Home Blog Page 256

99 ಲಕ್ಷ ರೂ. ಸಾಲ ಮರುಪಾವತಿ ಆರೋಪ: BJP ಶಾಸಕ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲು

0

ಬೀದರ್: 99 ಲಕ್ಷ ರೂ. ಸಾಲವನ್ನು ಹಿಂತಿರುಗಿಸದೆ ವಂಚನೆ ನಡೆಸಿದ ಆರೋಪದ ಮೇರೆಗೆ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲಾಗಿದೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಉದ್ಯಮಿ ಸಂಜು ಸುಗುರೆ ಅವರು ಈ ಕುರಿತು ದೂರು ನೀಡಿದ್ದಾರೆ.

ದೂರುದಾರ ಉದ್ಯಮಿ ಸಂಜು ಸುಗುರೆ ಪ್ರಕಾರ, 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ವೆಚ್ಚಕ್ಕೆಂದು ಶಾಸಕ ಶರಣು ಸಲಗರ್ ಅವರು 99 ಲಕ್ಷ ರೂ. ಸಾಲ ಪಡೆದಿದ್ದಾರೆ. ಸಾಲದ ಭದ್ರತೆಗಾಗಿ ಖಾಲಿ ಚೆಕ್ ಹಾಗೂ ಲೆಟರ್ ಹೆಡ್ ಮೇಲೆ ಸಹಿ ಮಾಡಿ ಶಾಸಕರು ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಾಲ ಪಡೆದ ಬಳಿಕ ಅನೇಕ ಬಾರಿ ಹಣ ವಾಪಸ್ ನೀಡುವಂತೆ ಕೇಳಿದರೂ ಶಾಸಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಲಾಗಿದೆ. ಬಳಿಕ ಸೆಪ್ಟೆಂಬರ್ 14ರಂದು ಹಿರಿಯರ ಸಮ್ಮುಖದಲ್ಲಿ ಹಣ ನೀಡುವುದಾಗಿ ಒಪ್ಪಿಕೊಂಡು ಶಾಸಕ ಶರಣು ಸಲಗರ್ ಅವರು ಮತ್ತೊಮ್ಮೆ ಚೆಕ್ ನೀಡಿದ್ದಾರೆ ಎನ್ನಲಾಗಿದೆ.

ಸೆಪ್ಟೆಂಬರ್ 16ರಂದು ಚೆಕ್ ಬ್ಯಾಂಕಿಗೆ ಹಾಕುವ ಬಗ್ಗೆ ಖಚಿತಪಡಿಸಿಕೊಳ್ಳಲು ಉದ್ಯಮಿ ಸಂಜು ಸುಗುರೆ ಅವರ ಪತ್ನಿ ಹಾಗೂ ಪುತ್ರರು ಶಾಸಕರ ಮನೆಗೆ ತೆರಳಿದಾಗ ಗಲಾಟೆ ನಡೆದಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಚೆಕ್ ಬ್ಯಾಂಕಿಗೆ ಹಾಕುವುದಾಗಿ ಹೇಳಿದ್ದಕ್ಕೆ ಶಾಸಕ ಶರಣು ಸಲಗರ್ ಅವರು ಅವಾಚ್ಯ ಶಬ್ದಗಳಿಂದ ಬೈದು ಧಮ್ಕಿ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಸೆಪ್ಟೆಂಬರ್ 19ರಂದು ಶಾಸಕರು ನೀಡಿದ ಚೆಕ್ ಅನ್ನು ಬ್ಯಾಂಕಿಗೆ ಸಲ್ಲಿಸಿದಾಗ ಚೆಕ್ ವಾಪಸ್ ಬಂದಿದೆ. ಕರ್ನಾಟಕ ಬ್ಯಾಂಕ್‌ನಲ್ಲಿ ಶಾಸಕರ ಖಾತೆ ಮುಚ್ಚಲ್ಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ದೂರುದಲ್ಲಿ ತಿಳಿಸಲಾಗಿದೆ. ಈ ಪ್ರಕರಣ ಸಂಬಂಧ ಉದ್ಯಮಿ ಸಂಜು ಸುಗುರೆ ಅವರು ಬೆಂಗಳೂರಿನ ಎಸಿಜೆಎಂ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಶಾಸಕ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಚಿತ್ರರಂಗಕ್ಕೆ ವಿಜಯ್ ವಿದಾಯ? ‘ಜನ ನಾಯಗನ್’ ಪ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಭಾವುಕ

ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಡಿಸೆಂಬರ್ 27ರಂದು ಮಲೇಷ್ಯಾದಲ್ಲಿ ಭರ್ಜರಿಯಾಗಿ ನಡೆಯಿತು. ಈಗಾಗಲೇ ರಾಜಕೀಯ ಪಕ್ಷ ಸ್ಥಾಪಿಸಿರುವ ವಿಜಯ್, ಈ ಸಿನಿಮಾವೇ ತಮ್ಮ ನಟನಾ ಜೀವನದ ಕೊನೆಯ ಚಿತ್ರ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಕಾರ್ಯಕ್ರಮದ ವೇಳೆ ಮಾತನಾಡಿದ ವಿಜಯ್, “ಇದು ನನ್ನ ಕೊನೆಯ ಸಿನಿಮಾ ಎಂದು ಹೇಳುವುದೇ ನನಗೆ ಕಷ್ಟವಾಗುತ್ತಿದೆ. ಆದರೆ ನನ್ನ ಮುಂದಿನ ಜೀವನದ 30 ವರ್ಷಗಳನ್ನು ಅಭಿಮಾನಿಗಳಿಗಾಗಿ ಮತ್ತು ಸಮಾಜಕ್ಕಾಗಿ ಮೀಸಲಿಡಬೇಕಿದೆ” ಎಂದು ಹೇಳಿದರು.

ನಟನೆಗೆ ಕಾಲಿಟ್ಟ ದಿನದಿಂದ ಇಂದಿನವರೆಗೂ ಅಭಿಮಾನಿಗಳು ತಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಿದ ಅವರು, “ನನಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಅಭಿಮಾನಿಗಳಿಗಾಗಿ ನಾನು ನನ್ನ ಪ್ರೀತಿಯ ಸಿನಿಮಾವನ್ನೇ ತ್ಯಜಿಸುತ್ತಿದ್ದೇನೆ. ನಾನು ಕೇವಲ ಒಳ್ಳೆಯದು ಹೇಳಲು ಬಂದವನಲ್ಲ, ಒಳ್ಳೆಯತನವನ್ನು ಸ್ಥಾಪಿಸಲು ಬಂದವ” ಎಂದು ಘೋಷಿಸಿದರು.

ಸಿನಿಮಾ ತಂಡದ ಬಗ್ಗೆ ಮಾತನಾಡಿದ ವಿಜಯ್, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಎಂದಿಗೂ ನಿರಾಶೆ ಮಾಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಿರ್ದೇಶಕ ಎಚ್. ವಿನೋದ್ ಅವರ ಸಿನಿಮಾ ಶೈಲಿಯನ್ನು ಶ್ಲಾಘಿಸಿದರು. ನಾಯಕಿ ಪೂಜಾ ಅವರ ನಟನಾ ಪ್ರತಿಭೆ ಹಾಗೂ ಅಂದವನ್ನು ಹೊಗಳಿದರು. ಮಮಿತಾ ಹಾಗೂ ಪ್ರಕಾಶ್ ರೈ ಜೊತೆಗಿನ ಕಾಂಬಿನೇಷನ್ ಕುರಿತು ಸಹ ಮಾತನಾಡಿದರು.

ಮಲೇಷ್ಯಾ ತಮಿಳು ಚಿತ್ರರಂಗಕ್ಕೆ ಪ್ರಮುಖ ಮಾರುಕಟ್ಟೆ ಎಂದು ಹೇಳಿದ ವಿಜಯ್, ತಮ್ಮ ಕೊನೆಯ ಸಿನಿಮಾದ ಕಾರ್ಯಕ್ರಮ ಇಲ್ಲಿ ನಡೆಯುತ್ತಿರುವುದು ವಿಶೇಷ ಕ್ಷಣ ಎಂದು ಹೇಳಿದರು. ‘ಜನ ನಾಯಗನ್’ ಸಿನಿಮಾ ಜನವರಿ 09ರಂದು ಬಿಡುಗಡೆಯಾಗಲಿದೆ.

ನಕಲಿ ಗೋಲ್ಡ್​​ ಲೋನ್​​ ಸೃಷ್ಟಿಸಿ ಕೋಟಿ ಕೋಟಿ ವಂಚನೆ: ಮ್ಯಾನೇಜರ್ ವಿರುದ್ಧ FIR ದಾಖಲು

0

ಬೆಂಗಳೂರು: ನಗರದ ಮಲ್ಲೇಶ್ವರಂ ಪ್ರದೇಶದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆದ ಭಾರೀ ಹಣಕಾಸು ವಂಚನೆ ನಗರವಾಸಿಗಳಲ್ಲಿ ಆತಂಕವನ್ನುಂಟು ಮಾಡಿದೆ. ಬ್ಯಾಂಕ್‌ನ ಹಿರಿಯ ಮ್ಯಾನೇಜರ್ ವಿರುದ್ಧವೇ ನಕಲಿ ಗೋಲ್ಡ್ ಲೋನ್‌ಗಳನ್ನು ಸೃಷ್ಟಿಸಿ ಕೋಟಿ ಕೋಟಿ ರೂ. ವಂಚಿಸಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಮಲ್ಲೇಶ್ವರಂನ 15ನೇ ಕ್ರಾಸ್‌ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯ ಹಿರಿಯ ವ್ಯವಸ್ಥಾಪಕ ಎನ್. ರಘು ಅವರು, 2025ರ ಅಕ್ಟೋಬರ್ 4ರಿಂದ ಡಿಸೆಂಬರ್ 9ರವರೆಗೆ 41 ಗ್ರಾಹಕರ ಖಾತೆಗಳಲ್ಲಿ ಯಾವುದೇ ಚಿನ್ನವಿಲ್ಲದೇ ನಕಲಿ ಗೋಲ್ಡ್ ಲೋನ್‌ಗಳನ್ನು ತೆರೆದು ಸುಮಾರು 3.11 ಕೋಟಿ ರೂ. ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಂಚನೆಗೆ ವಯೋವೃದ್ಧರು, ಪಿಂಚಣಿದಾರರು, ಅರ್ಚಕರು ಹಾಗೂ ಹೋಲ್‌ಸೇಲ್ ವ್ಯಾಪಾರಿಗಳನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಬ್ಯಾಂಕ್ ಕೆಲಸಕ್ಕೆ ಅಗತ್ಯವೆಂದು ಸುಳ್ಳು ಹೇಳಿ ಗ್ರಾಹಕರಿಂದ OTP ಮತ್ತು ಚೆಕ್‌ಗಳನ್ನು ಪಡೆದು, ಅವರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗ್ರಾಹಕರಿಗೆ ಯಾವುದೇ ಮಾಹಿತಿ ನೀಡದೇ ಅವರ ಖಾತೆಗಳಲ್ಲಿ ಗೋಲ್ಡ್ ಲೋನ್ ತೆರೆದು, ಲೋನ್ ಹಣವನ್ನು ಡ್ರಾ ಮಾಡಿ ತನ್ನ ಖಾತೆಗೆ ವರ್ಗಾಯಿಸಿಕೊಂಡು ಆರೋಪಿತ ಅಧಿಕಾರಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇದರಿಂದ ಗ್ರಾಹಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಕೆನರಾ ಬ್ಯಾಂಕ್ 41 ಗ್ರಾಹಕರ ಖಾತೆಗಳನ್ನು ಫ್ರೀಜ್ ಮಾಡಿದೆ.

ಯಾವುದೇ ಚಿನ್ನವಿಲ್ಲದೇ ಗ್ರಾಹಕರು ಲೋನ್ ಹೊರೆ ಹೊರುವ ಸ್ಥಿತಿಗೆ ತಲುಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಘಟನೆ ಹಿನ್ನೆಲೆಯಲ್ಲಿ, ತಮ್ಮ ಖಾತೆಗಳಲ್ಲಿ ಯಾವುದೇ ಅನುಮಾನಾಸ್ಪದ ಲೋನ್ ಅಥವಾ ವ್ಯವಹಾರಗಳಿವೆಯೇ ಎಂಬುದನ್ನು ತಕ್ಷಣ ಪರಿಶೀಲಿಸಿಕೊಳ್ಳುವಂತೆ ಬ್ಯಾಂಕ್ ಗ್ರಾಹಕರಿಗೆ ಸೂಚನೆ ನೀಡಲಾಗಿದೆ.

ಪ್ರಭಾಸ್‌ ‘ಮಿಡ್ ರೇಂಜ್ ಹೀರೋ’ ಎಂದ ನಿರ್ದೇಶಕ: ಅಭಿಮಾನಿಗಳಿಗೆ ಬೇಸರ

ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದು, ಅವರ ಕೆಟ್ಟ ಸಿನಿಮಾಗಳೂ ಸಹ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕಲೆಕ್ಷನ್ ಮಾಡುತ್ತವೆ. ಇತ್ತೀಚಿನ ಕೆಲವು ಚಿತ್ರಗಳು ದೊಡ್ಡ ಯಶಸ್ಸು ಕಾಣದಿದ್ದರೂ, ಪ್ರಭಾಸ್ ಕೈಯಲ್ಲಿ ಕನಿಷ್ಠ ಐದು ಸಿನಿಮಾಗಳಿವೆ. ಇಂತಹ ಸ್ಟಾರ್ ನಟನನ್ನು ‘ಮಿಡ್ ರೇಂಜ್ ಹೀರೋ’ ಎಂದು ಕರೆದಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ನಿನ್ನೆ ನಡೆದ ‘ದಿ ರಾಜಾ ಸಾಬ್’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಿರ್ದೇಶಕ ಮಾರುತಿ ವೇದಿಕೆಯಲ್ಲಿ ಮಾತನಾಡುತ್ತಾ ರಾಜಮೌಳಿಯವರ ಕೊಡುಗೆಯನ್ನು ಶ್ಲಾಘಿಸಿದರು. “ಒಬ್ಬ ಮೀಡಿಯಮ್ ರೇಂಜ್ ಹೀರೋವನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದವರು ರಾಜಮೌಳಿ” ಎಂದು ಅವರು ಹೇಳಿದ್ದು ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಮಾರುತಿ ತಮ್ಮ ಭಾಷಣದಲ್ಲಿ ಪ್ರಭಾಸ್ ಅವರನ್ನು ಹಲವು ರೀತಿಯಲ್ಲಿ ಕೊಂಡಾಡಿದ್ದರೂ, ಈ ಒಂದು ಪದ ಬಳಕೆ ಅಭಿಮಾನಿಗಳಿಗೆ ನೋವು ತಂದಿದೆ. ಭಾಷಣದ ವಿಡಿಯೋ ತುಣುಕು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಾರುತಿ ತೀವ್ರ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.

ಅಂದಹಾಗೆ ‘ದಿ ರಾಜಾ ಸಾಬ್’ ಸಿನಿಮಾವನ್ನು ಮಾರುತಿ ನಿರ್ದೇಶಿಸಿದ್ದು, ಇದು ಹಾರರ್ ಕಾಮಿಡಿ ಚಿತ್ರ. ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗಲಿದ್ದು, ನಿಧಿ ಅಗರ್ವಾಲ್ ಸೇರಿದಂತೆ ಮೂವರು ನಾಯಕಿಯರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘1% ಬೇಸರವಾದ್ರೂ ಮನೆಗೆ ಬನ್ನಿ’ – ಪ್ರಭಾಸ್ ಅಭಿಮಾನಿಗಳಿಗೆ ‘ದಿ ರಾಜಾ ಸಾಬ್’ ನಿರ್ದೇಶಕರ ಓಪನ್ ಚಾಲೆಂಜ್!

ಪ್ರಭಾಸ್ ಅಭಿನಯದ ಹಾರರ್ ಕಾಮಿಡಿ ಸಿನಿಮಾ ‘ದಿ ರಾಜಾ ಸಾಬ್’ ಕೊನೆಗೂ ತೆರೆಕಾಣಲು ಸಜ್ಜಾಗಿದೆ. ಬಹಳ ದಿನಗಳಿಂದ ಮುಂದೂಡಲ್ಪಡುತ್ತಿದ್ದ ಸಿನಿಮಾದ ಬಿಡುಗಡೆ ಇದೀಗ ಸಂಕ್ರಾಂತಿ ಹಬ್ಬಕ್ಕೆ ಫಿಕ್ಸ್ ಆಗಿದೆ. ಈ ಹಿನ್ನೆಲೆ ನಿನ್ನೆ ನಡೆದ ಪ್ರೀ ರಿಲೀಸ್ ಕಾರ್ಯಕ್ರಮ ಭರ್ಜರಿಯಾಗಿ ನೆರವೇರಿದ್ದು, ನಿರ್ದೇಶಕ ಮಾರುತಿ ಅವರ ಮಾತುಗಳು ಅಭಿಮಾನಿಗಳ ಗಮನ ಸೆಳೆದಿವೆ.

ವೇದಿಕೆ ಮೇಲೆ ಮಾತನಾಡಿದ ಮಾರುತಿ, ಪ್ರಭಾಸ್ ಅವರನ್ನು ಮನಸಾರೆ ಹೊಗಳಿದರು. “ಪ್ರಭಾಸ್ ಅವರ ನಟನೆ, ಸ್ಟೈಲ್ ಮಾತ್ರವಲ್ಲ, ಅವರ ಮಾನವೀಯತೆ ಮತ್ತು ತಾಳ್ಮೆ ನಮಗೆಲ್ಲ ಪ್ರೇರಣೆ. ಇಂಥ ದೊಡ್ಡ ಸ್ಟಾರ್ ಜೊತೆ ಕೆಲಸ ಮಾಡುತ್ತಿದ್ದೇವೆ ಅಂದ್ರೆ ಸುಮ್ಮನೆ ಸಿನಿಮಾ ಮಾಡೋಕೆ ಆಗಲ್ಲ. ನಾವು ಶ್ರಮಪಟ್ಟು ಅದ್ಭುತ ಸಿನಿಮಾ ಮಾಡಿದ್ದೇವೆ” ಎಂದು ಹೇಳಿದರು.

‘ಆದಿಪುರುಷ್’ ಸಿನಿಮಾ ಸಮಯದಲ್ಲಿ ಪ್ರಭಾಸ್ ಅವರನ್ನು ಮೊದಲ ಬಾರಿ ಭೇಟಿಯಾದ ಸಂದರ್ಭವನ್ನು ಹಂಚಿಕೊಂಡ ಮಾರುತಿ, “ಆ ಭೇಟಿಯಲ್ಲಿ ನಾನು ಅವರನ್ನು ಚೆನ್ನಾಗಿ ನಗಿಸಿದ್ದೆ. ಅದುವರೆಗೂ ನಾನು ಸಾಮಾನ್ಯ ಸಿನಿಮಾಗಳನ್ನೇ ಮಾಡುತ್ತಿದ್ದೆ. ಆದರೆ ಪ್ರಭಾಸ್ ಅವರು ನನ್ನ ಜೀವನಕ್ಕೆ ಬಂದ ನಂತರ ನನ್ನ ಪಯಣವೇ ಬದಲಾಗಿದೆ. ಅವರು ನನ್ನ ಹಿಂದೆ ನಿಂತ ಶಕ್ತಿಯೇ ನನ್ನನ್ನು ಮುಂದೆ ತಳ್ಳಿತು” ಎಂದು ಭಾವುಕವಾಗಿ ಮಾತನಾಡಿದರು.

ಕಳೆದ ಮೂರು ವರ್ಷಗಳ ಶ್ರಮದ ಬಗ್ಗೆ ಮಾತನಾಡುವಾಗ ಮಾರುತಿ ಕಣ್ಣೀರಿಟ್ಟರು. “ನಾನು ಪ್ರೇಕ್ಷಕನಂತೆ ಸಿನಿಮಾ ನೋಡಿದ್ದೇನೆ. ಪ್ರತಿ ಬಾರಿ ನೋಡಿದಾಗಲೂ ಕಣ್ಣೀರು ಬರುತ್ತದೆ. ಪ್ರಭಾಸ್ ಅವರ ಅಭಿನಯ ನನ್ನನ್ನು ಆ ಮಟ್ಟಿಗೆ ತಟ್ಟಿದೆ” ಎಂದರು.

ಇದೇ ವೇಳೆ ಮಾರುತಿ ನೀಡಿದ ಹೇಳಿಕೆ ಸಖತ್ ವೈರಲ್ ಆಗಿದೆ. “ನಾವು ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಆದರೂ ಈ ಸಿನಿಮಾ ನಿಮಗೆ 1% ಆದರೂ ಬೇಸರ ತಂದರೆ, ನನ್ನ ಮನೆ ವಿಳಾಸ ವಿಲ್ಲಾ ನಂಬರ್ 17, ವಿಲ್ಲಾ ಲಕ್ಷುರಿಯಾ, ಕೊಂಡಾಪುರ, ಹೈದರಾಬಾದ್. ಅಭಿಮಾನಿಗಳು ನೇರವಾಗಿ ಬಂದು ನನ್ನನ್ನು ಪ್ರಶ್ನಿಸಬಹುದು” ಎಂದು ಪ್ರಭಾಸ್ ಅಭಿಮಾನಿಗಳಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.

ಧುರಂಧರ್ ಹಿಟ್ ಬಳಿಕ ಹೆಚ್ಚಿದ ಡಿಮ್ಯಾಂಡ್! ‘ದೃಶ್ಯಂ 3’ ಕೈ ತಪ್ಪಿದ ಅಕ್ಷಯ್ ಖನ್ನಾ

‘ಧುರಂಧರ್’ ಸಿನಿಮಾದ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ ಬಾಲಿವುಡ್ ನಟ ಅಕ್ಷಯ್ ಖನ್ನಾ ಅವರ ಡಿಮ್ಯಾಂಡ್ ಏಕಾಏಕಿ ಜಾಸ್ತಿಯಾಗಿದೆ. 2–3 ಕೋಟಿ ಸಂಭಾವನೆ ಪಡೆಯುತ್ತಿದ್ದ ನಟ, ಈಗ 20 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ಕೇಳುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ.

ಈ ಬೆಳವಣಿಗೆ ‘ದೃಶ್ಯಂ 3’ ಸಿನಿಮಾ ತಂಡಕ್ಕೆ ಶಾಕ್ ನೀಡಿದ್ದು, ಕೊನೆಗೆ ಅಕ್ಷಯ್ ಖನ್ನಾ ಅವರನ್ನು ಸಿನಿಮಾದಿಂದ ಕೈಬಿಡುವ ತೀರ್ಮಾನ ಕೈಗೊಳ್ಳಲಾಗಿದೆ. ಅವರ ಸ್ಥಾನಕ್ಕೆ ನಟ ಜೈದೀಪ್ ಅಹಲಾವತ್ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಕುಮಾರ್ ಮಂಗತ್ ಪಾಠಕ್, ‘ದೃಶ್ಯಂ ದೊಡ್ಡ ಬ್ರ್ಯಾಂಡ್. ಒಬ್ಬ ನಟ ಇದ್ದರೂ ಇಲ್ಲದಿದ್ದರೂ ಸಿನಿಮಾ ನಿಲ್ಲುವುದಿಲ್ಲ. ಅಕ್ಷಯ್ ಖನ್ನಾ ಬದಲಿಗೆ ಜೈದೀಪ್ ಬಂದಿದ್ದಾರೆ. ಅವರು ಉತ್ತಮ ನಟ ಮಾತ್ರವಲ್ಲ, ಉತ್ತಮ ವ್ಯಕ್ತಿಯೂ ಹೌದು’ ಎಂದು ಹೇಳಿದ್ದಾರೆ.

‘ಧುರಂಧರ್’ ಸಿನಿಮಾದಲ್ಲಿ ರೆಹಮಾನ್ ಡಕಾಯಿತ್ ಪಾತ್ರದಲ್ಲಿ ಅಕ್ಷಯ್ ಖನ್ನಾ ಭಾರೀ ಮೆಚ್ಚುಗೆ ಪಡೆದಿದ್ದರು. ಇದೇ ಯಶಸ್ಸು ಅವರನ್ನು ದುಬಾರಿ ಸಂಭಾವನೆ ಕೇಳುವ ಮಟ್ಟಕ್ಕೆ ತಲುಪಿಸಿದೆ ಎನ್ನಲಾಗಿದೆ.

ಇನ್ನೊಂದು ಪ್ರಮುಖ ವಿಚಾರವೆಂದರೆ, ಅಕ್ಷಯ್ ಖನ್ನಾ ತಮ್ಮ ಲುಕ್ ಬದಲಾವಣೆಗೂ ಒತ್ತಾಯಿಸಿದ್ದಾರೆ. ಆದರೆ ‘ದೃಶ್ಯಂ 2’ನಲ್ಲಿ ಇದ್ದ ಪಾತ್ರದ ಕಂಟಿನ್ಯೂಟಿ ಹಾಳಾಗುತ್ತದೆ ಎಂಬ ಕಾರಣಕ್ಕೆ ನಿರ್ದೇಶಕರು ಇದನ್ನು ತಿರಸ್ಕರಿಸಿದ್ದಾರೆ. ಈ ವಿಚಾರವೂ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.

‘ಪಾತಾಳ್ ಲೋಕ್’ ಮೂಲಕ ಜನಮನ ಗೆದ್ದ ಜೈದೀಪ್ ಅಹಲಾವತ್ ಈಗ ‘ದೃಶ್ಯಂ 3’ನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಬದಲಾವಣೆ ಚಿತ್ರದ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಈ ವಿಷಯದ ಬಗ್ಗೆ ಅಕ್ಷಯ್ ಖನ್ನಾ ಪ್ರತಿಕ್ರಿಯೆ ಇನ್ನೂ ಹೊರಬಿದ್ದಿಲ್ಲ.

ಮಲಗುವ ಮುನ್ನ ಒಂದು ಸ್ಪೂನ್‌ ಜೇನುತುಪ್ಪ ತಿಂದ್ರೆ ಏನಾಗುತ್ತದೆ? ಇಲ್ಲಿದೆ ಉತ್ತರ

0

ಚಳಿಗಾಲದ ಶೀತ ವಾತಾವರಣದಲ್ಲಿ ತ್ವಚೆ ಸಂಬಂಧಿ ಸಮಸ್ಯೆಗಳ ಜೊತೆಗೆ ಶೀತ, ಕೆಮ್ಮು, ನೆಗಡಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ.

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅನೇಕರು ಕಷಾಯ, ಆರೋಗ್ಯಕರ ಆಹಾರಗಳನ್ನು ಸೇವಿಸುತ್ತಾರೆ. ಇದರ ಜೊತೆಗೆ, ಚಳಿಗಾಲದಲ್ಲಿ ಆರೋಗ್ಯ ಹದಗೆಡದಂತೆ ನೋಡಿಕೊಳ್ಳಲು ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪ ಸೇವಿಸುವುದೂ ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಜೇನುತುಪ್ಪವನ್ನು ಚಳಿಗಾಲದಲ್ಲಿ ನಿಯಮಿತವಾಗಿ ಸೇವಿಸಿದರೆ ದೇಹಕ್ಕೆ ದೊರೆಯುವ ಲಾಭಗಳು ಹೀಗಿವೆ.

ಉತ್ತಮ ನಿದ್ರೆ:
ಜೇನುತುಪ್ಪದಲ್ಲಿ ಇರುವ ಗ್ಲೂಕೋಸ್ ಅಂಶ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲದ ಉತ್ಪಾದನೆ ಹೆಚ್ಚಾಗಿ, ಅದು ಸಿರೊಟೋನಿನ್ ಹಾಗೂ ಮೆಲಟೋನಿನ್ ಆಗಿ ಪರಿವರ್ತನೆಯಾಗುತ್ತದೆ. ಈ ಎರಡೂ ಅಂಶಗಳು ನಿದ್ರೆಯನ್ನು ಸುಧಾರಿಸಲು ಸಹಕಾರಿ. ಹೀಗಾಗಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪ ಸೇವಿಸುವುದರಿಂದ ಉತ್ತಮ ನಿದ್ರೆ ಪಡೆಯಲು ಸಾಧ್ಯ.

ರೋಗನಿರೋಧಕ ಶಕ್ತಿ ಹೆಚ್ಚಳ:
ಜೇನುತುಪ್ಪವು ನೈಸರ್ಗಿಕ ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಹಾಗೂ ಆಂಟಿ ವೈರಲ್ ಗುಣಗಳನ್ನು ಹೊಂದಿದೆ. ಇದಲ್ಲದೆ ವಿಟಮಿನ್ ಸಿ ಮತ್ತು ಸತುವಿನ ಅಂಶವೂ ಇದರಲ್ಲಿ ಇದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಿಂದ ಶೀತ, ಕೆಮ್ಮು ಹಾಗೂ ಜ್ವರದ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯವಾಗುತ್ತದೆ.

ಗಂಟಲು ನೋವಿನಿಂದ ಪರಿಹಾರ:
ಚಳಿಗಾಲದಲ್ಲಿ ಗಂಟಲು ನೋವು ಹಾಗೂ ಕೆಮ್ಮು ಸಾಮಾನ್ಯ. ರಾತ್ರಿ ಮಲಗುವ ಮುನ್ನ ಒಂದು ಸ್ಪೂನ್ ಜೇನುತುಪ್ಪ ಸೇವಿಸಿದರೆ ಗಂಟಲು ನೋವು ಕಡಿಮೆಯಾಗುತ್ತದೆ ಮತ್ತು ಕೆಮ್ಮಿಗೆ ಪರಿಹಾರ ದೊರೆಯುತ್ತದೆ. ಜೇನುತುಪ್ಪದಲ್ಲಿರುವ ಹೈಡ್ರೋಜನ್ ಪೆರಾಕ್ಸೈಡ್ ಅಂಶ ದೇಹವನ್ನು ಸೋಂಕುಗಳ ವಿರುದ್ಧ ರಕ್ಷಿಸಲು ಸಹಕಾರಿ.

ಹೊಳೆಯುವ ಚರ್ಮ:
ಜೇನುತುಪ್ಪದಲ್ಲಿ ವಿಟಮಿನ್ ಇ ಹಾಗೂ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡಿ ತೇವಾಂಶವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತವೆ. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಜೇನುತುಪ್ಪದ ಸೇವನೆಯಿಂದ ಕಾಲಜನ್ ಉತ್ಪಾದನೆ ಹೆಚ್ಚಾಗಿ, ರಕ್ತ ಪರಿಚಲನೆ ಸುಧಾರಣೆಯಾಗುತ್ತದೆ. ಇದರಿಂದ ವಯಸ್ಸಿನ ಗುರುತುಗಳು ನಿಧಾನಗೊಳ್ಳುತ್ತವೆ.

ಹೃದಯದ ಆರೋಗ್ಯ ಸುಧಾರಣೆ:
ಜೇನುತುಪ್ಪದಲ್ಲಿ ಇರುವ ಫ್ಲೇವನಾಯ್ಡ್‌ಗಳು ಹಾಗೂ ಫೀನಾಲಿಕ್ ಸಂಯುಕ್ತಗಳು ಹೃದಯದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇವು ರಕ್ತನಾಳಗಳನ್ನು ಆರೋಗ್ಯಕರವಾಗಿ ಕಾಪಾಡಲು, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಚಳಿಗಾಲದಲ್ಲಿ ಹೃದಯ ಸಮಸ್ಯೆಗಳ ಅಪಾಯ ಹೆಚ್ಚಿರುವುದರಿಂದ ಜೇನುತುಪ್ಪದ ಸೇವನೆ ರಕ್ತದೊತ್ತಡ ನಿಯಂತ್ರಣಕ್ಕೂ ನೆರವಾಗುತ್ತದೆ.

ಯಾರು ಜೇನುತುಪ್ಪ ಸೇವಿಸಬಾರದು?
ಜೇನುತುಪ್ಪ ಆರೋಗ್ಯಕ್ಕೆ ಲಾಭದಾಯಕವಾದರೂ, ಕೆಲವರು ಎಚ್ಚರಿಕೆ ವಹಿಸಬೇಕು. ಒಂದು ವರ್ಷದೊಳಗಿನ ಮಕ್ಕಳಿಗೆ ಜೇನುತುಪ್ಪ ನೀಡಬಾರದು. ಮಧುಮೇಹ ಇರುವವರು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚುವ ಸಾಧ್ಯತೆ ಇರುವುದರಿಂದ ವೈದ್ಯರ ಸಲಹೆಯೊಂದಿಗೆ ಮಾತ್ರ ಸೇವಿಸಬೇಕು.

ಜೊತೆಗೆ ಜೇನುತುಪ್ಪಕ್ಕೆ ಅಲರ್ಜಿ ಇರುವವರು ಇದರ ಸೇವನೆಯನ್ನು ತಪ್ಪಿಸುವುದು ಉತ್ತಮ. ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆದು ಜೇನುತುಪ್ಪವನ್ನು ಸೇವಿಸುವುದು ಸೂಕ್ತ.

ಟಾಟಾನಗರ–ಎರ್ನಾಕುಲಂ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಅವಘಡ: ಓರ್ವ ಪ್ರಯಾಣಿಕ ಸಾವು!

0

ಆಂಧ್ರ:- ವಿಶಾಖಪಟ್ಟಣ ಸಮೀಪದ ಅನಕಪಲ್ಲಿ ಜಿಲ್ಲೆಯಲ್ಲಿ ಟಾಟಾನಗರ–ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.

ನಸುಕಿನ ಜಾವ ಎಲಮಂಚಿಲಿ ರೈಲು ನಿಲ್ದಾಣದ ಬಳಿ ಬಿ1 ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದು ಎಂ1 ಹಾಗೂ ಬಿ2 ಬೋಗಿಗಳಿಗೆ ಹರಡಿದೆ. ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ರೈಲನ್ನು ತಕ್ಷಣ ನಿಲ್ಲಿಸಿ, ಬೆಂಕಿ ಹಿಡಿದ ಬೋಗಿಗಳನ್ನು ಬೇರ್ಪಡಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

ಆದರೆ ದುರಾದೃಷ್ಟವಶಾತ್ ಬಿ1 ಕೋಚ್‌ನಲ್ಲಿ ಚಂದ್ರಶೇಖರ್ ಸುಂದರಂ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಘಟನೆಯ ವೇಳೆ ಬೋಗಿಗಳಲ್ಲಿ ನೂರಾರು ಪ್ರಯಾಣಿಕರು ಇದ್ದರೂ ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ರೈಲ್ವೇ ಅಧಿಕಾರಿಗಳು ಅಗ್ನಿ ಅವಘಡದ ಕಾರಣಗಳ ಕುರಿತು ತನಿಖೆ ಆರಂಭಿಸಿದ್ದಾರೆ.

ಕತ್ರಿಗುಪ್ಪೆಯಲ್ಲಿ ಪುಡಿ ರೌಡಿಗಳ ಹಾವಳಿ; ಪಾನ್ ಶಾಪ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ!

0

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ 10ಕ್ಕೂ ಹೆಚ್ಚು ಪುಡಿ ರೌಡಿಗಳು ಪಾನ್ ಶಾಪ್ ಮೇಲೆ ದಾಳಿ ನಡೆಸಿ ದಾಂಧಲೆ ಮಾಡಿದ ಘಟನೆ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ನಡೆದಿದೆ.

ಬಷಿರ್ ಎಂಬುವರ ಮನೆ ಹಾಗೂ ಪಾನ್ ಶಾಪ್‌ಗೆ ನುಗ್ಗಿದ ಆರೋಪಿಗಳು ಮಚ್ಚು, ಲಾಂಗು ಸೇರಿದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಅಂಗಡಿಯಲ್ಲಿದ್ದ ಬಾಟಲ್‌ಗಳನ್ನು ಒಡೆದು ಪರಾರಿಯಾಗಿದ್ದಾರೆ.

ಬನಶಂಕರಿ ಮೂರನೇ ಹಂತದ ಕತ್ರಿಗುಪ್ಪೆ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಹೃದಯಾಘಾತ; ರಾತ್ರಿ ಡ್ಯೂಟಿ ಮುಗಿಸಿ ಮನೆಗೆ ಮರಳಿದ್ದ ಎಎಸ್‌ಐ ಸಾವು

0

ಚಾಮರಾಜನಗರ: ರಾತ್ರಿ ಕರ್ತವ್ಯ ಮುಗಿಸಿ ಬೆಳಗಿನ ಜಾವ ಮನೆಗೆ ಮರಳಿದ್ದ ಎಎಸ್‌ಐ ಒಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಸಂತೇಮರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದ ನಾಗನಾಯಕ ಅವರು ರಾತ್ರಿ ಡ್ಯೂಟಿ ಮುಗಿಸಿ ಬೆಳಿಗ್ಗೆ ನಗರದ ಪೊಲೀಸ್ ಗೃಹದಲ್ಲಿರುವ ತಮ್ಮ ನಿವಾಸಕ್ಕೆ ಬಂದಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ.

ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ, ಮಾರ್ಗ ಮಧ್ಯೆ ಎಎಸ್‌ಐ ನಾಗನಾಯಕ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಅಕಾಲಿಕ ನಿಧನದಿಂದ ಪೊಲೀಸ್‌ ಇಲಾಖೆ ಹಾಗೂ ಸಹೋದ್ಯೋಗಿಗಳಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

error: Content is protected !!