Home Blog Page 27

ಹಿರಿಯ ನಾಗರಿಕರಿಗೆ ಕ್ರೀಡೆ, ಸಂಸ್ಕೃತಿಯ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗಾಗಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲು ಜಿಲ್ಲಾಡಳಿತ ಮುಂದಾಗಿದೆ. ಸೆಪ್ಟೆಂಬರ್ 21ರಂದು ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಸ್ಪರ್ಧೆಗಳನ್ನು ವ್ಯವಸ್ಥಿತವಾಗಿ ನಡೆಸಲಾಗುವುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಶ್ರೀದೇವಿ ಎಸ್.ಎನ್. ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿರಿಯ ನಾಗರಿಕ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ 60ರಿಂದ 69, 70ರಿಂದ 79 ಹಾಗೂ 80 ವರ್ಷ ಮೇಲ್ಪಟ್ಟವರ ವಿಭಾಗಗಳಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಕ್ರೀಡಾ ಸ್ಪರ್ಧೆಗಳಲ್ಲಿ ಬಿರುಸಿನ ನಡಿಗೆ, ಬಕೆಟ್‌ಗೆ ಚೆಂಡು ಎಸೆಯುವುದು, ಮ್ಯೂಸಿಕಲ್ ಚೇರ್, ಚೇಸ್ ಹಾಗೂ ಕೇರಂ ಸ್ಪರ್ಧೆಗಳು ನಡೆಯಲಿವೆ.

ಅದೇ ರೀತಿ ಏಕಪಾತ್ರಾಭಿನಯ ಹಾಗೂ ಗಾಯನ ಸ್ಪರ್ಧೆಗಳನ್ನು ಸಾಂಸ್ಕೃತಿಕ ವಿಭಾಗದಲ್ಲಿ ಆಯೋಜಿಸಲಾಗುವುದು. ಸ್ಪರ್ಧೆಗಳಲ್ಲಿ ಭಾಗವಹಿಸುವ ಹಿರಿಯ ನಾಗರಿಕರು ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವವರು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುವವರು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.

ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅಕ್ಟೋಬರ್ 1ರಂದು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯುವ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು. ಕಾರ್ಯಕ್ರಮದ ಯಶಸ್ಸಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ದಿನಾಚರಣೆ ಹಿನ್ನೆಲೆಯಲ್ಲಿ ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಣ, ವೇದಿಕೆ, ಉಪಾಹಾರ, ಪುಸ್ತಕ, ಆಸನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಮಣ್ಣೂರು, ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಮುತ್ತಪ್ಪ ಕಂಬಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಾಗರ ಚವ್ಹಾಣ, ಹಿರಿಯ ನಾಗರಿಕರ ಸಂಘದ ತಾಲೂಕು ಘಟಕದ ಅಧ್ಯಕ್ಷರು, ಹಿರಿಯ ನಾಗರಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿರಿಯ ನಾಗರಿಕರಲ್ಲಿರುವ ಪ್ರತಿಭೆ ಹಾಗೂ ಉತ್ಸಾಹವನ್ನು ಗುರುತಿಸುವ ಉದ್ದೇಶದಿಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಎಲ್ಲ ಅರ್ಹ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.

— ಶ್ರೀದೇವಿ ಎಸ್.ಎನ್., ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ

ಬೆರಳಚ್ಚು ಪರೀಕ್ಷೆಯಲ್ಲಿ ಶ್ರೀ ಕಲ್ಮೇಶ್ವರ ವಿದ್ಯಾಲಯಕ್ಕೆ ಶೇ.94.44 ಫಲಿತಾಂಶ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ಬೆಂಗಳೂರು ನಡೆಸಿದ 2026ರ ಜುಲೈ ತಿಂಗಳ ಬೆರಳಚ್ಚು ವಾರ್ಷಿಕ ಪರೀಕ್ಷೆಯಲ್ಲಿ ನಗರದ ಶ್ರೀ ಕಲ್ಮೇಶ್ವರ ಬೆರಳಚ್ಚು ಮತ್ತು ಕಂಪ್ಯೂಟರ್ ವಿದ್ಯಾಲಯವು ಶೇ.94.44ರಷ್ಟು ಫಲಿತಾಂಶ ದಾಖಲಿಸಿದೆ.

ಪರೀಕ್ಷೆಯಲ್ಲಿ ಇಂಗ್ಲಿಷ್ ಬೆರಳಚ್ಚು ಸೀನಿಯರ್ ವಿಭಾಗದಲ್ಲಿ ಮುಸ್ಕಾನ ಮುಲ್ಲಾ ಶೇ.90.50, ಇಂಗ್ಲಿಷ್ ಬೆರಳಚ್ಚು ಜೂನಿಯರ್ ವಿಭಾಗದಲ್ಲಿ ವಾಹಿದಾ ಮುರಾದಖಾನ ಶೇ.89.50, ಕನ್ನಡ ಬೆರಳಚ್ಚು ಸೀನಿಯರ್ ವಿಭಾಗದಲ್ಲಿ ಗೌರಿ ಆರ್. ಶಿಲ್ಪಿ ಶೇ.83 ಹಾಗೂ ಕನ್ನಡ ಬೆರಳಚ್ಚು ಜೂನಿಯರ್ ವಿಭಾಗದಲ್ಲಿ ಪ್ರಾರ್ಥನಾ ಶೀರೂಳ ಶೇ.85ರಷ್ಟು ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ಇದಲ್ಲದೆ ಸೌಭಾಗ್ಯ ಕಗ್ಗಲಗೌಡರ ಶೇ.88.50, ಆದರ್ಶ ಪೂಜಾರ ಶೇ.85, ಅಪ್ಜಲ್ ಬಳ್ಳಾರಿ ಶೇ.84, ಗಂಗಮ್ಮ ಕಟ್ನಾಕಿ ಶೇ.87.50, ಸತ್ಯಮ್ಮ ಬೆಲೇರಿ ಶೇ.86.50, ಕವಿತಾ ಅಂಬಿಗೇರ ಶೇ.87, ಸಾನಿಯಾ ಪೆಂಡಾರಿ ಶೇ.86, ಸೋನು ವಾಲ್ಮೀಕಿ ಶೇ.85, ಭವಾನಿ ಬೀರಕಟ್ಟಿ ಶೇ.76.50, ಸಹನಾ ಗದಗ ಶೇ.79.50, ನೂರಹಬೀಬಾ ಶೇ.82.50 ಹಾಗೂ ಸೌಮ್ಯ ಏಗ್ನೂರ ಶೇ.79.50ರಷ್ಟು ಅಂಕ ಪಡೆದಿದ್ದಾರೆ.

ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 19 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 29 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟು ಆರು ವಿದ್ಯಾರ್ಥಿಗಳು ಸಹ ಉತ್ತೀರ್ಣರಾಗಿದ್ದು, ವಿದ್ಯಾಲಯ ಶೇ.94.44ರಷ್ಟು ಫಲಿತಾಂಶ ದಾಖಲಿಸಿದೆ.

ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ವಿದ್ಯಾರ್ಥಿಗಳ ಪರಿಶ್ರಮಕ್ಕೆ ಶಿಕ್ಷಕರ ಮಾರ್ಗದರ್ಶನವೂ ಕಾರಣವಾಗಿದ್ದು, ಮುಂದಿನ ದಿನಗಳಲ್ಲೂ ಉತ್ತಮ ಫಲಿತಾಂಶ ದಾಖಲಿಸುವಂತೆ ಎಲ್ಲ ವಿದ್ಯಾರ್ಥಿಗಳು ಶ್ರಮಿಸಬೇಕು.

— ಡಾ. ತಯಬಅಲಿ ಅ. ಹೊಂಬಳ, ಪ್ರಾಚಾರ್ಯರು

ಬೀದಿ ದನಗಳ ಜೀವ ರಕ್ಷಣೆಗೆ ರೇಡಿಯಂ ಪಟ್ಟಿಯ ರಕ್ಷಾಕವಚ

0

ವಿಜಯಸಾಕ್ಷಿ ಸುದ್ದಿ, ಗದಗ: ರಾತ್ರಿ ವೇಳೆ ರಸ್ತೆಗಳಲ್ಲಿ ಸಂಚರಿಸುವ ಬೀದಿ ದನಗಳು ವಾಹನಗಳಿಗೆ ಕಾಣದೆ ಅಪಘಾತಕ್ಕೀಡಾಗುವುದನ್ನು ತಪ್ಪಿಸಲು ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಹಾಗೂ ಭಗತ್‌ಸಿಂಗ್ ಅಭಿಮಾನಿ ಬಳಗದ ಸಹಯೋಗದಲ್ಲಿ ವಿಶೇಷ ಪ್ರಾಣಿ ಕಲ್ಯಾಣ ಕಾರ್ಯ ಕೈಗೊಳ್ಳಲಾಯಿತು.

ಅವಳಿ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸುತ್ತಿದ್ದ ಹಸು, ದನ-ಕರುಗಳ ಕೊರಳಿಗೆ ಪ್ರತಿಫಲಿತ ರೇಡಿಯಂ ಪಟ್ಟಿಗಳನ್ನು ಅಳವಡಿಸಲಾಯಿತು. ವಾಹನಗಳ ಹೆಡ್‌ಲೈಟ್ ಬೆಳಕು ಬಿದ್ದಾಗ ಪಟ್ಟಿಗಳು ಹೊಳೆಯುವುದರಿಂದ ದೂರದಿಂದಲೇ ದನಗಳ ಇರುವಿಕೆ ತಿಳಿದು ಅಪಘಾತ ತಪ್ಪಿಸಲು ಸಹಕಾರಿಯಾಗಲಿದೆ.

ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಖುದ್ದು ರಸ್ತೆಗಿಳಿದು ಕಾರ್ಯದಲ್ಲಿ ಪಾಲ್ಗೊಂಡರು.

ಅಂಬಾಭವಾನಿ ದೇವಸ್ಥಾನದಲ್ಲಿ ಛಪ್ಪನ್ ಭೋಗ್ ನೈವೇದ್ಯ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಹುಡ್ಕೋ ಬಡಾವಣೆಯ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಎಸ್‌ಎಸ್‌ಕೆ ಮಹಿಳಾ ಮಂಡಳದ ವತಿಯಿಂದ ಸತ್ಯನಾರಾಯಣ ಪೂಜೆ ಹಾಗೂ ವಿಶೇಷ ಛಪ್ಪನ್ ಭೋಗ್ ನೈವೇದ್ಯ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.

ಪ್ರತಿ ವರ್ಷದಂತೆ ಈ ವರ್ಷವೂ ಸತ್ಯನಾರಾಯಣ ಪೂಜೆ ನೆರವೇರಿಸಲಾಗಿದ್ದು, ವಿಶೇಷವಾಗಿ ಛಪ್ಪನ್ ಭೋಗ್ ನೈವೇದ್ಯ ಅರ್ಪಿಸಲಾಯಿತು. ಮಹಿಳಾ ಮಂಡಳದ ಸದಸ್ಯೆಯರು ತಮ್ಮ ಮನೆಗಳಲ್ಲಿಯೇ ತಯಾರಿಸಿದ ವಿವಿಧ ಬಗೆಯ ಸಿಹಿ ಪದಾರ್ಥಗಳು, ಹಾಲಿನ ಖಾದ್ಯಗಳು, ಅನ್ನದ ವಿವಿಧ ತಿನಿಸುಗಳು, ಪಲ್ಯ, ತಿಂಡಿಗಳು, ಹಣ್ಣು ಹಾಗೂ ಒಣಹಣ್ಣುಗಳನ್ನು ಶ್ರೀ ಸತ್ಯನಾರಾಯಣ ಸ್ವಾಮಿಗೆ (ಕೃಷ್ಣನಿಗೆ) ನೈವೇದ್ಯವಾಗಿ ಅರ್ಪಿಸಿದರು.

ಬೆಳಿಗ್ಗೆ ಶ್ರೀ ಅಂಬಾಭವಾನಿ ಮಾತೆಗೆ ಅಭಿಷೇಕ ನೆರವೇರಿಸುವುದರೊಂದಿಗೆ ಪೂಜಾ ಕೈಂಕರ್ಯಗಳು ಆರಂಭಗೊಂಡವು. ಬಳಿಕ ಸತ್ಯನಾರಾಯಣ ಪೂಜೆ, ಛಪ್ಪನ್ ಭೋಗ್ ನೈವೇದ್ಯ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ದೇವಸ್ಥಾನದ ಅರ್ಚಕ ಶ್ರೀನಿವಾಸ ಭಟ್ಟರು ಎಲ್ಲ ಪೂಜಾ ವಿಧಿವಿಧಾನಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.

ಮಹಿಳಾ ಮಂಡಳದ ಪದಾಧಿಕಾರಿಗಳು, ಸದಸ್ಯೆಯರು ಹಾಗೂ ಭಕ್ತರು ಪೂಜೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಅಧ್ಯಕ್ಷ ಫಕ್ಕೀರಸಾ ಭಾಂಡಗೆ, ಚೇರ್ಮನ್ ಪರಶುರಾಮಸಾ ಬದಿ ಹಾಗೂ ಮಾರುತಿ ಪವಾರ್ ದೇವಸ್ಥಾನಕ್ಕೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.

ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ: ರವಿಕಾಂತ ಅಂಗಡಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆ ಹೆಚ್ಚಿದ್ದು, ಕ್ರೀಡಾ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ವಕೀಲ ಹಾಗೂ ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಹೇಳಿದರು.

ಮಜ್ಜೂರ ಸರ್ಕಾರಿ ಪ್ರೌಢಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಕ್ರೀಡಾಕೂಟಕ್ಕೆ ವಾಲಿಬಾಲ್ ಆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಕ್ರೀಡೆಗಳನ್ನು ಹೆಚ್ಚು ಉತ್ತೇಜಿಸುವ ಮೂಲಕ ಅವುಗಳ ಸೊಗಡನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕು. ಕ್ರೀಡೆಯಿಂದ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ಹೆಚ್ಚಿನ ವಿದ್ಯಾರ್ಥಿಗಳು ಕ್ರೀಡಾ ಹಾಸ್ಟೆಲ್‌ಗಳಿಗೆ ಆಯ್ಕೆಯಾಗಿ ಸರ್ಕಾರದ ಸೌಲಭ್ಯ ಪಡೆದು ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದರು.

ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಸಿಮೀಕೇರಿ ಮಾತನಾಡಿ, ವಿದ್ಯಾರ್ಥಿಗಳು ಪಾಠದ ಜತೆಗೆ ಕ್ರೀಡೆಗೂ ಆದ್ಯತೆ ನೀಡಬೇಕು. ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ ಹಾಗೂ ತಂಡ ಮನೋಭಾವ ಬೆಳೆಸುತ್ತದೆ ಎಂದರು.

ಮಜ್ಜೂರ ಸರ್ಕಾರಿ ಪ್ರೌಢಶಾಲೆ, ರಣತೂರು, ಛಬ್ಬಿ ಹಾಗೂ ಮಾಚೆಹಳ್ಳಿ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ವಾಲಿಬಾಲ್, ಥ್ರೋಬಾಲ್, ಕಬಡ್ಡಿ, ಖೋ-ಖೋ ಸೇರಿದಂತೆ ವಿವಿಧ ವೈಯಕ್ತಿಕ ಹಾಗೂ ಸಾಮೂಹಿಕ ಕ್ರೀಡಾ ಸ್ಪರ್ಧೆಗಳು ನಡೆದವು.

ಮಜ್ಜೂರ ಗ್ರಾಮದ ಮುಖಂಡ ಶ್ರೀದೇವಪ್ಪ ಮಾದರ ಥ್ರೋಬಾಲ್, ಗುತ್ತಿಗೆದಾರ ಮಂಜು ಕಿರಣ ಪಾಟೀಲ ಕಬಡ್ಡಿ, ಗ್ರಾಮದ ಮುಖಂಡ ದಾದಾಫೀರ್ ನಾಯಕನವರ ಖೋ-ಖೋ ಪಂದ್ಯಗಳಿಗೆ ಚಾಲನೆ ನೀಡಿದರು. ಆಪ್ರಿದ್ ಬೈರಕ್‌ದಾರ ವೈಯಕ್ತಿಕ ಆಟಗಳಿಗೆ ಚಾಲನೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ರವಿ ಲಮಾಣಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಹಳೆ ವಿದ್ಯಾರ್ಥಿ ಸೇವಾಲಾಲ ಸಂಘ, ಶಿವಾಜಿನಗರ ತಾಂಡಾದ ಮಹೇಶ ಲಮಾಣಿ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ವಸಂತ ಲಮಾಣಿ, ಬಸಪ್ಪ ಮುಂಡವಾಡ, ಎಸ್‌ಆರ್‌ಡಿಕೆ ಸಂಸ್ಥೆಯ ಮಾಲೀಕ ಮಂಜುನಾಥ ಲಮಾಣಿ, ಛಬ್ಬಿ ಕ್ಲಸ್ಟರ್‌ನ ಸಿಆರ್‌ಪಿ ಗೀತಾ ಸರ್ವಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಸಂತೋಷ ದಾಮೋದರ ನಿರೂಪಿಸಿದರು. ಕಿರಣಕುಮಾರ ಎಂ. ಲಮಾಣಿ ಸ್ವಾಗತಿಸಿದರು. ರೇಷ್ಮಾ ಎಚ್. ಪ್ರಾರ್ಥಿಸಿದರು. ಎಫ್.ಎ. ಮಕರಬಿ ವಂದನಾರ್ಪಣೆ ಸಲ್ಲಿಸಿದರು.

ಗ್ರಾಮೀಣ ವಿದ್ಯಾರ್ಥಿಗಳಲ್ಲೇ ಕ್ರೀಡಾ ಪ್ರತಿಭೆ ಹೆಚ್ಚಿದ್ದು, ಅವರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕು. ಕ್ರೀಡೆಯಿಂದ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಸಾಮರ್ಥ್ಯವೂ ವೃದ್ಧಿಸುತ್ತದೆ.

— ರವಿಕಾಂತ ಅಂಗಡಿ, ವಕೀಲರು ಹಾಗೂ ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧ್ಯಕ್ಷರು

ಭಾರತ–ದಕ್ಷಿಣ ಆಫ್ರಿಕಾ ಸೃಜನಶೀಲತೆಗೆ ಹೊಸ ಜೋಡಿ

0

ವಿಜಯಸಾಕ್ಷಿ ಸುದ್ದಿ, ನವದೆಹಲಿ: ಭಾರತ–ದಕ್ಷಿಣ ಆಫ್ರಿಕಾ ನಡುವಿನ ಸೃಜನಶೀಲ ಆರ್ಥಿಕ ಸಹಭಾಗಿತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (KSMCA) ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಧಾನಮಂತ್ರಿ ಸಂಗ್ರಹಾಲಯ, ತೀನ್ ಮೂರ್ತಿ ಭವನದಲ್ಲಿ ನಡೆದ ಸಭೆಯಲ್ಲಿ BRICS Women’s Business Alliance–South Africa Chapter (BRICS WBA-SA) ಹಾಗೂ BRICS Chamber of Commerce and Industry (BRICS CCI) ಜತೆ ತ್ರಿಪಕ್ಷೀಯ Memorandum of Coordination (MoC)ಗೆ ಸಹಿ ಮಾಡಲಾಯಿತು.

KSMCAಯ ಅಧ್ಯಕ್ಷ ಹಾಗೂ ಕಾರವಾರ ಶಾಸಕ ಸತೀಶ್ ಕೃಷ್ಣ ಸೈಲ್ ಅವರ ಮಾರ್ಗದರ್ಶನದಲ್ಲಿ ನಡೆದ ಒಡಂಬಡಿಕೆಗೆ KSMCA ವ್ಯವಸ್ಥಾಪಕ ನಿರ್ದೇಶಕ ಬಿ. ಆನಂದ್, BRICS CCI ಅಧ್ಯಕ್ಷ ಸಮೀಪ್ ಶಾಸ್ತ್ರಿ ಹಾಗೂ BRICS Women’s Business Alliance–South Africa ಕಾರ್ಯಕಾರಿ ಅಧ್ಯಕ್ಷೆ HRH ಪ್ರಿನ್ಸೆಸ್ ಲೆಬೊಗಾಂಗ್ ಜುಲು ಸಹಿ ಹಾಕಿದರು.

ಈ ಸಹಕಾರದ ಪ್ರಮುಖ ಉದ್ದೇಶ ಭಾರತ–ದಕ್ಷಿಣ ಆಫ್ರಿಕಾ BRICS Creative Economy Partnership ಅನ್ನು ಬಲಪಡಿಸುವುದಾಗಿದ್ದು, ‘Screen to Market™’ ಅನ್ನು ಪ್ರಮುಖ ಅನುಷ್ಠಾನ ಕಾರ್ಯಕ್ರಮವಾಗಿ ಗುರುತಿಸಲಾಗಿದೆ. ಸೃಜನಶೀಲ ಆರ್ಥಿಕತೆ, ಮಾಧ್ಯಮ, ಮನರಂಜನೆ, ಡಿಜಿಟಲ್ ಕಂಟೆಂಟ್, ಉದ್ಯಮಶೀಲತೆ, ನವೋದ್ಯಮ, ವ್ಯಾಪಾರ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರವೇಶ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವೆ ಸಹಕಾರ ವೃದ್ಧಿಸಲು ಒಡಂಬಡಿಕೆ ನೆರವಾಗಲಿದೆ.

ಸೃಜನಶೀಲ ವೃತ್ತಿಪರರು, ಉದ್ಯಮಿಗಳು ಹಾಗೂ ಸಂಸ್ಥೆಗಳಿಗೆ ಎರಡೂ ದೇಶಗಳ ಮಾರುಕಟ್ಟೆಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಗಡಿ ದಾಟಿದ ಸಹಭಾಗಿತ್ವ, ಪ್ರತಿಭೆ ಹಾಗೂ ಜ್ಞಾನ ವಿನಿಮಯ, ಉದ್ಯಮ ಸಂಪರ್ಕ, ಮಾರುಕಟ್ಟೆ ಅಭಿವೃದ್ಧಿ ಮತ್ತು ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲಾಗುವುದು.

‘Screen to Market™’ ಮೂಲಕ ಆಲೋಚನೆ, ಪ್ರತಿಭೆ ಮತ್ತು ಸೃಜನಶೀಲ ಉದ್ಯಮಗಳನ್ನು ಹೊಸ ಮಾರುಕಟ್ಟೆಗಳು ಹಾಗೂ ಜಾಗತಿಕ ಅವಕಾಶಗಳೊಂದಿಗೆ ಸಂಪರ್ಕಿಸುವ ವೇದಿಕೆ ರೂಪಿಸುವ ಉದ್ದೇಶ ಹೊಂದಲಾಗಿದೆ. ಸೃಜನಶೀಲ ಕ್ಷೇತ್ರವನ್ನು ಕೇವಲ ವಿಷಯ ನಿರ್ಮಾಣಕ್ಕೆ ಸೀಮಿತಗೊಳಿಸದೆ, ವಾಣಿಜ್ಯೀಕರಣ, ಉದ್ಯಮ ಅಭಿವೃದ್ಧಿ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರವೇಶದತ್ತ ಕೊಂಡೊಯ್ಯುವುದು ಇದರ ಆಶಯವಾಗಿದೆ.

ಕರ್ನಾಟಕ ಸರ್ಕಾರದ ಉದ್ಯಮವಾಗಿರುವ KSMCA ತನ್ನ ಮಾರ್ಕೆಟಿಂಗ್ ಕಮ್ಯುನಿಕೇಷನ್, ಜಾಹೀರಾತು ಹಾಗೂ ತಂತ್ರಾತ್ಮಕ ಸಂಪರ್ಕ ಕ್ಷೇತ್ರದ ಪರಿಣತಿಯನ್ನು ಬಳಸಿಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ವೇದಿಕೆಗಳು ಮತ್ತು ಸಹಭಾಗಿತ್ವಗಳನ್ನು ರೂಪಿಸಲು ಮುಂದಾಗಿದೆ. ಈ ತ್ರಿಪಕ್ಷೀಯ ಒಡಂಬಡಿಕೆಯು BRICS ವೇದಿಕೆಯ ಮೂಲಕ ಭಾರತ–ದಕ್ಷಿಣ ಆಫ್ರಿಕಾ ನಡುವಿನ ವ್ಯಾಪಾರಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳಿಗೆ ಮತ್ತಷ್ಟು ಬಲ ನೀಡುವ ನಿರೀಕ್ಷೆ ಮೂಡಿಸಿದೆ.

ಸೃಜನಶೀಲತೆಗೆ ಜಾಗತಿಕ ಮಾರುಕಟ್ಟೆ

• ಸೃಜನಶೀಲ ಪ್ರತಿಭೆ ಹಾಗೂ ಆಲೋಚನೆಗಳಿಗೆ ಜಾಗತಿಕ ವೇದಿಕೆ

• ಭಾರತ–ದಕ್ಷಿಣ ಆಫ್ರಿಕಾ ನಡುವೆ ಪ್ರತಿಭೆ ಮತ್ತು ಜ್ಞಾನ ವಿನಿಮಯ

• ಸೃಜನಶೀಲ ಉದ್ಯಮಗಳಿಗೆ ಹೊಸ ಮಾರುಕಟ್ಟೆ ಅವಕಾಶ

• ಉದ್ಯಮ ಸಂಪರ್ಕ ಹಾಗೂ ಹೂಡಿಕೆ ಅವಕಾಶಗಳ ಅನ್ವೇಷಣೆ

• ಮಾಧ್ಯಮ, ಮನರಂಜನೆ ಮತ್ತು ಡಿಜಿಟಲ್ ಕಂಟೆಂಟ್‌ಗೆ ಉತ್ತೇಜನ

• ಸೃಜನಶೀಲ ಕ್ಷೇತ್ರದ ವಾಣಿಜ್ಯೀಕರಣ ಹಾಗೂ ಉದ್ಯಮ ಅಭಿವೃದ್ಧಿಗೆ ಒತ್ತು

• ಸ್ಥಳೀಯ ಪ್ರತಿಭೆ ಮತ್ತು ಉದ್ಯಮಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸಂಪರ್ಕಿಸುವ ಪ್ರಯತ್ನ

ಸೆನ್ಸಾರ್‌ಗೆ ಹೊರಟ ‘ಮುತ್ತುರತ್ನ’ ಚಲನಚಿತ್ರ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಜೈ ಹನುಮಾನ್ ಪ್ರೊಡಕ್ಷನ್‌ನ ‘ಮುತ್ತುರತ್ನ’ ಕನ್ನಡ ಚಲನಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪೂರ್ಣಗೊಂಡಿದ್ದು, ಇದೀಗ ಚಿತ್ರ ಸೆನ್ಸಾರ್‌ಗೆ ತೆರಳಿದೆ.

‘ಒಂದು ಪ್ರೇಮ ಗ್ರಂಥ’ ಎಂಬ ಉಪಶೀರ್ಷಿಕೆ ಹೊಂದಿರುವ ಈ ಚಿತ್ರವನ್ನು ಚಿತ್ರದುರ್ಗ ಹಾಗೂ ಹಿರಿಯೂರು ಸುತ್ತಮುತ್ತ 40 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಅಶ್ವ ನಾಯಕನಾಗಿ ಹಾಗೂ ಸಹನಾ ಪ್ರಕಾಶ್ ನಾಯಕಿಯಾಗಿ ನಟಿಸಿದ್ದಾರೆ. ತಿಪ್ಪೇಶ್ ಮುದ್ದಾಪುರ, ದೇವು, ಮಲ್ಲಿಕಾ, ರಕ್ಷಿತಾ, ಗೋವಿಂದೇಗೌಡ, ಸಂಜು ಬಸಯ್ಯ, ಗಿರೀಶ್, ಅಪೂರ್ವ ಪವನ್ (ಮಜಾ ಟಾಕೀಸ್), ಹುಲುಗಪ್ಪ ಟಿ., ಕೇಶವಮೂರ್ತಿ ಜಿಎಚ್ ಬಿಜಿಕೆರೆ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಚಿತ್ರದ ಛಾಯಾಗ್ರಹಣವನ್ನು ಗೋಪಿನಾಥ ಎಂ., ಸಂಕಲನವನ್ನು ಶಿವರಾಜ್ ಮೇಹು, ಸಾಹಸವನ್ನು ಚಂದ್ರು ಬಂಡೆ ಹಾಗೂ ನೃತ್ಯ ನಿರ್ದೇಶನವನ್ನು ಬಾಲು ರೆಕ್ಸ್ ರಾಜು ನಿರ್ವಹಿಸಿದ್ದಾರೆ. ಎಸ್.ವಿ. ಶಿವಕುಮಾರ್, ಡಿವಿಜಿ ಹಾಗೂ ತಿಪ್ಪೇಶ್ ಹಾಲುವರ್ತಿ ಸಾಹಿತ್ಯ ರಚಿಸಿದ್ದಾರೆ.

ಪ್ರಸನ್ನ ಭೋಜಶೆಟ್ಟರ್ ಸಂಗೀತ ಸಂಯೋಜಿಸಿದ್ದು, ಬಾಳು ಬೆಳಗುಂದಿ, ಐಶ್ವರ್ಯ ರಂಗರಾಜನ್, ಅನಿರುದ್ಧ ಶಾಸ್ತ್ರಿ, ಲಹರಿ ಮಹೇಶ್, ರವೀಂದ್ರ ಸೊರವಾವಿ, ಅನುರಾಮ್ ಹಾಗೂ ಪ್ರಸನ್ನ ಭೋಜಶೆಟ್ಟರ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಉತ್ತರ ಕರ್ನಾಟಕದ ‘ನಾ ಡ್ರೈವರ್ ಪೂಜಾ’ ಖ್ಯಾತಿಯ ಪೂಜಾ ಡಿಕೆಡಿ ಚಿತ್ರದಲ್ಲಿನ ಒಂದು ಹಾಡಿಗೆ ನೃತ್ಯ ಮಾಡಿದ್ದು, ಈ ಹಾಡು ಉತ್ತರ ಕರ್ನಾಟಕದ ಪ್ರೇಕ್ಷಕರಿಗೆ ವಿಶೇಷ ಕಿಕ್ ನೀಡಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.

ಪ್ರಸಾಧನ ವಿಭಾಗವನ್ನು ಚಂದ್ರು ತಿರುಪತಿ ಹಾಗೂ ಎಂ.ಜಿ. ಕಲ್ಲೇಶ್ ನಿರ್ವಹಿಸಿದ್ದಾರೆ. ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ್ ಹಂಡಿಗಿ ಪತ್ರಿಕಾ ಸಂಪರ್ಕದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮಹೇಶ್ ಜಗತಾಪ್ ಹಾಗೂ ಸತೀಶ್ ಚೆಕ್ಕಂದವಾಡಿ ಸಹ ನಿರ್ದೇಶಕರಾಗಿದ್ದಾರೆ. ರಂಜಿತ್, ಕುಶಾಲ್ ಹಾಗೂ ಅನೂಪ್ ನಿರ್ದೇಶನ ತಂಡದಲ್ಲಿದ್ದಾರೆ. ಸ್ಟಿಲ್ ಛಾಯಾಗ್ರಹಣವನ್ನು ರಘು ನಿರ್ವಹಿಸಿದ್ದಾರೆ.

ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿ ನಿರ್ದೇಶನದ ಹೊಣೆಯನ್ನು ತಿಪ್ಪೇಶ್ ಹಾಲುವರ್ತಿ ವಹಿಸಿಕೊಂಡಿದ್ದಾರೆ. ಹುಲುಗಪ್ಪ ಟಿ. ಹಾಗೂ ರುದ್ರಪ್ಪ ಪಿಎಚ್. ಚಿತ್ರಕ್ಕೆ ಬಂಡವಾಳ ಹೂಡಿದ್ದು, ಕೇಶವಮೂರ್ತಿ ಜಿಎಚ್ ಬಿಜಿಕೆರೆ ಹಾಗೂ ಯಶೋದ ಬಾಯಿ ಸಹ ನಿರ್ಮಾಪಕರಾಗಿದ್ದಾರೆ.

ಚಿತ್ರ ಉತ್ತಮವಾಗಿ ಮೂಡಿಬಂದಿದ್ದು, ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

ಬಣ್ಣದ ಕನಸುಗಳು ಚಿತ್ರಕ್ಕೆ ಡಬ್ಬಿಂಗ್ ಮುಕ್ತಾಯ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಮಹದೇಶ್ವರ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ಬಣ್ಣದ ಕನಸುಗಳು’ ಕನ್ನಡ ಚಲನಚಿತ್ರದ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ. ಚಿತ್ರದ ಟಾಕಿ ಪೋಷನ್, ಹಾಡುಗಳ ಚಿತ್ರೀಕರಣ, ಸಂಕಲನ ಹಾಗೂ ಡಬ್ಬಿಂಗ್ ಮುಕ್ತಾಯಗೊಂಡಿದ್ದು, ಸದ್ಯ ರಿರೆಕಾರ್ಡಿಂಗ್ ಕಾರ್ಯ ಮಾತ್ರ ಬಾಕಿಯಿದೆ. ಬಳಿಕ ಚಿತ್ರವನ್ನು ಸೆನ್ಸಾರ್ ಮಂಡಳಿಗೆ ಕಳುಹಿಸಲಾಗುವುದು ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಓಂಪ್ರಕಾಶ್ ನಾಯಕ್ ತಿಳಿಸಿದ್ದಾರೆ.

ಚಿತ್ರದ ನಿರ್ದೇಶನದ ಜವಾಬ್ದಾರಿಯ ಜೊತೆಗೆ ಓಂಪ್ರಕಾಶ್ ನಾಯಕ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಹಾಡುಗಳನ್ನು ರಚಿಸಿದ್ದಾರೆ. ಅಲ್ಲದೆ ಸಂಗೀತ ನಿರ್ದೇಶನ ಮತ್ತು ಸಂಕಲನದ ಹೊಣೆಯನ್ನೂ ಹೊತ್ತಿದ್ದಾರೆ. ಈ ಮೂಲಕ ಪ್ರಥಮ ಬಾರಿಗೆ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರದಲ್ಲಿರುವ ಆರು ಹಾಡುಗಳು ಕೇಳುಗರನ್ನು ಸೆಳೆಯುವಂತಿವೆ ಎಂದು ಚಿತ್ರತಂಡ ತಿಳಿಸಿದೆ.

ಚಿತ್ರದಲ್ಲಿ ‘ಗ್ಯಾಂಗ್ ಗ್ಯಾಂಗ್ ನಮ್ದೊಂದು ಪೋಲಿ ಗ್ಯಾಂಗ್’ ಹಾಗೂ ‘ದುಡ್ಡು ದುಡ್ಡು ಇಲ್ಲಿ ಎಲ್ಲಾ ದುಡ್ಡು’ ಎಂಬ ಎರಡು ಫ್ರೆಂಡ್‌ಶಿಪ್ ಹಾಡುಗಳಿವೆ. ಎರಡು ಡ್ಯೂಯೆಟ್ ಹಾಡುಗಳ ಜೊತೆಗೆ ಒಂದು ಪ್ಯಾಥೋಸ್ ಸಾಂಗ್ ಕೂಡ ಚಿತ್ರದಲ್ಲಿದೆ.

‘ಬಣ್ಣದ ಕನಸುಗಳು’ ಚಿತ್ರದಲ್ಲಿ ಓಂಪ್ರಕಾಶ್ ನಾಯಕ್, ಅಫ್ಜಲ್ ಸೂಪರ್‌ಸ್ಟಾರ್, ಗಣೇಶ ಹಾಗೂ ಭಾಸ್ಕರ್ ಜಿ ನಾಲ್ವರು ನಾಯಕರಾಗಿ ನಟಿಸಿದ್ದಾರೆ. ಮಂಗಳ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದ ತಾರಾಗಣದಲ್ಲಿ ರಂಗಭೂಮಿಯ ರಾಜಣ್ಣ, ವೆಂಕಟೇಶ್, ರಾಮ್‌ಜಿ, ಚಂದ್ರಕಾಂತ್, ಮುತ್ತುರಾಜ್, ಅಭಿಸಾರಿಕ, ಲಲಿತಾ ಸೇರಿದಂತೆ ಹಲವು ಕಲಾವಿದರು ಹಾಗೂ ಸಹ ಕಲಾವಿದರು ಅಭಿನಯಿಸಿದ್ದಾರೆ.

ಚಿತ್ರಕ್ಕೆ ರವಿ ಛಾಯಾಗ್ರಹಣ, ಮೋಹಿತ್ ಸಹ ನಿರ್ದೇಶನ, ರುದ್ರೇಶ್ ಮೇಕಪ್ ನಿರ್ವಹಿಸಿದ್ದಾರೆ. ಪತ್ರಿಕಾ ಸಂಪರ್ಕವನ್ನು ವಿ.ಎಂ.ಎಸ್. ಗೋಪಿ ವಹಿಸಿಕೊಂಡಿದ್ದಾರೆ.

ಚಿತ್ರದ ರಿರೆಕಾರ್ಡಿಂಗ್ ಪೂರ್ಣಗೊಂಡ ಬಳಿಕ ಶೀಘ್ರದಲ್ಲೇ ಸೆನ್ಸಾರ್ ಮಂಡಳಿಗೆ ಕಳುಹಿಸಿ, ಮುಂದಿನ ಹಂತದ ಬಿಡುಗಡೆ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದು ನಿರ್ದೇಶಕ ಓಂಪ್ರಕಾಶ್ ನಾಯಕ್ ತಿಳಿಸಿದ್ದಾರೆ.

ಗುಂಡಿಗಳ ರಸ್ತೆಗೆ ಮುಕ್ತಿ ಯಾವಾಗ?

0

ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಗದಗ-ಬೆಟಗೇರಿ ನಗರೋತ್ಥಾನ ಹಂತ-3ರಡಿ ಹುಲಕೋಟಿ ಶಾಲೆಯ ಮುಂಭಾಗದಿಂದ ರಂಗಪ್ಪಜ್ಜನ ಮಠಕ್ಕೆ ಸಾಗುವ ರಸ್ತೆಯನ್ನು ಸುಮಾರು ಎಂಟು ವರ್ಷಗಳ ಹಿಂದೆ ಸಿ.ಸಿ. ರಸ್ತೆಯಾಗಿ ನಿರ್ಮಿಸಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅಲ್ಲಲ್ಲಿ ಬೃಹದಾಕಾರದ ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಈ ರಸ್ತೆಯ ಕೆಳಭಾಗದಲ್ಲಿ ಒಳಚರಂಡಿ ಪೈಪ್‌ಲೈನ್‌ಗಳು ಸುಮಾರು 15ರಿಂದ 20 ಅಡಿ ಆಳದಲ್ಲಿದ್ದು, ರಸ್ತೆ ನಿರ್ಮಾಣ ಸಂದರ್ಭದಲ್ಲಿ ಈ ಭಾಗಗಳಲ್ಲಿ ಸಮರ್ಪಕವಾಗಿ ಮೆಟ್ಲಿಂಗ್ ಮಾಡದಿರುವುದೇ ರಸ್ತೆ ಮಧ್ಯದಲ್ಲಿ ದೊಡ್ಡ ಗುಂಡಿಗಳು ಬೀಳಲು ಕಾರಣವಾಗಿದೆ ಎಂದು ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಆರೋಪಿಸಿದ್ದಾರೆ.

ಈ ಮಾರ್ಗದಲ್ಲಿ ಹುಲಕೋಟಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆ, ಐಟಿಐ ಕಾಲೇಜು, ಶರಣಬಸವೇಶ್ವರ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಹಾಗೂ ಆರೋಗ್ಯ ಕೇಂದ್ರಗಳಿವೆ. ಪ್ರತಿನಿತ್ಯ ಶಾಲಾ ಬಸ್‌ಗಳು ಸೇರಿದಂತೆ ಸುಮಾರು 10ರಿಂದ 12 ವಾಹನಗಳು ಸಂಚರಿಸುತ್ತಿದ್ದು, ಗುಂಡಿಗಳಿಂದಾಗಿ ಲಘು ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ ಶರಣಬಸವೇಶ್ವರ ನಗರ, ಬಸವನಗುಡಿ ಬಡಾವಣೆ, ಶಿವಾಜಿನಗರ, ಗಣೇಶನಗರ ಹಾಗೂ ಕಣಗಿನಹಾಳಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೂ ಇದಾಗಿದೆ.

ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ಹಾಗೂ ಲಿಖಿತವಾಗಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಯಳವತ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಯೋಜನಾ ನಿರ್ದೇಶಕರು ಹಾಗೂ ಗದಗ-ಬೆಟಗೇರಿ ನಗರಸಭೆಯ ಕಾರ್ಯಪಾಲಕ ಅಭಿಯಂತರರಿಗೆ ಛಾಯಾಚಿತ್ರ ಸಹಿತ ಮನವಿ ಸಲ್ಲಿಸಲಾಗಿದೆ. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು, ಹಾಲಿ ಶಾಸಕರು ಹಾಗೂ ಜಿಲ್ಲಾ ಅಹವಾಲು ಸ್ವೀಕಾರ ಸಂದರ್ಭದಲ್ಲಿಯೂ ಮನವಿ ನೀಡಲಾಗಿದೆ. ಇತ್ತೀಚೆಗೆ ಬರ ವೀಕ್ಷಣೆಗೆ ಆಗಮಿಸಿದ್ದ ಮುಖ್ಯಮಂತ್ರಿಗಳಿಗೂ ಈ ಕುರಿತು ಮಾಹಿತಿ ನೀಡಿ ಮನವಿ ಸಲ್ಲಿಸಲಾಗಿದೆ. ಆದರೂ ಜಿಲ್ಲಾ ಹಾಗೂ ಸ್ಥಳೀಯ ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಆಗಮಿಸದಿರುವುದು ವಿಷಾದಕರ ಸಂಗತಿ ಎಂದು ಅವರು ತಿಳಿಸಿದ್ದಾರೆ.

ಹುಲಕೋಟಿ ಪ್ರೌಢಶಾಲೆಯ ಮುಂಭಾಗದ ಗುಂಡಿಗಳು ಇದೀಗ ಬೃಹದಾಕಾರವಾಗಿ ಮಾರ್ಪಟ್ಟಿದ್ದು, ನಿತ್ಯ ಅಪಘಾತದ ಆತಂಕ ಎದುರಾಗಿದೆ. ಇತ್ತೀಚೆಗೆ ಗುಂಡಿಯಿಂದಾಗಿ ಮೋಟಾರ್ ಸೈಕಲ್ ಸವಾರನೊಬ್ಬ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿರುವುದು ಸಮಸ್ಯೆಯ ಗಂಭೀರತೆಗೆ ಸಾಕ್ಷಿಯಾಗಿದೆ ಎಂದು ಯಳವತ್ತಿ ಹೇಳಿದ್ದಾರೆ.

ರಸ್ತೆ ಸಮಸ್ಯೆ ಮುಂದುವರಿದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ. ನಿತ್ಯ ಸಂಚರಿಸುವ ಸವಾರರು ಜಿಲ್ಲಾಡಳಿತ ಹಾಗೂ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ಹಾಗೂ ಪೌರಾಯುಕ್ತರು ಕೂಡಲೇ ರಸ್ತೆ ದುರಸ್ತಿ ಕಾಮಗಾರಿ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಗದಗ-ಬೆಟಗೇರಿ ನಗರಸಭೆಯ ಸದಸ್ಯ ರಾಘವೇಂದ್ರ ಯಳವತ್ತಿ ಎಚ್ಚರಿಕೆ ನೀಡಿದ್ದಾರೆ.

ರಾಧಾಕೃಷ್ಣನ್‌ರ ಮೌಲ್ಯಗಳೇ ವಿದ್ಯಾರ್ಥಿಗಳ ಬದುಕಿಗೆ ದಾರಿದೀ: ಬಸನಗೌಡ ಮಲ್ಲನಗೌಡ್ರ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಒಂದು ಕಾಲದಲ್ಲಿ ಗುರುಗಳ ಮಾತೇ ವಿದ್ಯಾರ್ಥಿಗಳಿಗೆ ದಾರಿದೀಪವಾಗಿತ್ತು. ಗುರು ತೋರಿದ ದಾರಿಯಲ್ಲಿ ನಡೆದು ಬದುಕು ಕಟ್ಟಿಕೊಳ್ಳುತ್ತಿದ್ದ ಶಿಷ್ಯರಿದ್ದರು. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಹಾಗೂ ದೂರದರ್ಶನದ ಮೋಹ ವಿದ್ಯಾರ್ಥಿಗಳ ಅಮೂಲ್ಯ ಸಮಯವನ್ನು ಕಸಿದುಕೊಳ್ಳುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಆಕರ್ಷಣೆಯ ಜಗತ್ತಿನಿಂದ ದೂರವಿದ್ದು, ಪುಸ್ತಕ ಹಾಗೂ ವಿದ್ಯಾಭ್ಯಾಸದತ್ತ ಮನಸ್ಸು ಕೇಂದ್ರೀಕರಿಸಬೇಕು ಎಂದು ನಿವೃತ್ತ ಶಿಕ್ಷಕ ಬಸನಗೌಡ ಮಲ್ಲನಗೌಡ್ರ ಕರೆ ನೀಡಿದರು.

ಪಟ್ಟಣದ ಕೆಎಸ್‌ಎಸ್ ಪ್ರೌಢಶಾಲೆ ಹಾಗೂ ಕೆಎಸ್‌ಎಸ್ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಗುರು ಎಂಬುದು ಕೇವಲ ಒಂದು ಹುದ್ದೆಯಲ್ಲ, ಅದು ಬದುಕನ್ನು ರೂಪಿಸುವ ಶಕ್ತಿ ಎಂದ ಅವರು, ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಗುರು–ಶಿಷ್ಯರ ಸಂಬಂಧ ತಾಯಿ–ಮಗುವಿನ ಬಾಂಧವ್ಯದಷ್ಟೇ ಆತ್ಮೀಯವಾಗಿರಬೇಕು. ಶಿಕ್ಷಕರು ಪಠ್ಯಪುಸ್ತಕದ ಜ್ಞಾನ ನೀಡುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಮಾನವೀಯತೆ, ಶಿಸ್ತು, ಸಂಸ್ಕಾರ ಹಾಗೂ ಉತ್ತಮ ಚಿಂತನೆಗಳನ್ನು ಬೆಳೆಸಬೇಕು ಎಂದರು.

ಇಂದಿನ ಮಕ್ಕಳು ಮೊಬೈಲ್, ದೂರದರ್ಶನ ಹಾಗೂ ವಿವಿಧ ಆಕರ್ಷಣೆಗಳಿಗೆ ಒಳಗಾಗುತ್ತಿರುವುದು ಆತಂಕದ ಸಂಗತಿ. ದುಶ್ಚಟಗಳಿಂದ ದೂರವಿದ್ದು, ಸಮಯದ ಮೌಲ್ಯ ಅರಿತು ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು. ಇಂದು ಪುಸ್ತಕ ಹಿಡಿದ ಕೈಯೇ ನಾಳೆ ಸಮಾಜವನ್ನು ಮುನ್ನಡೆಸುವ ಕೈಯಾಗಬೇಕು. ಶಿಕ್ಷಕರ ಮಾರ್ಗದರ್ಶನವನ್ನು ಗೌರವದಿಂದ ಸ್ವೀಕರಿಸಿ, ಅವರ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳ ಬದುಕಿಗೆ ನಿಜವಾದ ಅರ್ಥ ದೊರೆಯುತ್ತದೆ ಎಂದು ಹೇಳಿದರು.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕ ವೃತ್ತಿಯ ಘನತೆಯನ್ನು ವಿಶ್ವದ ಮಟ್ಟಿಗೆ ಎತ್ತಿಹಿಡಿದ ಮಹಾನ್ ಚಿಂತಕರಾಗಿದ್ದರು. ತತ್ವಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅವರು, ತಮ್ಮ ಬದುಕಿನ ಮೂಲಕವೇ ಶಿಕ್ಷಕರು ಹೇಗಿರಬೇಕು ಹಾಗೂ ವಿದ್ಯಾರ್ಥಿಗಳು ಯಾವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟರು. ಅವರ ಆದರ್ಶಗಳು ಇಂದಿಗೂ ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ದಾರಿತೋರಿಸುವ ಬೆಳಕಿನ ಕಿರಣಗಳಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಶಿವಾನಂದ ಗೋಗೇರಿ ಮಾತನಾಡಿ, ಮಕ್ಕಳ ಭೌತಿಕ ಬೆಳವಣಿಗೆಯಷ್ಟೇ ಅವರ ಮಾನಸಿಕ ಹಾಗೂ ನೈತಿಕ ಬೆಳವಣಿಗೆಯೂ ಮುಖ್ಯವಾಗಿದೆ. ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವ ಸಾಧನವಲ್ಲ, ಅದು ಒಬ್ಬ ಉತ್ತಮ ಮನುಷ್ಯನನ್ನು ರೂಪಿಸುವ ಪ್ರಕ್ರಿಯೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ತತ್ವಶಾಸ್ತ್ರ ಅಡಿಗಲ್ಲಿನಂತಿದ್ದು, ಅದರ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಟ್ಟ ಮಹಾನ್ ಚಿಂತಕರಲ್ಲಿ ರಾಧಾಕೃಷ್ಣನ್ ಅವರು ಪ್ರಮುಖರು ಎಂದರು.

ಶಿಕ್ಷಕರು ವಿದ್ಯಾರ್ಥಿಗಳ ಬದುಕಿನ ಕತ್ತಲೆಗೆ ಬೆಳಕು ತೋರುವ ದೀಪಗಳಿದ್ದಂತೆ. ಅವರು ನೀಡುವ ಜ್ಞಾನ, ಸಂಸ್ಕಾರ ಹಾಗೂ ಮಾರ್ಗದರ್ಶನ ಜೀವನದುದ್ದಕ್ಕೂ ಶಿಷ್ಯನೊಂದಿಗೆ ಸಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಕರಿಂದ ಪಡೆದ ಜ್ಞಾನವನ್ನು ಪರೀಕ್ಷೆಯ ಅಂಕಗಳಿಗೆ ಮಾತ್ರ ಸೀಮಿತಗೊಳಿಸದೆ, ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಅಳವಡಿಸಿಕೊಂಡಾಗ ಶಿಕ್ಷಣದ ನಿಜವಾದ ಉದ್ದೇಶ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಪಿ.ಎನ್. ಹಿರೇಮಠ, ಎಂ.ವಿ. ವೆಂಕಟಾಪುರ, ಆರ್.ಟಿ. ಅಕ್ಕಸಾಲಿ, ಪಿ.ಬಿ. ಉಪ್ಪಿನ, ಎಸ್.ಎಂ. ಉಣಕಲ್, ಭೋವಿ ಸಮಾಜದ ಅಧ್ಯಕ್ಷ ಮಣ್ಣೂವಡ್ಡರ, ಎ.ಎಂ. ಹುಡೆದ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿ–ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಗುರು ಎಂಬುದು ಕೇವಲ ಒಂದು ಹುದ್ದೆಯಲ್ಲ; ಅದು ಬದುಕನ್ನು ರೂಪಿಸುವ ಶಕ್ತಿ. ಶಿಕ್ಷಕರು ಪಠ್ಯಪುಸ್ತಕದ ಜ್ಞಾನ ನೀಡುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಮಾನವೀಯತೆ, ಶಿಸ್ತು, ಸಂಸ್ಕಾರ ಹಾಗೂ ಉತ್