣವಾಗುತ್ತವೆ: ಸಿಎಂ ಸಿದ್ದರಾಮಯ್ಯ

0

ಮೈಸೂರು: ಮಾಜಿ ಸಿಎಂ ದಿವಂಗತ ದೇವರಾಜ್ ಅರಸ್ ಅವರ ಮುಖ್ಯಮಂತ್ರಿಯ ಸುದೀರ್ಘ ಅವಧಿಯ ದಾಖಲೆ ಮುರಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು. ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಮಾಜಿ ಸಿಎಂ ದಿವಂಗತ ದೇವರಾಜ್ ಅರಸ್ ಅವರ ಮುಖ್ಯಮಂತ್ರಿಯ ಸುದೀರ್ಘ ಅವಧಿಯ ದಾಖಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಮುರಿಯಲಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಜನರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ.

ಅರಸು ರವರು ಮೈಸೂರಿನವರೇ ಆಗಿರುವುದು ಸಂತೋಷದ ಸಂಗತಿ. ತಾಲ್ಲೂಕು ಬೋರ್ಡ್ ಸದಸ್ಯನಾದ ನಂತರದ ನನ್ನ ರಾಜಕೀಯ ಜೀವನದಲ್ಲಿ ಸಚಿವನಾಗುವ ಮತ್ತು ಮುಖ್ಯಮಂತ್ರಿಯಾಗುವ ನಿರೀಕ್ಷೆಯಿರಲಿಲ್ಲ. 13 ಚುನಾವಣೆಗಳನ್ನೂ ಎದುರಿಸಿ 8ಕ್ಕೂ ಹೆಚ್ಚು ಬಾರಿ ಗೆಲುವು ಸಾಧಿಸಿದ್ದೇನೆ ಎಂದರು.

ದಾಖಲೆಗಳು ಮುರಿಯಲೆಂದೇ ನಿರ್ಮಾಣವಾಗುತ್ತವೆ.

ಕಡಿಮೆ ಜನಸಂಖ್ಯೆಯ ಅರಸು ಸಮುದಾಯದವರಾಗಿದ್ದ ದೇವರಾಜ ಅರಸು ಅವರು ಜನಪ್ರಿಯ ನಾಯಕರಾಗಿದ್ದರು. ಅಂತಹ ಮಹಾನ್ ನಾಯಕನಿಗೂ ಮತ್ತು ನನಗೂ ಹೋಲಿಕೆ ಸರಿಯಲ್ಲ. ಅರಸು ಅವರ ಅವಧಿಯಲ್ಲಿ ರಾಜ್ಯದ ಪರಿಸ್ಥಿತಿ ವಿಭಿನ್ನವಾಗಿತ್ತು. ಅವರು ಒಂದು ಬಾರಿ ಚುನಾವಣೆಯನ್ನು ಸರ್ವಾನುಮತದಿಂದಲೂ ಆಯ್ಕೆಯಾಗಿದ್ದರು.

ದಾಖಲೆಗಳು ಮುರಿಯಲೆಂದೇ ನಿರ್ಮಾಣವಾಗುತ್ತವೆ. ಪ್ರಸ್ತುತ ನಾನು ಪೂರೈಸಲಿರುವ ಅವಧಿಯನ್ನು ಮೀರಲಿರುವ ಮತ್ತೊಬ್ಬ ನಾಯಕರೂ ಬರಬಹುದು. ನನಗಿಂತ ಹೆಚ್ಚಿನ ಬಾರಿ ಬಜೆಟ್ ಮಂಡಿಸುವ ನಾಯಕರೂ ಮುಂದೆ ಬರಬಹುದು. ಸಾಧನಾ ಸಮಾವೇಶ ಆಯೋಜಿಸುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದರು.

ಸಂಪುಟ ಪುನರ್ರಚನೆ- ಕಾಂಗ್ರೆಸ್ ವರಿಷ್ಠರೊಂದಿಗೆ ಚರ್ಚಿಸಿ ನಿರ್ಧಾರ

ಬಜೆಟ್ ತಯಾರಿಯನ್ನು ಸಂಕ್ರಾಂತಿಯ ನಂತರ ಪ್ರಾರಂಭಿಸಲಾಗುವುದು.ಸಂಪುಟ ಪುನರ್ರಚನೆಯ ಬಗ್ಗೆ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸಲಾಗುವುದು. ಅವರು ಸಮಯ ನೀಡಿದರೆ ಚರ್ಚಿಸಲಿರುವುದಾಗಿ ತಿಳಿಸಿದರು.

ಬಳ್ಳಾರಿ ಘಟನೆ-ತನಿಖೆಯ ನಂತರ ಸತ್ಯಾಸತ್ಯತೆ ತಿಳಿಯಲಿದೆ

ಬಳ್ಳಾರಿ ನಡೆದ ಸಂರ್ಘಷದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಬಲಿಯಾಗಿರುವ ಘಟನೆಯ ತನಿಖೆಯನ್ನು ಸಿಐಡಿ ಗೆ ವಹಿಸಲಾಗುವುದೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚಿಸುತ್ತೇನೆ. ಪೊಲೀಸ್ ತನಿಖೆಯ ನಂತರ ಘಟನೆಯ ಸತ್ಯಾಸತ್ಯತೆ ತಿಳಿಯಲಿದೆ ಎಂದರು.

ಹಿಂದುಳಿದ ವರ್ಗಗಳ ಸಹಾಯವಿಲ್ಲದೆ ಸಮಾಜ ಮುನ್ನಡೆಯದು: ಡಿಸಿಎಂ ಡಿ.ಕೆ. ಶಿವಕುಮಾರ್

0

ಬೆಂಗಳೂರು: “ದೇವಾಂಗ ಸಮಾಜ ಹಿಂದುಳಿದವರು ಎನ್ನುವ ಕೀಳರಿಮೆಯಿಂದ ಹೊರ ಬರಬೇಕು. ಹಿಂದುಳಿದ ವರ್ಗಗಳ ಸಹಾಯವಿಲ್ಲದೆ ಸಮಾಜ ಮುನ್ನಡೆಯುವುದಿಲ್ಲ. ಯಾರೂ ಸಹ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು. ನಗರದ ಅರಮನೆ ಮೈದಾನದಲ್ಲಿ ನಡೆದ ದೇವಾಂಗ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

“ದೊಡ್ಡ ಸಂಖ್ಯೆ ಹೊಂದಿರುವ ಸಮುದಾಯಗಳು ನಿಮ್ಮ ವೃತ್ತಿಯನ್ನು ಕರಗತ ಮಾಡಿಕೊಳ್ಳಲು ಸಾಧ್ಯವಿಲ್ಲ. ಉದಾಹರಣೆಗೆ ವಿಶ್ವಕರ್ಮ ಸಮುದಾಯದ ಶಿಲ್ಪಕಲೆ ಎಲ್ಲರಿಗೂ ಒಲಿಯುವುದು ಕಷ್ಟ. ಕಲ್ಲನ್ನು ಕಡೆದು ವಿಗ್ರಹ ಮಾಡುವವರು ಅವರು‌. ಅವರು ಕಲ್ಲನ್ನು ಕಡೆದರೆ ಆಕೃತಿಯಾಗುತ್ತದೆ. ಕುಂಬಾರಿಕೆ ಕೆಲಸ ಎಲ್ಲರೂ ಮಾಡಲು ಆಗುತ್ತದೆಯೇ? ಅದಕ್ಕಾಗಿ ಕೀಳರಿಮೆ ಬೇಡ. ಕಾಯಕ ಮಾಡುವ ವರ್ಗಗಳಿಂದಲೇ ಸಮಾಜದಲ್ಲಿ ಮನುಷ್ಯತ್ವ ಬದುಕಿದೆ” ಎಂದರು.

“ದೇವಾಂಗ ಸಮಾಜ ಪ್ರತಿದಿನವೂ ಶ್ರಮಪಟ್ಟು ದುಡಿಯುವ ಸಮಾಜ. ಪ್ರತಿದಿನವೂ ನೀವು ಸ್ಪರ್ಧೆ ಎದುರಿಸುತ್ತಲೇ ಇದ್ದರೂ ಹಿಂದೇಟು ಹಾಕದೇ ಮುನ್ನಡೆಯುತ್ತಾ ಇದ್ದೀರಿ. ನೀವು ಸಹ ಮುಂದುವರೆದ ಜನಾಂಗ. ಸರ್ವರಿಗೂ ಸಮಪಾಲಿನೊಂದಿಗೆ ಇರುತ್ತೇವೆ. ಈ ಸಮಾಜಕ್ಕೆ ಶಕ್ತಿ ತುಂಬುತ್ತೇವೆ ಸ್ಥೈರ್ಯ ನಿಮ್ಮಲ್ಲಿ ಇರಬೇಕು” ಎಂದರು.

“ಸಮಾಜದ ಯುವಜನಾಂಗ ವಿದ್ಯೆಯನ್ನು ಪಡೆಯಬೇಕು ಜೊತೆಗೆ ನಿಮ್ಮ ಕಸುಬನ್ನು ಉಳಿಸಿ ಬೆಳೆಸಬೇಕು. ಆಧುನಿಕ ಕಾಲದಲ್ಲಿ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಬೆಳೆಯಬೇಕು. ಅನೇಕ ಕಾರ್ಪೋರೇಟ್ ಕಂಪೆನಿಗಳು ಬಟ್ಟೆ ಉತ್ಪಾದನೆ ಮಾಡುತ್ತವೆ. ಅವರಿಂದ ನಿಮಗೆ ಸ್ಪರ್ಧೆ ಉಂಟಾಗಿದೆ. ಆದರೆ ನಿಮ್ಮ ಬಳಿ ಅನುಭವ, ಶ್ರಮ, ಕೈಗುಣವಿದೆ” ಎಂದರು.

ಚಪ್ಪಲಿಯಲ್ಲಿ ಹೊಡೆಸುತ್ತೇನೆ ಎಂದ ಶಾಸಕ ಬಾಲಕೃಷ್ಣ: ತಹಶೀಲ್ದಾರ್‌ಗೆ ಸಾರ್ವಜನಿಕ ವೇದಿಕೆಯಲ್ಲಿ ಕ್ಷಮೆಯಾಚನೆ

0

ರಾಮನಗರ: ಜಿಲ್ಲೆಯ ಮಾಗಡಿ ತಹಶೀಲ್ದಾರ್‌ಗೆ ಚಪ್ಪಲಿಯಲ್ಲಿ ಹೊಡೆಸುತ್ತೇನೆ ಎಂದು ಹೇಳಿದ್ದ ಶಾಸಕ ಹೆಚ್.ಸಿ. ಬಾಲಕೃಷ್ಣ ಇದೀಗ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ. ಇತ್ತೀಚೆಗೆ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದ ವೇಳೆ ತಹಶೀಲ್ದಾರ್ ಶರತ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಶಾಸಕ, ಕೆಲಸ ಮಾಡದಿದ್ದರೆ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆ ರಾಜ್ಯಾದ್ಯಂತ ತೀವ್ರ ಟೀಕೆಗೆ ಗುರಿಯಾಗಿತ್ತು.

ಈ ಹಿನ್ನೆಲೆ ಭಾನುವಾರ ನಡೆದ ಸರ್ಕಾರಿ ನೌಕರರ ತಾಲೂಕು ಮಟ್ಟದ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಬಾಲಕೃಷ್ಣ, ಅದೇ ವೇದಿಕೆಯಲ್ಲಿದ್ದ ತಹಶೀಲ್ದಾರ್ ಶರತ್ ಕುಮಾರ್ ಅವರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು.

ಈ ವೇಳೆ ಮಾತನಾಡಿದ ಶಾಸಕ, “ಜನರ ಕೆಲಸ ಮಾಡುತ್ತಾರೆ ಎಂಬ ನಿರೀಕ್ಷೆಯಿಂದ ಒಂದು ರೂಪಾಯಿಯೂ ಅಪೇಕ್ಷಿಸದೆ ಅಧಿಕಾರಿಯನ್ನು ತಾಲೂಕಿಗೆ ಕರೆತಂದಿದ್ದೇನೆ. ಆದರೆ ರೈತರ ಸಮಸ್ಯೆ ಬಗೆಹರಿಯದಿದ್ದರೆ ನೋವಾಗುತ್ತದೆ. ಹಳ್ಳಿಗಾಡಿನಿಂದ ಬಂದ ನಾನು ಸಹಜವಾಗಿ ಆಡುಭಾಷೆಯಲ್ಲಿ ನೇರವಾಗಿ ಮಾತನಾಡಿದ್ದೇನೆ. ಇದರಿಂದ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ” ಎಂದು ಹೇಳಿದರು.

ಜನರಿಗೆ ನ್ಯಾಯ ಒದಗಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಅಧಿಕಾರಿಗಳನ್ನು ಜನರು ಬೈಯ್ಯುವುದಿಲ್ಲ, ನನ್ನನ್ನೇ ಬೈಯ್ಯುತ್ತಾರೆ. ಯಾರಿಗೂ ನೋವು ಉಂಟುಮಾಡುವ ಉದ್ದೇಶ ಇರಲಿಲ್ಲ. ಸಮಯ, ಸಂದರ್ಭ ಮತ್ತು ಸನ್ನಿವೇಶದ ಒತ್ತಡದಿಂದ ಆ ಮಾತು ಬಂದಿದೆ ಎಂದು ಸಮಜಾಯಿಷಿ ನೀಡಿದರು.

ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ 11 ಕೋತಿಗಳ ನಿಗೂಢ ಸಾವು

0

ತುಮಕೂರು: ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಸಂಭವಿಸಿರುವ ಘಟನೆ ಅರಣ್ಯ ಇಲಾಖೆ ಹಾಗೂ ಪರಿಸರ ಪ್ರೇಮಿಗಳಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ದೇವರಾಯನದುರ್ಗ ಮತ್ತು ದುರ್ಗದ ಹಳ್ಳಿ ನಡುವಿನ ಅರಣ್ಯ ಭಾಗದಲ್ಲಿ ಕೇವಲ ಎರಡು ದಿನಗಳಲ್ಲಿ 11 ಕೋತಿಗಳ ಮೃತದೇಹ ಪತ್ತೆಯಾಗಿದೆ.

ಮೊದಲ ದಿನ ಏಳು ಕೋತಿಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದ್ದು, ಅನುಮಾನಗೊಂಡ ಅಧಿಕಾರಿಗಳು ಅರಣ್ಯದಲ್ಲಿ ತೀವ್ರ ಶೋಧ ಕಾರ್ಯ ನಡೆಸಿದಾಗ ಎರಡನೇ ದಿನ ಮತ್ತೂ ನಾಲ್ಕು ಕೋತಿಗಳ ಮೃತದೇಹ ಪತ್ತೆಯಾಗಿದೆ. ಒಂದರ ನಂತರ ಒಂದರಂತೆ ಮಂಗಗಳು ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪ್ರಾಥಮಿಕ ಪರಿಶೀಲನೆಯಲ್ಲಿ ಕೋತಿಗಳು ಯಾವುದೇ ರೋಗದಿಂದ ಮೃತಪಟ್ಟಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಮೇಲ್ನೋಟಕ್ಕೆ ವಿಷ ಹಾಕಿ ಕೋತಿಗಳನ್ನು ಕೊಂದಿರುವ ಸಾಧ್ಯತೆ ಇದೆ ಎಂಬ ಶಂಕೆ ಬಲವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾವಿನ ಹಿಂದಿನ ನಿಖರ ಕಾರಣ ಪತ್ತೆಹಚ್ಚಲು ಅರಣ್ಯಾಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಸದ್ಯ ಊರ್ಡಿಗೆರೆ ಪಶು ಆಸ್ಪತ್ರೆಯಲ್ಲಿ ಮೃತ ಕೋತಿಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಇಂತಹ ಸರಣಿ ಸಾವು ಸಂಭವಿಸಿರುವುದು ಅರಣ್ಯ ಸಂರಕ್ಷಣೆಯ ಮೇಲೆಯೇ ದೊಡ್ಡ ಪ್ರಶ್ನೆ ಎತ್ತಿದೆ.

ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಜಾಮೀನು ಅರ್ಜಿ ವಜಾ

0

ನವದೆಹಲಿ: 2020ರ ದೆಹಲಿ ಗಲಭೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಸಾಮಾಜಿಕ ಕಾರ್ಯಕರ್ತರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು, ಡಿಸೆಂಬರ್ 2025ರಲ್ಲಿ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ್ದ ಸೆಪ್ಟೆಂಬರ್ 2ರ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿ ಈ ತೀರ್ಪು ನೀಡಿದೆ.

ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ ಜಾಮೀನು ಅರ್ಜಿ ವಜಾಗೊಂಡಿದ್ದರೂ, ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಮೊಹಮ್ಮದ್ ಸಮೀರ್ ಖಾನ್, ಶಾದಾಬ್ ಅಹ್ಮದ್ ಹಾಗೂ ಶಿಫಾ ಉರ್ ರೆಹಮಾನ್ ಅವರಿಗೆ ಸುಪ್ರೀಂ ಕೋರ್ಟ್ 12 ಷರತ್ತುಗಳೊಂದಿಗೆ ಜಾಮೀನು ನೀಡಿದೆ.

ಕ್ರಿಮಿನಲ್ ಪಿತೂರಿಯಲ್ಲಿ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಇಬ್ಬರೂ ಭಾಗಿಯಾಗಿರುವುದನ್ನು ಸೂಚಿಸುವ ಸಾಕಷ್ಟು ಪುರಾವೆಗಳನ್ನು ಪ್ರಾಸಿಕ್ಯೂಷನ್ ಸಲ್ಲಿಸಿದೆ. ಅವುಗಳು ನ್ಯಾಯಾಲಯಕ್ಕೆ ತೃಪ್ತಿ ತಂದಿವೆ ಎಂದು ಪೀಠ ಸ್ಪಷ್ಟಪಡಿಸಿದೆ.

ಅಸ್ಸಾಂನಲ್ಲಿ 5.1 ತೀವ್ರತೆಯ ಭೂಕಂಪ: ಜನರಲ್ಲಿ ಹೆಚ್ಚಿದ ಆತಂಕ

0

ಗುವಾಹಟಿ: ಅಸ್ಸಾಂನಲ್ಲಿ ಸೋಮವಾರ ಮುಂಜಾನೆ ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಜನರಲ್ಲಿ ಆತಂಕ ಉಂಟಾಗಿದೆ. ಭೂಕಂಪನದ ಕೇಂದ್ರ ಬಿಂದು ಮೋರಿಗಾಂವ್ ಜಿಲ್ಲೆಯಲ್ಲಿ, 50 ಕಿಲೋಮೀಟರ್ ಆಳದಲ್ಲಿ ಪತ್ತೆಯಾಗಿದ್ದು, ಬ್ರಹ್ಮಪುತ್ರದ ದಕ್ಷಿಣ ದಂಡೆಯಲ್ಲಿ ಹುಟ್ಟಿಕೊಂಡಿದೆ.

ಭೂಕಂಪನ ಅನುಭವವನ್ನು ಕಮ್ರೂಪ್ ಮೆಟ್ರೋಪಾಲಿಟನ್, ನಾಗಾಂವ್, ಪೂರ್ವ ಮತ್ತು ಪಶ್ಚಿಮ ಕರ್ಬಿ ಅಂಗ್ಲಾಂಗ್, ಹೊಜೈ, ದಿಮಾ ಹಸಾವೊ, ಗೋಲಾಘಾಟ್, ಜೋರ್ಹತ್, ಶಿವಸಾಗರ್, ಚರೈಡಿಯೊ, ಕ್ಯಾಚಾರ್, ಕರೀಮ್ಗಂಜ್, ಹೈಲಕಂಡಿ, ಧುಬ್ರಿ ಜಿಲ್ಲೆಗಳಲ್ಲಿ ಕಾಣಲಾಗಿದೆ. ಭೂಕಂಪನದಿಂದ ಜನರಲ್ಲಿ ಭಯ ಭೀತಿಯು ಉಂಟಾಗಿ ಮನೆಗಳಿಂದ ಹೊರಗೆ ಓಡಿದ್ದಾರೆ.

ಇದರೊಂದಿಗೆ, ಮಧ್ಯ-ಪಶ್ಚಿಮ ಅರುಣಾಚಲ ಪ್ರದೇಶದ ಕೆಲವು ಭಾಗಗಳು, ಇಡೀ ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ ಮತ್ತು ಪಶ್ಚಿಮ ಬಂಗಾಳದ ಹಲವು ಪ್ರದೇಶಗಳಲ್ಲಿಯೂ ಕಂಪನದ ಅನುಭವವಾಗಿದೆ ಎಂದು ವರದಿಗಳು ತಿಳಿಸಿವೆ.

ಯುವತಿ ಜೊತೆ ಅಸಭ್ಯ ವರ್ತನೆ ಆರೋಪ: ಗದಗದಲ್ಲಿ ಯುವಕನಿಗೆ ಸಾರ್ವಜನಿಕರ ಧರ್ಮದೇಟು

0

ಗದಗ: ಯುವತಿಯೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ ಆರೋಪದ ಮೇಲೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ ನಡೆಸಿದ ಘಟನೆ ಗದಗ ನಗರದ ಮುಳಗುಂದ ನಾಕಾದಲ್ಲಿ ನಡೆದಿದೆ.

ಹರ್ತಿ ಗ್ರಾಮದ ನವೀನ್ ಎಂಬ ಯುವಕ ಗೂಸಾ ತಿಂದವನಾಗಿದ್ದು, ಬೆಟಗೇರಿ ಮೂಲದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ, ಯುವತಿ ಹಾಗೂ ಆಕೆಯ ಸಹೋದರರು ಯುವಕನನ್ನು ನಡು ರಸ್ತೆಯಲ್ಲೇ ಹಿಡಿದು ಮನಬಂದಂತೆ ಥಳಿಸಿದ್ದಾರೆ.

ಬ್ಯಾಟರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಅಂಗಡಿಯಿಂದಲೇ ಹೊರಗೆ ಕರೆತಂದು ಸರ್ಕಲ್ ಪ್ರದೇಶದಲ್ಲಿ ಥಳಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಸೇರಿದ್ದ ಅನೇಕ ಜನರು ಕೂಡ ಯುವಕನಿಗೆ ಧರ್ಮದೇಟು ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಆಗಮಿಸಿದ್ರೂ ಕೂಡ, ಅವರ ಸಮ್ಮುಖದಲ್ಲಿಯೇ ಯುವತಿ ಹಾಗೂ ಆಕೆಯ ಸಹೋದರರು ಯುವಕನಿಗೆ ಗೂಸಾ ನೀಡಿದ್ದಾರೆ. ಬಳಿಕ ಯುವಕನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಈ ಘಟನೆ ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪವಿತ್ರಾ ಗೌಡಗೆ ಜೈಲಿನಲ್ಲಿ ಮನೆಯೂಟಕ್ಕೆ ಕೋರ್ಟ್ ಗ್ರೀನ್ ಸಿಗ್ನಲ್: ದರ್ಶನ್ ಮುಂದಿನ ನಡೆ ಬಗ್ಗೆ ಚರ್ಚೆ

ಹೊಸ ವರ್ಷ ದರ್ಶನ್ ಮತ್ತು ಪವಿತ್ರಾ ಗೌಡ ಪಾಲಿಗೆ ಕಹಿ ನೆನಪುಗಳನ್ನು ಮರೆಸುತ್ತೋ ಇಲ್ಲವೋ ಅನ್ನೋ ಪ್ರಶ್ನೆ ಇದ್ದರೂ, ಪವಿತ್ರಾ ಗೌಡಗೆ ಮಾತ್ರ ಜೈಲಿನೊಳಗಿಂದಲೇ ಒಂದು ಪಾಸಿಟಿವ್ ಸುದ್ದಿ ಸಿಕ್ಕಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ಪವಿತ್ರಾ ಗೌಡಗೆ ಮನೆಯೂಟ ನೀಡಲು ಕೋರ್ಟ್ ಆದೇಶ ಹೊರಡಿಸಿದೆ.

ಒಂದೆಡೆ ದರ್ಶನ್ ಜೊತೆಗಿನ ಸಂಬಂಧವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದ ಪವಿತ್ರಾ ಗೌಡ, ಮತ್ತೊಂದೆಡೆ ಅದೇ ವಿಚಾರವೇ ತಮಗೆ ಸಂಕಷ್ಟದ ದಾರಿ ತೆರೆದಿದೆ ಎಂಬ ಚರ್ಚೆ ಇದೆ. ಕಳೆದ ವರ್ಷ ಹೊಸ ವರ್ಷದ ಹೊತ್ತಿಗೆ ಕುಂಭಮೇಳದಲ್ಲಿ ಗಂಗಾಸ್ನಾನ ಮಾಡಿದ್ದ ಪವಿತ್ರಾ, ಈ ವರ್ಷ ಜೈಲಿನ ಕತ್ತಲ ಕೋಣೆಯಲ್ಲಿ ದಿನ ಎಣಿಸುವ ಸ್ಥಿತಿಗೆ ತಲುಪಿದ್ದಾರೆ.

ರೇಣುಕಾಸ್ವಾಮಿ ಪ್ರಕರಣದ ಟ್ರಯಲ್ ಆರಂಭವಾಗಿದ್ದು, ಮುಂದೇನು ಆಗಲಿದೆ ಎಂಬ ಭಯದ ನಡುವೆಯೇ ಪವಿತ್ರಾ ದಿನ ಕಳೆಯುತ್ತಿದ್ದಾರೆ. ಇದೇ ಸಂದರ್ಭದಲ್ಲೇ ಮನೆಯೂಟಕ್ಕಾಗಿ ಸಲ್ಲಿಸಿದ್ದ ಅರ್ಜಿಗೆ ಸೆಷನ್ಸ್ ಕೋರ್ಟ್ ಅಸ್ತು ಎಂದಿದೆ. ಆದರೆ ಆದೇಶ ಪ್ರತಿ ತಲುಪಿದರೂ, ಜೈಲಿನ ಆಡಳಿತಾತ್ಮಕ ಪ್ರಕ್ರಿಯೆಗಳ ಕಾರಣದಿಂದ ಇನ್ನೂ ಮನೆಯೂಟ ಪವಿತ್ರಾ ಪಾಲಿಗೆ ಲಭ್ಯವಾಗಿಲ್ಲ.

ಜೈಲು ನಿಯಮಗಳ ಪ್ರಕಾರ ಮನೆಯೂಟ ತರಿಸುವ ವ್ಯಕ್ತಿ ಯಾರು, ಅವರ ಹಾಗೂ ಆರೋಪಿಯ ನಡುವಿನ ಸಂಬಂಧ ಏನು, ಅಗತ್ಯ ದಾಖಲೆಗಳು ಯಾವುವು ಎಂಬ ಮಾಹಿತಿಯನ್ನು ನೀಡಬೇಕಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮನೆಯೂಟ ಆರಂಭವಾಗಲಿದೆ ಎನ್ನಲಾಗಿದೆ.

ಪವಿತ್ರಾ ಗೌಡ ಜೊತೆ ಲಕ್ಷ್ಮಣ್ ಹಾಗೂ ನಾಗರಾಜ್ ಸೇರಿದಂತೆ ನಾಲ್ವರು ಆರೋಪಿಗಳಿಗೆ ಮನೆಯೂಟಕ್ಕೆ ಅನುಮತಿ ನೀಡಲಾಗಿದೆ. ಇದರಿಂದ ದರ್ಶನ್‌ಗೆ ಮಾತ್ರ ಈ ಸೌಲಭ್ಯ ಯಾಕೆ ದೊರೆತಿಲ್ಲ ಎಂಬ ಗೊಂದಲ ಹುಟ್ಟಿಕೊಂಡಿದೆ. ಮುಂದಿನ ದಿನಗಳಲ್ಲಿ ದರ್ಶನ್ ಕೂಡ ಮನೆಯೂಟಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂಬ ಮಾತು ಕೇಳಿಬರುತ್ತಿದೆ.

ಇದರ ನಡುವೆ, ಆರೋಪಿಗಳಿಗೆ ಮನೆಯೂಟ ನೀಡುವ ಸೆಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಒಟ್ಟಿನಲ್ಲಿ ಪವಿತ್ರಾ ಗೌಡ ಪಾಲಿಗೆ ಮನೆಯೂಟ ಸಿಕ್ಕಿರುವುದು ಮುಂದಿನ ದಿನಗಳಲ್ಲಿ ಜಾಮೀನು ಅರ್ಜಿಗೂ ದಾರಿ ತೆರೆದೀತಾ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.

error: Content is protected !!