Home Blog Page 28

ಪುರಾಣದ ಶರ್ಮಿಷ್ಠೆ, ವರ್ತಮಾನದ ಹೆಣ್ಣಿನ ಧ್ವನಿ!

0

ಐತಿಹಾಸಿಕ ಗದುಗಿನ ಪಂಡಿತ ಭೀಮಸೇನ ಜೋಶಿ ರಂಗಮಂದಿರದಲ್ಲಿ ಸೆ.9ರ ರಾತ್ರಿ ನಡೆದ ‘ಶರ್ಮಿಷ್ಠೆ’ ನಾಟಕದ ಪ್ರದರ್ಶನ ಕೇವಲ ಪೌರಾಣಿಕ ಕಥೆಯ ರಂಗರೂಪವಾಗಿರಲಿಲ್ಲ. ಪುರಾಣದ ನೆರಳಿನಿಂದ ಹೊರಬಂದು ವರ್ತಮಾನದ ಹೆಣ್ಣಿನ ಅಂತರಂಗ, ನೋವು, ಪ್ರತಿರೋಧ, ಆತ್ಮಗೌರವ ಹಾಗೂ ಅಸ್ತಿತ್ವದ ಪ್ರಶ್ನೆಗಳನ್ನು ಪ್ರೇಕ್ಷಕರ ಮುಂದಿಟ್ಟ ವಿಶಿಷ್ಟ ರಂಗಾನುಭವವಾಗಿತ್ತು.

ಡಾ. ಬೇಲೂರು ರಘುನಂದನ್ ಅವರ ರಚನೆ, ಹಿರಿಯ ರಂಗಕಲಾವಿದೆ ಡಾ. ಉಮಾಶ್ರೀ ಅವರ ಅಪೂರ್ವ ಅಭಿನಯ ಹಾಗೂ ಚಿದಂಬರ ರಾವ್ ಜಂಬೆ ಅವರ ನಿರ್ದೇಶನ ‘ಶರ್ಮಿಷ್ಠೆ’ಯನ್ನು ಪರಿಣಾಮಕಾರಿ ರಂಗಪ್ರಯೋಗವನ್ನಾಗಿ ರೂಪಿಸಿವೆ. ಕಥೆಯ ಕೇಂದ್ರದಲ್ಲಿ ಶರ್ಮಿಷ್ಠೆಯಿದ್ದರೂ, ಆಕೆಯ ಸಂಘರ್ಷದ ಪ್ರತಿಧ್ವನಿ ಇಂದಿನ ಹೆಣ್ಣಿನ ಬದುಕಿನಲ್ಲೂ ಕೇಳಿಸುವಂತಿತ್ತು.

ಪುರಾಣದ ಪಾತ್ರವಲ್ಲ; ಸಂಘರ್ಷದ ಪ್ರತೀಕ

‘ಯಯಾತಿ’ ಪುರಾಣದಲ್ಲಿ ಶರ್ಮಿಷ್ಠೆ ಒಂದು ಪಾತ್ರ. ಆದರೆ ಇಲ್ಲಿ ಆಕೆ ಕೇವಲ ದಾಸಿಯಲ್ಲ. ಅಧಿಕಾರದ ಎದುರು ಅಸಹಾಯಕಳಾಗುವ ಮಹಿಳೆ, ಅವಮಾನವನ್ನು ಎದುರಿಸುವ ವ್ಯಕ್ತಿ, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುವ ಹೆಣ್ಣು ಹಾಗೂ ತಾಯ್ತನ–ಆತ್ಮಗೌರವದ ನಡುವೆ ಸಿಲುಕುವ ಮನಸ್ಸಿನ ಪ್ರತಿರೂಪ.

ಡಾ. ರಘುನಂದನ್ ಅವರು ಪುರಾಣವನ್ನು ಪುನರ್‌ಕಥನ ಮಾಡುವ ಬದಲು ಅದರೊಳಗಿನ ಅಧಿಕಾರ, ವರ್ಣಭೇದ, ಪಿತೃಪ್ರಧಾನತೆ, ಪ್ರತಿರೋಧ ಮತ್ತು ಮಾನವೀಯತೆಯ ಪ್ರಶ್ನೆಗಳನ್ನು ಸಮಕಾಲೀನ ದೃಷ್ಟಿಕೋನದಲ್ಲಿ ಕಟ್ಟಿಕೊಟ್ಟಿದ್ದಾರೆ.

ಏಕವ್ಯಕ್ತಿ ನಾಟಕ; ಆದರೆ ಏಕಾಂಗಿಯಲ್ಲ

ರಂಗದ ಮೇಲೆ ಒಬ್ಬರೇ ನಟಿಸಿದ್ದರೂ ಉಮಾಶ್ರೀ ಅವರ ಅಭಿನಯದಲ್ಲಿ ಶರ್ಮಿಷ್ಠೆ, ಯಯಾತಿ, ದೇವಯಾನಿ, ಕಚದೇವ, ರಾಜಮಾತೆ ಸೇರಿದಂತೆ ಹಲವು ಪಾತ್ರಗಳ ಭಾವಲೋಕ ಜೀವಂತವಾಯಿತು. ಧ್ವನಿಯ ಏರಿಳಿತ, ದೇಹಭಾಷೆ, ಕಣ್ಣುಗಳ ಚಲನೆ, ಮುಖಭಾವ ಹಾಗೂ ಮೌನದ ಮೂಲಕ ಪಾತ್ರಗಳನ್ನು ಬದಲಾಯಿಸುವ ಅವರ ಅಭಿನಯ ಪ್ರೇಕ್ಷಕರನ್ನು ಹಿಡಿದಿಟ್ಟಿತು.

ನೋವಿನ ದೃಶ್ಯದಲ್ಲಿ ಕಣ್ಣೀರಿಗಿಂತ ಮೊದಲು ಮೂಡುವ ಮೌನ, ಅವಮಾನ ಎದುರಾದಾಗ ದೇಹಭಾಷೆಯಲ್ಲಿ ವ್ಯಕ್ತವಾಗುವ ಪ್ರತಿರೋಧ ಹಾಗೂ ತಾಯ್ತನದ ನೋವಿನ ಸಂದರ್ಭದಲ್ಲಿ ಧ್ವನಿಯಲ್ಲಿನ ನಡುಕ—ಅವರ ಅಭಿನಯದ ಗಾಢತೆಯನ್ನು ತೆರೆದಿಟ್ಟವು.

ಪುರಾಣದೊಳಗೆ ವರ್ತಮಾನದ ಪ್ರಶ್ನೆಗಳು

ಹೆಣ್ಣಿನ ಮೇಲೆ ಅಧಿಕಾರ ಯಾರದು? ಅವಳ ದೇಹದ ಕುರಿತು ನಿರ್ಧರಿಸುವ ಹಕ್ಕು ಯಾರದು? ತಾಯ್ತನಕ್ಕಾಗಿ ಹೆಣ್ಣು ತನ್ನ ಅಸ್ತಿತ್ವ ಕಳೆದುಕೊಳ್ಳಬೇಕೇ? ಅವಮಾನವನ್ನು ಸಹಿಸುವುದೇ ಹೆಣ್ಣಿನ ವಿಧಿಯೇ? ಎಂಬ ಪ್ರಶ್ನೆಗಳು ನಾಟಕದುದ್ದಕ್ಕೂ ಪ್ರೇಕ್ಷಕರನ್ನು ಕಾಡುತ್ತವೆ.

ವಿಶೇಷವಾಗಿ ವಸ್ತ್ರಸಂಹಿತೆಯನ್ನು ಅಧಿಕಾರ ಮತ್ತು ಪಿತೃಪ್ರಧಾನ ನಿಯಂತ್ರಣದ ರೂಪಕವಾಗಿ ಬಳಸಿರುವುದು ಗಮನಾರ್ಹ. ಇಲ್ಲಿ ವಸ್ತ್ರ ಕೇವಲ ವೇಷವಲ್ಲ; ಸ್ವಾತಂತ್ರ್ಯವನ್ನು ನಿಯಂತ್ರಿಸುವ ಅಧಿಕಾರದ ಭಾಷೆಯಾಗಿದೆ.

ಸೋತವಳಲ್ಲ; ಸ್ವಾಭಿಮಾನದ ಶರ್ಮಿಷ್ಠೆ

ಶರ್ಮಿಷ್ಠೆ ಅವಮಾನ ಅನುಭವಿಸುತ್ತಾಳೆ, ದಾಸಿಯಾಗುತ್ತಾಳೆ, ತಾಯಿಯಾಗಿ ನೋವು ಅನುಭವಿಸುತ್ತಾಳೆ. ಆದರೆ ತನ್ನೊಳಗಿನ ಮನುಷ್ಯತ್ವ ಮತ್ತು ಆತ್ಮಗೌರವವನ್ನು ಉಳಿಸಿಕೊಳ್ಳುತ್ತಾಳೆ. ಇದೇ ಆಕೆಯ ನಿಜವಾದ ಗೆಲುವು.

‘ಒಡಲಾಳ’ದ ಸಾಕವ್ವನ ಪಾತ್ರದ ಮೂಲಕ ಛಾಪು ಮೂಡಿಸಿರುವ ಉಮಾಶ್ರೀ, ‘ಶರ್ಮಿಷ್ಠೆ’ಯಲ್ಲಿ ಹೊಸ ಹೆಣ್ಣಿನ ಅಸ್ತಿತ್ವವನ್ನು ಸೃಷ್ಟಿಸಿದ್ದಾರೆ. ಹೀಗಾಗಿ ಅವರ ಅಭಿನಯ ಕೇವಲ ಪಾತ್ರಧಾರಣೆಯಲ್ಲ; ಪಾತ್ರದೊಳಗೆ ಪ್ರವೇಶಿಸಿ ಅದರ ಮನಸ್ಸಾಗಿ ಹೊರಬರುವ ಪರಕಾಯ ಪ್ರವೇಶದ ಅನುಭವ ನೀಡುತ್ತದೆ.

‘ಶರ್ಮಿಷ್ಠೆ’ ಮುಗಿದರೂ ಅದರ ಪ್ರಶ್ನೆಗಳು ಪ್ರೇಕ್ಷಕರ ಮನಸ್ಸಿನಲ್ಲಿ ಮುಂದುವರಿಯುತ್ತವೆ. ಪೌರಾಣಿಕ ಕಥಾವಸ್ತುವನ್ನು ಆಧುನಿಕ ಚಿಂತನೆಯೊಂದಿಗೆ ಜೋಡಿಸಿದ ಈ ಪ್ರಯೋಗ ಕನ್ನಡ ರಂಗಭೂಮಿಯ ಸೃಜನಶೀಲ ಸಾಧ್ಯತೆಗಳಿಗೆ ಸಾಕ್ಷಿಯಾಗಿದೆ.

ನಾಟಕ ಮುಗಿದ ಮೇಲೂ ಮನಸ್ಸಿನಲ್ಲಿ ಉಳಿಯುವುದು ಯಯಾತಿಯ ತಾರುಣ್ಯವಲ್ಲ; ಶರ್ಮಿಷ್ಠೆಯ ಆತ್ಮಗೌರವ. ಅದೇ ನಾಟಕದ ಗೆಲುವು. ಅದೇ ಉಮಾಶ್ರೀ ಅವರ ಅಭಿನಯದ ಗೆಲುವು. ಶರ್ಮಿಷ್ಠೆ ರಂಗದ ಮೇಲೆ ಮುಗಿಯುವುದಿಲ್ಲ; ಪ್ರೇಕ್ಷಕರ ಮನಸ್ಸಿನಲ್ಲಿ ಮುಂದುವರಿಯುತ್ತಾಳೆ.

— ಅಮೀರನಾಯಕ (ಕಲ್ಲಿಗನೂರ)
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಲಕ್ಕುಂಡಿ

ಸತೀಶ್ ಜಾರಕಿಹೊಳಿ ವಿರುದ್ಧ ಇಡಿ ತನಿಖೆ: ಲೋಕೋಪಯೋಗಿ ಇಲಾಖೆಯ ಅಕ್ರಮ, ಲಂಚ ಸಂಗ್ರಹದ ದಾಖಲೆ ಪತ್ತೆ

0

ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಸ್ಥರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇದೀಗ ದಾಳಿ ಕುರಿತು ಇಡಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಶೋಧ ಕಾರ್ಯಾಚರಣೆಯಲ್ಲಿ ಪತ್ತೆಯಾದ ಹಲವು ಅಂಶಗಳ ಬಗ್ಗೆ ಮಾಹಿತಿ ನೀಡಿದೆ.

ಇಡಿ ಪ್ರಕಟಣೆ ಪ್ರಕಾರ, ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಸೇರಿದಂತೆ ಅವರ ಪುತ್ರಿ ಪ್ರಿಯಾಂಕಾ, ಪುತ್ರ ರಾಹುಲ್ ಹಾಗೂ ಅಳಿಯ ವೈ.ಡಿ. ಮಂಜುನಾಥ್ ಸೇರಿದಂತೆ ಆಪ್ತರಿಗೆ ಸಂಬಂಧಿಸಿದ ಮನೆಗಳು ಮತ್ತು ಕಚೇರಿಗಳ ಮೇಲೆ ಶೋಧ ನಡೆಸಲಾಗಿದೆ. ಬೆಂಗಳೂರು, ಬೆಳಗಾವಿ, ಗೋಕಾಕ ಹಾಗೂ ಕೋಲ್ಕತ್ತಾದ ವಿವಿಧ ಸ್ಥಳಗಳು ಸೇರಿದಂತೆ ಒಟ್ಟು 21 ಕಡೆ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.

ಶೋಧ ಕಾರ್ಯಾಚರಣೆಯಲ್ಲಿ ವಿದೇಶಿ ಹೂಡಿಕೆ ಹಾಗೂ ಗಡಿಯಾಚೆಗಿನ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ ಎನ್ನಲಾಗಿದೆ. ವಿದೇಶಿ ಸಂಸ್ಥೆಗಳಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನೂ ಜಪ್ತಿ ಮಾಡಲಾಗಿದೆ ಎಂದು ಇಡಿ ತಿಳಿಸಿದೆ.

ಇನ್ನು ದಾಳಿ ವೇಳೆ ಲೆಕ್ಕಕ್ಕೆ ತೋರಿಸದ ₹3.3 ಕೋಟಿ ನಗದು ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ. ಇದರ ಜೊತೆಗೆ ಸುಮಾರು ₹15 ಲಕ್ಷ ಮೌಲ್ಯದ ಡಾಲರ್, ಯುರೋ ಸೇರಿದಂತೆ ವಿದೇಶಿ ಕರೆನ್ಸಿ ಕೂಡ ಪತ್ತೆಯಾಗಿದ್ದು, ಅದನ್ನೂ ಸೀಜ್ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗಣಿಗಾರಿಕೆ ಹೂಡಿಕೆ ಕುರಿತು ದಾಖಲೆ ಪರಿಶೀಲನೆ:

ಕಾಂಗೋದಲ್ಲಿರುವ ಗಣಿಗಾರಿಕೆ ಸಂಸ್ಥೆಗೆ ಸಂಬಂಧಿಸಿದ ಹೂಡಿಕೆ ಹಾಗೂ ಪಾಲುದಾರಿಕೆ ಕುರಿತು ದಾಖಲೆಗಳು ಪತ್ತೆಯಾಗಿವೆ ಎಂದು ಇಡಿ ತಿಳಿಸಿದೆ. ಚಿನ್ನದ ಗಣಿಗಾರಿಕೆಯಲ್ಲಿ ಶೇ.40ರಷ್ಟು ಪಾಲು ಹೊಂದಿರುವುದಕ್ಕೆ ಸಂಬಂಧಿಸಿದ ಮಾಹಿತಿಯೂ ಶೋಧದ ವೇಳೆ ಬೆಳಕಿಗೆ ಬಂದಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ವಿದೇಶಿ ಹೂಡಿಕೆಗಳು, ಹಣಕಾಸು ವಹಿವಾಟುಗಳು ಹಾಗೂ ಸಂಬಂಧಿತ ದಾಖಲೆಗಳ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಇಡಿ ತಿಳಿಸಿದೆ.

ಇನ್ನು ದಾಳಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿನ ಅಕ್ರಮಗಳು ಹಾಗೂ ಗುತ್ತಿಗೆದಾರರಿಂದ ಲಂಚ ಸಂಗ್ರಹಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳು ಪತ್ತೆಯಾಗಿವೆ ಎಂದು ಇಡಿ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಈ ದಾಖಲೆಗಳು ಹಾಗೂ ಡಿಜಿಟಲ್ ಸಾಧನಗಳಲ್ಲಿರುವ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಅವುಗಳ ಆಧಾರದ ಮೇಲೆ ಮುಂದಿನ ತನಿಖೆ ನಡೆಯಲಿದೆ ಎನ್ನಲಾಗಿದೆ.

ಇಡಿ ದಾಳಿಯ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲೂ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ವಿದೇಶಿ ಹೂಡಿಕೆ ಸೇರಿದಂತೆ ವಿವಿಧ ಹಣಕಾಸು ವ್ಯವಹಾರಗಳ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್ ನಾಯಕರು ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಇಡಿ ವಿರುದ್ಧ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸತೀಶ್ ಜಾರಕಿಹೊಳಿ ಅವರಿಗೆ ರಾಜಕೀಯವಾಗಿ ಬೆಳೆಯುವ ಅವಕಾಶವಿರುವ ಹಿನ್ನೆಲೆಯಲ್ಲಿ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂಬ ಆರೋಪವನ್ನೂ ಅವರ ಬೆಂಬಲಿಗರು ಮಾಡಿದ್ದಾರೆ. ಆದರೆ ಈ ಆರೋಪಗಳನ್ನು ಬಿಜೆಪಿ ಹಾಗೂ ಇಡಿ ತಳ್ಳಿಹಾಕಿರುವುದಾಗಿ ವರದಿಯಾಗಿದೆ.

ಇದೀಗ ಲೋಕೋಪಯೋಗಿ ಇಲಾಖೆಯಲ್ಲಿನ ಅಕ್ರಮ ಹಾಗೂ ಗುತ್ತಿಗೆದಾರರಿಂದ ಲಂಚ ಸಂಗ್ರಹಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ ಎಂದು ಇಡಿ ಅಧಿಕೃತವಾಗಿ ತಿಳಿಸಿರುವುದು ಪ್ರಕರಣಕ್ಕೆ ಮತ್ತೊಂದು ಆಯಾಮ ನೀಡಿದೆ.

ಒಟ್ಟಾರೆ, ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಸ್ಥರಿಗೆ ಸಂಬಂಧಿಸಿದ 21 ಸ್ಥಳಗಳಲ್ಲಿ ನಡೆದ ಇಡಿ ಶೋಧ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂಪಾಯಿ ನಗದು, ವಿದೇಶಿ ಕರೆನ್ಸಿ, ವಿದೇಶಿ ಹೂಡಿಕೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಡಿಜಿಟಲ್ ಸಾಧನಗಳು ಪತ್ತೆಯಾಗಿರುವುದಾಗಿ ಇಡಿ ತಿಳಿಸಿದೆ. ಇದೀಗ ಈ ದಾಖಲೆಗಳ ಆಧಾರದ ಮೇಲೆ ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

PLI ಅಸಮಾನತೆ, ಐದು ದಿನಗಳ ಬ್ಯಾಂಕಿಂಗ್ ವಾರ ಜಾರಿಗೆ ಆಗ್ರಹಿಸಿ ಬ್ಯಾಂಕ್ ನೌಕರರ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಸ್ಪಂದಿಸಿ ಗದಗ ನಗರದ ಗಾಂಧಿ ಸರ್ಕಲ್‌ನ ಕೆನರಾ ಬ್ಯಾಂಕ್‌ ಮುಂಭಾಗ ಶುಕ್ರವಾರ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ಪ್ರತಿಭಟನೆ ನಡೆಸಿದರು. ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಬಹುತೇಕ ಸಿಬ್ಬಂದಿ ಕರ್ತವ್ಯದಿಂದ ದೂರ ಉಳಿದು ಮುಷ್ಕರದಲ್ಲಿ ಪಾಲ್ಗೊಂಡರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯೂನಿಯನ್ ಪ್ರತಿನಿಧಿಗಳು, ಪರಿಷ್ಕೃತ ಸಾಧನೆ ಆಧಾರಿತ ಪ್ರೋತ್ಸಾಹಧನ (PLI) ಯೋಜನೆಯಲ್ಲಿನ ಅಸಮಾನತೆಯನ್ನು ಖಂಡಿಸಿದರು. ಮಾತುಕತೆ ನಡೆಯುತ್ತಿರುವಾಗಲೇ ಯೋಜನೆ ಜಾರಿಗೊಳಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. 2023ರ ಡಿಸೆಂಬರ್‌ನಲ್ಲಿ ಒಪ್ಪಿಗೆಯಾಗಿದ್ದ ಐದು ದಿನಗಳ ಬ್ಯಾಂಕಿಂಗ್ ವಾರವನ್ನು ಇನ್ನೂ ಜಾರಿಗೊಳಿಸದಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿದರು.

ಮುಷ್ಕರದಿಂದ ಗ್ರಾಹಕರಿಗೆ ಉಂಟಾಗುವ ತೊಂದರೆಗೆ ವಿಷಾದ ವ್ಯಕ್ತಪಡಿಸಿದ ನಾಯಕರು, ATM, ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತವೆ ಎಂದು ತಿಳಿಸಿದರು. ಬೇಡಿಕೆ ಈಡೇರದಿದ್ದರೆ ಸೆ.28ರಿಂದ 30ರವರೆಗೆ ಮೂರು ದಿನಗಳ ಮುಷ್ಕರ ಹಾಗೂ ಅ.26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಎಚ್ಚರಿಕೆ ನೀಡಿದರು.

ಮುಷ್ಕರದಲ್ಲಿ ಹನುಮೇಶ್ ಎಂ. ಗಂಗರಾಹುತಿ, ಎಚ್ಚರ ಸ್ವಾಮಿ ಎಸ್. ನಾಯಕ್, ಅಮರೇಶ್ವರ ಕೆ., ಸಿದ್ದಲಿಂಗಪ್ಪ ಉಮಾಚಗಿ, ಮಂಜುನಾಥ ದೊಡ್ಡಮನಿ, ಬಾಲಾಜಿ ಕುಲಕರ್ಣಿ, ಪ್ರೇಮ್, ಶಿವಾನಂದ, ಲೋಕೇಶ್, ಪಂಪಾಪತಿ, ವಿಶಾಲ್ ನಾಯಕ್, ಹರೀಶ್, ವಿಜಯಲಕ್ಷ್ಮೀ ಅಂಗಡಿ ಹಾಗೂ ಅಕ್ಷತಾ ಸೇರಿದಂತೆ ವಿವಿಧ ಬ್ಯಾಂಕ್ ಸಿಬ್ಬಂದಿ ಪಾಲ್ಗೊಂಡಿದ್ದರು.

ಗಣೇಶ ವಿಸರ್ಜನೆ ವೇಳೆ ಮದ್ಯ ಮಾರಾಟ, ಸಾಗಾಟ ನಿಷೇಧ

0

ವಿಜಯಸಾಕ್ಷಿ ಸುದ್ದಿ, ಗದಗ: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಗದಗ ಜಿಲ್ಲೆಯಲ್ಲಿ ಗಣೇಶ ಮೂರ್ತಿಗಳ 5, 7, 9, 11, 13, 15, 17, 19 ಹಾಗೂ 21ನೇ ದಿನದ ವಿಸರ್ಜನೆ ಸಂದರ್ಭದಲ್ಲಿ ವಿವಿಧ ಅವಧಿಯಲ್ಲಿ ಮದ್ಯ ಮಾರಾಟ ಮತ್ತು ಸಾಗಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ತಿಳಿಸಿದ್ದಾರೆ.

ಸೆ.18 ಬೆಳಗ್ಗೆ 6ರಿಂದ ಸೆ.19 ಬೆಳಗ್ಗೆ 6ರವರೆಗೆ, ಸೆ.20ರಿಂದ 21, ಸೆ.22ರಿಂದ 23 ಹಾಗೂ ಸೆ.24ರಿಂದ 25ರವರೆಗೆ ಜಿಲ್ಲೆಯಾದ್ಯಂತ ಮದ್ಯ ನಿಷೇಧ ಜಾರಿಯಲ್ಲಿರುತ್ತದೆ.

ಸೆ.26ರಿಂದ 27ರವರೆಗೆ ಮುಳಗುಂದ, ಲಕ್ಷ್ಮೇಶ್ವರ ಹಾಗೂ ನರೇಗಲ್ ಠಾಣಾ ವ್ಯಾಪ್ತಿಯಲ್ಲಿ, ಸೆ.28ರಿಂದ 29ರವರೆಗೆ ಲಕ್ಷ್ಮೇಶ್ವರ ಠಾಣಾ ವ್ಯಾಪ್ತಿಯಲ್ಲಿ, ಸೆ.30ರಿಂದ ಅ.1ರವರೆಗೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮ ವ್ಯಾಪ್ತಿಯಲ್ಲಿ, ಅ.2ರಿಂದ 3ರವರೆಗೆ ಲಕ್ಷ್ಮೇಶ್ವರ ಠಾಣಾ ವ್ಯಾಪ್ತಿಯಲ್ಲಿ ಹಾಗೂ ಅ.4ರಿಂದ 5ರವರೆಗೆ ಗದಗ–ಬೆಟಗೇರಿ ನಗರಸಭೆ ಮತ್ತು ಗಜೇಂದ್ರಗಡ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ–ಸಾಗಾಟ ನಿಷೇಧಿಸಲಾಗಿದೆ.

ನಿಷೇಧ ಅವಧಿಯಲ್ಲಿ ಸಂಬಂಧಿಸಿದ ಪ್ರದೇಶಗಳ ಬಾರ್, ಕ್ಲಬ್, ಬಿಯರ್ ಹಾಗೂ ಭಾರತೀಯ ತಯಾರಿಕಾ ಮದ್ಯದ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚಬೇಕು. ಪರಿಸ್ಥಿತಿಗೆ ಅನುಗುಣವಾಗಿ ಕರ್ನಾಟಕ ಅಬಕಾರಿ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಅಬಕಾರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಶಾಲಾ ಸಮಯಕ್ಕೆ ಬಸ್ ಕೊರತೆ : ಲಕ್ಕುಂಡಿಯಲ್ಲಿ ಬಸ್ ತಡೆದು ವಿದ್ಯಾರ್ಥಿಗಳು, ಪಾಲಕರ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಶಾಲಾ ಸಮಯಕ್ಕೆ ಸಮರ್ಪಕ ಬಸ್ ಸೌಲಭ್ಯ ಇಲ್ಲದೆ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳು, ಪಾಲಕರು ಹಾಗೂ ಕೂಲಿ ಕಾರ್ಮಿಕರು ಶುಕ್ರವಾರ ಲಕ್ಕುಂಡಿ ಬಸ್ ನಿಲ್ದಾಣದಲ್ಲಿ ಬಸ್‌ಗಳನ್ನು ತಡೆದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿರುದ್ಧ ಧಿಡೀರ್ ಪ್ರತಿಭಟನೆ ನಡೆಸಿದರು.

ಕಳೆದ ಒಂದು ತಿಂಗಳಿಂದ ಬೆಳಗ್ಗೆ ಶಾಲಾ–ಕಾಲೇಜು ಸಮಯಕ್ಕೆ ಸಮರ್ಪಕ ಬಸ್‌ಗಳು ಸಂಚರಿಸದ ಪರಿಣಾಮ ವಿದ್ಯಾರ್ಥಿಗಳು ಗಂಟೆಗಟ್ಟಲೆ ಬಸ್‌ಗಾಗಿ ಕಾಯುವಂತಾಗಿದೆ. ಇದರಿಂದ ಸಮಯಕ್ಕೆ ಶಾಲೆಗೆ ತೆರಳಲು ಸಾಧ್ಯವಾಗದೆ ಶಿಕ್ಷಕರು ತರಗತಿಯಿಂದ ಹೊರಗೆ ನಿಲ್ಲಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಪ್ರತಿಭಟನಾಕಾರರು ಬಸ್ ನಿಲ್ದಾಣದಲ್ಲಿ 10ಕ್ಕೂ ಹೆಚ್ಚು ಬಸ್‌ಗಳನ್ನು ತಡೆದು ಸಾರಿಗೆ ಸಂಸ್ಥೆ ವಿರುದ್ಧ ಘೋಷಣೆ ಕೂಗಿದರು. ಎರಡು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಗದಗ, ಹುಬ್ಬಳ್ಳಿ, ಕೊಪ್ಪಳ, ವಿಜಯನಗರ, ರಾಯಚೂರು, ಬೆಳಗಾವಿ, ಹಾವೇರಿ ಹಾಗೂ ಬಳ್ಳಾರಿ ಕಡೆಗೆ ತೆರಳುವ ಪ್ರಯಾಣಿಕರು ಪರದಾಡಿದರು.

ಬೆಳಗ್ಗೆ 8ರಿಂದ 10ರವರೆಗೆ ಗದಗ ಹಾಗೂ ಹುಬ್ಬಳ್ಳಿಗೆ ಶಾಲಾ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಅವಧಿಯಲ್ಲಿ ಬಸ್ ಕೊರತೆಯಿಂದ ವಿದ್ಯಾರ್ಥಿಗಳು ನೂಕುನುಗ್ಗಲಿನ ನಡುವೆ ಸಂಚರಿಸುವಂತಾಗಿದೆ. ಈ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸ್ಥಳಕ್ಕೆ ಆಗಮಿಸಿದ ಗದಗ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿಯನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ತರಾಟೆಗೆ ತೆಗೆದುಕೊಂಡರು. ಸಮಸ್ಯೆ ಬಗೆಹರಿಸದಿದ್ದರೆ ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗೆ ದೂರು ನೀಡುವುದಾಗಿ ಎಚ್ಚರಿಸಿದರು.

ಮುಂದಿನ ನಾಲ್ಕೈದು ದಿನಗಳಲ್ಲಿ ವಿದ್ಯಾರ್ಥಿಗಳ ಶಾಲಾ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ವಿಭಾಗೀಯ ವ್ಯವಸ್ಥಾಪಕರೊಂದಿಗೆ ಚರ್ಚಿಸುವುದಾಗಿ ಬಸ್ ನಿಲ್ದಾಣದ ಮೇಲ್ವಿಚಾರಕ ತಿಮ್ಮನಗೌಡ ಭರವಸೆ ನೀಡಿದರು. ಬೈಪಾಸ್‌ನಲ್ಲಿ ಸಂಚರಿಸುವ ಬಸ್‌ಗಳನ್ನು ಲಕ್ಕುಂಡಿ ನಿಲ್ದಾಣಕ್ಕೆ ಬರುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಎಂಟು ತಿಂಗಳ ಹಿಂದೆ ಇದೇ ಸಮಸ್ಯೆ ಕುರಿತು ಪ್ರತಿಭಟನೆ ನಡೆಸಿದಾಗ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ಒಂದು ವಾರ ಮಾತ್ರ ಬಸ್ ಓಡಿಸಿ ಮತ್ತೆ ಸ್ಥಗಿತಗೊಳಿಸಲಾಗಿದೆ. ಒಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ವಿದ್ಯಾರ್ಥಿಗಳೊಂದಿಗೆ ತೀವ್ರ ಪ್ರತಿಭಟನೆ ನಡೆಸಲಾಗುವುದು.”

— ಬಸವರಾಜ ಮುಳ್ಳಾಳ, ಬಸನಗೌಡ ಬಿರಾದಾರ, ವೀರೇಶ ಮುಸ್ಕಿನಭಾವಿ, ಪಾಲಕರು

ಪೊಲೀಸರ ವಿರುದ್ಧವೂ ಆಕ್ರೋಶ

ಪ್ರತಿಭಟನೆ ವೇಳೆ ಪೊಲೀಸರು ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದ ಬಳಸಿದ್ದಾರೆ ಎಂದು ಆರೋಪಿಸಿ ಪಾಲಕರು ಹಾಗೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಕೆಲಕಾಲ ವಾಗ್ವಾದ, ಗದ್ದಲದ ವಾತಾವರಣ ನಿರ್ಮಾಣವಾಯಿತು.

ರೈಲು ಟಿಕೆಟ್ ಬುಕ್ಕಿಂಗ್‌ನಲ್ಲಿ ದಾಖಲೆ: ಒಂದೇ ದಿನ 20,06,353 ಟಿಕೆಟ್ ಕಾಯ್ದಿರಿಸಿದ IRCTC

0

ನವದೆಹಲಿ: ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ ಪೋರ್ಟಲ್‌ನಲ್ಲಿ ಒಂದೇ ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ರೈಲು ಟಿಕೆಟ್‌ಗಳು ಬುಕ್ ಆಗುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ.

ಸೆಪ್ಟೆಂಬರ್ 7ರಂದು IRCTC ಮೂಲಕ ಒಟ್ಟು 20,06,353 ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದೆ. IRCTC ಇತಿಹಾಸದಲ್ಲೇ ಒಂದೇ ದಿನದಲ್ಲಿ ನಡೆದ ಅತಿ ಹೆಚ್ಚು ಟಿಕೆಟ್ ಬುಕ್ಕಿಂಗ್ ಇದಾಗಿದೆ. ಈ ಮೂಲಕ ಕಳೆದ ವರ್ಷದ ಹಬ್ಬದ ಋತುವಿನಲ್ಲಿ ದಾಖಲಾಗಿದ್ದ 18,40,203 ಟಿಕೆಟ್‌ಗಳ ದಾಖಲೆಯನ್ನು ಹಿಂದಿಕ್ಕಿದೆ.

ಇದಾದ ಮರುದಿನವೂ ಟಿಕೆಟ್ ಬುಕ್ಕಿಂಗ್ ಪ್ರಮಾಣ ಹೆಚ್ಚಿನ ಮಟ್ಟದಲ್ಲೇ ಮುಂದುವರಿದಿದೆ. ಸೆಪ್ಟೆಂಬರ್ 8ರಂದು IRCTC ಬರೋಬ್ಬರಿ 19,50,699 ಟಿಕೆಟ್ ಬುಕ್ಕಿಂಗ್‌ಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ.

ಪ್ರಸ್ತುತ ಕಾಯ್ದಿರಿಸಲಾದ ಒಟ್ಟು ರೈಲ್ವೆ ಟಿಕೆಟ್‌ಗಳಲ್ಲಿ ಸುಮಾರು 89ರಷ್ಟು ಟಿಕೆಟ್‌ಗಳು ಆನ್‌ಲೈನ್ ಮೂಲಕವೇ ಬುಕ್ ಆಗುತ್ತಿವೆ. ದಿನದ ಒಟ್ಟು ಬುಕ್ಕಿಂಗ್‌ನಲ್ಲಿ ಶೇ.8.43ರಿಂದ ಶೇ.14.14ರಷ್ಟು ಬುಕ್ಕಿಂಗ್‌ಗಳು ಮಾತ್ರ ಬೆಳಗ್ಗೆ 8ರಿಂದ 9 ಗಂಟೆಯ ನಡುವಿನ ಮೊದಲ ಒಂದು ಗಂಟೆಯಲ್ಲಿ ಪೂರ್ಣಗೊಳ್ಳುತ್ತವೆ. ಉಳಿದ ಶೇ.85ಕ್ಕೂ ಹೆಚ್ಚು ಬುಕ್ಕಿಂಗ್‌ಗಳು ದಿನದ ನಂತರದ ಅವಧಿಯಲ್ಲಿ ನಡೆಯುತ್ತವೆ.

ವಿಶೇಷವಾಗಿ ಬೆಳಗ್ಗೆ 8ರಿಂದ 8.15ರವರೆಗಿನ ಮೊದಲ 15 ನಿಮಿಷಗಳಲ್ಲಿ ನಿರಂತರವಾಗಿ ಹೆಚ್ಚಿನ ಪ್ರಮಾಣದ ಟಿಕೆಟ್ ಬುಕ್ಕಿಂಗ್ ದಾಖಲಾಗುತ್ತಿದೆ.

ಇಷ್ಟೊಂದು ಪ್ರಮಾಣದಲ್ಲಿ ಟಿಕೆಟ್ ಬುಕ್ಕಿಂಗ್ ನಡೆದರೂ ಹೊಸ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಯಾವುದೇ ಪ್ರಮುಖ ತಾಂತ್ರಿಕ ದೋಷ ಅಥವಾ ಸಿಸ್ಟಂ ಸ್ಥಗಿತ ಉಂಟಾಗಿಲ್ಲ ಎಂದು IRCTC ತಿಳಿಸಿದೆ.

ಹೆಚ್ಚುತ್ತಿರುವ ಆನ್‌ಲೈನ್ ಟ್ರಾಫಿಕ್‌ ಅನ್ನು ನಿಭಾಯಿಸಲು ಹೊಸ ಸರ್ವರ್‌ಗಳನ್ನು ಅಳವಡಿಸಲಾಗಿದ್ದು, ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯ ಸಾಮರ್ಥ್ಯವನ್ನು ಸುಮಾರು ದುಪ್ಪಟ್ಟುಗೊಳಿಸಲಾಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಒಂದೇ ಸಮಯದಲ್ಲಿ ಟಿಕೆಟ್ ಕಾಯ್ದಿರಿಸಲು ಅನುಕೂಲವಾಗಿದೆ.

ಇನ್ನು ಪ್ರಯಾಣಿಕರ ಅನುಕೂಲಕ್ಕಾಗಿ IRCTC ಜುಲೈ 15ರಂದು ಹೊಸ ವೆಬ್‌ಸೈಟ್ ಹಾಗೂ ಬಳಕೆದಾರ ಸ್ನೇಹಿ ಇಂಟರ್‌ಫೇಸ್‌ (UI) ಅನ್ನು ಬಿಡುಗಡೆ ಮಾಡಿತ್ತು. ಒಂದೇ ಪರದೆಯಲ್ಲಿ ವಿವಿಧ ರೈಲು ತರಗತಿಗಳ ಸೀಟ್ ಲಭ್ಯತೆಯನ್ನು ವೀಕ್ಷಿಸಲು ಈ ಹೊಸ ವ್ಯವಸ್ಥೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಒಟ್ಟಾರೆ, ಹಬ್ಬದ ಋತುವಿನಲ್ಲಿ ರೈಲು ಪ್ರಯಾಣಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಈ ದಾಖಲೆ ಪ್ರಮಾಣದ ಬುಕ್ಕಿಂಗ್ ತೋರಿಸುತ್ತಿದ್ದು, ಹೆಚ್ಚಿನ ಆನ್‌ಲೈನ್ ಟ್ರಾಫಿಕ್ ನಡುವೆಯೂ IRCTC ವ್ಯವಸ್ಥೆ ಯಾವುದೇ ಪ್ರಮುಖ ಅಡಚಣೆಯಿಲ್ಲದೆ ಕಾರ್ಯನಿರ್ವಹಿಸಿರುವುದು ಗಮನ ಸೆಳೆದಿದೆ.

ದೇವನಹಳ್ಳಿಯಲ್ಲಿ ಭೀಕರ ಅಪಘಾತ: ಎಲೆಕ್ಟ್ರಿಕ್ ಬೈಕ್‌ಗೆ ಎರ್ಟಿಗಾ ಡಿಕ್ಕಿ, ಯುವತಿ ಗಂಭೀರ!

0

ದೇವನಹಳ್ಳಿ: ಎರ್ಟಿಗಾ ಕಾರು ಹಾಗೂ ಎಲೆಕ್ಟ್ರಿಕ್ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ, ಎಲೆಕ್ಟ್ರಿಕ್ ಬೈಕ್‌ನಲ್ಲಿದ್ದ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ದರ್ಗಾ ಬಳಿ ನಡೆದಿದೆ.

ಬೂದಿಗೆರೆ–ಬಾಗಲೂರು ರಸ್ತೆಯಲ್ಲಿ ಎಲೆಕ್ಟ್ರಿಕ್ ಬೈಕ್‌ನಲ್ಲಿ ಯುವತಿ ಅರ್ಚಿತಾ ತೆರಳುತ್ತಿದ್ದ ವೇಳೆ ಎರ್ಟಿಗಾ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎಲೆಕ್ಟ್ರಿಕ್ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಯುವತಿ ಅರ್ಚಿತಾ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತ ಸಂಭವಿಸಿದ ಕೂಡಲೇ ಎರ್ಟಿಗಾ ಕಾರು ಚಾಲಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಸ್ಥಳೀಯರು ಕಾರನ್ನು ಹಿಂಬಾಲಿಸಿದಾಗ, ಮತ್ತೊಂದು ಬೈಕ್‌ಗೂ ಡಿಕ್ಕಿ ಹೊಡೆದು ಚಾಲಕ ಮತ್ತೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಎರಡು ಬೈಕ್‌ಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಗಂಭೀರವಾಗಿ ಗಾಯಗೊಂಡಿರುವ ಯುವತಿ ಅರ್ಚಿತಾ ಅವರನ್ನು ಸ್ಥಳೀಯರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಮಾಹಿತಿ ಪಡೆದ ಚನ್ನರಾಯಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವೇನು ಹಾಗೂ ಪರಾರಿಯಾಗಿರುವ ಎರ್ಟಿಗಾ ಕಾರು ಚಾಲಕ ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನು ಅಪಘಾತದ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿರುವ ಹಿನ್ನೆಲೆಯಲ್ಲಿ ಆತನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ರಸ್ತೆಯಲ್ಲಿನ ಸಿಸಿಟಿವಿ ದೃಶ್ಯಗಳು ಸೇರಿದಂತೆ ವಿವಿಧ ಮಾಹಿತಿಗಳನ್ನು ಆಧರಿಸಿ ತನಿಖೆ ಮುಂದುವರಿಸಿದ್ದಾರೆ.

ಗೌರಿ-ಗಣೇಶ ಹಬ್ಬಕ್ಕೆ KSRTC ಭರ್ಜರಿ ಸಿದ್ಧತೆ: ಊರಿಗೆ ತೆರಳುವ ಪ್ರಯಾಣಿಕರಿಗಾಗಿ 2,400 ವಿಶೇಷ ಬಸ್‌ಗಳ ವ್ಯವಸ್ಥೆ

0

ಬೆಂಗಳೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ.

ಪ್ರಯಾಣಿಕರ ದಟ್ಟಣೆ ಗಮನದಲ್ಲಿಟ್ಟುಕೊಂಡು ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ 2,400 ವಿಶೇಷ ಬಸ್‌ಗಳನ್ನು ಕಾರ್ಯಾಚರಣೆಗೆ ಸಿದ್ಧಪಡಿಸಲಾಗಿದೆ. ಇದರ ಜೊತೆಗೆ 270 ರಿಸರ್ವೇಶನ್ ಬಸ್‌ಗಳನ್ನು ನಿಯೋಜಿಸಲಾಗಿದ್ದು, ಬೆಂಗಳೂರಿನಲ್ಲಿ 240 ಬಿಎಂಟಿಸಿ ಬಸ್‌ಗಳನ್ನು ಹೆಚ್ಚುವರಿ ಸೇವೆಗೆ ಸಿದ್ಧವಾಗಿರಿಸಲಾಗಿದೆ.

ಸೆಪ್ಟೆಂಬರ್ 11ರಿಂದ 13ರವರೆಗೆ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ ವಿಶೇಷ ಬಸ್‌ಗಳು ಸಂಚರಿಸಲಿವೆ. ಮೆಜೆಸ್ಟಿಕ್, ಸ್ಯಾಟಲೈಟ್‌ ಬಸ್ ನಿಲ್ದಾಣ ಹಾಗೂ ಶಾಂತಿನಗರ ಬಸ್ ನಿಲ್ದಾಣಗಳಿಂದ ಹೆಚ್ಚುವರಿ ಸೇವೆಗಳನ್ನು ನಿರ್ವಹಿಸಲಾಗುತ್ತದೆ.

ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಕಲಬುರಗಿ ಸೇರಿದಂತೆ ಪ್ರಯಾಣಿಕರ ಬೇಡಿಕೆ ಹೆಚ್ಚಿರುವ ಪ್ರಮುಖ ಮಾರ್ಗಗಳಿಗೆ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದೆ.

ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಸ್ವಂತ ಊರುಗಳಿಗೆ ತೆರಳಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್ ನಿಲ್ದಾಣಗಳತ್ತ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ತೊಂದರೆಯಾಗದಂತೆ KSRTC ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದೆ.

ಇನ್ನು ಹಬ್ಬ ಮುಗಿದ ಬಳಿಕ ಬೆಂಗಳೂರಿಗೆ ವಾಪಸ್ ಆಗುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14ರಿಂದ ಬೆಂಗಳೂರಿಗೆ ಮರಳುವ ಪ್ರಯಾಣಿಕರಿಗಾಗಿ ಕೂಡ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

CAR/DAR ಕಾನ್ಸ್‌ಟೇಬಲ್ ಪರೀಕ್ಷೆ ಫಲಿತಾಂಶ ಪ್ರಕಟ: ಆಕ್ಷೇಪಣೆಗೆ ಸೆ.14 ಕೊನೆಯ ದಿನ

0

ಬೆಂಗಳೂರು: ನಗರ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಸೆಪ್ಟೆಂಬರ್ 6ರಂದು ನಡೆದ ಲಿಖಿತ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.

ಪರೀಕ್ಷೆ ನಡೆದ ಕೇವಲ ಐದು ದಿನಗಳಲ್ಲೇ ತಾತ್ಕಾಲಿಕ ಫಲಿತಾಂಶ ಪ್ರಕಟಿಸುವ ಮೂಲಕ ಕೆಇಎ ದಾಖಲೆ ನಿರ್ಮಿಸಿದೆ. ಫಲಿತಾಂಶಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಸೆಪ್ಟೆಂಬರ್ 14ರ ಸಂಜೆ 5.30ರೊಳಗೆ ನಿಗದಿತ ಲಿಂಕ್ ಮೂಲಕ ಪೂರಕ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.

ಪರೀಕ್ಷೆ ನಡೆದ ದಿನವೇ ಅಭ್ಯರ್ಥಿಗಳ OMR ಪ್ರತಿಗಳನ್ನು ಸ್ಕ್ಯಾನ್ ಮಾಡಿ, ಪರೀಕ್ಷಾ ಕೇಂದ್ರವಾರು ಕೆಇಎ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಬಳಿಕ ಸೆಪ್ಟೆಂಬರ್ 7ರಂದು ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿತ್ತು.

ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 9ರವರೆಗೆ ಅವಕಾಶ ನೀಡಲಾಗಿತ್ತು. ಅಭ್ಯರ್ಥಿಗಳಿಂದ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಸೆಪ್ಟೆಂಬರ್ 10ರಂದು ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ಇದೀಗ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದರೆ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್ ಮೂಲಕ ನಿಗದಿತ ಅವಧಿಯೊಳಗೆ ಸಲ್ಲಿಸಬಹುದಾಗಿದೆ.

ನಿರ್ಮಾಣ ಹಂತದ ಚರ್ಚ್ ಛಾವಣಿ ಕುಸಿತ: ಮೂವರು ಕಾರ್ಮಿಕರು ಸಾವು!

0

ವೆಲ್ಲೂರು: ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಚರ್ಚ್‌ನ ಕಾಂಕ್ರೀಟ್ ಛಾವಣಿ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದು, 11ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಚರ್ಚ್‌ನ ಮೇಲ್ಛಾವಣಿಗೆ ಕಾಂಕ್ರೀಟ್ ಹಾಕುವ ಕಾಮಗಾರಿ ನಡೆಯುತ್ತಿದ್ದ ವೇಳೆ ತಾತ್ಕಾಲಿಕವಾಗಿ ಅಳವಡಿಸಿದ್ದ ಸೆಂಟರಿಂಗ್ ಕಂಬಗಳು ಭಾರ ತಡೆಯಲಾಗದೆ ಕುಸಿದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಛಾವಣಿ ಕುಸಿದ ಕೂಡಲೇ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಕಾಂಕ್ರೀಟ್ ಮತ್ತು ಕಬ್ಬಿಣದ ರಾಡ್‌ಗಳ ಅಡಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಿ ವೆಲ್ಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ.

ಮೃತರನ್ನು ಬೆಂಗಳೂರಿನ ಕಟ್ಟಡ ಗುತ್ತಿಗೆದಾರ ಜಾನ್ (39), ಆಂಧ್ರಪ್ರದೇಶದ ಎಮ್ಯಾನುಯೆಲ್ (45) ಹಾಗೂ ಸ್ಯಾಮ್ಯುಯೆಲ್ (45) ಎಂದು ಗುರುತಿಸಲಾಗಿದೆ. ಎಮ್ಯಾನುಯೆಲ್ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರೆ, ಸ್ಯಾಮ್ಯುಯೆಲ್ ಅವರ ಮೃತದೇಹವನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ವೆಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಿರ್ಮಾಣ ಕಾಮಗಾರಿಯಲ್ಲಿ ಬಳಸಲಾದ ಸಾಮಗ್ರಿಗಳ ಗುಣಮಟ್ಟ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದ ಕುರಿತು ತನಿಖೆ ನಡೆಸುತ್ತಿದ್ದಾರೆ. 30 ಸದಸ್ಯರ NDRF ತಂಡ ಹಾಗೂ ಸ್ನಿಫರ್ ನಾಯಿಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು.

ಇನ್ನು ಅಪಘಾತದ ವೇಳೆ ಹಲವು ಕಾರ್ಮಿಕರು ಬಿರಿಯಾನಿ ತಿನ್ನಲು ಕಟ್ಟಡದಿಂದ ಹೊರಗೆ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಒಟ್ಟಾರೆ, ನಿರ್ಮಾಣ ಹಂತದಲ್ಲಿದ್ದ ಚರ್ಚ್‌ನ ಛಾವಣಿ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿರುವುದು ಭಾರೀ ದುರಂತಕ್ಕೆ ಕಾರಣವಾಗಿದ್ದು, ಘಟನೆ ಕುರಿತು ತನಿಖೆ ಮುಂದುವರಿದಿದೆ.